ಬೀರಭೂಮ, ಬಂಗಾಲದ ಮಹಾಸ್ಮಶಾನದಲ್ಲಿ ವಿರಾಜಮಾನಳಾಗಿರುವ ಶ್ರೀ ತಾರಾದೇವಿ !

Article also available in :

ದೇವಸ್ಥಾನದಲ್ಲಿ ಸ್ಥಾಪಿಸಲಾಗಿರುವ ಶ್ರೀ ತಾರಾದೇವಿಯ ಮೂರ್ತಿ

೧. ತಾರಾಪೀಠದ ಪೌರಾಣಿಕ ಮಹತ್ತ್ವ

೫೧ ಶಕ್ತಿಪೀಠಗಳು ಬಂಗಾಲದ ಬೀರಭೂಮ ಜಿಲ್ಲೆಯಲ್ಲಿವೆ. ಬಕುರೇಶ್ವರ, ನಾಲಹಾಟಿ, ಬಂದಿಕೇಶ್ವರಿ, ಫುಲೋರಾದೇವಿ ಮತ್ತು ತಾರಾಪೀಠ ಇವು ಶಕ್ತಿಪೀಠಗಳಿವೆ. ದ್ವಾರಕಾ ನದಿಯ ತೀರದಲ್ಲಿನ ಮಹಾಸ್ಮಶಾನದಲ್ಲಿ ಬಿಳಿ ಶಾಲ್ಮಲಿ ವೃಕ್ಷದ ಕೆಳಗೆ ಸತಿಯ ಮೂರನೇ ನೇತ್ರವು ಬಿತ್ತು; ಆದುದರಿಂದ ಇದಕ್ಕೆ ‘ತಾರಾಪೀಠ’ ಎನ್ನಲಾಗುತ್ತದೆ. ತಾರಾಪೀಠವು ಪ್ರಸಿದ್ಧವಾದ ತಂತ್ರಪೀಠವಾಗಿದೆ. ಸ್ಮಶಾನದಲ್ಲಿ ಉರಿಯುತ್ತಿರುವ ಶವಗಳ ಹೊಗೆಯು ತಾರಾದೇವಿಯ ದೇವಸ್ಥಾನದ ಗರ್ಭ-ಗುಡಿಯವರೆಗೆ ಹೋಗುತ್ತದೆ, ಇದು ಈ ದೇವಸ್ಥಾನದ ವೈಶಿಷ್ಟ್ಯ. ಭಾರತದ ಎಲ್ಲ ಕಡೆಯ ನದಿಗಳು ಉತ್ತರದಿಂದ ದಕ್ಷಿಣದ ಕಡೆಗೆ ಹರಿಯುತ್ತವೆ; ಆದರೆ ಇಲ್ಲಿನ ದ್ವಾರಕಾ ನದಿಯು ದಕ್ಷಿಣದಿಂದ ಉತ್ತರದ ಕಡೆಗೆ ಹರಿಯುತ್ತದೆ, ಇದು ಇಲ್ಲಿನ ಇನ್ನೊಂದು ವೈಶಿಷ್ಟ್ಯವಾಗಿದೆ.

೨. ವಸಿಷ್ಠ ಮಹರ್ಷಿಗಳ ಚರಣಸ್ಪರ್ಶದಿಂದ ಪಾವನವಾದ ತಾರಾಪೀಠ !

ತಾರಾಪೀಠವು ದಶರಥರಾಜನ ಕುಲಪುರೋಹಿತರಾದ ಮಹರ್ಷಿ ವಸಿಷ್ಠರ ಸಿದ್ಧಾಸನವೂ ಹೌದು. ಪ್ರಾಚೀನ ಕಾಲದಲ್ಲಿ ಮಹರ್ಷಿ ವಸಿಷ್ಠರು ಈ ಸ್ಥಳದಲ್ಲಿ ಶ್ರೀ ತಾರಾದೇವಿಯ ಆರಾಧನೆಯನ್ನು ಮಾಡಿ ಸಿದ್ಧಿ ಪ್ರಾಪ್ತಿಸಿಕೊಂಡಿದ್ದರು. ಆ ಸಮಯದಲ್ಲಿ ಅವರು ದೇವಸ್ಥಾನದ ಸ್ಥಾಪನೆಯನ್ನು ಮಾಡಿದ್ದರು. ಕಾಲದ ಪ್ರವಾಹದಲ್ಲಿ ಆ ದೇವಸ್ಥಾನವು ಭೂಮಿಯಲ್ಲಿ ಕಾಣದಂತಾಯಿತು. ಕಾಲಾಂತರದಲ್ಲಿ ಜಯವ್ರತ ಎಂಬ ವ್ಯಾಪಾರಿಯು ಅದನ್ನು ಪುನಃ ಕಟ್ಟಿದನು.

೩. ಶ್ರೀ ತಾರಾದೇವಿಯ ಮೂರ್ತಿ

ಶ್ರೀ ತಾರಾದೇವಿಯ ರೂಪವು ಉಗ್ರವಾಗಿದ್ದರೂ, ದೇವಸ್ಥಾನದಲ್ಲಿರುವ ಮೂರ್ತಿಯು ‘ದೇವಿಯು ಶಿವನಿಗೆ ಸ್ತನಪಾನವನ್ನು ಮಾಡುತ್ತಿರುವ’ ರೂಪದಲ್ಲಿದೆ. ಈ ಕುರಿತು ಒಂದು ಕಥೆಯಿದೆ, ‘ದೇವರು ಮತ್ತು ದಾನವರು ಸಮುದ್ರಮಂಥನವನ್ನು ಮಾಡಿದ್ದರು. ಅದರಿಂದ ಹೊರಟಿರುವ ವಿಷವು ಭಗವಾನ ಶಿವನು ಗ್ರಹಣ ಮಾಡಿದ್ದನು. ಆದುದರಿಂದ ಶಿವನು ಮೂರ್ಛೆ ಹೋಗಿದ್ದನು. ಆಗ ದೇವತೆಗಳ ಆಜ್ಞೆಯಂತೆ ಶ್ರೀ ತಾರಾದೇವಿಯು ಭಗವಾನ ಶಿವನಿಗೆ ಸ್ತನಪಾನವನ್ನು ಮಾಡಿ ಅಮೃತವನ್ನು ಕುಡಿಸಿದ್ದಳು’. ಈ ಮೂರ್ತಿಯು ಜಯವ್ರತನಿಗೆ ಇಲ್ಲಿಯ ಸ್ಮಶಾನದಲ್ಲಿಯೇ ಸಿಕ್ಕಿತ್ತು. ದೇವಿಯ ಮುಖವನ್ನು ಬಿಟ್ಟರೆ, ಸಂಪೂರ್ಣ ಮೂರ್ತಿಯು ಹೂವಿನ ಮಾಲೆಯಿಂದ ಹೊದಿಸಲಾಗಿದೆ.

೪. ತಾರಾಪೀಠದಲ್ಲಿರುವ ಮಹಾಸ್ಮಶಾನ

ತಾರಾಪೀಠದ ದೇವಸ್ಥಾನದ ಎದುರಿಗೆ ಮಹಾಸ್ಮಶಾನವಿದೆ. ೧ ಕೋಟಿ ಮೃತದೇಹಗಳ ಅಗ್ನಿಸಂಸ್ಕಾರವಾಗಿರುವ ಸ್ಮಶಾನಕ್ಕೆ ‘ಮಹಾಸ್ಮಶಾನ’ ಎನ್ನುತ್ತಾರೆ. ಈ ಸ್ಥಳದಲ್ಲಿ ಇದುವರೆಗೆ ೧ ಕೋಟಿಗಿಂತಲೂ ಹೆಚ್ಚು ಮೃತದೇಹಗಳ ಅಗ್ನಿಸಂಸ್ಕಾರವಾಗಿವೆ. ಆದ್ದರಿಂದ ಇದು ಸಿದ್ಧಸ್ಥಾನವಾಗಿದೆ. ಈ ಸ್ಥಳದಲ್ಲಿ ಕೇವಲ ಸೌದೆಗಳ ಬೆಂಕಿಯಲ್ಲಿಯೇ ಮೃತದೇಹವನ್ನು ದಹನ ಮಾಡಲಾಗುತ್ತದೆ. ಇಲ್ಲಿ ವಿದ್ಯುತ್‌ ಚಿತಾಗಾರವನ್ನು ಬಳಸಲಾಗುವುದಿಲ್ಲ. ಈ ಭಾಗದಲ್ಲಿ ವಿದ್ಯುತ್ತಿನ ಉಪಯೋಗವಾಗುವುದಿಲ್ಲ. ‘ದೇವಿಯ ಇಚ್ಛೆಯಿಂದ ಈ ಸ್ಥಳದಲ್ಲಿ ವಿದ್ಯುತ್ ನಡೆಯುವುದಿಲ್ಲ’, ಎಂದು ಹೇಳುತ್ತಾರೆ. ಈ ಸ್ಥಳದಲ್ಲಿ ವೈಷ್ಣವರ (ವಿಷ್ಣುವಿನ ಆರಾಧನೆಯನ್ನು ಮಾಡುವವರ) ಮೃತದೇಹಗಳ ದಹನವನ್ನು ಮಾಡದೇ, ಅವರ ಸಮಾಧಿಯನ್ನು ಕಟ್ಟಲಾಗುತ್ತದೆ. ಈ ಸ್ಥಳದಲ್ಲಿ ಅನೇಕ ಸಾಧು-ಸಂತರ ಸಮಾಧಿಸ್ಥಳಗಳಿವೆ.

ಓರ್ವ ಅರ್ಚಕರು ಮಾಹಿತಿಯನ್ನು ಹೇಳುವಾಗ, ‘ಎಲ್ಲಿ ಮೃತದೇಹದ ದಹನವನ್ನು ಮಾಡಲಾಗುತ್ತದೋ, ಆ ಚಿತೆಗೆ ಚಿತಾಮಾಯೀ ಎನ್ನುತ್ತಾರೆ. ದೇವಿಯ ನಿಜವಾದ ಸ್ವರೂಪವು ಚಿತಾಮಾಯೀಯಾಗಿದೆ. ಎಲ್ಲಿ ಮೃತದೇಹದ ದಹನವಾಗುತ್ತದೋ, ಅದು ಮಹಾಕಾಲಭೈರವಿಯ ರೂಪವಾಗಿದೆ. ದಶಮಹಾವಿದ್ಯೆಗಳ ರೂಪವು ಈ ಚಿತೆಯಲ್ಲಿರುತ್ತವೆ’ ಎಂದು ಹೇಳಿದರು.

೫. ಶ್ರೀ ತಾರಾದೇವಿಯ ಪರಮಭಕ್ತ ಸಂತ ವಾಮಾಖೇಪಾ

ಇಲ್ಲಿ ಸಂತ ವಾಮಾಖೇಪಾ ಇವರ ಸಮಾಧಿ ಇದೆ. ಶ್ರೀ ರಾಮಕೃಷ್ಣ ಪರಮಹಂಸರ ಸಮಕಾಲೀನ ವಾಮಾಖೇಪಾ ಇವರು ತಾರಾಪೀಠದ ಸಿದ್ಧ ಮತ್ತು ಪರಮಭಕ್ತರಿದ್ದರು. ರಾಮಕೃಷ್ಣ ಪರಮಹಂಸರಿಗೆ ಹೇಗೆ ಕಾಳಿಮಾತೆಯ ದರ್ಶನವಾಯಿತೋ, ಅದೇ ರೀತಿ ಸಂತ ವಾಮಾಖೇಪಾ ಇವರಿಗೂ ಶ್ರೀ ಮಹಾಕಾಳಿ ದೇವಿಯು ಸ್ಮಶಾನದಲ್ಲಿ ದರ್ಶನವನ್ನು ನೀಡಿ ಕೃತಕೃತ್ಯ ಮಾಡಿದಳು ಮತ್ತು ಅವರಿಗೆ ದಿವ್ಯ ಜ್ಞಾನವನ್ನು ನೀಡಿದಳು. ತಾರಾಪೀಠದಿಂದ ೨ ಕಿಲೋಮೀಟರ್ ದೂರದಲ್ಲಿರುವ ಆಟಲಾದಲ್ಲಿ ಸಂತ ವಾಮಾಖೇಪಾ ಇವರ ಜನನವಾಗಿತ್ತು. ಅವರು ದೇವಿಯ ಆರಾಧನೆಯನ್ನು ಮಾಡಿದರು ಮತ್ತು ಅಲ್ಪ ಕಾಲಾವಧಿಯಲ್ಲಿ ಸಿದ್ಧಿ ಪ್ರಾಪ್ತಿಸಿಕೊಂಡರು.

(ಆಧಾರ : ಜಾಲತಾಣ)

ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಪಡೆದ ಶ್ರೀ ತಾರಾದೇವಿಯ ದರ್ಶನ !

೨೦೧೩ರಲ್ಲಿ ಸನಾತನದ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಬಂಗಾಲದ ಬೀರಭೂಮಗೆ ಹೋಗಿ ಶ್ರೀ ತಾರಾದೇವಿಯ ದರ್ಶನವನ್ನು ಪಡೆದರು. ಹಾಗೆಯೇ ಹಿಂದೂ ರಾಷ್ಟçದ ಸ್ಥಾಪನೆಯಲ್ಲಿನ ಅಡತಡೆಗಳು ದೂರವಾಗಿ ಸಾಧಕರ ರಕ್ಷಣೆಯಾಗಬೇಕೆಂದು ಅವರು ಪ್ರಾರ್ಥನೆಯನ್ನೂ ಮಾಡಿದರು.

– ಶ್ರೀ. ವಿನಾಯಕ ಶಾನಭಾಗ (೨೨.೧೦.೨೦೨೦)

Leave a Comment