ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ (ಮಂದಾರ್ತಿ)

ಉಡುಪಿ ಜಿಲ್ಲೆ ಬ್ರಹ್ಮಾವರದಿಂದ (ಬಾರಕೂರ-ಕೊಕ್ಕರ್ಣಿ-ಹೆಬ್ರಿ ಮಾರ್ಗ) ಪೂರ್ವಕ್ಕೆ ೧೩ ಕಿ.ಮೀ ದೂರದಲ್ಲಿರುವ ಶ್ರೀ ದುರ್ಗಾಪರಮೇಶ್ವರೀ ಅಮ್ಮನವರ ಪುಣ್ಯ ಕ್ಷೇತ್ರ ಮಂದಾರ್ತಿ ಇದೆ. ಶ್ರೀ ದುರ್ಗಾಪರಮೇಶ್ವರೀಯು ಕ್ಷೇತ್ರದ ಅಧಿದೇವತೆಯಾಗಿದ್ದು ನಾಗಸುಬ್ರಹ್ಮಣ್ಯ, ವೀರಭದ್ರ, ಕಲ್ಲುಕುಟ್ಟಿಗ, ಕ್ಷೇತ್ರಪಾಲ, ವ್ಯಾಘ್ರ (ಹುಲಿ ದೇವರು) ಬೊಬ್ಬರ್ಯ ಮತ್ತು ನಂದೀಶ್ವರ ಪರಿವಾರ ದೇವರಾಗಿದ್ದಾರೆ.

ಕೆಂಡಸೇವೆ ಹಾಗೂ ರಥೋತ್ಸವಗಳೆರಡೂ ನಡೆಯುವ ಈ ದೇವಸ್ಥಾನ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಮಾತ್ರವಲ್ಲದೇ ದಕ್ಷಿಣ ಭಾರತದಲ್ಲೇ ಅಪೂರ್ವ ದೇವಾಲಯವಾಗಿದೆ. ಅಲ್ಲದೇ ಭೂತಾಲಯ ಹಾಗು ದೇವಾಲಯ ಒಂದೇ ಆಗಿರುವ ಶ್ರೀ ಮಂದಾರ್ತಿ ದೇವಳವು ಹಲವು ವೈಶಿಷ್ಟ್ಯಗಳಿಂದ ಕೂಡಿದೆ. ದೇವಳದಲ್ಲಿ ಧ್ವಜಸ್ಥಂಭವಿದ್ದರೂ ಧ್ವಜಾರೋಹಣ ಇರುವುದಿಲ್ಲ. ರಂಗಪೂಜೆ ಇದ್ದರೂ ನಿತ್ಯಬಲಿ ಇರುವುದಿಲ್ಲ. ಇಲ್ಲಿನ ಪೂಜಾವಿಧಿಗಳಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವ ನೀಡಿದ್ದರೂ ದುರ್ಗಾಮಾತೆಗೆ ಪ್ರಾಧಾನ್ಯತೆ, ದೇವಳದ ಪ್ರಧಾನ ಹರಕೆ ಸೇವೆಯೇ ಯಕ್ಷಗಾನ ಬೆಳಕಿನ ಸೇವೆ (ಬಯಲಾಟ)ಯಾಗಿರುವುದು ಕೂಡ ವಿಶೇಷವಾಗಿದೆ. ಯಕ್ಷಗಾನ ತಿರುಗಾಟ ಆರಂಭಿಸುವ ಮುನ್ನ ಶ್ರೀ ಬಾರಾಳಿ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಗೆಜ್ಜೆಕಟ್ಟಿದ ಅನಂತರ ಮಂದಾರ್ತಿ ಕ್ಷೇತ್ರದಲ್ಲಿ ಗಣಪತಿ ಪೂಜೆಯೊಂದಿಗೆ ಸೇವೆಯಾಟ ನಡೆಸುವ ಸಾಂಪ್ರಾದಾಯ ಇಂದಿಗೂ ನಡೆಯುತ್ತದೆ.

ಇತಿಹಾಸ

ನಾಗಲೋಕದ ಶ್ರೀ ಶಂಕಚೂಡನೆಂಬ ನಾಗರಾಜನಿಗೆ ವರಪ್ರಸಾದದಿಂದ ಜನಿಸಿದ ದೇವರತಿ, ನಾಗರತಿ, ಚಾರುರತಿ, ಮಂದರತಿ ಮತ್ತು ನೀಲರತಿ ಎಂಬ ಐದು ಜನ ಹೆಣ್ಣುಮಕ್ಕಳು ಮಹೇಶ್ವರನ ಮಗ ಸುಬ್ರಮಣ್ಯಸ್ವಾಮಿಯನ್ನು ವಿವಾಹವಾಗುವ ಹಂಬಲದಿಂದ, ಸುಬ್ರಮಣ್ಯಸ್ವಾಮಿಯನ್ನು ಕಾಣಲು ಕೈಲಾಸಕ್ಕೆ ತೆರಳಿ ಅಲ್ಲಿಯ ದ್ವಾರಪಾಲಕ ನಂದಿಯ ಶಾಪದಿಂದಾಗಿ ಸರ್ಪರೂಪದಲ್ಲಿ ಭೂಲೋಕ ಸಹ್ಯಾದ್ರಿಪರ್ವತದ ಕಾಡ್ಗಿಚ್ಚಿನಲ್ಲಿ ಸಿಕ್ಕು ಪರಿತಪಿಸುತ್ತಿದ್ದರು. ವ್ಯಾಘ್ರಪಾದ ಮಹರ್ಷಿಗಳು ಸಹ್ಯಾದ್ರಿ ಪರ್ವತದ ಬಳಿ ಸಂಚರಿಸುವಾಗ ಅವರನ್ನು ನೋಡಿದ ನಾಗಕನ್ಯೆಯರು ಅವಸರವಾಗಿ ಓಡಾಡಿದಾಗ ಉಂಟಾದ ಭರಭರ ಶಬ್ದಕ್ಕೆ ಹೌಹಾರಿದ ಮಹರ್ಷಿಗಳಿಂದ ‘ಗತಿ ಕುಂಟಿತವಾಗಿ ಬಿದಿರು ಮಳೆಗೆ ಸೀಮಿತವಾಗಿರು’ವಂತಹ ಶಾಪಕ್ಕೆ ಆ ನಾಗಕನ್ಯೆಯರು ಗುರಿಯಾಗುತ್ತಾರೆ. ರಾಜಪುರುಷನೊಬ್ಬನಿಂದ ಶಾಪ ವಿಮೋಚನೆಯಾಗುವದೆಂದು ಮಹರ್ಷಿಗಳು ಹರಸಿದಂತೆ ಆವಂತಿಯ ರಾಜ ದೇವವರ್ಮನು ರಾಜ್ಯಭ್ರಷ್ಟನಾಗಿ ವೇಷ ಮರೆಸಿಕೊಂಡು ಸಹ್ಯಾದ್ರಿ ಪರ್ವತದಲ್ಲಿ ತಿರುಗಿದಾಗ ಕಾಡ್ಗಿಚ್ಚಿನಲ್ಲಿ ಬೆಂದು ಹೋಗುತ್ತಿರುವ ಐದು ಸರ್ಪಗಳನ್ನು ಉಳಿಸಿ ಅವುಗಳನ್ನು ಒಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮಾಭಿಮುಖವಾಗಿ ಹೋಗುತ್ತಿರುವಾಗ ಆ ಸರ್ಪಗಳು ಒಂದೊಂದಾಗಿ ಹುತ್ತದಲ್ಲಿ ಸೇರಿದವು. ಅವುಗಳಲ್ಲಿ ಮಂದರತಿಯೆಂಬ ನಾಗ ಸರ್ಪವು ಸೇರಿದ ಜಾಗವೇ ಮಂದರತಿ ಕಾನನವೆಂಬ (ಮಂದಾರ್ತಿ) ಹೆಸರಾಯಿತು.

ಹಬ್ಬಗಳು ಮತ್ತು ಉತ್ಸವಗಳು

ಪ್ರಥಮ ಸೇವೆ ಆಟ (ಯಕ್ಷಗಾನ)

ಬೆಳಿಗ್ಗೆ ನಾಲ್ಕು ಗಣಪತಿ ದೇವರು ಮೂರ್ತಿ ಪ್ರತಿಷ್ಠಾಪನೆ ಪೂಜೆ ಬಾರಾಳಿ ಗಣಪತಿ ದೇವಸ್ಥಾನದಲ್ಲಿ ಗಣಹೋಮ ಹಾಗೂ ವಿಶೇಷ ಪೂಜೆ ೧೨:೦೦ ಗಂಟೆಗೆ, ಕ್ಷೇತ್ರದಲ್ಲಿ ನಾಲ್ಕು ಗಣಪತಿಗಳಿಗೆ ಗಣಹೋಮ, ಅಮ್ಮನವರಿಗೆ ಹಾಗೂ ಗಣಪತಿಗೆ ವಿಶೇಷ ಪೂಜೆ (ಯಕ್ಷಗಾನ ತಂಡದ ಸಿಬ್ಬಂದಿಯಿಂದ), ಆನಂತರ ಅನ್ನಸಂತರ್ಪಣೆ, ಸಂಜೆ ೬ ಗಂಟೆಗೆ ಬಾರಾಳಿ ಗಣಪತಿ ದೇವಸ್ಥಾನದಲ್ಲಿ ಗೆಜ್ಜೆ ಸೇವೆ ನಾಲ್ಕು ಮೇಳಗಳು ಒಟ್ಟಿಗೆ ಸೇರಿ ಬೆಳಿಗ್ಗೆ ೬:೦೦ ರವರೆಗೆ ಅಲ್ಲಿಂದ ಆ ವರ್ಷದ ಯಕ್ಷಗಾನ ಸೇವೆಯ ಪ್ರಾರಂಭ. ಗೆಜ್ಜೆ ಪೂಜೆಯೆಂದರೆ ಯಕ್ಷಗಾನ ಕಲಾವಿದರ ಗೆಜ್ಜೆಯನ್ನು ದೇವರಲ್ಲಿಟ್ಟು ಪೂಜೆ ಮಾಡಿ ಯಕ್ಷಗಾನದ ವೇಷ ಭೂಷಣಗಳೊಂದಿಗೆ ಬಾರಾಳಿ ದೇವಸ್ಥಾನದಲ್ಲಿ ನರ್ತಿಸಿ ಅನಂತರ ಶ್ರೀ ಕ್ಷೇತ್ರಕ್ಕೆ ಬರುತ್ತಾರೆ. ನಾಲ್ಕು ಗಣಪತಿಗಳು ದೇವಸ್ಥಾನದ ಮತ್ತು ಯಕ್ಷಗಾನ ತಂಡಗಳನ್ನು ಪ್ರತಿನಿಧಿಸುತ್ತವೆ.

ನವರಾತ್ರಿ

ಪ್ರತಿ ದಿನ ಚಂಡಿಕಾ ಶಾಂತಿ (ಹೋಮ) ಹಾಗು ವಿಶೇಷ ವೇದಪಾರಾಯಣ, ವಿಶೇಷ ಪೂಜೆ ನವರಾತ್ರಿಯ ೯ ದಿನಗಳ ನಡೆಯುವುದು. ಸಂಜೆ ಮಹಾಪೂಜೆಗೆ ೮ ಮನೆಯ ಆರ್ಚಕರಿಂದ ವಿಶೇಷ ನೈವೇದ್ಯ ಅರ್ಪಣೆ, ಅಲ್ಲಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭ (ಯಕ್ಷಗಾನ ನಾಟಕ ಇತ್ಯಾದಿ). ಇವು ನವರಾತ್ರಿಯ ಒಂಬತ್ತು ದಿನಗಳ ಕಾಲ ನಡೆಯುವುದು. ಕೊನೆಯ ದಿನ ಕ್ಷೇತ್ರದ ನಾಲ್ಕು ಮೇಳದ ಕಲಾವಿದರಿಂದ ಯಕ್ಷಗಾನ ಕಾರ್ಯಕ್ರಮ.

ಷಷ್ಠಿ ಮಹೋತ್ಸವ

ಬೆಳಿಗ್ಗೆ ಪುಣ್ಯ ಮಾಡುವ ಸ್ಥಳಕ್ಕೆ ಮಂತ್ರೋಪೊಚಾರದಿಂದ ಶುದ್ದಿ ಮಾಡುವುದು. ನಾಗ ಪ್ರಧಾನ (೯ ಕಳಸ) ಮತ್ತು ಪ್ರಧಾನ ೯:೦೦ಕ್ಕೆ ಶುರುವಾಗಿ ೧೨:೦೦ ರವರೆಗೆ ನಡೆಯುವುದು, ನಂತರ ಮಹಾಮಂಗಳಾರತಿ, ಪ್ರಸಾದ ವಿತರಣೆ ನಡೆಯುವುದು. ಅಂದು ವಿಶೇಷ ಭೋಜನ ವ್ಯವಸ್ಥೆ ಇರುವುದು.

ವಿಶೇಷ ಉತ್ಸವಗಳು

ಕುಂಭಮಾಸ ಕುಂಭ ಸಂಕ್ರಮಣದಲ್ಲಿ

ಮೊದಲನೇ ದಿನ : ಮದ್ಯಾಹ್ನ ಕುಂಭ ಸಂಕ್ರಮಣ, ರಾತ್ರಿ ಕೆಂಡ ಸೇವೆ, ಸುಬ್ರಹ್ಮಣ್ಯ ಸ್ವಾಮಿಗೆ ಹಾಲಿಟ್ಟು ಸೇವೆ, ರಂಗ ಪೂಜೆ ಮತ್ತು ಡಕ್ಕೆಬಲಿ ಸೇವೆ.
ಎರಡನೇ ದಿನ : ಮದ್ಯಹ್ನ ಮಹಾರಥೋತ್ಸವ, ಸಾಯಂಕಾಲ ವಾಲಗ ಮಂಟಪದ ಪೂಜೆ, ಶಯನೋತ್ಸವ, ಕವಾಟ ಬಂದನ.
ಮೂರನೇ ದಿನ : ಮುಂಜಾನೆ ಗಣ ಹೋಮ ಕವಾಟ ವಿಸರ್ಜನೆ, ಲಕ್ಷ್ಮೀ ಮಂಟಪದ ಪೂಜೆ, ತುಲಾಭಾರದಿ ಸೇವೆಗಳು. ಸಾಯಂಕಾಲ ೬ ಗಂಟೆಯಿಂದ ಪಾಲಕಿ ಉತ್ಸವ, ಸುರಗಿ ಕಟ್ಟೆ ಪೂಜೆ, ಕೆರೆ ದೀಪೋತ್ಸವ, ವಾಲಗ ಮಂಟಪ ಪೂಜೆ.

ಶ್ರೀ ಚಾಮುಂಡಿ ದೇವಸ್ಥಾನ: ಕುಂಭ ಮಾಸದಲ್ಲಿ ಮಾರಿ ಪೂಜೆ.

ಶ್ರೀ ಕಲ್ಲು ಮಾಲಿಂಗೇಶ್ವರ ದೇವಸ್ಥಾನ: ಕಾರ್ತಿಕ ಮಾಸದಲ್ಲಿ ದೀಪೋತ್ಸವ, ಮಹಾಶಿವರಾತ್ರಿ ರುದ್ರಾಭಿಷೇಕ, ಯಕ್ಷಗಾನ ಸೇವೆಯಾಟ.

ಆಧಾರ : ಕರ್ನಾಟಕ ಟೆಂಪಲ್ ಇನ್ಫಾರ್ಮಶನ್ ಸಿಸ್ಟಮ್

Leave a Comment