ಇಂಡೋನೆಶಿಯಾದ ‘ಸಾಂಸ್ಕೃತಿಕ ರಾಜಧಾನಿಯಾದ ಯೋಗ್ಯಕರ್ತಾದಲ್ಲಿನ ಶ್ರೀ ಪ್ರಂಬನನ್ (ಪರಬ್ರಹ್ಮನ್) ದೇವಸ್ಥಾನ

‘ಯಾವ ಸ್ಥಳದಲ್ಲಿ ಸಮುದ್ರಮಂಥನ ನಡೆಯಿತೋ, ಆ ಭೂಭಾಗವೆಂದರೆ ಈಗಿನ ಇಂಡೋನೇಶಿಯಾ ! ಸಮುದ್ರಮಂಥನದಲ್ಲಿ ಕಡಗೋಲಾಗಿದ್ದ ಸುಮೇರು ಪರ್ವತವೂ ಇದೇ ಭಾಗದಲ್ಲಿದೆ. ಜಗತ್ತಿನಲ್ಲಿನ ಅತೀ ದೊಡ್ಡ ದ್ವೀಪಗಳ ರಾಷ್ಟ್ರವೆಂದರೆ ಇಂಡೋನೇಶಿಯಾ. ೧೭ ಸಾವಿರಕ್ಕಿಂತಲೂ ಹೆಚ್ಚು ದ್ವೀಪಗಳಿರುವ ಈ ರಾಷ್ಟ್ರವು ಹಿಂದೆ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರ ಇವುಗಳ ನಡುವೆ ೧ ಸಾವಿರ ೭೦೦ ಮೈಲು ಕ್ಷೇತ್ರದಲ್ಲಿ ಪಸರಿಸಿದೆ. ಅದರ ಪೂರ್ವದಿಂದ ಪಶ್ಚಿಮದ ಕಡೆಗೆ ಜಾಗತಿಕ ಸ್ತರದಲ್ಲಿನ ೧೩೯ ಘಾತಕ ಜ್ವಾಲಾಮುಖಿಗಳಿವೆ. ಪ್ರತಿಯೊಂದು ಜ್ವಾಲಾಮುಖಿಗೆ ಲಕ್ಷಾವಧಿ ವರ್ಷಗಳ ಇತಿಹಾಸವಿದೆ. ೧೫ ನೇಯ ಶತಮಾನದವರೆಗೆ ಇಂಡೋನೇಶಿಯಾದಲ್ಲಿ ಶ್ರೀವಿಜಯ, ಮಾತರಮ್, ಶೈಲೇಂದ್ರ, ಸಂಜಯಾ, ಮಜಪಾಹಿತರಂತಹ ಹಿಂದೂ ರಾಜರ ರಾಜ್ಯವಿತ್ತು. ಜಾವಾ ದ್ವೀಪದ ಮೇಲೆ ‘ಜಾವಾನೀಸ್, ಬಾಲಿ ದ್ವೀಪದ ಮೇಲೆ ‘ಬಾಲಿನೀಸ್ ಈ ಭಾಷೆಗಳಿದ್ದರೂ ಈ ಮೊದಲು ಎಲ್ಲ ಜನರು ಸಂಸ್ಕೃತ ಭಾಷೆಯನ್ನು ತಮ್ಮ ಮಾತೃಭಾಷೆ ಎಂದು ತಿಳಿಯುತ್ತಿದ್ದರು. ಅನಂತರ ಮುಸಲ್ಮಾನರ ಆಕ್ರಮಣದಿಂದ ಅಲ್ಲಿನ ಭಾಷೆ ಮತ್ತು ಸಂಸ್ಕೃತಿಯು ಬದಲಾಯಿತು, ಆದರೂ ಅಲ್ಲಿನ ನಾಗರಿಕರು ಈ ಮೊದಲು ಹಿಂದೂಗಳಾಗಿದ್ದರು. ಆದುದರಿಂದ ಅವರ ಪ್ರತಿನಿತ್ಯದ ಜೀವನದಲ್ಲಿ ಹಿಂದೂ ಧರ್ಮದ ವಿವಿಧ ಅಂಶಗಳು ಕಂಡುಬರುತ್ತವೆ. ಈ ರೀತಿ ಒಂದು ಕಾಲದಲ್ಲಿ ಜಗತ್ತಿನಲ್ಲೆಲ್ಲ ಹರಡಿದ್ದ ಹಿಂದೂ ಸಂಸ್ಕೃತಿಯ ಅಧ್ಯಯನ ಮಾಡಲು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಸದ್ಗುರು (ಸೌ.) ಅಂಜಲಿ ಗಾಡಗೀಳ ಮತ್ತು ಅವರೊಂದಿಗೆ ೪ ಜನ ವಿದ್ಯಾರ್ಥಿ ಸಾಧಕರು ಸದ್ಯ ಇಂಡೋನೇಶಿಯಾದ ಅಧ್ಯಯನ ಪ್ರಯಾಣದಲ್ಲಿದ್ದಾರೆ. ಅವರು ಭೇಟಿ ನೀಡಿರುವ ಸ್ಥಳಗಳ ವೈಶಿಷ್ಟ್ಯಗಳು ಮತ್ತು ಅಲ್ಲಿನ ಹಿಂದೂ ಸಂಸ್ಕೃತಿಯ ಗುರುತುಗಳನ್ನು ತೋರಿಸುವ ಲೇಖನವನ್ನು ಪ್ರಸಿದ್ಧಗೊಳಿಸುತ್ತಿದ್ದೇವೆ.

‘ಯೋಗ್ಯಕರ್ತಾ ಈ ನಗರವು ಇಂಡೋನೇಶಿಯಾದ ರಾಜಧಾನಿ ಜಕಾರ್ತಾದಿಂದ ೫೮೦ ಕಿ.ಮೀ. ದೂರದಲ್ಲಿದೆ. ಈ ನಗರಕ್ಕೆ ಸ್ಥಳೀಯ ‘ಜಾವಾನೀಸ ಭಾಷೆಯಲ್ಲಿ ‘ಕೋಟಾ ಯೋಗ್ಯಕರ್ತಾ ಎಂದೂ ಹೇಳುತ್ತಾರೆ. ಕೋಟಾ ಅಂದರೆ ಕೋಟೆ. ೨೦೦ ವರ್ಷಗಳ ಹಿಂದೆ ಡಚ್ ಜನರು ಇಲ್ಲಿ ರಾಜ್ಯವನ್ನಾಳಿದರು ಮತ್ತು ಕೋಟೆಯನ್ನು ಕಟ್ಟಿದರು; ಆದುದರಿಂದ ಇದಕ್ಕೆ ‘ಯೋಗ್ಯಕರ್ತಾ ಕೋಟೆ, ಎಂಬ ಹೆಸರು ಬಂದಿರಬಹುದು. ಮಾತರಮ್, ಶೈಲೇಂದ್ರ, ಶ್ರೀವಿಜಯ, ಮಜಪಾಹಿತ ಮುಂತಾದ ಹಿಂದೂ ಸಾಮ್ರಾಟರು ರಾಜ್ಯವಾಳಿರುವುದರಿಂದ ಈ ನಗರಕ್ಕೆ ತನ್ನದೇ ಆದ ಒಂದು ಸಂಸ್ಕೃತಿ ಇದೆ. ಇದು ಇಂಡೋನೇಶಿಯಾದ ಪ್ರಸಿದ್ಧ ‘ಬಾಟಿಕ ಶೈಲಿಯ ಬಟ್ಟೆಗಳ ನಗರವಾಗಿದೆ; ಆದುದರಿಂದ ಇದಕ್ಕೆ ಇಂಡೋನೇಶಿಯಾದ ‘ಸಾಂಸ್ಕೃತಿಕ ರಾಜಧಾನಿ ಎಂದೂ ಹೇಳಲಾಗುತ್ತದೆ.

೧. ‘ಪೃಥ್ವಿಯ ಮೇಲೆ ಎಲ್ಲಕ್ಕಿಂತ ಎತ್ತರ ದೇವಸ್ಥಾನ, ಎಂಬ ಖ್ಯಾತಿ ಪಡೆದಿರುವ ಯೋಗ್ಯಕರ್ತಾದಲ್ಲಿನ ಪ್ರಂಬನನ್ (ಪರಬ್ರಹ್ಮನ್) ದೇವಸ್ಥಾನ

ಯೋಗ್ಯಕರ್ತಾ ನಗರದಿಂದ ೧೭ ಕಿ.ಮೀ. ದೂರದಲ್ಲಿ ಪ್ರಂಬನನ್ ಎಂಬ ಹೆಸರಿನ ಒಂದು ಊರಿದೆ. ಅಲ್ಲಿ ‘ಚಂಡಿ ಪ್ರಂಬನನ್ ಎಂಬ ಹೆಸರಿನ ದೇವಸ್ಥಾನಗಳ ಸಮೂಹವಿದೆ. ‘ಚಂಡಿ ಅಂದರೆ ದೇವಸ್ಥಾನ ಮತ್ತು ‘ಪ್ರಂಬನನ್ ಅಂದರೆ ಪರಬ್ರಹ್ಮನ್ ! ಇದಕ್ಕೆ ಒಂದು ಕಾಲದಲ್ಲಿ ‘ಪೃಥ್ವಿಯ ಮೇಲೆ ಎಲ್ಲಕ್ಕಿಂತ ಎತ್ತರ ದೇವಸ್ಥಾನ, ಎಂದು ಹೇಳಲಾಗುತ್ತಿತ್ತು. ಅದು ೧೦೦೬ ರಲ್ಲಿ ಬಂದಿದ್ದ ಜ್ವಾಲಾಮುಖಿಯಿಂದ ನಾಶವಾಯಿತು ಮತ್ತು ಜ್ವಾಲಾಮುಖಿಯಿಂದ ಬೂದಿಯ ಕೆಳಗಡೆ ಮುಚ್ಚಿಹೋಯಿತು. ಈ ದೇವಸ್ಥಾನದ ಪರಿಸರದಲ್ಲಿ ೩ ಮುಖ್ಯ ದೇವಸ್ಥಾನಗಳಿವೆ. ಮಧ್ಯಭಾಗದಲ್ಲಿ ಶಿವಮಂದಿರ, ಅದರ ಎಡಬದಿಗೆ ಶ್ರೀ ಬ್ರಹ್ಮದೇವರ ದೇವಸ್ಥಾನ ಮತ್ತು ಬಲಬದಿಗೆ ಶ್ರೀವಿಷ್ಣುವಿನ ದೇವಸ್ಥಾನವಿದೆ. ಪ್ರಂಬನನ್ ದೇವಸ್ಥಾನದ ಪರಿಸರದಲ್ಲಿರುವ ಮುಖ್ಯ ಶಿವಮಂದಿರದಲ್ಲಿ ‘ಅಗಸ್ತಿ ಋಷಿಗಳ ದೇವಸ್ಥಾನವೂ ಇದೆ. ೯ ನೇ ಶತಮಾನದಲ್ಲಿ ಕಟ್ಟಿರುವ ಪ್ರಂಬನನ್ ದೇವಸ್ಥಾನದಲ್ಲಿ ದೇವತೆಗಳ ಎಲ್ಲ ವಿಗ್ರಹಗಳು ನಿಂತ ಸ್ಥಿತಿಯಲ್ಲಿವೆ.

೨. ದೇವಸ್ಥಾನದ ವೈಶಿಷ್ಟ್ಯವಾಗಿರುವ ದೇವತೆಗಳ ವಾಹನಗಳ ದೇವಸ್ಥಾನಗಳು

ಮೂರು ಮುಖ್ಯ ದೇವಸ್ಥಾನಗಳ ಎದುರಿಗೆ ಆಯಾಯ ದೇವತೆಗಳ ವಾಹನದ ದೇವಸ್ಥಾನಗಳಿವೆ. ಶಿವ ದೇವಸ್ಥಾನದ ಎದುರು ನಂದಿಯ ದೇವಸ್ಥಾನ, ಬ್ರಹ್ಮದೇವರ ದೇವಸ್ಥಾನದ ಎದುರು ಹಂಸದ ದೇವಸ್ಥಾನ ಮತ್ತು ಶ್ರೀವಿಷ್ಣುವಿನ ದೇವಸ್ಥಾನದ ಎದುರು ಗರುಡನ ದೇವಸ್ಥಾನವಿದೆ. ಒಂದು ಕಾಲದಲ್ಲಿ ಈ ಮೂರು ದೇವಸ್ಥಾನಗಳ ಪರಿಸರದಲ್ಲಿ ೨೦೦ ಕ್ಕಿಂತಲೂ ಹೆಚ್ಚು ಪರಿವಾರ ದೇವಸ್ಥಾನಗಳಿದ್ದವು. ಈಗ ಆ ದೇವಸ್ಥಾನಗಳ ಬಿದ್ದಿರುವ ಕಲ್ಲುಗಳನ್ನು ಒಟ್ಟುಗೂಡಿಸಿ ಪರಿವಾರ ದೇವತೆಗಳ ದೇವಸ್ಥಾನಗಳನ್ನು ಕಟ್ಟಲು ಪ್ರಾರಂಭಮಾಡಿದ್ದಾರೆ.

(ಆಧಾರ : wikipedia.org/wiki/prambanan)

೩. ಅಗಸ್ತಿ ಋಷಿಗಳು ಬರೆದ ವಾಸ್ತುಶಾಸ್ತ್ರ ಮತ್ತು ಶಿಲ್ಪಶಾಸ್ತ್ರಕ್ಕನುಸಾರ ರಚನೆ

‘ಪ್ರಂಬನನ್ ದೇವಸ್ಥಾನದ ಪರಿಸರದಲ್ಲಿ ಒಂದುಕಾಲದಲ್ಲಿ ವಿಶಾಲ ಗುರುಕುಲವಿತ್ತು’, ಎಂಬುದು ಉತ್ಖನನದ ಸಮಯದಲ್ಲಿ ಗಮನಕ್ಕೆ ಬಂದಿದೆ. ಈ ಭೂಭಾಗದ ಬದಿಗಳಲ್ಲಿ ಎಲ್ಲೆಡೆ ಜ್ವಾಲಾಮುಖಿಗಳಿರುವುದರಿಂದ ದೇವಸ್ಥಾನದ ಕಲ್ಲುಗಳು ಜ್ವಾಲಾಮುಖಿಯ ಪರ್ವತದಿಂದ ದೊರಕಿವೆ. ಅವು ಕಪ್ಪು ಕಲ್ಲುಗಳಾಗಿವೆ. ಅಲ್ಲಿ ಅಗಸ್ತಿ ಋಷಿಗಳು ಬರೆದ ವಾಸ್ತುಶಾಸ್ತ್ರ ಮತ್ತು ಶಿಲ್ಪಶಾಸ್ತ್ರಕ್ಕನುಸಾರ ಪ್ರಂಬನನ್ ದೇವಸ್ಥಾನದ ನಿರ್ಮಿತಿಯನ್ನು ಮಾಡಲಾಗಿದೆ ಎಂದು ಹೇಳಲಾಗುತ್ತದೆ.

೪. ಅನೇಕ ಚಿಕ್ಕ ಚಿಕ್ಕ ದೇವಸ್ಥಾನಗಳಿಂದ ಅಲಂಕರಿಸಲ್ಪಟ್ಟ ಪರಿಸರ

ಈ ದೇವಸ್ಥಾನದ ನಾಲ್ಕೂ ಬದಿಗಳಲ್ಲಿ ಸಾಧಾರಣ ೫ ರಿಂದ ೧೦ ಕಿ. ಮೀ. ಪರಿಸರದಲ್ಲಿ ಪ್ರಂಬನನ್ ದೇವಸ್ಥಾನಕ್ಕಿಂತ ಚಿಕ್ಕ ಚಿಕ್ಕ ಅನೇಕ ಮಂದಿರಗಳಿವೆ. ‘ಚಂಡಿ ಸೆವೂ’, ‘ಚಂಡೀ ಪ್ಲೌಸನ್, ‘ಚಂಡಿ ಸಂಬೀಸಾರಿ’, ‘ಚಂಡಿ ಬುಬ್ರಾ, ‘ಚಂಡಿ ಲುಂಬುಂಗ’, ‘ಚಂಡಿ ಸಂಜಿವೊ’, ‘ಚಂಡಿ ಇಜೋ’ ಎಂಬ ಹೆಸರಿನ ದೇವಸ್ಥಾನಗಳಿವೆ. ಅವುಗಳಲ್ಲಿ ‘ಚಂಡಿ ಸೆವೂ’ ಎಂಬ ದೇವಸ್ಥಾನವು ಬೌದ್ಧ ಶೈಲಿಯಲ್ಲಿನ ದೇವಸ್ಥಾನವಾಗಿದೆ.’ – (ಸದ್ಗುರು) ಸೌ. ಅಂಜಲಿ ಗಾಡಗೀಳ, ಇಂಡೋನೇಶಿಯಾ (೧೭.೩.೨೦೧೮)

‘ಭಾರತದಿಂದ ೪ ಸಾವಿರ ಕಿ.ಮೀ. ದೂರದಲ್ಲಿರುವ ಇಂಡೋನೇಶಿಯಾ, ಅಂದರೆ ಜಾವಾ ದ್ವೀಪದ ಮೇಲೆ ಹಿಂದಿನಿಂದಲೂ ಹಿಂದೂ ಸಂಸ್ಕೃತಿ ಯಾವ ರೀತಿ ಇತ್ತೆಂಬುದನ್ನು ನಮಗೆ ಹತ್ತಿರದಿಂದ ನೋಡುವ ಭಾಗ್ಯ ಸಿಕ್ಕಿತು. ಇದಕ್ಕಾಗಿ ನಾವು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆ ಇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ. – (ಸದ್ಗುರು) ಸೌ. ಅಂಜಲಿ ಗಾಡಗೀಳ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

Leave a Comment