ಮೇಲ್ಛಾವಣಿ ತೋಟಗಾರಿಕೆ (ಟೆರೆಸ್ ಗಾರ್ಡನಿಂಗ್ – Terrace Garden – 1)

Article also available in :

ಸರ್ವಸಾಮಾನ್ಯರ ಜೀವನದಲ್ಲಿ ತರಕಾರಿ ಮಾರುಕಟ್ಟೆಯು ಒಂದು ಮಹತ್ವದ ಘಟಕವಾಗಿದೆ ! ಹೆಚ್ಚಿನ ಜನರು ದೈನಂದಿನ ಅಡುಗೆಗಾಗಿ ಬೇಕಾಗುವ ತರಕಾರಿ, ಹಣ್ಣುಹಂಪಲು ಖರೀದಿಸಲು ಮಾರುಕಟ್ಟೆಗೆ ಹೋಗುತ್ತಾರೆ. ಮಾರುಕಟ್ಟೆಯಲ್ಲಿ ಸಾಮಾನ್ಯವಾಗಿ ನಮ್ಮ ಮನಸ್ಸಿನಲ್ಲಿರುವಂತಹ ತಾಜಾ ತರಕಾರಿಗಳು, ರಸಭರಿತ ಹಣ್ಣುಗಳು ಸಿಕ್ಕೇ ಸಿಗುತ್ತವೆ ಎಂದೇನಿಲ್ಲ. ಸಿಕ್ಕರೂ ಅವುಗಳು ದುಬಾರಿಯಾಗಿರುತ್ತವೆ. ಇಂತಹ ಸ್ಥಿತಿಯಲ್ಲಿ ‘ನೀವು ಮನೆಯಲ್ಲಿಯೇ ನಿಮಗೆ ಬೇಕಾಗುವಷ್ಟು ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಬೆಳೆಸಬಹುದು’ ಎಂದು ಯಾರಾದರೂ ನಿಮಗೆ ಹೇಳಿದರೆ, ಅದರ ಬಗ್ಗೆ ನಿಮಗೆ ವಿಶ್ವಾಸ ಮೂಡಲಾರದು, ಆದರೆ ಇದು ಸಾಧ್ಯವಿದೆ. ನಿಮಗೆ ತರಕಾರಿಗಳನ್ನು ಮತ್ತು ಹಣ್ಣುಗಳನ್ನು ಬೆಳೆಸಲು ಹೊಲ ಅಥವಾ ದೊಡ್ಡ ಅಂಗಳ ಬೇಕು ಎಂದೇನಿಲ್ಲ. ಮನೆಯಲ್ಲಿಯೇ ತರಕಾರಿ ಅಥವಾ ಹಣ್ಣುಗಳನ್ನು ಬೆಳೆಸಲು ಜಾಗವು ಒಂದು ದೊಡ್ಡ ಸಮಸ್ಯೆಯಲ್ಲ. ತೀರಾ ಮನೆಯ ಸಜ್ಜದಲ್ಲಿ (ಬಾಲ್ಕನಿಯಲ್ಲಿ), ಮೇಲ್ಛಾವಣಿಯಲ್ಲಿ (ಟೆರೆಸ್ ಮೇಲೆ) ಅಥವಾ ಕಿಟಕಿಯಲ್ಲಿಯೂ ತರಕಾರಿಗಳನ್ನು ಬೆಳೆಸಲು ಸಾಧ್ಯವಿದೆ.

ಸೌ. ಗೌರಿ ನೀಲೇಶ ಕುಲಕರ್ಣಿ

ಮುಂಬರುವ ಆಪತ್ಕಾಲವನ್ನು ನೋಡಿದರೆ ಈ ರೀತಿಯ ಪ್ರಯೋಗಗಳ ಆವಶ್ಯಕತೆಯಿದೆ. ತ್ರಿಕಾಲಜ್ಞಾನಿ ಸಂತರು ಮತ್ತು ಭವಿಷ್ಯಕಾರರು ಹೇಳಿದಂತೆ ಈಗ ಆಪತ್ಕಾಲ ಪ್ರಾರಂಭವಾಗಿದ್ದು ಮುಂದಿನ ೫-೬ ವರ್ಷಗಳು ಮಹಾಭಯಂಕರ ಆಪತ್ಕಾಲವನ್ನು ಎದುರಿಸಬೇಕಾಗುವುದು. ಇಂತಹ ಸಮಯದಲ್ಲಿ ಈಗಿನಂತೆ ಮಾರುಕಟ್ಟೆಯಲ್ಲಿ ತರಕಾರಿ ಸಿಗುವುದು ಅಥವಾ ಮಾರುಕಟ್ಟೆಗೆ ಹೋಗಲು ಸಾಧ್ಯವಾಗಬಹುದೇ ಎಂದೂ ಹೇಳಲು ಆಗುವುದಿಲ್ಲ. ಕೊರೊನಾದ ಕಾಲದಲ್ಲಿಯೇ ತರಕಾರಿಗಳು ಸಿಗುವಲ್ಲಿ ಎಷ್ಟು ಅಡಚಣೆಗಳು ಬಂದವು, ವಸ್ತುಗಳ ಬೆಲೆ ಎಷ್ಟು ಹೆಚ್ಚಾಯಿತು ಎಂಬುದನ್ನು ಜನರು ಅನುಭವಿಸಿದ್ದಾರೆ. ಇಂತಹ ಸಮಯದಲ್ಲಿ ನಮ್ಮ ಮನೆಯಲ್ಲಿಯೇ ನಮಗೆ ಸಾಕಾಗುವಷ್ಟು ತರಕಾರಿ, ಹಣ್ಣುಗಳನ್ನು ಬೆಳೆಸಲು ಸಾಧ್ಯವಿದ್ದರೆ ಏಕೆ ಪ್ರಯತ್ನಿಸಬಾರದು ? ಹೀಗೆ ಮಾಡಿದರೆ ಮನೆಯ ಪೌಷ್ಟಿಕ (ಸತ್ವಯುತ) ತರಕಾರಿಗಳು ಸಿಗುವವು, ಹಾಗೆಯೇ ಹಣ ಮತ್ತು ಶ್ರಮವೂ ಉಳಿಯುವುದು. ಸದ್ಯ ಸಾವಯವ ಅಥವಾ ನೈಸರ್ಗಿಕ ಕೃಷಿಯ ಅಂತರ್ಗತ ಮೇಲ್ಛಾವಣಿ ತೋಟಗಾರಿಕೆ (ಟೆರೆಸ್ ಗಾರ್ಡನಿಂಗ್) ಸಂಕಲ್ಪನೆಯು ವೇಗ ಪಡೆಯುತ್ತಿದೆ. ಈ ಲೇಖನದಲ್ಲಿ ನಾವು ನಮ್ಮ ಮನೆಯಲ್ಲಿಯೇ ತರಕಾರಿಗಳನ್ನು ಹೇಗೆ ಬೆಳೆಸಬೇಕು ? ಈ ವಿಷಯದ ಬಗ್ಗೆ ಮಾಹಿತಿಯನ್ನು ತಿಳಿದುಕೊಳ್ಳೋಣ.

ಅ. ಮನೆಯಲ್ಲಿ ಯಾವ ಗಿಡಗಳನ್ನು ನೆಡಬಹುದು ?

 

೧. ತರಕಾರಿ ಮತ್ತು ಅಡುಗೆ ಮನೆಗೆ ಉಪಯುಕ್ತ ಗಿಡ : ಕೆಂಪು ಹರಿವೆ ಸೊಪ್ಪು, ಪುಂಡಿ ಸೊಪ್ಪು, ಪಾಲಕ, ಮೆಂತ್ಯೆ, ಕೊತ್ತಂಬರಿ, ದೊಣ್ಣೆ ಮೆಣಸಿನಕಾಯಿ, ಮೆಣಸಿನ ಕಾಯಿ, ಬದನೆಕಾಯಿ, ಹಾಗಲಕಾಯಿ, ಪಡವಲ ಕಾಯಿ, ಹಾಲುಗುಂಬಳ (ಬೂದುಗುಂಬಳ), ಬೆಂಡೆಕಾಯಿ, ಕ್ಯಾಬೇಜ್, ಈರುಳ್ಳಿ, ಬಟಾಟೆ, ಟೊಮೆಟೊ, ಗಜರಿ (ಕ್ಯಾರೆಟ್), ಸೌತೆಕಾಯಿ, ಬೀಟ್‌ರೂಟ್, ಮೂಲಂಗಿ, ಅಗಸೆ, ನುಗ್ಗೆಕಾಯಿ, ಕರಿಬೇವು, ನಿಂಬೆ, ಕಬ್ಬು, ಪುದೀನ, ಬೆಳ್ಳುಳ್ಳಿ, ಹಸಿಶುಂಠಿ.

೨. ಔಷಧಿ ವನಸ್ಪತಿಗಳು : ತುಳಸಿ, ಲೋಳೆಸರ, ಆಡುಸೋಗೆ, ಬ್ರಾಹ್ಮೀ, ಶತಾವರಿ, ಸಬ್ಜಾ (ಕಾಮಕಸ್ತೂರಿ)

೩. ಹಣ್ಣಿನ ಗಿಡಗಳು : ಕಿತ್ತಳೆ, ಪೇರಳೆ, ನಿಂಬೆ, ಪಪ್ಪಾಯಿ, ಮಾವು, ಅಂಜೂರ

೪. ಹೂವಿನ ಗಿಡಗಳು : ಗುಲಾಬಿ, ಚೆಂಡು, ಲಿಲಿ, ಚಮೇಲಿ, ದಾಸವಾಳ, ಮಲ್ಲಿಗೆ ಇತ್ಯಾದಿ.

ಆ. ಕುಂಡಗಳ ಆಯ್ಕೆ

ಮೇಲ್ಛಾವಣಿಯ (ಟೆರೇಸ್) ಮೇಲೆ ತೋಟಗಾರಿಕೆಗಾಗಿ ಕುಂಡಗಳನ್ನು ಅಥವಾ ಕಂಟೇನರ್‌ಗಳನ್ನು ಬಳಸಬಹುದು. ಕುಂಡಗಳು ಸಾಧ್ಯವಿದ್ದಷ್ಟು ಕೋನಾಕೃತಿ (ಗೋಪುರಾಕೃತಿ) ಇರಬಾರದು. ಕುಂಡಗಳ ಮೇಲಿನ ವ್ಯಾಸ ೧೨ ಇಂಚಿದ್ದರೆ, ಕೆಳಗಿನ ಭಾಗವು ೧೦ ಇಂಚಿನದ್ದಾಗಿರಬೇಕು. ಕುಂಡಗಳ ಮೇಲಿನ ಬದಿಯು ಒಳಗಿನ ಬದಿಗೆ ಬಾಗಿರಬಾರದು. ಕುಂಡಗಳ ಆಕಾರವು ಮಡಕೆಗಳಂತೆ ಇರಬಾರದು. ಸಾಧ್ಯವಿದ್ದಷ್ಟು ಮಣ್ಣಿನ ಕುಂಡಗಳನ್ನು ಖರೀದಿಸಬೇಕು. ಅವು ಸಿಗದಿದ್ದರೆ, ಮಡಕೆ, ತಗಡಿನ ಅಥವಾ ಪ್ಲಾಸ್ಟಿಕಿನ ಡಬ್ಬಗಳನ್ನು, ಪ್ಲಾಸ್ಟಿಕಿನ ಬಕೇಟ್, ದೊಡ್ಡ ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬಾಟಲಿಗಳು, ಪೂರ್ಣ ಅಥವಾ ಅರ್ಧ ಕತ್ತರಿಸಿದ ಪ್ಲಾಸ್ಟಿಕ್‌ನ ಡ್ರಮ್, ಮರದ ಪೆಟ್ಟಿಗೆ (ಕ್ರೇಟ್) ಮುಂತಾದವುಗಳನ್ನು ಸಹ ನಾವು ಕುಂಡಗಳಂತೆ ಅಂದರೆ ‘ಕಂಟೇನರ್’ ಎಂದು ಉಪಯೋಗಿಸಬಹುದು.

ಪ್ಲಾಸ್ಟಿಕಿನ ಡ್ರಾಮ್ ಅನ್ನು ಅರ್ಧ ತುಂಡು ಮಾಡಿ ಮಾಡಲಾದ ಕುಂಡ

ಮೇಲ್ಛಾವಣಿಯ ತೋಟಗಾರಿಕೆಯನ್ನು ಮಾಡಲು ಸಸ್ಯ ಪಾಲನೆಯ ಕೇಂದ್ರಗಳಲ್ಲಿ (ನರ್ಸರಿಗಳಲ್ಲಿ) ‘ಗ್ರೋ ಬ್ಯಾಗ್ಸ್’ ಸಿಗುತ್ತವೆ, ಅವುಗಳನ್ನೂ ಉಪಯೋಗಿಸಬಹುದು. ಮಾರುಕಟ್ಟೆಯಲ್ಲಿಯೂ ಇಂತಹ ಕಂಟೇನರ್‌ಗಳು ಸಿಗುತ್ತವೆ. ಒಂದು ವೇಳೆ ಮಾರುಕಟ್ಟೆಯಿಂದ ಕಂಟೇನರ್‌ಗಳನ್ನು ಖರೀದಿಸುವುದಿದ್ದರೆ, ತಿಳಿಬಣ್ಣದ ಕಂಟೇನರ್‌ಗಳನ್ನು ಖರೀದಿಸಬೇಕು, ಏಕೆಂದರೆ ತಿಳಿ ಬಣ್ಣವು ಹೆಚ್ಚು ಉಷ್ಣತೆಯನ್ನು ಹೀರಿಕೊಳ್ಳುವುದಿಲ್ಲ.

ಗ್ರೋ ಬ್ಯಾಗ್

ಮೇಲ್ಛಾವಣಿ ತೋಟದಲ್ಲಿ ಹೆಚ್ಚಿನ ಗಿಡಗಳು ಕುಂಡಗಳಲ್ಲಿ ಬೆಳೆಯುತ್ತವೆ. ತರಕಾರಿ ಅಥವಾ ಬೇರುಗಳು ಚಿಕ್ಕದಾಗಿರುವ ಇತರ ಸಸಿಗಳನ್ನು ಚಿಕ್ಕ ಕುಂಡಗಳಲ್ಲಿ ನೆಡಬಹುದು. ಟೊಮೆಟೊ, ಮೂಲಂಗಿ, ಗಜರಿ ಇವುಗಳಂತಹ ತರಕಾರಿಗಳನ್ನು ಮಧ್ಯಮ ಆಕಾರದ ಕುಂಡಗಳಲ್ಲಿ ನೆಡಬೇಕು. ದೊಡ್ಡ ಗಿಡಗಳಿಗಾಗಿ ದೊಡ್ಡ ಕಂಟೇನರಗಳು ಅಥವಾ ಪ್ಲ್ಯಾಸ್ಟಿಕಿನ/ತಗಡಿನ ಡ್ರಮ್‌ಗಳ ಆವಶ್ಯಕತೆ ಇರುತ್ತದೆ. ಎತ್ತರ ಬೆಳೆಯುವ ಬಳ್ಳಿಗಳಿಗಾಗಿ ಟೆರೇಸಿನ ಗೋಡೆ ಅಥವಾ ಉದ್ದ ಪೈಪ್‌ಗಳನ್ನು ಆಧಾರವಾಗಿ ಬಳಸಬಹುದು. ಇದರಿಂದ ಲಭ್ಯವಿರುವ ಜಾಗವನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಬಹುದು.

ಇ. ಕುಂಡಗಳಿಗೆ ಅಥವಾ ಕಂಟೇನರ್‌ಗಳಿಗೆ ತೂತುಗಳನ್ನು ಮಾಡುವುದು

ಕುಂಡಗಳಲ್ಲಿ ಅಥವಾ ಕಂಟೇನರ್‌ಗಳಲ್ಲಿ ಗಾಳಿಯಾಡಲು ಅವುಗಳಿಗೆ ತೂತುಗಳಿರುವುದು ಆವಶ್ಯಕವಾಗಿದೆ. ಸರ್ವಸಾಧಾರಣ ಪ್ಲಾಸ್ಟಿಕಿನ ಕುಂಡಗಳಿದ್ದರೆ, ಆ ಕುಂಡಗಳ ಕೆಳ ಭಾಗದಲ್ಲಿ ೪-೫ ಮತ್ತು ಬದಿಗಳಲ್ಲಿ ೧೦-೧೨ ಹೀಗೆ ಸಾಧಾರಣ ೪-೫ ಇಂಚುಗಳ ಅಂತರದಲ್ಲಿ ಅನೇಕ ತೂತುಗಳನ್ನು ಮಾಡಬೇಕು. ಪ್ಲ್ಯಾಸ್ಟಿಕಿನ ಡಬ್ಬ ಅಥವಾ ಬಕೇಟ್‌ಗಳನ್ನು ಬಳಸುತ್ತಿದ್ದರೆ, ಅವುಗಳಿಗೂ ತೂತುಗಳನ್ನು ಮಾಡಬೇಕು. ಮಾರುಕಟ್ಟೆಯಲ್ಲಿ ಸಿಗುವ ಗ್ರೋ ಬ್ಯಾಗ್ಸ್‌ಗಳಿಗೆ ಮೊದಲೇ ತೂತುಗಳನ್ನು ಮಾಡಿರುತ್ತಾರೆ.

ಈ. ಕುಂಡಗಳನ್ನು ಹೇಗೆ ತುಂಬಬೇಕು ?

ಕುಂಡಗಳನ್ನು ತುಂಬುವ ವಿವಿಧ ಪದ್ಧತಿಗಳಿವೆ. ಒಂದೆಂದರೆ ನಾವು ನಮ್ಮಲ್ಲಿ ಸಿಗುವ ಮಣ್ಣನ್ನು ಕುಂಡಗಳಲ್ಲಿ ಹಾಕಬಹುದು ಅಥವಾ ಮಣ್ಣು, ಕೊಕೊಪೀಟ ಮತ್ತು ಗೊಬ್ಬರ ಇವುಗಳ ಮಿಶ್ರಣವನ್ನು ಬಳಸಬಹುದು ಅಥವಾ ಮಣ್ಣಿಲ್ಲದೇ ತೋಟಗಾರಿಕೆಯನ್ನು ಮಾಡಬಹುದು. ಮಣ್ಣಿಲ್ಲದೇ ತೋಟಗಾರಿಕೆಯನ್ನು ಮಾಡುವಾಗ ಹಸಿ ಮತ್ತು ಒಣ ಕಸದಿಂದ (ಗಿಡಗಳ ಒಣಗಿದ ಎಲೆಗಳು, ಮರದ ಕಡ್ಡಿಗಳು ಇತ್ಯಾದಿ) ತಯಾರಾದ ಕಂಪೊಸ್ಟ್ ಗೊಬ್ಬರವನ್ನು ಮಣ್ಣಿನ ಬದಲಿಗೆ ಉಪಯೋಗಿಸಲಾಗುತ್ತದೆ.

ಯಾವ ಮಣ್ಣಿನಲ್ಲಿ ಸೇಂದ್ರಿಯ ಕಾರ್ಬನ್ ಹೆಚ್ಚಿರುತ್ತದೆಯೋ, ಆ ಮಣ್ಣಿಗೆ ಸತತವಾಗಿ ನೀರು ಹಾಕಬೇಕಾಗುವುದಿಲ್ಲ; ಏಕೆಂದರೆ ಇಂತಹ ಮಣ್ಣು ನೀರನ್ನು ಹಿಡಿದಿಟ್ಟುಕೊಳ್ಳುತ್ತದೆ. ಕೆಂಪು ಮಣ್ಣಿನಲ್ಲಿ ಆಹಾರದ್ರವ್ಯಗಳು ಕಡಿಮೆ ಇರುತ್ತವೆ ಮತ್ತು ನೀರು ಹೆಚ್ಚು ಪ್ರಮಾಣದಲ್ಲಿ ಬಸಿದು ಹೋಗುತ್ತದೆ. ತದ್ವಿರುದ್ಧ ಕಪ್ಪು ಮಣ್ಣಿನಲ್ಲಿ ಆಹಾರದ್ರವ್ಯಗಳು ಹೆಚ್ಚಿರುತ್ತವೆ ಮತ್ತು ನೀರಿನ ಬಸಿಯುವಿಕೆಯೂ ಕಡಿಮೆ ಇರುತ್ತದೆ. ಟೆರೇಸ್ ಮೇಲೆ ತೋಟಗಾರಿಕೆಯನ್ನು ಮಾಡುವಾಗ ಆಹಾರ ದ್ರವ್ಯಗಳು ಹೆಚ್ಚು ಮತ್ತು ನೀರು ಬಸಿದು ಹೋಗುವ ಮಣ್ಣು ಆವಶ್ಯಕವಾಗಿರುತ್ತದೆ. ನಾವು ಕಪ್ಪು ಮಣ್ಣನ್ನು ಬಳಸುವುದಿದ್ದರೆ ಅದರಲ್ಲಿ ನದಿತೀರದ ಅಥವಾ ಕಟ್ಟಡ ಕಾಮಗಾರಿ ನಡೆದಿರುವ ಸ್ಥಳಗಳಲ್ಲಿನ ಮುಷ್ಠಿಯಷ್ಟು ಮರಳನ್ನು ತಂದು ತೊಳೆದು ಹಾಕಬೇಕು.

ಕೊಕೊಪೀಟ

ಒಂದು ವೇಳೆ ನಾವು ಕೆಂಪು ಮಣ್ಣನ್ನು ಬಳಸುತ್ತಿದ್ದರೆ, ಕೊಕೊಪೀಟನ್ನು (ತೆಂಗಿನ ಕಾಯಿಯ ತೌಡಿನಿಂದ ತಯಾರಿಸಿದ ನೈಸರ್ಗಿಕ ಮತ್ತು ರೋಗಕಾರಕ ಜೀವಾಣುಮುಕ್ತ ಪುಡಿ. ಈ ಪುಡಿಯನ್ನು ಕೆಲವೊಂದು ಪ್ರಕ್ರಿಯೆಗಳನ್ನು ಮಾಡಿ ಇಟ್ಟಿಗೆಯ ಆಕಾರದಲ್ಲಿಯೂ ತಯಾರಿಸಿ ಕೊಡುತ್ತಾರೆ.) ಉಪಯೋಗಿಸಬೇಕು; ಏಕೆಂದರೆ ಅದು ನೀರನ್ನು ಹಿಡಿದಿಡುತ್ತದೆ. ನಮ್ಮ ಮನೆಯು ಸಮುದ್ರದ ಬಳಿ ಇದ್ದರೆ, ಕೊಕೊಪೀಟ್‌ಅನ್ನು ಬಳಸುವ ಆವಶ್ಯಕತೆಯಿಲ್ಲ; ಏಕೆಂದರೆ ಸಮುದ್ರದ ಬಳಿಯಿರುವ ಪ್ರದೇಶಗಳಲ್ಲಿ ವಾತಾವರಣದಲ್ಲಿ ನೀರಿನ ಅಂಶ ಇರುತ್ತದೆ. ಆದುದರಿಂದ ಅಲ್ಲಿ ಕೊಕೊಪೀಟನ್ನು ಉಪಯೋಗಿಸಿದರೆ ನೀರು ಹೆಚ್ಚಾಗಿ ಗಿಡಗಳು ಕೊಳೆಯಬಹುದು.

ಮೊಟ್ಟಮೊದಲು ಕುಂಡಗಳ ಕೆಳಗಿನ ಭಾಗದಲ್ಲಿ ತೆಂಗಿನಕಾಯಿಯ ಜುಟ್ಟನ್ನು ವ್ಯವಸ್ಥಿತವಾಗಿ ಬಿಡಿಸಿ ಹಾಕಬೇಕು. ಅದರ ಮೇಲೆ ಒಣಗಿದ ಕಡ್ಡಿಗಳನ್ನು ನೇರವಾಗಿ ಸಿಕ್ಕಿಸಬೇಕು. ಅನಂತರ ಅದರಲ್ಲಿ ಒಂದೂವರೆಯಿಂದ ೨ ಇಂಚು ಒಣಗಿದ ಎಲೆಗಳನ್ನು (ನಮ್ಮ ಪರಿಸರದಲ್ಲಿರುವ ಗಿಡಗಳ ಒಣಗಿದ ಎಲೆಗಳನ್ನು) ಸ್ವಲ್ಪ ಒತ್ತಿ ಹಾಕಬೇಕು ಮತ್ತು ಅದರ ಮೇಲೆ ಮಣ್ಣನ್ನು ಹಾಕಬೇಕು. ಕುಂಡಗಳ ಮೇಲಿನ ಸಾಧಾರಣ ೨ ಇಂಚುಗಳಷ್ಟು ಭಾಗವನ್ನು ಹಾಗೆಯೇ ಬಿಡಬೇಕು. ನಂತರ ಸಸಿಯನ್ನು ನೆಟ್ಟು ಪುನಃ ಒಣಗಿದ ಎಲೆಗಳನ್ನು ಹಾಕಬೇಕು ಮತ್ತು ಅದರ ಮೇಲೆ ಸ್ವಲ್ಪ ನೀರನ್ನು ಹಾಕಬೇಕು.

ಕುಂಡಗಳಲ್ಲಿ ಕೇವಲ ಮಣ್ಣನ್ನು ಉಪಯೋಗಿಸುವ ಬದಲು ಮಣ್ಣು, ಕೊಕೊಪೀಟ ಮತ್ತು ಗೊಬ್ಬರ ಇವುಗಳ ಮಿಶ್ರಣವನ್ನು ಉಪಯೋಗಿಸಬಹುದು. ಕೊಕೊಪೀಟನ್ನು ೪ ರಿಂದ ೫ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಸೋಸಿ ಅಥವಾ ಎರಡೂ ಕೈಗಳಿಂದ ಒತ್ತಿ ಅದರಲ್ಲಿನ ನೀರನ್ನು ಹೊರಗೆ ತೆಗೆಯಬೇಕು ಮತ್ತು ನಂತರ ಅದನ್ನು ಮಣ್ಣಿನಲ್ಲಿ ಸೇರಿಸಬೇಕು. ಈ ರೀತಿಯ ಮಣ್ಣನ್ನು ಕುಂಡಗಳಲ್ಲಿ ತುಂಬಿ ಅದರಲ್ಲಿ ಒಣಗಿದ ಕಸ ಅಥವಾ ಒಣಗಿದ ಕಹಿಬೇವಿನ ಎಲೆಗಳನ್ನು ಹಾಕಬೇಕು. ಈ ರೀತಿ ಕುಂಡಗಳನ್ನು ತುಂಬಿದ ನಂತರ ನಾವು ಅವುಗಳಲ್ಲಿ ಸಸಿಗಳನ್ನು ನೆಡಬಹುದು ಅಥವಾ ಬೀಜಗಳನ್ನು ಅಂಕುರಿಸಲು ಬಿತ್ತಬಹುದು.

ಆಪತ್ಕಾಲದ ದೃಷ್ಟಿಯಿಂದ ಮಣ್ಣಿನ ಕುಂಡಗಳಿಗಿಂತ ಇತರ ಪರ್ಯಾಯಗಳನ್ನು ಉಪಯೋಗಿಸುವುದು ಹೆಚ್ಚು ಒಳ್ಳೆಯದು

‘ಮಣ್ಣಿನ ಕುಂಡಗಳಲ್ಲಿ ಗಿಡಗಳನ್ನು ನೆಡುವುದು ಗಿಡಗಳ ಬೆಳವಣಿಗೆಯ ದೃಷ್ಟಿಯಿಂದ ಆದರ್ಶವಾಗಿದೆ; ಆದರೆ ಮಣ್ಣಿನ ಕುಂಡಗಳನ್ನು ಎತ್ತಿಡುವಾಗ ಒಡೆಯಬಹುದು. ಆಪತ್ಕಾಲದಲ್ಲಿ ಏನಾಗಬಹುದು ಎಂದು ಹೇಳಲಾಗುವುದಿಲ್ಲ ಆದ್ದರಿಂದ ಕುಂಡಗಳು ಒಡೆದು ಆಗುವ ಹಾನಿಯನ್ನು ತಡೆಯಲು ಈ ಅವಧಿಯಲ್ಲಿ ಮಣ್ಣಿನ ಕುಂಡಗಳಿಗಿಂತ ತಗಡಿನ ಪಿಪಾಯಿ, ಎಣ್ಣೆಯ ತಗಡಿನ ಡಬ್ಬಿಗಳು, ಪ್ಲಾಸ್ಟಿಕ ಗೋಣಿಚೀಲಗಳು, ಚೀಲಗಳು, ಡಬ್ಬಿ ಅಥವಾ ಪಿಪಾಯಿ ಇತ್ಯಾದಿ ಪರ್ಯಾಯ ವಸ್ತುಗಳನ್ನು ಉಪಯೋಗಿಸುವುದು ಬಹಳ ಒಳ್ಳೆಯದು.ಈ ಪರ್ಯಾಯ ವಸ್ತುಗಳಿಂದ ಹೆಚ್ಚಿನ ನೀರು ಹರಿದು ಹೋಗಲು ಬುಡದಲ್ಲಿ ತೂತುಗಳನ್ನು ಮಾಡಬೇಕು.

(ಆಧಾರ : ಸನಾತನ ನಿರ್ಮಿಸಿದ ಗ್ರಂಥ ಔಷಧಿ ಸಸ್ಯಗಳನ್ನು ಹೇಗೆ ಬೆಳೆಸಬೇಕು ?’)

Leave a Comment