ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗುವಲ್ಲಿ ಇರುವ ಅಡಚಣೆಗಳು ಮತ್ತು ಪರಿಹಾರೋಪಾಯ

‘ಈಶ್ವರಪ್ರಾಪ್ತಿ’ಯೇ ಮನುಷ್ಯ ಜನ್ಮದ ಮೂಲ ಧ್ಯೇಯವಾಗಿದೆ. ಆದುದರಿಂದ ಸಾಧಕರು ಇದೇ ಜನ್ಮದಲ್ಲಿ ತಳಮಳದಿಂದ ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುವುದು ಆವಶ್ಯಕವಾಗಿದೆ. ಈ ಧ್ಯೇಯವನ್ನು ಸಾಧ್ಯವಾಗಿಸಲು ಶ್ರೀ ಗುರುಗಳ ಕೃಪೆ ಮತ್ತು ಮಾರ್ಗದರ್ಶನವು ಅತ್ಯಗತ್ಯವಾಗಿದೆ. ಶ್ರೀ ಗುರುಗಳಿಂದಲೇ ನಮಗೆ ಜೀವನದ ಬಗ್ಗೆ ಯೋಗ್ಯ ದೃಷ್ಟಿಕೋನ ಹಾಗೂ ಸ್ವಬೋಧವು ಸಿಗುತ್ತದೆ. ಈಗ ಆಪತ್ಕಾಲ ಪ್ರಾರಂಭವಾಗಿದೆ. ಮೂರನೇ ಮಹಾಯುದ್ಧವು ಅತ್ಯಂತ ವಿನಾಶಕಾರಿಯಾಗಿರಲಿದೆ. ಅದಕ್ಕಾಗಿ ನಾವು ಸಿದ್ಧರಾಗಿರಬೇಕು. ಅಪತ್ಕಾಲದಿಂದ ಪಾರಾಗಲು ಸಾಧನೆಯೇ ಆವಶ್ಯಕವಾಗಿದೆ. ಆ ದೃಷ್ಟಿಯಿಂದ ಶೀಘ್ರ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುವಲ್ಲಿ ಬರುವ ಅಡಚಣೆಗಳು ಮತ್ತು ಅವುಗಳ ಪರಿಹಾರೋಪಾಯಗಳನ್ನು ತಿಳಿದುಕೊಳ್ಳೋಣ.

1. ಸಾಧಕರಲ್ಲಿ ಸಾಧನೆಗಿಂತ ಕಾರ್ಯದ ಸೆಳೆತ ಹೆಚ್ಚಿರುವುದು

ಅ. ಕಾರ್ಯವಲ್ಲ, ಸಾಧನೆಯೇ ಮೋಕ್ಷಪ್ರಾಪ್ತಿಯನ್ನು ಮಾಡಿಸುತ್ತದೆ

ಕಾರ್ಯವು ನಮ್ಮನ್ನು ಮೋಕ್ಷಕ್ಕೆ ಒಯ್ಯುವುದಿಲ್ಲ, ಆ ಕಾರ್ಯದ ಮೂಲಕ ನಮ್ಮಿಂದಾಗುವ ಸಾಧನೆಯು ನಮಗೆ ಮೋಕ್ಷಪ್ರಾಪ್ತಿ ಮಾಡಿಸುತ್ತದೆ. ಸಾಧಕರು ಆ ದೃಷ್ಟಿಯಿಂದ ಪ್ರಯತ್ನಿಸುವುದು ಅಪೇಕ್ಷಿತವಾಗಿದೆ.

ಆ. ಕೃತಿಯನ್ನು ಮಾಡುವಾಗ ತನ್ನಲ್ಲಿ ಈಶ್ವರೀ ಗುಣಗಳ ವಿಕಾಸವಾಗಬೇಕು

ಸಾಧಕರು ಪ್ರತಿಯೊಂದು ಕೃತಿಯನ್ನು ಮಾಡುವಾಗ ‘ಆ ಕೃತಿಯಿಂದ ನಮ್ಮ ಸಾಧನೆ ಆಗುತ್ತಿದೆಯಲ್ಲ?’, ಎಂದು ಗಮನಿಸುವುದು ಆವಶ್ಯಕವಾಗಿದೆ. ನಾವು ಮಾಡುತ್ತಿರುವ ಕಾರ್ಯದಿಂದ ನಮ್ಮಲ್ಲಿ ಈಶ್ವರೀ ಗುಣಗಳು ಹೆಚ್ಚಾಗುವ ಬದಲು ನಮ್ಮಲ್ಲಿರುವ ಸ್ವಭಾವದೋಷ ಮತ್ತು ಅಹಂನ ಪೋಷಣೆಯಾಗುತ್ತಿದ್ದರೆ, ನಮ್ಮ ಸಾಧನೆಯಲ್ಲಿ ಹಾನಿಯಾಗಬಹುದು. ಅದಕ್ಕಾಗಿ ನಾವು ಸತತವಾಗಿ ಜಾಗೃತರಾಗಿರಬೇಕು.

ಇ. ಸೇವೆ ಮಾಡುವಾಗ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಮನಃಪೂರ್ವಕವಾಗಿ ಪ್ರಯತ್ನಿಸಬೇಕು

ಸಾಧಕರು ‘ಸೇವೆ’ಯು ತನ್ನನ್ನು ಈಶ್ವರನೊಂದಿಗೆ ಸಂಯೋಜಿಸುವ ಮಾಧ್ಯಮವಾಗಿದೆ, ಎಂಬ ಅರಿವನ್ನಿಟ್ಟುಕೊಳ್ಳಬೇಕು. ಸಾಧಕನು ಸೇವೆಯನ್ನು ಮಾಡುವಾಗ ತನ್ನಲ್ಲಿರುವ ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಹಾಗೂ ಈಶ್ವರೀ ಗುಣಗಳ ವಿಕಾಸಕ್ಕಾಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಗಾಗಿ ಮನಃಪೂರ್ವಕವಾಗಿ ಪ್ರಯತ್ನಿಸಬೇಕು.

ಈ. ಸಾಧಕರು ಪ್ರತಿದಿನ ಮನಸ್ಸಿನ ವರದಿಯನ್ನು ತೆಗೆದುಕೊಳ್ಳಬೇಕು. ಸಾಧಕರು ‘ಸಾಧನೆಗಾಗಿ ಪ್ರಯತ್ನ ಆಗುತ್ತಿದೆಯಲ್ಲ’, ಎಂದು ಗಮನಿಸಬೇಕು. ಸಾಧನೆಯ ಪ್ರಯತ್ನಗಳಾಗದಿದ್ದರೆ ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳಬೇಕು.

ಉ. ಸಾಧಕರು ‘ವೈಯಕ್ತಿಕ ಆಧ್ಯಾತ್ಮಿಕ ಉನ್ನತಿ’ಯೇ ಕಾರ್ಯದ ಕೇಂದ್ರಬಿಂದು ಆಗಿದೆ, ಎಂಬುದನ್ನು ಗಮನದಲ್ಲಿಡಬೇಕು.

ಊ. ಸಾಧನೆಯ ಬಗ್ಗೆ ಗಾಂಭೀರ್ಯವನ್ನು ಮೂಡಿಸುವ ಪ.ಪೂ. ಗುರುದೇವರ ನುಡಿಗಳು

ಪ.ಪೂ. ಗುರುದೇವರು ಇದರ ಬಗ್ಗೆ ಮುಂದಿನಂತೆ ಹೇಳಿದ್ದಾರೆ, “ಸಂಕಟ ಬರಲಿದೆ ಎಂದು ತಿಳಿದ ತಕ್ಷಣ ಉಷ್ಟ್ರಪಕ್ಷಿಯು ಮರಳಿನಲ್ಲಿ ತನ್ನ ತಲೆಯನ್ನು ಹುಗಿದು ಕುಳಿತುಕೊಳ್ಳುತ್ತದೆ. ಅದಕ್ಕೆ, ‘ಸಂಕಟ ಬಂದು ಹೋಗಿಬಿಡುತ್ತದೆ’ ಎಂದೆನಿಸುತ್ತದೆ; ಆದರೆ ಹಾಗಾಗದೇ ಆ ಸಂಕಟವು ಆ ಉಷ್ಟ್ರಪಕ್ಷಿಯನ್ನೇ ನಾಶಗೊಳಿಸುತ್ತದೆ. ನಮ್ಮೆಲ್ಲರ ಸ್ಥಿತಿ ಹೀಗಾಗಬಾರದೆಂದು ಈಗ ಸಾಧನೆಯ ಹೊರತು ಪರ್ಯಾಯವಿಲ್ಲ. ಸಾಧನೆಯನ್ನು ಇಂದಿನಿಂದಲ್ಲ, ಈಗಲೇ ಆದ್ದರಿಂದ ಆರಂಭಿಸಿರಿ !’’

2. ವ್ಯಷ್ಟಿ ಸಾಧನೆಯ ನಿಯೋಜನೆ ಇಲ್ಲದಿರುವುದು

ಅ. ‘ಸೇವೆಯಿಂದ ನನ್ನ ಸಾಧನೆ ಆಗುತ್ತಿದೆಯಲ್ಲ, ಗುರುದೇವರಿಗೆ ಅಪೇಕ್ಷಿತ ಸೇವೆ ಆಗುತ್ತಿದೆಯಲ್ಲ’ ಎಂಬ ಚಿಂತನೆ ಮಾಡಿ ಸಾಧಕರು ಸೇವೆಯ ಆಯೋಜನೆಯನ್ನು ಮಾಡಬೇಕು.

ಆ. ಸಾಧಕರು ಸೇವೆಯನ್ನು ಮಾಡುವಾಗ ಸಾಧನೆಯ ಅಂಶಗಳನ್ನು, ಅಂದರೆ ಹೇಗೆ ಭಾವವಿಡಬೇಕು, ಸೇವೆ ಪರಿಪೂರ್ಣವಾಗುವಲ್ಲಿ ಆಗಬಹುದಾದ ತಪ್ಪುಗಳ (ಕೃತಿ ಮತ್ತು ಮನಸ್ಸಿನ ಸ್ತರದ) ಅಧ್ಯಯನ ಮಾಡುವುದು, ಆಗಾಗ ಪ್ರಾರ್ಥನೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದು, ತನ್ನಲ್ಲಿನ ತೊಂದರೆದಾಯಕ ಶಕ್ತಿಯ ಆವರಣವನ್ನು ತೆಗೆಯುವುದು ಇತ್ಯಾದಿ ನಿರ್ಧರಿಸಿ ಅದರಂತೆ ಕೃತಿಯನ್ನು ಮಾಡಬೇಕು.

ಇ. ಕೆಲವು ಸಾಧಕರಲ್ಲಿ ಸಾಧನೆಯೆಂದು ಗುರುಕಾರ್ಯವನ್ನು ಮಾಡುವ ಸೆಳೆತ ಕಡಿಮೆಯಿರುತ್ತದೆ. ಅವರ ವ್ಯಷ್ಟಿ ಸಾಧನೆಯ ಆಯೋಜನೆ ಇಲ್ಲದಿರುವುದರಿಂದ ಗಾಂಭೀರ್ಯದ ಕೊರತೆಯಿಂದ ಅವರಿಂದ ಕೃತಿಯೂ ಆಗುವುದಿಲ್ಲ. ಕೃತಿಯಾಗಲು ವಿಚಾರ, ಹಾಗೆಯೇ ಆಯೋಜನೆಯು ಆವಶ್ಯಕವಾಗಿದೆ. ಅದಕ್ಕಾಗಿ ಸಾಧಕರು ಸೇವೆಯ ಆಯೋಜನೆಯ ಜೊತೆಗೆ ಸೇವೆಯಿಂದ ಸಾಧನೆಯಾಗಲು ಮಾಡಬೇಕಾದ ಕೃತಿಗಳ ಆಯೋಜನೆಯನ್ನೂ ಮಾಡುವುದು ಆವಶ್ಯಕವಾಗಿದೆ.

3. ಸಾಧನೆಯ ಪ್ರಯತ್ನಗಳಲ್ಲಿ ಸಾತತ್ಯ ಇಲ್ಲದಿರುವುದು

ಅ. ಕಲಿಯುಗದಲ್ಲಿ ಸಾಧನೆ ಮಾಡುವುದು ಅತ್ಯಂತ ಕಠಿಣವಾಗಿದೆ. ಸಾಧಕರಲ್ಲಿ ಸಾಧನೆಯನ್ನು ಮಾಡುವ ದೃಢನಿರ್ಧಾರವಿರಬೇಕು. ಸಾಧಕರು ಸಾಧನೆಯ ಪ್ರಯತ್ನಗಳಲ್ಲಿ ಸಾತತ್ಯವನ್ನಿಡಲು ಆರಂಭಿಕ ಹಂತದಲ್ಲಿ ಜಿಗುಟುತನದಿಂದ, ದೃಢನಿಶ್ಚಯದಿಂದ ಮತ್ತು ಜಾಗರೂಕರಾಗಿದ್ದು ಪ್ರಯತ್ನಿಸಬೇಕು.

ಆ. ಸಾತತ್ಯದಿಂದ ಸಾಧನೆಯ ಪ್ರಯತ್ನಗಳಾಗಲು ಸಾಧಕರು ದೇವರ ಸಹಾಯವನ್ನು ಪಡೆದು ಶರಣಾಗತಭಾವದಿಂದ ಪ್ರಾರ್ಥನೆ ಮಾಡುವುದು ಮತ್ತು ತನ್ನ ಕ್ರಿಯಮಾಣವನ್ನು ಶೇಕಡಾ ನೂರರಷ್ಟು ಉಪಯೋಗಿಸುವುದು ಆವಶ್ಯಕವಾಗಿದೆ.

ಇ. ಸಾಧನೆ ಎಂದರೆ ಈಶ್ವರಪ್ರಾಪ್ತಿಗಾಗಿ ಸತತವಾಗಿ ಮಾಡುವ ಪ್ರಯತ್ನ. ಈಶ್ವರಪ್ರಾಪ್ತಿಗಾಗಿ ಯಾವಾಗಲಾದರೊಮ್ಮೆ ಪ್ರಯತ್ನಿಸುವುದೆಂದರೆ ಹವ್ಯಾಸದಂತಾಗಿದೆ.

ಈ. ಸಾಧಕರು ಸೇವೆಯನ್ನು ತಮ್ಮ ಸ್ವಭಾವದಂತೆ ಮಾಡದೇ ‘ವಿಚಾರಿಸುವುದು, ಕೇಳುವುದು, ಸ್ವೀಕರಿಸುವುದು, ಕಲಿಯುವುದು ಮತ್ತು ಕೃತಿ ಮಾಡುವುದು’ ಈ ಪಂಚಸೂತ್ರಗಳನ್ನು ಆಚರಣೆಯಲ್ಲಿ ತಂದು ‘ಸೇವೆಯನ್ನು ಹೇಗೆ ಪರಿಪೂರ್ಣ ಮಾಡಬಹುದು’, ಎಂದು ಪ್ರಯತ್ನಿಸಬೇಕು. ಅನೇಕ ಬಾರಿ ಸಾಧಕರು ಬಹಿರ್ಮುಖತೆಯಿಂದ ಹೇಳಿದ್ದಷ್ಟೇ ಸೇವೆ ಮಾಡುತ್ತಾರೆ, ಹಾಗಾಗಿ ಅದು ಕಾರ್ಯವಾಗುತ್ತದೆ ಮತ್ತು ಅದರಿಂದ ಸಾಧಕರಿಗೆ ಆನಂದವೂ ಸಿಗುವುದಿಲ್ಲ.

ಉ. ಸಾಧಕರು ಸಾಧನೆಯೆಂದು ಪರಿಪೂರ್ಣ ಮತ್ತು ಭಾವಪೂರ್ಣ ಸೇವೆಯನ್ನು ಮಾಡಿದರೆ ಅದರಿಂದ ಅವರಿಗೆ ಆನಂದ ಸಿಗುತ್ತದೆ. ಸೇವೆಯಿಂದ ಆನಂದ ಸಿಕ್ಕರೆ ಸಾಧನೆಯ ಪ್ರಯತ್ನಗಳಲ್ಲಿ ಸಾತತ್ಯ ಉಳಿಯುತ್ತದೆ.

4. ಸಾಧನೆಯಾಗಬೇಕೆಂಬ ತಳಮಳ ಕಡಿಮೆಯಿರುವುದು

ಅ. ಈಶ್ವರಪ್ರಾಪ್ತಿಗಾಗಿ ಏನು ಬೇಕಾದರೂ ಮಾಡುವ ಸಿದ್ಧತೆ ಇರುವುದೇ ನಿಜವಾದ ತಳಮಳವಾಗಿದೆ.

ಆ. ಸಾಧನೆಯಲ್ಲಿ ತಳಮಳಕ್ಕೆ ಶೇ. ೮೦ ರಷ್ಟು ಮಹತ್ವವಿದೆ. ಸಾಧನೆಯ ತಳಮಳ ಹೆಚ್ಚಿದ್ದಷ್ಟು ನಮ್ಮ ಕಾರ್ಯದಲ್ಲಿ ಈಶ್ವರನ ಪಾಲ್ಗೊಳ್ಳುವಿಕೆ ಹೆಚ್ಚಿರುತ್ತದೆ. ಈಶ್ವರನ ಪಾಲ್ಗೊಳ್ಳುವಿಕೆ ಹೆಚ್ಚಿದ್ದಷ್ಟು ನಮ್ಮ ಸೇವೆಯು ಪರಿಪೂರ್ಣವಾಗುತ್ತದೆ. ಈ ಸೇವೆಯಿಂದ ನಮಗೆ ಆನಂದ ಸಿಗುತ್ತದೆ ಮತ್ತು ನಮ್ಮ ಸಾಧನೆಯೂ ಆಗುತ್ತದೆ.

ಇ. ಸಾಧಕರು ‘ಈಶ್ವರಪ್ರಾಪ್ತಿಗಾಗಿ ನನ್ನಲ್ಲಿ ತಳಮಳ ಹೆಚ್ಚಾಗಲಿ’, ಎಂದು ಸತತವಾಗಿ ಪ್ರಾರ್ಥಿಸಬೇಕು. ಸಾಧನೆಯಾಗಲು ನಾವು ಜಿಗುಟುತನದಿಂದ ಪ್ರಯತ್ನಿಸಿದರೆ ದೇವರು ನಮಗೆ ಸಹಾಯ ಮಾಡುತ್ತಿರುವ ಅನುಭೂತಿಗಳು ಬರುತ್ತವೆ ಮತ್ತು ಅದರಿಂದ ನಮ್ಮಲ್ಲಿ ತಳಮಳವೂ ಹೆಚ್ಚಾಗುತ್ತದೆ.

5. ಸಾಧನೆಯ ಪ್ರಯತ್ನಗಳಲ್ಲಿ ಅಲ್ಪಸಂತೋಷ ಬೇಡ

ಅ. ಸೇವೆಯ ಮಾಧ್ಯಮದಿಂದ ಸಾಧನೆಯಾಗಬೇಕೆಂದು ಪ್ರತಿಯೊಬ್ಬರಿಂದ ಹೆಚ್ಚುಕಡಿಮೆ ಪ್ರಯತ್ನಗಳಾಗುತ್ತಿರುತ್ತವೆ; ಆದರೆ ಸೇವೆ ಪರಿಪೂರ್ಣವಾಗಲು ಮತ್ತು ಧ್ಯೇಯಪೂರ್ತಿಗಾಗಿ ಅಷ್ಟು ಪ್ರಯತ್ನ ಸಾಕಾಗುವುದಿಲ್ಲ. ಎಷ್ಟು ಪ್ರಯತ್ನಗಳಾಗುತ್ತವೆಯೋ, ಅಷ್ಟರಲ್ಲಿಯೇ ಸಾಧಕರು ಸಮಾಧಾನಿಯಾಗಿರುತ್ತಾರೆ. ಆದ್ದರಿಂದ ಸಾಧಕರಿಂದ ಅಪೇಕ್ಷಿತವಿದ್ದಷ್ಟು ಪ್ರಯತ್ನಗಳಾಗುವುದಿಲ್ಲ.

ಆ. ನಾವು ಸರ್ವಶಕ್ತಿವಂತ ಮತ್ತು ಸರ್ವಗುಣಸಂಪನ್ನನಾಗಿರುವ ಈಶ್ವರನೊಂದಿಗೆ ಏಕರೂಪವಾಗಬೇಕಾಗಿದೆ. ಅದಕ್ಕಾಗಿ ನಾವು ಎಷ್ಟು ಪ್ರಯತ್ನಿಸಿದರೂ ಅದು ಕಡಿಮೆಯೇ. ಸಾಧನೆಯಲ್ಲಿ ಅಲ್ಪಸಂತೋಷವು ದೊಡ್ಡ ಅಡಚಣೆಯಾಗಿದೆ. ಸಾಧಕರು ಅಲ್ಪಸಂತೋಷಕ್ಕೆ ಬಲಿಯಾಗದೇ ಪರಿಪೂರ್ಣ ಮತ್ತು ಭಾವಪೂರ್ಣವಾಗಿ ಸೇವೆಯಾಗಲು ಸತತವಾಗಿ ಶ್ರಮಪಡಬೇಕು.

6. ಭಾವದ ಸ್ತರದ ಪ್ರಯತ್ನಗಳು ಅಲ್ಪವಾಗುವುದು

ಅ. ಸಾಧಕರು ಪ್ರತಿಯೊಂದು ಕೃತಿಯನ್ನು ಭಕ್ತಿಭಾವದಿಂದ ಮಾಡಬೇಕು. ದೇವರ ಬಗ್ಗೆ ನಮ್ಮಲ್ಲಿ ಭಾವವಿದ್ದರೆ, ದೇವರು ನಮಗೆ ಪ್ರತಿಯೊಂದು ಪರಿಸ್ಥಿತಿಯಲ್ಲಿ ಕಲಿಸುತ್ತಾನೆ, ಮಾರ್ಗದರ್ಶನ ಮಾಡುತ್ತಾನೆ, ಸಹಾಯ ಮಾಡುತ್ತಾನೆ ಮತ್ತು ಸ್ಥಿರವಾಗಿಡುತ್ತಾನೆ.

ಆ. ನಮ್ಮಿಂದ ಭಾವದ ಸ್ತರದಲ್ಲಿ ಸತತವಾಗಿ ಸಾಧನೆಯ ಪ್ರಯತ್ನಗಳಾದರೆ ನಮ್ಮ ಆಧ್ಯಾತ್ಮಿಕ ಮಟ್ಟವು ಹೆಚ್ಚಾಗುತ್ತದೆ. ಆದ್ದರಿಂದ ಸಾಧಕರು ಪ್ರತಿಯೊಂದು ಪ್ರಸಂಗದಲ್ಲಿ ದೇವರ ಅಸ್ತಿತ್ವವನ್ನು ಅನುಭವಿಸಲು ಪ್ರಯತ್ನಿಸಬೇಕು.

ಇ. ಸಾಧಕರು ಯಾವ ಕಾರಣಗಳಿಂದ ತಮ್ಮ ಭಾವದ ಸ್ಥಿತಿ ಕಡಿಮೆಯಾಗುತ್ತದೆ ಎಂಬುದರ ಅಧ್ಯಯನ ಮಾಡಬೇಕು. ಸಾಧಕರು ಭಾವದ ಸ್ಥಿತಿಯನ್ನು ಉಳಿಸಿಕೊಳ್ಳಲು ಏನು ಉಪಾಯ ಮಾಡಬೇಕು ಎಂಬುದರ ಚಿಂತನೆ ಮಾಡಬೇಕು.

ಈ. ‘ಭಾವವಿದ್ದಲ್ಲಿ ದೇವರು’, ಎಂಬ ಉಕ್ತಿಯಿದೆ. ಆದ್ದರಿಂದ ಸಾಧಕರು ಮೇಲ್ನೋಟಕ್ಕೆ ಸೇವೆ ಮಾಡದೇ ಭಾವದ ಸ್ತರದಲ್ಲಿ ಸೇವೆ ಮಾಡಬೇಕು. ಸಾಧಕರಲ್ಲಿ ಭಾವವಿದ್ದರೆ ಮಾತ್ರ ಯಾವುದೇ ಸ್ಥಿತಿಯಲ್ಲಿ ಸಕಾರಾತ್ಮಕ ಮತ್ತು ಸ್ಥಿರವಿರಬಹುದು.

7. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆ, ಹಾಗೆಯೇ ಗುಣಸಂವರ್ಧನೆ ಪ್ರಕ್ರಿಯೆಯನ್ನು ಯೋಗ್ಯ ರೀತಿಯಲ್ಲಿ ಮಾಡದಿರುವುದು

ಸದ್ಯದ ಸಮಯದಲ್ಲಿ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಗಾಂಭೀರ್ಯವಿಟ್ಟು ನಡೆಸುವುದು ಆವಶ್ಯಕವಾಗಿದೆ.

ಅ. ಈ ಪ್ರಕ್ರಿಯೆಯಲ್ಲಿ ‘ತಮ್ಮ ತಪ್ಪುಗಳನ್ನು ಹುಡುಕುವುದು, ಅವುಗಳನ್ನು ತಖ್ತೆಯಲ್ಲಿ ಬರೆಯುವುದು, ತಮ್ಮ ತಪ್ಪುಗಳನ್ನು ಇತರರಿಗೆ ಹೇಳುವುದು, ಸ್ವಯಂಸೂಚನೆಯನ್ನು ತೆಗೆದುಕೊಳ್ಳುವುದು, ಕ್ಷಮಾಯಾಚನೆ, ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದು’, ಈ ಅಂಶಗಳು ಒಳಗೊಂಡಿವೆ.

ಆ. ನಮ್ಮಿಂದಾದ ಪ್ರತಿಯೊಂದು ತಪ್ಪು ನಮ್ಮನ್ನು ಈಶ್ವರನಿಂದ ದೂರ ಒಯ್ಯುತ್ತದೆ. ಸಾಧಕರು ಸತತವಾಗಿ ‘ನಾನು ನನ್ನ ತಪ್ಪುಗಳನ್ನು ಹುಡುಕಬೇಕು’, ಎಂಬ ವಿಚಾರ ಮಾಡಬೇಕು. ಸಾಧಕರು ಈ ಪ್ರಕ್ರಿಯೆಯ ಮಹತ್ವವನ್ನು ಸತತವಾಗಿ ಮನಸ್ಸಿನ ಮೇಲೆ ಬಿಂಬಿಸಬೇಕು.

ಇ. ಸಾಧಕರು ಸಾಧಕರ ಸತ್ಸಂಗದಲ್ಲಿ ತಮ್ಮ ತಪ್ಪುಗಳನ್ನು ಹೇಳಬೇಕು. ತಪ್ಪು ಹೇಳುವುದರಿಂದ ತಪ್ಪುಗಳ ಬಗ್ಗೆ ಗಾಂಭೀರ್ಯ ನಿರ್ಮಾಣವಾಗಿ, ಅದರಿಂದ ನಮ್ಮಲ್ಲಿ ಅನೇಕ ಪಟ್ಟು ಖೇದವುಂಟಾಗಿ ಅಹಂಭಾವವು ಕಡಿಮೆಯಾಗುತ್ತದೆ ಮತ್ತು ನಮ್ಮ ತಪ್ಪುಗಳಿಂದ ಇತರ ಸಾಧಕರಿಗೂ ಕಲಿಯಲು ಸಿಗುತ್ತದೆ. ಹಾಗೆಯೇ ತಪ್ಪು ಹೇಳಿದ್ದರಿಂದ ನಮ್ಮ ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯಾಗುತ್ತದೆ.

ಈ. ಸಾಧಕರು ಈ ಪ್ರಕ್ರಿಯೆಯಲ್ಲಿ ಸ್ವಯಂಸೂಚನೆಗಳನ್ನು ಕೊಡುತ್ತಾರೆ. ಸಾಧಕರು ಸ್ವಯಂಸೂಚನೆಯ ಜೊತೆಗೆ ಕೃತಿಯ ಸ್ತರದಲ್ಲಿ ಪ್ರಯತ್ನಿಸುವುದೂ ಮಹತ್ವದ್ದಾಗಿದೆ.

ಉ. ಸಾಧಕರು ಸೇವೆಯ ಮಾಧ್ಯಮದಿಂದ, ಹಾಗೆಯೇ ಸಹ ಸಾಧಕರೊಂದಿಗೆ ಸಮನ್ವಯ ಮಾಡುವಾಗ ‘ತಮ್ಮ ನಡೆ- ನುಡಿಗಳಿಂದ ಎಲ್ಲಿಯಾದರೂ ಅಹಂನ ಅರಿವಾಗುತ್ತದೆಯೇ ?’, ಎಂಬುದರ ಚಿಂತನೆಯನ್ನು ಮಾಡಬೇಕು.

ಊ. ಸಾಧಕರಿಗೆ ಮನಸ್ಸಿನ ಸಣ್ಣ-ಸಣ್ಣ ವಿಚಾರಗಳ ನಿರೀಕ್ಷಣೆ ಮಾಡಲು ತಿಳಿದರೆ ತಮ್ಮ ಸ್ವಭಾವದೋಷ ಮತ್ತು ಅಹಂನ ತೀವ್ರತೆಯು ಗಮನಕ್ಕೆ ಬರುತ್ತದೆ.

ಎ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯು ಗುರುದೇವರಿಗೆ ಅಪೇಕ್ಷಿತವಿದ್ದಂತೆ ಆಗಲು ಸಾಧಕರು ಸತತವಾಗಿ ಅಂತರ್ಮುಖರಾಗಿರಬೇಕು. ‘ನಾನು ಸಾಧನೆಯ ದೃಷ್ಟಿಯಿಂದ ಏನು ಮಾಡಬೇಕು’ ಎಂಬ ವಿಚಾರವೆಂದರೆ ‘ಅಂತರ್ಮುಖತೆ’, ಮತ್ತು ‘ಇತರರು ಏನು ಮಾಡಬೇಕು’ ಎಂದು ಗಮನಿಸುವುದೆಂದರೆ ಬಹಿರ್ಮುಖತೆಯಾಗಿದೆ.

8. ‘ಅಪೇಕ್ಷೆ’ ಈ ಅಹಂಅನ್ನು ದೂರಗೊಳಿಸದಿರುವುದು

ನಮ್ಮ ಅಪೇಕ್ಷೆಯಂತೆ ಅಥವಾ ಮನಸ್ಸಿನಂತೆ ಆಗದಿದ್ದರೆ, ತಕ್ಷಣ ನಮ್ಮ ಮನಸ್ಸಿನಲ್ಲಿ ಪ್ರತಿಕ್ರಿಯೆಗಳು ಬರುತ್ತವೆ. ಆದ್ದರಿಂದ ನಮ್ಮ ಮನಸ್ಸಿನ ಶಾಂತಿ ಮತ್ತು ಸ್ಥಿರತೆ ಹಾಳಾಗುತ್ತದೆ.

ಅ. ‘ಪ್ರತಿಕ್ರಿಯೆ’, ಅಂದರೆ ದುರ್ಬಲ ಮನಸ್ಸಿನ ಲಕ್ಷಣವಾಗಿದೆ.

ಆ. ದೇವರು ಪ್ರೀತಿಸ್ವರೂಪನಾಗಿದ್ದಾನೆ. ನಾವು ದೈವತ್ವದ ದಿಶೆಯಲ್ಲಿ ಹೋಗಲು ಪ್ರೇಮಭಾವ ಮತ್ತು ಪ್ರೀತಿ ಎಂಬ ಗುಣಗಳನ್ನು ಬೆಳೆಸಬೇಕು. ಸಾಧಕರೊಂದಿಗೆ ಆತ್ಮೀಯತೆ ಬೆಳೆಸಬೇಕು.

ಇ. ‘ನಿರಪೇಕ್ಷತೆ’ ಇದೊಂದು ಸ್ಥಿತಿಯಾಗಿದೆ. ‘ತಿಳುವಳಿಕೆ ಮತ್ತು ಪರಿಸ್ಥಿತಿಯನ್ನು ಸ್ವೀಕರಿಸುವುದು’ ಈ ಗುಣಗಳು ಹೆಚ್ಚಾದರೆ, ನಿರಪೇಕ್ಷತೆಯಿಂದ ವರ್ತಿಸಲು ಸಾಧ್ಯವಾಗುತ್ತದೆ.

9. ಪರಿಸ್ಥಿತಿ ಸ್ವೀಕರಿಸದಿರುವುದು

ಅ. ಸಾಧಕರು ಕೌಟುಂಬಿಕ ಮತ್ತು ಆರ್ಥಿಕ ಅಚಡಣೆ ಹಾಗೆಯೇ ಶಾರೀರಿಕ ಕಾಯಿಲೆಗಳಲ್ಲಿ ಸಿಲುಕುತ್ತಾರೆ. ‘ಸಾಧಕರು ಅದಕ್ಕೆ ಪರಿಹಾರೋಪಾಯಗಳನ್ನು ಮಾಡಿ ಸಾಧನೆಯ ಮೇಲೆ ಗಮನವಿರಿಸಿ ಈಶ್ವರಪ್ರಾಪ್ತಿ ಹೇಗೆ ಮಾಡಿಕೊಳ್ಳಬಹುದು’, ಎಂದು ನೋಡುವುದಕ್ಕೆ ‘ಈಶ್ವರನಲ್ಲಿ ಸಿಲುಕುವುದು, ಅಂದರೆ ಈಶ್ವರನ ಅನುಸಂಧಾನದಲ್ಲಿರುವುದು’, ಎನ್ನಬಹುದು.

ಆ. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು, ‘ಪರಿಸ್ಥಿತಿ ಸ್ವೀಕರಿಸುವುದು’ ಸರ್ವಶ್ರೇಷ್ಠ ಸಾಧನೆಯಾಗಿದೆ!’ ಎಂದಿದ್ದಾರೆ.

ಇ. ಪ್ರತಿಯೊಂದು ಪ್ರಸಂಗವು ಈಶ್ವರೇಚ್ಛೆಯಿಂದ ಘಟಿಸುತ್ತಿರುವುದರಿಂದ ಅದನ್ನು ಆನಂದದಿಂದ ಸ್ವೀಕರಿಸುವುದು ಆವಶ್ಯಕವಾಗಿದೆ. ‘ಅದರಿಂದ ಪ್ರಾರಬ್ಧ ಕಡಿಮೆಯಾಗುತ್ತಿದೆ’, ಎಂಬ ದೃಷ್ಟಿಕೋನವನ್ನು ಸಾಧಕರು ಇಟ್ಟುಕೊಳ್ಳಬೇಕು.

10. ಕೌಟುಂಬಿಕ, ಹಾಗೆಯೇ ಮಾಯೆಯ ವಿಚಾರಗಳ ಪ್ರಮಾಣ ಹೆಚ್ಚಾಗುವುದು

ಅ. ಅನೇಕ ಸಾಧಕರ ಮನಸ್ಸಿನಲ್ಲಿ ಸದ್ಯ ಮಾಯೆಯ ವಿಚಾರಗಳು ಬರುತ್ತಿವೆ. ಕೆಲವರು ಸಂಸಾರದ ಚಿಂತೆಯಿಂದ, ಕೆಲವರು ‘ವ್ಯವಹಾರಕ್ಕೆ ಹೆಚ್ಚು ಗಮನ ಕೊಡಬೇಕು’ ಎಂಬ ವಿಚಾರದಿಂದ, ಕೆಲವರು ಕೆಟ್ಟ ಶಕ್ತಿಗಳ ತೊಂದರೆಯಿಂದ, ಕೆಲವರು ಸ್ವಭಾವದೋಷಗಳಿಂದ ಮಾಯೆಯತ್ತ ವಾಲುತ್ತಿರುವುದು ಗಮನಕ್ಕೆ ಬರುತ್ತಿದೆ. ಸಾಧಕರು ಶ್ರೀ ಗುರುಚರಣಗಳಲ್ಲಿ ದೃಢ ಶ್ರದ್ಧೆಯನ್ನಿಟ್ಟು ಈ ವಿಚಾರಗಳನ್ನು ಜಯಿಸಬೇಕು.

ಆ. ಮಾಯೆಯ ವಿಚಾರಗಳು ಮಾಯಾವಿಯೇ ಆಗಿದ್ದು ಅದರಿಂದ ನಮಗೆ ನಿರಂತರ ಆನಂದ ಸಿಗಲಾರದು. ‘ಸಾಧನೆಯಲ್ಲಿ ಸ್ಥಿರವಾಗಿರುವುದು’, ಈ ಸಮಯದಲ್ಲಿ ಅತ್ಯಂತ ಆವಶ್ಯಕವಾಗಿದೆ.

ಇ. ಮನಸ್ಸಿನಲ್ಲಿ ಬರುವ ವಿಚಾರಗಳನ್ನು ಜವಾಬ್ದಾರ ಸಾಧಕರೊಂದಿಗೆ ಅಥವಾ ಸಂತರೊಂದಿಗೆ ಮನಃಪೂರ್ವಕವಾಗಿ ಹೇಳುವಾಗ ಸಾಧಕರಲ್ಲಿ ಕೇವಲ ಹೇಳುವ ದೃಷ್ಟಿಕೋನ ಮಾತ್ರವಲ್ಲ ಇಂತಹ ವಿಚಾರಗಳನ್ನು ಪರಿಹರಿಸಲು ಸಾಧನೆಯ ಸ್ತರದಲ್ಲಿ ವಿಚಾರ ಮಾಡಿ ‘ಹೇಗೆ ಪ್ರಯತ್ನಿಸಬೇಕು’, ಎಂಬುದನ್ನು ತಿಳಿದುಕೊಳ್ಳುವ ದೃಷ್ಟಿಕೋನವಿರಬೇಕು.

ಈ. ‘ಈಶ್ವರಪ್ರಾಪ್ತಿಗಾಗಿಯೇ ಸಾಧಕರ ಜನ್ಮವಾಗಿದೆ. ಮಾಯೆಯಲ್ಲಿ ಮುಳುಗಿ ಜೀವನವನ್ನು ವ್ಯರ್ಥಗೊಳಿಸಲಿಕ್ಕಿಲ್ಲ’, ಎಂದು ಗಮನದಲ್ಲಿಟ್ಟು ಈಶ್ವರಪ್ರಾಪ್ತಿಗಾಗಿ ನಿರಂತರ ಶ್ರಮಿಸೋಣ.

11. ತನ್ನನ್ನು ಬದಲಾಯಿಸಲು ಸಂಘರ್ಷದ ಸಿದ್ಧತೆ ಕಡಿಮೆ

ಅ. ತನ್ನನ್ನು ಬದಲಾಯಿಸಲು ‘ಸಂಘರ್ಷ’ವು ಸಾಧನೆಯ ಒಂದು ಮಹತ್ವದ ಅಂಗವಾಗಿದೆ.

ಆ. ನಮ್ಮ ಕ್ರಿಯಾಮಾಣದ ಮೇಲೆ, ಅಂದರೆ ಪ್ರಯತ್ನಗಳ ಮೇಲೆ, ಹಾಗೆಯೇ ದೇವರ ಬಗ್ಗೆ ನಮಗಿರುವ ಶರಣಾಗತಿಯ ಭಾವದ ಮೇಲೆ ಪರಿಸ್ಥಿತಿ ಅನುಕೂಲವೋ, ಪ್ರತಿಕೂಲವೆಂದು ನಿರ್ಧರಿಸಲ್ಪಡುತ್ತದೆ. ಆದ್ದರಿಂದ ಸಾಧಕರು ತಮ್ಮ ಕ್ರಿಯಾಮಾಣವು ಯೋಗ್ಯವಾಗಿರಬೇಕು, ಸಾಧನೆಗೆ ಅನುಕೂಲವಾಗಿರಬೇಕೆಂದು ಪ್ರಯತ್ನಿಸಬೇಕು.

ಇ. ನಮಗೆ ಏನು ಬರುತ್ತದೆಯೋ, ಅದನ್ನು ಮಾಡುವಾಗ ಮನಸ್ಸಿನ ಸಂಘರ್ಷವಾಗುವುದಿಲ್ಲ; ಆದರೆ ಏನು ಬರುವುದಿಲ್ಲವೋ, ಅದನ್ನು ಮಾಡಲು ಪ್ರಯತ್ನಿಸುವುದು ನಿಜವಾದ ಸಾಧನೆಯಾಗಿದೆ. ಏಕೆಂದರೆ ಇದರಲ್ಲಿ ಮನಸ್ಸಿನ ಸಂಘರ್ಷವಾಗಿ ಆ ಸಂಘರ್ಷದಿಂದ ಸಾಧಕನ ಮನಸ್ಸು ರೂಪುಗೊಂಡು, ಅವನ ಮನೋಲಯವಾಗಿ ಸಾಧನೆಯಲ್ಲಿ ಪ್ರಗತಿಯಾಗುತ್ತದೆ.

ಈ. ಸದ್ಯದ ಕಾಲವು ಪ್ರತಿಕೂಲವಾಗಿದೆ. ಅನುಕೂಲಕ್ಕಿಂತ ಪ್ರತಿಕೂಲ ಪರಿಸ್ಥಿತಿಯಲ್ಲಿ ಸಾಧನೆ ಕಠಿಣವಾಗಿದ್ದರೂ, ಈ ಕಾಲದಲ್ಲಿ ಸಾಧನೆ ಮಾಡಿದರೆ ಹೆಚ್ಚು ಮತ್ತು ಶೀಘ್ರ ಫಲ ಸಿಗುತ್ತದೆ.

ಉ. ‘ಸಂಘರ್ಷ ಮಾಡದೇ ನಮಗೆ ಏನೂ ಸಿಗುವುದಿಲ್ಲ’ ಎಂಬ ಸತ್ಯವನ್ನು ನಾವು ವ್ಯಾವಹಾರಿಕ ಜೀವನದಲ್ಲಿ ಯಾವಾಗಲು ಅನುಭವಿಸುತ್ತಲೇ ಇರುತ್ತೇವೆ. ಇದರಿಂದ ‘ಈಶ್ವರಪ್ರಾಪ್ತಿಗಾಗಿ ನಾವು ಎಷ್ಟು ಪ್ರಮಾಣದಲ್ಲಿ ಸಂಘರ್ಷ ಮಾಡುವುದು ಆವಶ್ಯಕವಾಗಿದೆ’, ಎಂಬುದನ್ನು ಕಲ್ಪಿಸಬಹುದು.

12. ಸೇವೆ ಮತ್ತು ಸಾಧನೆಯ ವರದಿಯನ್ನು ಮನಃಪೂರ್ವಕವಾಗಿ ಕೊಡದಿರುವುದು

ಅ. ತಮ್ಮ ಮನಸ್ಸಿನ ವಿಚಾರಗಳನ್ನು ಜವಾಬ್ದಾರ ಸಾಧಕ ಅಥವಾ ಸಂತರಿಗೆ ಮನಃಪೂರ್ವಕವಾಗಿ ಹೇಳುವುದರಿಂದ ಸಾಧಕರಿಗೆ ಸಾಧನೆಯ ದಿಶೆ ಸಿಗುತ್ತದೆ ಮತ್ತು ಸಾಧಕರು ಅದಕ್ಕನುಸಾರ ಪ್ರಯತ್ನಿಸಿದರೆ, ಅದರಿಂದ ಅವರ ಸಾಧನೆಯಾಗುತ್ತದೆ.

ಆ. ಸಾಧಕರು ಆಧ್ಯಾತ್ಮಿಕ ದೃಷ್ಟಿಕೋನವನ್ನು ಒಳ್ಳೆಯ ರೀತಿಯಲ್ಲಿ ಕೊಡಬಲ್ಲ ಮತ್ತು ಸಾಧನೆಯಲ್ಲಿ ಸಹಾಯ ಮಾಡಬಲ್ಲ ಜವಾಬ್ದಾರ ಸಾಧಕರೊಂದಿಗೆ ಮನಃಪೂರ್ವಕವಾಗಿ ಮತ್ತು ಕಲಿಯುವ ಸ್ಥಿತಿಯಲ್ಲಿದ್ದು ಮಾತನಾಡಬೇಕು.

ಇ. ಮನಮುಕ್ತವಾಗಿ ಮಾತನಾಡುವುದು, ಅಂದರೆ ಮನಸ್ಸಿನಲ್ಲಿ ಬರುವ ವಿಚಾರಗಳನ್ನು ಇದ್ದಂತೆಯೇ ಏನು ಮುಚ್ಚಿಡದೇ ಹೇಳುವುದು, ಈ ರೀತಿ ನಮ್ಮ ಆತ್ಮನಿವೇದನೆಯಿರಬೇಕು.

ಈ. ಸಾಧಕರು ತಮ್ಮ ಸಾಧನೆಯ ಬಗ್ಗೆ ಯಾವಾಗಲೂ ಜಾಗರೂಕರಾಗಿರಬೇಕು. ಸೇವೆಯಿಂದ ಸಾಧನೆಯಾಗಲು ಸಾಧಕರು ಜವಾಬ್ದಾರ ಸಾಧಕರ ಮತ್ತು ಧರ್ಮಪ್ರಚಾರಕ ಸಂತರ ಮಾರ್ಗದರ್ಶನವನ್ನು ಪಡೆಯುವುದು, ಅವರಿಗೆ ಸಾಧನೆಯ ವರದಿಯನ್ನು ಸಮಯೋಚಿತವಾಗಿ ಕೊಡುವುದು, ಈ ರೀತಿ ಪ್ರಯತ್ನಿಸಬೇಕು. ಸಾಧಕರಲ್ಲಿ ‘ಜವಾಬ್ದಾರ ಸಾಧಕರ ಮತ್ತು ಸಂತರ ಮಾಧ್ಯಮದಿಂದ ಗುರುದೇವರೇ ನಮಗೆ ಹೇಳುತ್ತಿದ್ದಾರೆ’, ಎಂಬ ಶ್ರದ್ಧೆಯಿರಬೇಕು.

– (ಸದ್ಗುರು) ಸತ್ಯವಾನ ಕದಮ (೧೨.೭.೨೦೨೩)

Leave a Comment