ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿ ಹೇಗೆ ಮಾಡಬೇಕು ? (ಭಾಗ 4)

Article also available in :

17. ಬ್ರಾಹ್ಮಿ (ಮಂಡೂಕಪರ್ಣಿ, ಒಂದೆಲಗ)

17 ಅ. ಮಹತ್ವ

ಮಂಡೂಕಪರ್ಣಿಯು ಸ್ಮೃತಿವರ್ಧಕವೆಂದು (ನೆನಪಿನ ಶಕ್ತಿಯನ್ನು ಹೆಚ್ಚಿಸುವ) ಪ್ರಸಿದ್ಧವಾಗಿದೆ. ಇದು ಶಾಂತ ನಿದ್ದೆಗಾಗಿ, ಹಾಗೆಯೇ ಕೂದಲಿನ ಆರೋಗ್ಯಕ್ಕಾಗಿ ತುಂಬಾ ಉಪಯುಕ್ತವಾಗಿದೆ. ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಬ್ರಾಹ್ಮಿಯನ್ನು ಮನೆಯ ಸುತ್ತಲೂ ಆದಷ್ಟು ಹೆಚ್ಚು ಪ್ರಮಾಣದಲ್ಲಿ ಬೆಳೆಸಬೇಕು.

ಜಲಬ್ರಾಹ್ಮಿ
ಮಂಡೂಕಪರ್ಣಿ, ಒಂದೆಲಗ

17 ಆ. ಪ್ರಕಾರ ಮತ್ತು ತೋಟಗಾರಿಕೆ

ಇದರ 2 ಪ್ರಕಾರಗಳಿವೆ, ಒಂದು ಜಲಬ್ರಾಹ್ಮಿ ಮತ್ತು ಇನ್ನೊಂದು ಮಂಡೂಕಪರ್ಣಿ (ಒಂದೆಲಗ). ಎರಡೂ ಪ್ರಕಾರದ ಗಿಡಗಳ ಗುಣಧರ್ಮಗಳು ಒಂದೇ ಆಗಿವೆ. ಕೊಂಕಣ ಭಾಗದಲ್ಲಿ ತೆಂಗು-ಅಡಿಕೆಗಳ ತೋಟದಲ್ಲಿ ಮಂಡೂಕಪರ್ಣಿಯು ಬೆಳೆಯುತ್ತದೆ. ಬಹಳಷ್ಟು ಜನರು ಮನೆಯ ಸುತ್ತಲೂ ‘ಲಾನ್’ ನ ಬದಲು ಮಂಡೂಕಪರ್ಣಿಯನ್ನು ಬೆಳೆಸುತ್ತಾರೆ. ಈ ವನಸ್ಪತಿಯು ಭೂಮಿಯ ಮೇಲೆ ಹರಡುತ್ತಾ ಹೋಗುತ್ತದೆ. ಇದು ಯಾರ ಬಳಿಯಾದರು ಇದ್ದರೆ, ಅವರಿಂದ ಕೇಳಿ ಅದರ 5 – 6 ಸಸಿಗಳನ್ನು ತಂದು ನೆಟ್ಟರೆ ಅದು ಸ್ವಲ್ಪ ದಿನಗಳಲ್ಲಿ ಎಲ್ಲೆಡೆ ಹಬ್ಬುತ್ತದೆ. ಇದರ ಸಸಿಗಳು ಸಸ್ಯಶಾಲೆಗಳಲ್ಲಿಯೂ (ನರ್ಸರಿಗಳಲ್ಲಿ) ಸಿಗುತ್ತವೆ. ಭತ್ತದ ಹೊಲಗಳಲ್ಲಿಯೂ ನೈಸರ್ಗಿಕವಾಗಿ ಸಿಗುತ್ತದೆ. ಇದು ದನಕರುಗಳ ಇಷ್ಟವಾದ ಖಾದ್ಯವಾಗಿರುವುದರಿಂದ ಈ ವನಸ್ಪತಿಯು ಹೆಚ್ಚು ಸಮಯ ಹೊಲದಲ್ಲಿ ಉಳಿಯುವುದಿಲ್ಲ; ಆದರೆ ಎಲ್ಲಿ ‘ಮುಟ್ಟಿದರೆ ಮುನಿ’ಯು ಹಬ್ಬಿರುತ್ತದೆಯೋ, ಅಂತಹ ಸ್ಥಳದಲ್ಲಿ ದನಕರುಗಳು ಬಾಯಿ ಹಾಕದಿರುವುದರಿಂದ ಭತ್ತದ ಹೊಲದಲ್ಲಿ ಆ ಸ್ಥಳದಲ್ಲಿ ಬ್ರಾಹ್ಮಿಯ ಸಸಿಗಳು ಸಿಗುತ್ತವೆ. ಈ ಸಸಿಗಳನ್ನು ಯಾವುದಾದರೊಂದು ಹೂಕುಂಡದಲ್ಲಿಯೂ ಬೆಳೆಯಬಹುದು. ಕಾಂಡದ ತುಂಡುಗಳಿಂದಲೂ ಬ್ರಾಹ್ಮಿಯನ್ನು ಬೆಳೆಯಬಹುದು. ಬ್ರಾಹ್ಮಿಯನ್ನು ಬೆಳೆಸಲು ಯಾವಾಗಲೂ ನೀರು ಲಭ್ಯವಾಗುವಂತಹ ಜಾಗವನ್ನು ಆಯ್ಕೆ ಮಾಡಬೇಕು.

18. ಬಜೆ (ವೇಖಂಡ)

18 ಅ. ಮಹತ್ವ

ಈ ಔಷಧಿಯು ನಿಯಮಿತವಾಗಿ ಬೇಕಾಗುವ ಔಷಧಿಯಾಗಿರದಿದ್ದರೂ, ಮನೆಯಲ್ಲಿ ಒಂದು ಸಸಿ ಇರಬೇಕು. ಇದು ‘ಸಂಜ್ಞಾಸ್ಥಾಪನ’ಕ್ಕೆ ಅಂದರೆ ಪ್ರಜ್ಞೆ ತಪ್ಪಿರುವವರಲ್ಲಿ ಪ್ರಜ್ಞೆ ಬರಿಸಲು ಉಪಯುಕ್ತ ಔಷಧಿಯಾಗಿದೆ.

18 ಆ. ತೋಟಗಾರಿಕೆ

ಇದಕ್ಕೆ ಬಹಳಷ್ಟು ನೀರು ಬೇಕಾಗುತ್ತದೆ. ನಿರಿರುವ ಭೂಮಿಯಲ್ಲಿ (ಉದಾ. ಕೆಸರಿನಲ್ಲಿ) ಬಜೆ ಚೆನ್ನಾಗಿ ಬೆಳೆಯುತ್ತದೆ. ಯಾರ ಬಳಿಯದಾದರೂ ಬಜೆಯ ಸಸಿಗಳಿದ್ದರೆ, ಅದರ ಗಡ್ಡೆಯನ್ನು ಕತ್ತರಿಸಿ ನೆಡಬಹುದು. ಕೆಲವು ಸಸ್ಯಶಾಲೆಗಳಲ್ಲಿ (ನರ್ಸರಿಗಳಲ್ಲಿ) ಇದರ ಸಸಿಗಳು ಸಿಗುತ್ತವೆ.

19. ಶತಾವರಿ (ಶತಮೂಲಿ, ಹಲವು ಮಕ್ಕಳ ತಾಯಿ)

19 ಅ. ಮಹತ್ವ

ಶತಾವರಿಯು ಒಂದು ಉತ್ತಮ ಶಕ್ತಿವರ್ಧಕ ಔಷಧಿಯಾಗಿದೆ. ಮನೆಯಲ್ಲಿ ಶತಾವರಿಯ 3 ರಿಂದ 4 ಸಸಿಗಳನ್ನು ನೆಟ್ಟರೂ ಸಾಕಾಗುತ್ತದೆ. ಶತಾವರಿಯ ಬೇರುಗಳ ತಾಜಾ ರಸವನ್ನು ಔಷಧಿಯೆಂದು ಉಪಯೋಗಿಸಬಹುದು.

ಶತಾವರಿಯ ಎಲೆಗಳು ಮತ್ತು ಶತಾವರಿಯ ಬೇರುಗಳು

19 ಆ. ಗುರುತು

ಕೊಂಕಣದಲ್ಲಿ ಮಳೆಗಾಲದಲ್ಲಿ ಮಾವು, ಗೋಡಂಬಿಯ ತೋಟಗಳಲ್ಲಿ ಅಥವಾ ಹಾಳು ಬಿದ್ಧ ಜಾಗಗಳಲ್ಲಿ ಈ ವನಸ್ಪತಿಯು ತಾನಾಗಿಯೇ ಹುಟ್ಟುತ್ತದೆ. ಇದರ ಎಲೆಗಳು ವೈಶಿಷ್ಟ್ಯಪೂರ್ಣವಾಗಿರುತ್ತವೆ. ಬಳ್ಳಿಯ ಬುಡವನ್ನು ಅಗೆದು ತೆಗೆದರೆ ಒಂದು ಕಾಂಡಕ್ಕೆ 50 ರಿಂದ 100 ಬೇರುಗಳು ಸಿಗುತ್ತವೆ. 1 ಬೇರನ್ನು ನೆಟ್ಟರೆ ಅದರ 100 ಬೇರುಗಳಾಗುತ್ತವೆ, ಆದುದರಿಂದ ಇದರ ಹೆಸರು ಶತಾವರಿ, ಶತಮೂಲಿ, ಹಲವು ಮಕ್ಕಳ ತಾಯಿ ಎಂದು ಬಿದ್ದಿರಬಹುದು.

19 ಇ. ತೋಟಗಾರಿಕೆ

ಮಳೆಗಾಲ ಮುಗಿದನಂತರ ಇದಕ್ಕೆ ಚಿಕ್ಕ ಹಣ್ಣಗಳು ಬರುತ್ತವೆ. ಹಣ್ಣುಗಳಲ್ಲಿನ ಬೀಜಗಳಿಂದ ಶತಾವರಿಯ ಸಸಿಗಳನ್ನು ತಯಾರಿಸಿದರೆ ಬೆಳೆಯು ಚೆನ್ನಾಗಿ ಬರುತ್ತದೆ. ಇದರ ಬೇರುಗಳ ಗೊಂಚಲಿನಿಂದ ಒಂದೊಂದು ಬೇರನ್ನು ಬೇರೆ ಮಾಡಿ ನೆಟ್ಟರೂ ಸಹ ಸಸಿಗಳು ತಯಾರಾಗುತ್ತವೆ. ಸಾಮಾನ್ಯವಾಗಿ ಒಂದೂವರೆ ವರ್ಷದಲ್ಲಿ ಒಂದು ಬೇರಿನಿಂದ ಅನೇಕ ಬೇರುಗಳು ತಯಾರಾಗುತ್ತವೆ. ಈ ವನಸ್ಪತಿಯನ್ನು ಮನೆಯಲ್ಲಿ ಒಳ್ಳೆಯ ರೀತಿಯಲ್ಲಿ ಬೆಳೆಸಬೇಕು. ಮಹಾರಾಷ್ಟçದಲ್ಲಿ ಅನೇಕ ರೈತರು ವ್ಯಾವಸಾಯಿಕ ಸ್ತರದಲ್ಲಿ ಶತಾವರಿಯ ಕೃಷಿಯನ್ನು ಮಾಡಿದ್ದಾರೆ. ಅವರಿಂದ ಶತಾವರಿಯ ಬೇರುಗಳ ಒಂದು ಗೊಂಚಲನ್ನು ತಂದರೂ, ಅದರಲ್ಲಿ ಎಷ್ಟು ಬೇರುಗಳಿರುತ್ತವೆಯೋ, ಅಷ್ಟು (ಸಾಧಾರಣ 50 ರಿಂದ 100) ಸಸಿಗಳು ತಯಾರಾಗುತ್ತವೆ. ಬಿಳಿ ಮತ್ತು ಹಳದಿ ಹೀಗೆ ಶತಾವರಿಯ 2 ವಿಧಗಳಿವೆ. ಎರಡೂ ವಿಧಗಳ ಶತಾವರಿಗಳನ್ನು ಔಷಧಿಗಳಲ್ಲಿ ಉಪಯೋಗಿಸುತ್ತಾರೆ.

19 ಇ 1. ದೊಡ್ಡ ಪ್ರಮಾಣದಲ್ಲಿ ಶತಾವರಿಯನ್ನು ಬೆಳೆಸುವುದಿದ್ದರೆ ಶತಾವರಿಯನ್ನು ಸುಲಿಯುವ ವ್ಯವಸ್ಥೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ : ವ್ಯಾವಸಾಯಿಕ ಸ್ತರದಲ್ಲಿ ಶತಾವರಿಯನ್ನು ಬೆಳೆಸುವುದಿದ್ದರೆ ಶತಾವರಿಯನ್ನು ಸುಲಿಯುವ ಯಂತ್ರ ಇರುವುದು ಅತ್ಯಂತ ಆವಶ್ಯಕವಾಗಿದೆ; ಏಕೆಂದರೆ ಶತಾವರಿಯನ್ನು ಕೈಗಳಿಂದ ಸುಲಿಯುವುದು ಬಹಳ ಕಷ್ಟದ ಕೆಲಸವಾಗಿದೆ ಮತ್ತು ಅದಕ್ಕೆ ಬಹಳ ಸಮಯವೂ ಬೇಕಾಗುತ್ತದೆ. ಶತಾವರಿಯ ಸಿಪ್ಪೆಯನ್ನು ತೆಗೆಯದ ಹೊರತು ಅದು ಒಣಗುವುದಿಲ್ಲ ಮತ್ತು ಹಾಗೆಯೇ ಇಟ್ಟರೆ ಅದಕ್ಕೆ ಮುಗ್ಗಲು ಹಿಡಿಯುತ್ತದೆ. ಆದುದರಿಂದ ಶತಾವರಿಯನ್ನು ಸುಲಿಯುವ ಯಂತ್ರ ಇಲ್ಲದಿದ್ದರೆ ವ್ಯಾವಸಾಯಿಕ ಸ್ತರದಲ್ಲಿ ಕೃಷಿಯನ್ನು ಮಾಡಬಾರದು.

20. ಅರಿಶಿಣ

20 ಅ. ಮಹತ್ವ

‘ಪ್ರತಿದಿನ ರಾತ್ರಿ ಮಲಗುವಾಗ 1 ಚಮಚ ಅರಿಶಿಣ ಪುಡಿಯನ್ನು ಬೆಚ್ಚಗಿನ ನೀರಿನೊಂದಿಗೆ ಸೇವಿಸಿದರೆ ವಜ್ರಕಾಯರಾಗುತ್ತಾರೆ (ಬಲಿಷ್ಠ)’, ಎಂದು ಹಿರಿಯ ವೈದ್ಯರು ಹೇಳುತ್ತಾರೆ. ಅರಶಿಣವು ರಕ್ತವನ್ನು ಶುದ್ಧ ಮಾಡುವ, ಹಾಗೆಯೇ ಚರ್ಮಕ್ಕೆ ಕಾಂತಿಯನ್ನು ಕೊಡುವ ಔಷಧಿಯಾಗಿದೆ. ಇದರ ಎಲೆಗಳಿಗೆ ಸುಗಂಧ ಬರುತ್ತದೆ. ಹಾಲು ಕಾಯಿಸುವಾಗ ಅಥವಾ ಬೆಣ್ಣೆಯನ್ನು ಕಾಯಿಸಿ ತುಪ್ಪವನ್ನು ಮಾಡುವಾಗ ಅವುಗಳಲ್ಲಿ ಒಂದು ಅರಿಶಿಣದ ಎಲೆಯನ್ನು ಹಾಕಿದರೆ ಹಾಲು ಮತ್ತು ತುಪ್ಪಕ್ಕೆ ಅದರ ಸುಗಂಧ ಬರುತ್ತದೆ.

ಅರಿಶಿಣದ ಎಲೆಗಳು

20 ಆ. ತೋಟಗಾರಿಕೆ

ಮಾರುಕಟ್ಟೆಯಲ್ಲಿ ಅರಿಶಿಣ ದೊರಕುತ್ತಿದ್ದರೂ, ಸ್ವಲ್ಪ ಪ್ರಮಾಣದಲ್ಲಿ ಅರಿಶಿಣವನ್ನು ನಾವು ಮನೆಯಲ್ಲಿಯೂ ಬೆಳೆಸಬಹುದು; ಏಕೆಂದರೆ ಮಾರುಕಟ್ಟೆಯಲ್ಲಿ ಸಿಗುವ ಅರಿಶಿಣವನ್ನು ತಯಾರಿಸುವಾಗ ಅದನ್ನು ನೀರಿನಲ್ಲಿ ಕುದಿಸಿರುತ್ತಾರೆ. ಇದರಿಂದ ಅದರಲ್ಲಿನ ಔಷಧಿ ತತ್ತ್ವವು ಕಡಿಮೆಯಾಗಿರುತ್ತದೆ. ಅರಿಶಿಣದ ಗಡ್ಡೆಗಳು ಅರಿಶಿಣದ ಕೃಷಿಯನ್ನು ಮಾಡುವವರ ಬಳಿ ಅಥವಾ ಸ್ಥಳೀಯ ಕೃಷಿಕಾರ್ಯಾಲಯಗಳಲ್ಲಿ ಸಿಗುತ್ತವೆ.

ಅರಿಶಿಣದ ಕೃಷಿಯನ್ನು ಮಳೆಗಾಲದ ಆರಂಭದಲ್ಲಿ ಮಾಡುತ್ತಾರೆ. ಸಾಮಾನ್ಯವಾಗಿ 9 ತಿಂಗಳುಗಳ ನಂತರ ಅರಿಶಿಣದ ಗಡ್ಡೆಗಳು ತೆಗೆಯಲು / ಕೊಯ್ಲಿಗೆ ಸಿದ್ಧವಾಗುತ್ತವೆ. ಅರಿಶಿಣದ ಎಲೆಗಳು ಒಣಗತೊಡಗಿದಾಗ ಅರಿಶಿಣವು ತೆಗೆಯಲು / ಕೊಯ್ಲಿಗೆ ಬಂದಿದೆ ಎಂದು ತಿಳಿಯುತ್ತಾರೆ. 4 ಜನರ ಕುಟುಂಬಕ್ಕಾಗಿ ಕೇವಲ ಔಷಧಿಗಾಗಿ ಕೃಷಿಯನ್ನು ಮಾಡುವುದಿದ್ದರೆ ಅರಿಶಿಣದ ಅರ್ಧ ಕಿಲೋದಷ್ಟು ಗಡ್ಡೆಗಳು ಸಾಕಾಗುತ್ತವೆ. ಮನೆಯ ಸುತ್ತಲೂ ಜಾಗವಿಲ್ಲದಿದ್ದರೆ, ಒಂದೆರಡು ಅರಿಶಿಣದ ಸಸಿಗಳನ್ನು ಕುಂಡಗಳಲ್ಲಿ ನೆಡಬಹುದು. ಇದರಿಂದ ಸಸಿಗಳು ಬೆಳೆದ ನಂತರ ಎಲೆಗಳು ಸಿಗುತ್ತವೆ.

21. ಕಹಿಬೇವು

21 ಅ. ಮಹತ್ವ

ಪ್ರತಿನಿತ್ಯ ಕಹಿಬೇವಿನ ಕಡ್ಡಿಗಳಿಂದ (ಟೊಂಗೆಗಳ ಎಳೆಯ ತುದಿಗಳಿಂದ) ಹಲ್ಲುಜ್ಜಿದರೆ ಹಲ್ಲುಗಳ ಆರೋಗ್ಯವು ಚೆನ್ನಾಗಿ ಉಳಿಯುತ್ತದೆ. ಕಹಿಬೇವು ರಕ್ತವನ್ನು ಶುದ್ಧ ಮಾಡುವುದರಿಂದ ಅದು ಚರ್ಮರೋಗಗಳಿಗೆ ಬಹಳ ಉಪಯುಕ್ತವಾಗಿದೆ.

ಕಹಿಬೇವಿನ ಎಲೆಗಳು

21 ಆ. ತೋಟಗಾರಿಕೆ

ಕಹಿಬೇವು ದೊಡ್ಡ ಪ್ರಮಾಣದಲ್ಲಿ ದೊರೆಯುತ್ತದೆ. ಆದುದರಿಂದ ಇದನ್ನು ಬೆಳೆಸುವ ಆವಶ್ಯಕತೆ ಇರುವುದಿಲ್ಲ; ಆದರೆ ನಮ್ಮ ಅಕ್ಕಪಕ್ಕದ ಪರಿಸರದಲ್ಲಿ ಕಹಿಬೇವಿನ ಗಿಡ ಇಲ್ಲದಿದ್ದರೆ, ನಾವು ಒಂದು ಗಿಡವನ್ನು ಬೆಳೆಸಬೇಕು. ಕಹಿಬೇವಿನ ಸಸಿಗಳು ಸಸ್ಯಶಾಲೆಗಳಲ್ಲಿ (ನರ್ಸರಿಗಳಲ್ಲಿ) ಸಿಗುತ್ತವೆ. ಬೀಜಗಳಿಂದ ಸಸಿಗಳನ್ನು ತಯಾರಿಸಲಾಗುತ್ತದೆ.

ಸಂಕಲನಕಾರರು

ಶ್ರೀ. ಮಾಧವ ರಾಮಚಂದ್ರ ಪರಾಡಕರ ಮತ್ತು ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಮಾರ್ಗದರ್ಶಕರು

ಡಾ. ದಿಗಂಬರ ನಭು ಮೋಕಾಟ, ಸಹಾಯಕ ಪ್ರಾಧ್ಯಾಪಕರು, ವನಸ್ಪತಿಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ಪುಣೆ ವಿದ್ಯಾಪೀಠ, ಪುಣೆ ಮತ್ತು ಪ್ರಮುಖ ನಿರ್ದೇಶಕರು, ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ.

Leave a Comment