ಮುಂಬರುವ ಭೀಕರ ಆಪತ್ಕಾಲದಲ್ಲಿ ಆರೋಗ್ಯರಕ್ಷಣೆಗಾಗಿ ಉಪಯುಕ್ತವಾದ ಔಷಧಿ ವನಸ್ಪತಿಗಳನ್ನು ಬೆಳೆಸಿರಿ !

‘ಮುಂಬರುವ ಕಾಲದಲ್ಲಿ ಮೂರನೇ ಮಹಾಯುದ್ಧವಾಗಿ ಅದರಲ್ಲಿ ಕೋಟ್ಯವಧಿ ಜನರು ಅಣುಸಂಹಾರದಿಂದಾಗಿ ಮೃತರಾಗುವರು’, ‘ಹಾಗೆಯೇ ಭೀಕರ ನೈಸರ್ಗಿಕ ಆಪತ್ತು ಸಹ ಬರುವುದು’, ಎಂದು ಅನೇಕ ಸಂತರ ಭವಿಷ್ಯ ನುಡಿದಿದ್ದಾರೆ. ಆಪತ್ಕಾಲದಲ್ಲಿ ಸಾರಿಗೆ ಸಂಪರ್ಕ, ಡಾಕ್ಟರ್, ರೆಡಿಮೆಡ್(ಸಿದ್ಧ) ಔಷಧಗಳು ಇತ್ಯಾದಿ ಸಿಗುತ್ತದೆಂಬುದು ಖಚಿತವಿಲ್ಲ. ಪ್ರಸ್ತುತ ಕೊರೋನಾದಿಂದಾಗಿ ಈ ಸ್ಥಿತಿಯು ಎಲ್ಲೆಡೆಗೆ ಅನುಭವಿಸುತ್ತಿದ್ದೇವೆ. ಆಪತ್ಕಾಲದಲ್ಲಿ ಆಯುರ್ವೇದದ ಔಷಧಿಯ ವನಸ್ಪತಿಗಳನ್ನು ಬಳಸಿ ಆರೋಗ್ಯರಕ್ಷಣೆಯನ್ನು ಮಾಡಿಕೊಳ್ಳಬೇಕಾಗಿದೆ. ಯೋಗ್ಯ ಸಮಯದಲ್ಲಿ ಯೋಗ್ಯವಾದ ಔಷಧಿ ವನಸ್ಪತಿಗಳು ಸಿಗಬೇಕೆಂದು ಅವು ನಮ್ಮ ಸುತ್ತಮುತ್ತಲೂ ಇರುವುದು ಆವಶ್ಯಕವಿದೆ. ಇದಕ್ಕಾಗಿ ಇಂತಹ ಔಷಧಿ ವನಸ್ಪತಿಗಳ ಕೃಷಿಯನ್ನು ಈಗಲೇ ಮಾಡಿಡುವುದು ಕಾಲದ ಆವಶ್ಯಕತೆ ಇದೆ ಎಂಬುದನ್ನು ಗಮನಿಸಬೇಕಿದೆ. ನೈಸರ್ಗಿಕ, ಹಾಗೆಯೇ ಮಾನವನಿರ್ಮಿತ ವಿವಿಧ ಕಾರಣಗಳಿಂದಾಗಿ ಅನೇಕ ಔಷಧಿ ವನಸ್ಪತಿಗಳು ದುರ್ಲಭವಾಗಿವೆ. ಅವುಗಳ ಕೃಷಿಯಿಂದ ಅವುಗಳ ಸಂವರ್ಧನೆಯೊಂದಿಗೆ ನಮ್ಮ ಆರೋಗ್ಯವನ್ನು ಕಾಪಾಡುವಲ್ಲಿಯೂ ಸಹಾಯವಾಗಲಿದೆ. ಮುಂಬರುವ ಹಿಂದೂ ರಾಷ್ಟ್ರದಲ್ಲಿ ಆಯುರ್ವೇದವೇ ಮುಖ್ಯ ಚಿಕಿತ್ಸಾ ಪದ್ಧತಿಯಾಗಿರಲಿದೆ. ಈ ದೃಷ್ಟಿಯಿಂದಲೂ ಆಯುರ್ವೇದದ ಸಂವರ್ಧನೆಗಾಗಿ ವನೌಷಧಿಗಳ ಕೃಷಿಯನ್ನು ಮಾಡುವುದು ಆವಶ್ಯಕವಾಗಿದೆ. ಆಯುರ್ವೇದವು ಭಾರತೀಯ ಶಾಸ್ತ್ರವಾಗಿದೆ. ಅದರ ಸಂವರ್ಧನೆಗಾಗಿ ಔಷಧಿ ವನಸ್ಪತಿಗಳ ಕೃಷಿಯನ್ನು ಮಾಡುವುದು ಪ್ರತಿಯೊಬ್ಬ ರಾಷ್ಟ್ರಪ್ರೇಮಿ ನಾಗರಿಕನ ಕರ್ತವ್ಯವಾಗಿದೆ.

ಈ ಲೇಖನದಲ್ಲಿ ನೀಡಿದ ಮಾಹಿತಿಯು ಸನಾತನ ‘ಔಷಧಿ ಸಸ್ಯಗಳನ್ನು ಹೇಗೆ ಬೆಳೆಸಬೇಕು ?’ ಎಂಬ ಗ್ರಂಥದಿಂದ ಸಂಕಲನ ಮಾಡಲಾಗಿದೆ. ಸವಿಸ್ತಾರ ಮಾಹಿತಿಗಾಗಿ ವಾಚಕರು ಈ ಗ್ರಂಥವನ್ನು ಅವಶ್ಯವಾಗಿ ಓದಿರಿ.

೧. ಕುಂಡಗಳಲ್ಲಿ ಗಿಡಗಳನ್ನು ಹೇಗೆ ನೆಡಬೇಕು

ಕುಂಡಗಳ ಬದಲಿಗೆ ಪರ್ಯಾಯ ಸಾಧನಗಳಲ್ಲಿ (ಉದಾ. ಪ್ಲಾಸ್ಟಿಕ್ ಚೀಲ, ತಗಡಿನ ಡಬ್ಬಿ)ಗಳಲ್ಲಿ ವನಸ್ಪತಿಗಳನ್ನು ಬೆಳೆಸಲಿಕ್ಕಿದ್ದರೂ ಮುಂದೆ ನೀಡಿದ ರೀತಿಯಲ್ಲಿ ಬೆಳೆಸಬಹುದು.

೧ ಅ. ಗಿಡಗಳಿಗಾಗಿ ಮಣ್ಣನ್ನು ತಯಾರಿಸುವುದು : ಕುಂಡಗಳಲ್ಲಿ ಗಿಡಗಳನ್ನು ನೆಡಲು ಸೂರ್ಯನ ಬೆಳಕು ಬಹಳಷ್ಟು ಪ್ರಮಾಣದಲ್ಲಿ ಬೀಳುವ ಜಾಗದಲ್ಲಿನ ಭೂಮಿಯ ಮೇಲ್ಪದರದ ಮಣ್ಣನ್ನು ತೆಗೆದುಕೊಳ್ಳಬೇಕು. ಯಾವುದರಲ್ಲಿ ಗಿಡಗಳ ಎಲೆ-ಕಸಕಡ್ಡಿಗಳು ಕೊಳೆತಿವೆಯೋ ಆ ಮಣ್ಣನ್ನು ಶ್ರೇಷ್ಠವೆಂದು ತಿಳಿದುಕೊಳ್ಳಬೇಕು. ಬಹಳ ಕೆಳಗಿನ ಮಣ್ಣಿನಲ್ಲಿ ಗಿಡಗಳಿಗೆ ಬೇಕಾಗುವ ಪೋಷಕಾಂಶಗಳ ಕೊರತೆ ಇರಬಹುದು. ಆದುದರಿಂದ ಆದಷ್ಟು ೧ ಅಡಿಗಿಂತಲೂ ಹೆಚ್ಚು ಕೆಳಗಿನ ಮಣ್ಣನ್ನು ತೆಗೆದುಕೊಳ್ಳಬಾರದು. ಮಣ್ಣಿನಲ್ಲಿ ಕಲ್ಲುಗಳಿದ್ದರೆ ಅವುಗಳನ್ನು ಹೆಕ್ಕಿ ತೆಗೆಯಬೇಕು ಅಥವಾ ಮಣ್ಣನ್ನು ಜಾಳಿಸಬೇಕು. ಈ ಮಣ್ಣನ್ನು ೩ ಭಾಗದ ಪ್ರಮಾಣದಲ್ಲಿ ತೆಗೆದುಕೊಂಡು ಅದರಲ್ಲಿ ೧ ಭಾಗ ಚೆನ್ನಾಗಿ ಕೊಳೆತಿರುವ ಸೆಗಣಿಗೊಬ್ಬರ ಮತ್ತು ಸ್ವಲ್ಪ ಬೂದಿಯನ್ನು ಬೆರೆಸಬೇಕು. ಕೊಳೆತ ಸೆಗಣಿ ಗೊಬ್ಬರವು ಬೇಕಾದಷ್ಟು ಪ್ರಮಾಣದಲ್ಲಿ ದೊರೆತರೆ ೩ ಭಾಗ ಮಣ್ಣಿಗೆ ೨ ಭಾಗ ಸೆಗಣಿಗೊಬ್ಬರ ಹಾಕಬೇಕು. ತಾಜಾ ಸೆಗಣಿಯನ್ನು ಹಾಗೆಯೇ ಉಪಯೋಗಿಸದೇ ಅದು ಸರಿಯಾಗಿ ಕೊಳೆತ ನಂತರವೇ ಉಪಯೋಗಿಸಬೇಕು. ಕೊಳೆತ ಸೆಗಣಿಗೊಬ್ಬರ ಸಿಗದಿದ್ದರೆ ಕೊಳೆತ ಕಾಯಿಪಲ್ಯೆ ಅಥವಾ ಮನೆಯಲ್ಲಿ ಕೊಳೆತ ಕಸವನ್ನು ಗೊಬ್ಬರವೆಂದು ಬಳಸಬೇಕು.

೧ ಅ ೧. ಮಣ್ಣಿಗೆ ಪರ್ಯಾಯ : ಗಿಡಗಳಿಗೆ ಮಣ್ಣು ಆಧಾರಕ್ಕಾಗಿ ಮತ್ತು ಬೆಳವಣಿಗೆಗೆ ಅಗತ್ಯವಾಗಿರುವ ಅನ್ನಘಟಕಗಳನ್ನು ಪೂರೈಸುವ ಮಾಧ್ಯಮವೆಂದು ಬೇಕಾಗುತ್ತದೆ. ಮನೆಯಲ್ಲಿನ ತರಕಾರಿಗಳ ದಂಟುಗಳು, ಸಿಪ್ಪೆಗಳು, ಹಾಳಸಿರುವ ಅನ್ನ, ಮನೆಯ ಪರಿಸರದಲ್ಲಿ ಬಿದ್ದಿರುವ ಎಲೆಗಳು, ಕಬ್ಬಿನ ಜಲ್ಲೆ ಮುಂತಾದವುಗಳನ್ನು ಬಳಸಿ ನಾವು ಗಿಡಗಳಿಗೆ ಉತ್ತಮ ಮಣ್ಣನ್ನು ಸುಲಭವಾಗಿ ಮನೆಯಲ್ಲಿಯೇ ತಯಾರಿಸಬಹುದು. ಎಲ್ಲ ಸಾವಯವ ಘಟಕಗಳು ಕೊಳೆತ ನಂತರ ಮಣ್ಣಿನಲ್ಲಿ ರೂಪಾಂತರವಾಗುತ್ತವೆ. ಇದರಲ್ಲಿ ನೀರಿನ ತೇವಾಂಶವನ್ನು ಹಿಡಿದಿಡುವ ಕ್ಷಮತೆ ಮತ್ತು ಅನ್ನದ್ರವ್ಯಗಳು ಉತ್ತಮ ಪ್ರಮಾಣದಲ್ಲಿ ಇರುತ್ತವೆ.

– ಶ್ರೀ. ರಾಜೇಂದ್ರ ಭಟ್, ಲೋಕಸತ್ತಾ (ಮರಾಠಿ ದಿನಪತ್ರಿಕೆ) (೨೬.೨.೨೦೧೫)

೧ ಆ. ಯೋಗ್ಯ ಆಕಾರದ ಮಣ್ಣಿನ ಕುಂಡಗಳನ್ನು ಆಯ್ದುಕೊಳ್ಳಬೇಕು : ಗಿಡಗಳಿಗಾಗಿ ಕುಂಡಗಳನ್ನು ಆರಿಸುವಾಗ ಆ ಕುಂಡಗಳು ಮಣ್ಣಿನದ್ದಾಗಿರುವುದು ಆವಶ್ಯಕವಾಗಿದೆ; ಏಕೆಂದರೆ ಸಿಮೆಂಟ್ ಅಥವಾ ಪ್ಲಾಸ್ಟಿಕ್ ಕುಂಡಗಳಿಂದ ಸೂಕ್ಷ್ಮ ವಾಯುವಿನ ಸಂಚಾರವಾಗಲಾರದು, ಇದರಿಂದ ಅವುಗಳಲ್ಲಿ ನೆಡಲಾದ ಗಿಡಗಳ ಬೇರುಗಳಿಗೆ ಉಸಿರುಗಟ್ಟಿದಂತಾಗುತ್ತದೆ (ಸೂತ್ರ ಕ್ರ. ೧ ಏ. ನೋಡಿ). ಇದರಿಂದ ಗಿಡಗಳ ಅಪೇಕ್ಷಿತ ಬೆಳವಣಿಗೆ ಆಗುವುದಿಲ್ಲ. ಕುಂಡದ ಆಕಾರವು ಮೇಲೆ ಅಗಲ ಮತ್ತು ಕೆಳಗೆ ಕೋನಾಕೃತಿಯಲ್ಲಿರಬೇಕು. (ಅಕೃತಿ ೧ ನೋಡಿ.) ಇದರಿಂದ ಮಣ್ಣನ್ನು ಬದಲಾಯಿಸಲು ಸುಲಭವಾಗುತ್ತದೆ. ಅಕೃತಿ ೨ ರಲ್ಲಿ ತೋರಿಸಿದಂತೆ ಕುಂಡವು ಉಬ್ಬಿರಬಾರದು. ಕುಂಡವು ಹೀಗಿದ್ದರೆ ಮಣ್ಣನ್ನು ಬದಲಾಯಿಸಲು ಕಠಿಣವಾಗುತ್ತದೆ. ಚಿಕ್ಕ ಗಿಡಕ್ಕಾಗಿ ೬ ರಿಂದ ೮ ಇಂಚು ಅಗಲದ ಮತ್ತು ೪ ರಿಂದ ೬ ಇಂಚು ಎತ್ತರದ, ದೊಡ್ಡ ಗಿಡಕ್ಕಾಗಿ ೧೦ ರಿಂದ ೧೪ ಇಂಚು ಅಗಲದ ಮತ್ತು ೮ ರಿಂದ ೧೨ ಇಂಚು ಎತ್ತರದ ಕುಂಡವನ್ನು ತೆಗೆದುಕೊಳ್ಳಬೇಕು. ಇದಕ್ಕಿಂತಲೂ ದೊಡ್ಡ ಆಕಾರದ ಕುಂಡಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಕುಂಡದ ಕೆಳಗಿನಿಂದ ನೀರು ಹೋಗಲು ೧ – ೨ ರಂಧ್ರಗಳಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು.

೧ ಇ. ಮಣ್ಣಿನ ಕುಂಡಗಳನ್ನು ಚೆನ್ನಾಗಿ ಸುಡಲಾಗಿದೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳುವುದು ಆವಶ್ಯಕವಾಗಿದೆ : ಮಣ್ಣಿನ ಕುಂಡಗಳನ್ನು ಆಯ್ದುಕೊಳ್ಳುವಾಗ ಅವುಗಳನ್ನು ಚೆನ್ನಾಗಿ ಸುಡಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ಅದಕ್ಕಾಗಿ ಕುಂಡವನ್ನು ಕೈಯಲ್ಲಿ ಹಿಡಿದು ಅದರ ಮೇಲೆ ಒಂದು ರೂಪಾಯಿ ನಾಣ್ಯದಿಂದ ಹೊಡೆಯಬೇಕು. ಅದು ‘ಠಣ್’ ಎಂಬ ಶಬ್ದವನ್ನು ಮಾಡಿದರೆ ಒಳ್ಳೆಯದಿದೆ ಎಂದು ತಿಳಿಯಬೇಕು. ಅದು ಸರಿಯಾಗಿ ಸುಡದಿದ್ದರೆ ಅಥವಾ ಕಡಿಮೆ ಪ್ರಮಾಣದಲ್ಲಿ ಸುಟ್ಟಿದ್ದರೆ ‘ದಬ್’ ಎಂಬ ಶಬ್ದ ಬರುತ್ತದೆ. ಇಂತಹ ಕುಂಡಗಳನ್ನು ಆರಿಸಬಾರದು. ಇಂತಹ ಕುಂಡಗಳು ಒಡೆಯುವ ಸಾಧ್ಯತೆ ಹೆಚ್ಚಿರುತ್ತದೆ.

೧ ಈ. ಕುಂಡಗಳಲ್ಲಿ ಮಣ್ಣು ತುಂಬಿಸುವ ಪದ್ಧತಿ : ಕುಂಡದ ತಳದಲ್ಲಿ ನೀರು ಹೋಗಲು ಮಾಡಲಾದ ರಂಧ್ರದ ಮೇಲೆ ಪ್ರತಿಯೊಂದರಲ್ಲಿಯೂ ಒಂದೊಂದು ಹಂಚಿನ ತುಂಡು ಅಥವಾ ಚಿಕ್ಕ ಕಲ್ಲನ್ನು ಇಡಬೇಕು. ಇದರಿಂದ ಕುಂಡದಲ್ಲಿ ನೀರು ಹಾಕಿದಾಗ ಆ ರಂಧ್ರದಿಂದ ಒಳಗಿನ ಮಣ್ಣು ಹೊರಗೆ ಹರಿದು ಹೋಗುವುದಿಲ್ಲ. ಅನಂತರ ಕುಂಡದ ಬುಡದಲ್ಲಿ ತೆಂಗಿನ ನಾರು ಅಥವಾ ಇಟ್ಟಿಗೆಯ ಚಿಕ್ಕ ತುಂಡುಗಳು ಅಥವಾ ಚಿಕ್ಕ ಕಲ್ಲುಗಳನ್ನು ಇಡಬೇಕು. ಹೀಗೆ ಮಾಡುವುದರಿಂದ ಹೆಚ್ಚಾದ ನೀರು ಹನಿಹನಿಯಾಗಿ ಹೊರಗೆ ಹೋಗುತ್ತದೆ. ಇದರ ಮೇಲೆ ಭೀಮಸೇನಿ ಕರ್ಪೂರದ ಒಂದು ಚಿಕ್ಕ ತುಂಡಿನ ಸಣ್ಣ ಸಣ್ಣ ಚೂರುಗಳನ್ನು ಮಾಡಿ ಹಾಕಬೇಕು. ಈಗ ನಾವು ತಯಾರಿಸಿದ ಮಣ್ಣನ್ನು ನಿಧಾನವಾಗಿ ಕೈಯಿಂದ ಕುಂಡದಲ್ಲಿ ಅರ್ಧದವರೆಗೆ ತುಂಬಿ ಕುಂಡವನ್ನು ನಿಧಾನವಾಗಿ ಅಲುಗಾಡಿಸಬೇಕು. ಇದರಿಂದ ಒಳಗಿರುವ ಟೊಳ್ಳು ಭಾಗ, ಸಂಧಿಗಳು ತನ್ನಷ್ಟಕ್ಕೆ ತುಂಬಿಕೊಳ್ಳುತ್ತವೆ. ಅನಂತರ ಆ ಮಣ್ಣನ್ನು ಸ್ವಲ್ಪ ಒತ್ತಿಕೊಳ್ಳಬೇಕು. ಈಗ ನಮ್ಮ ಕುಂಡವು ಗಿಡ ನೆಡಲು ಸಿದ್ಧವಾಯಿತು.

೧ ಉ. ಕುಂಡಗಳಲ್ಲಿ ಬೀಜಗಳನ್ನು ಬಿತ್ತುವ ವಿಧಾನ : ಬೀಜಗಳನ್ನು ಬಹಳ ಮೇಲೆ ಅಥವಾ ಬಹಳ ಆಳದಲ್ಲಿ ಹೂಳಬಾರದು. ಬೀಜಗಳು ಮಧ್ಯಭಾಗದಲ್ಲಿ ಬರುವಂತೆ ಬಿತ್ತಬೇಕು. ಬೀಜಗಳನ್ನು ಬಿತ್ತಿದ ನಂತರ ಕುಂಡದ ಮೇಲೆ ಸಾವಕಾಶ ನೀರನ್ನು ಚಿಮುಕಿಸಬೇಕು. ನೀರನ್ನು ಚಿಮುಕಿಸುವಾಗ ಸಾಧ್ಯವಾದರೆ ಅದರಲ್ಲಿ ಒಂದು ಚಿಟಿಕೆ ಅರಿಶಿಣ ಮತ್ತು ಎರಡು ಚಮಚ ಗೋಮೂತ್ರವನ್ನು ಸೇರಿಸಬೇಕು. ಬಿತ್ತನೆಯಾದ ನಂತರ ಮೂರು-ನಾಲ್ಕು ದಿನಗಳಲ್ಲಿ ಮೊಳಕೆ ಬರುತ್ತವೆ. ಮೊಳಕೆ ಚಿಕ್ಕದಾಗಿರುವಾಗ ಪಕ್ಷಿಗಳು ಅವುಗಳನ್ನು ತಿನ್ನುವ ಅಪಾಯವಿರುತ್ತದೆ. ಆದುದರಿಂದ ಸಂರಕ್ಷಣೆಗೆಂದು ಕುಂಡದ ಸುತ್ತಲೂ ಕೋಲುಗಳನ್ನು ನೆಡಬೇಕು. ಇದರಿಂದ ಪಕ್ಷಿಗಳ ಕೊಕ್ಕು ಮೊಳಕೆಯ ತನಕ ತಲುಪುವುದಿಲ್ಲ.

– ಶ್ರೀ. ರಾಜೇಂದ್ರ ಭಟ್, ಲೋಕಸತ್ತಾ (ಮರಾಠಿ ದಿನಪತ್ರಿಕೆ) (೧೪.೫.೨೦೧೫)

೧ ಊ. ಕುಂಡದಲ್ಲಿ ಗಿಡ ನೆಡುವ ಪದ್ಧತಿ : ಯಾವ ಗಿಡವನ್ನು ನಾವು ನೆಡುವವರಿದ್ದೇವೆಯೋ ಅದನ್ನು ಕುಂಡದ ಮಧ್ಯದಲ್ಲಿಟ್ಟು ಉಳಿದ ಕುಂಡವನ್ನು ಮಣ್ಣಿನಿಂದ ತುಂಬಬೇಕು. ಮಣ್ಣನ್ನು ತುಂಬುವಾಗ ಗಿಡದ ಬೇರುಗಳ ಬಳಿ ಟೊಳ್ಳು ಇರದಂತೆ ಮಣ್ಣನ್ನು ತುಂಬಿಸಬೇಕು. ಇದಕ್ಕಾಗಿ ಕೈಯಿಂದ ಮಣ್ಣನ್ನು ಸರಿಯಾಗಿ ಒತ್ತಿಕೊಳ್ಳಬೇಕು. ಬೇಕಾದಷ್ಟು ನೀರು ಉಳಿಯಲು ಕುಂಡದ ಮೇಲ್ಭಾಗದಲ್ಲಿ ೨ ಇಂಚಿನಷ್ಟು ಭಾಗವನ್ನು ಖಾಲಿ ಬಿಡಬೇಕು. ಗಿಡವನ್ನು ನೆಟ್ಟ ನಂತರ ತಕ್ಷಣ ನೀರು ಹಾಕಬೇಕು.

೧ ಎ. ಕುಂಡಗಳ ಕೊರತೆಯಿದ್ದರೆ ಪ್ಲಾಸ್ಟಿಕಿನ ಚೀಲದಲ್ಲಿ ಗಿಡಗಳನ್ನು ನೆಡುವ ಪದ್ಧತಿ : ಗಿಡ ನೆಡಲು ಕುಂಡಗಳು ದೊರೆಯದಿದ್ದರೆ ಪ್ಲಾಸ್ಟಿಕಿನ ಚೀಲಗಳಲ್ಲಿಯೂ ಮೇಲಿನ ಪದ್ಧತಿಯಂತೆ ಗಿಡಗಳನ್ನು ನೆಡಬಹುದು. ಚೀಲದಲ್ಲಿ ಗಿಡಗಳನ್ನು ನೆಡುವ ಮೊದಲು ಚೀಲದ ಬುಡದಲ್ಲಿ ಮತ್ತು ನಾಲ್ಕೂ ಬದಿಗಳಲ್ಲಿ ಹೆಚ್ಚಿನ ನೀರು ಹೊರಬರಲು ಹಾಗೂ ಗಿಡದ ವಾಯುಸಂಚಾರಕ್ಕಾಗಿ ರಂಧ್ರಗಳನ್ನು ಮಾಡುವುದನ್ನು ಮರೆಯಬಾರದು. ಈ ರಂಧ್ರಗಳ ಮೇಲೆ ಕುಂಡಗಳಲ್ಲಿ ಇಟ್ಟಂತೆ ಹಂಚಿನ ಚೂರು ಅಥವಾ ಕಲ್ಲುಗಳನ್ನು ಇಡುವ ಆವಶ್ಯಕತೆಯಿರುವುದಿಲ್ಲ. ಚೀಲದಲ್ಲಿ ಮಣ್ಣು ತುಂಬುವ ಮೊದಲು ಕೆಳಗಿನ ಕೋನಗಳನ್ನು ಒಳಗಿನಿಂದ ಮಡಚಿಕೊಂಡರೆ ಚೀಲ ತುಂಬಿದಾಗ ಅದಕ್ಕೆ ಸಿಲಿಂಡರಿನ ಆಕಾರ ಬರುತ್ತದೆ ಮತ್ತು ಅದನ್ನು ನೆಲದ ಮೇಲೆ ಸರಿಯಾಗಿ ಇಡಬಹುದು.

೧ ಏ. ಆಪತ್ಕಾಲದ ದೃಷ್ಟಿಯಿಂದ ಮಣ್ಣಿನ ಕುಂಡಗಳಿಗಿಂತ ಇತರ ಪರ್ಯಾಯಗಳನ್ನು ಉಪಯೋಗಿಸುವುದು ಹೆಚ್ಚು ಒಳ್ಳೆಯದು : ‘ಮಣ್ಣಿನ ಕುಂಡಗಳಲ್ಲಿ ಗಿಡಗಳನ್ನು ನೆಡುವುದು ಗಿಡಗಳ ಬೆಳವಣಿಗೆ ದೃಷ್ಟಿಯಿಂದ ಆದರ್ಶವಾಗಿದೆ; ಆದರೆ ಮಣ್ಣಿನ ಕುಂಡಗಳನ್ನು ಎತ್ತಿಡುವಾಗ ಒಡೆಯಬಹುದು. ಆಪತ್ಕಾಲದಲ್ಲಿ ಏನಾಗಬಹುದು ಎಂದು ಹೇಳಲಾಗುವುದಿಲ್ಲ. ಆದ್ದರಿಂದ ಕುಂಡಗಳು ಒಡೆದು ಆಗುವ ಹಾನಿಯನ್ನು ತಡೆಯಲು ಈ ಅವಧಿಯಲ್ಲಿ ಮಣ್ಣಿನ ಕುಂಡಗಳಿಗಿಂತ ತಗಡಿನ ಪಿಪಾಯಿ, ಎಣ್ಣೆಯ ತಗಡಿನ ಡಬ್ಬಿಗಳು, ಪ್ಲಾಸ್ಟಿಕ ಗೋಣಿಚೀಲಗಳು, ಚೀಲಗಳು, ಡಬ್ಬಿ ಅಥವಾ ಪಿಪಾಯಿ ಇತ್ಯಾದಿ ಪರ್ಯಾಯ ವಸ್ತುಗಳನ್ನು ಉಪಯೋಗಿಸುವುದು ಬಹಳ ಒಳ್ಳೆಯದು. ಈ ಪರ್ಯಾಯ ವಸ್ತುಗಳಿಂದ ಹೆಚ್ಚಿನ ನೀರು ಹರಿದು ಹೋಗಲು ಬುಡದಲ್ಲಿ ತೂತುಗಳನ್ನು ಮಾಡಬೇಕು.

೨. ಗಿಡಗಳ ಕಾಳಜಿಯನ್ನು ಹೇಗೆ ತೆಗೆದುಕೊಳ್ಳಬೇಕು ?

೨ ಅ. ಬೀಜಗಳನ್ನು ಬಿತ್ತಿದ ಕುಂಡಗಳನ್ನು ಇಡಲು ಯೋಗ್ಯ ಸ್ಥಳವನ್ನು ಆರಿಸಬೇಕು : ಗಿಡಗಳನ್ನು ಎಲ್ಲಿ ಇಡಬೇಕೆಂದು ನಿರ್ಧರಿಸಿರುವಿರೋ, ಅಲ್ಲಿ ಎಷ್ಟು ಬಿಸಿಲು ಬರುತ್ತದೆ ಎಂಬುದರ ಅಧ್ಯಯನ ಮಾಡಬೇಕು. ವರ್ಷದಲ್ಲಿ ಉತ್ತರಾಯಣ ಮತ್ತು ದಕ್ಷಿಣಾಯನಕ್ಕನುಸಾರ ನಮ್ಮ ಮನೆಗೆ ಬರುವ ಬಿಸಿಲಿನ ಕಾಲಾವಧಿಯು ಬದಲಾಗುತ್ತಿರುತ್ತದೆ. ಆದುದರಿಂದ ಬಿತ್ತನೆ ಮಾಡಿರುವ ಕುಂಡಗಳನ್ನು ಮನೆಯ ಬಾಲ್ಕನಿಯಲ್ಲಿ ಅಥವಾ ಅಂಗಳದಲ್ಲಿ ಕನಿಷ್ಠ ನಾಲ್ಕು ಗಂಟೆಯಾದರೂ ಸೂರ್ಯನ ಬೆಳಕು ಸಿಗುವಂತಹ ಜಾಗದಲ್ಲಿ ಇಡಬೇಕು. ಮರದ ಅಥವಾ ಕಬ್ಬಿಣದ ರಾ್ಯಕ್‌ನಲ್ಲಿ ಕಡಿಮೆ ಜಾಗದಲ್ಲಿ ಹೆಚ್ಚು ಕುಂಡಗಳನ್ನು ಇಡಬಹುದು. ಕುಂಡಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ತೆಗೆದಿಡಬೇಕಾದರೆ ಅವುಗಳ ಅಂಚನ್ನು ಹಿಡಿಯದೇ ಮಧ್ಯದಲ್ಲಿ ಹಿಡಿದು ಎತ್ತಿಡಬೇಕು.

೨ ಆ. ಗಿಡಗಳಿಗೆ ನೀರು ಹಾಕುವುದು

೨ ಆ ೧. ಗಿಡಗಳಿಗೆ ಹೆಚ್ಚು ನೀರನ್ನು ಹಾಕಬಾರದು : ಸಸ್ಯಗಳ ಬೇರುಗಳಿಗೆ ತೇವಾಂಶ ಬೇಕಾಗಿರುತ್ತದೆ, ನೀರಲ್ಲ. ಕೇವಲ ಕಮಲದಂತಹ ಸಸ್ಯಗಳು ಮಾತ್ರ ನೀರಿನಲ್ಲಿನ ಆಮ್ಲಜನಕವನ್ನು ತೆಗೆದುಕೊಂಡು ಬೆಳೆಯುತ್ತವೆ. ಇತರ ಹೆಚ್ಚಿನ ಗಿಡಗಳು ನೀರು ಹೆಚ್ಚಾದರೆ ಸಾಯುತ್ತವೆ. ಕುಂಡದಲ್ಲಿನ ನೀರು ಹೊರಗೆ ಹೋಗಲೇಬೇಕು ಮತ್ತು ಕುಂಡದಲ್ಲಿ ಯೋಗ್ಯ ಪ್ರಮಾಣದಲ್ಲಿ ತೇವಾಂಶವು ಉಳಿಯಬೇಕು. ಕುಂಡದಲ್ಲಿನ ನೀರು ಹೊರಗೆ ಬರುತ್ತಿದ್ದರೆ ನಾವು ಹೆಚ್ಚು ನೀರು ಹಾಕುತ್ತಿದ್ದೇವೆ ಎಂದು ತಿಳಿದುಕೊಳ್ಳಬೇಕು. ನೀರು ಹೆಚ್ಚಾದರೆ ಗಿಡವು ಯೋಗ್ಯ ರೀತಿಯಲ್ಲಿ ಬೆಳೆಯುವುದಿಲ್ಲ ಮತ್ತು ಹೆಚ್ಚಿನ ನೀರಿನಿಂದಾಗಿ ಶಿಲೀಂಧ್ರ ರೋಗಗಳು ಬರುತ್ತವೆ, ಅಲ್ಲದೇ ಗಿಡಗಳು ಅಶಕ್ತವಾಗುತ್ತವೆ. ಇದರಿಂದ ಕೀಟಗಳೂ ಉಂಟಾಗುತ್ತವೆ. ಆದುದರಿಂದ ಗಿಡಗಳಿಗೆ ಯೋಗ್ಯ ಪ್ರಮಾಣದಲ್ಲಿ ನೀರನ್ನು ಕೊಡುವುದು ಮಹತ್ವದ್ದಾಗಿದೆ.

– ಶ್ರೀ. ರಾಜೇಂದ್ರ ಭಟ್, ಲೋಕಸತ್ತಾ (ಮರಾಠಿ ದಿನಪತ್ರಿಕೆ) (೨೬.೨.೨೦೧೫)

೨ ಆ ೨. ನೀರಿನ ಪ್ರಮಾಣ : ಚಳಿಗಾಲದ ದಿನಗಳಲ್ಲಿ ಕುಂಡದಲ್ಲಿನ ಗಿಡಗಳಿಗೆ ೨೪ ಗಂಟೆಗಳಿಗೊಮ್ಮೆ ನೀರು ಹಾಕಿದರೆ ಸಾಕಾಗುತ್ತದೆ. ಸಾಧ್ಯವಿದ್ದಷ್ಟು ಸಾಯಂಕಾಲದ ಸಮಯದಲ್ಲಿ ನೀರು ಹಾಕಬೇಕು, ಇದರಿಂದ ಭಾಷ್ಪೀಭವನದಿಂದಾಗಿ ನೀರು ಆವಿಯಾಗುವುದು ನಿಲ್ಲುತ್ತದೆ, ಹಾಗೆಯೇ ಗಿಡಗಳಿಗೆ ಪೂರ್ಣ ವಿಶ್ರಾಂತಿ ದೊರೆತು ಅವು ನಳನಳಿಸುತ್ತವೆ. ಬೇಸಿಗೆಯ ದಿನಗಳಲ್ಲಿ ಮಾತ್ರ ಇಂತಹ ಗಿಡಗಳಿಗೆ ೨ ಬಾರಿ ನೀರು ಹಾಕುವುದು ಆವಶ್ಯಕವಾಗಿರುತ್ತದೆ. ಕುಂಡದ ಶೇ. ೨೫ ರಷ್ಟು ನೀರು ಮಾತ್ರ ಗಿಡಗಳಿಗೆ ಸಾಕಾಗುತ್ತದೆ. ಗಿಡದ ಬೇರಿಗೆ ತರಕಾರಿಯ ಸಿಪ್ಪೆ, ಚಹಾದ ಹುಡಿ ಹಾಕಿದರೆ ಹೆಚ್ಚು ನೀರು ಬೇಕಾಗುವುದಿಲ್ಲ. ಕುಂಡದಲ್ಲಿ ಗಿಡದ ನಾಲ್ಕೂ ಬದಿಗಳಲ್ಲಿ ನೀರು ಹಾಕಿದ ನಂತರ ಕುಂಡದ ಬುಡದಲ್ಲಿರುವ ರಂಧ್ರದಿಂದ ನೀರು ಹೊರ ಬರತೊಡಗಿದರೆ, ನೀರು ಹಾಕುವುದನ್ನು ನಿಲ್ಲಿಸಬೇಕು. ಕುಂಡದಿಂದ ಬಂದ ಮಣ್ಣಿನ ನೀರು ಹೊರ ಬಂದು ಮನೆಯ ನೆಲವು ಹಾಳಾಗಬಾರದೆಂದು, ಕುಂಡದ ಕೆಳಗೆ ಪ್ಲಾಸ್ಟಿಕ್ ಅಥವಾ ಲೋಹದ ಹಳೆಯ ತಟ್ಟೆಯನ್ನು ಇಡಬೇಕು.

೨ ಆ ೩. ಗಿಡಗಳಿಗೆ ಪೋಷಕವಾದ ನೀರು : ಮನೆಯಲ್ಲಿನ ಪಾತ್ರೆಗಳನ್ನು ತೊಳೆಯುವ ಮುನ್ನ ಸಾಬೂನನ್ನು ಬಳಸದೇ ಅವುಗಳಲ್ಲಿ ನೀರು ಹಾಕಿ ಆ ನೀರನ್ನು ಗಿಡಗಳಿಗೆ ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಹಾಕಬೇಕು. ಅಡುಗೆ ಮಾಡುವಾಗ ನಾವು ಬೇಳೆ, ಅಕ್ಕಿ ಮುಂತಾದವುಗಳನ್ನು ತೊಳೆದುಕೊಳ್ಳುತ್ತೇವೆ. ಆ ನೀರನ್ನು ಹಾಗೆಯೇ ವ್ಯರ್ಥ ಮಾಡದೇ ಅದನ್ನು ಕುಂಡಗಳಲ್ಲಿ ಹಾಕಬೇಕು. ಬೇರೆ ನೀರಿಗಿಂತ ಈ ನೀರು ಹೆಚ್ಚು ಪೋಷಕವಾಗಿರುತ್ತದೆ; ಹಾಗೆಯೇ ಇದರಿಂದ ನೀರಿನ ಅಪವ್ಯಯವೂ ತಪ್ಪುತ್ತದೆ. ಒಂದು ಲೀಟರ್ ನೀರಿನಲ್ಲಿ ಒಂದು ಬಟ್ಟಲಿನಷ್ಟು ಮಜ್ಜಿಗೆ ಬೆರೆಸಿ ಅದನ್ನು ಗಿಡಗಳಿಗೆ ಹಾಕಿದರೆ ಗಿಡಗಳ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಹಾಗೆಯೇ ಒಂದು ಲೀಟರ್ ನೀರಿನಲ್ಲಿ ಒಂದು ಚಿಟಿಕೆ ಅರಿಶಿನ ಪುಡಿ ಮತ್ತು ಅರ್ಧ ಲೋಟ ತಾಜಾ (ಕಾಯಿಸದೇ ಇರುವ) ಹಾಲನ್ನು ಹಾಕಿ ಮಾಡಿದ ಮಿಶ್ರಣವನ್ನು ಗಿಡಗಳಿಗೆ ಹಾಕುವುದು ಲಾಭದಾಯಕವಾಗಿದೆ.

– ಶ್ರೀ ರಾಜೇಂದ್ರ ಭಟ್, ಲೋಕಸತ್ತಾ (ಮರಾಠಿ ದಿನಪತ್ರಿಕೆ) (೧೪.೫.೨೦೧೫)

೨ ಇ. ಗಿಡಕ್ಕೆ ಮೇಲುಗೊಬ್ಬರ (ತೆಳು ಗೊಬ್ಬರ) ಹಾಕುವುದು ಮತ್ತು ಅದನ್ನು ತಯಾರಿಸುವ ಪದ್ಧತಿ : ಕುಂಡಗಳಲ್ಲಿನ ಗಿಡಗಳಿಗೆ ೧೫ ದಿನಗಳ ಅಂತರದಲ್ಲಿ ಮೇಲುಗೊಬ್ಬರ ನೀಡಿದರೆ ಅವು ಹೆಚ್ಚು ಪ್ರಫುಲ್ಲಿತ ಮತ್ತು ಹೂವು-ಎಲೆಗಳಿಂದ ತುಂಬಿರುತ್ತವೆ. ಅದಕ್ಕಾಗಿ ಅಂದಾಜು ಒಂದು ಬಟ್ಟಲಿನಷ್ಟು ಹಸುವಿನ ಸೆಗಣಿಯನ್ನು ಒಂದು ತಂಬಿಗೆಯಷ್ಟು ನೀರಿನಲ್ಲಿ ಹಾಕಿ ಕೋಲಿನಿಂದ ಬೆರೆಸಿ ೨೪ ಗಂಟೆಗಳವರೆಗೆ ನೆನೆಯಲು ಬಿಡಬೇಕು. ಅನಂತರ ಅದರಲ್ಲಿ ಭೀಮಸೇನಿ ಕರ್ಪೂರದ ಒಂದು ಚಿಕ್ಕ ತುಂಡನ್ನು ಪುಡಿ ಮಾಡಿ ಹಾಕಬೇಕು ಮತ್ತು ಈ ಮಿಶ್ರಣವನ್ನು ಪುನಃ ಕಲಕಬೇಕು. ಹೀಗೆ ಸಿದ್ಧವಾದ ಗೊಬ್ಬರವನ್ನು ಪ್ರತಿಯೊಂದು ಗಿಡಕ್ಕೆ ಒಂದು ಲೋಟದಷ್ಟು ಹಾಕಬೇಕು. ಈ ಮೇಲುಗೊಬ್ಬರವನ್ನು ಹಾಕುವ ಮೊದಲು ಗಿಡಕ್ಕೆ ನೀರು ಹಾಕುವುದು ಆವಶ್ಯಕವಾಗಿದೆ; ಏಕೆಂದರೆ ಕೆಲವು ಗಿಡಗಳು ಬಹಳಷ್ಟು ಪ್ರಮಾಣದಲ್ಲಿ ಈ ನೀರನ್ನು ಹೀರಿಕೊಳ್ಳುತ್ತವೆ. ಇದರಿಂದ ಅವುಗಳ ಬೇರುಗಳಿಗೆ ಹಾನಿಯಾಗಿ ಗಿಡಗಳು ಸಾಯಬಹುದು.

೨ ಇ ೧. ನೈಟ್ರೋಜನ್, ಫಾಸ್ಫರಸ್ ಮತ್ತು ಪೊಟ್ಯಾಶಿಯಮ್ ಘಟಕಗಳನ್ನು ಪೂರೈಸುವ ನೈಸರ್ಗಿಕ ಪದಾರ್ಥಗಳು : ಗಿಡಗಳ ಒಣಗಿದ ಎಲೆಗಳು, ತರಕಾರಿಗಳ ದಂಟುಗಳು, ತರಕಾರಿಯ ಸಿಪ್ಪೆಗಳನ್ನು ಗೊಬ್ಬರವೆಂದು ಬಳಸಬಹುದು. ಇವುಗಳಿಂದ ಮಣ್ಣಿನ ಪೋಷಕಾಂಶಗಳು ಹೆಚ್ಚಾಗುತ್ತದೆ. ಗಿಡಗಳಿಗೆ ನೈಟ್ರೋಜನ್ ಸಿಗಲು ಮೆಂತ್ಯೆ ಸೊಪ್ಪಿನ ಹೊರಗೆ ಚೆಲ್ಲುವ ಭಾಗವನ್ನು (ತ್ಯಾಜ್ಯವನ್ನು) ಗೊಬ್ಬರವೆಂದು ಉಪಯೋಗಿಸಬಹುದು. ಫಾಸ್ಫರಸ್ ಸಿಗಲು ಕೋಸು (ಗೋಬಿ), ಹೂಕೋಸು (ಫ್ಲವರ್)ಗಳ ಕಾಂಡಗಳನ್ನು ಗೊಬ್ಬರವೆಂದು ಬಳಸಬಹುದು. ಬಹಳಷ್ಟು ಬಾರಿ ಪೊಟ್ಯಾಶಿಯಮ್‌ನ ಕೊರತೆಯಿಂದಾಗಿ ಎಲೆಗಳು ತುಕ್ಕು ಬಣ್ಣದಂತೆ ಕಾಣಿಸುತ್ತವೆ. ಇಂತಹ ಸಮಯದಲ್ಲಿ ಬಾಳೆಹಣ್ಣು, ಪಪ್ಪಾಯಿಯ ಎಲೆಗಳನ್ನು ಬಳಸಬಹುದು. [ಆಧಾರ : ಲೋಕಸತ್ತಾ (ಮರಾಠಿ ದಿನಪತ್ರಿಕೆ) (೨೨.೪.೨೦೧೫)]

೨ ಈ. ನಿರ್ದಿಷ್ಟ ಸಮಯದ ನಂತರ ಕುಂಡದ ಮಣ್ಣನ್ನು ಬದಲಾಯಿಸುವುದು

೨ ಈ ೧. ಕುಂಡಗಳಲ್ಲಿನ ಮಣ್ಣನ್ನು ಬದಲಾಯಿಸುವ ಪದ್ಧತಿ : ದೊಡ್ಡ ಕುಂಡಗಳಲ್ಲಿನ ಮಣ್ಣನ್ನು ವರ್ಷದಲ್ಲಿ ಒಮ್ಮೆ ಮತ್ತು ಚಿಕ್ಕ ಕುಂಡಗಳಲ್ಲಿನ ಮಣ್ಣನ್ನು ೬ ತಿಂಗಳುಗಳಲ್ಲಿ ಒಮ್ಮೆ ಬದಲಾಯಿಸಬೇಕು. ಮಣ್ಣನ್ನು ಬದಲಾಯಿಸುವಾಗ ಎದ್ದು ನಿಂತು ತಮ್ಮ ಎಡಗೈಯ ತೋರುಬೆರಳು ಮತ್ತು ಮಧ್ಯದ ಬೆರಳಿನಲ್ಲಿ ಗಿಡವನ್ನು ಸಾವಕಾಶವಾಗಿ ಹಿಡಿದು ಕುಂಡವನ್ನು ಕೈಯ ಮೇಲೆ ಮಗುಚಬೇಕು ಮತ್ತು ಇನ್ನೊಂದು ಕೈಯಿಂದ ಕುಂಡದ ಅಂಚನ್ನು ಕೆಳಗಿನಿಂದ ಮೇಲೆ ಸ್ವಲ್ಪ ಅಲುಗಾಡಿಸಬೇಕು. ಇದರಿಂದ ಕುಂಡದಲ್ಲಿನ ಗಿಡ ಮಣ್ಣಿನೊಂದಿಗೆ ಹೊರಗೆ ಬರುವುದು (ಚೀಲದಲ್ಲಿ ನೆಟ್ಟ ಗಿಡದ ಮಣ್ಣನ್ನು ಬದಲಾಯಿಸಲು ಗಿಡವಿರುವ ಚೀಲವನ್ನು ಹರಿವಾದ ಬ್ಲೇಡ್‌ನಿಂದ ನಿಧಾನವಾಗಿ ನೇರವಾಗಿ ಕತ್ತರಿಸಿದ ಅದರಿಂದ ಗಿಡವನ್ನು ಮಣ್ಣಿನ ಹೊರಗೆ ತೆಗೆಯಬೇಕು). ಅನಂತರ ಹಗುರವಾಗಿ ಗಿಡದ ಬೇರುಗಳ ಸುತ್ತಲಿರುವ ಮಣ್ಣನ್ನು ನಿಧಾನವಾಗಿ ತೆಗೆದು ಅದರ ಬೇರುಗಳಿಗೆ ನೋವಾಗದ ರೀತಿಯಲ್ಲಿ ಪುನಃ ಕುಂಡದಲ್ಲಿ ನೆಡಬೇಕು ಮತ್ತು ನೀರು ಹಾಕಬೇಕು. ಸಾಧ್ಯವಾದಲ್ಲಿ ಸಂಜೆಯ ಸಮಯ ಮಣ್ಣು ಬದಲಾಯಿಸಬೇಕು; ಅಂದರೆ ರಾತ್ರಿಪೂರ್ತಿ ವಿಶ್ರಾಂತಿ ದೊರೆಯುವುದರಿಂದ ಬೆಳಗ್ಗಿನವರೆಗೆ ಗಿಡವು ಪುನಃ ನಳನಳಿಸುತ್ತದೆ. ಕೆಲವೊಮ್ಮೆ ಅನಾವಶ್ಯಕ ಬೇರುಗಳನ್ನು ಕತ್ತರಿಸಬೇಕಾಗುತ್ತದೆ. ಇಂತಹ ಸಮಯದಲ್ಲಿ ಅವುಗಳಿಗೆ ಪೂರ್ಣ ವಿಶ್ರಾಂತಿ ದೊರೆಯಬೇಕೆಂದು ನೀರು ಹಾಕಿದ ನಂತರ ಆ ಗಿಡವನ್ನು ನಾಲ್ಕು ದಿನಗಳವರೆಗೆ ನೆರಳಿನಲ್ಲಿ ಇಡಬೇಕು. ಸಾಮಾನ್ಯವಾಗಿ ಕುಂಡದಲ್ಲಿರುವ ಗಿಡಕ್ಕೆ ಸೂರ್ಯನ ಬಹಳಷ್ಟು ಬೆಳಕಿನ ಆವಶ್ಯಕತೆಯಿರುವುದರಿಂದ ಆದಷ್ಟು ಗಿಡವನ್ನು ಸೂರ್ಯನ ಬೆಳಕು ಹೆಚ್ಚಿನ ಪ್ರಮಾಣದಲ್ಲಿ ದೊರೆಯುವ ಜಾಗದಲ್ಲಿ ಇಡಬೇಕು.

೨ ಈ ೨. ದೊಡ್ಡ ಆಕಾರದ ಕುಂಡಗಳಲ್ಲಿನ ಮಣ್ಣನ್ನು ಬದಲಾಯಿಸುವಾಗ ತೆಗೆದುಕೊಳ್ಳಬೇಕಾದ ಜಾಗರೂಕತೆ : ದೊಡ್ಡ ಕುಂಡಗಳಲ್ಲಿನ ಮಣ್ಣನ್ನು ಬದಲಾಯಿಸುವುದು ಸ್ವಲ್ಪ ಕಠಿಣವಾಗಿರುತ್ತದೆ; ಆದುದರಿಂದ ಇಂತಹ ಕುಂಡಗಳಲ್ಲಿನ ಮಣ್ಣನ್ನು ಬದಲಾಯಿಸುವ ಮೊದಲು ಆವಶ್ಯಕವಿರುವಷ್ಟು ನೀರು ಹಾಕಿ ನೀರು ಸೋರಿ ಹೋದ ನಂತರ ಕುಂಡವನ್ನು ಭೂಮಿಗೆ ಸಮಾಂತರವಾಗಿ ಅಡ್ಡ ಇಡಬೇಕು. ನೀರಿನಿಂದ ಮಣ್ಣು ಒದ್ದೆಯಾಗುವುದರಿಂದ ಗಿಡವನ್ನು ಬೇರಿನ ಬಳಿ ಹಿಡಿದು ನಿಧಾನವಾಗಿ ಹೊರಗೆ ಎಳೆದರೆ ಅದು ಮಣ್ಣಿನೊಂದಿಗೆ ಕುಂಡದಿಂದ ಹೊರಗೆ ಬರುತ್ತದೆ.

೨ ಉ. ಶಿಲೀಂಧ್ರ ರೋಗಗಳಿಗೆ ಕಡಿವಾಣ ಹಾಕಲು ಗಿಡಗಳನ್ನು ಕೀಟಾಣು ರಹಿತಗೊಳಿಸುವುದು ಆವಶ್ಯಕವಾಗಿದೆ : ಬಹಳಷ್ಟು ಬಾರಿ ನಾವು ಹೊರಗಿನಿಂದ ಗಿಡಗಳನ್ನು ಖರೀದಿಸಿ ತರುತ್ತೇವೆ. ಆ ಗಿಡಗಳ ಮೇಲೆ ಅಥವಾ ಅವುಗಳ ಕಾಂಡದ ಮೇಲೆ ವಿವಿಧ ಕೀಟ ಅಥವಾ ಇರುವೆಗಳು ಇರುವ ಸಾಧ್ಯತೆ ಇದೆ. ಇಂತಹ ಸಮಯದಲ್ಲಿ ಸುಮಾರು ಅರ್ಧ ಬಕೇಟು ನೀರಿನಲ್ಲಿ ೧ ಚಮಚ ಅರಿಶಿನ ಪುಡಿ, ೪ ಚಿಟಿಕೆ ಹಿಂಗು ಮತ್ತು ಕರ್ಪೂರದ ಎರಡು ತುಂಡುಗಳನ್ನು ಪುಡಿ ಮಾಡಿ ಹಾಕಬೇಕು ಮತ್ತು ಆ ನೀರನ್ನು ಚೆನ್ನಾಗಿ ಕದಡಬೇಕು. ಪ್ರತಿಯೊಂದು ಗಿಡವನ್ನು ೧೦ ನಿಮಿಷ ಆ ನೀರಿನಲ್ಲಿ ಮುಳುಗಿಸಿಟ್ಟು ನಂತರ ನೆಡಬೇಕು. ಇದರಿಂದ ಶಿಲೀಂಧ್ರ ರೋಗಗಳಿಗೆ ಕಡಿವಾಣ ಬೀಳುತ್ತದೆ.

೨ ಊ. ಕುಂಡಗಳಲ್ಲಿನ ಗಿಡಗಳ ಮೇಲಿನ ಕೀಟಗಳನ್ನು ನಿರೋಧಿಸಲು ಮಾಡಬೇಕಾದ ಮನೆಮದ್ದು : ಕೆಲವು ಬಾರಿ ಕುಂಡಗಳಲ್ಲಿನ ಗಿಡಗಳಿಗೆ ಇರುವೆ, ಕಂಬಳಿಹುಳ, ಜೇಡದಂತಹ ಕೀಟಗಳು ಬಾಧಿಸುತ್ತವೆ. ಈ ಕೀಟಗಳು ಗಿಡದ ಎಲೆಗಳನ್ನು ತಿನ್ನುತ್ತವೆ ಅಥವಾ ಅವುಗಳನ್ನು ಹಾಳು ಮಾಡುತ್ತವೆ. ದೊಡ್ಡ ಕಂಬಳಿಹುಳಗಳಿದ್ದರೆ ಅವುಗಳನ್ನು ತೆಗೆದು ಸಾಯಿಸಬೇಕು. ಗಿಡಗಳ ಮೇಲಿನ ಕೀಟಗಳನ್ನು ನಿವಾರಿಸಲು ಮುಂದೆ ನೀಡಲಾದ ಯಾವುದೇ ಮನೆಮದ್ದನ್ನು ಮಾಡಿ ನೋಡಬಹುದು.

೧. ಎರಡು ಚಮಚ ತಂಬಾಕು (ಹೊಗೆಸೊಪ್ಪು) ಅರ್ಧತಂಬಿಗೆ ನೀರಿನಲ್ಲಿ ಬೆಳಗ್ಗೆ ನೆನೆಯಲು ಹಾಕಿ ಮಧ್ಯಾಹ್ನ ಅದನ್ನು ಅದೇ ನೀರಿನಲ್ಲಿ ಕುದಿಸಿ ಅದರ ಅರ್ಧ ತಂಬಿಗೆ ಕಷಾಯ ಮಾಡಬೇಕು. ಈ ಕಷಾಯ ತಣ್ಣಗಾದ ಮೇಲೆ ಸಿಂಪಡಿಸುವ ಬಾಟಲಿಯಲ್ಲಿ ಹಾಕಿ ಸಾಯಂಕಾಲದ ವೇಳೆ ಗಿಡದ ಎಲ್ಲ ಬದಿಗಳಲ್ಲಿ ಸಿಂಪಡಿಸಬೇಕು. ಹೆಚ್ಚಿನ ಹುಳಗಳು ಸಾಯಂಕಾಲಕ್ಕೆ ಬರುವುದರಿಂದ ಆಗ ಸಿಂಪಡಿಸುವುದು ಒಳ್ಳೆಯದಾಗಿದೆ. ಹುಳಗಳು ಎಲೆಯ ಕೆಳಗೆ ಅಡಗಿರುವುದರಿಂದ ಎಲೆಯ ಕೆಳಗೂ ಈ ನೀರನ್ನು ಸಿಂಪಡಿಸಬೇಕು.

೨. ತಂಬಾಕಿನಂತೆಯೇ ಕಹಿಬೇವಿನ ಕಷಾಯ ಮಾಡಿ ಅದನ್ನೂ ಸಿಂಪಡಿಸಬಹುದು.

೩. ಕೆಲವು ಬಾರಿ ಕೇವಲ ಕರ್ಪೂರದ ಅಥವಾ ಹಿಂಗಿನ ನೀರಿನಿಂದಲೂ ಇರುವೆ-ಹುಳಗಳು ಓಡಿಹೋಗುತ್ತವೆ. ಕರ್ಪೂರದ ಅಥವಾ ಹಿಂಗಿನ ನೀರು ತಯಾರಿಸುವಾಗ ಹಿಂಗು ಅಥವಾ ಕರ್ಪೂರವನ್ನು ಸಾಕಷ್ಟು ನೀರಿನಲ್ಲಿ ಉಗ್ರ ವಾಸನೆ ಬರುವಷ್ಟು ಪ್ರಮಾಣದಲ್ಲಿ ಹಾಕಬೇಕು.

– ಶ್ರೀ. ಮಾಧವ ರಾಮಚಂದ್ರ ಪರಾಡಕರ, ವಾಳಶಿ, ಡಿಚೋಲಿ, ಗೋವಾ.

೨ ಎ. ಗಿಡಗಳಿಗೆ ರೋಗ ಬಂದರೆ ಭೌತಿಕ ಉಪಾಯಗಳ ಜೊತೆಗೆ ಆಧ್ಯಾತ್ಮಿಕ ಉಪಾಯಗಳನ್ನೂ ಮಾಡಬೇಕು ! : ಬಹಳಷ್ಟು ಬಾರಿ ಗಿಡಗಳ ಮೇಲೆ ಕೀಟಗಳು ನಿರ್ಮಾಣವಾಗುವುದು, ಶಿಲೀಂಧ್ರ ರೋಗ, ಗಿಡಗಳು ಒಣಗುವುದು ಮುಂತಾದ ತೊಂದರೆಗಳ ಹಿಂದೆ ಆಧ್ಯಾತ್ಮಿಕ ಕಾರಣಗಳೂ ಇರುತ್ತವೆ, ಆದುದರಿಂದ ಗಿಡಗಳ ರಕ್ಷಣೆಗಾಗಿ ಭೌತಿಕ ಪರಿಹಾರಗಳೊಂದಿಗೆ ಗಿಡಗಳ ಮೇಲೆ ವಿಭೂತಿ ಊದುವುದು, ಗಿಡದ ಸುತ್ತಲೂ ದೇವತೆಗಳ ನಾಮಪಟ್ಟಿಗಳ ಮಂಡಲವನ್ನು ಹಾಕುವುದು, ಮಂತ್ರಗಳಿಂದ ನೀರನ್ನು ಅಭಿಮಂತ್ರಿಸಿ ಗಿಡಗಳ ಮೇಲೆ ಸಿಂಪಡಿಸುವುದು ಇಂತಹ ಆಧ್ಯಾತ್ಮಿಕ ಪರಿಹಾರಗಳನ್ನೂ ಮಾಡಬೇಕು.

(ಆಧಾರ : ಸನಾತನ ಗ್ರಂಥ ‘ಔಷಧಿ ಸಸ್ಯಗಳನ್ನು ಹೇಗೆ ಬೆಳೆಸಬೇಕು ?’)

Leave a Comment