ಆಪತ್ಕಾಲದಲ್ಲಿ ಜೀವಂತರಾಗಿರಲು ಮಾಡಬೇಕಾದ ಪೂರ್ವತಯಾರಿ – ಲೇಖನ ೫

ಲೇಖನ ೧ | ಲೇಖನ ೨ಲೇಖನ ೩ | ಲೇಖನ ೪

ನೆರೆ, ಭೂಕಂಪ, ಮೂರನೇ ಮಹಾಯುದ್ಧ, ಕೊರೋನಾ ಮಹಾಮಾರಿಯಂತಹ ಸಂಕಟಗಳು, ಮುಂತಾದ ಆಪತ್ಕಾಲದಲ್ಲಿ ಸುರಕ್ಷಿತವಾಗಿ ಉಳಿಯಲು ಮಾಡಬೇಕಾದ ಸಿದ್ಧತೆಯ ಬಗೆಗಿನ ಈ ಲೇಖನಮಾಲೆಯಲ್ಲಿನ ಒಲೆ, ಗೋಬರ್-ಗ್ಯಾಸ್ ಮುಂತಾದವುಗಳ ಬಗ್ಗೆ, ತರಕಾರಿ, ಹಣ್ಣುಗಳು ಮುಂತಾದವುಗಳ ತೋಟಗಾರಿಕೆ ಮಾಡುವ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡೆವು.  ಈಗ ಈ ಲೇಖನದಲ್ಲಿ ದೀರ್ಘ ಕಾಲ ಉಳಿಯುವ ಪದಾರ್ಥಗಳ ವಿವೇಚನೆಯನ್ನು ಮಾಡಲಾಗಿದೆ. ಆಪತ್ಕಾಲದಲ್ಲಿ ದಿನನಿತ್ಯದಂತೆ ತಿಂಡಿ ಅಥವಾ ಊಟವನ್ನು ತಯಾರಿಸಲು ಸಾಧ್ಯವಾಗದಿದ್ದರೆ, ಉಪವಾಸ ಬೀಳುವ ಪ್ರಸಂಗ ಬರಬಾರದೆಂದು, ಮನೆಯಲ್ಲಿ ಮೊದಲೇ ದೀರ್ಘಕಾಲ ಉಳಿಯುವ ಪದಾರ್ಥಗಳನ್ನು ಮಾಡಿಟ್ಟರೆ ಸಹಾಯವಾಗುತ್ತದೆ.

೫. ದೀರ್ಘಕಾಲ ಉಳಿಯುವ ವಿವಿಧ ತಿಂಡಿತಿನಿಸುಗಳನ್ನು ಖರೀದಿಸಿಡುವುದು ಅಥವಾ ಮನೆಯಲ್ಲಿ ತಯಾರಿಸಿಡುವುದು

ಆಪತ್ಕಾಲದಲ್ಲಿ ಅಡುಗೆಯ ಇಂಧನದ ಅಭಾವವಾಗುವುದು, ಮನೆಯಲ್ಲಿ ಎಲ್ಲರೂ ಕಾಯಿಲೆ ಬೀಳುವುದು, ಆಕಸ್ಮಿಕವಾಗಿ ಇತರ ಸ್ಥಳಗಳಿಗೆ ಸ್ಥಳಾಂತರವಾಗುವುದು, ಮಾರುಕಟ್ಟೆಯಲ್ಲಿ ಹಣ್ಣು ತರಕಾರಿ ಇತ್ಯಾದಿ ಸಿಗದಿರುವುದು ಮುಂತಾದ ಪರಿಸ್ಥಿತಿಗಳು ಉದ್ಭವಿಸಬಹುದು. ಇಂತಹ ಸಮಯದಲ್ಲಿ ದಿನನಿತ್ಯದಂತೆ ತಿಂಡಿ ಮತ್ತು ಊಟವನ್ನು ತಯಾರಿಸಲು ಸಾಧ್ಯವಾಗಬಹುದು ಎಂದು ಹೇಳಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ದೀರ್ಘಕಾಲ ಬಾಳುವ ಸಂಗ್ರಹಿಸಿಟ್ಟ ತಿಂಡಿ ತಿನಿಸುಗಳು ಉಪಯುಕ್ತವಾಗುವವು.

ಅ. ಮುಂದೆ ನೀಡಿದ ಪದಾರ್ಥಗಳ ಪೈಕಿ ಕೆಲವು ಪದಾರ್ಥಗಳು (ಉದಾ. ಖಾಕರಾ, ಉಪ್ಪಿನಕಾಯಿ, ಪಾನೀಯಗಳು) ಮಾರುಕಟ್ಟೆಯಲ್ಲಿ ಸಿಗುತ್ತವೆ. ಅವುಗಳನ್ನು ಖರೀದಿಸಿಡಬಹುದು. ಮನೆಯಲ್ಲಿಯೂ ಇಂತಹ ಪದಾರ್ಥಗಳನ್ನು ತಯಾರಿಸುವ ರೂಢಿಯನ್ನು ಈಗಿನಿಂದಲೇ ಮಾಡಿಕೊಳ್ಳಬೇಕು; ಏಕೆಂದರೆ ಮುಂದೆ ಆಪತ್ಕಾಲವು ತೀವ್ರವಾಗುತ್ತಾ ಹೋಗುತ್ತಿದ್ದಂತೆ ಈ ಪದಾರ್ಥಗಳು ಮಾರುಕಟ್ಟೆಯಲ್ಲಿ ಸಿಗುವುದೂ ಕಠಿಣವಾಗುವುದು.

ಆ. ಮುಂದೆ ನೀಡಿದ ಪದಾರ್ಥಗಳು ಉದಾಹರಣೆಗಳಾಗಿವೆ, ಹಾಗೆಯೇ ಅವುಗಳನ್ನು ಕೊಡುವಾಗ ಹೆಚ್ಚಾಗಿ ಮಹಾರಾಷ್ಟ್ರದ ದೃಷ್ಟಿಯಿಂದ ವಿಚಾರ ಮಾಡಲಾಗಿದೆ. ವಾಚಕರು ತಮ್ಮ ರಾಜ್ಯ ಅಥವಾ ದೇಶಕ್ಕನುಸಾರ ಗೊತ್ತಿರುವ ದೀರ್ಘಕಾಲ ಬಾಳುವ ಪದಾರ್ಥಗಳನ್ನೂ ಖರೀದಿಸಬಹುದು ಅಥವಾ ಮನೆಯಲ್ಲಿ ತಯಾರಿಸಬಹುದು.

ಇ. ನಾವು ಈ ಲೇಖನದಲ್ಲಿ ದೀರ್ಘಕಾಲ ಬಾಳುವ ಪದಾರ್ಥಗಳನ್ನು ತಯಾರಿಸುವ ವಿಧಾನದ ವಿವರಣೆ ಕೊಟ್ಟಿಲ್ಲ. ಈ ಕೃತಿಗಳು ಹೆಚ್ಚಿನವರಿಗೆ ಗೊತ್ತಿರುತ್ತವೆ. ಆದರೆ ಆಪತ್ಕಾಲದ ದೃಷ್ಟಿಯಿಂದ ವಿಚಾರ ಮಾಡಿ ಬಹುತೇಕ ಸ್ಥಳಗಳಲ್ಲಿ ‘ದೀಘ್ರ ಕಾಲ ಬಾಳಿಕೆ ಬರುವ ಪದಾರ್ಥಗಳನ್ನು ಹೆಚ್ಚು ಕಾಲ ಹೇಗೆ ಉಳಿಸಬಹುದು’, ಈ ಸಂದರ್ಭದಲ್ಲಿನ ಉಪಯುಕ್ತ ಸೂಚನೆಗಳನ್ನು ನೀಡಲಾಗಿದೆ.

‘ಬಾಳಿಕೆಬರುವ ಪದಾರ್ಥಗಳನ್ನು ಹೇಗೆ ತಯಾರಿಸಬೇಕು’, ಎಂಬುದರ ಬಗೆಗಿನ ಮಾಹಿತಿಯು ವಾಚಕರಿಗೆ ಇಲ್ಲದಿದ್ದರೆ ಅವರು ಈ ಮಾಹಿತಿಯನ್ನು ಕುಟುಂಬದ ಹಿರಿಯರಿಂದ ತಿಳಿದುಕೊಳ್ಳಬೇಕು ಅಥವಾ ಅದಕ್ಕಾಗಿ ಪಾಕಶಾಸ್ತ್ರದ ಪುಸ್ತಕಗಳನ್ನು ಓದಬೇಕು ಅಥವಾ ‘ಯೂ ಟ್ಯೂಬ್’ನಲ್ಲಿ ಈ ಪದಾರ್ಥಗಳನ್ನು ಹೇಗೆ ತಯಾರಿಸಬೇಕು ಎಂದು ನೋಡಬೇಕು.

ಈ. ಲೇಖನದಲ್ಲಿ ಸಾಧ್ಯವಿದ್ದಲ್ಲಿ ಪದಾರ್ಥಗಳ ಬಾಳಿಕೆಯ ಸರಾಸರಿ ಕಾಲಾವಧಿಯನ್ನೂ ನೀಡಲಾಗಿದೆ. ಈ ಕಾಲಾವಧಿಯು ಆಯಾ ಪ್ರದೇಶದ ಹವಾಮಾನ, ಬಾಳಿಕೆ ಬರುವ ಪದಾರ್ಥಗಳನ್ನು ತಯಾರಿಸುವಾಗ ತೆಗೆದುಕೊಂಡ ಕಾಳಜಿ ಮುಂತಾದ ಘಟಕಗಳ ಮೇಲೆಯೂ ಅವಲಂಬಿಸಿದೆ.

ಅ. ಅಕ್ಕಿ ಹಿಟ್ಟು ಮತ್ತು ರಾಗಿ ಹಿಟ್ಟು, ಹಾಲಿನ ಪೌಡರ್ ಮುಂತಾದ ಪದಾರ್ಥಗಳು

ಅ ೧. ಅಕ್ಕಿ ಮತ್ತು ರಾಗಿ ಹಿಟ್ಟು

ರಾಗಿ ಹಿಟ್ಟು

ಇವೆರಡರಲ್ಲಿ ರಾಗಿಯ ಹಿಟ್ಟು ಹೆಚ್ಚು ಪೌಷ್ಟಿಕವಾಗಿದೆ. ಅಕ್ಕಿಯನ್ನು ೩ – ೪ ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಜರಡಿಯಲ್ಲಿ ನೀರಿಳಿದು ಹೋಗುವ ತನಕ ಇಡಬೇಕು. ಸಾಧಾರಣ ೧ ಗಂಟೆಯ ನಂತರ ಅಕ್ಕಿಯ ನೀರಿಳಿದು ಹೋದನಂತರ ಮತ್ತು ಅದರಲ್ಲಿನ ಹಸಿತನ ಕಡಿಮೆಯಾದ ನಂತರ ಸ್ವಲ್ಪ ಸ್ವಲ್ಪ ಅಕ್ಕಿಯನ್ನು ಮಧ್ಯಮ ಉಷ್ಣತೆಯ ಮೇಲೆ ಹುರಿಯಬೇಕು. ಒಂದು ಬಾರಿ ಸ್ವಲ್ಪ ಅಕ್ಕಿಯನ್ನು ತೆಗೆದುಕೊಂಡರೆ ಅವು ಅರಳುತ್ತವೆ. ಕೊನೆಗೆ ಹುರಿದ ಅಕ್ಕಿಯ ಹಿಟ್ಟು ಮಾಡಿ ಒಣ ಭರಣಿಯಲ್ಲಿ ತುಂಬಿಡಬೇಕು. ಈ ಹಿಟ್ಟು ಸಾಧಾರಣ ೩ ತಿಂಗಳುಗಳ ಕಾಲ ಉಳಿಯುತ್ತದೆ. ಈ ಹಿಟ್ಟನ್ನು ಹಾಲು, ಮೊಸರು, ಮಜ್ಜಿಗೆ ಅಥವಾ ಸಾರಿನೊಂದಿಗೆ ತಿನ್ನಬಹುದು. ಹಿಟ್ಟನ್ನು ಹಾಲಿನೊಂದಿಗೆ ಸೇವಿಸುವುದಾದರೆ ಅದರಲ್ಲಿ ರುಚಿಗಾಗಿ ಸಕ್ಕರೆ ಅಥವಾ ಬೆಲ್ಲವನ್ನು ಹಾಕಬಹುದು. ಅಕ್ಕಿಯ ಹಿಟ್ಟು ತಯಾರಿಸುವ ಪದ್ಧತಿಯಂತೆಯೇ ರಾಗಿಯ ಹಿಟ್ಟನ್ನೂ ತಯಾರಿಸಿಡಬಹುದು. ಈ ಹಿಟ್ಟು ಸಹ ಸಾಧಾರಣ ೩ ತಿಂಗಳುಗಳ ಕಾಲ ಉಳಿಯುತ್ತದೆ.

ಅ ೨. ಜವೆಗೋದಿಯ ಹಿಟ್ಟು

ಜವೆಗೋದಿಯ ಹಿಟ್ಟು

ಗೋದಿಯನ್ನು ತೊಳೆದು ಜರಡಿಯಲ್ಲಿ ನೀರಿಳಿದು ಹೋಗುವ ತನಕ ಇಡಬೇಕು. ಸಾಧಾರಣ ೧ ಗಂಟೆಯಲ್ಲಿ ಗೋದಿಯ ನೀರಿಳಿದ ಮೇಲೆ ಮತ್ತು ಅದರಲ್ಲಿನ ತೇವಾಂಶ ಕಡಿಮೆಯಾದ ಮೇಲೆ ಅದನ್ನು ಮಧ್ಯಮ ಉಷ್ಣತೆಯ ಮೇಲೆ ಹುರಿಯಬೇಕು. ಅದರಲ್ಲಿ ಕಡಲೆ ಬೇಳೆ ಮತ್ತು ಜೀರಿಗೆಯನ್ನು ಹುರಿದು ಹಾಕಬೇಕು. ಎಲ್ಲವನ್ನು ಸೇರಿಸಿ ಹಿಟ್ಟು ತಯಾರಿಸಬೇಕು. ಈ ಹಿಟ್ಟನ್ನು ಗಾಳಿಯಾಡದ ಡಬ್ಬದಲ್ಲಿ ಅಥವಾ ಒಣಗಿದ ಭರಣಿಯಲ್ಲಿ ತುಂಬಿಡಬೇಕು. ಈ ಹಿಟ್ಟನ್ನು ನೀರು ಅಥವಾ ಹಾಲಿನಲ್ಲಿ ಹಾಕಿ ರುಚಿಗನುಸಾರ ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ ತಿನ್ನಬಹುದು. ಈ ಹಿಟ್ಟು ಸಾಧಾರಣ ೬ ತಿಂಗಳುಗಳ ಕಾಲ ಉಳಿಯುತ್ತದೆ.

ಪ್ರದೇಶಗಳಿಗನುಸಾರ ಜವೆಗೋದಿಯ ಹಿಟ್ಟು ಮಾಡುವ ಪದ್ಧತಿಯು ಬೇರೆ ಬೇರೆಯಾಗಿರುತ್ತದೆ. ಕೆಲವು ಕಡೆಗಳಲ್ಲಿ ಗೋದಿಯನ್ನು ಉಪಯೋಗಿಸದೇ ಜವೇ ಗೋದಿಯನ್ನು ಉಪಯೋಗಿಸುತ್ತಾರೆ ಮತ್ತು ಕೆಲವು ಕಡೆಗಳಲ್ಲಿ ಕೇವಲ ಕಡಲೆಗಳನ್ನು ಹುರಿದು ಅದರ ಹಿಟ್ಟು ಮಾಡುತ್ತಾರೆ. ೫ ರಿಂದ ೭ ಧಾನ್ಯಗಳನ್ನು ಒಟ್ಟು ಸೇರಿಸಿ ಮೇಲಿನಂತೆ ಹುರಿದು ಅದರ ಹಿಟ್ಟನ್ನೂ ಮಾಡಿಡಬಹುದು.

– ಶ್ರೀಮತಿ ಕ್ಷಮಾ ರಾಣೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಫೆಬ್ರುವರಿ ೨೦೨೦)

ಅ ೩. ಗೋದಿ ಅಥವಾ ರಾಗಿಯ ಸತ್ತ್ವ 

ರಾಗಿಯ ಸತ್ತ್ವ

ಗೋದಿ ಅಥವಾ ರಾಗಿಯ ರಸವನ್ನು ತೆಗೆದು ಅದನ್ನು ಒಣಗಿಸಿದರೆ ಅದರ ಪುಡಿ ತಯಾರಾಗುತ್ತದೆ. ಅದಕ್ಕೆ ‘ಸತ್ತ್ವ’ ಎಂದು ಹೇಳುತ್ತಾರೆ. ಈ ಪುಡಿಯು ಪೌಷ್ಟಿಕವಾಗಿದ್ದು ಹಾಲಿನಲ್ಲಿ ಅಥವಾ ನೀರಿನಲ್ಲಿ ಬೇಯಿಸಿ ಅದರಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ತಿನ್ನಬಹುದು. ಈ ಪುಡಿಯು ಸಾಧಾರಣ ೩ ತಿಂಗಳು ಉಳಿಯುತ್ತದೆ.

– ಸೌ. ಅರ್ಪಿತಾ ದೇಶಪಾಂಡೆ, ಸನಾತನ ಆಶ್ರಮ, ಮೀರಜ. (ಫೆಬ್ರುವರಿ ೨೦೧೯)

ಅ ೪. ಯಂತ್ರಗಳ ಮೂಲಕ ಪ್ರಕ್ರಿಯೆ ಮಾಡಿದ ಪೌಷ್ಟಿಕ ಪದಾರ್ಥಗಳು

ಹಾಲಿನ ಹುಡಿ, ಚಿಕ್ಕ ಮಕ್ಕಳಿಗಾಗಿ ವಿವಿಧ ಪೋಷಕ ಘಟಕಗಳಿರುವ ಪುಡಿಗಳು, ಉದಾ. ಲ್ಯಾಕ್ಟೊಜೆನ್ (Lactogen), ಸೆರಿಲ್ಯಾಕ್ (Cerelac). ಸೆರಿಲ್ಯಾಕ್’ನ್ನು ಪೂರಕ ಆಹಾರವೆಂದು ರೋಗಿಗಳು ಮತ್ತು ವಯೋವೃದ್ಧರು ತಿನ್ನಬಹುದು.

ಆ. ಬಿಸಿಲಿನಲ್ಲಿ ಒಣಗಿಸಿದ ರೊಟ್ಟಿ, ಹಾಗೆಯೇ ಬೆಲ್ಲದ ಹೋಳಿಗೆ ಇತ್ಯಾದಿ ಪದಾರ್ಥಗಳು

ಆ ೧. ಜೋಳ ಮತ್ತು ಸೆಜ್ಜೆಯ ರೊಟ್ಟಿ

ಈ ರೊಟ್ಟಿಗಳನ್ನು ಮಾಡುವ ಮೊದಲು ಹಿಟ್ಟಿನಲ್ಲಿ ರುಚಿಗೆ ತಕ್ಕಷ್ಟು ಖಾರ, ಉಪ್ಪು ಮತ್ತು ಹಿಂಗನ್ನು ಹಾಕಬಹುದು.

ಜೋಳದ ರೊಟ್ಟಿ

ಅ. ಜೋಳದ ಹಿಟ್ಟಿನ ತೆಳುವಾದ ರೊಟ್ಟಿಗಳನ್ನು ಮಾಡಿ ಅವುಗಳನ್ನು ಬಿಸಿಲಿನಲ್ಲಿ ಗರಿಗರಿಯಾಗುವ ತನಕ ಪೂರ್ತಿ ಒಣಗಿಸಬೇಕು. ಈ ರೊಟ್ಟಿಗಳು ಸಾಧಾರಣ ೧ ತಿಂಗಳು ಉಳಿಯುತ್ತವೆ.

ಆ. ಸೆಜ್ಜೆಯ ಹಿಟ್ಟಿನಿಂದಲೂ ತೆಳುವಾದ ರೊಟ್ಟಿಗಳನ್ನು ಮಾಡಿ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿಡಬಹುದು. ಈ ರೊಟ್ಟಿಗಳು ಜೋಳದ ರೊಟ್ಟಿಗಿಂತ ಹೆಚ್ಚು ರುಚಿಕರವಾಗಿರುತ್ತವೆ. ಈ ರೊಟ್ಟಿಗಳು ಸಾಧಾರಣ ೨ ತಿಂಗಳು ಉಳಿಯುತ್ತವೆ.

ಬಿಸಿಲಿನಲ್ಲಿ ಗರಿಗರಿಯಾಗುವ ತನಕ ಒಣಗಿದ ರೊಟ್ಟಿಗಳನ್ನು ಗಟ್ಟಿ ಮುಚ್ಚಳವಿರುವ ಡಬ್ಬದಲ್ಲಿ ತುಂಬಿಡಬೇಕು. ಈ ರೊಟ್ಟಿಗಳನ್ನು ತುಂಡು ಮಾಡಿ ಅವುಗಳ ಮೇಲೆ ಬಿಸಿ ಸಾರನ್ನು ಹಾಕಿಕೊಂಡು ತಿನ್ನಬಹುದು.

ಆ ೨. ಬೆಲ್ಲದ ಹೊಳಿಗೆ

ಬೆಲ್ಲದ ಹೊಳಿಗೆ

ಬೆಲ್ಲದ ಹೋಳಿಗೆಯನ್ನು ಚೆನ್ನಾಗಿ ಬೇಯಿಸಬೇಕು. ಹೋಳಿಗೆಯನ್ನು ಬೇಯಿಸಿದ ನಂತರ ಅದನ್ನು ಸಂಪೂರ್ಣ ತಣ್ಣಗಾಗಲು ಬಿಡಬೇಕು. ಹೋಳಿಗೆ ಬಿಸಿಯಿರುವಾಗ ಒಂದರ ಮೇಲೊಂದು ಇಡಬಾರದು. ಹೋಳಿಗೆಗಳು ತಣ್ಣಗಾದ ನಂತರ ಗಟ್ಟಿ ಮುಚ್ಚಳವಿರುವ ಡಬ್ಬಿಯಲ್ಲಿ ತುಂಬಿಡಬೇಕು. ಇಂತಹ ಹೋಳಿಗೆಗಳು ಸಾಧಾರಣ ೧ ತಿಂಗಳು ಅಥವಾ ಅದಕ್ಕಿಂತಲೂ ಹೆಚ್ಚು ಕಾಲ ಉಳಿಯುತ್ತವೆ.

ಆ ೩. ಖಾಕರಾ

ಖಾಕರಾ

ಮೆಂತ್ಯೆ, ಜೀರಿಗೆ, ಮಸಾಲೆ (ಉದಾ. ಚಾಟ್ ಮಸಾಲಾ, ಗರಂ ಮಸಾಲಾ) ಮುಂತಾದ ವಿವಿಧ ರುಚಿಗಳಿರುವ ಖಾಕರಾಗಳನ್ನು ತಯಾರಿಸಿಡಬಹುದು. ಇದಕ್ಕಾಗಿ ಗೋದಿಯ ಹಿಟ್ಟಿನಲ್ಲಿ ನಮಗೆ ಯಾವ ರೀತಿಯ ಖಾಕರಾ ತಯಾರಿಸುವುದಿದೆಯೋ, ಆ ಪದಾರ್ಥ / ಮಸಾಲೆಗಳನ್ನು ಹಾಕಿ ನಾದಿದ ಹಿಟ್ಟನ್ನು ತಯಾರಿಸಬೇಕು. ಕಣಕವನ್ನು (ನಾದಿದ ಹಿಟ್ಟು) ಅತ್ಯಂತ ತೆಳುವಾದ ಚಪಾತಿಯ ಆಕಾರದಲ್ಲಿ ಲಟ್ಟಿಸಬೇಕು. ಅದನ್ನು ತವೆಯ ಮೇಲೆ (ಹಂಚಿನ ಮೇಲೆ) ಬೇಯಿಸುವಾಗ ಸ್ವಚ್ಛವಾದ ಚಿಕ್ಕ ಬಟ್ಟೆಯಿಂದ ಪೂರ್ತಿ ಚಪಾತಿಯ ಮೇಲೆ ಒತ್ತಿ ಮಂದ ಉಷ್ಣತೆಯ ಮೇಲೆ ಬೇಯಿಸಬೇಕು. ಅದನ್ನು ಎಲ್ಲಿಯೂ ಉಬ್ಬಲು ಬಿಡಬಾರದು. ನಂತರ ಚಪಾತಿಯನ್ನು ಪೂರ್ಣ ತಣ್ಣಗಾಗಲು ಬಿಡಬೇಕು. ಖಾಕರಾ ತಣ್ಣಗಾದ ನಂತರ ಗಟ್ಟಿ ಮುಚ್ಚಳವಿರುವ ಡಬ್ಬದಲ್ಲಿ ತುಂಬಿಡಬೇಕು. ಇವು ಸಾಧಾರಣ ೩ ತಿಂಗಳು ಉಳಿಯುತ್ತವೆ.

ಇ. ಗೋಧಿ ಹಿಟ್ಟಿನ ಮತ್ತು ಇತರ ಧಾನ್ಯಗಳ ಹಿಟ್ಟುಗಳ ಉಂಡೆಗಳು (ಲಾಡು)

ಗೋಧಿಯ ಹಿಟ್ಟಿನ ಉಂಡೆ

ಸಕ್ಕರೆಯ ಪುಡಿ ಅಥವಾ ಬೆಲ್ಲವನ್ನು ಹಾಕಿದ ಗೋಧಿಯ ಹಿಟ್ಟಿನ ಉಂಡೆಗಳು ೧ – ೨ ತಿಂಗಳು ಬಾಳುತ್ತವೆ. ರಾಗಿಯ ಹಿಟ್ಟು, ಕಡಲೆಹಿಟ್ಟು, ಹೆಸರುಬೇಳೆಯ ಹಿಟ್ಟು ಮುಂತಾದವುಗಳ ಉಂಡೆಗಳೂ ೧ – ೨ ತಿಂಗಳು ಬಾಳುತ್ತವೆ.

ಈ. ಮಾವಿನ ಮಾಂಬಳ ಮತ್ತು ಹಲಸಿನ ಮಾಂಬಳ

ಹಲಸಿನ ಮಾಂಬಳ

ಇವುಗಳನ್ನು ರಣ ರಣ ಬಿಸಿಲಿನಲ್ಲಿ ಒಣಗಿಸಬೇಕು. ಮಾವಿನ ಮಾಂಬಳದ ಮೇಲೆ ಆವಶ್ಯಕವಿರುವಷ್ಟು ಬಿಸಿ ನೀರನ್ನು ಹಾಕಿ ಅದನ್ನು ಕರಗಿಸಿದರೆ ಮಾವಿನ ಶೀಕರಣೆಯಂತೆ ಚಪಾತಿಗೆ ಹಚ್ಚಿಕೊಂಡು ತಿನ್ನಬಹುದು. ಮಾವಿನ ಮಾಂಬಳ ಮತ್ತು ಹಲಸಿನ ಮಾಂಬಳ ಸಾಧಾರಣ ೧ ವರ್ಷ ಉಳಿಯುತ್ತವೆ.

– (ಪೂ.) ವೈದ್ಯ ವಿನಯ ಭಾವೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (ಜನವರಿ ೨೦೨೦)

ಉ. ಮಾವಿನ ಹಣ್ಣಿನ ರಸ

೧. ಮಾವಿನ ಹಣ್ಣಿನ ರಸದಲ್ಲಿ ಸಮಪ್ರಮಾಣದಲ್ಲಿ ಸಕ್ಕರೆಯನ್ನು ಹಾಕಿ ಆ ಮಿಶ್ರಣವನ್ನು ಪೂರ್ಣ ಒಣಗುವವರೆಗೆ ಬಿಸಿಲಿನಲ್ಲಿ ಇಡಬೇಕು. ಈ ರೀತಿ ಒಣಗಿದ ರಸವನ್ನು ಶೀತಕದಲ್ಲಿ (ಫ್ರಿಜ್) ಇಟ್ಟರೆ ಸಾಧಾರಣ ಒಂದೂವರೆಯಿಂದ ಎರಡು ವರ್ಷಗಳ ಕಾಲ ಉಳಿಯುತ್ತದೆ. ಮತ್ತು ಶೀತಕದ ಹೊರಗಿಟ್ಟರೆ ಸಾಧಾರಣ ೧ ವರ್ಷ ಉಳಿಯುತ್ತದೆ.

೨. ಮಾವಿನ ಹಣ್ಣಿನ ರಸದಲ್ಲಿ ಸಮಪ್ರಮಾಣದಲ್ಲಿ ಸಕ್ಕರೆಯನ್ನು ಹಾಕಿ ಆ ಮಿಶ್ರಣವನ್ನು ಒಲೆಯ ಮೇಲೆ ಬೇಯಿಸಬೇಕು. ಈ ಬೇಯಿಸಿದ ರಸವನ್ನು ಶೀತಕದಲ್ಲಿಟ್ಟರೆ ಸಾಧಾರಣ ೧ ವರ್ಷ ಉಳಿಯುತ್ತದೆ. (ಶೀತಕದಲ್ಲಿಡದಿದ್ದರೆ ಅದಕ್ಕೆ ಬುರುಸು ಬರಬಹುದು.)

ಊ. ಮಾವಿನಕಾಯಿಯ ಗುಳಂಬಾ / ಮೊರಬ್ಬಾ (ಮುರಬ್ಬಾ)

ಇವು ಸಕ್ಕರೆಯ ಅಥವಾ ಬೆಲ್ಲದ ಪಾಕದಲ್ಲಿ ತಯಾರಿಸುವಂತಹ ಪದಾರ್ಥಗಳಾಗಿವೆ. ಈ ಪದಾರ್ಥಗಳು ಚೆನ್ನಾಗಿ ಉಳಿಯಲು ಗಟ್ಟಿಪಾಕವನ್ನು ಮಾಡಬೇಕು. ಇದರಿಂದ ಪಾಕದಲ್ಲಿ ಸ್ವಲ್ಪವೂ ನೀರಿನ ಅಂಶ ಉಳಿಯುವುದಿಲ್ಲ ಮತ್ತು ಮಾಡಿದ ಪದಾರ್ಥವು ಹೆಚ್ಚು ಕಾಲ ಉಳಿಯುತ್ತದೆ. ಗಟ್ಟಿಪಾಕವನ್ನು ಮಾಡುವುದರಿಂದ ಪದಾರ್ಥದಲ್ಲಿ ‘ಪ್ರಿಸರ್ವೇಟಿವ್’ (ಪದಾರ್ಥಗಳು ಕೆಡಬಾರದೆಂದು ಹಾಕಬೇಕಾದ ರಾಸಾಯನಿಕ ಪದಾರ್ಥ) ಹಾಕಬೇಕಾಗುವುದಿಲ್ಲ.

ಊ ೧. ಸಾಕರಾಂಬಾ

ಇದನ್ನು ಹಸಿ ಮಾವಿನಕಾಯಿಗಳಿಂದ ಅಥವಾ ಮಾವಿನ ಹಣ್ಣುಗಳಿಂದ ತಯಾರಿಸಲಾಗುತ್ತದೆ. ಸಾಕರಾಂಬಾ ವರ್ಷವಿಡಿ ಸಹಜವಾಗಿ ಉಳಿಯುತ್ತದೆ.

ಊ ೨. ಮಾವಿನಕಾಯಿಯ ತೊಕ್ಕು (ಮಾವಿನ ಕಾಯಿಯನ್ನು ತುರಿದು ಅದರಲ್ಲಿ ಆವಶ್ಯಕತೆಗನುಸಾರ ಮಸಾಲೆಗಳನ್ನು ಹಾಕಿ ತಯಾರಿಸಿದ ಮಿಶ್ರಣ)

ಮಾವಿನಕಾಯಿಯ ತೊಕ್ಕು ೧೫ ರಿಂದ ೨೦ ದಿನಗಳ ಕಾಲ ಕಡು ಬಿಸಿಲಿನಲ್ಲಿ ಇಡಬೇಕು (ಒಲೆ ಮೇಲೆ ಕೂಡ ತಯಾರಿಸಬಹುದು). ಮಾವಿನ ಕಾಯಿಯ ತೊಕ್ಕು ಬಹಳ ವರ್ಷಗಳವರೆಗೆ ಉಳಿಯುತ್ತದೆ.

ಊ ೩. ನೆಲ್ಲಿಕಾಯಿ, ಮಿಡಿ (ಉಪ್ಪಿನಕಾಯಿಗೆ ಬಳಸುವ ಚಿಕ್ಕ ಗಾತ್ರದ ಮಾವಿನಕಾಯಿ), ಸ್ಟ್ರಾಬೆರಿ, ಕಿತ್ತಲೆ ಹಣ್ಣು ಮುಂತಾದವುಗಳ ‘ಜೆಲಿ’ ಮತ್ತು ‘ಜ್ಯಾಮ್’ ಸಾಧಾರಣ ೧ ವರ್ಷದ ವರೆಗೆ ಉಳಿಯುತ್ತವೆ.

– ಸೌ. ಅರ್ಪಿತಾ ದೇಶಪಾಂಡೆ, ಸನಾತನ ಆಶ್ರಮ, ಮಿರಜ. (ಫೆಬ್ರವರಿ ೨೦೧೯)

ಎ. ಉಪ್ಪಿನಕಾಯಿ ಮತ್ತು ಟೊಮೆಟೊ ಸಾಸ್

ಎ ೧. ಉಪ್ಪಿನಕಾಯಿ

ಮನೆಯಲ್ಲಿ ತಯಾರಿಸಿದ ಉಪ್ಪಿನಕಾಯಿ ಬಹಳಷ್ಟು ದಿನಗಳವರೆಗೆ ಹಾಳಾಗದೇ ಚೆನ್ನಾಗಿರಲು ವಹಿಸಬೇಕಾದ ಕಾಳಜಿ : ಮುಂದೆ ನಮೂದಿಸಿರುವ ಜಾಗೃತೆಯನ್ನು ವಹಿಸಿ ಉಪ್ಪಿನಕಾಯಿಯನ್ನು ಮನೆಯಲ್ಲಿ ತಯಾರಿಸಿದರೆ, ಮಾವಿನಕಾಯಿ, ನೆಲ್ಲಿಕಾಯಿ, ಹಸಿಮೆಣಸಿನ ಕಾಯಿ, ಹಸಿಶುಂಠಿ ಇತ್ಯಾದಿಗಳ ಉಪ್ಪಿನಕಾಯಿಗಳು ೧-೨ ವರ್ಷಗಳ ವರೆಗೆ ಹಾಳಾಗದೇ ಚೆನ್ನಾಗಿರುತ್ತವೆ. ಲಿಂಬೆಕಾಯಿಯನ್ನು ಬೇಯಿಸಿ ತಯಾರಿಸಿದ ಲಿಂಬೆಕಾಯಿಯ ಉಪ್ಪಿನಕಾಯಿ ಸಾಧಾರಣ ೪-೫ ವರ್ಷಗಳವರೆಗೆ ಚೆನ್ನಾಗಿರುತ್ತವೆ. ರೋಗಪೀಡಿತ ವ್ಯಕ್ತಿಯ ಬಾಯಿಗೂ ಲಿಂಬೆಯ ಉಪ್ಪಿನಕಾಯಿ ತಿನ್ನುವುದರಿಂದ ರುಚಿ ಬರುತ್ತದೆ, ಅಲ್ಲದೇ ಅದು ಎಷ್ಟು ಹಳೆಯದಾಗುವುದೋ, ಅಷ್ಟು ಅಧಿಕ ರುಚಿಯಾಗುತ್ತದೆ.

೧. ಉಪ್ಪಿನಕಾಯಿಯನ್ನು ತಯಾರಿಸುವ ಮೊದಲು ಕೈಗಳನ್ನು ಸ್ವಚ್ಛ ತೊಳೆದುಕೊಂಡು ಒಣಗಿಸಿಕೊಳ್ಳಬೇಕು. ಉಪ್ಪಿನಕಾಯಿಗಾಗಿ ಉಪಯೋಗಿಸುವ ಮಾವಿನಕಾಯಿ, ಲಿಂಬೆಕಾಯಿ, ನೆಲ್ಲಿಕಾಯಿ, ಹಸಿ ಶುಂಠಿ, ಹಸಿಮೆಣಸಿನಕಾಯಿ ಇತ್ಯಾದಿಗಳನ್ನು ತೊಳೆದುಕೊಂಡು ಸ್ವಚ್ಛ ಬಟ್ಟೆಯಿಂದ ಒರೆಸಿ ಒಣಗಿಸಿಕೊಳ್ಳಬೇಕು. ಉಪ್ಪಿನಕಾಯಿಗಾಗಿ ಉಪಯೋಗಿಸುವ ಪದಾರ್ಥ, ಉದಾ. ಖಾರದ ಪುಡಿ, ಹರಳುಪ್ಪು (ಕಲ್ಲುಪ್ಪು) ಮುಂತಾದವುಗಳನ್ನು ಬಿಸಿ ಮಾಡಿಕೊಳ್ಳಬೇಕು, ಅದರಿಂದ ಅವುಗಳಲ್ಲಿ ನೀರಿನ ತೇವಾಂಶ ಉಳಿಯುವುದಿಲ್ಲ. (ಉಪ್ಪಿನಕಾಯಿಗಳಿಗೆ ಆಯೋಡಿನ್‌ಯುಕ್ತ ಉಪ್ಪು ಬಳಸಿದರೆ ಉಪ್ಪಿನಕಾಯಿ ಬೇಗ ಹಾಳಾಗುವ ಸಾಧ್ಯತೆಯಿರುತ್ತದೆ, ಆದುದರಿಂದ ಕಲ್ಲುಪ್ಪನ್ನು ಉಪಯೋಗಿಸಬೇಕು). ಉಪ್ಪಿನಕಾಯಿಗಾಗಿ ಸಕ್ಕರೆಯನ್ನು ಉಪಯೋಗಿಸುವುದಿದ್ದಲ್ಲಿ, ಸಕ್ಕರೆಯನ್ನು ಕೂಡ ಒಣಗಿಸಿಕೊಳ್ಳಬೇಕು. ಉಪ್ಪಿನಕಾಯಿಯನ್ನು ಹಾಕುವಾಗ ಆವಶ್ಯಕತೆಯೆನಿಸಿದರೆ ಅದರಲ್ಲಿ ಪ್ರಿಸರ್ವೇಟೀವ್ ಉಪಯೋಗಿಸಬಹುದು.

೨. ಉಪ್ಪಿನಕಾಯಿಯನ್ನು ಚೀನಿ ಮಣ್ಣಿನ ಭರಣಿಯಲ್ಲಿ ಅಥವಾ ದಪ್ಪ ಗಾಜಿನ ಭರಣಿಯಲ್ಲಿ ಶೇಖರಿಸಬೇಕು.

೩. ಉಪ್ಪಿನಕಾಯಿಯನ್ನು ಭರಣಿಯಲ್ಲಿ ತುಂಬಿದ ಬಳಿಕ ಉಪ್ಪಿನ ಕಾಯಿಯ ಮೇಲಿನ ಭಾಗದಲ್ಲಿ ಕಲ್ಲುಪ್ಪು ಹರಡಬೇಕು.

೪. ಉಪ್ಪಿನಕಾಯಿಗೆ ಬುರುಸು ಬರಬಾರದೆಂದು ಬೆರಳುಗಳ ಎರಡು ಕಾಂಡಗಳ ಎತ್ತರದಷ್ಟು ಎಣ್ಣೆಯ ಒಗ್ಗರಣೆಯನ್ನು ತಣ್ಣಗೆ ಮಾಡಿ ಉಪ್ಪಿನಕಾಯಿಯ ಮೇಲೆ ಹಾಕಬೇಕು.

೫. ಉಪ್ಪಿನಕಾಯಿಯ ಭರಣಿಯ ತೆರೆದ ಭಾಗವನ್ನು ಸ್ವಚ್ಛವಾದ ಒಣಗಿದ ಬಟ್ಟೆಯಿಂದ ಒರೆಸಿಕೊಂಡು ಭರಣಿಯ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಬೇಕು. ಭರಣಿಯ ಮುಚ್ಚಳದ ಮೇಲೆ ಸ್ವಚ್ಛವಾದ ಹತ್ತಿಯ ಬಟ್ಟೆಯನ್ನು ಇಟ್ಟು ಆ ಭರಣಿಯ ಕಂಠವನ್ನು ಹಗ್ಗದಿಂದ ಕಟ್ಟಬೇಕು.

೬. ಉಪ್ಪಿನಕಾಯಿಯ ಭರಣಿಯನ್ನು ಒಣಗಿದ ಸ್ಥಳದಲ್ಲಿ ಇಡಬೇಕು.(ಮೊದಲು ಉಪ್ಪಿನಕಾಯಿಯ ಭರಣಿಯನ್ನು ಎತ್ತರದ ಜಾಗದಲ್ಲಿ ಅಥವಾ ದೇವರ ಕೋಣೆಯಲ್ಲಿ ಇಡುತ್ತಿದ್ದರು)

೭. ಊಟಕ್ಕೆ ತೆಗೆದುಕೊಳ್ಳುವ ಉಪ್ಪಿನಕಾಯಿಯನ್ನು ಮೇಲಿಂದ ಮೇಲೆ ಮುಖ್ಯ ಸಂಗ್ರಹದ ಭರಣಿಯಿಂದ ತೆಗೆಯಬಾರದು. ವಾರದಲ್ಲಿ ಒಮ್ಮೆ ಇಡೀ ವಾರಕ್ಕೆ ಸಾಕಾಗುವಷ್ಟು ಉಪ್ಪಿನಕಾಯಿಯನ್ನು ಪ್ರತ್ಯೇಕ ಪಾತ್ರೆಯಲ್ಲಿ ತೆಗೆದಿಟ್ಟುಕೊಳ್ಳಬೇಕು. ಸಾಧ್ಯವಾದಷ್ಟು ಸ್ನಾನ ಮಾಡಿ ಮುಖ್ಯ ಸಂಗ್ರಹದ ಭರಣಿಯಿಂದ ಉಪ್ಪಿನಕಾಯಿಯನ್ನು ತೆಗೆಯಬೇಕು. ಉಪ್ಪಿನಕಾಯಿಯನ್ನು ತೆಗೆಯಲು ಉಪಯೋಗಿಸುವ ದೊಡ್ಡ ಚಮಚ, ಉಪ್ಪಿನಕಾಯಿಯನ್ನು ತೆಗೆದಿರುವ ಪಾತ್ರೆ ಮತ್ತು ಉಪ್ಪಿನಕಾಯಿಯ ತೆಗೆಯುವವರ ಕೈಗಳು ಒದ್ದೆಯಾಗಿರಬಾರದು. ಉಪ್ಪಿನಕಾಯಿಯನ್ನು ಭರಣಿಯಿಂದ ತೆಗೆದ ಬಳಿಕ ಅದನ್ನು ಸ್ವಚ್ಛ ಮಾಡಿದ ಒಣಗಿದ ಬಟ್ಟೆಯಿಂದ ಹೊರಗಿನಿಂದ ಒರೆಸಬೇಕು ಮತ್ತು ಮೊದಲಿನಂತೆ ಮುಚ್ಚಿಡಬೇಕು.

೮. ಮಾಸಿಕ ಸರದಿ ಇರುವ ಸ್ತ್ರೀಯರು ಮುಖ್ಯ ಸಂಗ್ರಹದ ಉಪ್ಪಿನಕಾಯಿಯನ್ನು ಸ್ಪರ್ಶಿಸಬಾರದು. ಗ್ರಹಣಕಾಲದಲ್ಲಿಯೂ ಮುಖ್ಯ ಸಂಗ್ರಹದ ಉಪ್ಪಿನಕಾಯಿಯನ್ನು ಸ್ಪರ್ಶಿಸಬಾರದು. ಸಮುದ್ರದಡದ ಪ್ರದೇಶದ ವಾತಾವರಣ ತೇವಾಂಶದಿಂದ ಕೂಡಿರುತ್ತದೆ. ಇದರಿಂದ ಉಪ್ಪಿನಕಾಯಿಗೆ ಬರುವ ಬುರುಸಿನ ಪ್ರಮಾಣ ಇನ್ನಿತರ ಪ್ರದೇಶಗಳಿಗಿಂತ ಸ್ವಲ್ಪ ಅಧಿಕವಿರುತ್ತದೆ. ಆದುದರಿಂದ ಇಂತಹ ಸ್ಥಳಗಳಲ್ಲಿ ಉಪ್ಪಿನಕಾಯಿ ಉಷ್ಣ ಮತ್ತು ಒಣ ವಾತಾವರಣದ ತುಲನೆಯಲ್ಲಿ ಸ್ವಲ್ಪ ಕಡಿಮೆ ಕಾಲ ಬಾಳಿಕೆ ಬರುತ್ತದೆ.

– ಸೌ. ಅರ್ಪಿತಾ ದೇಶಪಾಂಡೆ, ಸನಾತನ ಆಶ್ರಮ, ಮಿರಜ (ಫೆಬ್ರುವರಿ ೨೦೧೯) ಮತ್ತು ಶ್ರೀ. ಪ್ರಸಾದ ಮೈಸಕರ, ರತ್ನಾಗಿರಿ (೮.೮.೨೦೧೯)

ಎ ೨. ಟೊಮೆಟೊ ಸಾಸ್

ವಿನೆಗರ (ಪದಾರ್ಥಗಳು ಬಹಳ ಕಾಲದವರೆಗೆ ಹಾಳಾಗದೆ ಚೆನ್ನಾಗಿರಲು ಹಾಕುವ ಅತ್ಯಂತ ಹುಳಿ ದ್ರಾವಣ) ಹಾಕದಿರುವ ಟೊಮೆಟೊ ಸಾಸ್ ಶೀತಕಲ್ಲಿಟ್ಟರೆ ೧ ವರ್ಷದವರೆಗೆ ಹಾಳಾಗದೆ ಚೆನ್ನಾಗಿರುತ್ತದೆ. ವಿನೆಗರ ಹಾಕಿರುವ ಟೊಮೆಟೊ ಸಾಸ್ ಶೀತಕಪಾಟಿನಲ್ಲಿಡದೇ ಹೊರಗಿಟ್ಟರೆ, ಅದು ೬ ತಿಂಗಳವರೆಗೆ ಚೆನ್ನಾಗಿರುತ್ತದೆ ಮತ್ತು ಶೀತಕದಲ್ಲಿ ಇಟ್ಟರೆ ಸಾಧಾರಣ ಒಂದೂವರೆಯಿಂದ ಎರಡು ವರ್ಷಗಳವರೆಗೆ ಚೆನ್ನಾಗಿರುತ್ತದೆ.

ಏ. ಚಟ್ನಿ, ಮೆಂತ್ಯೆದ ಹಿಟ್ಟು ಇತ್ಯಾದಿ ಪದಾರ್ಥಗಳು

ಏ ೧. ಮಾವಿನಕಾಯಿ, ನೆಲ್ಲಿಕಾಯಿ ಮತ್ತು ಹುಣಸೆಹಣ್ಣು ಇತ್ಯಾದಿಗಳ ಹಸಿ ಚಟ್ನಿಗಳು

ಅ. ಮಾವಿನಕಾಯಿಯ ಚಟ್ನಿ : ಸಕ್ಕರೆಯ ಹರಳುಗಟ್ಟುವ ಪಾಕವನ್ನು ಮಾಡಬೇಕು. ಅದರಲ್ಲಿ ಆವಶ್ಯಕವಿರುವ ಮಸಾಲೆ ಪದಾರ್ಥಗಳು ಮತ್ತು ಬೇಯಿಸಿದ ಮಾವಿನಕಾಯಿಗಳನ್ನು ಹಾಕಿ ಚಟ್ನಿಯನ್ನು ಮಾಡಬೇಕು. ಇಂತಹ ಚಟ್ನಿಯನ್ನು ಮಧ್ಯಮ ಹಣ್ಣಾಗಿರುವ ಮಾವಿನಹಣ್ಣುಗಳಿಂದಲೂ ಮಾಡಬಹುದು ಮತ್ತು ಸಕ್ಕರೆಯ ಬದಲಾಗಿ ಬೆಲ್ಲದ ಪಾಕವನ್ನು ಉಪಯೋಗಿಸಿಯೂ ಮಾಡಬಹುದು.

ಆ. ನೆಲ್ಲಿಕಾಯಿಯ ಚಟ್ನಿ : ಮಾವಿನಕಾಯಿಗಳಂತೆಯೇ ನೆಲ್ಲಿಕಾಯಿಗಳ ಚಟ್ನಿಯನ್ನು ಮಾಡಬಹುದು.

ಇ. ಹುಣಸೆಹಣ್ಣಿನ ಚಟ್ನಿ : ಹುಣಸೆಹಣ್ಣನ್ನು ಅರ್ಧ ಗಂಟೆ ನೀರಿನಲ್ಲಿ ನೆನಸಿಟ್ಟು, ಅದರ ರಸವನ್ನು ಹಿಂಡಿ ತೆಗೆದುಕೊಳ್ಳಬೇಕು. ಬೆಲ್ಲ ಅಥವಾ ಸಕ್ಕರೆಯ ಹರಳುಗಟ್ಟುವ ಪಾಕವನ್ನು ಮಾಡಿಕೊಂಡು ಅದರಲ್ಲಿ ಹುಣಸೆಯ ರಸ, ಖಾರದ ಪುಡಿ, ಉಪ್ಪು, ಸ್ವಲ್ಪ ಕಾಳುಮೆಣಸಿನ ಪುಡಿ ಮತ್ತು ಕೋತ್ತಂಬರಿ ಕಾಳು-ಜೀರಿಗೆಯ ಪುಡಿಯನ್ನು ಹಾಕಿ ಆ ಮಿಶ್ರಣವನ್ನು ಚೆನ್ನಾಗಿ ಕುದಿಸಬೇಕು. ಎಲ್ಲ ಒಂದಾದ ಬಳಿಕ ಗ್ಯಾಸ  ಆರಿಸಬೇಕು. ಈ ಚಟ್ನಿಗಳನ್ನು ತಣ್ಣಗಾದ ಬಳಿಕ ಗಾಜಿನ ಭರಣಿಗಳಲ್ಲಿ ಇಡಬೇಕು. ಈ ಚಟ್ನಿಗಳನ್ನು ಶೀತಕಪಾಟಿನಲ್ಲಿಟ್ಟರೆ ಒಂದೂವರೆ ವರ್ಷಗಳವರೆಗೆ ಹಾಳಾಗದೆ ಚೆನ್ನಾಗಿರುತ್ತವೆ. ಶೀತಕಪಾಟು ಇಲ್ಲದೇ ೧ ವರ್ಷದವರೆಗೆ ಚೆನ್ನಾಗಿರುತ್ತವೆ.

– ಸೌ. ಅರ್ಪಿತಾ ದೇಶಪಾಂಡೆ, ಸನಾತನ ಆಶ್ರಮ, ಮಿರಜ (ಫೆಬ್ರುವರಿ ೨೦೧೯)

ಏ ೨. ವಿವಿಧ ರೀತಿಯ ಒಣ ಚಟ್ನಿಪುಡಿಗಳು ಮತ್ತು ಮೆಂತ್ಯೆ ಹಿಟ್ಟು

ನೆಲಗಡಲೆ (ಶೇಂಗಾ), ಎಳ್ಳು, ಕಾರೆಳ್ಳು (ಎಳ್ಳಿನಂತಹ, ಆದರೆ ಅದಕ್ಕಿಂತ ದೊಡ್ಡದಾಗಿರುವ ಒಂದು ತರಹದ ಕಪ್ಪು ಬೀಜ), ಅಗಸೆ, ಕಡಲೆಬೇಳೆ, ಕೊಬ್ಬರಿ ಇತ್ಯಾದಿಗಳ ಚಟ್ನಿಗಳನ್ನು ಮಾಡಬಹುದು. ಮೆಂತ್ಯೆಯ ಹಿಟ್ಟನ್ನು ಅನ್ನದ ಜೊತೆಗೆ ಕಲೆಸಿಕೊಂಡು ತಿನ್ನಬಹುದು. ಈ ಪದಾರ್ಥಗಳು ಒಣವಿರುವುದರಿಂದ ಸಾಧಾರಣ ೩ ತಿಂಗಳು ಬಾಳಿಕೆ ಬರುತ್ತವೆ.

– ಶ್ರೀಮತಿ ಕ್ಷಮಾ ರಾಣೆ, ಸನಾತನ ಆಶ್ರಮ, ರಾಮನಾಥಿ, ಗೋವಾ (ಜನವರಿ ೨೦೨೦)

ಒ. ಸಂಡಿಗೆ, ಹಪ್ಪಳ ಇತ್ಯಾದಿ ಪದಾರ್ಥ

ಈ ಪದಾರ್ಥಗಳು ಸಾಮಾನ್ಯವಾಗಿ ವರ್ಷಪೂರ್ತಿ ಹಾಳಾಗದೇ ಇರುತ್ತವೆ.

೧. ಸಂಡಿಗೆ: ಸಂಡಿಗೆಗಳಿಗೆ ಕೆಲವು ಪ್ರದೇಶಗಳಲ್ಲಿ ವಡೆ ಎಂದೂ ಹೇಳುತ್ತಾರೆ.

ಅ. ಕಲ್ಲಂಗಡಿಗಳ ಬಿಳಿ ತಿರುಳು ಮತ್ತು ಹಸಿರು ಭಾಗ, ಹಾಲುಗುಂಬಳಕಾಯಿ, ಕೆಂಪು ಕುಂಬಳಕಾಯಿ, ಪಪ್ಪಾಯಿ, ಕ್ಯಾಬೇಜ ಹೀಗೆ ವಿವಿಧ ಪ್ರಕಾರದ ತರಕಾರಿ ಹಾಗೂ ಸೊಯಾಬೀನ ಸಂಡಿಗೆಗಳನ್ನು ಮಾಡಬಹುದು.

ಆ. ಗೆಣಸಿನ ಸಂಡಿಗೆ ಮತ್ತು ಜೋಳದ ಅರಳಿನ ಸಂಡಿಗೆ

ಇ. ಹೆಸರುಬೇಳೆ, ಉದ್ದಿನಬೇಳೆ, ಕಡಲೆಬೇಳೆ, ಮಡಿಕೆ ಕಾಳು ಇತ್ಯಾದಿ ಬೇಳೆಗಳ ಸಂಡಿಗೆಗಳನ್ನು ಮಾಡಬಹುದು. ಈ ಬೇಳೆಗಳನ್ನು ಒಂದುಗೂಡಿಸಿಯೂ ಸಂಡಿಗೆಗಳನ್ನು ಮಾಡಬಹುದು.

ಸಂಡಿಗೆಗಳ ಪಲ್ಯವನ್ನೂ ಮಾಡುತ್ತಾರೆ. ಹಾಲುಗುಂಬಳಕಾಯಿ, ಕೆಂಪುಗುಂಬಳಕಾಯಿಯಂತಹ ತರಕಾರಿಗಳ ಸಂಡಿಗೆಗಳನ್ನು ತಯಾರಿಸುವಾಗ ಅದರಲ್ಲಿ ಉಪ್ಪು ಹಾಕಬಾರದು. ಏಕೆಂದರೆ ಉಪ್ಪಿನಿಂದ ಮುಂದೆ ಪಲ್ಯಯನ್ನು ಮಾಡುವಾಗ ಅಡಚಣೆಯಾಗುತ್ತದೆ. ಊಟದಲ್ಲಿ ನಂಚಿಕೊಳ್ಳಲು ಸಂಡಿಗೆಗಳನ್ನು ತಯಾರಿಸುವುದಿದ್ದರೆ ಅದರಲ್ಲಿ ಉಪ್ಪು ಹಾಕಬೇಕು.

– ಸೌ. ಛಾಯಾ ವಿವೇಕ ನಾಫಡೆ, ಸನಾತನ ಆಶ್ರಮ, ರಾಮನಾಥಿ, ಗೋವಾ (ಮೆ ೨೦೨೦)

೨. ಚಿಪ್ಸ : ಗೆಣಸಿನ ಚಿಪ್ಸ್ ಮತ್ತು ಬಟಾಟೆಯ ಚಿಪ್ಸ್

೩. ಹಪ್ಪಳ : ಉದ್ದು, ಹೆಸರು, ಅಕ್ಕಿ, ರಾಗಿ ಮತ್ತು ಅವಲಕ್ಕಿಯ ಹಪ್ಪಳ, ಹಾಗೆಯೇ ಹಲಸಿನ ತೊಳೆಯ ಹಪ್ಪಳ

೪. ಜೋಳ, ಅಕ್ಕಿ, ಸಬ್ಬಕ್ಕಿ ಮತ್ತು ಬಟಾಟೆ ಇವುಗಳ ಹಪ್ಪಳ ಹಾಗೆಯೇ ಗೋಧಿಯ ಸಂಡಿಗೆ

೫. ಸಂಡಿಗೆ ಮೆಣಸು (ಮೆಣಸಿನಕಾಯಿ) ಅಥವಾ ಮೊಸರುಗಾಯಿ

– ಸೌ. ಅರ್ಪಿತಾ ದೇಶಪಾಂಡೆ, ಸನಾತನ ಆಶ್ರಮ, ಮೀರಜ (ಫೆಬ್ರುವರಿ ೨೦೧೯)

೬. ಹಲಸಿನ ಬೀಜ

ಓ. ನೀರಡಿಕೆ ಮತ್ತು ಸ್ವಲ್ಪ ಮಟ್ಟಿಗೆ ಹಸಿವನ್ನು ನಿವಾರಿಸುವ ಪೇಯಗಳು

ಓ ೧. ಲಿಂಬೆ, ಕಿತ್ತಳೆ ಮತ್ತು ಮೋಸಂಬಿಗಳ ಪೇಯಗಳು

ಲಿಂಬೆಯ ರಸದಲ್ಲಿ ಸಮಪ್ರಮಾಣದಲ್ಲಿ ಸಕ್ಕರೆಯನ್ನು ಹಾಕಿ ಅದನ್ನು ಗಾಜಿನ ಭರಣಿಯಲ್ಲಿ ತುಂಬಿಡಬೇಕು ಮತ್ತು ಅದರಲ್ಲಿನ ಸಕ್ಕರೆ ಕರಗುವವರೆಗೆ ಅದನ್ನು ಬಿಸಿಲಿಗೆ ಇಡಬೇಕು. ಬಿಸಿಲಿನ ತೀವ್ರತೆಗನು ಸಾರ ಸಕ್ಕರೆ ಕರಗಲು ಸಾಧಾರಣವಾಗಿ ೧೫ ರಿಂದ ೩೦ ದಿನಗಳು ತಗಲುತ್ತವೆ. ಲಿಂಬೆಯ ಪೇಯ ಮಾಡುವ ಪದ್ಧತಿಯಂತೆಯೇ ಕಿತ್ತಳೆ ಮತ್ತು ಮೋಸಂಬಿಯ ಪೇಯಗಳನ್ನು ಮಾಡಬಹುದು. ಈ ಪೇಯಗಳನ್ನು ಶೀತಕದಲ್ಲಿ ಇಡದೆಯೂ ೨-೩ ವರ್ಷಗಳವರೆಗೆ ಹಾಳಾಗದೇ ಚೆನ್ನಾಗಿ ಉಳಿಯುತ್ತವೆ. ಈ ಪೇಯಗಳನ್ನು ಶೀತಕದಲ್ಲಿ ಇಟ್ಟರೆ ಅವುಗಳ ರುಚಿ ಬದಲಾಗುತ್ತದೆ. ಆದ್ದರಿಂದ ಅವುಗಳನ್ನು ಶೀತಕದಲ್ಲಿ ಇಡುವುದಿಲ್ಲ.

ಓ ೨. ಮಾವಿನ ಕಾಯಿಯ ಮುರಬ್ಬ

ಹಸಿ ಮಾವಿನ ಕಾಯಿಗಳನ್ನು ಬೇಯಿಸಿ, ಅವುಗಳ ತಿರುಳನ್ನು ತೆಗೆದು ಅದರಲ್ಲಿ ಸಕ್ಕರೆ ಅಥವಾ ಬೆಲ್ಲವನ್ನು ಹಾಕಿ ಅದರ ಮುರಬ್ಬವನ್ನು ಮಾಡಬಹುದು. ಇದನ್ನು ಗಾಜಿನ ಭರಣಿಯಲ್ಲಿ ಹಾಕಿ ಶೀತಕಪಾಟಿನಲ್ಲಿ ಇಡಬೇಕು. ಇದು ಒಂದರಿಂದ ಒಂದೂವರೆ ವರ್ಷದವರೆಗೆ ಕೆಡುವುದಿಲ್ಲ. ಹೀಗೆ ಪ್ರದೇಶಗಳಿಗೆ (ಉದಾ : ಸಮುದ್ರದ ದಡದಲ್ಲಿ ಕೋಕಮ್ ಶರಬತ್ತು) ಮತ್ತು ಹಣ್ಣುಗಳ ಫಸಲಿನ ಸಮಯದಲ್ಲಿ ವಿವಿಧ ಹಣ್ಣುಗಳ ಹಾಳಾಗದೇ ಚೆನ್ನಾಗಿ ಉಳಿಯುವ ಪೇಯಗಳನ್ನು ಮಾಡಿ ಇಟ್ಟುಕೊಳ್ಳಬಹುದು.

– ಸೌ. ಅರ್ಪಿತಾ ದೇಶಪಾಂಡೆ, ಸನಾತನ ಆಶ್ರಮ, ಮೀರಜ (ಫೆಬ್ರುವರಿ ೨೦೧೯)

ಔ. ಅಧಿಕ ಪೌಷ್ಟಿಕಾಂಶಗಳಿರುವ ಬಿಸ್ಕತ್ತುಗಳು

೫ ವರ್ಷಗಳವರೆಗೆ ಕೆಡದಿರುವ ಲಾಂಗ್ ಶೆಲ್ಫ ಲೈಫ್ ಚಾಕೊಲೇಟ್, ಒಣಗಿದ ಹಣ್ಣುಗಳು ಇತ್ಯಾದಿ ಪದಾರ್ಥಗಳು ಆಪತ್ಕಾಲದಲ್ಲಿ ಕೆಲವೊಮ್ಮೆ ಅಕಸ್ಮಿಕವಾಗಿ ಸ್ಥಳಾಂತರವಾಗಬೇಕಾಗುತ್ತದೆ ಮತ್ತು ಅಲ್ಲಿ ಕೆಲವು ಕಾರಣಗಳಿಂದ ಸಿಲುಕಿಕೊಂಡಿದ್ದರೆ, ಅಂತಹ ಸಮಯದಲ್ಲಿ ಕೆಲವೊಮ್ಮೆ ತಿನ್ನಲು ಆಹಾರವೂ ದೊರೆಯುವುದಿಲ್ಲ. ಇಂತಹ ಸ್ಥಿತಿಯಲ್ಲಿ ಮೇಲಿನ ಪದಾರ್ಥಗಳು ಚೆನ್ನಾಗಿ ಉಪಯೋಗವಾಗಬಹುದು.

© ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿ ಸಂರಕ್ಷಿತವಿದೆ.

ಲೇಖನ ೧ | ಲೇಖನ ೨ಲೇಖನ ೩ | ಲೇಖನ ೪

Leave a Comment