![](https://sanatanprabhat.org/kannada/wp-content/uploads/sites/5/2019/04/UTS_320.jpg)
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯವು ಯು.ಟಿ.ಎಸ್. (ಯುನಿವರ್ಸಲ್ ಥರ್ಮೋ ಸ್ಕ್ಯಾನರ್) ಉಪಕರಣದ ಮೂಲಕ ಮಾಡಿದ ವೈಜ್ಞಾನಿಕ ಪರೀಕ್ಷಣೆ
ಸದ್ಯ ಸಾಮಾಜಿಕ ಪ್ರಸಾರ ಮಾಧ್ಯಮಗಳಲ್ಲಿ (‘ಸೊಶಿಯಲ್ ಮೀಡಿಯಾ’ದಲ್ಲಿ) ಗಣೇಶೋತ್ಸವದಲ್ಲಿ ‘ಗೋಮಯ (ಆಕಳ ಸೆಗಣಿಯ) ಗಣೇಶಮೂರ್ತಿ’ಯನ್ನು ತಯಾರಿಸುವುದರ ಬಗ್ಗೆ ದೊಡ್ಡ ಪ್ರಮಾಣದಲ್ಲಿ ಪ್ರಸಾರವನ್ನು ಮಾಡಲಾಗುತ್ತಿದೆ. ಅದರಲ್ಲಿ ‘ಗೋಮಯದಿಂದ, ಅಂದರೆ ಆಕಳ ಸೆಗಣಿಯಿಂದ ತಯಾರಿಸಿದ ಗಣೇಶ ಮೂರ್ತಿಯು ಈಕೋ-ಫ್ರೆಂಡ್ಲಿ (ಪರಿಸರ-ಸ್ನೇಹಿ) ಆಗಿದ್ದು ಇಂತಹ ಗಣೇಶಮೂರ್ತಿಯ ಪೂಜೆಯನ್ನು ಮಾಡಿದರೆ ಬೇಗನೆ ಶುಭ ಫಲ ಪ್ರಾಪ್ತಿಯಾಗುತ್ತದೆ. ಮಣ್ಣು ಮತ್ತು ಸೆಗಣಿ ಇವುಗಳಿಂದ ತಯಾರಿಸಿದ ಮೂರ್ತಿಯಲ್ಲಿ ಪಂಚತತ್ತ್ವಗಳ ವಾಸವಿರುತ್ತದೆ’, ಎಂದು ಹೇಳಲಾಗುತ್ತಿದೆ. ವಾಸ್ತವದಲ್ಲಿ ಗೋಮಯ ಮತ್ತು ಗೋಮೂತ್ರದಿಂದ ತಯಾರಿಸಿದ ಗಣೇಶಮೂರ್ತಿಯು ಅಶಾಸ್ತ್ರೀಯವಾಗಿದೆ. ಧರ್ಮಗ್ರಂಥಗಳಲ್ಲಿ ‘ಮಣ್ಣಿನಿಂದ ತಯಾರಿಸಿದ ಶ್ರೀಗಣೇಶ ಮೂರ್ತಿಯ ಸ್ಥಾಪನೆಯನ್ನು ಮಾಡಬೇಕು’ ಎಂದು ಹೇಳಲಾಗಿದೆ. ಆದುದರಿಂದ ಶ್ರೀ ಗಣೇಶಚತುರ್ಥಿಯ ದಿನ ಮಣ್ಣಿನಿಂದ ತಯಾರಿಸಿದ ಶ್ರೀ ಗಣೇಶಮೂರ್ತಿಯ ಸ್ಥಾಪನೆ ಮತ್ತು ಪೂಜೆಯನ್ನು ಮಾಡಿದರೆ ಪೂಜೆ ಮಾಡುವವನಿಗೆ ಲಾಭವಾಗುವುದು. ಗೋಮಯದಿಂದ ತಯಾರಿಸಿದ ಅಶಾಸ್ತ್ರೀಯ ಗಣೇಶಮೂರ್ತಿ ಮತ್ತು ಮಣ್ಣಿನಿಂದ ತಯಾರಿಸಿದ ಶಾಸ್ತ್ರೀಯ ಗಣೇಶಮೂರ್ತಿಯಿಂದ ಪ್ರಕ್ಷೇಪಿತವಾಗುವ ಸ್ಪಂದನಗಳನ್ನು ವಿಜ್ಞಾನದ ಮೂಲಕ ಅಧ್ಯಯನ ಮಾಡಲು ೯.೩.೨೦೧೮ ರಂದು ಗೋವಾದ, ರಾಮನಾಥಿ ಯಲ್ಲಿನ, ಸನಾತನದ ಆಶ್ರಮದಲ್ಲಿ ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ವತಿಯಿಂದ ಒಂದು ಪ್ರಯೋಗವನ್ನು ಮಾಡಲಾಯಿತು. ಈ ಪ್ರಯೋಗಕ್ಕಾಗಿ ‘ಯು.ಟಿ.ಎಸ್. (ಯುನಿವರ್ಸಲ್ ಥರ್ಮೋ ಸ್ಕ್ಯಾನರ್)’ ಈ ಉಪಕರಣವನ್ನು ಉಪಯೋಗಿಸಲಾಯಿತು. ಈ ಪ್ರಯೋಗದ ಸ್ವರೂಪ, ಮಾಡಿದ ಅಳತೆಗಳ ನೋಂದಣಿ ಮತ್ತು ಅವುಗಳ ವಿವರಣೆಯನ್ನು ಮುಂದೆ ನೀಡಲಾಗಿದೆ.
೧. ಪ್ರಯೋಗದ ಸ್ವರೂಪ
ಈ ಪ್ರಯೋಗದಲ್ಲಿ ಗೋಮಯ ಗಣೇಶ ಮೂರ್ತಿ, ಸನಾತನ-ನಿರ್ಮಿತ ಬಣ್ಣದ ಶಾಸ್ತ್ರೀಯ ಗಣೇಶಮೂರ್ತಿ ಮತ್ತು ಸನಾತನ-ನಿರ್ಮಿತ ಬಿಳಿ ಬಣ್ಣದ ಶಾಸ್ತ್ರೀಯ ಗಣೇಶಮೂರ್ತಿಗಳ ‘ಯು.ಟಿ.ಎಸ್.’ ಉಪಕರಣದ ಮೂಲಕ ಮಾಡಿದ ಅಳತೆಗಳ ನೋಂದಣಿಯನ್ನು ಮಾಡಲಾಯಿತು. ನೋಂದಣಿ ಮಾಡಿದ ಎಲ್ಲ ಅಳತೆಗಳ ತುಲನಾತ್ಮಕ ಅಧ್ಯಯನವನ್ನು ಮಾಡಲಾಯಿತು.
ಈ ಲೇಖನದಲ್ಲಿನ ‘ಯು.ಟಿ.ಎಸ್. ಉಪಕರಣದ ಪರಿಚಯ’, ‘ಉಪಕರಣದ ಮೂಲಕ ಮಾಡಲಾಗುವ ಪ್ರಯೋಗದಲ್ಲಿನ ಘಟಕಗಳು ಮತ್ತು ಅವುಗಳ ವಿವರಣೆ’, ‘ಘಟಕಗಳ ಪ್ರಭಾವಲಯವನ್ನು ಅಳೆಯುವುದು’, ಪರೀಕ್ಷಣೆಯ ಪದ್ಧತಿ’ ಮತ್ತು ‘ಪ್ರಯೋಗದಲ್ಲಿ ಸಮಾನತೆ ಬರಲು ತೆಗೆದುಕೊಂಡ ಎಚ್ಚರಿಕೆ’ ಈ ಅಂಶಗಳನ್ನು ಈ ಲಿಂಕ್ನಲ್ಲಿ ನೀಡಲಾಗಿದೆ.
೨. ಗಣೇಶಮೂರ್ತಿಗಳ ಸಂದರ್ಭದಲ್ಲಿ ಮಾಡಿದ ಅಳತೆಗಳ ನೋಂದಣಿ ಮತ್ತು ಅವುಗಳ ವಿವೇಚನೆ
೨ ಅ. ನಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿವೇಚನೆ
೨ ಅ ೧. ಗೋಮಯದ ಗಣೇಶಮೂರ್ತಿಯಲ್ಲಿ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ಎರಡೂ ರೀತಿಯ ನಕಾರಾತ್ಮಕ ಊರ್ಜೆಗಳಿವೆ ಮತ್ತು ಸನಾತನ-ನಿರ್ಮಿತ ಶಾಸ್ತ್ರೀಯ ಬಣ್ಣದ ಗಣೇಶ ಮೂರ್ತಿ ಮತ್ತು ಸನಾತನ-ನಿರ್ಮಿತ ಶಾಸ್ತ್ರೀಯ ಬಿಳಿ ಬಣ್ಣದ ಗಣೇಶಮೂರ್ತಿಗಳಲ್ಲಿ ನಕಾರಾತ್ಮಕ ಊರ್ಜೆ ಇರಲಿಲ್ಲ : ಗೋಮಯ ಗಣೇಶಮೂರ್ತಿಯಲ್ಲಿ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ಎರಡೂ ರೀತಿಯ ನಕಾರಾತ್ಮಕ ಊರ್ಜೆಗಳು ಇದ್ದವು; ಆಗ ‘ಯು.ಟಿ.ಎಸ್.’ ಸ್ಕ್ಯಾನರ್ನ ಭುಜಗಳು ಈ ಗಣೇಶಮೂರ್ತಿಯ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ನಕಾರಾತ್ಮಕ ಊರ್ಜೆಯನ್ನು ಅಳೆಯುವಾಗ ಅನುಕ್ರಮವಾಗಿ ೧೨೦ ಮತ್ತು ೧೫೦ ಅಂಶದ ಕೋನ ಮಾಡಿತು. ಸ್ಕ್ಯಾನರನ ಭುಜಗಳು ೧೮೦ ಅಂಶದ ಕೋನ ಮಾಡಿದರೆ ಮಾತ್ರ ಪ್ರಭಾವಲಯವನ್ನು ಅಳೆಯಲು ಸಾಧ್ಯ ವಾಗುವುದರಿಂದ ಆ ಗಣೇಶ ಮೂರ್ತಿಯಲ್ಲಿನ ಈ ಎರಡೂ ನಕಾರಾತ್ಮಕ ಊರ್ಜೆಗಳ ಪ್ರಭಾವಲಯಗಳನ್ನು ಅಳೆಯಲು ಸಾಧ್ಯವಾಗಲಿಲ್ಲ.
ಸನಾತನ-ನಿರ್ಮಿತ ಶಾಸ್ತ್ರೀಯ ಬಣ್ಣದ ಗಣೇಶಮೂರ್ತಿ ಮತ್ತು ಸನಾತನ-ನಿರ್ಮಿತ ಶಾಸ್ತ್ರೀಯ ಬಿಳಿ ಬಣ್ಣದ ಗಣೇಶಮೂರ್ತಿಯಲ್ಲಿ ‘ಇನ್ಫ್ರಾರೆಡ್’ ಮತ್ತು ‘ಅಲ್ಟ್ರಾವೈಲೆಟ್’ ಈ ಎರಡೂ ವಿಧದ ನಕಾರಾತ್ಮಕ ಊರ್ಜೆ ಸ್ವಲ್ಪವೂ ಕಂಡು ಬರಲಿಲ್ಲ.
೨ ಆ. ಸಕಾರಾತ್ಮಕ ಊರ್ಜೆಯ ಸಂದರ್ಭದಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿವೇಚನೆ
೨ ಆ ೧. ಗೋಮಯ ಗಣೇಶಮೂರ್ತಿಗಿಂತ ಸನಾತನ-ನಿರ್ಮಿತ ಶಾಸ್ತ್ರೀಯ ಬಣ್ಣದ ಗಣೇಶಮೂರ್ತಿಯಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚಿದೆ ಮತ್ತು ಸನಾತನ-ನಿರ್ಮಿತ ಶಾಸ್ತ್ರೀಯ ಬಿಳಿ ಬಣ್ಣದ ಗಣೇಶಮೂರ್ತಿಯಲ್ಲಿ ಸಕಾರಾತ್ಮಕ ಊರ್ಜೆ ಅತ್ಯಧಿಕವಿದೆ : ಎಲ್ಲ ವ್ಯಕ್ತಿ, ವಾಸ್ತು ಅಥವಾ ವಸ್ತುಗಳಲ್ಲಿ ಸಕಾರಾತ್ಮಕ ಊರ್ಜೆ ಇರುತ್ತದೆ ಎಂದೇನಿಲ್ಲ. ಪ್ರಯೋಗದಲ್ಲಿನ ಮೂರೂ ಗಣೇಶಮೂರ್ತಿಗಳಲ್ಲಿ ಸಕಾರಾತ್ಮಕ ಊರ್ಜೆಯಿತ್ತು. ಅದಕ್ಕಾಗಿ ಸ್ಕ್ಯಾನರ್ನ ಭುಜಗಳು ೧೮೦ ಅಂಶದ ಕೋನವನ್ನು ಮಾಡಿದವು. ಇದರಿಂದ ಅವುಗಳ ಪ್ರಭಾವಲಯವನ್ನು ಅಳೆಯಲು ಬಂದಿತು. ಅದರ ಮಾಹಿತಿಯನ್ನು ಮುಂದೆ ನೀಡಲಾಗಿದೆ.
೨ ಇ. ಒಟ್ಟು ಪ್ರಭಾವಲಯದ ಸಂದರ್ಭದಲ್ಲಿ ಮಾಡಿದ ಅಳತೆಗಳ ನೋಂದಣಿಗಳ ವಿವೇಚನೆ
೨ ಇ ೧. ಗೋಮಯ ಗಣೇಶಮೂರ್ತಿಗಿಂತ ಸನಾತನ-ನಿರ್ಮಿತ ಶಾಸ್ತ್ರೀಯ ಬಣ್ಣದ ಗಣೇಶಮೂರ್ತಿಯ ಒಟ್ಟು ಪ್ರಭಾವಲಯ ಹೆಚ್ಚಿದೆ ಮತ್ತು ಸನಾತನ-ನಿರ್ಮಿತ ಶಾಸ್ತ್ರೀಯ ಬಿಳಿ ಬಣ್ಣದ ಗಣೇಶಮೂರ್ತಿಯ ಒಟ್ಟು ಪ್ರಭಾವಲಯ ಎಲ್ಲಕ್ಕಿಂತ ಹೆಚ್ಚಿದೆ : ಸಾಮಾನ್ಯ ವ್ಯಕ್ತಿ ಅಥವಾ ವಸ್ತುಗಳ ಒಟ್ಟು ಪ್ರಭಾವಲಯ ಸಾಧಾರಣ ೧ ಮೀಟರನಷ್ಟಿರುತ್ತದೆ. ಪ್ರಯೋಗದಲ್ಲಿನ ಮೂರೂ ಗಣೇಶಮೂರ್ತಿಗಳ ಒಟ್ಟು ಪ್ರಭಾವಳಿ ಮುಂದಿನಂತಿವೆ.
ಮೇಲಿನ ಎಲ್ಲ ಅಂಶಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆಯನ್ನು ‘ಅಂಶ ೩’ ರಲ್ಲಿ ನೀಡಲಾಗಿದೆ.
೩. ನೋಂದಣಿ ಮಾಡಿದ ಅಳತೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ
೩ ಅ. ಗೋಮಯದಿಂದ ತಯಾರಿಸಿದ ಗಣೇಶಮೂರ್ತಿಯು ಅಶಾಸ್ತ್ರೀಯವಾಗಿರುವುದರಿಂದ ಹಾಗೂ ಅದರಿಂದ ವಾತಾವರಣದಲ್ಲಿ ನಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿತವಾಗುವುದರಿಂದ ಅದು ಉಪಾಸಕನಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿಲ್ಲ : ಗೋಮಾತೆಯ ಗೋಮೂತ್ರ ಮತ್ತು ಗೋಮಯ (ಸೆಗಣಿ) ಸಾತ್ತ್ವಿಕವಾಗಿರುತ್ತವೆ. ಗೋಮಯದಿಂದ ಭೂಮಿಯನ್ನು ಸಾರಿಸುವುದು, ಗೋಮೂತ್ರದಿಂದ ವಾಸ್ತುಶುದ್ಧಿ ಮಾಡುವುದು ಅಧ್ಯಾತ್ಮಿಕ ದೃಷ್ಟಿಯಿಂದ ಯೋಗ್ಯವಾಗಿದೆ; ಏಕೆಂದರೆ ಅದರಿಂದ ಆ ಭೂಮಿಯಲ್ಲಿನ ಮತ್ತು ಅಲ್ಲಿನ ವಾತಾವರಣದಲ್ಲಿನ ನಕಾರಾತ್ಮಕ ಸ್ಪಂದನಗಳ ಉಚ್ಚಾಟನೆಯನ್ನು ಮಾಡಲಾಗುತ್ತದೆ. ಪ್ರಯೋಗದಲ್ಲಿನ ‘ಗೋಮಯ ಗಣೇಶ ಮೂರ್ತಿ’ಯನ್ನು ತಯಾರಿಸಲು ಉಪಯೋಗಿಸಿದ ‘ಗೋಮಯ’ವು ಸಾತ್ವಿಕವಾಗಿರುವುದರಿಂದ ಈ ಗಣೇಶಮೂರ್ತಿಯಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು; ಆದರೆ ಆ ಗಣೇಶಮೂರ್ತಿಯಲ್ಲಿ ನಕಾರಾತ್ಮಕ ಸ್ಪಂದನಗಳೂ ಕಂಡು ಬಂದವು. ಆದುದರಿಂದ ಗೋಮಯದಿಂದ ಗಣೇಶ ಮೂರ್ತಿಯನ್ನು ತಯಾರಿಸಿದರೆ ಪೂಜಕನಿಗೆ ಅದರ ಲಾಭವಾಗಲಾರದು. ಅಧ್ಯಾತ್ಮಶಾಸ್ತ್ರಕ್ಕನುಸಾರ, ಅಂದರೆ ಮೂರ್ತಿ ಶಾಸ್ತ್ರಕ್ಕನುಸಾರ ಗಣೇಶಮೂರ್ತಿಯು ಜೇಡಿ ಅಥವಾ ಆವೆ ಮಣ್ಣಿನಿಂದ ತಯಾರಿಸಿದ ಮತ್ತು ನೈಸರ್ಗಿಕ ಬಣ್ಣಗಳಿಂದ ಅಲಂಕರಿಸಿರಬೇಕು. ಮೂರ್ತಿ ಶಾಸ್ತ್ರಕ್ಕನುಸಾರ ತಯಾರಿಸಿದ ಇಂತಹ ಗಣೇಶ ಮೂರ್ತಿಯಲ್ಲಿ ಗಣೇಶತತ್ತ್ವವು ಆದಷ್ಟು ಹೆಚ್ಚು ಪ್ರಮಾಣದಲ್ಲಿ ಆಕರ್ಷಿತವಾಗಿ ಭಕ್ತರಿಗೆ ಅದರಿಂದ ಲಾಭವಾಗುತ್ತದೆ. ಅಧ್ಯಾತ್ಮಶಾಸ್ತ್ರಕ್ಕನುಸಾರ ಮಾಡಿದ ಯಾವುದೇ ಕೃತಿಯು ನಿಸರ್ಗಕ್ಕೆ ಅನುಕೂಲ, ಅಂದರೆ ಪರಿಸರಕ್ಕೆ ಅನುಕೂಲವಾಗಿರುತ್ತದೆ.
ಪರಿಸರದ ರಕ್ಷಣೆಯ ಹೆಸರಿನಲ್ಲಿ ತೆಗೆದ ಶಾಸ್ತ್ರವಿರುದ್ಧ ಪರ್ಯಾಯಗಳಿಂದಾಗಿ, ಅಂದರೆ ‘ಕಾಗದದ ಮುದ್ದೆಗಳ ಗಣೇಶಮೂರ್ತಿ’, ‘ಗೋಮಯ ಗಣೇಶಮೂರ್ತಿ’ಗಳಂತಹ ಅಶಾಸ್ತ್ರೀಯ ಗಣೇಶ ಮೂರ್ತಿಗಳನ್ನು ತಯಾರಿಸುವುದರಿಂದ ಪರಿಸರದ ರಕ್ಷಣೆಯಂತೂ ಆಗುವುದೇ ಇಲ್ಲ, ತದ್ವಿರುದ್ಧ ಧರ್ಮದ ಹಾನಿಯಾಗುತ್ತದೆ ಮತ್ತು ಪಾಪವೂ ತಗಲುತ್ತದೆ. ಈ ಹಾನಿಯನ್ನು ತಡೆಗಟ್ಟಲು ಪ್ರತಿಯೊಬ್ಬ ಹಿಂದೂ ಧರ್ಮಶಿಕ್ಷಣ ಪಡೆಯುವುದು ಆವಶ್ಯಕವಾಗಿದೆ !
೩ ಆ. ‘ಶಬ್ದ, ಸ್ಪರ್ಶ, ರೂಪ, ರಸ ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಯಾವಾಗಲೂ ಒಟ್ಟಿಗಿರುತ್ತವೆ’, ಇದು ಅಧ್ಯಾತ್ಮದಲ್ಲಿನ ಒಂದು ಸಿದ್ಧಾಂತವಾಗಿದೆ. ಆದುದರಿಂದ ದೇವತೆಯ ರೂಪದಲ್ಲಿ ಆಯಾ ದೇವತೆಯ ಶಕ್ತಿ ಇದ್ದೇ ಇರುತ್ತದೆ : ಪ್ರತಿಯೊಂದು ದೇವತೆಯ ರೂಪದ ವರ್ಣನೆಯನ್ನು ದಾರ್ಶನಿಕ ಋಷಿಮುನಿಗಳು ಧರ್ಮಶಾಸ್ತ್ರದಲ್ಲಿ ಬರೆದಿದ್ದಾರೆ. ಆದುದರಿಂದ ಮೂರ್ತಿಕಾರರು ತಮ್ಮ ಕಲ್ಪನೆಯಿಂದ ತಯಾರಿಸಿದ ಮೂರ್ತಿಗಿಂತ ಧರ್ಮಶಾಸ್ತ್ರದಲ್ಲಿ ನೀಡಿದ ವರ್ಣನೆಗನುಸಾರ ಆ ದೇವತೆಯ ಮೂರ್ತಿಯಲ್ಲಿ ಆ ದೇವತೆಯ ತತ್ತ್ವವು ಹೆಚ್ಚು ಪ್ರಮಾಣದಲ್ಲಿರುತ್ತದೆ. ಧರ್ಮಶಾಸ್ತ್ರದಲ್ಲಿ ಒಂದೇ ದೇವತೆಯ ಅನೇಕ ಹೆಸರುಗಳು ಮತ್ತು ಅದಕ್ಕೆ ಸರಿಹೊಂದುವ ರೂಪಗಳ ಉಲ್ಲೇಖವೂ ಕಂಡು ಬರುತ್ತದೆ. ಆಗ ಕಾಲಾನುಸಾರ ದೇವತೆಯ ಯಾವ ರೂಪದ ಉಪಾಸನೆ ಮಾಡುವುದು ಆಧ್ಯಾತ್ಮಿಕ ದೃಷ್ಟಿಯಲ್ಲಿ ಲಾಭದಾಯಕವಾಗಿದೆ, ಎಂಬುದನ್ನು ಕೇವಲ ಅಧ್ಯಾತ್ಮದ ಮಾಹಿತಿಯಿರುವ, ಅಂದರೆ ಸಂತರೇ ಹೇಳಬಹುದು. ಪ್ರಯೋಗದಲ್ಲಿನ ಸನಾತನ-ನಿರ್ಮಿತ ಶಾಸ್ತ್ರೀಯ ಬಣ್ಣದ ಗಣೇಶಮೂರ್ತಿ ಮತ್ತು ಸನಾತನ-ನಿರ್ಮಿತ ಶಾಸ್ತ್ರೀಯ ಬಿಳಿ ಬಣ್ಣದ ಗಣೇಶಮೂರ್ತಿಯ ಧರ್ಮಶಾಸ್ತ್ರದಲ್ಲಿ ನೀಡಿದ ಗಣಪತಿಯ ರೂಪದ ವರ್ಣನೆ ಮತ್ತು ಕಾಲಾನುಸಾರ ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಮಾರ್ಗದರ್ಶನ ಇವುಗಳಿಗನುಸಾರ ತಯಾರಿಸಲಾಗಿದೆ. ಆದುದರಿಂದ ಪ್ರಯೋಗದಲ್ಲಿನ ಈ ಎರಡೂ ಗಣೇಶಮೂರ್ತಿಗಳಲ್ಲಿ ಸಕಾರಾತ್ಮಕ ಊರ್ಜೆ ಕಂಡುಬಂದಿತು ಮತ್ತು ಅವುಗಳ ಒಟ್ಟು ಪ್ರಭಾವಲಯವೂ ಹೆಚ್ಚಿತ್ತು. (ಸನಾತನ ನಿರ್ಮಿತ ಸಾತ್ತ್ವಿಕ ಗಣೇಶ ಮೂರ್ತಿಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.)
೩ ಆ ೧. ಸನಾತನ-ನಿರ್ಮಿತ ಶಾಸ್ತ್ರೀಯ ಬಣ್ಣದ ಗಣೇಶಮೂರ್ತಿ : ಈ ಮೂರ್ತಿಯು ಶಾಸ್ತ್ರಕ್ಕನುಸಾರ, ಅಂದರೆ ಋಷಿಮುನಿಗಳು ಹೇಳಿದ ಮೂರ್ತಿ ವಿಜ್ಞಾನಕ್ಕನುಸಾರ ಇರುವುದರಿಂದ ಅದರಿಂದ ಬಹಳಷ್ಟು ಪ್ರಮಾಣದಲ್ಲಿ ಸಕಾರಾತ್ಮಕ ಸ್ಪಂದನಗಳು ಪ್ರಕ್ಷೇಪಿಸುತ್ತವೆ. ಆದುದರಿಂದ ಅದು ಉಪಾಸಕನಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದೆ. ಇಂತಹ ಮೂರ್ತಿಯ ಪೂಜೆ ಮತ್ತು ಉಪಾಸನೆಯನ್ನು ಮಾಡುವುದು ಉಪಾಸಕನ ದೃಷ್ಟಿಯಿಂದ ಲಾಭದಾಯಕವಾಗಿದೆ.
೩ ಆ ೨. ಸನಾತನ-ನಿರ್ಮಿತ ಶಾಸ್ತ್ರೀಯ ಬಿಳಿ ಬಣ್ಣದ ಗಣೇಶಮೂರ್ತಿ : ಈ ಮೂರ್ತಿಯನ್ನು ಸಾಧಕ-ಮೂರ್ತಿಕಾರರು ಧರ್ಮಶಾಸ್ತ್ರಕ್ಕನುಸಾರ, ಹಾಗೆಯೇ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನಕ್ಕನುಸಾರ ಭಕ್ತಿಭಾವದಿಂದ ತಯಾರಿಸಿದ್ದಾರೆ. ಈ ಮೂರ್ತಿಯು ಆಧ್ಯಾತ್ಮಿಕ ದೃಷ್ಟಿಯಿಂದ ಉಚ್ಚ ಸ್ತರದ ಸ್ಪಂದನಗಳನ್ನು ಪ್ರಕ್ಷೇಪಿಸುತ್ತದೆ. ಆದುದರಿಂದ ಈ ಮೂರ್ತಿಯು ಉಪಾಸಕನಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಹೆಚ್ಚು ಪ್ರಮಾಣದಲ್ಲಿ ಲಾಭದಾಯಕವಾಗಿದೆ, ಅಲ್ಲದೇ ಅದರಲ್ಲಿ ಉಚ್ಚ ಸ್ತರದಲ್ಲಿನ ಆಧ್ಯಾತ್ಮಿಕ ಅನುಭೂತಿಯನ್ನು ನೀಡುವ ಕ್ಷಮತೆಯೂ ಇದೆ.
ಸನಾತನ-ನಿರ್ಮಿತ ಬಣ್ಣದ ಗಣೇಶಮೂರ್ತಿ ಮತ್ತು ಸನಾತನ-ನಿರ್ಮಿತ ಶಾಸ್ತ್ರೀಯ ಬಿಳಿ ಬಣ್ಣದ ಗಣೇಶಮೂರ್ತಿ ಈ ಎರಡೂ ಮೂರ್ತಿಗಳು ಉಪಾಸಕನಿಗೆ ಆಧ್ಯಾತ್ಮಿಕ ದೃಷ್ಟಿಯಿಂದ ಲಾಭದಾಯಕವಾಗಿದ್ದರೂ ಬಿಳಿ ಬಣ್ಣದ ಗಣೇಶಮೂರ್ತಿ ಯಿಂದ ಪ್ರಕ್ಷೇಪಿತವಾಗುವ ನಿರ್ಗುಣ ಸ್ಪಂದನಗಳು ಸರ್ವಸಾಮಾನ್ಯ ವ್ಯಕ್ತಿಗೆ ಸಹಿಸಲು ಆಗದಿರುವುದರಿಂದ ಪೂಜೆಗಾಗಿ ಬಣ್ಣದ ಗಣೇಶಮೂರ್ತಿಯನ್ನು ಉಪಯೋಗಿಸುವುದು ಹೆಚ್ಚು ಯೋಗ್ಯವಾಗಿದೆ.
– ಸೌ. ಮಧುರಾ ಧನಂಜಯ ಕರ್ವೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩.೯.೨೦೧೮)