ಸಮಷ್ಟಿ ಜೀವನ ಸುಖಿಯಾಗಲು ಸ್ವಭಾವದೋಷ ನಿರ್ಮೂಲನೆಯ ಮಹತ್ವ

ವ್ಯಕ್ತಿಯು ಸಮಾಜದ ಒಂದು ಅವಿಭಾಜ್ಯ ಘಟಕವಾಗಿದ್ದಾನೆ. ದಿನನಿತ್ಯದ ಜೀವನದಲ್ಲಿ ಸಾಮಾಜಿಕ ಸಮಸ್ಯೆಗಳಿಂದ ಅಥವಾ ಸಮಾಜದಲ್ಲಿನ ಇತರ ಘಟಕಗಳ ಅಯೋಗ್ಯ ವರ್ತನೆಯಿಂದ ವ್ಯಕ್ತಿಯ ಜೀವನದಲ್ಲಿ ಅನೇಕ ಸಲ ಒತ್ತಡದ ಪರಿಸ್ಥಿತಿಯು ಉದ್ಭವಿಸುತ್ತದೆ. ವ್ಯಕ್ತಿಗೆ ಸುಖೀ ಜೀವನವನ್ನು ಜೀವಿಸಬೇಕಾದರೆ, ಹಾಗೆಯೇ ಸಾಧಕರಿಗೆ ಸಾಧನೆಯಲ್ಲಿನ ಆನಂದವನ್ನು ಸ್ಥಿರವಾಗಿರಿಸುವುದಿದ್ದರೆ, ವ್ಯಷ್ಟಿಸ್ತರದಲ್ಲಿನ ಸ್ವಭಾವದೋಷಗಳ ನಿರ್ಮೂಲನೆಯನ್ನು ಮಾಡುವುದು ಎಷ್ಟು ಮಹತ್ವದ್ದಾಗಿದೆಯೋ, ಅಷ್ಟೇ ಮಹತ್ವವು ಸಮಷ್ಟಿ ಸ್ತರದಲ್ಲಿನ ಸಮಸ್ಯೆಗಳನ್ನು ಬಿಡಿಸಲು ಸಮಾಜದಲ್ಲಿನ ಇತರ ಘಟಕಗಳ ಅಯೋಗ್ಯ ವರ್ತನೆಗೆ ಕಾರಣವಾಗಿರುವ ಸ್ವಭಾವದೋಷಗಳ ನಿರ್ಮೂಲನೆ ಮಾಡುವುದು ಅನಿವಾರ್ಯವಾಗಿದೆ.

ದುರಾವಸ್ಥೆಗೆ ಬಂದಿರುವ ಸಮಾಜವ್ಯವಸ್ಥೆ

ಸದ್ಯದ ರಾಜ್ಯವ್ಯವಸ್ಥೆಯಲ್ಲಿ ಮತ್ತು ಸಮಾಜರಚನೆಯಲ್ಲಿ ಸಮಾಜಋಣವನ್ನು ತೀರಿಸುವ ಬದಲು ವ್ಯಕ್ತಿಸ್ವಾತಂತ್ರ್ಯಕ್ಕೆ ಹೆಚ್ಚು ಮಹತ್ವವನ್ನು ನೀಡಲಾಗಿದೆ. ಇದರಿಂದ ಸಮಾಜದಲ್ಲಿರುವ ಎಲ್ಲಾ ಘಟಕಗಳಲ್ಲಿ ಸಂಕುಚಿತತೆ, ಸ್ವಾರ್ಥ ಮತ್ತು ಆತ್ಮಕೇಂದ್ರಿತ ವೃತ್ತಿಯು ಹೆಚ್ಚಾಗಿದೆ. ಸಮಾಜಋಣದ ವಿಚಾರವಾಗದೇ ಇರುವುದರಿಂದ, ಹಾಗೆಯೇ ಸಮಾಜದ ಪ್ರತಿಯೊಂದು ಘಟಕಕ್ಕೆ ಸಾಮಾಜಿಕ ಕರ್ತವ್ಯದ ಅರಿವು ಇಲ್ಲದಿರುವುದರಿಂದ ಮತ್ತು ನೈತಿಕ ಮೌಲ್ಯಗಳು ಲೋಪವಾಗಿದ್ದರಿಂದ ಸಮಾಜ ವ್ಯವಸ್ಥೆಯು ಕ್ಷೀಣಿಸುತ್ತಾ ಬರುತ್ತಿದೆ.

ಎಲ್ಲ ಕ್ಷೇತ್ರಗಳಲ್ಲಿಯೂ ಸೇರಿಕೊಂಡಿರುವ ಭ್ರಷ್ಟಾಚಾರದಿಂದ ದುರಾವಸ್ಥೆಯಲ್ಲಿರುವ ರಾಜ್ಯವ್ಯವಸ್ಥೆ : ಶಿಕ್ಷಣ ಕ್ಷೇತ್ರದಿಂದ ರಕ್ಷಣಾ ಕ್ಷೇತ್ರದ ವರೆಗಿನ ಎಲ್ಲ ಕ್ಷೇತ್ರಗಳಲ್ಲಿಯೂ ಭ್ರಷ್ಟಾಚಾರವು ಸೇರಿಕೊಂಡಿದ್ದರಿಂದ ಭಾರತದ ಅರ್ಥವ್ಯವಸ್ಥೆಯು ಮುರಿದುಬಿದ್ದಿದೆ.

ಕಾನೂನು ಮತ್ತು ಸುವ್ಯವಸ್ಥೆ ಇವುಗಳ ಅಭಾವದಿಂದ ಚಿಂತಾಗ್ರಸ್ತ ಮತ್ತು ಅಸುರಕ್ಷಿತವಾಗಿರುವ ಜನತೆ : ದಂಗೆ, ನಕ್ಸಲವಾದ, ಭಯೋತ್ಪಾದನೆ, ಅಪರಾಧ, ಕೊಲೆ, ಪಾಕ್ಪ್ರೇರಿತ ನುಸುಳುಕೋರರ ವಿಧ್ವಂಸಕ ಕೃತಿಗಳು ಇತ್ಯಾದಿಗಳಿಂದ ಭಾರತದಲ್ಲಿರುವ ಜನತೆಯು ಚಿಂತಾಗ್ರಸ್ತ ಮತ್ತು ಅಸುರಕ್ಷಿತ ಜೀವನವನ್ನು ಜೀವಿಸುತ್ತಿದೆ.

ರಾಷ್ಟ್ರದ ದುರಾವಸ್ಥೆಗೆ ಕಾರಣವಾಗಿರುವ ಘಟಕಗಳು ಮತ್ತು ಸ್ವಭಾವ ದೋಷಗಳ ಪರಸ್ಪರ ಸಂಬಂಧ : ರಾಜಕಾರಣಿಗಳು, ಜನತೆ, ಸಾಮಾಜಿಕ ಕಾರ್ಯಕರ್ತರು ಹಾಗೂ ಯೂನಿಯನ್‌ಗಳ ನೇತಾರರು ಮತ್ತು ಪಂಥ ಹಾಗೂ ಸಂಪ್ರದಾಯಗಳ ನೇತಾರರು ಇವರೆಲ್ಲರೂ ಭಾರತೀಯ ಸಮಾಜವ್ಯವಸ್ಥೆಯ ಮೂಲಭೂತ ಘಟಕಗಳಾಗಿದ್ದಾರೆ. ಇವರಲ್ಲಿ ಸ್ವಭಾವದೋಷಗಳು ಬೆಳೆದಿದ್ದರಿಂದ, ಇವರು ರಾಷ್ಟ್ರದ ಬೆಳವಣಿಗೆಗೆ ಸಹಾಯವಾಗುವ ಬದಲು ರಾಷ್ಟ್ರದ ಅವನತಿಗೆ ಕಾರಣರಾಗುತ್ತಿದ್ದಾರೆ.

ಪಾಶ್ಚಾತ್ಯ ವಿಚಾರಗಳ ಅಂಧಾನುಕರಣೆಯ ವೃತ್ತಿ : ಸಮಾಜದಲ್ಲಿರುವ ಮೇಲಿನ ಘಟಕಗಳಲ್ಲಿರುವ ಅಹಂಭಾವ, ಷಡ್ರಿಪು ಮತ್ತು ಸ್ವಭಾವದೋಷಗಳ ಪ್ರಾಬಲ್ಯವು ಹೆಚ್ಚಾಗಲು ಭೌತಿಕ ಸುಖ-ಸಮೃದ್ಧಿಗಾಗಿ ಪ್ರಾಧಾನ್ಯತೆಯನ್ನು ಕೊಡುವ ರಜ-ತಮಾಧಿಷ್ಠಿತ ಪಾಶ್ಚಾತ್ಯ ರಾಜ್ಯವ್ಯವಸ್ಥೆಯೇ ಕಾರಣವಾಗಿದೆ.

ರಾಷ್ಟ್ರಭಕ್ತಿಯ ಅಭಾವ : ‘ರಾಷ್ಟ್ರದ ಆದರ, ಗೌರವ ಮತ್ತು ಉತ್ಕರ್ಷಕ್ಕಾಗಿ ಪ್ರಾಣಾರ್ಪಣೆ ಮಾಡುವ ಸಿದ್ಧತೆಯಿರುವುದೇ ನನ್ನ ಕರ್ತವ್ಯವಾಗಿದೆ’ ಎಂದು ಪ್ರತಿಯೊಬ್ಬರಿಗೂ ಅನಿಸುವುದಕ್ಕೆ ‘ರಾಷ್ಟ್ರಭಕ್ತಿ’ ಎನ್ನುತ್ತಾರೆ. ಲೋಕಮಾನ್ಯ ತಿಲಕ, ಸ್ವಾತಂತ್ರ್ಯವೀರ ಸಾವರಕರ, ಕ್ರಾಂತಿಕಾರರು ಮತ್ತು ಹುತಾತ್ಮರ ಚರಿತ್ರೆಗಳನ್ನು ಅಧ್ಯಯನ ಮಾಡಿದ ನಂತರ ರಾಷ್ಟ್ರಭಕ್ತಿಯು ಹೇಗಿರಬೇಕು ಎಂಬುದು ಗಮನಕ್ಕೆ ಬರುತ್ತದೆ.

ಜಾತ್ಯತೀತ ರಾಜ್ಯವ್ಯವಸ್ಥೆಯಲ್ಲಿ ನೈತಿಕಮೌಲ್ಯಗಳು ಮತ್ತು ಧರ್ಮಪಾಲನೆಗೆ ಪ್ರಾಧಾನ್ಯತೆಯನ್ನು ಕೊಡದಿರುವುದರಿಂದ ಸಮಾಜದ ಘಟಕಗಳಲ್ಲಿ ಷಡ್ರಿಪುಗಳು ಅಧಿಕ ಪ್ರಮಾಣದಲ್ಲಿ ಕಾರ್ಯನಿರತವಾಗುವುದು : ಪ್ರತಿಯೊಬ್ಬ ವ್ಯಕ್ತಿಯಲ್ಲಿರುವ ಷಡ್ರಿಪುಗಳಿಂದ ಅವನು ವಿಕಾರಗಳಲ್ಲಿ ಸಿಲಕುವ ಸಾಧ್ಯತೆಯಿರುತ್ತದೆ. ಐಹಿಕ ದೃಷ್ಟಿಯಿಂದ ವ್ಯಕ್ತಿಯು ಎಷ್ಟೇ ಸುಖಿ ಮತ್ತು ಸಮೃದ್ಧನಾದರೂ, ಅವನ ವಿಕಾರಗಳು ಅವನಿಗೆ ಶಾಂತವಾಗಿರಲು ಬಿಡುವುದಿಲ್ಲ. ಈ ವಿಕಾರಗಳೇ ವಿವಿಧ ಗುಂಪುಗಳ ನಡುವೆ ಸ್ವಾರ್ಥ ಮತ್ತು ಸಂಘರ್ಷಗಳಿಗೆ ಕಾರಣವಾಗುತ್ತವೆ.

(ಸವಿಸ್ತಾರ ಮಾಹಿತಿಗಾಗಿ ಓದಿ ಸನಾತನ ನಿರ್ಮಿತ ‘ಸ್ವಭಾವದೋಷ (ಷಡ್ರಿಪು) ನಿರ್ಮೂಲನೆಯ ಮಹತ್ವ ಮತ್ತು ಗುಣವೃದ್ಧಿ ಪ್ರಕ್ರಿಯೆ’ ಗ್ರಂಥ)

Leave a Comment