ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅಂದರೆ ಗುರುಗಳು ಸಾಧಕರಿಗೆ ನೀಡಿದ ಪ್ರಸಾದರೂಪಿ ವರದಾನ !

ಪೂ. ಉಮೇಶ ಶಣೈ
ಪೂ. ಉಮೇಶ ಶಣೈ

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ವ್ಯಕ್ತಿಯ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಗುರುಕೃಪಾಯೋಗವನ್ನು ನಿರ್ಮಿಸಿದ್ದಾರೆ. ಇದರಲ್ಲಿ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗೆ ಆದ್ಯತೆ ನೀಡಲಾಗಿದೆ. ಈಶ್ವರಪ್ರಾಪ್ತಿಯಾಗಲು ಮನಸ್ಸಿನ ಶುದ್ಧೀಕರಣವಾಗುವುದು ಮಹತ್ವದ್ದಾಗಿದ್ದು ಸ್ವಭಾವದೋಷ ಮತ್ತು ಅಹಂಅನ್ನು ದೂರಗೊಳಿಸುವುದು ಅತ್ಯಂತ ಆವಶ್ಯಕವಾಗಿದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯ ಮಹತ್ವವನ್ನು ಮನಸ್ಸಿನ ಮೇಲೆ ಬಿಂಬಿಸಲು ಸನಾತನದ ೧೭ ನೇ ಸಂತರಾದ ಪೂ. ಉಮೇಶ ಶಣೈ ಇವರು ಮಾಡಿದ ಮಾರ್ಗದರ್ಶನವನ್ನು ಇಲ್ಲಿ ನೀಡುತ್ತಿದ್ದೇವೆ.

೧. ಅನೇಕ ಆಧ್ಯಾತ್ಮಿಕ ಸಂಸ್ಥೆಗಳಿಗೆ ಸಾಧನೆಯಲ್ಲಿ ಉನ್ನತಿ ಮಾಡಿಕೊಳ್ಳಲು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಆವಶ್ಯಕವಾಗಿದೆ ಎಂಬುದು ಗೊತ್ತೇ ಇಲ್ಲ

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅಂದರೆ ಗುರುಗಳು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು) ಸಾಧಕರಿಗೆ ನೀಡಿದ ಪ್ರಸಾದರೂಪಿ ವರದಾನವೇ ಆಗಿದೆ. ಅನೇಕ ಆಧ್ಯಾತ್ಮಿಕ ಸಂಸ್ಥೆಗಳು ತಮ್ಮ ತಮ್ಮ ವಿಚಾರಗಳೊಂದಿಗೆ, ಗುರುಗಳು ಹೇಳಿದ ಸಾಧನಾ ಮಾರ್ಗದಿಂದ ಸಾಧನೆಯ ಪ್ರಯತ್ನವನ್ನು ಮಾಡುತ್ತಿರುತ್ತಾರೆ. ಇದರಲ್ಲಿ ಹೆಚ್ಚಿನವರು ಭಕ್ತಿಮಾರ್ಗದಿಂದ ಸಾಧನೆಯ ಪ್ರಯತ್ನವನ್ನು ಮಾಡಿ ಮುಂದಿನ ಹಂತಕ್ಕೆ ಹೋಗಲು ಪ್ರಯತ್ನಿಸುತ್ತಾರೆ. ‘ನಮ್ಮ ಸಾಧನೆಯಲ್ಲಿ ನಾವು ಯಾವ ಹಂತದವರೆಗೆ ತಲುಪಿದ್ದೇವೆ?’, ಎಂಬುದು ಅವರ ಸಾಧಕರಿಗೆ ತಿಳಿಯುವುದಿಲ್ಲ. ಅಷ್ಟೇ ಅಲ್ಲ, ಸಂಸ್ಥೆಯೂ ‘ಸಾಧಕರ ಸಾಧನೆ ಹೇಗೆ ನಡೆಯುತ್ತಿದೆ?’ ಎಂಬುದರ ಬಗ್ಗೆ ಅವರನ್ನು ಬೆಂಬತ್ತಿ ಮುಂದಿನ ಹಂತಕ್ಕೆ ಹೋಗಲು ಮಾಡಬೇಕಾದ ಪ್ರಯತ್ನದಲ್ಲಿ ಕಡಿಮೆ ಬೀಳುತ್ತದೆ. ಅನೇಕ ಸಂಸ್ಥೆಗಳಿಗೆ ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ’ಯ ಸಾಧನೆಯ ಬಗೆಗಿನ ಮಾಹಿತಿ ಅತ್ಯಂತ ಕಡಿಮೆ ಇದ್ದು ಅದರ ಬಗ್ಗೆ ಹೇಳಿದರೆ ಅವರು ಆಶ್ಚರ್ಯಪಡುತ್ತಾರೆ.

೨. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂಕಲ್ಪ ಮತ್ತು ಮಾರ್ಗದರ್ಶನದಿಂದ ಸಾಧಕರು ಸಾಧನೆಯ ಮುಂದಿನ ಹಂತಗಳಿಗೆ ಹೋಗುವುದು

ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂಕಲ್ಪ ಮತ್ತು ಮಾರ್ಗದರ್ಶನದಿಂದ ಸಾಧಕರು ಸಾಧನೆಯ ಮುಂದುಮುಂದಿನ ಹಂತಗಳಿಗೆ ಹೋಗುತ್ತಿದ್ದಾರೆ. ಇದರ ಮುಖ್ಯ ಕಾರಣವೆಂದರೆ ಸಾಧಕರು ನಾಮಸ್ಮರಣೆ, ಸತ್ಸಂಗ ಮತ್ತು ಸತ್ಸೇವೆಯೊಂದಿಗೆ ಗುರುದೇವರು ನೀಡಿರುವ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಪ್ರಕ್ರಿಯೆಯನ್ನು ಕೃತಿಯಲ್ಲಿ ತರುತ್ತಿದ್ದಾರೆ.

೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಗೆ ಆದ್ಯತೆಯನ್ನು ನೀಡುವುದು

ಸಾಧನೆಯಲ್ಲಿ ನಾವು ಭಗವಂತನೊಂದಿಗೆ ಏಕರೂಪ ಆಗಬೇಕಾಗುತ್ತದೆ. ಭಗವಂತನು ಸ್ವಭಾವದೋಷರಹಿತ ಮತ್ತು ಅಹಂರಹಿತನಾಗಿದ್ದಾನೆ, ಹೀಗಿರುವಾಗ ‘ನಾವು ನಮ್ಮ ಅನೇಕ ಸ್ವಭಾವದೋಷಗಳು ಮತ್ತು ಅಹಂನ ಜೊತೆಗೆ ಭಗವಂತನ ಜೊತೆಗೆ ಏಕರೂಪವಾಗಲು ಸಾಧ್ಯವಿದೆಯೇ?’, ಅಂತರ್ಮನಸ್ಸಿನಲ್ಲಿ (ಚಿತ್ತದಲ್ಲಿ) ಇಷ್ಟೆಲ್ಲ ಸ್ವಭಾವದೋಷಗಳನ್ನು ಇಟ್ಟುಕೊಂಡು ನಾವು ಆನಂದದಿಂದಿರಲು ಸಾಧ್ಯವೇ? ಆದ್ದರಿಂದಲೇ ಗುರುದೇವರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗೆ ಪ್ರಾಧಾನ್ಯತೆಯನ್ನು ನೀಡಿದ್ದಾರೆ.

೪. ಸಾಧಕರು ‘ನಾವು ಸಾಧನೆಯಲ್ಲಿ ಎಲ್ಲಿ ಕಡಿಮೆ ಬೀಳುತ್ತಿದ್ದೇವೆ’, ಎಂಬುದರ ವಿಚಾರ ಮಾಡಬೇಕು

ಸಾಧಕರು ಸಾಧನೆಯಲ್ಲಿ ಕಡಿಮೆ ಬೀಳಬಾರದೆಂದು ಗುರುದೇವರು ಜವಾಬ್ದಾರ ಸಾಧಕರ ಮಾಧ್ಯಮದಿಂದ ಪ್ರತಿ ಹಂತದಲ್ಲಿ ಸಾಧಕರ ವರದಿಯನ್ನು ಪಡೆದುಕೊಂಡು ಅವರ ಪ್ರಗತಿಯ ಬಗ್ಗೆ ತಿಳಿದುಕೊಳ್ಳುತ್ತಿದ್ದಾರೆ. ಆದ್ದರಿಂದ ಸಾಧಕರು ಸಾಧನೆಯ ಮುಂದಿನ ಹಂತಕ್ಕೆ ಹೋಗಿ ಆನಂದವನ್ನು ಅನುಭವಿಸುತ್ತಿದ್ದಾರೆ. ಸಾಧಕರ ಪ್ರಗತಿಯ ಬಗೆಗಿನ ತಳಮಳವು ಸಾಧಕರಿಗಿಂತ ಗುರುದೇವರಲ್ಲಿಯೇ ಹೆಚ್ಚಿದೆ; ಆದ್ದರಿಂದ ನಾವು ಸಾಧಕರು ‘ಎಲ್ಲಿ ಕಡಿಮೆ ಬೀಳುತ್ತಿದ್ದೇವೆ’, ಎಂಬುದರ ಬಗ್ಗೆ ವಿಶ್ಲೇಷಣೆ ಮಾಡಿ ಗುರುದೇವರಿಗೆ ನಮ್ಮ ಪ್ರಗತಿಯಿಂದ ಆನಂದವನ್ನು ನೀಡಬೇಕು. ಅಂತರ್ಮನಸ್ಸಿನ ಶುದ್ಧೀಕರಣವು ಮೋಕ್ಷಪ್ರಾಪ್ತಿಯ ದಿಶೆಯಲ್ಲಿ ಮಾಡುವ ಮಾರ್ಗಕ್ರಮಣವಾಗಿದೆ. ಇದು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಿಂದ ಮಾಡುವ ಪ್ರಯತ್ನವಾಗಿದೆ.

೫. ವ್ಯಷ್ಟಿ ಸಾಧನೆಯನ್ನು ಮಾಡುವಾಗ ಅಂತರ್ಮುಖತೆ ಮಹತ್ವದ್ದಾಗಿರುವುದು ಮತ್ತು ಅದಕ್ಕಾಗಿ ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆಯ ಸಂಪೂರ್ಣ ಲಾಭವನ್ನು ಪಡೆಯುವುದು ಆವಶ್ಯಕ

‘ಸ್ವಭಾವದೋಷ ಮತ್ತು ಅಹಂ ನಿರ್ಮಲನೆ ತಖ್ತೆ’ಯನ್ನು ತುಂಬಿಸುವುದು ಹಾಗೂ ಸ್ವಯಂಸೂಚನೆಗಳನ್ನು ಕೊಡುವಂತಹ ವಿಷಯಗಳ ಬಗ್ಗೆ ನಮ್ಮಲ್ಲಿ ಗಾಂಭೀರ್ಯ ಮೂಡಿಸುವುದು ಆವಶ್ಯಕವಾಗಿದೆ. ತಖ್ತೆಯನ್ನು ಬರೆಯುವುದು ಅಂದರೆ ಒಂದು ರೀತಿಯಲ್ಲಿ ದೇವರೊಂದಿಗಿನ ಅನುಸಂಧಾನವೇ ಆಗಿರುತ್ತದೆ. ತಖ್ತೆಯಲ್ಲಿ ಎಷ್ಟು ತಪ್ಪುಗಳನ್ನು ಬರೆಯುತ್ತೇವೆಯೋ, ಅದಕ್ಕಿಂತ ಅವುಗಳ ಹಿಂದಿನ ಕಾರಣವನ್ನು ತಿಳಿದುಕೊಳ್ಳುವುದು ಹೆಚ್ಚು ಮಹತ್ವದ್ದಾಗಿದೆ. ಈ ಸಂದರ್ಭದಲ್ಲಿಯೂ ಅಂತರ್ಮುಖವಾಗುವುದು ಅತ್ಯಂತ ಆವಶ್ಯಕವಾಗಿದೆ. ದಿನವಿಡೀ ಆಗಿರುವ ಅನೇಕ ತಪ್ಪುಗಳನ್ನು ನಾವು ಮರೆಯುತ್ತೇವೆ; ಆದ್ದರಿಂದ ತಪ್ಪಾದ ನಂತರ ತಕ್ಷಣ ಅವುಗಳನ್ನು ತಖ್ತೆಯಲ್ಲಿ ಬರೆಯುವ ಅಭ್ಯಾಸವಾಗಬೇಕು. ಇದನ್ನು ನಾವು ಗಾಂಭೀರ್ಯದಿಂದ ಮಾಡಬೇಕು; ಇಲ್ಲದಿದ್ದರೆ ಸ್ವಭಾವದೋಷಗಳಿಗಾಗಿ ಸ್ವಯಂಸೂಚನೆಗಳನ್ನು ಕೊಡುವ ಪ್ರಕ್ರಿಯೆ ಸರಿಯಾಗಿ ಆಗುವುದಿಲ್ಲ. ಸ್ವಭಾವದೋಷ ನಿರ್ಮೂಲನೆಗಾಗಿ ತಖ್ತೆಯನ್ನು ಬರೆಯುವುದು ಇದು ಮೊದಲ ಹಂತ ಮತ್ತು ಅಡಿಪಾಯವಾಗಿದೆ. ಪ್ರತಿಯೊಬ್ಬರೂ ಈ ಕುರಿತು ಗಾಂಭೀರ್ಯದಿಂದ ವಿಚಾರ ಮಾಡಬೇಕು. ಗುರುದೇವರು ನಮಗೆ ಲಭ್ಯ ಮಾಡಿ ಕೊಟ್ಟಿರುವ ಈ ಪ್ರಕ್ರಿಯೆಯ ಲಾಭವನ್ನು ಪಡೆಯಲು ನಾವು ಪ್ರಯತ್ನ ಮಾಡಬೇಕು.

೬. ಸ್ವಭಾವದೋಷಗಳ ನಿರ್ಮೂಲನೆಗಾಗಿ ಸ್ವಯಂಸೂಚನೆ ಅಂತರ್ಮನಸ್ಸಿನ ವರೆಗೆ ತಲುಪಬೇಕು

‘ನಾವು ನಮ್ಮ ಸ್ವಭಾವದೋಷಗಳಿಗಾಗಿ ಕೊಡುತ್ತಿರುವ ಸ್ವಯಂಸೂಚನೆಗಳು ನಮ್ಮ ಅಂತರ್ಮನಸ್ಸಿನವರೆಗೆ ಹೋಗುತ್ತಿವೆಯಲ್ಲ’, ಎಂಬುವುದರ ಬಗ್ಗೆ ಅಂತರ್ಮುಖರಾಗಿ ವಿಚಾರ ಮಾಡಬೇಕು. ನಾವು ದಿನವಿಡೀ ೮ ರಿಂದ ೧೨ ಸ್ವಯಂಸೂಚನೆಗಳನ್ನು ಕೊಡುತ್ತೇವೆ (ಸಾಧಕರ ಸ್ಥಿತಿಗನುಸಾರ ಸ್ವಯಂಸೂಚನೆಯ ಸಂಖ್ಯೆಗಳು ಅವಲಂಬಿಸಿರುತ್ತವೆ. ಸ್ವಯಂಸೂಚನೆಗಳನ್ನು ಎಷ್ಟು ಹೆಚ್ಚು ಕೊಡುತ್ತೇವೆಯೋ, ಅಷ್ಟು ಹೆಚ್ಚು ಲಾಭವಾಗುತ್ತದೆ.); ಆದರೆ ‘ಕೆಲವು ಸ್ವಭಾವದೋಷಗಳು ಇನ್ನೂ ಅಪೇಕ್ಷಿತ ಪ್ರಮಾಣದಲ್ಲಿ ಕಡಿಮೆ ಆಗಲಿಲ್ಲ’, ಎಂಬ ವಿಚಾರವು ಸಾಧಕರಲ್ಲಿ ಕಂಡುಬರುತ್ತವೆ. ಸೂಚನೆಗಳು ಬಾಹ್ಯ ಮನಸ್ಸಿನಲ್ಲಿಯೇ ಇದ್ದರೆ ಹೆಚ್ಚು ಲಾಭವಾಗುವುದಿಲ್ಲ. ನಮ್ಮ ಸ್ವಭಾವದೋಷಗಳು, ಸಂಸ್ಕಾರ ಮತ್ತು ಅಹಂ ಇವುಗಳು ಅಂತರ್ಮನಸ್ಸಿನಲ್ಲಿ ಇರುವುದರಿಂದ ಅವುಗಳನ್ನು ನಾಶ ಮಾಡಲು ಸೂಚನೆಗಳು ಅಂತರ್ಮನಸ್ಸಿನ ವರೆಗೆ ಹೋಗುವುದು ಅತ್ಯಂತ ಆವಶ್ಯಕವಾಗಿದೆ. ಸೂಚನೆಗಳು ಅಂತರ್ಮನಸ್ಸಿನ ವರೆಗೆ ತಲುಪದಿದ್ದರೆ, ಸ್ವಭಾವದೋಷಗಳ ನಿರ್ಮೂಲನೆಯೂ ಆಗುವುದಿಲ್ಲ. ಇದರ ಕಡೆಗೆ ಸಾಧಕರು ಗಮನ ಕೊಡುವುದು ಅಷ್ಟೇ ಮಹತ್ವದ್ದಾಗಿದೆ. ‘ಇಷ್ಟೊಂದು ಪ್ರಯತ್ನ ಮಾಡಿಯೂ ನನ್ನ ಪ್ರಗತಿ ಆಗುವುದಿಲ್ಲ’, ಎಂಬ ನಕಾರಾತ್ಮಕ ವಿಚಾರಕ್ಕೆ ಇದು ಕಾರಣವಾಗುತ್ತದೆ. ಪ್ರತಿಯೊಂದು ಸ್ವಯಂಸೂಚನೆ ಅಂತರ್ಮನಸ್ಸಿನ ವರೆಗೆ ಹೋದರೆ ನಮಗೆ ಆನಂದದ ಸ್ಪಂದನಗಳ ಅರಿವಾಗುತ್ತವೆ.

೭. ಸ್ವಭಾವದೋಷ ಮತ್ತು ಅಹಂ ನಾಶವಾದಾಗ ಮಾತ್ರ ಅಂತರ್ಮನಸ್ಸಿನಲ್ಲಿ ಗುರುಗಳ ಅಸ್ತಿತ್ವದ ಅರಿವಾಗಿ ಆತ್ಮಜ್ಯೋತಿಯ ಪ್ರಕಾಶ ಕಾಣಿಸುವುದು

ಗುರುದೇವರು ಹೇಳಿದಂತೆ ಅಂತರ್ಮನಸ್ಸಿನಲ್ಲಿನ ಸ್ವಭಾವದೋಷ, ಅಹಂಕಾರ, ಇಷ್ಟಾನಿಷ್ಟಗಳು, ವಾಸನಾ ಇತ್ಯಾದಿಗಳನ್ನು ನಾವು ಯಾವಾಗ ಕಡಿಮೆ ಮಾಡುತ್ತೇವೆಯೋ, ಆಗಲೇ ಅವಿದ್ಯೆಯ ಆವರಣ ನಾಶವಾಗಿ ಆತ್ಮಚೈತನ್ಯದ ಅರಿವಾಗುವುದು. ಸೂಚನೆಗಳು ಅಂತರ್ಮನಸ್ಸಿನ ವರೆಗೆ ತಲುಪದಿದ್ದರೆ, ಯಾವುದೇ ಉಪಯೋಗವಾಗುವುದಿಲ್ಲ. ಯಾವಾಗ ಅಂತರ್ಮನಸ್ಸಿನಲ್ಲಿರುವ ಸ್ವಭಾವದೋಷಗಳು ಮತ್ತು ಅಹಂ ನಾಶವಾಗುತ್ತವೆಯೋ, ಆಗಲೇ ಲಿಂಗದೇಹದ ಮೇಲಿರುವ ಅವಿದ್ಯೆಯ ಆವರಣ ನಾಶವಾಗಿ ಶುದ್ಧೀಕರಣದ ನಂತರವೇ ಗುರುಗಳ ಅಸ್ತಿತ್ವದ ಅರಿವಾಗುವುದು ಮತ್ತು ಆತ್ಮಜ್ಯೋತಿಯ ಪ್ರಕಾಶ ಕಾಣಿಸುವುದು.

೮. ಸ್ವಯಂಸೂಚನೆಯ ಸತ್ರಗಳನ್ನು ಏಕಾಗ್ರತೆಯಿಂದ ಮಾಡಿದರೆ ಅವು ಅಂತರ್ಮನಸ್ಸಿನ ವರೆಗೆ ತಲುಪುತ್ತವೆ, ಎಂಬುದು ಖಂಡಿತ !

ಅದಕ್ಕಾಗಿ ೫ ನಿಮಿಷ ಜಪ ಮಾಡಿ ಸ್ವಯಂಸೂಚನೆಗಳನ್ನು ಕೊಡಲು ಆರಂಭಿಸಬೇಕು.

೯. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಆದ ನಂತರವೇ ಗುಣಸಂವರ್ಧನೆ ಆಗಲು ಸಹಾಯವಾಗುವುದು

ಸ್ವಯಂಸೂಚನೆ ಸಕಾರಾತ್ಮಕವಾಗಿದೆಯೇ, ಸ್ವಭಾವದೋಷಕ್ಕೆ ಸಂಬಂಧಿಸಿದ ಪ್ರಸಂಗವನ್ನು ಯೋಗ್ಯ ರೀತಿಯಲ್ಲಿ ಉಲ್ಲೇಖಿಸಲಾಗಿದೆಯೇ, ಎಂಬುದನ್ನು ನೋಡುವುದು ಮಹತ್ವದ್ದಾಗಿದೆ. ಸೂಚನೆಯ ಜೊತೆಗೆ ಯೋಗ್ಯ ದೃಷ್ಟಿಕೋನವನ್ನು ನೀಡಿದರೆ ಅದು ಅಂತರ್ಮನಸ್ಸಿನವರೆಗೆ ಹೋಗಿ ಸ್ವಭಾವದೋಷವನ್ನು ತೆಗೆದುಹಾಕಲು ಸಹಾಯವಾಗುತ್ತದೆ. ತುಂಬಾ ಆವರಣವಿದ್ದಾಗ ಸೂಚನೆಗಳನ್ನು ನೀಡಿದರೆ ಹೆಚ್ಚು ಉಪಯೋಗವಾಗುವುದಿಲ್ಲ. ಆದ್ದರಿಂದ ಆವರಣವನ್ನು ತೆಗೆದೇ ಸೂಚನೆಗಳನ್ನು ಕೊಡಬೇಕು. ಅಂತರ್ಮನಸ್ಸಿನಲ್ಲಿರುವ ಸಂಸ್ಕಾರಗಳು ಬಾಹ್ಯಮನಸ್ಸಿಗೆ ತಿಳಿಯುವುದಿಲ್ಲ. ಅದಕ್ಕಾಗಿ ಸ್ವಯಂಸೂಚನೆಗಳನ್ನೇ ಕೊಡಬೇಕು. ಬಾಹ್ಯಮನಸ್ಸು ಸ್ವೀಕರಿಸುತ್ತದೆ; ಆದರೆ ಅಂತರ್ಮನಸ್ಸು ಸ್ವೀಕರಿಸಲು ಬಿಡುವುದಿಲ್ಲ. ಅದಕ್ಕಾಗಿಯೇ ಅಂತರ್ಮನಸ್ಸಿಗೆ ತಲುಪುವವರೆಗೆ ಹೆಚ್ಚೆಚ್ಚು ಸ್ವಯಂಸೂಚನೆಗಳನ್ನು ಕೊಡಬೇಕು. ಸ್ವಯಂಸೂಚನೆಗಳು ಉತ್ತಮ ರೀತಿಯಲ್ಲಾದರೆ ಮನಸ್ಸು ಶುದ್ಧ ಮತ್ತು ಸ್ಥಿರವಾಗಿ ಆನಂದದ ಅನುಭೂತಿ ಬರುತ್ತದೆ. ಸ್ವಯಂಸೂಚನೆಗಳು ಅಂತರ್ಮನಸ್ಸನ್ನು ಶುದ್ಧಗೊಳಿಸುತ್ತವೆ. ಶುದ್ಧೀಕರಣವಾದ ಚಿತ್ತದಲ್ಲಿ ಗುರುಗಳ ವಾಸವಿರುತ್ತದೆ. ಸ್ವಭಾವದೋಷ ಮತ್ತು ಅಹಂನ ನಿರ್ಮೂಲನೆಯಾದ ನಂತರ ಗುಣಸಂವರ್ಧನೆ ಆಗಲು ಸಹಾಯವಾಗುತ್ತದೆ. ಮನಸ್ಸಿಗೆ ಯೋಗ್ಯ ದೃಷ್ಟಿಕೋನ ಸಿಗುವವರೆಗೆ ಅದು ಅಸ್ಥಿರ ಮತ್ತು ಅಸ್ವಸ್ಥವಾಗಿರುತ್ತದೆ. ಬುದ್ಧಿಯಿಂದ ಎಷ್ಟು ಹೇಳಿದರೂ ಸ್ವಭಾವದೋಷಗಳು ಹೋಗುವುದಿಲ್ಲ.

೧೦. ನಮ್ಮಲ್ಲಿ ಬದಲಾವಣೆಯಾಗಲು ಇತರ ಪದ್ಧತಿಗಳನ್ನು ಅವಲಂಬಿಸುವುದರ ಮಹತ್ವ

ಚಿಕ್ಕ-ಚಿಕ್ಕ ತಪ್ಪುಗಳಿಗಾಗಿಯೂ ಪ್ರಾಯಶ್ಚಿತ್ತ ಮತ್ತು ಶಿಕ್ಷಾಪದ್ಧತಿಯನ್ನು ಉಪಯೋಗಿಸಿದರೆ ಅಂತರ್ಮನಸ್ಸಿನ ಮೇಲೆ ಪರಿಣಾಮವಾಗಲು ಸಹಾಯವಾಗುತ್ತದೆ. ತಖ್ತೆ ಬರೆಯುವುದು, ಸ್ವಯಂಸೂಚನೆಗಳನ್ನು ಕೊಡುವುದು, ಕ್ಷಮಾಯಾಚನೆ, ಪ್ರಾಯಶ್ಚಿತ್ತವನ್ನು ತೆಗೆದುಕೊಳ್ಳುವುದು ಮತ್ತು ಫಲಕದ ಮೇಲೆ ತಪ್ಪುಗಳನ್ನು ಬರೆಯುವುದು, ಇವು ಸ್ಥೂಲದಲ್ಲಿ ಮಾಡುವ ಪ್ರಕ್ರಿಯೆಗಳಾಗಿವೆ. ಆದ್ದರಿಂದ ನಮ್ಮ ಅಹಂ ಜಾಗೃತವಾಗದಂತೆ ಎಚ್ಚರವಹಿಸಬೇಕು. ಮೇಲಿನ ಅಂಶಗಳು (ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ) ಸಾಧನೆಯ ಪ್ರಾಣವಾಯು ಆಗಿದ್ದು ಖಂಡಿತವಾಗಿಯೂ ಸೂಕ್ಷ್ಮದಿಂದ ಇದರ ಪರಿಣಾಮವಾಗುತ್ತದೆ.

ಸಾಧಕರು ತಿಳಿದುಕೊಳ್ಳಬೇಕಾದ ಅಂಶವೇನೆಂದರೆ, ಎಲ್ಲಿಯವರೆಗೆ ನಮ್ಮ ಅಂತರ್ಮನಸ್ಸಿನಲ್ಲಿರುವ ಸಂಸ್ಕಾರಗಳ ನಿರ್ಮೂಲನೆ ಆಗುವುದಿಲ್ಲವೋ, ಅಲ್ಲಿಯವರೆಗೆ ನಮಗೆ ಸಿಗುವ ಪ್ರತಿಯೊಂದು ಜನ್ಮದಲ್ಲಿ ಅದೇ ಲಿಂಗದೇಹವನ್ನು ತೆಗೆದುಕೊಂಡು ನಾವು ಪುನಃ ಪುನಃ ಜನ್ಮ ಪಡೆಯುತ್ತೇವೆ ಎಂಬುದನ್ನು ಮರೆಯಬಾರದು.

೧೧. ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಲು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಅತ್ಯಾವಶ್ಯಕವಾಗಿರುವುದು

ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತವಾಗುವ ಪದ್ಧತಿಯನ್ನು ಗುರುದೇವರು ನಮಗೆ ಎಷ್ಟೊಂದು ಸುಲಭ ರೀತಿಯಲ್ಲಿ ಹೇಳಿದ್ದಾರೆ. ಈ ಪ್ರಕ್ರಿಯೆಯ ಫಲವೆಂದರೆ ಸನಾತನ ಸಂಸ್ಥೆಯ ಸಾವಿರಾರು ಸಾಧಕರು ಗುರುದೇವರ (ಪರಾತ್ಪರ ಗುರು ಡಾಕ್ಟರರ) ಕೃಪೆಯಿಂದ ಶೇ. ೬೦ ಕ್ಕಿಂತಲೂ ಹೆಚ್ಚು ಸಾತ್ತ್ವಿಕತೆ ಪಡೆದು ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಿದ್ದಾರೆ. ನೂರಾರು ಸಾಧಕರು ಸಂತರು, ಹಾಗೆಯೇ ಸದ್ಗುರು ಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ಇದೆಲ್ಲವು ಗುರುಗಳ ಸಂಕಲ್ಪ ಮತ್ತು ಅವರು ನಮಗಾಗಿ ಹಗಲಿರುಳು ಮಾಡುತ್ತಿರುವ ಪ್ರಯತ್ನಗಳ ಫಲವಾಗಿದೆ.

೧೨. ಸಹಸಾಧಕರನ್ನು ‘ಅವರು ಇದ್ದ ಹಾಗೆ ಸ್ವೀಕರಿಸುವುದು’ ಮಹತ್ವದ್ದಾಗಿದೆ

ಗುರುದೇವರು ಹೇಳಿದಂತೆ ‘ಮನಸ್ಸಿನ ವಿರುದ್ಧ ಹೋಗುವುದೇ’ ಸಾಧನೆಯಾಗಿದೆ. ಆದ್ದರಿಂದ ಸಾಧಕರು ಇತರ ಸಾಧಕರನ್ನು ‘ಅವರು ಇದ್ದ ಹಾಗೆ ಸ್ವೀಕರಿಸಿ’ ಅವರೊಂದಿಗೆ ಸಕಾರಾತ್ಮಕತೆ ಮತ್ತು ಪ್ರೀತಿಯಿಂದ ನಡೆದುಕೊಂಡರೆ ನಮ್ಮ ಅಂತರ್ಮನಸ್ಸಿನಲ್ಲಿರುವ ಎಷ್ಟೋ ಸ್ವಭಾವದೋಷಗಳು ಮತ್ತು ಅಹಂ ನಿರ್ಮೂಲನೆಯಾಗಲು ಸಹಾಯವಾಗುತ್ತದೆ. ‘ಸಾಧಕರೊಂದಿಗೆ ವ್ಯವಹರಿಸುವಾಗ, ಅವರೊಂದಿಗೆ ಸೇವೆಯನ್ನು ಮಾಡುವಾಗ ನಮ್ಮ ಮನಸ್ಸಿನಲ್ಲಿ ಅವರ ಬಗ್ಗೆ ಯಾವ ವಿಚಾರಗಳು ಬರುತ್ತವೆ’, ಎಂಬುದನ್ನು ಅವಲೋಕಿಸಬೇಕು. ಬಿಂಬ-ಪ್ರತಿಬಿಂಬ ಸಿದ್ಧಾಂತದಂತೆ ಸಾಧಕರ ವಿಚಾರ ಮತ್ತು ಕೃತಿಗಳಿಂದ ನಮ್ಮ ಮೇಲೆ ಪರಿಣಾಮವಾಗುತ್ತದೆ. ಆ ವಿಚಾರಗಳು ನಕಾರಾತ್ಮಕವಾಗಿವೆಯೋ ಅಥವಾ ಸಕಾರಾತ್ಮಕವಾಗಿವೆಯೋ, ಇದರತ್ತ ಗಮನಹರಿಸಬೇಕು. ಯಾವುದೇ ಕಾರಣಕ್ಕೆ ಅಯೋಗ್ಯ ವಿಚಾರ ಅಥವಾ ಪ್ರತಿಕ್ರಿಯೆ ಬಂದಾಗ ನಮ್ಮ ಮನಸ್ಸಿನಲ್ಲಿ ಅವರ ಬಗ್ಗೆ ಯೋಗ್ಯ ಸ್ಪಂದನಗಳು ಬರುವುದಿಲ್ಲ, ಎಂಬುದನ್ನು ತಿಳಿದುಕೊಂಡು ನಾವು ಅವರೊಂದಿಗೆ ಇನ್ನೂ ಹೆಚ್ಚೆಚ್ಚು ಬೆರೆತು ನಮ್ಮ ನಕಾರಾತ್ಮಕ ಮತ್ತು ಪ್ರತಿಕ್ರಿಯಾತ್ಮಕ ಸ್ಪಂದನಗಳನ್ನು ಸಕಾರಾತ್ಮಕಗೊಳಿಸಿ ಅಂತರ್ಮನಸ್ಸಿನಲ್ಲಿ ಅವರ ಬಗ್ಗೆ ಇರುವ ಸಂಸ್ಕಾರ ಕೇಂದ್ರವನ್ನು ನಾಶ ಮಾಡಬೇಕು.

೧೩. ಸ್ವೇಚ್ಛೆಯಿಂದ ಪರೇಚ್ಛೆಯ ಕಡೆ ಮತ್ತು ನಂತರ ಈಶ್ವರೇಚ್ಛೆಯ ಕಡೆ ಹೋದ ನಂತರ ಅಂತರ್ಮನಸ್ಸಿನಲ್ಲಿರುವ ಅನೇಕ ಸಂಸ್ಕಾರಗಳು ನಾಶವಾಗುವವು

ಗುರುದೇವರು ಹೇಳಿದಂತೆ ಸ್ವೇಚ್ಛೆಯಿಂದ ಪರೇಚ್ಛೆಯ ಕಡೆ ಮತ್ತು ನಂತರ ಈಶ್ವರೇಚ್ಛೆಯ ಕಡೆ ಹೋದನಂತರ ನಮ್ಮ ಅಂತರ್ಮನಸ್ಸಿನಲ್ಲಿರುವ ಅನೇಕ ಸಂಸ್ಕಾರಗಳು ನಾಶವಾಗುವವು. ಆದ್ದರಿಂದ ‘ಪ್ರತಿಯೊಬ್ಬ ಸಾಧಕನತ್ತ ನೋಡುವಾಗ ನಮ್ಮಲ್ಲಿ ಸಕಾರಾತ್ಮಕ ಸ್ಪಂದನಗಳು ಬಂದರೆ ನಮ್ಮ ಅಂತರ್ಮನಸ್ಸಿನಲ್ಲಿರುವ ಅನೇಕ ಕೇಂದ್ರಗಳು ನಾಶವಾಗಿವೆ’ ಎಂದು ತಿಳಿಯಬಹುದು. ಗುರುದೇವರ ಸಾನಿಧ್ಯದಲ್ಲಿರುವಾಗ ಗುರುದೇವರಿಗೆ ನಮ್ಮ ಪ್ರತಿಯೊಂದು ಆಚಾರ-ವಿಚಾರ, ಪ್ರಸಂಗ, ನಡೆ-ನುಡಿ ಇತ್ಯಾದಿಗಳು ತಕ್ಷಣ ತಿಳಿಯುತ್ತವೆ.

೧೪. ಅಂತರ್ಮನಸ್ಸಿನ ಶುದ್ಧೀಕರಣವಾಗಿ ಮನೋದೇಹ, ಕಾರಣದೇಹ ಮತ್ತು ಮಹಾಕಾರಣದೇಹ ಇವುಗಳ ಶುದ್ಧೀಕರಣ ತಾನಾಗಿಯೇ ಆಗುವುದು

ಪ್ರತಿಯೊಬ್ಬ ಸಾಧಕ ಮತ್ತು ನಮ್ಮ ಜೀವನದಲ್ಲಿ ಘಟಿಸುವ ಪ್ರತಿಯೊಂದು ಪ್ರಸಂಗವು ನಮ್ಮ ಪ್ರಗತಿಗಾಗಿ ಗುರುದೇವರು ನೀಡಿದ ಪ್ರಸಾದವೇ ಆಗಿದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯಾದ ನಂತರ ಅಂತರ್ಮನಸ್ಸು ಶುದ್ಧವಾಗಿ ಮನೋದೇಹ, ಕಾರಣದೇಹ ಮತ್ತು ಮಹಾಕಾರಣದೇಹ ಇವು ತಾನಾಗಿಯೇ ಶುದ್ಧವಾಗುವವು. ಶುದ್ಧವಾದ ಅಂತರ್ಮನಸ್ಸಿನಲ್ಲಿ ಭಗವಂತನ ವಿಚಾರಗಳು ಸತತವಾಗಿ ಬರತೊಡಗುತ್ತವೆ. ಗುರುದೇವರು ಹೇಳಿದಂತೆ ಅಧ್ಯಾತ್ಮ ಕೇವಲ ನೋಡುವ, ಕೇಳುವ ಅಥವಾ ಓದುವ ಶಾಸ್ತ್ರವಾಗಿರದೇ, ಅದು ಕೃತಿಯ ಶಾಸ್ತ್ರವಾಗಿದೆ. ಕೃತಿಯನ್ನು ಮಾಡದಿದ್ದರೆ ಅನುಭೂತಿಗಳು ಬರುವುದಿಲ್ಲ ಮತ್ತು ಅನುಭೂತಿಗಳು ಬರದಿದ್ದರೆ ನಮ್ಮ ಶ್ರದ್ಧೆ ಹೆಚ್ಚಾಗುವುದಿಲ್ಲ.

ಮೇಲೆ ಹೇಳಿದ ವಿಚಾರಗಳು ಗುರುಕೃಪೆಯಿಂದ ಮತ್ತು ಆಶ್ರಮದಲ್ಲಿ ವಿರಾಜಮಾನವಾಗಿರುವ ಸದ್ಗುರುಗಳ ಮತ್ತು ಸಂತರ ಮಾರ್ಗದರ್ಶನದಿಂದ ಲಭಿಸಿವೆ, ಹಾಗೆಯೇ ಆಶ್ರಮದಲ್ಲಿರುವ ಸಾಧಕರ ಜೊತೆಗೆ ಲಭಿಸಿದ ಸಂವಾದದಿಂದ ಪ್ರಾಪ್ತವಾಗಿವೆ. ಇದರಲ್ಲಿ ನನ್ನದೇನೂ ಇಲ್ಲ; ಆದ್ದರಿಂದ ಈ ಬರವಣಿಗೆಯನ್ನು ಗುರುಚರಣಗಳಲ್ಲಿ ಅರ್ಪಿಸುತ್ತಿದ್ದೇನೆ.

– (ಪೂ.) ಉಮೇಶ ಶೆಣೈ, ಸನಾತನ ಆಶ್ರಮ, ದೇವದ, ಪನವೇಲ. (೬.೩.೨೦೨೩)

Leave a Comment