ಕೈದೋಟಕ್ಕಾಗಿ ಹ್ಯೂಮಸ್ (ಫಲವತ್ತಾದ ಮಣ್ಣು) ಹೇಗೆ ತಯಾರಿಸಬೇಕು ?

Article also available in :

‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ’ ಪದ್ಧತಿಯಲ್ಲಿ ‘ಹ್ಯೂಮಸ್’ಗೆ (ನೈಸರ್ಗಿಕ ಪದಾರ್ಥಗಳ ವಿಘಟನೆಯ ನಂತರ ರೂಪುಗೊಂಡ ಫಲವತ್ತಾದ ಮಣ್ಣು) ಬಹಳ ಮಹತ್ವವಿದೆ. ಈ ‘ಹ್ಯೂಮಸ್’ ಬಗೆಗಿನ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಮಣ್ಣಿನ ಲಭ್ಯತೆ ಬಗ್ಗೆ ನಗರದ ಜನರಿಗೆದುರಾಗುವ ಸಮಸ್ಯೆ

ಗಿಡಗಳಿಗೆ ಆಧಾರಕ್ಕಾಗಿ, ಹಾಗೆಯೇ ಆಹಾರದ್ರವ್ಯಗಳನ್ನು ದೊರಕಿಸಿಕೊಳ್ಳಲು ಮಣ್ಣಿನ ಆವಶ್ಯಕತೆ ಇರುತ್ತದೆ. ನಗರದ ಜನರಿಗೆ ಮನೆಯಲ್ಲಿ ಕೈದೋಟ ಮಾಡುವುದಿದ್ದರೆ ಮಣ್ಣನ್ನು ಎಲ್ಲಿಂದ ತರಬೇಕು ? ಎಂಬ ಪ್ರಶ್ನೆ ಉದ್ಭವಿಸುತ್ತದೆ. ನಗರಗಳಲ್ಲಿ ಮಣ್ಣು ಸಿಗುವುದು ಕಠಿಣವಿರುತ್ತದೆ ಮತ್ತು ದೊರಕಿದ ಮಣ್ಣು ಫಲವತ್ತಾಗಿರುತ್ತದೆ, ಎಂದು ಹೇಳಲು ಬರುವುದಿಲ್ಲ. ಹೆಚ್ಚಾಗಿ ಮನೆಗಳಲ್ಲಿ ಕೈದೋಟವನ್ನು ಮೇಲ್ಛಾವಣಿಯಲ್ಲಿ ಮಾಡಲಾಗುತ್ತದೆ. ಮಣ್ಣು ಭಾರವಾಗಿರುವುದರಿಂದ ಮೇಲಿನ ವರೆಗೆ ತೆಗೆದುಕೊಂಡು ಹೋಗುವುದು ಕಠಿಣವಿರುತ್ತದೆ, ಹಾಗೆಯೇ ಮೇಲ್ಛಾವಣಿಗೂ ಮಣ್ಣು ಭಾರವಾಗುತ್ತದೆ.

ನೈಸರ್ಗಿಕ ಪದಾರ್ಥಗಳು ವಿಘಟನೆಯಾಗಿ ತಯಾರಾಗುವ ‘ಫಲವತ್ತಾದ ಮಣ್ಣು (ಹ್ಯೂಮಸ್)’

ಒಣಗಿದ ಹುಲ್ಲು, ಕೊಳೆತ ಕಸ, ಗಿಡಗಳ ಒಣಗಿದ ಎಲೆ ಮತ್ತು ಕಡ್ಡಿಗಳು, ತೆಂಗಿನನಾರು, ಅಡುಗೆಮನೆಯಲ್ಲಿನ ಹಸಿ ಕಸ ಈ ಎಲ್ಲವುಗಳನ್ನು ಕೊಳೆಸಿ ನಾವು ಗಿಡಗಳಿಗಾಗಿ ‘ಫಲವತ್ತಾದ ಮಣ್ಣು’ ತಯಾರಿಸಿಕೊಳ್ಳಬಹುದು. ಇಂತಹ ನೈಸರ್ಗಿಕ ಪದಾರ್ಥಗಳು ಕೊಳೆತು ಯಾವ ‘ಮಣ್ಣು’ ತಯಾರಾಗುತ್ತದೋ ಅದಕ್ಕೆ ಆಂಗ್ಲ ಭಾಷೆಯಲ್ಲಿ ‘ಹ್ಯೂಮಸ್’ ಎಂದು ಹೇಳುತ್ತಾರೆ.

ಫಲವತ್ತಾದ ಮಣ್ಣು ತಯಾರಿಸಲು ನಗರಗಳಲ್ಲಿ ಲಭ್ಯವಿರುವ ಸಾಧನಗಳು

‘ಹ್ಯೂಮಸ್’ ಇದು ಗಿಡಗಳಿಗಾಗಿ ಆಹಾರ ದ್ರವ್ಯಗಳ ಗಣಿಯಾಗಿದೆ. ನಗರಗಳಲ್ಲಿನ ಸೊಸೈಟಿಗಳಲ್ಲಿ ದೊಡ್ಡ ಮರಗಳು ಇರುವಲ್ಲಿ ಒಣಗಿದ ಎಲೆಗಳು, ಕಡ್ಡಿಗಳು ಸಿಗುತ್ತವೆ. ಮಾವಿನಹಣ್ಣುಗಳ ಸುಗ್ಗಿಯಲ್ಲಿ ಮಾವು ಇಡುವ ಪೆಟ್ಟಿಗೆಗಳಲ್ಲಿ ಒಣಗಿದ ಹುಲ್ಲು ಸಿಗುತ್ತದೆ. ಮನೆಯಲ್ಲಿ ಕೊಳೆತ ಕಸ, ಹಾಗೆಯೇ ತೆಂಗಿನನಾರು ಈ ಎಲ್ಲವುಗಳನ್ನು ಬಳಸಿ ನಾವು ಉತ್ತಮ ದರ್ಜೆಯ ‘ಹ್ಯೂಮಸ್’ ತಯಾರಿಸಬಹುದು.

ಸೊಪ್ಪುತರಕಾರಿಗಳನ್ನು ಬೆಳೆಸಲು ಪಾತಿಗಳನ್ನು ಹೇಗೆ ತಯಾರಿಸಬೇಕು ?

ಮನೆಯಲ್ಲಿಯೇ ಗಿಡಗಳನ್ನು ಬೆಳೆಸಲು ಹಗಲಿನಲ್ಲಿ ಕನಿಷ್ಠ ೩ – ೪ ಗಂಟೆ ಬಿಸಿಲು ಬೀಳುವಂತಹ ಜಾಗವನ್ನು ಆಯ್ಕೆ ಮಾಡಬೇಕು. (ಸೊಪ್ಪುತರಕಾರಿಗಳನ್ನು ಬೆಳೆಸಲು ಎಷ್ಟು ಹೆಚ್ಚು ಬಿಸಿಲು ಸಿಗುವುದೋ ಅಷ್ಟು ಒಳ್ಳೆಯದು.) ಈ ಸ್ಥಳದಲ್ಲಿ ಗಿಡಗಳನ್ನು ಬೆಳೆಸಲು ಕುಂಡಗಳನ್ನು ಇಡಬೇಕು ಅಥವಾ ಇಟ್ಟಿಗೆಗಳನ್ನು ಬಳಸಿ ಪಾತಿಗಳನ್ನು ತಯಾರಿಸಿಕೊಳ್ಳಬೇಕು. ಪಾತಿಗಳ ಅಗಲ ೨ ಅಡಿಗಳ ವರೆಗಷ್ಟೇ ಇರಬೇಕು. ಹೀಗೆ ಮಾಡುವುದರಿಂದ ನಮಗೆ ಪಾತಿಗಳಲ್ಲಿ ಗಿಡಗಳನ್ನು ಬೆಳೆಸಲು ಸುಲಭವಾಗುತ್ತದೆ. ಕೆಳಗೆ ಬಗ್ಗುವುದನ್ನು ತಪ್ಪಿಸಲು ನೆಲದಿಂದ ಸ್ವಲ್ಪ ಎತ್ತರದಲ್ಲಿ ಪಾತಿಗಳನ್ನು ನಿರ್ಮಿಸಬಹುದು. ಮನೆಯ ಕಿಟಕಿಗಳಲ್ಲಿ ಎಲ್ಲಿ ಬಿಸಿಲು ಬೀಳುತ್ತದೋ ಅಂತಹ ಜಾಗದಲ್ಲಿಯೂ ಪಾತಿಗಳನ್ನು ತಯಾರಿಸಲು ಸಾಧ್ಯವಿದೆ. ಒಂದು ಇಟ್ಟಿಗೆಯ ಅಗಲದಷ್ಟು ಎತ್ತರದ ಅಂದರೆ ಸಾಧಾರಣ ೪ ಇಂಚು ಎತ್ತರದ ಪಾತಿಗಳು ಸಾಕಾಗುತ್ತವೆ. ಹೀಗೆ ಮಾಡುವುದರಿಂದ ಮೇಲ್ಛಾವಣಿಗೆ ಮಣ್ಣಿನ ಭಾರ ಹೆಚ್ಚಾಗುವುದಿಲ್ಲ.

‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ’ ಪದ್ಧತಿಯಲ್ಲಿ ಈ ಗಿಡಗಳಿಗೆ ಬಹಳ ಕಡಿಮೆ ನೀರು ಸಾಕಾಗುವುದರಿಂದ ಪಾತಿಗಳ ಕೆಳಗೆ ಪ್ಲಾಸ್ಟಿಕಿನ ಹಾಸು ಹಾಕುವ ಆವಶ್ಯಕತೆ ಇರುವುದಿಲ್ಲ, ಆದರೂ ನೀರು ಕೆಳಗೆ ಇಂಗುವುದೋ ಹೇಗೆ ಎಂಬ ಸಂದೇಹವಿದ್ದರೆ, ನೆಲದ ಮೇಲೆ ಪ್ಲಾಸ್ಟಿಕಿನ ಹಾಸಿನ ಮೇಲೆ ಇಟ್ಟಿಗೆಗಳ ಪಾತಿಗಳನ್ನು ತಯಾರಿಸಬೇಕು.

ಪಾತಿಗಳಲ್ಲಿ ನೈಸರ್ಗಿಕ ಕಸವನ್ನು ಹರಡಿ ಅದರ ಮೇಲೆ ವಾರಕ್ಕೊಮ್ಮೆ ಜೀವಾಮೃತವನ್ನು ಸಿಂಪಡಿಸಬೇಕು

ನಾವು ಗಿಡಗಳನ್ನು ಬೆಳೆಸುವ ಕುಂಡಗಳಲ್ಲಿ ಅಥವಾ ಇಟ್ಟಿಗೆಗಳ ಪಾತಿಗಳಲ್ಲಿ ಒಣಗಿದ ನೈಸರ್ಗಿಕ ಕಸ (ಉದಾ. ತೆಂಗಿನನಾರು, ಒಣಗಿದ ಹುಲ್ಲು, ಗಿಡಗಳ ಒಣಗಿದ ಎಲೆಗಳು, ಕಡ್ಡಿಗಳು) ವನ್ನು ಹರಡಿ ಒತ್ತಿಡಬೇಕು. ಇದರ ಮೇಲೆ ಲಭ್ಯವಿದ್ದರೆ ಸ್ವಲ್ಪ ಮಣ್ಣನ್ನು ಹರಡಬೇಕು. ಮಣ್ಣನ್ನು ಹಾಕದಿದ್ದರೂ ನಡೆಯುತ್ತದೆ; ಆದರೆ ಮಣ್ಣನ್ನು ಹಾಕಿದರೆ ಕಸವು ಬೇಗನೆ ಕೊಳೆಯುತ್ತದೆ. ಇದರ ಮೇಲೆ ಅಡುಗೆಮನೆಯಲ್ಲಿನ ಹಸಿ ಕಸವನ್ನು ಸ್ವಲ್ಪ ಪ್ರಮಾಣದಲ್ಲಿ ಹಾಕಬಹುದು; ಆದರೆ ಹಸಿ ಕಸದ ಪದರು ೧ ಇಂಚಿಗಿಂತ ಹೆಚ್ಚು ಇರಬಾರದು; ಏಕೆಂದರೆ ಹೀಗಾದರೆ ದುರ್ಗಂಧವು ಹರಡಬಹುದು. ದೇಶಿ ಹಸುವಿನ ಸೆಗಣಿಯಲ್ಲಿ ನೈಸರ್ಗಿಕ ಕಸವನ್ನು ಕೊಳೆಯಿಸುವ ಜೀವಾಣುಗಳಿರುತ್ತವೆ. ಈ ಸೆಗಣಿಯಿಂದ ‘ಜೀವಾಮೃತ’ ಹೆಸರಿನ ಪದಾರ್ಥವನ್ನು ತಯಾರಿಸಲಾಗುತ್ತದೆ.

ಈ ಜೀವಾಮೃತವನ್ನು ತಯಾರಿಸಿ ಅದನ್ನು ಹತ್ತು ಪಟ್ಟು ನೀರಿನಲ್ಲಿ ಸೇರಿಸಿ ಕಸದ ಮೇಲೆ ಸಿಂಪಡಿಸಿದರೆ ಈ ಕಸವು ಬೇಗನೆ ಕೊಳೆಯುತ್ತದೆ ಮತ್ತು ಕಸದಿಂದ ಕೈದೋಟಕ್ಕಾಗಿ ಉಪಯುಕ್ತ ‘ಹ್ಯೂಮಸ್’ ತಯಾರಾಗುತ್ತದೆ. ವಾರಕ್ಕೊಮ್ಮೆ ಜೀವಾಮೃತವನ್ನು ತಯಾರಿಸಿ ಅದನ್ನು ಹತ್ತು ಪಟ್ಟು ನೀರಿನಲ್ಲಿ ಸೇರಿಸಿ ಒಂದು ಸಲ ಕಸದ ಮೇಲೆ ಸಿಂಪಡಿಸಬೇಕು. ಪ್ರತಿದಿನ ಬೆಳಗ್ಗೆ, ಸಾಯಂಕಾಲ ಕುಂಡಗಳು ಮತ್ತು ಪಾತಿಗಳಲ್ಲಿನ ಕಸದ ಮೇಲೆ ನೀರನ್ನು ಸಿಂಪಡಿಸಿ ಅದು ಒದ್ದೆಯಾಗಿರುವಂತೆ ನೋಡಬೇಕು; ಆದರೆ ಜಾಸ್ತಿ ನೀರು ಹಾಕಬಾರದು. (‘ಜೀವಾಮೃತ’ವನ್ನು ತಯಾರಿಸಿ ಅದನ್ನು ಬಳಸುವುದು ಆದರ್ಶವಾಗಿದೆ; ಆದರೆ ಯಾವುದೇ ಕಾರಣಗಳಿಂದ ಜೀವಾಮೃತವನ್ನು ತಯಾರಿಸುವುದು ಸಾಧ್ಯವಾಗದಿದ್ದರೆ ಕೇವಲ ಬೆಳಗ್ಗೆ ಸಾಯಂಕಾಲ ನೀರನ್ನು ಸಿಂಪಡಿಸಬೇಕು. ಮನೆಯಲ್ಲಿನ ಮುಸುರೆ ಪಾತ್ರೆಗಳನ್ನು ತೊಳೆದ ನೀರನ್ನೂ ಸಹ ಈ ಕಸದ ಮೇಲೆ ಸಿಂಪಡಿಸಬಹುದು; ಆದರೆ ಇದರಲ್ಲಿ ಸಾಬೂನು ಇರಬಾರದು.)

೬. ಜೀವಾಮೃತದ ಮಹತ್ವ

‘ಜೀವಾಮೃತ’ವು ಗಿಡಗಳಿಗೆ ಮಣ್ಣಿನಿಂದ ಆಹಾರದ್ರವ್ಯವನ್ನು ಲಭ್ಯಮಾಡಿಕೊಡುವ ಜೀವಾಣುಗಳ ಮಿಶ್ರಣವಾಗಿದೆ. ನೈಸರ್ಗಿಕ ಕಸವನ್ನು ಬೇಗನೆ ಕೊಳೆಸಿ ಅದರಲ್ಲಿನ ಆಹಾರದ್ರವ್ಯವನ್ನು ಗಿಡಗಳಿಗೆ ಲಭ್ಯಮಾಡಿಕೊಡುವ ಅಸಂಖ್ಯಾತ ಜೀವಾಣುಗಳು ದೇಶಿ ಹಸುವಿನ ಸೆಗಣಿಯಲ್ಲಿರುತ್ತದೆ. ಪದ್ಮಶ್ರೀ ಸುಭಾಷ ಪಾಳೆಕರ ಇವರು ಈ ಜೀವಾಣುಗಳನ್ನು ಅನೇಕ ಪಟ್ಟುಗಳಲ್ಲಿ ಬೆಳೆಸುವ ಒಂದು ಪದಾರ್ಥವನ್ನು ತಯಾರಿಸಿ ಅದಕ್ಕೆ ‘ಜೀವಾಮೃತ’ ಎಂಬ ಹೆಸರನ್ನು ನೀಡಿದ್ದಾರೆ. ಜೀವಾಮೃತದಿಂದಾಗಿ ನೈಸರ್ಗಿಕ ಕಸವು ಬಹಳ ಬೇಗನೆ ಕೊಳೆಯುತ್ತದೆ ಮತ್ತು ಕಸಕ್ಕೆ ದುರ್ಗಂಧವೂ ಬರುವುದಿಲ್ಲ. ‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ’ ಪದ್ಧತಿಯಲ್ಲಿ ‘ಜೀವಾಮೃತ’ವು ಮುಖ್ಯ ಆಧಾರವಾಗಿದೆ. ಆದುದರಿಂದ ನಿಯಮಿತವಾಗಿ ಜೀವಾಮೃತವನ್ನು ತಯಾರಿಸುವ ನಿಯೋಜನೆಯನ್ನು ಮಾಡಬೇಕು.

ಕಸವು ಕೊಳೆತಂತೆ ಅದರಲ್ಲಿ ಪುನಃ ಕಸವನ್ನು ತುಂಬುವುದು ಆವಶ್ಯಕ

ನೈಸರ್ಗಿಕ ಕಸವು ಕೊಳೆತಂತೆ, ಅದರ ಗಾತ್ರವು ಕಡಿಮೆಯಾಗುತ್ತಾ ಹೋಗುತ್ತದೆ. ಇದರಿಂದ ಎರಡನೇ ವಾರದಲ್ಲಿ ಕುಂಡಗಳಲ್ಲಿ ಅಥವಾ ಪಾತಿಗಳಲ್ಲಿ ಖಾಲಿ ಜಾಗವು ಸಿಗುತ್ತದೆ. ಇಂತಹ ಸಮಯದಲ್ಲಿ ಅದರ ಮೇಲೆ ಪುನಃ ನೈಸರ್ಗಿಕ ಕಸವನ್ನು ಹರಡುವುದು, ಜೀವಾಮೃತವನ್ನು ಸಿಂಪಡಿಸುವುದು ಇತ್ಯಾದಿ ಕೃತಿಯನ್ನು ಮಾಡಬೇಕು. ಸಾಧಾರಣ ೨೦ ರಿಂದ ೩೦ ದಿನಗಳಲ್ಲಿ ಈ ಕಸದಿಂದ ಕೈದೋಟಕ್ಕೆ ಉಪಯುಕ್ತವಾಗುವ ಫಲವತ್ತಾದ ಮಣ್ಣು ಅಂದರೆ ‘ಹ್ಯೂಮಸ್’ ತಯಾರಾಗುತ್ತದೆ. ನಾವು ಯಾವಾಗ ಅಡುಗೆಮನೆಯಲ್ಲಿನ ಹಸಿ ಕಸವನ್ನು ಹರಡುತ್ತೇವೆಯೋ ಆ ಸಮಯದಲ್ಲಿ ಅದರಲ್ಲಿ ಕೆಲವೊಮ್ಮೆ ಟೊಮೆಟೊ, ಮೆಣಸಿನಕಾಯಿ, ಬದನೆಕಾಯಿಗಳಂತಹ ತರಕಾರಿಗಳ ಬೀಜಗಳೂ ಆ ಪಾತಿಗಳಲ್ಲಿ ಬೀಳುತ್ತವೆ. ಇಂತಹ ಬೀಜಗಳು ತಾವಾಗಿಯೇ ಮೊಳಕೆಯೊಡೆದಾಗ ನಮ್ಮ ಪಾತಿಗಳು ಗಿಡಗಳನ್ನು ಬೆಳೆಸಲು ಸಿದ್ಧವಾಗಿವೆ ಎಂದು ತಿಳಿಯಬೇಕು ಮತ್ತು ನಂತರ ಅವುಗಳಲ್ಲಿ ಮನೆಯಲ್ಲಿ ಲಭ್ಯವಿರುವ ತರಕಾರಿಗಳ ಬೀಜಗಳನ್ನು ಬೆಳೆಸಬೇಕು. ಮೆಣಸಿನಕಾಯಿ, ಚವಳಿ, ಹೆಸರು, ಟೊಮೆಟೋ, ಮೆಂತ್ಯೆಕಾಳು ಮನೆಯಲ್ಲಿ ಯಾವಾಗಲೂ ಇರುತ್ತವೆ. ಶುಂಠಿ, ಬಟಾಟೆಗೆ ಬಂದ ಮೊಳಕೆ, ಬೆಳ್ಳುಳ್ಳಿಯ ಪಕಳೆಗಳು, ಚಿಕ್ಕ ಈರುಳ್ಳಿ, ಗಜ್ಜರಿಯ ದಂಟಿನ ಕಡೆಗಿನ ಭಾಗ, ಪುದೀನಾದ ಕಾಂಡಸಹಿತ ಬೇರುಗಳು ಸಹ ಮನೆಯಲ್ಲಿರುತ್ತವೆ. ಇವುಗಳ ಕೈದೋಟವನ್ನು ಈ ‘ಹ್ಯೂಮಸ್’ನಲ್ಲಿ ಮಾಡಬಹುದು.

‘ಹ್ಯೂಮಸ್’ನ ಲಾಭ

ನೈಸರ್ಗಿಕ ಕಸವನ್ನು ಪಸರಿಸಿ ಜೀವಾಮೃತದ ಸಹಾಯದಿಂದ ಅದರ ವಿಘಟನೆ ಮಾಡಿದರೆ ಗಿಡಗಳಿಗೆ ಆವಶ್ಯಕವಾಗಿರುವ ಎಲ್ಲ ಆಹಾರದ್ರವ್ಯಗಳು ಲಭ್ಯವಾಗುತ್ತವೆ. ಹೊರಗಡೆಯಿಂದ ಯಾವುದೇ ಗೊಬ್ಬರವನ್ನು ಖರೀದಿಸಿ ತರುವ ಆವಶ್ಯಕತೆ ಇರುವುದಿಲ್ಲ. ಈ ‘ಹ್ಯೂಮಸ್’ನಲ್ಲಿ ನಾವು ನೆಡುವ ಸಸಿಗಳು ಅತ್ಯಂತ ಸದೃಢವಾಗುತ್ತವೆ. ಅವುಗಳಲ್ಲಿ ನೈಸರ್ಗಿಕ ರೋಗನಿರೋಧಕ ಕ್ಷಮತೆ ಇರುವುದರಿಂದ ‘ಹ್ಯೂಮಸ್’ನಲ್ಲಿ ನೆಟ್ಟ ಸಸಿಗಳಿಗೆ ರೋಗವಾಗುವ ಸಾಧ್ಯತೆಯು ಕಡಿಮೆಯಿರುತ್ತದೆ. ‘ಹ್ಯೂಮಸ್’ನಲ್ಲಿ ನೀರನ್ನು ಹಿಡಿದಿಡುವ ಕ್ಷಮತೆ ಇರುತ್ತದೆ. ಆದುದರಿಂದ ಸ್ವಲ್ಪ ನೀರು ಹಾಕಿದರೂ ಸಾಕಾಗುತ್ತದೆ. ‘ಹ್ಯೂಮಸ್’ ಮಣ್ಣಿಗಿಂತ ಹಗುರವಾಗಿರುವುದರಿಂದ ಇದು ಮೇಲ್ಛಾವಣಿಗೆ ಭಾರವಾಗುವುದಿಲ್ಲ.

ಮನೆಮನೆಯಲ್ಲಿ ಕೈದೋಟ ಅಭಿಯಾನದ ಅಂತರ್ಗತ ಕೃಷಿಗಾಗಿ ನೈಸರ್ಗಿಕ ಕಸದಿಂದ ಪಾತಿಗಳನ್ನು ತಯಾರಿಸಿ ಅವುಗಳಲ್ಲಿ ಗಿಡಗಳನ್ನು ಬೆಳೆಸಿ !
ಈ ಲೇಖನದಲ್ಲಿ ನೀಡಲಾದ ಕೃಷಿಯ ಪದ್ಧತಿಯು, ಅತ್ಯಂತ ಸುಲಭ ಮತ್ತು ಬರುವಾಗ ಹೋಗುವಾಗ ಮಾಡಿ ನೋಡುವಂತಹುದಾಗಿದೆ. ದಿನದಲ್ಲಿ ೧೫ ರಿಂದ ೨೦ ನಿಮಿಷಗಳನ್ನು ತೆಗೆದು ಎಲ್ಲರೂ ಅವಶ್ಯವಾಗಿ ಈ ಕೈದೋಟವನ್ನು ಮಾಡಿ ನೋಡಬೇಕು. ಆರಂಭದಲ್ಲಿ ನೈಸರ್ಗಿಕ ಕಸದ ವಿಘಟನೆಯಾಗಿ ಮಣ್ಣು ತಯಾರಾಗಲು ಸ್ವಲ್ಪ ಸಮಯ ಬೇಕಾಗುತ್ತದೆ; ಆದರೆ ಒಂದು ಬಾರಿ ಈ ಮಣ್ಣು ತಯಾರಾದರೆ, ನಾವು ಇದರಲ್ಲಿ ನಮಗೆ ಆವಶ್ಯಕವಿರುವ ಸೊಪ್ಪುತರಕಾರಿಗಳ ಕೈದೋಟವನ್ನು ಮಾಡಿ ಮನೆಯಲ್ಲಿಯೇ ತಾಜಾ ಸೊಪ್ಪುತರಕಾರಿಗಳನ್ನು ಬೆಳೆಸಿ ತಿನ್ನಬಹುದು.

Leave a Comment