ಕೃಷಿ ಉತ್ಪನ್ನಗಳಲ್ಲಿ ರಾಸಾಯನಿಕಗಳು : ದಿನನಿತ್ಯದ ಆಹಾರದಲ್ಲಿ ಸೇರಿಕೊಂಡಿರುವ ವಿಷ !

೧. ಕೃಷಿಯಿಂದ ಹಿಡಿದು ಸಿದ್ಧಆಹಾರದ ವರೆಗೆ ಎಲ್ಲ ಕಡೆ ವಿಷಪೂರಿತ ರಾಸಾಯನಿಕಗಳ ಚಿಂತಾಜನಕ ಬಳಕೆ !

‘ಮ್ಯಾಗಿ’ಯಲ್ಲಿ ಕಂಡುಬಂದ ಕೆಲವು ಘಟಕಗಳ ಕುರಿತು ದೇಶದಲ್ಲಿ ಸಾಕಷ್ಟು ಚರ್ಚೆಯಾಯಿತು; ಆದರೆ ಮನೆಮನೆಗಳಲ್ಲಿ ಈ ಮ್ಯಾಗಿ ಅಥವಾ ಇತರ ಫಾಸ್ಟಫುಡ್‌ಗಿಂತಲೂ ಅಡುಗೆಮನೆಯಲ್ಲಿ ಬೇಯಿಸಿದ ವಿವಿಧ ಆಹಾರಗಳಿಂದಲೇ  ಹೊಟ್ಟೆ ತುಂಬಿಸುತ್ತೇವೆ. ಅಡುಗೆಗಾಗಿ ಬಳಸಲಾಗುವ ತರಕಾರಿಗಳು, ಧಾನ್ಯ, ಬೇಳೆ, ಎಣ್ಣೆ, ಉಪ್ಪು ಇತ್ಯಾದಿಗಳಲ್ಲಿಯೂ ಮನುಷ್ಯನ ಆರೋಗ್ಯಕ್ಕೆ ಅಪಾಯಕಾರಿಯಾಗಿರುವ ಘಟಕಗಳು ಇರುತ್ತವೆ. ಅವುಗಳಲ್ಲಿ ವಿಷದ ಅಂಶವೂ ಇರುತ್ತದೆ. ಆದರೆ ಆ ಕುರಿತು ಯಾರೂ ಮಾತನಾಡುವುದಿಲ್ಲ. ಕೃಷಿಯಲ್ಲಿ, ಧಾನ್ಯಗಳನ್ನು ಸಂಗ್ರಹಿಸುವ ಉಗ್ರಾಣದಲ್ಲಿ ಹಾಗೆಯೇ ಸಂಸ್ಕರಿಸುವ ಘಟಕಗಳಲ್ಲಿ ಆಹಾರಗಳಲ್ಲಿ ವಿವಿಧ ಕಾರಣಗಳಿಂದಾಗಿ ಸೇರಿಸಲಾಗುವ ರಾಸಾಯನಿಕ ಘಟಕಗಳನ್ನು ನಿರ್ಲಕ್ಷಿಸುವಂತಿಲ್ಲ.

೨. ಮಾರುಕಟ್ಟೆಯಲ್ಲಿ ದೊರಕುವ ‘ವಿಷಪೂರಿತ’ ತರಕಾರಿಗಳು ಮತ್ತು ಹಣ್ಣುಗಳು

ನನ್ನ ಓರ್ವ ರೈತ ಸ್ನೇಹಿತನು ಟೊಮ್ಯಾಟೋವನ್ನು ‘ವಿಷದ ಚೆಂಡು’ ಎಂದು ಕರೆಯುತ್ತಾನೆ; ಏಕೆಂದರೆ ಟೊಮ್ಯಾಟೋ ಬೆಳೆಯ ಮೇಲೆ ಅನೇಕ ಬಾರಿ, ಅಂದರೆ ವಾರದಲ್ಲಿ ಎರಡು ಸಲವಾದರೂ ವಿಷಪೂರಿತ ರಾಸಾಯನಿಕವನ್ನು ಸಿಂಪಡಿಸಲಾಗುತ್ತದೆ. ಹಸಿಮೆಣಸಿನಕಾಯಿ, ಹಸಿಶುಂಠಿ, ಸೌತೆಕಾಯಿ, ಎಲೆಕೋಸು, ಹೂಕೋಸು ಇತ್ಯಾದಿ ತರಕಾರಿಗಳ ಮತ್ತು ದ್ರಾಕ್ಷಿ, ಸೇಬು ಇವುಗಳಂತಹ ಹಣ್ಣುಗಳಿಗೂ ಹೆಚ್ಚುಕಡಿಮೆ ಹೀಗೆಯೇ ಮಾಡಲಾಗುತ್ತದೆ. ಎಲೆಕೋಸು, ಹೂಕೋಸು ಇವು ಚಳಿಗಾಲದ ಬೆಳೆಗಳಾಗಿವೆ; ಆದರೆ ಈ ತರಕಾರಿಗಳು ಸದ್ಯ ಎಲ್ಲ ಋತುಗಳಲ್ಲಿಯೂ ಮಾರುಕಟ್ಟೆಯಲ್ಲಿ ಕಂಡುಬರುತ್ತವೆ. ಇಂತಹ ಬೆಳೆಗಳು ನಿಸರ್ಗಕ್ಕೆ ಅನುಕೂಲವಾಗಿರುವುದಿಲ್ಲ. ಕಾಲೋಚಿತ ಮತ್ತು ಛಾವಣಿ ಹಾಕಿದ ಗೃಹದಲ್ಲಿ (ಗ್ಲಾಸ್ ಹೌಸನಲ್ಲಿ) ಬೆಳೆಸಲಾಗುವ ತರಕಾರಿಗಳು ರೋಗಗಳಿಗೆ ಬಲಿಯಾಗುವ ಸಾಧ್ಯತೆಯೇ ಹೆಚ್ಚಾಗಿರುವುದರಿಂದ ಅವುಗಳ ಮೇಲೆ ಆಗಾಗ ರಾಸಾಯನಿಕಗಳನ್ನು ಸಿಂಪಡಿಸಬೇಕಾಗುತ್ತದೆ.

೩. ರಾಸಾಯನಿಕಗಳನ್ನು ಉತ್ಪಾದಿಸುವ ಲಾಭಕೋರ ಸಂಸ್ಥೆಗಳ ಹಣದಾಸೆಯಿಂದ ಅನಿವಾರ್ಯವಾಗಿ ಪ್ರತಿದಿನ ಜನರ ಹೊಟ್ಟೆಗೆ ವಿಷ ಸೇರುತ್ತಿರುವುದು

ಹೊಲದಲ್ಲಿ ರಾಸಾಯನಿಕಗಳನ್ನು ಸಿಂಪಡಿಸಿದ ನಂತರ ಎರಡು-ಮೂರು ದಿನದೊಳಗೆ ಆ ಬೆಳೆಯು ಮಾರುಕಟ್ಟೆಗೆ ಬರುತ್ತದೆ. ‘ರಾಸಾಯನಿಕಗಳನ್ನು ಸಿಂಪಡಿಸಿದ ನಂತರ ಎಷ್ಟು ಕಾಲದವರೆಗೆ ಬೆಳೆಯನ್ನು ಬಳಸಬಾರದು’, ಎಂಬುದರ ಕುರಿತು ರೈತರು ಮತ್ತು ಗ್ರಾಹಕರು ಇವರಿಬ್ಬರೂ ಅಜ್ಞಾನದಲ್ಲಿದ್ದಾರೆ. ರಾಸಾಯನಿಕಗಳನ್ನು ಉತ್ಪಾದಿಸುವ ಲಾಭದಾಯಕ ಸಂಸ್ಥೆಗಳು ಮತ್ತು ಅವರ ಊರುಊರುಗಳಲ್ಲಿನ ದಳ್ಳಾಳಿಗಳು ಮತ್ತು ಮಾರಾಟಗಾರರು ಈ ರಾಸಾಯನಿಕಗಳ ದುಷ್ಪರಿಣಾಮಗಳನ್ನು ಗಮನದಲ್ಲಿ ತಂದು ಕೊಡುವ ಜನಶಿಕ್ಷಣದ ಕಾರ್ಯವನ್ನು ಮಾಡುವುದಿಲ್ಲ; ಏಕೆಂದರೆ ರೈತರು ಜಾಗೃತಗೊಂಡರೆ, ಇಂತಹ ಸಂಸ್ಥೆಗಳ ಲಾಭಕ್ಕೆ ಧಕ್ಕೆಯುಂಟಾಗುತ್ತದೆ. ಇಂದು ಜನರಿಗೆ ಯಾವ ಆಹಾರ ದೊರಕುತ್ತದೆಯೋ, ಅದು ಒಂದು ರೀತಿ ವಿಷಯುಕ್ತವಾಗಿದ್ದೂ ಅನಿವಾರ್ಯವಾಗಿ ಅದು ಪ್ರತಿದಿನ ಜನರ ಹೊಟ್ಟೆಗೆ ಸೇರುತ್ತಿದೆ.

೪. ಕೃಷಿಯಲ್ಲಿ ಬಳಸಲಾಗುವ ಹಾನಿಕರ ರಾಸಾಯನಿಕಗಳು ಮತ್ತು ಬೀಜೋತ್ಪಾದನೆಯಲ್ಲಾದ ಬದಲಾವಣೆಗಳಿಂದಾಗಿ ಉದ್ಭವಿಸಿರುವ ಅಪಾಯಕರ ಸ್ಥಿತಿ

ಕೀಟನಾಶಕಗಳೊಂದಿಗೆ ಹೆಚ್ಚುತ್ತಿರುವ ಕಳೆನಾಶಕಗಳ ಬಳಕೆ ಮತ್ತು ಜಿ.ಎಮ್. ಬೀಜಗಳು (ಕುಲಾಂತರಿ ಸಸ್ಯಗಳ ಬೀಜಗಳು) ಈ ಎರಡು ವಿಷಯಗಳಿಂದ ಅತ್ಯಂತ ಅಪಾಯಕರ ಪರಿಸ್ಥಿತಿ ಉದ್ಭವಿಸುತ್ತಿದೆ. ಪಾಕವಿಧಾನಗಳಲ್ಲಿ ಈ ಎರಡು ಉದಾಹರಣೆಗಳಿವೆ –

ಅ. ೨೦೦೦ ದಿಂದ ೨೦೦೯ ರ ಈ ಕಾಲದಲ್ಲಿ ಬೀಜೋತ್ಪಾದನೆಯಲ್ಲಿ ಬದಲಾವಣೆ ಮಾಡಿದ ಆಹಾರಧಾನ್ಯಗಳು ಮತ್ತು ಕಳೆನಾಶಕಗಳಿಂದ ಅರ್ಜೆಂಟಿನಾ ದೇಶದಲ್ಲಿ ಬಾಲಕರಲ್ಲಿ ಅರ್ಬುದ ರೋಗವು ಮೂರುಪಟ್ಟು ಹೆಚ್ಚಾಗಿದೆ ಎಂಬ ನಿಷ್ಕರ್ಷವು ಅರ್ಜೆಂಟಿನಾ ಸರಕಾರವು ಮಾಡಿದ ಪರೀಕ್ಷಣೆಯಿಂದ ಬೆಳಕಿಗೆ ಬಂತು.

ಆ. ರಾಸಾಯನಿಕ ಗೊಬ್ಬರ, ಕಳೆನಾಶಕಗಳು ಮತ್ತು ಕೀಟನಾಶಕಗಳ ಅತಿ ಬಳಕೆಯಿಂದ ಪಂಜಾಬಿನ ಭಟಿಂಡಾ ಮತ್ತು ಬಟಲಾ ಪರಿಸರಗಳಲ್ಲಿರುವ ಒಂದೇ ಒಂದು ಬಾವಿಯ ನೀರು ಕುಡಿಯಲು ಯೋಗ್ಯವಾಗಿ ಉಳಿದಿಲ್ಲ.

೫. ರಾಸಾಯನಿಕ ಕೃಷಿಯಿಂದ ಭೂಮಿಯು ಬರಡಾಗುವ ಹಂತದಲ್ಲಿದೆ !

‘ಎಲ್ಲರ ಪಾಲನೆ-ಪೋಷಣೆಗಾಗಿ ರಾಸಾಯನಿಕ ಕೃಷಿಯ ಆವಶ್ಯಕತೆಯಿದೆ. ನೈಸರ್ಗಿಕ ಕೃಷಿ ಮಾಡಿದರೆ ಜನರು ಹೊಟ್ಟೆಗೆ ಇಲ್ಲದೇ ಸಾಯುವರು’, ಎಂದು ವಿವಿಧ ಮಾಧ್ಯಮಗಳಿಂದ ಅಪಪ್ರಚಾರ ಮಾಡಲಾಗುತ್ತಿದೆ. ಈ ಪ್ರಚಾರವು ಜನರಲ್ಲಿ ಅಪನಂಬಿಕೆಯನ್ನು ಹರಡಿಸುವಂತಹದ್ದಾಗಿದೆ; ಏಕೆಂದರೆ ನೈಸರ್ಗಿಕ ಕೃಷಿಯು ರಾಸಾಯನಿಕ ಕೃಷಿಗಿಂತಲೂ ಉನ್ನತ ದಾಖಲೆ ಮಾಡಿದ ಅನೇಕ ಉದಾಹರಣೆಗಳಿವೆ. ನೈಸರ್ಗಿಕ ಕೃಷಿಯಿಂದ ಭೂಮಿಯು ಪ್ರತಿವರ್ಷ ಫಲವತ್ತಾಗುತ್ತದೆ, ಆದರೆ ರಾಸಾಯನಿಕ ಕೃಷಿಯಲ್ಲಿ ಇದರ ವಿರುದ್ಧವಾಗಿದೆ. ರಾಸಾಯನಿಕ ಕೃಷಿಯು ಹೀಗೆಯೇ ಮುಂದುವರಿದರೆ ಮುಂದಿನ ಪೀಳಿಗೆಯ ಕೈಯಲ್ಲಿ ನಾವು ಯಾವ ರೀತಿಯ ಭೂಮಿಯನ್ನು ಒಪ್ಪಿಸಬೇಕಾಗುತ್ತದೆ ? ಆ ಭೂಮಿಯು ಸಂಪೂರ್ಣ ಬರಡಾಗಿರುವುದಿಲ್ಲವೇ ?

೬. ನೈಸರ್ಗಿಕ ಗೊಬ್ಬರದ ದೊಡ್ಡ ಆಗರವಾಗಿರುವ ಕಸ-ಕಡ್ಡಿಗಳನ್ನು ಸುಡುವುದು ಅಯೋಗ್ಯ

ತಪ್ಪಲು, ಕಸ-ಕಡ್ಡಿಗಳು, ಬೆಳೆಗಳ ಅವಶೇಷ ಇತ್ಯಾದಿಗಳು ಯೋಗ್ಯರೀತಿಯಿಂದ ಕೃಷಿಯಲ್ಲಿ ವಾಪಾಸು ಹೋಗಲೇಬೇಕು. ಅದಕ್ಕಾಗಿ ಸಮರೋಪಾದಿಯಲ್ಲಿ ಜನಜಾಗೃತಿ ಮಾಡಬೇಕಾಗುವುದು. ಯಾವುದರಿಂದ ಉತ್ತಮ ನೈಸರ್ಗಿಕ ಗೊಬ್ಬರ ಸಿದ್ಧವಾಗುತ್ತದೆಯೋ, ಅದನ್ನು ಸುಡುವುದು ಎಷ್ಟು ಯೋಗ್ಯ ? ಆದರೆ ಉಚ್ಚ ಶಿಕ್ಷಿತರ (ಹೈಫೈ) ವಸತಿ ಸಮುಚ್ಛಯಗಳಲ್ಲಿ ಸಹ ಸ್ವಚ್ಛತೆ ಮಾಡುವವರು ತಪ್ಪಲು ಸಹಜವಾಗಿ ಸುಡುತ್ತಾರೆ. ಅನೇಕ ರೈತರು ಸಹ ಹೊಲದಲ್ಲಿ ಎಲ್ಲವನ್ನು ಒಟ್ಟುಗೂಡಿಸಿ ಸುಟ್ಟು ಎಲ್ಲವನ್ನು ಖಾಲಿ ಮಾಡುತ್ತಾರೆ.

೭. ಅರ್ಬುದರೋಗದಂತಹ ರೋಗಗಳನ್ನು ಆಮಂತ್ರಿಸುವ ಕಳೆನಾಶಕಗಳು

ನಮ್ಮ ದೇಶದಲ್ಲಿ ‘ಕಳೆನಾಶಕಗಳು ಸುರಕ್ಷಿತವಾಗಿವೆ’, ಎಂಬ ಪ್ರಚಾರ ಮಾಡಿ ರೈತರ ತಲೆಕೆಡಿಸುತ್ತಾರೆ. ‘ಅದನ್ನು ಬಳಸದೇ ಬೇರೆ ಮಾರ್ಗವೇ ಇಲ್ಲ’ ಎಂಬ ಪರಿಸ್ಥಿತಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಜಗತ್ತಿನಲ್ಲಿ ೮೦ ಕ್ಕಿಂತಲೂ ಹೆಚ್ಚು ವಿಜ್ಞಾನಿಗಳ ಸಮೂಹವು ‘ಗ್ಲೈಫೊಸೆಟ್’ ಎಂಬ ಕಳೆನಾಶಕದ ಬಳಕೆಯ ಮೇಲೆ ನಿರ್ಬಂಧವನ್ನು ತರುವಂತೆ ಆಗ್ರಹಿಸಿದ್ದಾರೆ. ಈ ಸಮೂಹವು ಕಳೆನಾಶಕಗಳ ಅಪಾಯಕಾರಿ ಪರಿಣಾಮಗಳ ದಾಖಲೆಗಳನ್ನು ಸಂಗ್ರಹಿಸಿದೆ. ಅದರ ವೈಜ್ಞಾನಿಕ ಪದ್ಧತಿಯಿಂದ ಅಧ್ಯಯನವನ್ನು ಮಾಡಲಾಗಿದೆ.

ಜಾಗತಿಕ ಆರೋಗ್ಯ ಸಂಘಟನೆಯು ಗ್ಲೈಫೊಸೆಟ್ ಕಳೆನಾಶಕವನ್ನು ಅರ್ಬುದರೋಗದ ‘ಸಂಭಾವ್ಯ’ ಕಾರಕ ಎಂದು ಪರಿಗಣಿಸಿದೆ. ದೀರ್ಘಕಾಲ ಗ್ಲೈಫೋಸೆಟ್ಟಿನ  ಸಂಪರ್ಕದಲ್ಲಿರುವುದರಿಂದ ಕೇವಲ ಅರ್ಬುದ ರೋಗ ಮಾತ್ರವಲ್ಲ, ಬಂಜೆತನ, ನಪುಂಸಕತ್ವ, ಗರ್ಭಪಾತ, ಜನ್ಮಜಾತ ದೋಷಗಳು, ಹಾರ್ಮೊನುಗಳ ನಾಶ, ಮೂತ್ರಪಿಂಡದ ರೋಗ ಇಂತಹ ಅನೇಕ ರೋಗಗಳಾಗುವ ಸಾಧ್ಯತೆ ಇರುತ್ತದೆ. ಗ್ಲೈಫೋಸೆಟ್‌ನಿಂದ ಸಂಪೂರ್ಣ ಆಹಾರ ಸರಪಳಿಗೆ ಅಡಚಣೆಯಾಗುತ್ತದೆ. ಬೆಳೆಗಳಿಗೆ ಮತ್ತು ಭೂಮಿಗೆ ಆಹಾರ ಪದಾರ್ಥಗಳನ್ನು ಪೂರೈಸುವ ಸೂಕ್ಷ್ಮ ಜೀವಗಳು, ಮೀನು, ಇತರ ಜಲಚರಗಳು, ಉಭಯಚರಗಳು (ಕಪ್ಪೆ, ಆಮೆ, ಏಡಿ ಇತ್ಯಾದಿ), ಜೇನುನೊಣ, ಪಕ್ಷಿ, ಸಸ್ತನಿಗಳು ಮತ್ತು ಮನುಷ್ಯನ ಶರೀರದಲ್ಲಿರುವ ಜೀವಕೋಷಗಳು ಮತ್ತು ಸೂಕ್ಷ್ಮಜೀವಾಣುಗಳ ಮೇಲೆ ಅಪಾಯಕಾರಿ ಪರಿಣಾಮವಾಗುತ್ತದೆ.

೮. ಕೃಷಿಯಲ್ಲಿ ಉಪಯೋಗಿಸುವ ರಾಸಾಯನಿಕಗಳು ಆಹಾರದಲ್ಲಿ ನುಸುಳಿ ಸಂಪೂರ್ಣ ಪರಿಸರ ವ್ಯವಸ್ಥೆಗೆ ಮಾರಕವಾಗಿರುವುದು

ಕೃಷಿಗಾಗಿ ಯಾವುದೇ ತಂತ್ರಜ್ಞಾನವನ್ನು ಬಳಸಿದರೂ, ಅದು ಪರಿಸರಕ್ಕೆ ಅನುಕೂಲವಾಗಿರಬೇಕು; ಏಕೆಂದರೆ ಗಾಳಿ, ನೀರು, ಮಣ್ಣು ಇವು ಜೀವಗಳ ಅಡಿಪಾಯವಾಗಿವೆ. ಅವುಗಳ ಆರೋಗ್ಯದ ಮೇಲೆ ಮನುಷ್ಯ, ಪ್ರಾಣಿ ಮತ್ತು ಇತರ ಜೀವಗಳ ಆರೋಗ್ಯವು ಅವಲಂಬಿಸಿರುತ್ತದೆ. ‘ಹೊಲದಲ್ಲಿ ವಿಷವನ್ನು ಹಾಕಿದ ನಂತರ ಆ ವಿಷವು ಆಹಾರ ಮತ್ತು ನೀರಿನಲ್ಲಿ ಬಂದೇಬರುತ್ತದೆ. ಎರೆಹುಳುಗಳಿಂದ ರಣಹದ್ದುಗಳವರೆಗಿನ ಎಲ್ಲ ಜೀವಗಳಿಗೆ ತೊಂದರೆಯಾಗುವುದು’, ಎಂಬ ಅರಿವು ಪ್ರತಿಯೊಬ್ಬರಿಗೂ ಇರಬೇಕು.

ಇಂದು ನಾವು ಭೂಮಿಯಲ್ಲಿ ವಿಷವನ್ನು ಸುರಿಸುತ್ತಿದ್ದೇವೆ. ಕೃಷಿ ಎಂದರೆ ಹಾವು, ಚೇಳು, ಎರೆಹುಳ, ಇರುವೆ, ಗೊದ್ದ, ಭೂಮಿಯಲ್ಲಿನ ಸೂಕ್ಷ್ಮ ಜೀವಗಳು, ಮೀನು, ಏಡಿ, ಕಪ್ಪೆ, ಪಶು-ಪಕ್ಷಿ, ವನಸ್ಪತಿ ಇವೆಲ್ಲವುಗಳ ಪರಿಸರ ವ್ಯವಸ್ಥೆ (ಇಕೊ ಸಿಸ್ಟಿಮ್) ಆಗಿದೆ. ಈ ಪರಿಸರ ವ್ಯವಸ್ಥೆಗೆ ತೊಂದರೆಯನ್ನುಂಟು ಮಾಡಿದರೆ, ಎಲ್ಲ ಆಹಾರದ ಸರಪಳಿ ಕುಸಿಯುವುದು (ತಲೆಕೆಳಗಾಗುವುದು). ಒಂದು ಬಾರಿ ಈ ಸರಪಳಿ ಕುಸಿದರೆ ಮತ್ತೆ ಜೋಡಿಸಲು ಮನುಷ್ಯನಿಂದ ಸಾಧ್ಯವಿಲ್ಲ !

– ಶ್ರೀ. ವಸಂತ ಫುಟಾಣೆ, ವಿಷಮುಕ್ತ ಸಾವಯವ ರೈತರು, ಅಮರಾವತಿ. (ಆಧಾರ : ‘ಕೃಷಿಯಲ್ಲಿನ ರಾಸಾಯನಿಕ ಅಂಶಗಳು : ಸಮಸ್ಯೆ ಮತ್ತು ಉಪಾಯ’ ಈ ಮಾಸಿಕ ‘ವನರಾಯೀ’ದಲ್ಲಿನ ಲೇಖನದ ಆಯ್ದ ಭಾಗ)

ರಾಸಾಯನಿಕ ಕೃಷಿಯು ಆರೋಗ್ಯಕ್ಕಾಗಿ ಎಷ್ಟು ಹಾನಿಕರವಾಗಿದೆ, ಎಂಬುದು ಈ ಲೇಖನದಿಂದ ಗಮನಕ್ಕೆ ಬರುತ್ತದೆ. ಪೇಟೆಯಲ್ಲಿನ ತರಕಾರಿಗಳ ಮೇಲೆ ವಿಷಪೂರಿತ ರಾಸಾಯನಿಕಗಳನ್ನು ಸಿಂಪಡಿಸುವುದರಿಂದ ಪ್ರತಿಯೊಬ್ಬರೂ ತಮ್ಮಷ್ಟಕ್ಕೆ ತರಕಾರಿಗಳನ್ನು ತಾವೇ ಬೆಳೆಸಿ ತಿನ್ನುವುದು ಅನಿವಾರ್ಯವಾಗಿದೆ. ಮನೆಯಲ್ಲಿಯೇ ಸ್ವಲ್ಪ ಜಾಗದಲ್ಲಿಯೂ ದಿನನಿತ್ಯದ ಊಟಕ್ಕೆ ಆವಶ್ಯಕವಾಗಿರುವ ತರಕಾರಿಗಳನ್ನು ಬೆಳೆಸಬಹುದು. ಇದಕ್ಕಾಗಿ ಸನಾತನವು ‘ಮನೆಮನೆಯಲ್ಲಿ ಕೈದೋಟ’ ಅಭಿಯಾನವನ್ನು ನಡೆಸುತ್ತಿದೆ. ಈ ಅಭಿಯಾನದಲ್ಲಿ ಒಳಗೊಂಡಿರುವ ಸನಾತನದ ಅನೇಕ ಸಾಧಕರು ತಮ್ಮ ಮನೆಯಲ್ಲೇ ತರಕಾರಿಗಳನ್ನು ಬೆಳೆಸುತ್ತಿದ್ದಾರೆ.

1 thought on “ಕೃಷಿ ಉತ್ಪನ್ನಗಳಲ್ಲಿ ರಾಸಾಯನಿಕಗಳು : ದಿನನಿತ್ಯದ ಆಹಾರದಲ್ಲಿ ಸೇರಿಕೊಂಡಿರುವ ವಿಷ !”

Leave a Comment