ಬಹುಗುಣಿ ಭೀಮಸೇನಿ ಆಯುರ್ವೇದಿಕ ಕರ್ಪೂರ !

ಹಿಂದೂ ಧರ್ಮದಲ್ಲಿ ಪೂಜೆಯಲ್ಲಿ ಕರ್ಪೂರದಾರತಿಗೆ ಕರ್ಪೂರವನ್ನು ಉಪಯೋಗಿಸಲಾಗುತ್ತದೆ. ಇದರ ಜೊತೆಗೆ ಕರ್ಪೂರಕ್ಕೆ ಅನೇಕ ಉಪಯೋಗಗಳಿವೆ. ಆ ಬಗ್ಗೆ ಇಲ್ಲಿ ಮಾಹಿತಿ ಪಡೆಯೋಣ.

೧. ಆಕಾರ

ಭೀಮಸೇನಿ ಆಯುರ್ವೇದಿಕ ಕರ್ಪೂರಕ್ಕೆ ವಿಶಿಷ್ಟವಾದ ಆಕಾರವಿರುವುದಿಲ್ಲ. ಈ ಕರ್ಪೂರವು ಸ್ಫಟಿಕದಂತೆ ಕಾಣಿಸುತ್ತದೆ. ಇದನ್ನು ಗೋಲಾಕಾರ ಅಥವಾ ಚೌಕೋನ ಆಕಾರ ಮಾಡಲು ಸಾಧ್ಯವಿಲ್ಲ; ಏಕೆಂದರೆ ಸಾಮಾನ್ಯವಾಗಿ ದೊರಕುವ ಕರ್ಪೂರದಂತೆ ಇದರಲ್ಲಿ ಮೇಣ ಇರುವುದಿಲ್ಲ.

೨. ಔಷಧಿಗಾಗಿ ಭೀಮಸೇನಿ ಆಯುರ್ವೇದಿಕ ಕರ್ಪೂರದ ಉಪಯೋಗ

೨ ಅ. ಶೀತ ಮತ್ತು ಕೆಮ್ಮು ಇವುಗಳನ್ನು ಗುಣಪಡಿಸುತ್ತದೆ.

೧. ಶೀತ, ಕೆಮ್ಮು ಇದ್ದಾಗ ಒಂದು ಪಾತ್ರೆಯಲ್ಲಿ ನೀರು ಬಿಸಿ ಮಾಡಿ ಅದರಲ್ಲಿ ಈ ಕರ್ಪೂರದ ಪುಡಿಯನ್ನು ಹಾಕಬೇಕು ಮತ್ತು ಅದರ ಹಬೆ ತೆಗೆದುಕೊಳ್ಳಬೇಕು.

೨. ಮೂಗು, ಹಣೆ ಮತ್ತು ಎದೆ ಇವುಗಳಿಗೆ ಕರ್ಪೂರವನ್ನು ಹಚ್ಚಬೇಕು. ಚಿಕ್ಕ ಮಕ್ಕಳಿಗೂ ಕರ್ಪೂರ ಹಚ್ಚಬಹುದು. ಕರವಸ್ತ್ರದಲ್ಲಿ ಕರ್ಪೂರದ ಪುಡಿ ಹಾಕಿ ಅದರ ಪರಿಮಳವನ್ನು ತೆಗೆದುಕೊಳ್ಳಬೇಕು ಅಥವಾ ಒಂದು ಚಿಕ್ಕ ಡಬ್ಬಿಯಲ್ಲಿ ಕರ್ಪೂರವನ್ನಿಟ್ಟು ಆ ಡಬ್ಬವನ್ನು ಜೊತೆಗಿಟ್ಟುಕೊಳ್ಳಬೇಕು.

೩. ಕರವಸ್ತ್ರದಲ್ಲಿ ಕರ್ಪೂರದ ಕೆಲವು ತುಂಡುಗಳನ್ನು ದಾರದಿಂದ ಕಟ್ಟಿಟ್ಟರೆ ಕರವಸ್ತ್ರಕ್ಕೆ ಸುಗಂಧ ಬರುತ್ತದೆ ಮತ್ತು ಕರ್ಪೂರದ ಪರಿಮಳ ತೆಗೆದುಕೊಳ್ಳಲು ಸುಲಭವಾಗುತ್ತದೆ. ಆ ಕರವಸ್ತ್ರವನ್ನು ತೊಳೆದರೂ ಕರ್ಪೂರದ ಕಲೆ ಬೀಳುವುದಿಲ್ಲ ಮತ್ತು ಕರ್ಪೂರವು ಸಾಬೂನಿನಲ್ಲಿ ಕರಗುವುದಿಲ್ಲ.

೪. ಕೆಮ್ಮಿನ ಔಷಧಿ ತಯಾರಿಸಲು ಆಯುರ್ವೇದಿಕ ಔಷಧ ಕಂಪನಿಗಳು ಇದೇ ಕರ್ಪೂರವನ್ನು ಉಪಯೋಗಿಸುತ್ತವೆ.

೨ ಆ. ಹಿಮ ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಶ್ವಾಸ ಕಟ್ಟುತ್ತಿದ್ದರೆ ಈ ಕರ್ಪೂರದ ಪರಿಮಳ ತೆಗೆದುಕೊಳ್ಳಬೇಕು.

೨ ಇ. ಸಂದುನೋವು : ಎಳ್ಳೆಣ್ಣೆಯಲ್ಲಿ ಕರ್ಪೂರದ ಪುಡಿಯನ್ನು ಹಾಕಿ ಆ ಎಣ್ಣೆಯನ್ನು ಸಂದುಗಳಿಗೆ ಹಚ್ಚಿಕೊಳ್ಳಬೇಕು. ಎಳ್ಳೆಣ್ಣೆಯ ವಾಸನೆಯು ಉಗ್ರವಿರುವುದರಿಂದ ಈ ಕರ್ಪೂರಮಿಶ್ರಿತ ಎಣ್ಣೆಯನ್ನು ಹಚ್ಚಿಕೊಂಡಾಗ ಬಟ್ಟೆಗಳಿಗೆ ವಾಸನೆ ಬರುತ್ತದೆ. ಆದ್ದರಿಂದ ಅದರ ಬಗ್ಗೆ ಯೋಗ್ಯ ಕಾಳಜಿಯನ್ನು ವಹಿಸಬೇಕು.

೨ ಈ. ಹಲ್ಲು ನೋವು : ಭೀಮಸೇನಿ ಕರ್ಪೂರದ ಚಿಕ್ಕ ತುಂಡನ್ನು ಹುಳುಕು ಇರುವಲ್ಲಿ ಇಟ್ಟುಕೊಳ್ಳಬೇಕು. ಕರ್ಪೂರವಿರುವ ಲಾಲಾರಸವು ಹೊಟ್ಟೆಗೆ ಹೋದರೂ ಏನೂ ಅಪಾಯವಿಲ್ಲ, ಆದರೆ ದಿನಕ್ಕೆ ೧ ಗ್ರಾಂ ಗಿಂತ ಹೆಚ್ಚು ಕರ್ಪೂರ ಹೊಟ್ಟೆಯೊಳಗೆ ಸೇರದ ಹಾಗೆ ಜಾಗರೂಕತೆ ವಹಿಸಿ.

೨ ಉ. ತಲೆ ಹೊಟ್ಟಿಗೆ ಉಪಾಯ : ಕೊಬ್ಬರಿ ಎಣ್ಣೆಯಲ್ಲಿ ಈ ಕರ್ಪೂರವನ್ನು ಸೇರಿಸಿ ಆ ಎಣ್ಣೆಯನ್ನು ಕೂದಲುಗಳ ಬೇರುಗಳಿಗೆ ಹಚ್ಚಬೇಕು. ಹೊಟ್ಟಾಗಿರುವ ವ್ಯಕ್ತಿಗೆ ಶೀತದ ತೊಂದರೆ ಇದ್ದಲ್ಲಿ ಕೊಬ್ಬರಿ ಎಣ್ಣೆಯ ಬದಲು ಎಳ್ಳೆಣ್ಣೆಯನ್ನು ಉಪಯೋಗಿಸಬೇಕು.

೩. ಧಾರ್ಮಿಕ ವಿಧಿಯಲ್ಲಿ ಉಪಯೋಗ

ಅ. ಇತರ ಕರ್ಪೂರಗಳಲ್ಲಿ ಮೇಣವಿರುತ್ತದೆ. ಈ ಕರ್ಪೂರ ಶುದ್ಧವಿರುವುದರಿಂದ ಅದನ್ನು ಧಾರ್ಮಿಕ ಕಾರ್ಯದಲ್ಲಿ ಉಪಯೋಗಿಸುತ್ತಾರೆ. ಆರತಿ ಮಾಡುವಾಗ ಈ ಕರ್ಪೂರವನ್ನು ಉರಿಸಬೇಕು. ಗಂಧ ತೇಯುವಾಗ ಅದರಲ್ಲಿ ಕರ್ಪೂರ ಹಾಕಬೇಕು.

ಆ. ದೇವರಿಗೆ ತಾಂಬೂಲ ನೀಡುವಾಗ ಇದೇ ಕರ್ಪೂರ ಇಟ್ಟು ತಾಂಬೂಲ ನೀಡುತ್ತಾರೆ. ದಕ್ಷಿಣ ಭಾರತದಲ್ಲಿ ತೀರ್ಥಕ್ಕೆ ಏಲಕ್ಕಿ ಮತ್ತು ಭೀಮಸೇನಿ ಕರ್ಪೂರವನ್ನು ಬಳಸುತ್ತಾರೆ. ತಿರುಪತಿಯ ಶ್ರೀ ಬಾಲಾಜಿ ದೇವಸ್ಥಾನದಲ್ಲಿನ ಸುಪ್ರಸಿದ್ಧ ಲಾಡುಗಳಲ್ಲಿಯೂ ಇದನ್ನು ಉಪಯೋಗಿಸುತ್ತಾರೆ.

೪. ದೃಷ್ಟಿ ತೆಗೆಯುವುದು

ಈ ಕರ್ಪೂರದ ಎರಡು ಚಿಕ್ಕ ತುಂಡುಗಳನ್ನು ಕೈಯಲ್ಲಿ ತೆಗೆದು ಕೊಂಡು ಸಾಯಂಕಾಲ ಮನೆಯ ದೃಷ್ಟಿಯನ್ನು ತೆಗೆಯಬೇಕು. ನಂತರ ಮನೆಯ ಹೊರಗಡೆ ಹಳೆಯ ಹಣತೆಯಲ್ಲಿ ಅಥವಾ ಒಂದು ಹಳೆಯ ಪಾತ್ರೆಯಲ್ಲಿ ಈ ಕರ್ಪೂರವನ್ನು ಉರಿಸಬೇಕು.

೫. ಇತರ ಉಪಯೋಗಗಳು

ಅ. ಪ್ರಯಾಣದ ಚೀಲ ಅಥವಾ ಬಟ್ಟೆಗಳನ್ನು ಇಡುವ ಚೀಲಗಳಲ್ಲಿ ಈ ಕರ್ಪೂರವನ್ನಿಟ್ಟರೆ ಇತರ ವಾಸನೆ ಬರದೇ ಸುಗಂಧ ಬರುತ್ತದೆ, ಹಾಗೆಯೇ ಬಟ್ಟೆಗಳಿಗೆ ಗೆದ್ದಲು ಹಿಡಿಯುವುದಿಲ್ಲ ಮತ್ತು ಜಿರಲೆಗಳು ಆಗುವುದಿಲ್ಲ.

ಆ. ಮಳೆಗಾಲದಲ್ಲಿ ಬಟ್ಟೆಗಳು ಸರಿಯಾಗಿ ಒಣಗುವುದಿಲ್ಲ. ಅವು ಹಸಿ ಇರುತ್ತವೆ. ಇಂತಹ ಬಟ್ಟೆಗಳನ್ನು ಚೀಲದಲ್ಲಿಟ್ಟರೆ ಕಮಟು ವಾಸನೆ ಬರುತ್ತದೆ. ಚೀಲದಲ್ಲಿ ಕರ್ಪೂರ ಇಟ್ಟರೆ ಕಮಟು ವಾಸನೆ ಬರುವುದಿಲ್ಲ.

ಇ. ಕರ್ಪೂರವನ್ನು ಕಾಲುಚೀಲಗಳಲ್ಲಿ ಹಾಕಿದರೆ ಕಾಲುಚೀಲಗಳಿಗೆ ಮತ್ತು ಕಾಲುಗಳಿಗೆ ಕಮಟು ವಾಸನೆ ಬರುವುದಿಲ್ಲ. ಕೆಲವು ಜನರಿಗೆ ಕಾಲುಚೀಲಗಳನ್ನು ಹಾಕಿದರೆ ಕಾಲುಗಳಿಗೆ ತುರಿಕೆ ಬರುತ್ತದೆ. ಕಾಲು ಚೀಲಗಳಲ್ಲಿ ಕರ್ಪೂರ ಹಾಕಿದರೆ ಕಾಲು ತುರಿಸುವುದಿಲ್ಲ.

ಈ. ರಾತ್ರಿ ನಮ್ಮ ಸುತ್ತಲೂ ಕರ್ಪೂರ ಪುಡಿಯನ್ನು ಉದುರಿಸಿದರೆ ಸೊಳ್ಳೆಗಳು ಹತ್ತಿರ ಹಾರಾಡುವುದಿಲ್ಲ, ಹಾಗೆಯೇ, ಇತರ ಕೀಟಗಳು ಮತ್ತು ಇಲಿಗಳಂತಹ ಪ್ರಾಣಿಗಳು ದೂರ ಹೋಗುತ್ತವೆ.

ಉ. ಮನೆಯಲ್ಲಿ ಸೊಳ್ಳೆಗಳಿದ್ದರೆ, ನಾವು ಸೊಳ್ಳೆ ಓಡಿಸುವ ಯಂತ್ರದಲ್ಲಿ ಮ್ಯಾಟ್ ಹಚ್ಚುತ್ತೇವೆ. ಈ ಯಂತ್ರದಲ್ಲಿ ಮ್ಯಾಟ್ ಬದಲು ಕರ್ಪೂರವನ್ನಿಟ್ಟು ಯಂತ್ರವನ್ನು ಚಾಲು ಮಾಡಬೇಕು. ಕರ್ಪೂರ ಕರಗಿ ಹವೆಯಲ್ಲಿ ಸುಗಂಧವು ಹರಡುತ್ತದೆ ಮತ್ತು ಸೊಳ್ಳೆಗಳು ಓಡಿ ಹೋಗುವವು. ಇದು ಮ್ಯಾಟ್‌ಗಿಂತ ಆರೋಗ್ಯಕ್ಕೆ ಹೆಚ್ಚು ಸುರಕ್ಷಿತವಾಗಿದೆ.

ಊ. ಯಾವತ್ತಾದರೂ ಒಲೆ ಹೊತ್ತಿಸಲು ಅಡಚಣೆಯಾದರೆ ಕೆಲವು ಕರ್ಪೂರದ ತುಂಡುಗಳನ್ನು ಬಳಸಿ ಆ ಕೆಲಸವನ್ನು ಸುಲಭ ಮಾಡಿಕೊಳ್ಳಬಹುದು.

(ಆಧಾರ : ವಿವಿಧ ಮೂಲಗಳಿಂದ ಸಂಗ್ರಹಿಸಿದ ಮಾಹಿತಿ)

ಸಂಧಿವಾತಕ್ಕೂ ಭೀಮಸೇನಿ ಕರ್ಪೂರವು ಉಪಯುಕ್ತ !

ಪುದೀನ ಹೂವುಗಳು, ಅಜ್ವಾನದ ಹೂವುಗಳು ಮತ್ತು ಭೀಮಸೇನಿ ಕರ್ಪೂರ ಇವುಗಳನ್ನು ಸಮಪ್ರಮಾಣದಲ್ಲಿ ಸೇರಿಸಿದಾಗ ಸ್ವಲ್ಪ ಹೊತ್ತಿನ ನಂತರ ಅದು ಎಣ್ಣೆಯಲ್ಲಿ ರೂಪಾಂತರಗೊಳ್ಳುತ್ತದೆ. ಈ ಎಣ್ಣೆಗೆ ‘ಅಮೃತಧಾರಾ ಎಣ್ಣೆ’ ಎನ್ನುತ್ತಾರೆ. ಈ ಎಣ್ಣೆ ಸಂಧಿವಾತಕ್ಕೆ ಅತ್ಯಂತ ಉಪಯುಕ್ತವಾಗಿದೆ. – ವೈದ್ಯೆ (ಸೌ.) ಪ್ರಾಚಿ ದಳವಿ-ಮೊಡಕ, ಠಾಣೆ, ಮಹಾರಾಷ್ಟ್ರ (೧೯.೧೨.೨೦೧೭)

ಆಧ್ಯಾತ್ಮಿಕ ತೊಂದರೆಗಳ ನಿವಾರಣೆಗೆ ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ

‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯ’ ಎಂದರೇನು?

ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಇವು ಪಂಚಮಹಾಭೂತಗಳಾಗಿವೆ (ಪಂಚತತ್ತ್ವಗಳು). ಈ ವಿಶ್ವದಲ್ಲಿನ ಪ್ರತಿಯೊಂದು ವಿಷಯದ ನಿರ್ಮಿತಿಯು ಇವುಗಳಿಂದಲೇ ಆಗಿದೆ. ಮನುಷ್ಯನ ಶರೀರವೂ ಈ ೫ ತತ್ತ್ವಗಳಿಂದಲೇ ನಿರ್ಮಾಣವಾಗಿದೆ. ಈ ಐದು ತತ್ತ್ವಗಳನ್ನು ಆಯಾ ಸ್ತರದಲ್ಲಿ ಆಕರ್ಷಿಸಿಕೊಳ್ಳಲು ಅಗ್ರೇಸರವಾಗಿರುವ ಘಟಕಗಳ (ಉದಾ. ಊದುಬತ್ತಿ, ಅತ್ತರು, ಕರ್ಪೂರ, ಗೋಮೂತ್ರ) ಸಹಾಯದಿಂದ ಮಾಡಲಾಗುವ ಆಧ್ಯಾತ್ಮಿಕ ಉಪಾಯಗಳಿಗೆ ‘ಪಂಚತತ್ತ್ವಗಳ ಸ್ತರದಲ್ಲಿನ ಉಪಾಯಗಳು’ ಎನ್ನುತ್ತಾರೆ. ಭೀಮಸೇನಿ ಕರ್ಪೂರದಲ್ಲಿ ತೇಜತತ್ತ್ವ ಹೆಚ್ಚಿದೆ.

ಅ. ಭೀಮಸೇನಿ ಕರ್ಪೂರದ ಆಧ್ಯಾತ್ಮಿಕ ವೈಶಿಷ್ಟ್ಯಗಳು

೧. ಸಾಮಾನ್ಯ ಕರ್ಪೂರಕ್ಕಿಂತ ಭೀಮಸೇನಿ ಕರ್ಪೂರದಲ್ಲಿ ಶಿವತತ್ತ್ವವನ್ನು ಆಕರ್ಷಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆ ಹೆಚ್ಚಿರುತ್ತದೆ.

೨. ಸಾಮಾನ್ಯ ಕರ್ಪೂರಕ್ಕಿಂತ ಭೀಮಸೇನಿ ಕರ್ಪೂರದಲ್ಲಿ ಕೆಟ್ಟ ಶಕ್ತಿಗಳ ತೊಂದರೆಗಳ ನಿವಾರಣೆಯ ಕ್ಷಮತೆಯೂ ಹೆಚ್ಚಿರುತ್ತದೆ.

ಆ. ಭೀಮಸೇನಿ ಕರ್ಪೂರದ ಆಧ್ಯಾತ್ಮಿಕ ಉಪಯುಕ್ತತೆ /ಲಾಭ

೧. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಶ್ವಾಸಮಾರ್ಗದಲ್ಲಿರುವ ತ್ರಾಸದಾಯಕ ಶಕ್ತಿಯು ನಾಶವಾಗುತ್ತದೆ.

೨. ಕರ್ಪೂರದ ಸುಗಂಧದಿಂದ ಬುದ್ಧಿಯ ಮೇಲಿನ ತ್ರಾಸದಾಯಕ ಶಕ್ತಿಯ ಆವರಣ ದೂರವಾಗುವುದರಿಂದ ಅದರ ಕಾರ್ಯಕ್ಷಮತೆ ಹೆಚ್ಚಾಗುತ್ತದೆ. ಅದರಲ್ಲಿ ಆಧ್ಯಾತ್ಮಿಕ ಶಕ್ತಿಯು ಸಂಗ್ರಹವಾಗುವುದರಿಂದ ಅದರ ತೀಕ್ಷ್ಣತೆಯೂ ಹೆಚ್ಚಾಗುತ್ತದೆ. ಕರ್ಪೂರದ ಸುಗಂಧದಿಂದ ಕೆಲಸ / ಸೇವೆಯಲ್ಲಿನ ಬುದ್ಧಿಯ ಅಡಚಣೆಯು ದೂರವಾಗುವುದರಿಂದ ಸೇವೆಯ ಪರಿಣಾಮವೂ ಹೆಚ್ಚಾಗುತ್ತದೆ.

೩. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ದೇಹದಲ್ಲಿನ ದೂಷಿತ ವಾಯು ನಾಶವಾಗಿ ಕಣ್ಣುಗಳು ಶಾಂತವಾಗಲು ಮತ್ತು ಮುಖಚರ್ಯೆ ಮತ್ತು ಮನಸ್ಸು ಪ್ರಸನ್ನವಾಗಲು ಸಹಾಯವಾಗುತ್ತದೆ.

೪. ಕರ್ಪೂರದ ಪರಿಮಳವನ್ನು ತೆಗೆದುಕೊಳ್ಳುವುದರಿಂದ ಕಣ್ಣುನೋವು ಕಡಿಮೆಯಾಗುತ್ತದೆ, ಕಣ್ಣುಗಳಿಗೆ ಮಸುಕಾಗಿ ಕಾಣಿಸುತ್ತಿದ್ದರೆ ದೃಷ್ಟಿಯು ಸ್ಪಷ್ಟವಾಗುತ್ತದೆ, ನಿದ್ರೆಯು ಪೂರ್ಣವಾಗಿದ್ದರೂ ಬರುವಂತಹ ನಿದ್ರೆಯು ದೂರವಾಗುತ್ತದೆ, ಮನಸ್ಸಿನ ನಿರಾಶೆ ದೂರವಾಗುತ್ತದೆ; ಇವೇ ಮುಂತಾದ ಆಧ್ಯಾತ್ಮಿಕ ಸ್ತರದಲ್ಲಿನ ಲಾಭಗಳಾಗಲು ಸಹಾಯವಾಗುತ್ತದೆ.

– ಪೂ. (ಸೌ.) ಅಂಜಲಿ ಗಾಡಗೀಳ (೧.೧೨.೨೦೧೦)

೫. ಭೀಮಸೇನಿ ಕರ್ಪೂರವು ದೃಷ್ಟಿಯನ್ನು ತೆಗೆಯಲೂ ಉಪಯುಕ್ತವಾಗಿದೆ.

ಇ. ಆಧ್ಯಾತ್ಮಿಕ ಉಪಾಯಕ್ಕಾಗಿ ಭೀಮಸೇನಿ ಕರ್ಪೂರವನ್ನು ಹೇಗೆ ಉಪಯೋಗಿಸಬೇಕು?

೧. ಕರ್ಪೂರದ ಪುಡಿಯನ್ನು ಮುಖಕ್ಕೆ ಹಚ್ಚಿ ಅದರ ಪರಿಮಳವನ್ನೂ ತೆಗೆದುಕೊಳ್ಳಬೇಕು.

ಅ. ಚಿಟಿಕೆಯಷ್ಟು ಪುಡಿಯಾಗುವಷ್ಟು ಕರ್ಪೂರದ ತುಂಡನ್ನು ಕೈಯಲ್ಲಿ ತೆಗೆದುಕೊಂಡು ನಾಮಜಪ ಮಾಡುತ್ತಾ ಅದನ್ನು ಅಂಗೈಯಲ್ಲಿ ಪುಡಿ ಮಾಡಬೇಕು. ಕಣ್ಣುಗಳನ್ನು ಮುಚ್ಚಿ ಪುಡಿಯನ್ನು ಕಣ್ಣುಗಳೊಂದಿಗೆ ಇಡೀ ಮುಖದ ಮೇಲೆ ನಿಧಾನವಾಗಿ ಹಚ್ಚಬೇಕು. ಇದರಿಂದ ಮುಖದ ಮೇಲಿನ ತ್ರಾಸದಾಯಕ ಶಕ್ತಿಯ ಆವರಣವು ಕಡಿಮೆಯಾಗುತ್ತದೆ.

ಆ. ಈ ಪುಡಿಯನ್ನು ಆಜ್ಞಾಚಕ್ರದ ಮೇಲೆ (ಎರಡೂ ಹುಬ್ಬುಗಳ ನಡುವೆ) ಹೆಚ್ಚು ಪ್ರಮಾಣದಲ್ಲಿ ತಿಕ್ಕಬೇಕು. ಇದರಿಂದ ಆಜ್ಞಾಚಕ್ರ ಜಾಗೃತವಾಗಲು ಸಹಾಯವಾಗುತ್ತದೆ.

ಇ. ಉಳಿದ ಪುಡಿಯನ್ನು ಎರಡೂ ಅಂಗೈಗಳಿಗೆ ತಿಕ್ಕಬೇಕು. ಎರಡೂ ಕೈಗಳಿಂದ ಬೊಗಸೆಯನ್ನು ಮಾಡಿ ಅದರಲ್ಲಿ ಮೂಗಿನೊಂದಿಗೆ ಮುಖವನ್ನು ಮುಚ್ಚಿಕೊಳ್ಳಬೇಕು.

ಈ. ಎರಡೂ ಕೈಗಳ ಬೊಗಸೆಯಲ್ಲಿ ಕಣ್ಣುಗಳ ರೆಪ್ಪೆಗಳನ್ನು ೪-೫ ಬಾರಿ ಮುಚ್ಚುವುದು-ತೆರೆಯುವುದು ಮಾಡಬೇಕು. ಬೊಗಸೆಯ ಟೊಳ್ಳಿನಿಂದ ದೀರ್ಘಶ್ವಾಸವನ್ನು ದೇಹದಲ್ಲಿ ತುಂಬಿಕೊಳ್ಳಬೇಕು. ಹೀಗೆ ಒಂದು ಸಲಕ್ಕೆ ೩-೪ ಬಾರಿ ಮಾಡಬೇಕು.

ಉ. ವೈದ್ಯಕೀಯ ಉಪಚಾರವನ್ನು ಮಾಡಿಯೂ ಶರೀರ ತುರಿಸುವುದು, ಶರೀರದ ಮೇಲೆ ಗುಳ್ಳೆ ಅಥವಾ ಪರಚಿದ ಗುರುತುಗಳು ಮೂಡುವುದು, ಶರೀರದ ಉಷ್ಣತೆ ಹೆಚ್ಚಾಗುವುದು, ಹಾಗೆಯೇ ತಲೆನೋವು, ಏನೂ ಹೊಳೆಯದಿರುವುದು ಮುಂತಾದ ತೊಂದರೆಯಾಗುತ್ತಿದ್ದಲ್ಲಿ ಆಜ್ಞಾಚಕ್ರದ ಮೇಲೆ ಅಥವಾ ಶಾರೀರಿಕ ತೊಂದರೆಯ ಅರಿವಾಗುತ್ತಿರುವ ಸ್ಥಳದ ಮೇಲೆ ಭೀಮಸೇನಿ ಕರ್ಪೂರದ ತುಂಡನ್ನು ಹಚ್ಚಿಕೊಳ್ಳಬೇಕು. ಸಾಮಾನ್ಯವಾಗಿ ಆಧ್ಯಾತ್ಮಿಕ ತೊಂದರೆಯಿದ್ದಲ್ಲಿ ಆ ತುಂಡು ತಾನಾಗಿಯೇ ಅಂಟಿಕೊಳ್ಳುತ್ತದೆ ಮತ್ತು ತೊಂದರೆ ಕಡಿಮೆಯಾದ ನಂತರ ಕೆಳಗೆ ಬೀಳುತ್ತದೆ.

– ಪೂ. (ಸೌ.) ಅಂಜಲಿ ಗಾಡಗೀಳ (೨೫.೧೧.೨೦೧೦)

5 thoughts on “ಬಹುಗುಣಿ ಭೀಮಸೇನಿ ಆಯುರ್ವೇದಿಕ ಕರ್ಪೂರ !”

Leave a Comment