‘ಗುರುಮಂತ್ರವನ್ನು ಗುಪ್ತವಾಗಿಡಬೇಕು’ ಎಂದು ಏಕೆ ಹೇಳುತ್ತಾರೆ ?

೧. ಯಾರಾದರೊಬ್ಬ ಸಾಧಕನ ಆವಶ್ಯಕತೆಯನ್ನು ಗಮನದಲ್ಲಿಟ್ಟುಕೊಂಡು ಗುರುಗಳು ಯಾವುದಾದರೊಂದು ಮಂತ್ರವನ್ನು ಹೇಳಿರುತ್ತಾರೆ, ಆಗ ಅದರಲ್ಲಿ ಅವರ ಶಕ್ತಿಯಿರುತ್ತದೆ. ಅದೇ ಮಂತ್ರವನ್ನು ಆ ಸಾಧಕನು ಬೇರೆ ಯಾರಿಗಾದರೂ ಹೇಳಿದರೆ, ಅವನಲ್ಲಿ (ಗುರುಮಂತ್ರವನ್ನು ಹೇಳುವ ಸಾಧಕನಲ್ಲಿ) ಶಕ್ತಿಯಿಲ್ಲದ ಕಾರಣ ಆ ಮಂತ್ರದಿಂದ ಸಾಧನೆ ಮಾಡಿದರೆ ಎರಡನೆಯ ಸಾಧಕನಿಗೆ ಲಾಭವಾಗುವುದಿಲ್ಲ. ಹೀಗಾದರೆ ಆ ಎರಡನೆಯ ಹಾಗೂ ಅವನ ಅನುಭವವನ್ನು ಕೇಳಿ ಮೊದಲನೆಯ ಸಾಧಕನ ಬುದ್ಧಿಭ್ರಷ್ಟವಾಗಿ ಅವನೂ ಸಾಧನೆಯನ್ನು ನಿಲ್ಲಿಸುವ ಸಾಧ್ಯತೆಯಿರುತ್ತದೆ.

೨. ಯಾವುದಾದರೊಂದು ವಿಷಯವನ್ನು ಗುಪ್ತವಾಗಿಡಬೇಕೆಂದು ಹೇಳಿದರೆ ಸತತವಾಗಿ ಅದರ ನೆನಪಾಗುತ್ತದೆ. ಈ ನಿಯಮದಂತೆ ಮಂತ್ರವನ್ನು ಗುಪ್ತವಾಗಿಡಬೇಕೆಂದು ಹೇಳಿದರೆ ಮಂತ್ರಸಾಧನೆಯು ಹೆಚ್ಚಾಗುತ್ತದೆ.

೩. ಪ್ರತಿಯೊಬ್ಬರ ಮಂತ್ರವು ಬೇರೆಬೇರೆಯಾಗಿರುವುದರಿಂದ ಒಬ್ಬರ ಮಂತ್ರವು ಇನ್ನೊಬ್ಬರಿಗೆ ತಿಳಿದರೂ ಅದರಿಂದ ಅವರಿಗೆ (ಇನ್ನೊಬ್ಬರಿಗೆ) ಯಾವ ಲಾಭವೂ ಆಗುವುದಿಲ್ಲ.

೪. ಗುರುಮಂತ್ರವು ನಾಮಸ್ಮರಣೆಯಾಗಿರದೇ ಮಂತ್ರವಾಗಿದ್ದಲ್ಲಿ, ಮಂತ್ರೋಚ್ಚಾರವು ಅಯೋಗ್ಯ ರೀತಿಯಲ್ಲಾದರೆ ಅದರಿಂದ ಆ ಮಂತ್ರವನ್ನು ಜಪಿಸುವ ಎರಡನೆಯ ಸಾಧಕನಿಗೆ ನಷ್ಟವೂ ಆಗಬಹುದು.

‘ಗುರುಮಂತ್ರವನ್ನು ಗುಪ್ತವಾಗಿಡಬೇಕು’, ಎಂಬ ನಿಯಮವನ್ನು ಅಧ್ಯಯನ ಮಾಡಲಿಚ್ಛಿಸುವ (ಜಿಜ್ಞಾಸೆ ಇರುವ) ಸಾಧಕರೊಂದಿಗೆ ಮತ್ತು ಗುರುಬಂಧುಗಳೊಂದಿಗೆ ಮಾತನಾಡುವಾಗ ಪಾಲಿಸುವ ಆವಶ್ಯಕತೆ ಇರುವುದಿಲ್ಲ. ಅವರೊಂದಿಗೆ ಚರ್ಚೆಯನ್ನು ಮಾಡುವಾಗ ಮಂತ್ರವನ್ನು ಅಥವಾ ಇತರ ಯಾವುದೇ ಸಾಧನೆಯನ್ನು ಗುಪ್ತವಾಗಿಡುವುದರ ಆವಶ್ಯಕತೆ ಇರುವುದಿಲ್ಲ; ಏಕೆಂದರೆ ಚರ್ಚೆಯಿಂದ ಎಲ್ಲರೂ ಏನಾದರೂ ಕಲಿಯಬಹುದು. ಹಾಗೆಯೇ ಅದರಲ್ಲಿ ಯಾವ ಅಪಾಯವೂ ಇರುವುದಿಲ್ಲ.

ರಾಮಾನುಜರಿಗೆ ಗೋಷ್ಠಿಪೂರ್ಣರಿಂದ ‘ಓಂ ನಮೋ ನಾರಾಯಣಾಯ |’ ಎಂಬ ಗುರುಮಂತ್ರವು ಸಿಕ್ಕಿತು. ಆ ಮಂತ್ರವನ್ನು ಗುಪ್ತವಾಗಿಡಬೇಕೆಂದು ಗೋಷ್ಠಿಪೂರ್ಣರು ಅವರಿಗೆ ಆಜ್ಞೆ ಮಾಡಿದರು. ‘ಈ ಮಂತ್ರದಿಂದ ಮುಕ್ತಿ (ಮೋಕ್ಷ) ಸಿಗುವುದು’, ಎಂದು ಗುರುಗಳು ಹೇಳಿದ ನಂತರ ರಾಮಾನುಜರು ಸಮೀಪದಲ್ಲಿದ್ದ ಒಂದು ಮಂದಿರದ ಗೋಪುರದ ಮೇಲೆ ಏರಿ ಆ ಮಂತ್ರವನ್ನು ಗಟ್ಟಿಯಾಗಿ ಹೇಳತೊಡಗಿದರು. ಆ ಮಂತ್ರವು ಅನೇಕ ಜನರಿಗೆ ಕೇಳಿಸಿತು. ಈ ವಿಷಯವು ಗೋಷ್ಠಿಪೂರ್ಣರಿಗೆ ತಿಳಿದಾಗ ಅವರು ಬಹಳ ಕೋಪಗೊಂಡರು ಮತ್ತು ರಾಮಾನುಜರನ್ನು ಉದ್ದೇಶಿಸಿ, ‘ನೀನು ಗುರು ಆಜ್ಞೆಯನ್ನು ಪಾಲಿಸಲಿಲ್ಲ, ನಿನಗೆ ನರಕದಲ್ಲಿ ಬಿದ್ದಿರಬೇಕಾವುದು,’ ಎಂದು ಹೇಳಿದರು. ಆಗ ರಾಮಾನುಜರು, ‘ತಮ್ಮ ಕೃಪೆಯಿಂದ ಈ ಎಲ್ಲ ಸ್ತ್ರೀ-ಪುರುಷರಿಗೆ ಮುಕ್ತಿ ಸಿಗುವುದಾದರೆ, ನಾನು ಆನಂದದಿಂದ ನರಕಕ್ಕೆ ಹೋಗಲು ಸಿದ್ಧನಾಗಿದ್ದೇನೆ’, ಎಂದರು. ಇದನ್ನು ಕೇಳಿ ಗೋಷ್ಠಿಪೂರ್ಣರು ಪ್ರಸನ್ನರಾಗಿ, ‘ಇಂದಿನಿಂದ ವಿಶಿಷ್ಟಾದ್ವೈತವಾದವು ನಿನ್ನ ಹೆಸರಿನಿಂದ ‘ರಾಮಾನುಜದರ್ಶನ’ ಎಂದು ಗುರುತಿಸಲ್ಪಡುವುದು’ ಎಂದು ಹೇಳಿದರು !

(ಆಧಾರ : ಸನಾತನ ನಿರ್ಮಿತ ‘ಗುರುಗಳ ವಿಧಗಳು ಮತ್ತು ಗುರುಮಂತ್ರ’ ಗ್ರಂಥ)

1 thought on “‘ಗುರುಮಂತ್ರವನ್ನು ಗುಪ್ತವಾಗಿಡಬೇಕು’ ಎಂದು ಏಕೆ ಹೇಳುತ್ತಾರೆ ?”

Leave a Comment