ಯೋಗ್ಯತೆಗನುಸಾರ ಶಿಷ್ಯನ ಶ್ರೇಣಿ

ಹಿಂದೂ ಧರ್ಮದಲ್ಲಿನ ಎಲ್ಲಕ್ಕಿಂತ ದೊಡ್ಡ ವೈಶಿಷ್ಟ್ಯವೆಂದರೆ, ಗುರು-ಶಿಷ್ಯ ಪರಂಪರೆ !

ಯೋಗ್ಯತೆಗನುಸಾರ ಶಿಷ್ಯನ ವಿಧಗಳು ಯಾವುದು ಮತ್ತು ಅವರ ಗುಣವೈಶಿಷ್ಟ್ಯಗಳೇನು, ಎಂಬುದನ್ನು ಇಲ್ಲಿ ನೀಡುತ್ತಿದ್ದೇವೆ.

೧. ನಿರರ್ಥಕ ಶಿಷ್ಯ
‘ಈ ಪ್ರಕಾರದ ಶಿಷ್ಯನೆಂದರೆ, ಅವನು ಈ ಕಡೆಯವನೂ ಅಲ್ಲ, ಆ ಕಡೆಯವನೂ ಅಲ್ಲ. ಅವನಿಗೆ ನದಿಯನ್ನು ದಾಟಿ ಹೋಗಬೇಕಾಗಿದ್ದರೆ ಅವನು ನದೀ ತೀರದಲ್ಲಿ ಎಷ್ಟು ದೋಣಿಗಳಿವೆ, ಅದರಲ್ಲಿನ ಯಾವ ದೋಣಿ ಎಲ್ಲಕ್ಕಿಂತ ಸುಂದರವಾಗಿದೆ ಮತ್ತು ವಿಶ್ರಾಂತಿ ಕೊಡುವಂತಹದ್ದಾಗಿದೆ ಎಂಬುದನ್ನು ನೋಡುವನು. ಅದನ್ನು ಹುಡುಕಿ ಅವನು ಆ ದೋಣಿಯಿಂದ ನದಿಯ ಆಚೆಗಿನ ತೀರಕ್ಕೆ ಹೋಗುವನು. ಇಂತಹ ಶಿಷ್ಯರು ಒಂದು ರೀತಿಯ ಸ್ವಾರ್ಥಿ ಹಾಗೂ ಹೊಟ್ಟೆಬಾಕರಾಗಿರುತ್ತಾರೆ. ಅವರಲ್ಲಿ ಸೇವೆ, ಸಮರ್ಪಣೆ ಹಾಗೂ ಸಾಧನೆಯ ಸಂಪೂರ್ಣ ಅಭಾವವಿರುತ್ತದೆ.

೨. ಗೃಹಸ್ಥ ಶಿಷ್ಯ (ಗುರುಗಳ ಬಗ್ಗೆ ಅಪಾರ ಶ್ರದ್ಧೆಯನ್ನಿಟ್ಟು ಅವರ ಮಾರ್ಗದರ್ಶನಕ್ಕನುಸಾರ ಸಾಂಸಾರಿಕ ಕರ್ತವ್ಯಗಳನ್ನು ಪೂರ್ಣಗೊಳಿಸುವುದು)
ಗೃಹಸ್ಥ ಶಿಷ್ಯನಿಗೆ ಅವನ ಜೀವನ, ಮನೆ-ಸಂಸಾರ ಮತ್ತು ಆ ವಿಷಯಗಳ ಬಗ್ಗೆ ಕರ್ತವ್ಯಗಳಿರುತ್ತವೆ. ಸಾಮಾಜಿಕ ರೀತಿನೀತಿಗನುಸಾರ ಅವನಿಗೆ ಗೃಹಸ್ಥ ಧರ್ಮವನ್ನು ಪಾಲಿಸಬೇಕಾಗುತ್ತದೆ. ಗೃಹಸ್ಥ ಶಿಷ್ಯನಲ್ಲಿ ಗುರುಗಳ ಬಗ್ಗೆ ಅಪಾರ ಶ್ರದ್ಧೆ ಮತ್ತು ವಿಶ್ವಾಸವಿರುತ್ತದೆ. ಮಗಳ ವಿವಾಹವಿರಲಿ ಅಥವಾ ಮಗನ ಶಿಕ್ಷಣದ ವಿಷಯವಿರಲಿ ಅವನು ಗುರುಗಳ ಆದೇಶವನ್ನು ಚಾಚೂ ತಪ್ಪದೆ ಪಾಲನೆ ಮಾಡುತ್ತಾನೆ. ಪ್ರತಿಯೊಂದು ಚಿಕ್ಕ-ದೊಡ್ಡ ನಿರ್ಣಯವನ್ನೂ ಅವನು ಗುರುಗಳ ಆದೇಶಕ್ಕನುಸಾರವಾಗಿಯೇ ತೆಗೆದುಕೊಳ್ಳುತ್ತಾನೆ. ಅವನಿಗೆ ಗುರುಗಳು ತೆಗೆದುಕೊಳ್ಳುವ ನಿರ್ಣಯದಲ್ಲಿಯೇ ಅವನ ಹಿತ ಮತ್ತು ಕಲ್ಯಾಣವಿದೆ ಎಂಬ ವಿಶ್ವಾಸವಿರುತ್ತದೆ. ಗೃಹಸ್ಥ ಶಿಷ್ಯನಿಗೆ ಜಪ, ಅನುಷ್ಠಾನ ಮತ್ತು ಸಾಧನಾ ಮಾರ್ಗದಯಲ್ಲಿ ಹೆಚ್ಚು ಆಸಕ್ತಿ ಇರುವುದಿಲ್ಲ; ಏಕೆಂದರೆ, ಇವೆಲ್ಲ ವಿಷಯಗಳು ಅವನ ಬುದ್ದಿಗೆ ತಿಳಿದರು ಮನಸ್ಸಿಗೆ ನಾಟುವುದಿಲ್ಲ. ಅವನು ಗುರುಗಳನ್ನೇ ಎಲ್ಲರಿಗಿಂತ ದೊಡ್ಡ ಗೃಹಸ್ಥರೆಂದು ನಂಬಿ ಅವರನ್ನು ‘ಮಾರ್ಗದರ್ಶಕ’ರೆಂದು ತನ್ನವರನ್ನಾಗಿ ಮಾಡಿಕೊಳ್ಳುತ್ತಾನೆ.

೩. ಕರ್ಮಸನ್ಯಾಸಿ ಶಿಷ್ಯ (ಗೃಹಸ್ಥ ಧರ್ಮದ ಪಾಲನೆಯ ಜೊತೆಗೆ ಸನ್ಯಾಸ ಧರ್ಮವನ್ನು ಕೂಡ ಸ್ವಲ್ಪ ಪ್ರಮಾಣದಲ್ಲಿ ಸ್ವೀಕಾರ ಮಾಡುವುದು)
ಕರ್ಮಸನ್ಯಾಸಿ ಶಿಷ್ಯರು ಗೃಹಸ್ಥ ಧರ್ಮದ ಪಾಲನೆಯ ಜೊತೆಗೆ ಆಧ್ಯಾತ್ಮಿಕ ಉನ್ನತಿಗಾಗಿ ಸನ್ಯಾಸ ಧರ್ಮವನ್ನು ಅಲ್ಪಸ್ವಲ್ಪ ಪ್ರಮಾಣದಲ್ಲಿ ಸ್ವೀಕರಿಸುತ್ತಾರೆ. ಜೀವನದಲ್ಲಿ ಅಧ್ಯಾತ್ಮದ ಪರಿಚಯವಾಗ ಬೇಕೆಂದು ಅವರು ದೀಕ್ಷೆಯನ್ನೂ ತೆಗೆದುಕೊಳ್ಳುತ್ತಾರೆ. ಆಗ ಗುರುಗಳು ಬೇರೆ ವಸ್ತ್ರಗಳನ್ನು ನೀಡಿದರೆ ಅವರು ಅವುಗಳನ್ನು ಕೂಡ ಸ್ವೀಕರಿಸುತ್ತಾರೆ. ಗೃಹಸ್ಥನ ಎಲ್ಲ ಕರ್ತವ್ಯಗಳನ್ನು ಮಾಡಿ ಅವರು ಅಧ್ಯಾತ್ಮ ಮತ್ತು ಗುರುಗಳು ಹೇಳಿದ ಸಾಧನೆಯನ್ನು ಮಾಡಲು ಸ್ವಲ್ಪ ಸಮಯವನ್ನು ಕೊಡುತ್ತಾರೆ.

೪. ಸಾಧಕ ಶಿಷ್ಯ (ಸಾಧಕ ಶಿಷ್ಯನು ಗುರುಗಳ ಆಜ್ಞಾಪಾಲನೆಯನ್ನು ನಿಷ್ಕಾಮ ಭಾವನೆಯಿಂದ ಮಾಡುವುದು)
ಸಾಧಕ ಶಿಷ್ಯನು ಗುರುಗಳ ಆದೇಶವನ್ನು ಬ್ರಹ್ಮವಾಕ್ಯವೆಂದು ನಂಬಿ ಅದಕ್ಕನುಸಾರ ಆದೇಶ ಸಿಗುವವರೆಗೆ ನಿರಂತರವಾಗಿ ಮುಂದೆ ನಡೆಯುತ್ತಾರೆ. ಈ ವಿಷಯದಲ್ಲಿ ಶಬರಿಯ ಉದಾಹರಣೆಯನ್ನು ತೆಗೆದುಕೊಳ್ಳಬಹುದು. ಶಬರಿಯ ಗುರುಗಳು ಅವಳಿಗೆ ಹೇಳಿದರು, ‘ಪ್ರಭು ಶ್ರೀರಾಮನು ನಿನ್ನ ಬಾಗಿಲಿಗೆ ಬರುವನು’ ಎಂದು ಹೇಳಿದರು, ಆದರೆ ಅವರು ಶ್ರೀರಾಮನು ಯಾವಾಗ ಬರುತ್ತಾನೆ, ಹೇಗೆ ಮತ್ತು ಎಷ್ಟು ವರ್ಷಗಳ ನಂತರ ಬರುತ್ತಾನೆ ಎಂದು ಹೇಳಲಿಲ್ಲ. ಶಬರಿ ಪ್ರತಿದಿನ ‘ಅವಳ ಮನೆಯ ಮುಂದಿನ ದಾರಿಯನ್ನು ಗೂಡಿಸಿ ಸ್ವಚ್ಛ ಮಾಡುವುದು, ಅದರ ಮೇಲೆ ಹೂವುಗಳನ್ನು ಹರಡುವುದು, ಪ್ರಭು ಶ್ರೀರಾಮಚಂದ್ರನಿಗಾಗಿ ಫಲ-ಪುಷ್ಪಗಳನ್ನು ಸಂಗ್ರಹಿಸಿಡುವುದು’ ಇತ್ಯಾದಿ ಹೀಗೆ ನಿತ್ಯಕ್ರಮಗಳನ್ನು ಅನೇಕ ವರ್ಷಗಳ ವರೆಗೆ ಮಾಡುತಿದ್ದಳು. ಅವಳು ವೃದ್ಧಳಾದಳು, ಆದರೂ ಅವಳು ತನ್ನ ಈ ಸಾಧನೆಯಲ್ಲಿ ವ್ಯತ್ಯಯವಾಗಲು ಬಿಡಲಿಲ್ಲ. ಸಾಧಕ ಶಿಷ್ಯರ ಭಾವವು ಶಬರಿಯ ಹಾಗೆ ಇರುತ್ತದೆ. ಅವರು ಗುರುಗಳ ಆದೇಶದ ಪಾಲನೆಯನ್ನು ಶ್ರದ್ಧೆ ಮತ್ತು ವಿಶ್ವಾಸದಿಂದ ಮಾಡುತ್ತಾರೆ. ಗ್ರಹಸ್ಥ ಮತ್ತು ಕರ್ಮಸನ್ಯಾಸಿ ಶಿಷ್ಯರು ‘ನನಗೆ ಇದು ಬೇಕು, ನನಗೆ ಹೀಗೆ ಆಗಬೇಕು, ನನ್ನ ಕಲ್ಯಾಣವಾಗಬೇಕು’ ಹೀಗೆ ಏನಾದರೂ ಪ್ರಾಪ್ತ ಮಾಡಿಕೊಳ್ಳಲು ಕೃತಿಗಳನ್ನು ಮಾಡುತ್ತಾರೆ; ಆದರೆ ಸಾಧಕ ಶಿಷ್ಯರಲ್ಲಿ ಇಂತಹ ಯಾವುದೇ ಪ್ರಾಪ್ತಿಯ ಭಾವ ಇರುವುದಿಲ್ಲ. ಅವರಿಗೆ ‘ಗುರುಗಳಿಗೆ ತಮ್ಮ ಪರಿಚಯವಿದೆ ಮತ್ತು ಅವರು ಅವನಿಗೆ ಏನು ಹೇಳುವರೊ, ಅದು ಅವರಿಗೆ ಯೋಗ್ಯವೇ ಆಗಿರುತ್ತದೆ, ಅದನ್ನೆ ಮಾಡುತ್ತಿರಬೇಕು’, ಎಂಬುದರ ಬಗ್ಗೆ ವಿಶ್ವಾಸವಿರುತ್ತದೆ.

೫. ಸನ್ಯಾಸಿ ಶಿಷ್ಯ (ತನ್ನನ್ನು ಸಂಪೂರ್ಣ ಸಮರ್ಪಿಸಿಕೊಂಡು ಗುರು ಕಾರ್ಯವನ್ನು ಮಾಡುವುದು)
ಸನ್ಯಾಸಿ ಶಿಷ್ಯನು ಗುರುಗಳ ಕಾರ್ಯವನ್ನು ಪೂರ್ಣಗೊಳಿಸಲು ಸದಾ ಸಿದ್ಧನಾಗಿರುತ್ತಾನೆ. ‘ನ್ಯಾಸ’ ಈ ಶಬ್ದದ ಇದರ ಅರ್ಥವು ‘ಯಾವುದೇ ವಸ್ತುವಿನ ಭದ್ರತೆ, ಸುರಕ್ಷೆ ಮತ್ತು ವ್ಯವಸ್ಥೆಯಾಗಿದೆ.’ ‘ಸಮ್’ ಇದರ ಅರ್ಥವು ಸಮ್ಯಕ ರೂಪದಲ್ಲಿ, ಅಂದರೆ ಒಳ್ಳೆಯ ರೀತಿಯಲ್ಲಿ. ‘ಸನ್ಯಾಸ’ ಅಂದರೆ ತನ್ನನ್ನು ಸಂಪೂರ್ಣವಾಗಿ ಗುರುಗಳಿಗೆ ಸಮರ್ಪಿಸಿಕೊಳ್ಳುವುದು, ಇದರಿಂದ ಗುರುಗಳು ತಮ್ಮನ್ನು ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬ ನಿರ್ಣಯವನ್ನು ತೆಗೆದುಕೊಳ್ಳಬಹುದು. ಪ್ರತಿಯೊಬ್ಬ ಸನ್ಯಾಸಿ ಶಿಷ್ಯನ ಒಂದು ವಿಶಿಷ್ಟ ಧ್ಯೇಯವಿರುತ್ತದೆ ಹಾಗೂ ಅವನ ಎಲ್ಲ ಕರ್ಮಗಳು ಅವನನ್ನು ಆ ದಿಕ್ಕಿನಲ್ಲಿಯೆ ಮುಂದೆ ಒಯ್ಯುತ್ತವೆ.

೬. ತಾಂತ್ರಿಕ ಶಿಷ್ಯ (ದಿವ್ಯ ಭಾವ)
ಈ ವಿಧದ ಶಿಷ್ಯನ ತುಲನೆಯನ್ನು ದಿವ್ಯ ಭಾವವಿರುವ ಶಿಷ್ಯನೊಂದಿಗೆ ಮಾಡಬಹುದು. ಅವನಿಗೆ ಗುರುಗಳೊಂದಿಗೆ ತಾದಾತ್ಮ್ಯ ಭಾವವಿರುತ್ತದೆ.

(ಆಧಾರ : ಗುರುಪ್ರಸಾದ ದೀಪಾವಳಿ ವಿಶೇಷಾಂಕ, ೨೦೦೮)

Leave a Comment