ಗುರುಗಳ ಆಸನ ಮತ್ತು ಗುರುಪಾದುಕೆಗಳು

ಅ. ಆಸನ

ಕೆಲವು ಗುರುಗಳ ದೇಹತ್ಯಾಗದನಂತರ ಅವರ ನೆನಪಿಗೆಂದು ಅವರ ಶಿಷ್ಯರು ಗುರುಗಳ ಆಸನವನ್ನು, ಸ್ಥಾನವನ್ನು ನಿರ್ಮಿಸುತ್ತಾರೆ. ಬಹಳಷ್ಟು ಮಹಾಪುರುಷರು ಆಗಿ ಹೋಗುತ್ತಾರೆ. ಅವರ ನಂತರ ಅವರ ಭಕ್ತರು ಆವರ ಹೆಸರಿನಲ್ಲಿ ಆಸನವನ್ನು ಸ್ಥಾಪಿಸುತ್ತಾರೆ. ಹೀಗೆ ಮಾಡುವುದು ಭಾವನೆಯ ಕನಿಷ್ಠ ವಿಧವಾಗಿದೆ.’ ಒಂದು ವೇಳೆ ಗುರುಗಳು ಸ್ವತಃ, ಅವರು ಮಲಗಿದ್ದ ಅಥವಾ ತಂದಿದ್ದ ಹಾಸಿಗೆಯನ್ನು (ಆಸನವನ್ನು) ಅಲ್ಲಿಯೇ ಇರಲಿ ಎಂದು ಹೇಳಿದರೆ ಮಾತ್ರ ಅದು ಗುರುಗಳ ಆಸನವಾಗುತ್ತದೆ. ನಾವು ಅವರಿಗೆ ಕೊಟ್ಟಿದ್ದ ಹಾಸಿಗೆಯ ಮೇಲೆ ಅವರು ಮಲಗಿದರೆಂದು ಅದು ಗುರುಗಳ ಆಸನವಾಗುವುದಿಲ್ಲ.

ಆ. ಗುರುಪಾದುಕೆಗಳು

ಗುರುಗಳ ಚರಣಗಳಲ್ಲಿ ನಾಲ್ಕು ಪುರುಷಾರ್ಥಗಳು, ಅಂದರೆ ನಾಲ್ಕು ಮುಕ್ತಿಗಳಿರುತ್ತವೆ; ಆದರೆ ಯಾವ ಸ್ಥಾನದಲ್ಲಿ ಶಿವ-ಶಕ್ತಿಯರ ಐಕ್ಯ ಅಥವಾ ಸಾಮರಸ್ಯವಾಗುತ್ತದೆಯೋ, ಅದನ್ನೇ ಶ್ರೇಷ್ಠ ಗುರುಪಾದುಕೆ ಎನ್ನುತ್ತಾರೆ.

ಸ್ವಪ್ರಕಾಶಶಿವಮೂರ್ತಿರೇಕಿಕಾ ತದ್ವಿಮರ್ಶತ ನುರೇಕಿಕಾ ತಯೋಃ |
ಸಾಮರಸ್ಯವಪುರಿಷ್ಯತೇ ಪರಾ ಪಾದುಕಾ ಪರಶಿವಾತ್ಮನೋ ಗುರೋಃ ||

– ನಿತ್ಯಷೋಡಶಿಕಾರ್ಣವ, ವಿಶ್ರಾಮ ೮, ಶ್ಲೋಕ ೭ ರ ಮೇಲಿನ ಸೇತುಬಂಧ ಟೀಕೆ

ಅರ್ಥ : ಆತ್ಮದ ಪ್ರಕಾಶವು ಶಿವನ ಮೂರ್ತಿಯಾಗಿದೆ. ಅದರಿಂದ ಹೊರಡುವ ಶಕ್ತಿಯು ಅವನ ಶರೀರವಾಗಿದೆ. ಶಿವರೂಪವಾಗಿರುವಂತಹ ಗುರುಗಳ ಪಾದುಕೆಗಳಲ್ಲಿ ಈ ಎರಡರ ಸಾಮರಸ್ಯವು, ಅಂದರೆ ಐಕ್ಯವು ದೊರಕುತ್ತದೆ.

ಪ್ರತಿಯೊಬ್ಬ ವ್ಯಕ್ತಿಯೂ ಶ್ರೇಷ್ಠನಲ್ಲ, ಪ್ರತಿಯೊಬ್ಬ ಶ್ರೇಷ್ಠ ವ್ಯಕ್ತಿಯೂ ಮಹಾಪುರುಷನಲ್ಲ, ಪ್ರತಿಯೊಬ್ಬ ಮಹಾಪುರುಷನೂ ಸಾಕ್ಷಾತ್ಕಾರಿ ಪುರುಷನಲ್ಲ. ಒಂದು ವೇಳೆ ಮಹಾಪುರುಷನು ಆಸನವನ್ನು ಅಥವಾ ಪಾದುಕೆಗಳನ್ನು ಸ್ಥಾಪಿಸಿದರೆ, ನಂತರ ಆಸನವನ್ನು ಮುಂದುವರಿಸುವವರು ಅರ್ಹರಾಗಿರುವುದಿಲ್ಲ ಆಸನವನ್ನು ಸ್ಥಾಪಿಸುವುದಕ್ಕೂ ಕೆಲವೊಂದು ನಿಯಮಗಳಿವೆ. ನಿತ್ಯ ಪೂಜಾರ್ಚನೆಗಳಿವೆ. ಇದಕ್ಕಾಗಿ ಉಪಾಸನೆಯನ್ನು ಮತ್ತು ತಪಸ್ಸನ್ನು ಮಾಡುವವರಾರು ? ಅಮಳನೇರನಲ್ಲಿ ಪ.ಪೂ. ಸಖಾರಾಮ ಮಹಾರಾಜರ ಶಿಷ್ಯರು ಅವರ ಆಸನವನ್ನು ಸ್ಥಾಪಿಸಿದ್ದಾರೆ. ಅವರ ನಂತರ ಆ ಆಸನವನ್ನು ಯಾರು ನಡೆಸುವರು ಎಂಬುದರ ವ್ಯವಸ್ಥೆಯನ್ನೂ ಮಾಡಿಡಲಾಗಿತ್ತು. ಈಗ ಆ ಆಸನವನ್ನು ನೋಡಿ ಕೊಳ್ಳುವ ಅವರ ಭಕ್ತರು ಅಲ್ಲಿ ನಿತ್ಯ ಪೂಜಾರ್ಚನೆಗಳನ್ನು ಮಾಡುತ್ತಾರೆ, ಅದರ ಪಾವಿತ್ರ್ಯವನ್ನು ಕಾಪಾಡುತ್ತಾರೆ. ಅಲ್ಲಿ ತಪಸ್ಸು ಮತ್ತು ಸಾಧನೆ ನಡೆಯುತ್ತಿರುತ್ತದೆ; ಆದ್ದರಿಂದಲೇ ಆ ಆಸನವು ಇನ್ನೂ ಶಾಶ್ವತವಾಗಿ ಉಳಿದಿದೆ. ಗುರುಪರಂಪರೆಯಲ್ಲಿ ಆಸನವನ್ನು ಸ್ಥಾಪಿಸುವ ಪದ್ಧತಿಯಿಲ್ಲ. ಯಾರಿಗಾದರೂ ಹಾಗೆ ಏನಾದರೂ ಸ್ಥಾಪಿಸಬೇಕಾಗಿದ್ದಲ್ಲಿ ಗುರುಗಳ ಖಡಾವಿಗೆ (ಮರದ ಪಾದರಕ್ಷೆಗಳು) ಅಥವಾ ಪಾದುಕೆಗಳನ್ನು ಸ್ಥಾಪಿಸುವ ಪದ್ಧತಿಯಿದೆ.

Leave a Comment