ನಾರಾಯಣಬಲಿ, ನಾಗಬಲಿ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಗಳ ಬಗ್ಗೆ ಮಹತ್ವದ ಸೂಚನೆಗಳು !

೧. ಶಾಸ್ತ್ರ : ಈ ವಿಧಿಗಳನ್ನು ನಮ್ಮ ಪಿತೃಗಳಿಗೆ ಗತಿ ಸಿಗಬೇಕೆಂದು ಮಾಡಲಾಗುತ್ತದೆ. ಇದಕ್ಕಾಗಿ ಪ್ರತಿಯೊಬ್ಬರು ತಮ್ಮ ವಾರ್ಷಿಕ ಉತ್ಪನ್ನದ ಹತ್ತನೆಯ (೧/೧೦) ಒಂದಂಶ ಭಾಗವನ್ನು ಖರ್ಚು ಮಾಡಬೇಕು ಎಂದು ಶಾಸ್ತ್ರವು ಹೇಳುತ್ತದೆ. ನಮ್ಮ ಶಕ್ತಿಗನುಸಾರ ಖರ್ಚು ಮಾಡಿದರೂ ಆಗುತ್ತದೆ.

೨. ಈ ವಿಧಿಗಳನ್ನು ಯಾರು ಮಾಡಬಹುದು?
ಅ. ಇವು ಕಾಮ್ಯವಿಧಿಗಳಾಗಿವೆ. ಇವುಗಳನ್ನು ಯಾರು ಬೇಕಾದರೂ ಮಾಡಬಹುದು. ಯಾರ ತಂದೆ-ತಾಯಿ ಜೀವಂತವಾಗಿದ್ದಾರೆಯೋ, ಅವರೂ ಸಹ ಈ ವಿಧಿಗಳನ್ನು ಮಾಡಬಹುದು.
ಆ. ಅವಿವಾಹಿತರೂ ಸಹ ಒಬ್ಬರೇ ಈ ವಿಧಿಗಳನ್ನು ಮಾಡಬಹುದು. ವಿವಾಹಿತರಾಗಿದ್ದಲ್ಲಿ ಪತಿ-ಪತ್ನಿ ಇಬ್ಬರೂ ಕುಳಿತುಕೊಂಡು ಈ ವಿಧಿಗಳನ್ನು ಮಾಡಬೇಕು.

೩. ನಿಷೇಧ
ಅ. ಸ್ತ್ರೀಯರು ಮಾಸಿಕ ಸರದಿಯ ಸಮಯದಲ್ಲಿ ಈ ವಿಧಿಗಳನ್ನು ಮಾಡಬಾರದು.
ಆ. ಸ್ತ್ರೀಯು ಗರ್ಭವತಿಯಾಗಿದ್ದಲ್ಲಿ ೫ ತಿಂಗಳು ಆದ ನಂತರ ಈ ವಿಧಿಗಳನ್ನು ಮಾಡಬಾರದು.
ಇ. ಮನೆಯಲ್ಲಿ ಶುಭಕಾರ್ಯ ಅಂದರೆ ಮದುವೆ, ಉಪನಯನ ಮುಂತಾದವುಗಳು ಆಗಿದ್ದಲ್ಲಿ ಅಥವಾ ಮನೆಯಲ್ಲಿ ಯಾರಾದರೊಬ್ಬ ವ್ಯಕ್ತಿಯು ಮೃತನಾಗಿದ್ದಲ್ಲಿ ಈ ವಿಧಿಗಳನ್ನು ಒಂದು ವರ್ಷದವರೆಗೆ ಮಾಡಬಾರದು.

೪. ಪದ್ಧತಿ : ವಿಧಿಗಳನ್ನು ಮಾಡಲು ಪುರುಷರಿಗೆ ಧೋತರ, ಉಪವಸ್ತ್ರ, ಬನಿಯನ್ ಮತ್ತು ಮಹಿಳೆಯರಿಗೆ ಸೀರೆ, ರವಿಕೆ ಮತ್ತು ಲಂಗ ಮುಂತಾದ ಹೊಸ ಬಟ್ಟೆಗಳು (ಕಪ್ಪು ಮತ್ತು ಹಸಿರು ಬಣ್ಣ ಇರಬಾರದು) ಬೇಕಾಗುತ್ತವೆ. ಈ ಹೊಸ ಬಟ್ಟೆಗಳನ್ನು (ಉಡುಪುಗಳನ್ನು) ಧರಿಸಿ ವಿಧಿಯನ್ನು ಮಾಡಬೇಕಾಗುತ್ತದೆ. ಅನಂತರ ಆ ಬಟ್ಟೆಗಳನ್ನು ದಾನ ಮಾಡಬೇಕಾಗುತ್ತದೆ. ಮೂರನೆಯ ದಿನ ಬಂಗಾರದ ನಾಗನ (೧.೨೫ ಗ್ರಾಂ.) ಒಂದು ಪ್ರತಿಮೆಯನ್ನು ಮಾಡಿ ಪೂಜಿಸಿ ದಾನ ಮಾಡುತ್ತಾರೆ.

೫. ವಿಧಿಗಳಿಗಾಗಿ ತಗಲುವ ಸಮಯ: ಮೇಲಿನ ಮೂರೂ ವಿಧಿಗಳು ಬೇರೆ ಬೇರೆ ವಿಧಿಗಳಾಗಿವೆ. ನಾರಾಯಣ-ನಾಗಬಲಿ ವಿಧಿಗೆ ಮೂರು ದಿನಗಳು ತಗಲುತ್ತವೆ ಮತ್ತು ತ್ರಿಪಿಂಡಿ ಶ್ರಾದ್ಧವಿಧಿಯು ಒಂದು ದಿನದ ವಿಧಿಯಾಗಿದೆ. ಮೇಲಿನ ಮೂರೂ ವಿಧಿಗಳನ್ನು ಮೂರು ದಿನಗಳಲ್ಲಿ ಮಾಡಬಹುದು. ಸ್ವತಂತ್ರವಾಗಿ ಒಂದು ದಿನದ ವಿಧಿಯನ್ನು (ತ್ರಿಪಿಂಡಿ ಶ್ರಾದ್ಧ) ಮಾಡಬೇಕಾದಲ್ಲಿ ಹಾಗೆಯೂ ಮಾಡಬಹುದು.

(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಶ್ರಾದ್ಧ – ೨ ಭಾಗಗಳು’)

Leave a Comment