ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿ ಹೇಗೆ ಮಾಡಬೇಕು ? (ಭಾಗ 2)

Article also available in :

7. ನೆಕ್ಕಿ ಗಿಡ (ಬಿಳಿನೆಕ್ಕಿ, ಲಕ್ಕಿ ಗಿಡ)

7 ಅ. ಮಹತ್ವ

ಇದು ವಾತರೋಗಕ್ಕೆ ರಾಮಬಾಣ ಔಷಧಿಯಾಗಿದೆ. ನೆಕ್ಕಿಗಿಡದ ಎಲೆಗಳನ್ನು ಶಾಖಕೊಡಲು ಉಪಯೋಗಿಸುತ್ತಾರೆ. 4 ಜನರ ಕುಟುಂಬಕ್ಕಾಗಿ 1 – 2 ಗಿಡಗಳಿರಬೇಕು.

7 ಆ. ಗುರುತು

ಇದರ ಎಲೆಗಳು ಬಿಲ್ವಪತ್ರೆಯ ಎಲೆಗಳಂತೆ ತ್ರಿದಳವಾಗಿರುತ್ತವೆ; ಆದರೆ ಉದ್ದವಾಗಿರುತ್ತವೆ. ಎಲೆಗಳಿಗೆ ವಿಶಿಷ್ಠ ಗಂಧವಿರುತ್ತದೆ. ಇದರ ಎಲೆಗಳನ್ನು ದನಕರುಗಳು ತಿನ್ನುವುದಿಲ್ಲ. ಆದುದರಿಂದ ಹಳ್ಳಿಗಳಲ್ಲಿ ಬಹುತೇಕ ಹೊಲಗಳ ಬೇಲಿಗಳ ರೂಪದಲ್ಲಿ ಈ ಗಿಡಗಳನ್ನು ಬೆಳೆಸಿರುತ್ತಾರೆ. ರಸ್ತೆಯ ಬದಿಗೆ ಅಪರೂಪಕ್ಕೆ ಈ ಗಿಡಗಳು ಸಿಗುತ್ತವೆ. ಇದಕ್ಕೆ ತಿಳಿನೀಲಿ ಬಣ್ಣದ ತುರಾಯಿಗಳು ಬರುತ್ತವೆ.

7 ಇ. ತೋಟಗಾರಿಕೆ

ರೆಂಬೆಗಳನ್ನು ನೆಟ್ಟು ಬೆಳೆಸಬಹುದು. ಈ ಗಿಡವನ್ನು ಮನೆಯ ಅಥವಾ ಬೇಲಿಯ ಹಾಗೆ ನೆಡಬೇಕು

8. ನುಗ್ಗೆ (ನುರ್ಗೆ, ಮೋಚಕ, ಗುಗ್ಗಳ)

8 ಅ. ಮಹತ್ವ

ನುಗ್ಗೆಕಾಯಿ ಗಿಡವು ಎಲ್ಲರಿಗೂ ಪರಿಚಿತವಿದೆ. ನುಗ್ಗೆಯ ಎಲೆಗಳು, ಹೂವುಗಳು, ನುಗ್ಗೆಕಾಯಿ ಇವುಗಳನ್ನು ಬಳಸಿ ಸಾಂಬಾರು ಮತ್ತು ಪಲ್ಯವನ್ನು ತಯಾರಿಸುತ್ತಾರೆ. ನುಗ್ಗೆಕಾಯಿಯ ಪಲ್ಯವು ಆರೋಗ್ಯಕ್ಕೆ ಲಾಭಕರವಾಗಿದೆ. ಆಪತ್ಕಾಲದಲ್ಲಿ ಆಹಾರಕ್ಕೆ ಅನುಕೂಲವಾಗಲೆಂದು ನಮ್ಮ ಸುತ್ತಮುತ್ತಲೂ ಹೆಚ್ಚೆಚ್ಚು ಪ್ರಮಾಣದಲ್ಲಿ ನುಗ್ಗೆಯ ಗಿಡಗಳು ಇದ್ದರೆ ಒಳ್ಳೆಯದು. ನುಗ್ಗೆಕಾಯಿಯ ಸಿಪ್ಪೆಗಳನ್ನೂ ಔಷಧಿಗಳಲ್ಲಿ ಉಪಯೋಗಿಸುತ್ತಾರೆ.

ನುಗ್ಗೆಕಾಯಿಯಲ್ಲಿ ಕಾಲ್ಸಿಯಂ ಇತ್ಯಾದಿ ಖನಿಜಗಳು ಬಹಳಷ್ಟು ಪ್ರಮಾಣದಲ್ಲಿರುತ್ತವೆ.

ನುಗ್ಗೆ ಮರಕ್ಕೆ ಬೆಳೆದ ನುಗ್ಗೆಕಾಯಿಗಳು

8 ಆ. ತೋಟಗಾರಿಕೆ

ಇದರ ಬೀಜಗಳಿಂದ ಸಸಿಗಳನ್ನು ತಯಾರಿಸಿ ತೋಟಗಾರಿಕೆಯನ್ನು ಮಾಡುತ್ತಾರೆ. ನುಗ್ಗೆಕಾಯಿಯ ಬೀಜಗಳನ್ನು ಬೇರೂರಲು ಹಾಕುವ ಮೊದಲು ಬೆಚ್ಚಗಿನ ನೀರಿನಲ್ಲಿ ರಾತ್ರಿಯಿಡಿ ನೆನೆಯಿಸಿಡಬೇಕು ಮತ್ತು ಮುಂದಿನ ದಿನ ಬಿತ್ತಬೇಕು. ಹೀಗೆ ಮಾಡಿದರೆ ಅವು ಒಳ್ಳೆಯದಾಗಿ ಅಂಕುರಿಸುತ್ತವೆ. ಮಳೆಗಾಲದ ಆರಂಭದಲ್ಲಿ ಇದರ ದಂಟನ್ನೂ (ಗಿಡದ ದಪ್ಪನೆಯ ರೆಂಬೆಗಳನ್ನೂ) ನೆಟ್ಟರೆ ಅವುಗಳು ಬೇರೂರತ್ತವೆ. ಮಳೆಗಾಲದಲ್ಲಿ ದಂಟುಗಳನ್ನು ನೆಟ್ಟರೆ ದಂಟು ಕೊಳೆಯುತ್ತದೆ. ಆದುದರಿಂದ ದಂಟನ್ನು ನೆಡುವುದಾದರೆ ಮಳೆಗಾಲ ಆರಂಭವಾಗುವ ಮೊದಲು ಅಥವಾ ಮಳೆಗಾಲ ಮುಗಿದ ನಂತರ ನೆಡಬೇಕು. ದಂಟುಗಳಿಗೆ 15 ದಿನಗಳಲ್ಲಿ ಬೇರುಗಳು ಒಡೆಯುತ್ತವೆ.

9. ಮಜ್ಜಿಗೆ ಹುಲ್ಲು (ನಿಂಬೆ ಹುಲ್ಲು, ಗವತಿ ಸೊಪ್ಪು)

9 ಅ. ಮಹತ್ವ

ಮಳೆಗಾಲದಲ್ಲಿ, ಹಾಗೆಯೇ ಚಳಿಯ ದಿನಗಳಲ್ಲಿ ಯಾವಾಗಲೂ ಚಹಾ ಕುಡಿಯುವ ಬದಲು ಮಜ್ಜಿಗೆ ಹುಲ್ಲಿನ ಚಹಾ (ಹಾಲು ಹಾಕದೇ) ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಾಗಿರುತ್ತದೆ. ಇದರಿಂದ ಮೂತ್ರವಿಸರ್ಜನೆಯು ಸರಳವಾಗಿ ಆಗುತ್ತದೆ. ಜ್ವರ ಬಂದಿದ್ದರೆ ಅದು ಇಳಿಯುತ್ತದೆ. 4 ಜನರ ಕುಟುಂಬಕ್ಕಾಗಿ 2 ರಿಂದ 4 ಮಜ್ಜಿಗೆ ಹುಲ್ಲಿನ ಸಸಿಗಳನ್ನು ನೆಡಬೇಕು.

ಮಜ್ಜಿಗೆ ಹುಲ್ಲಿನ ಪೊದೆ

9 ಆ. ತೋಟಗಾರಿಕೆ

ಮಜ್ಜಿಗೆ ಹುಲ್ಲಿನ ಪೊದೆಗಳಾಗುತ್ತವೆ. ಮಜ್ಜಿಗೆ ಹುಲ್ಲನ್ನು ಅನೇಕ ಜನರು ಬೆಳೆಸುತ್ತಾರೆ. ಅವರಿಂದ ಅದನ್ನು ಕೇಳಿ ಪಡೆದು ನೆಡಬಹುದು. ಮಳೆಗಾಲದ ಆರಂಭದಲ್ಲಿ ಮಜ್ಜಿಗೆ ಹುಲ್ಲಿನ ಪೊದೆಯನ್ನು ಅಗೆದು ತೆಗೆಯಬೇಕು ಮತ್ತು ಅದರ ಬೇರುಗಳಿಂದ ಚಿಗುರೊಡೆಯುವ ಹೊಸ ಸಸಿಗಳನ್ನು ಬೇರ್ಪಡಿಸಿ ನೆಡಬೇಕು. ಸಸಿಗಳನ್ನು ನೆಡುವಾಗ ಬೇರುಗಳಿಂದ ಗೇಣುದ್ದ ಮೇಲೆ ಎಲೆಗಳನ್ನು ಕತ್ತರಿಸಬೇಕು. ಮಜ್ಜಿಗೆ ಹುಲ್ಲಿನ ಪೊದೆಯನ್ನು ಮಳೆಗಾಲದ ಮೊದಲು ಅಗೆದು ಬೇರ್ಪಡಿಸಿ ನೆಡದಿದ್ದರೆ, ಅದು ಕೊಳೆಯುವ ಸಾಧ್ಯತೆ ಇರುತ್ತದೆ.

10. ಗರಿಕೆ

10 ಅ. ಮಹತ್ವ

ಈ ವನಸ್ಪತಿಯು ಅತ್ಯಂತ ತಂಪಾಗಿದ್ದು ಉಷ್ಣತೆಯ ರೋಗಗಳಲ್ಲಿ ಬಹಳ ಮಹತ್ವದ ಔಷಧಿಯಾಗಿದೆ. ಗರಿಕೆಯು ಗರ್ಭಪಾತವನ್ನು ತಡೆಗಟ್ಟುತ್ತದೆ. ಕೆಟ್ಟ ಕನಸುಗಳು ಬೀಳುತ್ತಿದ್ದರೆ, ಗರಿಕೆಯ ಉಪಯೋಗವಾಗುತ್ತದೆ. ಮನೆಯ ಸುತ್ತಲೂ ಹೆಚ್ಚೆಚ್ಚು ಗರಿಕೆಯನ್ನು ಬೆಳೆಸಬೇಕು.

10 ಆ. ತೋಟಗಾರಿಕೆ

ಮಳೆಗಾಲದಲ್ಲಿ ಗರಿಕೆಯು ನೈಸರ್ಗಿಕವಾಗಿ ಚಿಗುರುತ್ತದೆ. ಈ ಗರಿಕೆಗಳನ್ನು ನಮ್ಮ ಜಾಗೆಯಲ್ಲಿ ನೀರು ಬೀಳುವಲ್ಲಿ, ನೆಡಬೇಕು. ಗರಿಕೆಗಳ 2 ರಿಂದ 4 ಸಸಿಗಳನ್ನು ತಂದು ನೆಟ್ಟರೂ, ಅವು ಬಹಳ ಪ್ರಮಾಣದಲ್ಲಿ ಹಬ್ಬುತ್ತವೆ. ಮಳೆಗಾಲದ ನಂತರ ಗರಿಗೆಗಳಿಗೆ ನೀರು ಸಿಗದಿದ್ದರೆ ಅವು ಒಣಗುತ್ತವೆ.

11. ಉತ್ತರಾಣಿ (ಉತ್ರಾಣಿ, ಉತ್ತರಣೆ)

11 ಅ. ಮಹತ್ವ

ಉತ್ತರಾಣಿಯು ಚೇಳಿನ ವಿಷ, ಇಲಿ, ನಾಯಿ ಕಡಿತಕ್ಕೆ ಹಾಗೆಯೇ ಹಲ್ಲುನೋವಿಗೆ ಶ್ರೇಷ್ಠ ಔಷಧಿಯಾಗಿದೆ. ಬೀಜವನ್ನು ಹಾಲಿನಲ್ಲಿ ಬೇಯಿಸಿ ಅದರ ಪಾಯಸವನ್ನು ತಯಾರಿಸಿ ಸೇವಿಸಿದರೆ ಹಸಿವಾಗುವುದಿಲ್ಲ ಎಂದು ಹೇಳುತ್ತಾರೆ. ತೂಕ ಇಳಿಸಲು ಅಥವಾ ಆಹಾರವಿಲ್ಲದೇ ಇರಲು ಸಾಧ್ಯವಾಗಬೇಕೆಂದು ಇದನ್ನು ಬಳಸಬಹುದು. ಉತ್ತರಾಣಿಯು ಬೇರುಗಳನ್ನು ಪ್ರಸೂತಿಯ ಸಮಯದಲ್ಲಿ ಸ್ತ್ರೀಯ ಸೊಂಟಕ್ಕೆ ಮತ್ತು ಕೂದಲುಗಳಿಗೆ ಕಟ್ಟಿದರೆ ಸುಖರೂಪವಾಗಿ ಹೆರಿಗೆಯಾಗುತ್ತದೆ. ಹೆರಿಗೆಯ ನಂತರ ಕಟ್ಟಿದ ಬೇರುಗಳನ್ನು ತಕ್ಷಣ ಬಿಡಿಸಿ ಅರಿಶಿಣ-ಕುಂಕುಮವನ್ನು ಹಾಕಿ ವಿಸರ್ಜಿಸಬೇಕು. ಇಲ್ಲದಿದ್ದರೆ ಅಪಾಯವೂ ಆಗಬಹುದು. ಈ ಉಪಾಯದಿಂದ ‘ಗರ್ಭದಲ್ಲಿ ಮೃತವಾದ ಮಗುವೂ ಹೊರಗೆ ಬರುತ್ತದೆ’, ಎಂದು ಹಳೆಯ ಜನರು ಹೇಳುತ್ತಾರೆ.

11 ಆ. ಗುರುತು

ಮೊದಲ ಮಳೆಯಾದ ನಂತರ ಇದರ ಸಸಿಗಳು ನೈಸರ್ಗಿಕವಾಗಿ ಚಿಗುರುತ್ತವೆ. ಮಳೆಗಾಲವು ಮುಗಿಯುತ್ತಾ ಬಂದಂತೆ ಉತ್ತರಾಣಿಗೆ ತುರಾಯಿಗಳು ಬರುತ್ತವೆ. (ಚಿತ್ರ ನೋಡಿ) ಈ ತುರಾಯಿಗಳು ಬಟ್ಟೆಗಳಿಗೆ ಅಂಟಿಕೊಳ್ಳುತ್ತವೆ. ಇದರಲ್ಲಿ ಅಕ್ಕಿಯಂತೆ ಬೀಜಗಳಿರುತ್ತವೆ.

11 ಇ. ತೋಟಗಾರಿಕೆ

ಇದು ಹುಲ್ಲಿನ ಪ್ರಕಾರವಾಗಿದೆ. ಇದರ ತೋಟಗಾರಿಕೆಯನ್ನು ಮಾಡುವ ಆವಶ್ಯಕತೆ ಇರುವುದಿಲ್ಲ; ಆದರೆ ಆವಶ್ಯಕತೆಯ ಸಮಯದಲ್ಲಿ ಹುಡುಕಿ ತೆಗೆಯಲು ಕಠಿಣವಾಗುತ್ತದೆಯೆಂದು, ಇದರ ಕನಿಷ್ಠ 2 ರಿಂದ 4 ಸಸಿಗಳು ನಮ್ಮ ಮನೆಯ ಸುತ್ತಲೂ ಇರಬೇಕು.

ಸಂಕಲನಕಾರರು

ಶ್ರೀ. ಮಾಧವ ರಾಮಚಂದ್ರ ಪರಾಡಕರ ಮತ್ತು ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.

ಮಾರ್ಗದರ್ಶಕರು

ಡಾ. ದಿಗಂಬರ ನಭು ಮೋಕಾಟ, ಸಹಾಯಕ ಪ್ರಾಧ್ಯಾಪಕರು, ವನಸ್ಪತಿಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ಪುಣೆ ವಿದ್ಯಾಪೀಠ, ಪುಣೆ ಮತ್ತು ಪ್ರಮುಖ ನಿರ್ದೇಶಕರು, ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ.

1 thought on “ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿ ಹೇಗೆ ಮಾಡಬೇಕು ? (ಭಾಗ 2)”

Leave a Comment