ಗುರುಗಳ ಆಜ್ಞೆಯ ಪಾಲನೆ ಮಾಡಿ ಅವರ ಮನಸ್ಸನ್ನು ಗೆಲ್ಲುವ ಉಪಮನ್ಯು !

Article also available in :

ಧೌಮ್ಯಋಷಿಗಳ ಶಿಷ್ಯ ಉಪಮನ್ಯುವು ಗುರುಗೃಹದಲ್ಲಿದ್ದು ಆಶ್ರಮದಲ್ಲಿನ ಗೋವುಗಳ ಸೇವೆ ಮಾಡುತ್ತಿದ್ದನು. ಅವನು ಭಿಕ್ಷೆ ಬೇಡಿ ತನ್ನ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದನು. ಒಂದು ದಿನ ಅವನ ಪರೀಕ್ಷೆ ಮಾಡಲೆಂದು ಧೌಮ್ಯ ಋಷಿಗಳು ದೊರಕಿದ ಭಿಕ್ಷೆಯಲ್ಲಿನ ಅರ್ಧ ಭಿಕ್ಷೆ ಗುರುಗಳಿಗೆ ಕೊಡಬೇಕು ಮತ್ತು ಉಳಿದ ಭಿಕ್ಷೆಯಲ್ಲಿ ಜೀವನ ನಡೆಸಬೇಕು ಎಂದು ಅವನಿಗೆ ಹೇಳಿದರು. ಉಪಮನ್ಯುವು ಆನಂದದಿಂದ ಅರ್ಧ ಭಿಕ್ಷೆಯನ್ನು ಧೌಮ್ಯ ಋಷಿಗಳಿಗೆ ಅರ್ಪಣೆ ಮಾಡತೊಡಗಿದನು. ಉಳಿದ ಅರ್ಧ ಭಿಕ್ಷೆಯಲ್ಲಿ ಉಪಮನ್ಯುವು ಸಂತೋಷದಿಂದ ಜೀವನ ನಡೆಸುತ್ತಿದ್ದನು. ಕೆಲ ದಿನಗಳ ನಂತರ ಧೌಮ್ಯ ಋಷಿಗಳು ಅವನಿಗೆ ದೊರಕಿದ ಸಂಪೂರ್ಣ ಭಿಕ್ಷೆಯನ್ನು ಅರ್ಪಿಸಲು ಹೇಳಿದರು. ಉಪಮನ್ಯುವು ಹಾಗೆ ಮಾಡಿದನು. ಅನ್ನಗ್ರಹಣ ಮಾಡದಿದ್ದರೂ ಅವನ ಆರೋಗ್ಯ ಉತ್ತಮವಾಗಿಯೇ ಇದೆ, ಇದನ್ನು ಕಂಡು ಧೌಮ್ಯ ಋಷಿಗಳು ಅವನಿಗೆ, ನೀನು ಏನು ಸೇವಿಸುತ್ತಿಯಾ? ಎಂದು ಕೇಳಿದರು. ಆಗ ಅವನು, ಗುರುಗಳೇ, ನಾನು ಅರಣ್ಯದಲ್ಲಿ ಹಸುವಿನ ಹಾಲು ಕುಡಿಯುತ್ತೇನೆ ಎಂದು ಹೇಳಿದನು. ಆಗ ಧೌಮ್ಯ ಋಷಿಗಳು ಉಪಮನ್ಯು! ಇದರಿಂದ ಹಾಲು ಎಂಜಲು ಆಗುತ್ತದೆ, ಅದನ್ನು ಕುಡಿಯಬೇಡ ಎಂದು ಹೇಳಿದರು. ಧೌಮ್ಯ ಋಷಿಗಳ ಈ ಆಜ್ಞೆಯನ್ನೂ ಅವನು ಆನಂದದಿಂದ ಸ್ವೀಕರಿಸಿದನು.

ಉಪಮನ್ಯವು ಮಾರನೇ ದಿನ ಗೋವುಗಳನ್ನು ತೆಗೆದುಕೊಂಡು ಅರಣ್ಯದಲ್ಲಿ ಹೋದನು. ತುಂಬಾ ಹಸಿವು ಆದ ನಂತರ ಅವನಿಗೆ ತಡೆಯಲಾಗಲಿಲ್ಲ. ಅವನು ಎಕ್ಕೆದ ಗಿಡದ ಹಾಲು ತೆಗೆದು ಕುಡಿದನು. ಆ ಹಾಲು ಕಣ್ಣಲ್ಲಿ ಹೋಗಿದ್ದರಿಂದ ಅವನಿಗೆ ಕುರುಡುತನ ಬಂತು. ಸಾಯಂಕಾಲ ಆಶ್ರಮದ ಕಡೆಗೆ ಗೋವುಗಳನ್ನು ತೆಗೆದುಕೊಂಡು ಬರುತ್ತಿರುವಾಗ ಅವನು ಬಾವಿಯಲ್ಲಿ ಬಿದ್ದನು. ತುಂಬಾ ರಾತ್ರಿಯಾಗಿದ್ದರಿಂದ, ಉಪಮನ್ಯು ಮರಳಿ ಬರಲಿಲ್ಲವೆಂದು ಧೌಮ್ಯ ಋಷಿಗಳು ಅವನನ್ನು ಹುಡುಕುತ್ತ ಅರಣ್ಯದಲ್ಲಿ ಕೂಗುತ್ತ ಬಂದರು. ಅವರ ಕೂಗನ್ನು ಕೇಳಿ ಬಾವಿಯಿಂದ ಉಪಮನ್ಯುವು ಓಗೊಟ್ಟನು. ಧೌಮ್ಯ ಋಷಿಗಳು ಅವನನ್ನು ಮೇಲೆ ಎತ್ತಿದರು. ನಡೆದ ಘಟನೆಯನ್ನು ಅವನಿಂದ ತಿಳಿದುಕೊಂಡಾಗ ಧೌಮ್ಯ ಋಷಿಗಳು ಅವನ ಮೇಲೆ ಪ್ರಸನ್ನರಾದರು. ಗುರುಗಳ ಹೇಳಿಕೆಯಂತೆ ಉಪಮನ್ಯುವು ದೇವತೆಗಳ ವೈದ್ಯರಾದ ಅಶ್ವಿನಿಕುಮಾರರಿಗೆ ಪ್ರಾರ್ಥನೆ ಮಾಡಿದನು. ಅಶ್ವಿನಿಕುಮಾರರು ಅವನಿಗೆ ದೃಷ್ಟಿ ನೀಡಿದರು ಮತ್ತು ಮಹಾಜ್ಞಾನಿಯಾಗುತ್ತಿ ಎಂದು ಆಶೀರ್ವಾದವೂ ನೀಡಿದರು !

ಉಪಮನ್ಯುವು ಗುರುಗಳ ಆಜ್ಞೆಯನ್ನು ಪಾಲಿಸುವಾಗ ತನ್ನ ಸ್ವಂತ ವಿಚಾರ ಮಾಡಲಿಲ್ಲ; ಆದುದರಿಂದ ಅವನು ಗುರುಗಳ ಪ್ರೀತಿಯ ಶಿಷ್ಯನಾದನು ಮತ್ತು ಅವನಿಗೆ ದೇವರ ಆಶೀರ್ವಾದವೂ ಲಭಿಸಿತು.

ಗುರುಗಳ ಆಜ್ಞೆಯನ್ನು ಪಾಲಿಸಲು ತನ್ನ ಸ್ವಂತ ಜೀವ ಗಂಡಾಂತರದಲ್ಲಿ ಸಿಲುಕಿಸುವ ಶಿಷ್ಯ ಆರುಣಿ !

ಧೌಮ್ಯ ಋಷಿಗಳ ಆಶ್ರಮದಲ್ಲಿ ಆರುಣಿ ಎಂಬ ಅವರ ಶಿಷ್ಯನಿದ್ದನು. ಒಂದು ದಿನ ತುಂಬಾ ಮಳೆ ಬೀಳುತ್ತಿತ್ತು. ಮಳೆ ನೀರಿನಿಂದಾಗಿ ಆಶ್ರಮದ ಗದ್ದೆಯ ಒಡ್ಡು ಒಡೆದು ಗದ್ದೆ ಹರಿದು ಹೋಗಬಾರದೆಂದು ಧೌಮ್ಯ ಋಷಿಗಳು ಶಿಷ್ಯರನ್ನು ಕರೆದು, ‘ಹೋಗಿ! ಗದ್ದೆಯ ಒಡ್ಡು ಒಡೆಯದಿರುವಂತೆ ಕಾಳಜಿ ವಹಿಸಿ’, ಎಂದು ಹೇಳಿದರು.

ಆರುಣಿ ಮತ್ತು ಕೆಲವು ಶಿಷ್ಯರು ಸೇರಿ ಗದ್ದೆಯ ಒಡ್ಡಿನಬಳಿ ಬಂದರು. ಒಡೆದಿದ್ದ ಒಡ್ಡನ್ನು ಎಲ್ಲರೂ ಸೇರಿ ಸರಿಪಡಿಸಲು ಪ್ರಯತ್ನಿಸಿದರು. ಮಳೆ ನೀರಿನಿಂದ ಪುನಃ ಅದು ಒಡೆಯಬಾರದೆಂದು ಅನೇಕ ಬಾರಿ ಪ್ರಯತ್ನಿಸಿದರು. ಮಳೆ ನಿಲ್ಲುತ್ತಿರಲಿಲ್ಲ. ರಾತ್ರಿಯಾಯಿತು. ಎಲ್ಲ ಶಿಷ್ಯರು ಬೇಸತ್ತು ಹೊರಟು ಹೋದರು. ದಿನವಿಡಿ ಶ್ರಮಪಟ್ಟಿದ್ದರಿಂದ ದಣಿದು ಹೋಗಿದ್ದ ಎಲ್ಲ ಶಿಷ್ಯರು ನಿದ್ದೆ ಹೋದರು. ಬೆಳಗ್ಗೆ ಮಳೆ ನಿಂತಿತು, ಆಗ ಆರುಣಿ ಆಶ್ರಮದಲ್ಲಿ ಕಾಣಿಸಲ್ಲಿಲ್ಲ ಈ ವಿಷಯ ಧೌಮ್ಯ ಋಷಿಗಳ ಕಿವಿಗೆ ಬಿತ್ತು. ಧೌಮ್ಯ ಋಷಿಗಳು ‘ಗದ್ದೆಗೆ ಹೋಗಿ ನೋಡೋಣ’  ಎಂದು ಹೇಳಿದರು. ಗದ್ದೆಗೆ ಹೋದಮೇಲೆ ಆರುಣಿ ಎಲ್ಲಿಯೂ ಕಾಣಿಸಲಿಲ್ಲ. ಧೌಮ್ಯ ಋಷಿಗಳು ಜೋರಾಗಿ ಕೂಗಿದರು, ಮಗು ಆರುಣಿ, ನೀನು ಎಲ್ಲಿದ್ದಿಯಾ ? ಒಡ್ಡಿನ ಕಡೆಯಿಂದ ಉತ್ತರ ಬಂತು, ಗುರುಗಳೇ ನಾನು ಇಲ್ಲಿದ್ದೇನೆ! ನೋಡುತ್ತಿದ್ದರೆ ಏನು ? ಹಾಕಿದ ಒಡ್ಡು ನಿಲ್ಲುತ್ತಿಲ್ಲವೆಂದು; ಸ್ವತಃ ಆರುಣಿಯು ಅಲ್ಲಿ ಅಡ್ಡ ಮಲಗಿದ್ದನು ! ಗುರುಗಳು ಅವನನ್ನು ಎಬ್ಬಿಸಿದರು ಮತ್ತು ಪ್ರೀತಿಯಿಂದ ಆಲಂಗಿಸಿದರು.

ಗುರುಗಳ ಆಜ್ಞೆಯ ಪಾಲನೆ ಮಾಡುವುದು, ಇದು ಶಿಷ್ಯರ ಕರ್ತವ್ಯವೇ ಇದೆ. ನೀವೂ ಕೂಡ ಆರುಣಿಯಂತೆ ಆಜ್ಞೆಯ ಪಾಲನೆ ಮಾಡಿ ಗುರುಗಳ ಪ್ರೀತಿಗೆ ಪಾತ್ರರಾಗಿರಿ !

(ಆಧಾರ : ಸನಾತನದ ಗ್ರಂಥ ‘ಸುಸಂಸ್ಕಾರಗಳು ಮತ್ತು ಉತ್ತಮ ರೂಢಿಗಳು’ ಗ್ರಂಥ)

Leave a Comment