ನವಗ್ರಹ – ಪೂಜೆ, ಉಪಾಸನೆಯ ಉದ್ದೇಶ ಮತ್ತು ಮಹತ್ವ

ಹಿಂದೂ ಧರ್ಮದಲ್ಲಿ ಜೀವನದಲ್ಲಿ ಬರುವ ವೈಯಕ್ತಿಕ ಸಮಸ್ಯೆಗಳ ನಿವಾರಣೆಗಾಗಿ ವ್ಯಾವಹಾರಿಕ ಪ್ರಯತ್ನಗಳಿಗೆ ಉಪಾಸನೆಯ ಜೊತೆಯನ್ನು ನೀಡಲು ಹೇಳಲಾಗಿದೆ. ಆರೋಗ್ಯ, ವಿದ್ಯೆ, ಬಲ, ಸೌಖ್ಯ ಇತ್ಯಾದಿಗಳ ಪ್ರಾಪ್ತಿಗಾಗಿ ಮತ್ತು ವ್ಯಾಧಿ, ಪೀಡೆ, ದುಃಖ ಇತ್ಯಾದಿಗಳ ನಾಶಕ್ಕಾಗಿ ಅನೇಕ ಯಜ್ಞ, ಮಂತ್ರ, ಯಂತ್ರ, ಸ್ತೋತ್ರ ಇತ್ಯಾದಿ ವಿಧಾನಗಳನ್ನು ಧಾರ್ಮಿಕ ಗ್ರಂಥಗಳಲ್ಲಿ ನೀಡಲಾಗಿದೆ. ಜ್ಯೋತಿಷ್ಯಶಾಸ್ತ್ರಕ್ಕನುಸಾರ ಗ್ರಹದೋಷಗಳ ನಿವಾರಣೆಗಾಗಿ ಗ್ರಹದೇವತೆಗಳ ಪೂಜೆ, ಉಪಾಸನೆಯನ್ನು ಮಾಡಲು ಹೇಳಲಾಗುತ್ತದೆ. ಇದರ ಹಿಂದಿನ ಉದ್ದೇಶ ಮತ್ತು ಅವುಗಳ ಮಹತ್ವವನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ
ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ

೧. ನವಗ್ರಹಗಳ ಉಪಾಸನೆಯ ಹಿಂದಿನ ಉದ್ದೇಶ

೧ ಅ. ಗ್ರಹಗಳ ಸೂಕ್ಷ್ಮ ಊರ್ಜೆಯಿಂದ ಮನುಷ್ಯನ ಸೂಕ್ಷ್ಮದೇಹದ ಮೇಲಾಗುವ ಪರಿಣಾಮ

ಆಕಾಶದಲ್ಲಿ ಸಂಚರಿಸುವ ತೇಜದ ಗೋಲಗಳಿಂದ ನಮಗೆ ಕಾಲವನ್ನು ಅಳೆಯಲು ಬರುತ್ತದೆ. ಲೌಕಿಕ ದೃಷ್ಟಿಯಲ್ಲಿ ಕಾಲದ ಅರ್ಥ ‘ಅವಧಿ ಅಥವಾ ಸಮಯ’ ಎಂದಾಗಿದ್ದರೂ, ಫಲಜ್ಯೋತಿಷ್ಯಶಾಸ್ತ್ರದಲ್ಲಿ ಕಾಲವನ್ನು ‘ಪ್ರಾರಬ್ಧ’ ಎಂದು ತಿಳಿದುಕೊಳ್ಳಲಾಗುತ್ತದೆ. ಪ್ರತಿಯೊಂದು ಜೀವವು ತನ್ನ ಪ್ರಾರಬ್ಧದ ಜೊತೆಗೆ ಜನ್ಮತಾಳುತ್ತದೆ. ಜೀವದ ಜನ್ಮದ ಸಮಯದಲ್ಲಿರುವ ಗ್ರಹಸ್ಥಿತಿಯಿಂದ ಅದರ ಪ್ರಾರಬ್ಧದ ಬೋಧವಾಗುತ್ತದೆ. ಭಾರತದ ಋಷಿಗಳು ಗ್ರಹಗಳನ್ನು ಕೇವಲ ಭೌತಿಕ ವಸ್ತುಗಳೆಂದು ಪರಿಗಣಿಸದೆ, ಅವುಗಳಲ್ಲಿರುವ ‘ದೇವತ್ವ’ವನ್ನು ತಿಳಿದುಕೊಂಡರು. ‘ದೇವರು’ ಎಂದರೆ ಯಾವುದು ಪ್ರಕಾಶವನ್ನು (ಊರ್ಜೆಯನ್ನು) ನೀಡುತ್ತದೆಯೋ ಅದು. ಗ್ರಹಗಳ ಸ್ಥೂಲ ಊರ್ಜೆ ಅಂದರೆ ಅವುಗಳ ವಿದ್ಯುತ್ಕಾಂತೀಯ ಶಕ್ತಿ ಮತ್ತು ಸೂಕ್ಷ್ಮ ಊರ್ಜೆಯೆಂದರೆ ಅವುಗಳಲ್ಲಿರುವ ಪ್ರಧಾನ ತತ್ತ್ವ (ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಇವುಗಳಲ್ಲೊಂದು). ಗ್ರಹಗಳ ಸೂಕ್ಷ್ಮ ಊರ್ಜೆಯು ಜೀವಗಳ ಸೂಕ್ಷ್ಮದೇಹದ ಮೇಲೆ (ಟಿಪ್ಪಣಿ) ಶುಭ-ಅಶುಭ ಪರಿಣಾಮವನ್ನು ಬೀರುತ್ತದೆ, ಮತ್ತು ಜೀವದ ಸೂಕ್ಷ್ಮದೇಹವು ಅದರ ಸ್ಥೂಲ ದೇಹದ ಮೇಲೆ ಪರಿಣಾಮವನ್ನು ಬೀರುತ್ತದೆ .

ಟಿಪ್ಪಣಿ – ಸೂಕ್ಷ್ಮದೇಹ : ಪಂಚ ಸೂಕ್ಷ್ಮ-ಜ್ಞಾನೇದ್ರಿಯಗಳು, ಪಂಚ ಸೂಕ್ಷ್ಮ-ಕರ್ಮೇಂದ್ರಿಯಗಳು, ಪಂಚ ಸೂಕ್ಷ್ಮ-ಪ್ರಾಣ, ಮನಸ್ಸು, ಬುದ್ಧಿ, ಚಿತ್ತ ಮತ್ತು ಅಹಂ, ಇವುಗಳಿಂದ ಜೀವದ ‘ಸೂಕ್ಷ್ಮದೇಹ’ ತಯಾರಾಗುತ್ತದೆ.

೧ ಆ. ಗ್ರಹಗಳ ಉಪಾಸನೆಯನ್ನು ಮಾಡುವುದರಿಂದ ವ್ಯಕ್ತಿಗೆ ಆವಶ್ಯಕವಿರುವ ಸೂಕ್ಷ್ಮ ಊರ್ಜೆಯ ಲಾಭ ಸಿಗುತ್ತದೆ

ಜೀವ ಜನ್ಮಪಡೆಯುವಾಗ ಈ ಗ್ರಹಗಳು ಅಶುಭ ಸ್ಥಿತಿಯಲ್ಲಿದ್ದರೆ ವ್ಯಕ್ತಿಗೆ ಸಂಬಂಧಪಟ್ಟ ಸೂಕ್ಷ್ಮ ಊರ್ಜೆಯ ಕೊರತೆ ಇರುತ್ತದೆ. ಆದ್ದರಿಂದ ಅದಕ್ಕೆ ಶಾರೀರಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ತೊಂದರೆಗಳಾಗುತ್ತವೆ. ‘ವ್ಯಕ್ತಿಯಲ್ಲಿ ಕಡಿಮೆಯಿರುವ ಸೂಕ್ಷ್ಮ ಊರ್ಜೆ ಅದಕ್ಕೆ ಸಿಗಬೇಕೆಂದು ಸಂಬಂಧಪಟ್ಟ ಗ್ರಹದ ಉಪಾಸನೆ ಮಾಡಬೇಕೆಂದು ಜ್ಯೋತಿಷ್ಯಶಾಸ್ತ್ರದಲ್ಲಿ ಹೇಳಲಾಗಿದೆ. ಗ್ರಹಕ್ಕೆ ಸಂಬಂಧಿಸಿದ ಶಾಂತಿವಿಧಿ, ಮಂತ್ರಜಪ, ನಾಮಜಪ ಇತ್ಯಾದಿ ಉಪಾಯಗಳನ್ನು ಮಾಡುವುದರಿಂದ ವ್ಯಕ್ತಿಗೆ ಆವಶ್ಯಕವಿರುವ ಸೂಕ್ಷ್ಮ ಊರ್ಜೆ ಪ್ರಾಪ್ತವಾಗುತ್ತದೆ. ಪ್ರಾರಬ್ಧದಿಂದ ನಿರ್ಮಾಣವಾಗಿರುವ ಸಮಸ್ಯೆಗಳ ನಿವಾರಣೆಗಾಗಿ ಆಧಿಭೌತಿಕ, ಆಧಿದೈವಿಕ ಮತ್ತು ಅಧ್ಯಾತ್ಮಿಕ ಈ ಮೂರೂ ಸ್ತರಗಳಲ್ಲಿನ ಉಪಾಯವನ್ನು ಮಾಡಬೇಕಾಗುತ್ತದೆ. ಗ್ರಹಗಳ ಉಪಾಸನೆಯನ್ನು ಮಾಡುವುದು ‘ಆಧಿದೈವಿಕ’ ಸ್ತರದ (ಸೂಕ್ಷ್ಮ ಊರ್ಜೆಯ ಸ್ತರದ) ಉಪಾಯವಾಗಿದೆ.

೨. ನವಗ್ರಹಗಳ ಉಪಾಸನೆಯ ವಿಧಗಳು ಮತ್ತು ಅವುಗಳ ಮಹತ್ವ

ಗ್ರಹಗಳ ಉಪಾಸನೆಯಲ್ಲಿ ಗ್ರಹಗಳಿಗೆ ಸಂಬಂಧಿಸಿದ ರತ್ನಗಳನ್ನು ಧರಿಸುವುದು, ಯಂತ್ರವನ್ನು ಪೂಜಿಸುವುದು, ಮಂತ್ರ ಅಥವಾ ಸ್ತೋತ್ರಪಠಣ ಮಾಡುವುದು, ಹವನ ಮಾಡುವುದು, ಸಂಬಂಧಪಟ್ಟ ದೇವತೆಯ ನಾಮಜಪ ಮಾಡುವುದು ಇತ್ಯಾದಿ ವಿಧಗಳಿವೆ. ಈ ಉಪಾಸನೆಯ ತುಲನಾತ್ಮಕ ಮಹತ್ವವನ್ನು ಈ ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.

ಗ್ರಹಗಳ ಉಪಾಸನೆ ಪಂಚತತ್ತ್ವಗಳಲ್ಲಿ ಕಾರ್ಯನಿರತ ತತ್ತ್ವ ಕಾರ್ಯನಿರತ ತತ್ತ್ವದ ಮಟ್ಟ ಉಪಾಸನೆಯ ಮಹತ್ವ (ಶೇ.)
ಗ್ರಹಕ್ಕೆ ಸಂಬಂಧಿಸಿದ ರತ್ನ ಧರಿಸುವುದು ಪೃಥ್ವಿ ಸಗುಣ ೨೦
ಗ್ರಹದ ಯಂತ್ರದ ಪೂಜೆ ತೇಜ ಸಗುಣ-ನಿರ್ಗುಣ ೪೦
ಗ್ರಹದ ಮಂತ್ರಜಪ ಅಥವಾ ಸ್ತೋತ್ರ ಪಠಿಸುವುದು ಆಕಾಶ ಸಗುಣ-ನಿರ್ಗುಣ  ೫೦
ಗ್ರಹಕ್ಕೆ ಸಂಬಂಧಿಸಿದ ಹೋಮ ಹವನ ಮಾಡುವುದು ವಾಯು ಮತ್ತು ಆಕಾಶ ಸಗುಣ-ನಿರ್ಗುಣ ೬೦
ಗ್ರಹದ ಅಧಿಪತಿ ದೇವತೆಯ ನಾಮ ಜಪಿಸುವುದು ಆಕಾಶ ನಿರ್ಗುಣ-ಸಗುಣ ೭೦

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ, ೨.೬.೨೦೨೧)

೨ ಅ. ಗ್ರಹದ ಅಧಿಪತಿ ದೇವತೆಯ ನಾಮಜಪದಿಂದ ಅಧ್ಯಾತ್ಮಿಕ ತೊಂದರೆಗಳು ಕಡಿಮೆಯಾಗುತ್ತವೆ

ಉಪಾಸನೆಯ ಸ್ವರೂಪ ಸೂಕ್ಷ್ಮವಾದಷ್ಟು ಲಾಭದ ಪ್ರಮಾಣ ಹೆಚ್ಚಾಗುತ್ತದೆ ಎಂದು ಈ ಕೋಷ್ಟಕದಿಂದ ಗಮನಕ್ಕೆ ಬರುತ್ತದೆ. ರತ್ನವನ್ನು ಧರಿಸುವುದು ಸಗುಣ ಸ್ತರದ ಉಪಾಯವಾಗಿರುವುದರಿಂದ ಶಾರೀರಿಕ ತೊಂದರೆಗಳ ನಿವಾರಣೆಗಾಗಿ ಅದರಿಂದ ಶಾರೀರಿಕ ಲಾಭವಾಗುತ್ತದೆ. ಗ್ರಹದ ಯಂತ್ರವನ್ನು ಪೂಜಿಸುವುದು ಮತ್ತು ಮಂತ್ರ ಜಪಿಸುವುದರಿಂದ ಶಾರೀರಿಕ ಮತ್ತು ಮಾನಸಿಕ ತೊಂದರೆಗಳು ದೂರವಾಗಲು ಸಹಾಯವಾಗುತ್ತದೆ. ಗ್ರಹದ ಅಧಿಪತಿ ದೇವತೆಯ ನಾಮಜಪ ಮಾಡುವುದು, ನಿರ್ಗುಣ ಸ್ತರದ ಉಪಾಯವಾಗಿರುವುದರಿಂದ ಅಧ್ಯಾತ್ಮಿಕ ತೊಂದರೆಗಳು (ಅತೃಪ್ತ ಪೂರ್ವಜರ ತೊಂದರೆ, ಅನಿಷ್ಟ ಶಕ್ತಿಗಳ ತೊಂದರೆ ಇತ್ಯಾದಿ) ದೂರವಾಗಲು ಸಹಾಯವಾಗುತ್ತದೆ.

೨ ಆ. ಉಪಾಸನೆಯನ್ನು ಶ್ರದ್ಧೆಯಿಂದ, ಏಕಾಗ್ರತೆಯಿಂದ ಮತ್ತು ನಿಯಮಿತವಾಗಿ ಮಾಡುವುದು ಆವಶ್ಯಕವಾಗಿದೆ

ಯಾವುದೇ ಉಪಾಸನೆಯನ್ನು ಶ್ರದ್ಧೆಯಿಂದ ಮಾಡುವುದು ಆವಶ್ಯಕವಾಗಿರುತ್ತದೆ. ಶ್ರದ್ಧೆಯಿಂದ ಮಾಡಿದ ಉಪಾಸನೆಯಲ್ಲಿ ಮನಸ್ಸು, ಬುದ್ಧಿ ಮತ್ತು ಚಿತ್ತ ಭಾಗವಹಿಸುತ್ತವೆ. ಆದ್ದರಿಂದ ಸೂಕ್ಷ್ಮದೇಹದ ಆಳದಲ್ಲಿ ಉಪಾಸನೆಯ ಪರಿಣಾಮವಾಗುತ್ತದೆ. ಏಕಾಗ್ರತೆಯಿಂದ ಮತ್ತು ನಿಯಮಿತವಾಗಿ ಮಾಡಿದ ಉಪಾಸನೆಯಿಂದ ಸೂಕ್ಷ್ಮದೇಹದ ಮೇಲಾಗುವ ಪರಿಣಾಮವು ಕ್ರಮೇಣ ಸ್ಥೂಲದೇಹದ ಮೇಲೆಯೂ ಕಾಣಿಸುತ್ತದೆ, ಹಾಗೆಯೇ ಪರಿಸ್ಥಿತಿಯಲ್ಲಿಯೂ ಬದಲಾವಣೆಯಾಗುತ್ತದೆ.

೩. ಆಧಿಭೌತಿಕ ಉಪಾಯದ ಜೊತೆಗೆ ಆಧಿದೈವಿಕ ಮತ್ತು ಅಧ್ಯಾತ್ಮಿಕ ಉಪಾಯಗಳನ್ನು ಮಾಡುವುದರ ಮಹತ್ವ

ಸದ್ಯದ ಕಾಲದಲ್ಲಿ ಮನುಷ್ಯನ ಜೀವನದಲ್ಲಿ ಶೇ. ೬೫ ರಷ್ಟು ಘಟನೆಗಳು ಪ್ರಾರಬ್ಧದಿಂದ ಘಟಿಸುತ್ತವೆ. ಸತತವಾಗಿ ಕಾಡುವ ಅನಾರೋಗ್ಯ, ದೀರ್ಘ ಅನಾರೋಗ್ಯ, ಕೌಟುಂಬಿಕ ಕಲಹ, ಶಿಕ್ಷಣದಲ್ಲಿ ವೈಫಲ್ಯ, ಆರ್ಥಿಕ ಅಡಚಣೆ, ವೈವಾಹಿಕ ಸುಖ ಲಭಿಸದಿರುವುದು, ಅಪಘಾತದ ಪ್ರಸಂಗಗಳು ಮುಂತಾದ ದುಃಖದ ಪ್ರಸಂಗಗಳು ಪ್ರಾರಬ್ಧದಿಂದ ಬರುತ್ತವೆ. ಇಂತಹ ಸಮಸ್ಯೆಗಳ ನಿವಾರಣೆಗಾಗಿ ಭೌತಿಕ (ಸ್ಥೂಲ) ಉಪಾಯಕ್ಕೆ ಮಿತಿಯಿರುತ್ತದೆ. ಇಂತಹ ಸಮಸ್ಯೆಗಳ ನಿವಾರಣೆಗಾಗಿ ಆಧಿದೈವಿಕ ಮತ್ತು ಅಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕಾಗುತ್ತದೆ. ಆಧಿದೈವಿಕ ಉಪಾಯಗಳೆಂದರೆ ಯಜ್ಞ, ಮಂತ್ರಜಪ, ನಾಮಜಪ ಇತ್ಯಾದಿ ಉಪಾಯಗಳ ಮೂಲಕ ನಮ್ಮ ಪಂಚತತ್ತ್ವಗಳನ್ನು ಸಮತೋಲನಕ್ಕೆ ತಂದು ಜೀವನವನ್ನು ಸಮೃದ್ಧಗೊಳಿಸುವುದು. ಅಧ್ಯಾತ್ಮಿಕ ಸ್ತರದ ಉಪಾಯವೆಂದರೆ, ಜನ್ಮ-ಮೃತ್ಯುವಿನ ಚಕ್ರದಿಂದ ಮುಕ್ತರಾಗಲು ಗುರುಗಳ ಮಾರ್ಗದರ್ಶನಕ್ಕನುಸಾರ ಸಾಧನೆಯನ್ನು ಮಾಡುವುದು.

ಆಧಿದೈವಿಕ ಉಪಾಯವು ಸಕಾಮ ಸಾಧನೆಯಾಗಿದ್ದು ಅಧ್ಯಾತ್ಮಿಕ ಉಪಾಯವು ನಿಷ್ಕಾಮ ಸಾಧನೆಯಾಗಿದೆ. ಅಧ್ಯಾತ್ಮಿಕ ಸಾಧನೆಯಿಂದ ಜೀವದ ಚಿತ್ತದ ಮೇಲಿನ ಸಂಸ್ಕಾರಗಳು ಕ್ರಮೇಣ ಲೋಪವಾಗುತ್ತವೆ; ಇದರಿಂದ ಎಲ್ಲ ದುಃಖಗಳ ಮೂಲವೇ ನಾಶವಾಗುತ್ತದೆ. ಆದ್ದರಿಂದ ಹಿಂದೂ ಧರ್ಮದಲ್ಲಿ ಹೇಳಿರುವ ಜೀವನಪದ್ಧತಿಯಲ್ಲಿ ಅಧ್ಯಾತ್ಮಕ್ಕೆ ಪ್ರಾಧಾನ್ಯತೆಯಿದೆ.

ಹೇಳವ ತಾತ್ಪರ್ಯವೆಂದರೆ, ‘ನವಗ್ರಹ ಪೂಜೆ ಉಪಾಸನೆ’ಯು ಆಧಿದೈವಿಕ ಉಪಾಸನೆಯ ಒಂದು ವಿಧವಾಗಿದೆ. ಗ್ರಹಗಳ-ಉಪಾಸನೆಯಿಂದ  ನಮಗೆ ಆವಶ್ಯಕವಿರುವ ಸೂಕ್ಷ್ಮ ಊರ್ಜೆಯನ್ನು ಪಡೆಯಬಹುದು. ಪ್ರಾರಬ್ಧದಿಂದ ಉದ್ಭವಿಸುವ ಸಮಸ್ಯೆಗಳಿಗೆ ಕೇವಲ ಭೌತಿಕ (ಸ್ಥೂಲ) ಉಪಾಯವನ್ನು ಮಾಡದೇ ಆಧಿದೈವಿಕ ಮತ್ತು ಅಧ್ಯಾತ್ಮಿಕ ಉಪಾಯವನ್ನೂ ಮಾಡುವುದು ಶ್ರೇಯಸ್ಕರವಾಗಿದೆ !’

– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೬.೧೨.೨೦೨೨)

Leave a Comment