ದೇವತೆಯ ಯಂತ್ರದಲ್ಲಿ ತೊಂದರೆದಾಯಕ ಸ್ಪಂದನಗಳು ಬಂದಿದ್ದರೆ ಅದರ ಮೇಲೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು !

ಸದ್ಗುರು (ಡಾ.) ಮುಕುಲ ಗಾಡಗೀಳ

ನಾವು ದೇವತೆಗಳ ಮೂರ್ತಿ ಅಥವಾ ಚಿತ್ರಗಳಂತೆ ದೇವತೆಗಳ ಯಂತ್ರಗಳನ್ನೂ ಪೂಜಿಸುತ್ತೇವೆ. ಕೆಲವೊಮ್ಮೆ ಯಾವುದಾದರೊಂದು ದೇವತೆಯ ಚಿಕ್ಕ ಆಕಾರದ ಯಂತ್ರವನ್ನು, ಉದಾ. ‘ಶ್ರೀಯಂತ್ರ’ವನ್ನು ನಾವು ‘ಲಾಕೇಟ್‌’ನಂತೆ ಕೊರಳಲ್ಲಿ ಹಾಕಿಕೊಳ್ಳುತ್ತೇವೆ. ದೇವತೆಗಳ ಮೂರ್ತಿ ಮತ್ತು ಚಿತ್ರಗಳು ಸಗುಣ-ನಿರ್ಗುಣ ಸ್ತರದಲ್ಲಿ ಮತ್ತು ದೇವತೆಗಳ ಯಂತ್ರಗಳು ನಿರ್ಗುಣ-ಸಗುಣ ಸ್ತರದಲ್ಲಿ ಕಾರ್ಯವನ್ನು ಮಾಡುತ್ತವೆ. ದೇವತೆಗಳ ಯಂತ್ರಗಳು ಹೆಚ್ಚು ನಿರ್ಗುಣ ಸ್ತರದಲ್ಲಿ ಕಾರ್ಯನಿರತವಾಗಿರುವುದರಿಂದ ಅವು ಆಧ್ಯಾತ್ಮಿಕ ಸ್ತರದ ಉಪಾಯಗಳಿಗಾಗಿ ಅಥವಾ ಸಂಕಟ ನಿವಾರಣೆಗಾಗಿ ದೇವತೆಗಳ ಮೂರ್ತಿ ಅಥವಾ ಚಿತ್ರಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಆದ್ದರಿಂದ ಅನಿಷ್ಟ ಶಕ್ತಿಗಳು ದೇವತೆಗಳ ಮೂರ್ತಿ ಅಥವಾ ಚಿತ್ರಗಳಿಗಿಂತಲೂ ದೇವತೆಗಳ ಯಂತ್ರಗಳ ಮೇಲೆ ಆಕ್ರಮಣ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.

ಅನಿಷ್ಟ ಶಕ್ತಿಗಳು ದೇವತೆಯ ಯಂತ್ರದ ಮೇಲೆ ಆಕ್ರಮಣ ಮಾಡಿದರೆ ಅದರಲ್ಲಿ ನಕಾರಾತ್ಮಕ (ತೊಂದರೆದಾಯಕ) ಸ್ಪಂದನಗಳು ಬರುತ್ತವೆ. ಆದ್ದರಿಂದ ಆ ಯಂತ್ರದ ಕಡೆಗೆ ನೋಡಿ ತಲೆ ಭಾರವಾಗುವುದು, ಎದೆಯ ಮೇಲೆ ಒತ್ತಡ ಬರುವುದು, ಆ ಯಂತ್ರದ ಕಡೆಗೆ ನೋಡಬಾರದು ಎಂದೆನಿಸುವುದು, ಮುಂತಾದ ರೀತಿಯ ತೊಂದರೆಗಳಾಗುತ್ತವೆ. ಈ ರೀತಿಯ ತೊಂದರೆಗಳಾಗುತ್ತಿದ್ದರೆ ಆ ಯಂತ್ರದ ಮೇಲೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡಿ ಅದರಲ್ಲಿನ ತೊಂದರೆದಾಯಕ ಶಕ್ತಿಯನ್ನು ದೂರಗೊಳಿಸುವುದು ಆವಶ್ಯಕವಾಗಿರುತ್ತದೆ.

ಪ್ರಾತಿನಿಧಿಕ ಚಿತ್ರ

೧. ಖಾಲಿ ಪೆಟ್ಟಿಗೆಗಳ ಉಪಾಯ ಮಾಡುವುದು

ನಕಾರಾತ್ಮಕ ಸ್ಪಂದನಗಳಿರುವ ದೇವತೆಯ ಯಂತ್ರದ ಮೇಲೆ ಖಾಲಿ ಪೆಟ್ಟಿಗೆಗಳಿಂದ ಆಧ್ಯಾತ್ಮಿಕ ಉಪಾಯವನ್ನು ಮಾಡಬೇಕು. ಖಾಲಿ ಪೆಟ್ಟಿಗೆಗಳ ಟೊಳ್ಳಿನಲ್ಲಿ ತೊಂದರೆದಾಯಕ ಶಕ್ತಿ ಆಕರ್ಷಿಸಲ್ಪಡುವುದರಿಂದ ಆಧ್ಯಾತ್ಮಿಕ ಲಾಭವಾಗುತ್ತದೆ. (ಹೆಚ್ಚಿನ ಮಾಹಿತಿಗಾಗಿ ಸನಾತನದ ‘ರೋಗ ನಿವಾರಣೆಗಾಗಿ ಖಾಲಿ ಪೆಟ್ಟಿಗೆಗಳ ಉಪಾಯ ಹೇಗೆ ಮಾಡಬೇಕು?’ ಎಂಬ ಗ್ರಂಥವನ್ನು ಓದಿರಿ. ಮಾಹಿತಿಗಾಗಿ, ಇಲ್ಲಿ ಕ್ಲಿಕ್ ಮಾಡಿ) ಅದಕ್ಕಾಗಿ ದೇವತೆಯ ಯಂತ್ರಕ್ಕಿಂತ ಸ್ವಲ್ಪ ದೊಡ್ಡ ಆಕಾರದ ಮತ್ತು ಒಂದು ಬದಿಗೆ ತೆರೆದಿರುವ ೪ ಖಾಲಿ ಪೆಟ್ಟಿಗೆಗಳನ್ನು ತೆಗೆದುಕೊಳ್ಳಬೇಕು. ಮೇಜಿನ ಮೇಲೆ ಯಂತ್ರವನ್ನಿಟ್ಟು ಅದರ ನಾಲ್ಕೂ ಬದಿಗಳಲ್ಲಿ ಆ ಖಾಲಿ ಪೆಟ್ಟಿಗೆಗಳನ್ನು ಯಂತ್ರದಿಂದ ಸಾಧಾರಣ ೩೦ ಸೆಂ.ಮೀ. ದೂರದಲ್ಲಿಡಬೇಕು. ಪೆಟ್ಟಿಗೆಗಳನ್ನು ಇಡುವಾಗ ಅವುಗಳ ತೆರೆದ ಭಾಗ ಯಂತ್ರದ ಕಡೆಗೆ ಬರುವಂತೆ ಇಡಬೇಕು. ಈ ರೀತಿಯ ಖಾಲಿ ಪೆಟ್ಟಿಗೆಗಳ ಉಪಾಯವನ್ನು ಆ ಯಂತ್ರದ ಮೇಲೆ ಇಡೀ ರಾತ್ರಿ ಮಾಡಬಹುದು. ಉಪಾಯವಾದ ನಂತರ ಬೆಳಗ್ಗೆ ಆ ‘ದೇವತೆಯ ಯಂತ್ರದಲ್ಲಿ ತೊಂದರೆದಾಯಕ ಶಕ್ತಿ ಪ್ರಕ್ಷೇಪಿತವಾಗುತ್ತದೆಯೇ ?’, ಎಂಬುದನ್ನು ಪರಿಶೀಲಿಸಬೇಕು. ಯಂತ್ರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ತೊಂದರೆದಾಯಕ ಶಕ್ತಿ ಪ್ರಕ್ಷೇಪಿತವಾಗುತ್ತಿದ್ದರೆ ಅದರ ಮೇಲೆ ಮುಂದಿನಂತೆ ಸೂರ್ಯನ ಉಪಾಯವನ್ನು ಮಾಡಬೇಕು.

೨. ಶ್ರೀ ಸೂರ್ಯನಾರಾಯಣನ ಉಪಾಯ

ಶ್ರೀ ಸೂರ್ಯನಾರಾಯಣನಲ್ಲಿ ರಜ-ತಮವನ್ನು ನಾಶಗೊಳಿಸುವ ಅಲೌಕಿಕ ಶಕ್ತಿಯಿದೆ. ನಮ್ಮ ಮೇಲೆ ಬಂದಿರುವ ತೊಂದರೆದಾಯಕ ಶಕ್ತಿಯ ಆವರಣವನ್ನು ದೂರಗೊಳಿಸಲು ಬೆಳಗಿನ ಅಥವಾ ಸಾಯಂಕಾಲದ ಸಮಯದಲ್ಲಿ ಶ್ರೀ ಸೂರ್ಯನಾರಾಯಣನ ಎಳೆಬಿಸಿಲಿನಲ್ಲಿ ೨೦ ನಿಮಿಷ ಕುಳಿತು ಉಪಾಯವನ್ನು ಮಾಡಿ ಅದರ ಲಾಭವನ್ನು ಪಡೆಯಬಹುದು. ಹಾಗೆಯೇ ಯಾವುದಾದರೊಂದು ವಸ್ತುವಿನಲ್ಲಿನ ತೊಂದರೆದಾಯಕ ಶಕ್ತಿಯನ್ನು ನಾಶಗೊಳಿಸಲು ಆ ವಸ್ತುವನ್ನು ಯಾವುದೇ ಸಮಯದಲ್ಲಿ ಅರ್ಧ ಗಂಟೆಯಿಂದ ೧ ಗಂಟೆಯವರೆಗೆ ಬಿಸಿಲಿನಲ್ಲಿಟ್ಟು ಉಪಾಯವನ್ನು ಮಾಡಬಹುದು. ದೇವತೆಯ ಯಂತ್ರದಲ್ಲಿ ತೊಂದರೆದಾಯಕ ಶಕ್ತಿಯನ್ನು ನಾಶಗೊಳಿಸಲು ಆ ಯಂತ್ರವನ್ನು ಬಿಸಿಲಿನಲ್ಲಿ ೧ ಗಂಟೆ ಇಡಬೇಕು. ಯಂತ್ರವನ್ನು ಬಿಸಿಲಿನಲ್ಲಿಡುವಾಗ ಶ್ರೀ ಸೂರ್ಯನಾರಾಯಣನಿಗೆ – ‘ನಿನ್ನ ಕೃಪೆಯಿಂದ ಈ ಯಂತ್ರದಲ್ಲಿರುವ ತೊಂದರೆದಾಯಕ ಶಕ್ತಿ ನಾಶವಾಗಲಿ’ ಎಂದು ಪ್ರಾರ್ಥಿಸಬೇಕು.

ಈ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದರಿಂದ ದೇವತೆಯ ಯಂತ್ರದಲ್ಲಿನ ನಕಾರಾತ್ಮಕ ಸ್ಪಂದನಗಳು ನಾಶವಾಗುತ್ತವೆ. ಅನಿಷ್ಟ ಶಕ್ತಿಗಳ ಆಕ್ರಮಣವು ತುಂಬಾ ತೀವ್ರವಾಗಿದ್ದರೆ ಕೆಲವು ದಿನಗಳವರೆಗೆ ಈ ಉಪಾಯಗಳನ್ನು ಮಾಡಬೇಕಾಗುತ್ತದೆ. ಉಪಾಯ ಪೂರ್ಣವಾದ ನಂತರ ಆ ದೇವತೆಯ ಯಂತ್ರವನ್ನು ಪೂಜೆಗಾಗಿ ಅಥವಾ ಧರಿಸಲು ಬಳಸಬಹುದು. ಮೈಮೇಲೆ ಧರಿಸುವ ಯಂತ್ರವನ್ನು, ಪ್ರತಿದಿನ ಬೆಳಗ್ಗೆ ಸೂರ್ಯನ ಉಪಾಯವನ್ನು ಮಾಡಿಯೇ ಧರಿಸುವುದು ಉತ್ತಮ. ಈ ರೀತಿ ಉಪಾಯ ಮಾಡಿದ ಕೆಲವು ದಿನಗಳ ನಂತರ ಪೂಜೆಯಲ್ಲಿಟ್ಟಿರುವ ಯಂತ್ರದಲ್ಲಿ ನಕಾರಾತ್ಮಕ ಸ್ಪಂದನಗಳಿರುವುದು ಪುನಃ ಅರಿವಾದರೆ ಅದರ ಮೇಲೆ ಪುನಃ ಆಧ್ಯಾತ್ಮಿಕ ಉಪಾಯಗಳನ್ನು ಮಾಡಬೇಕು.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್‌.ಡಿ., ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೩.೧.೨೦೨೩)

Leave a Comment