2023 ರಲ್ಲಿ ಶನಿ ಸಂಚಾರ – ರಾಶಿಗಳ ಫಲ

ಪುಷ್ಯ ಕೃಷ್ಣ ದಶಮಿಗೆ (ಮಂಗಳವಾರ, ೧೭.೧.೨೦೨೩ ರಂದು) ಸಾಯಂಕಾಲ ೬ ಗಂಟೆ ೦೧ ನಿಮಿಷಕ್ಕೆ ಶನಿ ಗ್ರಹ ಕುಂಭ ರಾಶಿಯಲ್ಲಿ ಪ್ರವೇಶಿಸಿದೆ. ೧೭.೧.೨೦೨೩ ರಿಂದ ಮೀನ ರಾಶಿಗೆ ಸಾಡೇಸಾತ್ (ಏಳುವರೆ ಶನಿ) ಆರಂಭವಾಯಿತು. ಮಕರ ಮತ್ತು ಕುಂಭ ಈ ರಾಶಿಗಳಿಗೂ ಏಳುವರೆ ಶನಿ ಇರಲಿದೆ ಮತ್ತು ಈ ದಿನ ಧನು ರಾಶಿಯ ಏಳುವರೆ ಶನಿ ಮುಗಿದಿದೆ. – ಆಧಾರ : ದಾತೆ ಪಂಚಾಂಗ

೧. ಜ್ಯೋತಿಷ್ಯಶಾಸ್ತ್ರಕ್ಕನುಸಾರ ಶನಿ ಸಂಚಾರದ ಮಹತ್ವ

ಶನಿ ದೇವರು, ಶನಿ ಸಂಚಾರ, ಶನಿ ಮಂತ್ರ, ಶನಿ ಪೀಡೆ

೧ ಅ. ಶನಿ ಸಂಚಾರದ ಫಲ ಕೂಡಲೇ ಕಾಣಸಿಗುವುದಿಲ್ಲ

ಶನಿ ಗ್ರಹವನ್ನು ‘ಮಂದ ಗ್ರಹ’ ಎಂದು ಕರೆಯುತ್ತಾರೆ; ಏಕೆಂದರೆ ಶನಿಯು ಒಂದು ರಾಶಿಯಲ್ಲಿ ಎರಡುವರೆ ವರ್ಷ ಇರುತ್ತಾನೆ. ಆದುದರಿಂದ ಶನಿಗ್ರಹ ಸಂಕ್ರಮಣದ ನಂತರ ಕೂಡಲೇ ಅದರ ಶುಭ ಅಥವಾ ಅಶುಭ ಫಲಗಳು ಸಿಗುವುದಿಲ್ಲ, ಕೊನೆಯ ೬ ತಿಂಗಳುಗಳಲ್ಲಿ ಅದರ ಅನುಭವಗಳು ತೀವ್ರವಾಗಿ ಬರುತ್ತವೆ. ಪುಷ್ಯ ಕೃಷ್ಣ ದಶಮಿ, ಮಂಗಳವಾರ, ೧೭.೧.೨೦೨೩ ರಂದು ಸಾಯಂಕಾಲ ೬ ಗಂಟೆ ೦೧ ನಿಮಿಷಕ್ಕೆ ಶನಿ ಕುಂಭ ರಾಶಿಯಲ್ಲಿ ಪ್ರವೇಶಿಸಿದನು. ಅವನ ಪುಣ್ಯಕಾಲ ಮಂಗಳವಾರ ಮಧ್ಯಾಹ್ನ ೩.೦೭ ನಿಮಿಷಗಳಿಂದ ರಾತ್ರಿ ೮.೫೫ ರ ವರೆಗಿತ್ತು. ಈ ಪುಣ್ಯಕಾಲದಲ್ಲಿ ಜಪ, ದಾನ, ಪೂಜೆ ಇತ್ಯಾದಿ ಪುಣ್ಯ ಕರ್ಮಗಳನ್ನು ಮಾಡುವುದು ಪುಣ್ಯಕಾರಕ ಮತ್ತು ಪೀಡಾಪರಿಹಾರಕವಾಗಿದೆ. ಇದು ಶನಿ ಗ್ರಹ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶ ಮಾಡುವ ಸಂಧಿಕಾಲವಾಗಿದೆ. ಸಂಧಿಕಾಲದಲ್ಲಿ ಮಾಡಿದ ಸಾಧನೆಯ ಫಲ ಅನೇಕ ಪಟ್ಟು ಹೆಚ್ಚು ಸಿಗುತ್ತದೆ.

೧ ಆ. ಶನಿ ಸಂಚಾರ ಸಮಯವು ಆತ್ಮಚಿಂತನೆಗೆ ಪೂರಕವಾಗಿದೆ

ಶನಿ ಗ್ರಹ ಕರ್ಮದ ಅಧಿಪತಿ ಆಗಿದ್ದು ಅವನು ಅಹಂಕಾರವನ್ನು ನಾಶಗೊಳಿಸುತ್ತಾನೆ. ಶನಿಯು ಸಂವೇದನೆಗಳ ಕಾರಕ ಗ್ರಹವಾಗಿದೆ. ಶನಿಯು ಚಿಂತನಶೀಲ ಗ್ರಹವಾಗಿರುವುದರಿಂದ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಪ್ರಯತ್ನಿಸುತ್ತಿರುವ ಸಾಧಕರಿಗೆ ಸಾಧನೆಯ ಪ್ರಯತ್ನದಲ್ಲಿ ಯಶಸ್ಸನ್ನು ನೀಡುತ್ತಾನೆ. ಶನಿಗ್ರಹದಿಂದ ಯೋಗ್ಯ ರೀತಿಯಲ್ಲಿ ಚಿಂತನೆ ಮಾಡಲು ಸಹಾಯವಾಗುತ್ತದೆ.

೨. ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಶನಿ ಗ್ರಹದ ಮಹತ್ವ

೨ ಅ. ಪೂರ್ವಪುಣ್ಯವನ್ನು ದರ್ಶಿಸುವ ಮತ್ತು ಮೋಕ್ಷದ ದಾರಿಯನ್ನು ತೋರಿಸುವ ಶನಿ ಗ್ರಹ

ಹಿಂದೂ ಧರ್ಮದಲ್ಲಿ ಗ್ರಹಗಳನ್ನು ದೇವತೆಗಳೆಂದು ನಂಬಲಾಗಿದೆ. ಶನಿಯು ಪಾಪ ಗ್ರಹ (ಅಶುಭ ಗ್ರಹ) ಆಗಿದ್ದು ಎಲ್ಲ ಗ್ರಹಗಳಲ್ಲಿ ಈ ಗ್ರಹಕ್ಕೆ ಲೌಕಿಕದೃಷ್ಟಿಯಲ್ಲಿ ಅಸಾಧಾರಣ ಮಹತ್ವವಿದೆ. ಮಕರ ಮತ್ತು ಕುಂಭ ಇವು ಶನಿಗ್ರಹದ ರಾಶಿಗಳಾಗಿವೆ. ‘ಸ್ವ’ರಾಶಿಯಾಗಿರುವುದರಿಂದ ಈ ರಾಶಿಗಳಲ್ಲಿ ಶನಿಯ ಆಗಮನವು ಶುಭವಾಗಿದೆ. ಶನಿಯು ತುಲಾ ರಾಶಿಯಲ್ಲಿ ಉಚ್ಚನಾಗುತ್ತಾನೆ (ಟಿಪ್ಪಣಿ). ಈ ಗ್ರಹವು ವಾಯುತತ್ತ್ವದ್ದಾಗಿದ್ದು ಮನುಷ್ಯನನ್ನು ಆಸಕ್ತಿಯಿಂದ ವಿರಕ್ತಿಯ ಕಡೆಗೆ ಒಯ್ಯುತ್ತದೆ. ಮಾನವನ ಜೀವನದಲ್ಲಿ ಮಾನ, ಅಪಮಾನ, ಅವಹೇಳನೆ ಇವುಗಳಿಂದ ಈ ಗ್ರಹ ಪರಮಾರ್ಥದ ಕಡೆಗೆ ಹೊರಳಿಸುತ್ತದೆ. ಈ ಗ್ರಹವು ಪೂರ್ವಪುಣ್ಯವನ್ನು ದರ್ಶಿಸುವ ಮತ್ತು ಮೋಕ್ಷದ ದಾರಿಯನ್ನು ತೋರಿಸುವ ಗ್ರಹವಾಗಿದೆ.

ಟಿಪ್ಪಣಿ : ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳನ್ನು ಉಚ್ಚ ಮತ್ತು ನೀಚ ರಾಶಿ ಎಂದು ನಿರ್ಧರಿಸಲಾಗಿದೆ. ‘ಗ್ರಹ ಯಾವಾಗ ಉಚ್ಚರಾಶಿಯಲ್ಲಿರುತ್ತದೆಯೋ, ಆಗ, ಅದು ಯಾವ ವಿಷಯದ ಕಾರಕ ಆಗಿದೆಯೋ ಮತ್ತು ಜಾತಕದಲ್ಲಿ ಯಾವ ಸ್ಥಾನದ ಸ್ವಾಮಿ ಆಗಿದೆಯೋ, ಅದಕ್ಕನುಸಾರ ಶುಭ ಫಲಕಾರಿಯಾಗುತ್ತದೆ, ಹೀಗೆ ನಿಯಮವಿದೆ.

೨ ಆ. ಅನುಭವದಿಂದ ಶಿಕ್ಷಣವನ್ನು ನೀಡುವ ಶಿಕ್ಷಕ ಶನಿ

ಜ್ಯೋತಿಷ್ಯಶಾಸ್ತ್ರಕ್ಕನುಸಾರ ಪ್ರತಿಯೊಂದು ಗ್ರಹದ ಶುಭ (ಗುಣ) ಮತ್ತು ಅಶುಭ (ದೋಷ) ಎಂದು ಎರಡು ಮಗ್ಗುಲುಗಳಿರುತ್ತವೆ. ಯಾವುದೇ ಗ್ರಹ ಕೇವಲ ಶುಭ ಅಥವಾ ಅಶುಭವೇ ಆಗಿರುತ್ತದೆ ಎಂದೇನಿಲ್ಲ. ಈ ನಿಯಮಕ್ಕನುಸಾರ ಶನಿ ಗ್ರಹಕ್ಕೂ ಎರಡು ಮಗ್ಗುಲುಗಳಿವೆ; ಆದರೆ ಶನಿ ಗ್ರಹದ ಕೇವಲ ಒಂದೇ ಬದಿಯ ವಿಚಾರವನ್ನು ಮಾಡಲಾಗುತ್ತದೆ; ಹೀಗಾಗಿ ಜನರ ಮನಸ್ಸಿನಲ್ಲಿ ಶನಿಗ್ರಹದ ಬಗ್ಗೆ ಭಯ ನಿರ್ಮಾಣವಾಗುತ್ತದೆ. ಶನಿ ಗ್ರಹ ಗರ್ವ, ಅಹಂಕಾರ, ಪೂರ್ವಗ್ರಹ ಮುಂತಾದವುಗಳನ್ನು ದೂರ ಮಾಡಿ ಮನುಷ್ಯನಿಗೆ ಮನುಷ್ಯತ್ವವನ್ನು ಕಲಿಸುತ್ತದೆ ಮತ್ತು ಅಂತರಂಗದಲ್ಲಿನ ಉಚ್ಚ ಗುಣಗಳನ್ನು ಪರಿಚಯಿಸುತ್ತದೆ. ಶನಿಯು ಅನುಭವದಿಂದ ಶಿಕ್ಷಣವನ್ನು ನೀಡುವ ಶಿಕ್ಷಕನಾಗಿದ್ದಾನೆ. ಯಾರು ಶಿಸ್ತುಬದ್ಧ, ವಿನಯಶೀಲ ಮತ್ತು ನಮ್ರವಾಗಿರುತ್ತಾರೆಯೋ, ಅವರನ್ನು ಶನಿ ಉಚ್ಚ ಮಟ್ಟಕ್ಕೆ ಒಯ್ಯುತ್ತಾನೆ ಮತ್ತು ಯಾರು ಅಹಂಕಾರಿ, ಗರ್ವಿಷ್ಠ ಮತ್ತು ಸ್ವಾರ್ಥಿಯಾಗಿರುತ್ತಾರೆಯೋ, ಅವರಿಗೆ ಶನಿ ತೊಂದರೆಗಳನ್ನು ಕೊಡುತ್ತಾನೆ.

ಇಂತಹ ಕೆಟ್ಟ ಕಾಲದಲ್ಲಿಯೇ ಮನುಷ್ಯನ ಸರಿಯಾದ ಪರೀಕ್ಷೆಯಾಗುತ್ತದೆ. ಈ ಕಾಲದಲ್ಲಿ ವ್ಯಕ್ತಿಗೆ ಸ್ವಕೀಯರ-ಪರಕೀಯರ ಅರಿವಾಗುತ್ತದೆ. ತನ್ನ ಗುಣ-ದೋಷಗಳು ಗಮನಕ್ಕೆ ಬರುತ್ತವೆ, ಗರ್ವಹರಣವಾಗುತ್ತದೆ ಮತ್ತು ಅಹಂಕಾರ ನಾಶವಾಗುತ್ತದೆ. ಮನುಷ್ಯತ್ವದ ಅರಿವಾಗುತ್ತದೆ. ಒಬ್ಬ ಮನುಷ್ಯನೆಂದು ಹೇಗೆ ಜೀವಿಸಬೇಕು ಎಂಬುದರ ಜ್ಞಾನವಾಗುತ್ತದೆ. ಅವಿವೇಕದಿಂದ ಮಾಡಿದ ಕರ್ಮದ ಫಲಗಳು ಏಳುವರೆ ಶನಿ ಬಂದಾಗ ಅನುಭವಿಸಬೇಕಾಗುತ್ತದೆ.

೩. ರಾಶಿಗಳಿಗನುಸಾರ ಶನಿ ಗ್ರಹದ ಸ್ಥಾನಗಳು

ಕುಂಭ ರಾಶಿಯಲ್ಲಿ ಪ್ರವೇಶ ಮಾಡುವ ಶನಿಯು ಕುಂಭ ರಾಶಿಗೆ ಮೊದಲನೆಯ, ಮಕರ ರಾಶಿಗೆ ಎರಡನೆಯ, ಧನು ರಾಶಿಗೆ ಮೂರನೆಯ, ವೃಶ್ಚಿಕ ರಾಶಿಗೆ ನಾಲ್ಕನೆಯ, ತುಲಾ ರಾಶಿಗೆ ಐದನೆಯ, ಕನ್ಯಾ ರಾಶಿಗೆ ಆರನೆಯ, ಸಿಂಹ ರಾಶಿಗೆ ಏಳನೆಯ, ಕರ್ಕಾಟಕ ರಾಶಿಗೆ ಎಂಟನೆಯ, ಮಿಥುನ ರಾಶಿಗೆ ಒಂಭತ್ತನೆಯ, ವೃಷಭ ರಾಶಿಗೆ ಹತ್ತನೆಯ, ಮೇಷ ರಾಶಿಗೆ ಹನ್ನೊಂದನೆಯ ಮತ್ತು ಮೀನ ರಾಶಿಗೆ ಹನ್ನೆರಡನೆಯ .’ – ಆಧಾರ : ದಾತೆ ಪಂಚಾಂಗ

೪. ರಾಶಿಗಳಿಗನುಸಾರ ಶನಿ ಗ್ರಹದ ಫಲ

ಶನಿ ಸಂಚಾರದ ರಾಶಿಗಳ ಮೇಲಾಗುವ ಪರಿಣಾಮ.

ರಾಶಿ ಪಾದ ಫಲ
ಮಿಥುನ, ವೃಶ್ಚಿಕ, ಮಕರ ಸುವರ್ಣ ಚಿಂತೆ
ಕರ್ಕ, ತುಲಾ, ಮೀನ ಬೆಳ್ಳಿ ಶುಭ
ವೃಷಭ, ಕನ್ಯಾ, ಕುಂಭ ತಾಮ್ರ ಶ್ರೀಪ್ರಾಪ್ತಿ
ಮೇಷ, ಸಿಂಹ, ಧನು ಲೋಹ ಕಷ್ಟ

– ಆಧಾರ : ದಾತೆ ಪಂಚಾಂಗ

೫. ಅಶುಭ ಸ್ಥಾನಗಳು

ಸ್ವಜನ್ಮರಾಶಿಯಿಂದ ೧, ೨, ೪, ೫, ೭, ೮, ೯, ೧೨ ಈ ಸ್ಥಾನಗಳಲ್ಲಿರುವ ಶನಿ ಗ್ರಹ ಪೀಡೆಯನ್ನು ನೀಡುವುದಾಗಿವೆ. ಪೀಡೆಗಳ ಪರಿಹಾರಕ್ಕಾಗಿ ಪುಣ್ಯಕಾಲದಲ್ಲಿ ಜಪ, ದಾನ, ಮತ್ತು ಪೂಜೆಯನ್ನು ಮಾಡುವುದು ಪುಣ್ಯದಾಯಕ ಮತ್ತು ಪೀಡಾಪರಿಹಾರಕವಾಗಿದೆ.

೬. ಶನಿ ಸಂಚಾರದ ಕಾಲದಲ್ಲಿ ಮಾಡಬೇಕಾದ ಸಾಧನೆ

೬ ಅ. ಶನಿಪೀಡೆ ಪರಿಹಾರಕ್ಕಾಗಿ ದಾನ

ಚಿನ್ನ, ಕಬ್ಬಿಣ, ನೀಲಮಣಿ, ಉದ್ದು, ಎಮ್ಮೆ, ಎಣ್ಣೆ, ಕಪ್ಪು ಕಂಬಳಿ, ಕಪ್ಪು ಅಥವಾ ನೀಲಿ ಹೂವು ಇವುಗಳನ್ನು ಯಥಾಶಕ್ತಿ ದಾನ ನೀಡುವುದು.

೬ ಆ. ಪೂಜೆಗಾಗಿ ಶನಿಯ ಕಬ್ಬಿಣದ ಮೂರ್ತಿಯನ್ನು ಉಪಯೋಗಿಸಬೇಕು.

೬ ಇ. ಶನಿಯ ಪೌರಾಣಿಕ ಮಂತ್ರ

ನೀಲಾಞ್ಜನಸಮಾಭಾಸಂ ರವಿಪುತ್ರಂ ಯಮಾಗ್ರಜಮ್ |
ಛಾಯಾಮಾರ್ತಣ್ಡಸಮ್ಭುತಂ ತಂ ನಮಾಮಿ ಶನೈಶ್ಚರಮ್ || – ನವಗ್ರಹಸ್ತೋತ್ರ, ಶ್ಲೋಕ ೭

ಅರ್ಥ : ಕಾಡಿಗೆಯಂತಹ ಕಪ್ಪು ದೇಹದ ಸೂರ್ಯನ ಮಗನೂ, ಯಮನ ಅಣ್ಣನೂ, ಛಾಯಾದೇವಿ ಹಾಗೂ ಸೂರ್ಯನ ಪುತ್ರನೂ ಆದ ಶನಿ ದೇವರಿಗೆ ನನ್ನ ನಮಸ್ಕಾರಗಳು.

೬ ಈ. ಜಪಸಂಖ್ಯೆ

೨೩೦೦೦

೬ ಉ. ಶನಿಯ ಕಬ್ಬಿಣದ ಮೂರ್ತಿಯ ಪೂಜೆಯ ಮತ್ತು ದಾನದ ಸಂಕಲ್ಪ

‘ಮಮ ಜನ್ಮರಾಶೇಃ ಸಕಾಶಾತ್ ಅನಿಷ್ಟಸ್ಥಾನಸ್ಥಿತಶನೇಃ ಪೀಡಾಪರಿಹಾರಾರ್ಥಮ್ ಏಕಾದಶಸ್ಥಾನವತ್ ಶುಭಫಲಪ್ರಾಪ್ತ್ಯರ್ಥಂ ಲೋಹಪ್ರತಿಮಾಯಾಂ ಶನೈಶ್‌ಚರಪೂಜನಂ ತತ್ಪ್ರೀತಿಕರಂ (ಈ ವಸ್ತುವನ್ನು) (ಟಿಪ್ಪಣಿ) ದಾನಂ ಚ ಕರಿಷ್ಯೇ |

ಅರ್ಥ : ನನ್ನ ಜಾತಕದಲ್ಲಿ ಅನಿಷ್ಟ ಸ್ಥಾನದಲ್ಲಿರುವ ಶನಿಯ ಪೀಡೆಯು ದೂರವಾಗಬೇಕು ಹಾಗೂ ಅವನು ಹನ್ನೊಂದನೇ ಸ್ಥಾನದಲ್ಲಿರುವಂತೆ ಶುಭ ಫಲವನ್ನು ನೀಡುವವನಾಗಬೇಕು, ಇದಕ್ಕಾಗಿ ಕಬ್ಬಿಣದ ಶನಿಯ ಮೂರ್ತಿಯ ಪೂಜೆ ಹಾಗೂ ಶನಿದೇವರು ಪ್ರಸನ್ನನಾಗಬೇಕೆಂದು, ‘ಈ ವಸ್ತು’ವಿನ ದಾನ ಮಾಡುತ್ತೇನೆ.

ಟಿಪ್ಪಣಿ – ‘ಈ ವಸ್ತು’, ಈ ಸ್ಥಾನದಲ್ಲಿ ಯಾವ ವಸ್ತುವಿನ ದಾನ ಮಾಡುವುದಿದೆಯೋ, ಆ ವಸ್ತುವಿನ ಹೆಸರು ತೆಗೆದುಕೊಳ್ಳಬೇಕು.

ಧ್ಯಾನ

ಅಹೋ ಸೌರಾಷ್ಟ್ರಸಞ್ಜಾತ ಛಾಯಾಪುತ್ರ ಚತುರ್ಭುಜ |
ಕೃಷ್ಣವರ್ಣಾರ್ಕಗೋತ್ರೀಯ ಬಾಣಹಸ್ತ ಧನುರ್ಧರ ||
ತ್ರಿಶೂಲಿಶ್ಚ ಸಮಾಗಚ್ಛ ವರದೋ ಗೃಧ್ರವಾಹನ |
ಪ್ರಜಾಪತೇ ತು ಸಂಪೂಜ್ಯಃ ಸರೋಜೇ ಪಶ್ಚಿಮೇ ದಲೇ ||

ಅರ್ಥ : ಶನಿದೇವನು ಸೌರಾಷ್ಟ್ರದೇಶದಲ್ಲಿ ಅವತಾರ ಪಡೆದನು. ಅವನು ಸೂರ್ಯ ಹಾಗೂ ಛಾಯಾದೇವಿ ಇವರ ಪುತ್ರನಾಗಿರುವನು. ಅವನಿಗೆ ನಾಲ್ಕು ಕೈಗಳಿವೆ. ಅವನ ಬಣ್ಣ ಕಪ್ಪು ಇದೆ. ಅವನ ಒಂದು ಕೈಯಲ್ಲಿ ಧನುಷ್ಯ, ಒಂದು ಕೈಯಲ್ಲಿ ಬಾಣ ಹಾಗೂ ಒಂದು ಕೈಯಲ್ಲಿ ತ್ರಿಶೂಲವಿದೆ. ನಾಲ್ಕನೆ ಕೈ ಆಶೀರ್ವಾದ ನೀಡುವ ಕೈಯಾಗಿದೆ. ‘ರಣಹದ್ದು’ ಅವನ ವಾಹನವಾಗಿದೆ. ಅವನು ಎಲ್ಲ ಪ್ರಜೆಗಳ ಪಾಲನಕರ್ತಾ ಇರುವನು. ನವಗ್ರಹಗಳ ಕಮಲದಲ್ಲಿ ಅವನ ಸ್ಥಾಪನೆಯನ್ನು ಹಿಂದಿನ ಪಕಳೆಯ ಸ್ಥಳದಲ್ಲಿ ಮಾಡಲಾಗುತ್ತದೆ. ಇಂತಹ ಶನಿದೇವನ ಆರಾಧನೆಯನ್ನು ಮಾಡಬೇಕು.

ದಾನದ ಶ್ಲೋಕ

ಶನೈಶ್ಚರಪ್ರೀತಿಕರಂ ದಾನಂ ಪೀಡಾನಿವಾರಕಮ್ |
ಸರ್ವಾಪತ್ತಿವಿನಾಶಾಯ ದ್ವಿಜಾಗ್ರ್ಯಾಯ ದದಾಮ್ಯಹಮ್ ||

ಅರ್ಥ : ಶನಿದೇವನಿಗೆ ಪ್ರಿಯವಾದಂತಹ ದಾನವನ್ನು ಮಾಡಿದಾಗ ತೊಂದರೆಗಳ ಹಾಗೂ ಎಲ್ಲ ಸಂಕಟಗಳ ನಿವಾರಣೆಯಾಗುತ್ತದೆ. ಇಂತಹ ದಾನವನ್ನು ನಾನು ಶ್ರೇಷ್ಠನಾದಂತಹ ಬ್ರಾಹ್ಮಣನಿಗೆ ನೀಡುತ್ತಿದ್ದೇನೆ.

೬ ಊ. ಶನಿಸ್ತೋತ್ರ

ಕೋಣಸ್ಥ: ಪಿಙ್ಗಲೋ ಬಭ್ರು: ಕೃಷ್ಣೋ ರೌದ್ರೋಽನ್ತಕೋ ಯಮಃ ।
ಸೌರಿಃ ಶನೈಶ್‍ಚರೋ ಮನ್ದಃ ಪಿಪ್ಪಲಾದೇನ ಸಂಸ್ತುತಃ ॥

ಏತಾನಿ ದಶ ನಾಮಾನಿ ಪ್ರಾತರುತ್ಥಾಯ ಯ: ಪಠೇತ್ ।
ಶನೈಶ್‍ವರಕೃತಾ ಪೀಡಾ ನ ಕದಾಚಿತ್ ಭವಿಷ್ಯತಿ ॥

ಪಿಪ್ಪಲಾದ ಉವಾಚ । ನಮಸ್ತೇ ಕೋಣಸಂಸ್ಥಾಯ ಪಿಙ್ಗಲಾಯ ನಮೋಽಸ್ತುತೇ ।
ನಮಸ್ತೇ ಬಭ್ರುರೂಪಾಯ ಕೃಷ್ಣಾಯ ಚ ನಮೋಽಸ್ತುತೇ ॥ ೧ ॥

ನಮಸ್ತೇ ರೌದ್ರದೇಹಾಯ ನಮಸ್ತೇ ಚಾನ್ತಕಾಯ ಚ ।
ನಮಸ್ತೇ ಯಮಸಂಜ್ಞಾಯ ನಮಸ್ತೇ ಸೌರಯೇ ವಿಭೋ ॥ ೨ ॥

ನಮಸ್ತೇ ಮನ್ದಸಂಜ್ಞಾಯ ಶನೈಶ್‍ಚರ ನಮೋಽಸ್ತುತೇ ।
ಪ್ರಸಾದಂ ಕುರು ದೇವೇಶ ದೀನಸ್ಯ ಪ್ರಣತಸ್ಯ ಚ ॥ ೩ ॥

ಅರ್ಥ : ಪಿಪ್ಪಲಾದ ಎಂಬ ಹೆಸರಿನ ಋಷಿಗಳು ‘ಕೋಣಸ್ಥ, ಪಿಂಗಲ, ಬಭ್ರು, ಕೃಷ್ಣ, ರೌದ್ರ, ಅಂತಕ, ಯಮ, ಸೌರಿ, ಶನೈಶ್ಚರ ಮತ್ತು ಮಂದ’ ಈ ಹತ್ತು ಹೆಸರುಗಳಿಂದ ಶನಿದೇವನ ಸ್ತುತಿಯನ್ನು ಮಾಡಿದ್ದಾರೆ. ಈ ಹತ್ತು ಹೆಸರುಗಳನ್ನು ಬೆಳಗ್ಗೆ ಎದ್ದ ನಂತರ ಯಾರು ಹೇಳುವರೋ ಅವರಿಗೆ ಎಂದೂ ಶನಿಗ್ರಹದ ತೊಂದರೆಯಾಗಲಾರದು. ಪಿಪ್ಪಲಾದಋಷಿಗಳು ಹೇಳುತ್ತಾರೆ, ‘ಹೇ ಕೋನದಲ್ಲಿ ನಿಲ್ಲುವ ಕೋಣಸ್ಥನೇ, ಹೇ ಪಿಂಗಲ, ಹೇ ಬಭ್ರು, ಹೇ ಕೃಷ್ಣಾ, ಹೇ ರೌದ್ರ ದೇಹನೇ, ಹೇ ಅಂತಕನೇ, ಹೇ ಯಮ, ಹೇ ಸೌರೀ, ಹೇ ವಿಭೋ, ಹೇ ಮಂದ, ಹೇ ಶನಿದೇವ ನಾನು ನಿಮಗೆ ನಮಸ್ಕಾರ ಮಾಡುತ್ತೇನೆ. ನಾನು ದೀನನಾಗಿ ನಿಮಗೆ ಶರಣಾಗಿದ್ದೇನೆ. ನೀವು ನನ್ನ ಮೇಲೆ ಪ್ರಸನ್ನರಾಗಿ’.

ಈ ಸ್ತೋತ್ರವನ್ನು ನಿತ್ಯವೂ ಪ್ರಾತಃಕಾಲದಲ್ಲಿ ಪಠಿಸಬೇಕು.

೭. ಸಾಡೇಸಾತ್ (ಏಳುವರೆ ಶನಿ) ಇರುವವರು ಈ ಉಪಾಯಗಳನ್ನು ಮಾಡಿ

ಅ. ಯಾರಿಗೆ ಶನಿದೋಷ ಇದೆಯೊ, ಅವರು ಪ್ರತಿದಿನ ಶನಿಸ್ತೋತ್ರವನ್ನು ಪಠಿಸಬೇಕು.

ಆ. ಶನಿದೋಷನಿವಾರಣೆಗಾಗಿ ಜಪ, ದಾನ ಮತ್ತು ಪೂಜೆಯನ್ನು ಅವಶ್ಯ ಮಾಡಬೇಕು.

ಇ. ಪೀಡಾಪರಿಹಾರಕ್ಕಾಗಿ ಶನಿವಾರ ಅಂಭ್ಯಂಗ ಸ್ನಾನ ಮಾಡಬೇಕು. ಶನಿವಾರ ಶನಿಯ ದರ್ಶನ ಪಡೆದು ಶನಿದೇವರಿಗೆ ಉದ್ದು ಮತ್ತು ಉಪ್ಪನ್ನು ಅರ್ಪಿಸಬೇಕು. ತೈಲಾಭಿಷೇಕ ಮಾಡಬೇಕು. ಕಪ್ಪು ಹೂವುಗಳನ್ನು ಅರ್ಪಿಸಿದರೆ ಪೀಡೆಯ ಪರಿಹಾರವಾಗುವುದು. ಕಪ್ಪು ಹೂವುಗಳು ಸಿಗದಿದ್ದರೆ ನೀಲಿ ಬಣ್ಣದ ಉದಾ. ಶಂಖಪುಷ್ಪಿ (ಗೋಕರ್ಣಿ), ಕೃಷ್ಣಕಮಲ, ಅಸ್ಟರ ಇತ್ಯಾದಿ ಹೂವುಗಳನ್ನು ಅರ್ಪಿಸಬೇಕು.

ಈ. ಸಾಧ್ಯವಾದರೆ ಶನಿವಾರ ಏಕಭುಕ್ತರಾಗಿರಬೇಕು (ಒಪ್ಪೊತ್ತಿನ ಊಟ ಮಾಡುವುದು)

ಉ. ನೀಲಮಣಿಯ ಉಂಗುರವನ್ನು ಧರಿಸಬೇಕು.’

– ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ್ಯ ಫಲಿತ ವಿಶಾರದೆ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ (೨೮.೧೨.೨೦೨೨)

ನಿತ್ಯ ಸಾಧನೆಯಿಂದ ಜೀವನದಲ್ಲಿ ಸಮತೋಲನ ಪಡೆದುಕೊಳ್ಳಲು ಸಾಧ್ಯವಿದೆ. ಅದು ಹೇಗೆ ಎಂದು ತಿಳಿದುಕೊಳ್ಳಲು, ಇಂದೇ ‘ಸಾಧನಾ ಸಂವಾದ’ ಸತ್ಸಂಗದಲ್ಲಿ ಭಾಗವಹಿಸಿ – ಮನೆಯಿಂದಲೇ ಆನ್‌ಲೈನ್ ಭಾಗವಹಿಸಲು ಇಲ್ಲಿ ಕ್ಲಿಕ್ ಮಾಡಿ !

Leave a Comment