ಸಾಧನಾವೃದ್ಧಿ ಸತ್ಸಂಗ (6)

ನಾವು ಈ ಮೊದಲಿನ ಕೆಲವು ಲೇಖನಗಳಲ್ಲಿ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ವಿಷಯದಲ್ಲಿ ಸವಿಸ್ತಾರವಾದ ಮಾಹಿತಿಯನ್ನು ಪಡೆದುಕೊಂಡಿದ್ದೆವು. ನಮ್ಮ ಆಧ್ಯಾತ್ಮಿಕ ಪ್ರಗತಿಯಾಗಲು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯನ್ನು ಪರಿಣಾಮಕಾರಿಯಾಗಿ ನಡೆಸುವುದು ಅತ್ಯಂತ ಮಹತ್ವದ್ದಾಗಿದೆ. ಸ್ವಭಾವದೋಷಗಳ ನಿರ್ಮೂಲನವಾಗದಿದ್ದರೆ ಸಾಧನೆಯನ್ನು ಮಾಡಿ ಪಡೆದ ಆಧ್ಯಾತ್ಮಿಕ ಶಕ್ತಿಯು ಸ್ವಭಾವದೋಷಗಳಿಂದಾದ ತಪ್ಪುಗಳ ಪರಿಮಾರ್ಜನೆಯಲ್ಲಿ ಖರ್ಚಾಗುತ್ತದೆ. ಹಾಗಾಗಿ ಅಪೇಕ್ಷಿತವಾದಂತಹ ಆಧ್ಯಾತ್ಮಿಕ ಪ್ರಗತಿಯಾಗುವುದಿಲ್ಲ. ಕೇವಲ ಅಧ್ಯಾತ್ಮದ ದೃಷ್ಟಿಯಿಂದ ಮಾತ್ರವಲ್ಲ, ಒಂದು ಉತ್ತಮ ಕೌಟುಂಬಿಕ, ವ್ಯಾವಹಾರಿಕ ಜೀವನವನ್ನು ಸಾಗಿಸಲು, ಸ್ವಂತ ವ್ಯಕ್ತಿತ್ವದ ವಿಕಾಸಕ್ಕಾಗಿ ಸ್ವಭಾವದೋಷಗಳ ನಿರ್ಮೂಲನೆಯಾಗುವುದು ಆವಶ್ಯವಾಗಿದೆ.

ಅ. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯಲ್ಲಿ ಮಾಡಬೇಕಾದ ಪ್ರಯತ್ನಗಳು

ನಾವು ಈ ಪ್ರಕ್ರಿಯೆಯನ್ನು ಮೊದಲಿನ ಲೇಖನಗಳಲ್ಲಿ ಕಲಿತುಕೊಂಡಿದ್ದೇವೆ. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯಲ್ಲಿ ನಾವು ಅಂತರ್ಮುಖರಾಗಿದ್ದು ಸ್ವಂತ ವರ್ತನೆಯ, ಮನಸ್ಸಿನಲ್ಲಿರುವ ವಿಚಾರಗಳ ನಿರೀಕ್ಷಣೆಯನ್ನು ಮಾಡಬೇಕಾಗಿದೆ. ನಮ್ಮಿಂದಾದ ತಪ್ಪುಗಳು, ನಮ್ಮ ಮನಸ್ಸಿನಲ್ಲಿ ಬರುವ ಅಯೋಗ್ಯ ವಿಚಾರಗಳು, ಉಮ್ಮಳಿಸುವ ಅಯೋಗ್ಯ ಪ್ರತಿಕ್ರಿಯೆಗಳನ್ನು ನೋಂದಣಿ ಮಾಡಿಡಬೇಕು. ಪ್ರಸಂಗಗಳ ಅಭ್ಯಾಸವನ್ನು ಮಾಡಿ ತಖ್ತೆಯಲ್ಲಿ ತಪ್ಪುಗಳನ್ನು ಬರೆದು ಅವುಗಳಿಗೆ ಅ-ಆ-ಇ ಪದ್ಧತಿಯಿಂದ ಸ್ವಯಂಸೂಚನೆಯನ್ನು ನೀಡಬೇಕಾಗಿರುತ್ತದೆ. ನಮ್ಮಲ್ಲಿ ಪ್ರಬಲವಾಗಿರುವ ೩ ಸ್ವಭಾವದೋಷಗಳನ್ನು ಆರಿಸಿ ಅವುಗಳಿಗೆ ಪ್ರತಿದಿನ ಕಡಿಮೆ ಅಂದರೆ ೫ ಸ್ವಯಂಸೂಚನೆಗಳ ಸತ್ರಗಳನ್ನು ಮಾಡಲಿಕ್ಕಿರುತ್ತದೆ ಮತ್ತು ಕೃತಿಯ ಸ್ತರದಲ್ಲಿ ನಮ್ಮಲ್ಲಿ ಬದಲಾವಣೆ ಮಾಡಬೇಕಾಗಿದೆ. ನಾವು ಈ ವಾರವಿಡೀ ನಮ್ಮಿಂದಾದ ತಪ್ಪುಗಳನ್ನು ತಖ್ತೆಯಲ್ಲಿ ಹೇಗೆ ಬರೆಯಬೇಕು, ಅದನ್ನು ಓದಿ ತೋರಿಸಬಹುದು. ಆ ತಪ್ಪು ಮತ್ತೊಮ್ಮೆ ಆಗಬಾರದು; ಹಾಗಾಗಿ ನಾವು ಕೃತಿಯ ಸ್ತರದಲ್ಲಿ ಏನೇನು ಪ್ರಯತ್ನ ಮಾಡಬೇಕಾಗಿದೆ ಅಥವಾ ಮಾಡಿದ್ದೀರಿ ಅದನ್ನು ಹೇಳಬಹುದು. ಪ್ರಕ್ರಿಯೆಯ ಅಡಚಣೆಗಳನ್ನು ವಿಚಾರಿಸಬಹುದು.

ಆ. ವಾರದಲ್ಲಿ ನಡೆದ ಪ್ರಸಂಗ, ತಪ್ಪು ಹೇಳಿ

ನಾವೆಲ್ಲರೂ ನಮ್ಮ ನಮ್ಮ ಪರಿಯಿಂದ ಈ ಪ್ರಕ್ರಿಯೆಯನ್ನು ನಡೆಸಲು ಪ್ರಯತ್ನಿಸುತ್ತಿದ್ದೇವೆ. ಆ ದೃಷ್ಟಿಯಿಂದ ನಮಗೆ ಈ ಪ್ರಕ್ರಿಯೆಯ ಯಾವುದಾದರೊಂದು ಹಂತವು ಒಪ್ಪಿಗೆಯಾಗುತ್ತಿಲ್ಲ, ಯಾವುದಾದರೊಂದು ಪ್ರಸಂಗವನ್ನು ಹೇಗೆ ಎದುರಿಸುವುದು? ದೃಷ್ಟಿಕೋನವನ್ನು ಹೇಗೆ ಇಟ್ಟುಕೊಳ್ಳಬೇಕು? ಇದೆಲ್ಲ ಗಮನಕ್ಕೆ ಬರುತ್ತಿಲ್ಲ ಎಂದಾದರೆ ತಾವು ಅದನ್ನು ಮನಮುಕ್ತವಾಗಿ ವಿಚಾರಿಸಬಹುದು. ಈ ವಾರದಲ್ಲಿ ಯಾವುದಾದರೊಂದು ತಪ್ಪಿಗೆ ಬರೆದ ಸ್ವಯಂಸೂಚನೆಯು ಯೋಗ್ಯವಿದೆಯೋ ಇಲ್ಲವೋ ಅದನ್ನು ಪರಿಶೀಲಿಸಿಕೊಳ್ಳ ಬೇಕಿದ್ದರೆ ಅದನ್ನು ಸಹ ತಾವು ಹೇಳಬಹುದು. ನಾವು ಎಷ್ಟು ಮನಮುಕ್ತವಾಗಿ ಪಾಲ್ಗೊಳ್ಳುತ್ತೇವೆಯೋ ಅಷ್ಟು ನಮಗೆ ಆಧ್ಯಾತ್ಮಿಕ ಸ್ತರದಲ್ಲಿ ಸತ್ಸಂಗದಲ್ಲಿ ಸೂಕ್ಷ್ಮ ರೂಪದಿಂದ ಕಾರ್ಯನಿರತವಾಗಿರುವ ಗುರುತತ್ತ್ವದ ಲಾಭವಾಗುತ್ತದೆ. ನಮ್ಮ ಪ್ರಯತ್ನಗಳಿಗೆ ವೇಗವು ಸಿಗಲಿದೆ. ಪ್ರತಿಯೊಬ್ಬರಿಂದ ಹೆಚ್ಚು ಕಡಿಮೆ ಪ್ರಮಾಣದಲ್ಲಿ ತಪ್ಪುಗಳು ಆಗುತ್ತಿರುತ್ತವೆ. ಹಾಗಾಗಿ ತಪ್ಪುಗಳ ಬಗ್ಗೆ ಹೆದರಿಕೆಯನ್ನು ಇಟ್ಟುಕೊಳ್ಳುವುದು ಬೇಡ. ತಪ್ಪು ಆಗುವುದಕ್ಕಿಂತ ತಪ್ಪುಗಳು ಗಮನಕ್ಕೆ ಬರುವುದು ಮತ್ತು ಅದನ್ನು ಸುಧಾರಿಸಲು ಪ್ರಯತ್ನಿಸುವುದು ಹೆಚ್ಚು ಮಹತ್ವದ್ದಾಗಿದೆ.

(ಈ ವಾರದಲ್ಲಿ ತಮ್ಮಿಂದ ಏನೆಲ್ಲ ತಪ್ಪಾಯಿತು, ಯಾವ ಪ್ರಸಂಗದಲ್ಲಿ ತಮಗೆ ಒತ್ತಡ (ಉದ್ವಿಗ್ನತೆ) ಅನಿಸಿತು ತಿಳಿಸಬಹುದು)

ಇ. ಸ್ವಭಾವದೋಷ ನಿರ್ಮೂಲನ ತಖ್ತೆಯ ಮಾದರಿ (ನಮೂನೆ)

ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವದ ಹಂತ ಯಾವುದು? ಅದೇನೆಂದರೆ ನಮ್ಮಿಂದಾಗುವ ತಪ್ಪುಗಳ ನಿರೀಕ್ಷಣೆಯನ್ನು ಮಾಡಿ ಆ ತಪ್ಪನ್ನು ತಖ್ತೆಯಲ್ಲಿ ಬರೆಯುವುದು. ತಖ್ತೆ ಬರೆಯುವಾಗ ನಮಗೆ ಮುಖ್ಯವಾಗಿ ಅಯೋಗ್ಯ ಕೃತಿ / ಪ್ರಸಂಗ, ಕಾಲಾವಧಿ, ಸ್ವಭಾವದೋಷ, ಹಾಗೂ ಯೋಗ್ಯ ಉಪಾಯ / ಸ್ವಯಂಸೂಚನೆಯನ್ನು ಬರೆಯಲಿಕ್ಕಿರುತ್ತದೆ.

ಅಯೋಗ್ಯ ಕೃತಿ / ಪ್ರಸಂಗ ಕಾಲಾವಧಿ ಸ್ವಭಾವದೋಷ ಯೋಗ್ಯ ಉಪಾಯ / ಸ್ವಯಂಸೂಚನೆಯನ್ನು

ಈ. ತಖ್ತೆಯನ್ನು ಬರೆಯುವಾಗ ಆಗುವಂತಹ ಸಾಮಾನ್ಯ ತಪ್ಪುಗಳು

ತಖ್ತೆಯನ್ನು ಬರೆಯುವಾಗ ಕೆಲವರಿಂದ ಕೆಲವು ಸಾಮಾನ್ಯ ತಪ್ಪುಗಳಾಗುತ್ತವೆ. ಈ ತಪ್ಪುಗಳು ಯಾವುವು ಎಂದು ನಾವೀಗ ತಿಳಿದುಕೊಳ್ಳೋಣ

ಕೆಲವು ಜನರು ತಖ್ತೆಯಲ್ಲಿ ತಮ್ಮಿಂದಾದ ತಪ್ಪುಗಳನ್ನು ಮಾತ್ರ ಬರೆಯುತ್ತಾರೆ, ಆದರೆ ಅದಕ್ಕೆ ಸ್ವಯಂಸೂಚನೆಯನ್ನು ಬರೆಯುವುದಿಲ್ಲ. ಹೀಗೆ ಮಾಡುವುದರಿಂದ ಪ್ರಕ್ರಿಯೆಯಿಂದ ಅಪೇಕ್ಷಿತ ಲಾಭವಾಗುವುದಿಲ್ಲ. ಇದನ್ನು ನಾವು ಗಮನದಲ್ಲಿಟ್ಟುಕೊಳ್ಳಬೇಕು. ನಾವು ಕೇವಲ ತಪ್ಪುಗಳನ್ನು ಮಾತ್ರ ಬರೆದರೆ ನಮ್ಮ ಮನಸ್ಸಿನಲ್ಲಿ ಏನೇನು ತಪ್ಪುಗಳಾಗುತ್ತವೆ ಇದರ ಸಂಸ್ಕಾರವಾಗುತ್ತದೆ; ಆದರೆ ತಪ್ಪುಗಳ ಮುಂದೆ ಸ್ವಯಂಸೂಚನೆಯನ್ನು ಬರೆದರೆ ಆ ತಪ್ಪನ್ನು ತಡೆಗಟ್ಟಲು ಏನೇನು ಪರಿಹಾರೋಪಾಯ ಮಾಡಬೇಕಾಗಿದೆ ಎಂಬ ಸಂಸ್ಕಾರವೂ ನಮ್ಮ ಮನಸ್ಸಿನಲ್ಲಾಗುವುದು. ತಪ್ಪುಗಳನ್ನು ಬರೆಯುವುದಕ್ಕೆ ಎಷ್ಟು ಮಹತ್ವವಿದೆಯೋ ಅಷ್ಟೇ ಮಹತ್ವವು ಸ್ವಯಂಸೂಚನೆಯನ್ನು ಬರೆಯುವುದಕ್ಕೆ ಸಹ ಇದೆ. ಸ್ವಯಂಸೂಚನೆಯನ್ನು ಬರೆದೇ ನಾವು ಚಿಕ್ಕ ಚಿಕ್ಕ ತಪ್ಪುಗಳನ್ನು ಸರಿಪಡಿಸಿಕೊಳ್ಳಬಹುದು.

ಸ್ವಯಂಸೂಚನೆಯನ್ನು ಬರೆದಾಗಲೇ, ನಮಗೆ ಸ್ವಭಾವದೋಷಗಳನ್ನು ಎದುರಿಸಿ ಯಾವುದಾದರೊಂದು ಪ್ರಸಂಗದಲ್ಲಿ ಯೋಗ್ಯ ಕೃತಿ ಅಥವಾ ವಿಚಾರ ಮಾಡುವ ಬಗ್ಗೆ ಸ್ಪಷ್ಟ ದಿಶೆಯು ಸಿಗಬಲ್ಲದು. ತಪ್ಪು ಬರೆಯುವುದರಿಂದ ತಪ್ಪುಗಳ ಅರಿವಾಗುತ್ತದೆ. ಆದರೆ ಸ್ವಯಂಸೂಚನೆಯನ್ನು ಬರೆದರೆ ಯಾವುದಾದರೊಂದು ಪ್ರಸಂಗದಲ್ಲಿ ಹೇಗೆ ವರ್ತಿಸಬೇಕಾಗಿತ್ತು? ಯೋಗ್ಯ ವಿಚಾರ ಹೇಗಿರಬೇಕಿತ್ತು? ಎಂಬುದು ಗಮನಕ್ಕೆ ಬರುತ್ತದೆ. ನಮ್ಮ ಮನಸ್ಸಿಗೆ ಉತ್ತಮ ತಿರುವು ಸಿಗುತ್ತದೆ. ನಾವು ನಮ್ಮ ಮನಸ್ಸನ್ನು ‘ಸುಮನ’ ಅಂದರೆ ಆನಂದಿತವಾದ ಹೂವಿನಂತೆ ನಿರ್ಮಲಗೊಳಿಸಿ ದೇವರ ಚರಣಗಳಿಗೆ ಅರ್ಪಿಸಬೇಕು. ಹೂವಿನ ಜೀವನ ಅತ್ಯಂತ ಕಡಿಮೆ ಕಾಲಾವಧಿಯದ್ದಾಗಿರುತ್ತದೆ. ಆದರೆ ಆ ಹೂವು ಆನಂದಿಯಾಗಿರುತ್ತದೆ. ತನ್ನ ಅಸ್ತಿತ್ವದಿಂದ ಇತರರಿಗೆ ಆನಂದ ನೀಡುತ್ತದೆ. ನಾವು ಕೂಡ ಅದೇ ರೀತಿ ಆನಂದಿ ಹೂವಿನಂತೆ ಆಗಬೇಕು.

ಸ್ವಯಂಸೂಚನೆಯ ಮೂಲಕ ಮನಸ್ಸಿಗೆ ಸಕಾರಾತ್ಮಕ ದಿಶೆಯು ಸಿಗುತ್ತದೆ. ಸ್ವಯಂಸೂಚನೆಯಿಂದ ಮನಸ್ಸಿನಲ್ಲಿ ಯೋಗ್ಯ ಸಂಸ್ಕಾರವಾದರೆ ಮುಂದೆ ತಪ್ಪುಗಳಾಗುವ ಮೊದಲೇ ನಮ್ಮ ಗಮನಕ್ಕೆ ಬಂದು ಅದು ತಡೆಗಟ್ಟಲ್ಪಡುತ್ತದೆ. ಕೊನೆಗೆ ಯೋಗ್ಯ ಕೃತಿ ಮಾಡುವ ಸಂಸ್ಕಾರ ಮನಸ್ಸಿನ ಮೇಲಾಗುತ್ತದೆ. ಹಾಗಾಗಿ ಪ್ರತಿಯೊಂದು ತಪ್ಪಿಗೆ ನಾವು ಸ್ವಯಂಸೂಚನೆಯನ್ನು ಬರೆಯೋಣ. ಯಾರು ಬರೆಯುತ್ತಿಲ್ಲವೋ ಅವರು ಇಂದಿನಿಂದ ಈ ಪ್ರಕ್ರಿಯೆಯನ್ನು ಪ್ರಾರಂಭಿಸೋಣ. ನಮಗೆ ಸ್ವಯಂಸೂಚನೆಯನ್ನು ತಯಾರಿಸುವಾಗ ಏನಾದರೂ ಅಡಚಣೆ ಬಂದರೆ ಅಥವಾ ಸಂದೇಹ ಬಂದಲ್ಲಿ ನೀವು ಯಾವಾಗ ಬೇಕಾದರೂ ನಮ್ಮನ್ನು ಸಂಪರ್ಕಿಸಿ ವಿಚಾರಿಸಿಕೊಳ್ಳಬಹುದು.

ತಖ್ತೆಯನ್ನು ಬರೆಯುವ ಸಂದರ್ಭದಲ್ಲಾಗುವ ಇನ್ನೊಂದು ಸಾಮಾನ್ಯ ತಪ್ಪು ಏನೆಂದರೆ, ‘ಈಗ ನನ್ನ ತಪ್ಪುಗಳು ಗಮನಕ್ಕೆ ಬರುತ್ತಿವೆ ಮತ್ತು ನನ್ನಲ್ಲಿ ಬದಲಾವಣೆಯಾಗುತ್ತಿದೆ’ ಎಂದು ನಾವೇ ಸ್ವತಃ ಮನಸ್ಸಿನಿಂದ ನಿರ್ಧರಿಸಿ ತಖ್ತೆ ಬರೆಯಲು ನಿರ್ಲಕ್ಷ ಮಾಡುವುದು ಅಥವಾ ಅದಕ್ಕೆ ಹೆಚ್ಚು ಮಹತ್ವ ನೀಡದಿರುವುದು! ಹೀಗೆ ಮಾಡುವುದು ಸಹ ಅಯೋಗ್ಯವಾಗಿದೆ. ನಿಯಮಿತವಾಗಿ ತಖ್ತೆಯನ್ನು ಬರೆಯುವುದಕ್ಕೆ ಮಹತ್ವವಿದೆ. ಯಾರು ನಿಯಮಿತವಾಗಿ ತಖ್ತೆಯನ್ನು ಬರೆಯುತ್ತಾರೆಯೋ ಅವರಲ್ಲಿ ಅಡಚಣೆಗಳಿಗೆ ಅಥವಾ ಸಮಸ್ಯೆಗಳಲ್ಲಿ ಸಕಾರಾತ್ಮಕವಾಗಿದ್ದು ಎದುರಿಸುವ ಕ್ಷಮತೆಯು ನಿರ್ಮಾಣವಾಗುತ್ತದೆ. ಈ ಪ್ರಕ್ರಿಯೆಗಾಗಿ ಸಾಕ್ಷಾತ್ ಪರಾತ್ಪರ ಗುರು ಡಾ.ಆಠವಲೆಯವರ ಸಂಕಲ್ಪವು ಕಾರ್ಯನಿರತವಾಗಿದೆ. ಈ ಪ್ರಕ್ರಿಯೆಯನ್ನು ಶಾಸ್ತ್ರೀಯ ಪದ್ಧತಿಯಿಂದ ನಡೆಸಿದರೆ ಶ್ರೀಗುರುಗಳೇ ನಮ್ಮ ಜನ್ಮಜನ್ಮಾಂತರದ ಸ್ವಭಾವದೋಷಗಳ ಸಂಸ್ಕಾರವನ್ನು ನಾಶಗೊಳಿಸಲಿದ್ದಾರೆ.

ಆದರೆ ನಾವು ನಮ್ಮ ಮನಸ್ಸಿನಿಂದ ಕೆಲವು ಕೃತಿಗಳನ್ನು ಮಾಡುವುದನ್ನು ಬಿಟ್ಟುಬಿಟ್ಟರೆ ಅಥವಾ ನಿರ್ಲಕ್ಷ ಮಾಡಿದರೆ ಪ್ರಕ್ರಿಯೆಯ ಪೂರ್ಣ ಲಾಭ ಪಡೆಯವುದರಿಂದ ವಂಚಿತರಾಗುವೆವು. ನೋಡಿ, ನಾವೇನಾದರೂ ಅನಾರೋಗ್ಯಪೀಡಿತರಾದರೆ ಡಾಕ್ಟರರು ನಮಗೆ ಕೆಲವು ಔಷಧಿಗಳ ಮಾತ್ರೆಗಳನ್ನು ನೀಡಿದರೆ ನಾವು ಅದನ್ನು ಸೇವಿಸುತ್ತೇವೆ ಅಲ್ಲವೇ! ಅಥವಾ ನಮ್ಮ ಮನಸ್ಸಿನಿಂದಲೇ ಇಂತಿಂತಹ ಒಂದು ಔಷಧಿಯ ಮಾತ್ರೆಯನ್ನು ಪೂರ್ಣ ತೆಗೆದುಕೊಳ್ಳುವ ಬದಲು ಅರ್ಧವೇ ತೆಗೆದುಕೊಳ್ಳೋಣ ಎಂದು ವಿಚಾರ ಮಾಡುತ್ತೇವೇಯೇ? ಹಾಗೆ ನಾವು ಮಾಡುವುದಿಲ್ಲ. ಸದ್ಯ ಅನಾರೋಗ್ಯದ ಬಗ್ಗೆ ನಾವು ಡಾಕ್ಟರರು ಹೇಳಿದುದನ್ನು ಪೂರ್ಣವಾಗಿ ಕೇಳುತ್ತೇವೆ. ಹೀಗಿರುವಾಗ ಇಲ್ಲಿ ಭವರೋಗದ ಅಂದರೆ ಜನ್ಮ-ಮೃತ್ಯುವಿನ ಚಕ್ರದಲ್ಲಿ ಸಿಲುಕುವಂತಹ ಸಮಸ್ಯೆಯಿದೆ! ಈ ಭವರೋಗದಿಂದ ಪಾರಾಗಬೇಕಾದರೆ ನಾವು ಶ್ರೀಗುರುಗಳು ಹೇಳಿದ ಅಂಶಗಳನ್ನು ಜಿಗುಟುತನದಿಂದ ಆಜ್ಞಾಪಾಲನೆ ಎಂದು ಮಾಡಲು ಪ್ರಯತ್ನಿಸೋಣ. ಏಕೆಂದರೆ ಕೊನೆಗೆ ಶ್ರೀಗುರುಗಳು ನಮ್ಮನ್ನು ಉದ್ಧರಿಸಲಿದ್ದಾರೆ.

ಉ. ತಖ್ತೆಯನ್ನು ಉತ್ತಮವಾಗಿ ಬರೆಯಲು ಮಾಡಬೇಕಾದ ಪ್ರಯತ್ನಗಳು

ಅನೇಕ ಸಲ ಏನಾಗುತ್ತದೆ ಎಂದರೆ ಹೆಚ್ಚಿನ ಜನರು ರಾತ್ರಿಯ ಸಮಯದಲ್ಲಿ ಸ್ವಭಾವದೋಷ ನಿರ್ಮೂಲನ ತಖ್ತೆಯನ್ನು ಬರೆಯಲು ಕುಳಿತುಕೊಳ್ಳುತ್ತಾರೆ ಮತ್ತು ದಿನವಿಡೀ ತಮ್ಮಿಂದ ಏನೇನು ತಪ್ಪಾಯಿತು ಅದನ್ನು ನೆನಪಿಸಿಕೊಳ್ಳುತ್ತಾರೆ ಮತ್ತು ಅದನ್ನು ತಖ್ತೆಯಲ್ಲಿ ಬರೆಯುತ್ತಾರೆ. ಇಂತಹ ಸಮಯದಲ್ಲಿ ಹೆಚ್ಚಾಗಿ ನಮಗೆ ನಮ್ಮಿಂದ ಏನೇನು ತಪ್ಪುಗಳಾದವು ಇದು ನೆನಪಾಗುವುದಿಲ್ಲ. ದಿನವಿಡೀ ಪರಿಶ್ರಮ ಮಾಡಿದ ಶರೀರ ಮತ್ತು ಮನಸ್ಸು ರಾತ್ರಿ ದಣಿದಿರುತ್ತವೆ. ಹಾಗಾಗಿ ಮನಸ್ಸಿನಲ್ಲಿ ಬಂದ ಅಯೋಗ್ಯ ಪ್ರತಿಕ್ರಿಯೆಗಳು ಗಮನದಲ್ಲಿ ಉಳಿಯುವುದಿಲ್ಲ ಮತ್ತು ಅದನ್ನು ನೆನಪಿಸಿಕೊಳ್ಳಲು ಬಹಳ ಸಮಯ ನೀಡಬೇಕಾಗುತ್ತದೆ. ಮನಸ್ಸಿನ ನಿರೀಕ್ಷಣೆ ಕಮ್ಮಿ ಬೀಳುವುದರಿಂದ ಪ್ರಕ್ರಿಯೆಗೆ ವೇಗ ಬರುವುದಿಲ್ಲ.

ಆದರ್ಶವೇನು? ತಪ್ಪು ಆದುದು ಗಮನಕ್ಕೆ ಬಂದ ನಂತರ ಕೂಡಲೇ ಅದರ ಚಿಂತನ ಮಾಡಿ ಆ ತಪ್ಪನ್ನು ತಖ್ತೆಯಲ್ಲಿ ಬರೆಯುವುದು ಆದರೆ ಕೆಲವೊಮ್ಮೆ ತತ್ಪರತೆಯಿಂದ ಬರೆಯಲು ಸಾಧ್ಯವಾಗುವುದಿಲ್ಲ. ಇಂತಹ ಸಮಯದಲ್ಲಿ ಏನು ಮಾಡಬಹುದು ಅಂದರೆ ದಿನದಲ್ಲಿ ಕಡಿಮೆ ಪಕ್ಷ ೫ ಸಲ ನಮ್ಮ ಮನಸ್ಸಿನ ನಿರೀಕ್ಷಣೆಯನ್ನು ಮಾಡಬೇಕು.

ನಮ್ಮ ಮನಸ್ಸಿನ ಸ್ಥಿತಿ ಹೇಗಿತ್ತು, ನಮ್ಮಿಂದ ಏನೇನು ತಪ್ಪುಗಳಾದವು, ಯಾರ ವಿಷಯದಲ್ಲಿ ಯಾವ ರೀತಿಯ ಪ್ರತಿಕ್ರಿಯೆಗಳು ನಮ್ಮ ಮನಸ್ಸಿನಲ್ಲಿ ಮೂಡಿದವು ಯಾವ ನಕಾರಾತ್ಮಕ ಅಥವಾ ಅನಾವಶ್ಯಕ ವಿಚಾರಗಳು ಮನಸ್ಸಿಗೆ ಬಂದವು

ಇದರ ನಿರೀಕ್ಷಣೆ ಮಾಡುವುದು ಅದನ್ನು ನೋಂದಣಿ ಮಾಡಿಟ್ಟುಕೊಳ್ಳಬೇಕು. ತಪ್ಪು, ಪ್ರತಿಕ್ರಿಯೆಗಳನ್ನು ಬರೆಯಲು ನಾವು ಒಂದು ಚಿಕ್ಕ ನೋಂದಣಿಪುಸ್ತಕ (ಡೈರಿ)ವನ್ನು ನಮ್ಮೊಂದಿಗೆ ಇಟ್ಟುಕೊಳ್ಳಬೇಕು. ತಮ್ಮ ಸಂಚಾರಿವಾಣಿಯಲ್ಲಿ ಅಂದರೆ ಮೊಬೈಲ್ ನಲ್ಲಿ ನೋಂದಣಿ ಮಾಡಲು ಸುಲಭ ಅನಿಸುತ್ತಿದ್ದಲ್ಲಿ ನೀವು ಹಾಗೆ ಸಹ ಮಾಡಬಹುದು. ಆದರೆ ಮನಸ್ಸಿನ ವಿಚಾರಗಳ ನೋಂದಣಿ ಮಾಡಿಡುವುದು ಮಹತ್ವದ್ದಾಗಿದೆ.

ದಿನವಿಡೀ ೨-೩ ಗಂಟೆಗಳ ಅಂತರದಿಂದ ನಾವು ಈ ರೀತಿ ನಿರೀಕ್ಷಣೆ ಮಾಡಬಹುದು. ಅದಕ್ಕಾಗಿ ಒಂದು ನಿಶ್ಚಿತ ಸಮಯವನ್ನು ಸಹ ನಿಗದಿ ಮಾಡಿಟ್ಟುಕೊಳ್ಳಬಹುದು. ಉದಾಹರಣೆಗೆ, ಮಧ್ಯಾಹ್ನ ಊಟದ ಮೊದಲು ನಾವು ಬೆಳಗ್ಗಿನಿಂದ ಮಧ್ಯಾಹ್ನದ ತನಕದ ಮನಸ್ಸಿನ ವರದಿಯನ್ನು ತೆಗೆದುಕೊಂಡು ನಮ್ಮಿಂದಾದ ತಪ್ಪು, ಮನಸ್ಸಿನಲ್ಲಿ ಉಮ್ಮಳಿಸಿದ ಪ್ರತಿಕ್ರಿಯೆಗಳನ್ನು ನೋಂದಣಿ ಮಾಡಿಡಬಹುದು. ಇಂತಹ ರೀತಿಯಲ್ಲಿ ಸಂಜೆ ಚಹಾದ ಸಮಯದಲ್ಲಿ, ರಾತ್ರಿ ಊಟ ಮಾಡುವ ಮೊದಲು ಹಾಗೂ ಮಲಗುವ ಮೊದಲು ಹೀಗೆ ನಮ್ಮ ಸೌಲಭ್ಯಕ್ಕನುಸಾರ ಸಮಯವನ್ನು ನಿಗದಿ ಮಾಡಿಕೊಂಡು ಆಯಾ ಸಮಯದಲ್ಲಿ ಮನಸ್ಸಿನ ಚಿಂತನವನ್ನು ಮಾಡಬಹುದು ಮತ್ತು ತಖ್ತೆಯಲ್ಲಿ ಬರೆಯಬಹುದು.

ನೆನಪಿಟ್ಟುಕೊಳ್ಳಿ, ಮನಸ್ಸಿನ ನಿರೀಕ್ಷಣೆಯನ್ನು ಮಾಡಿ ದಿನವಿಡೀ ನಮ್ಮಿಂದಾದ ೧೦ ರಿಂದ ೧೨ ತಪ್ಪುಗಳು ಗಮನಕ್ಕೆ ಬಂದರೆ ಪ್ರಾಧಾನ್ಯತೆಯಿಂದ ಗಂಭೀರ ಪರಿಣಾಮ ಬೀರುವ ಹಾಗೂ ಮನಸ್ಸಿನ ಸ್ತರದ ತಪ್ಪುಗಳನ್ನು ನಾವು ತಖ್ತೆಯಲ್ಲಿ ಸವಿಸ್ತಾರವಾಗಿ ಬರೆಯಬಹುದು. ಹೀಗೆ ಮಾಡುವುದರಿಂದ ನಮ್ಮ ಪ್ರಕ್ರಿಯೆಯ ಪ್ರಯತ್ನವು ಇನ್ನೂ ಉತ್ತಮವಾಗಬಲ್ಲದು. ಈಗ ಹೇಳಿದಂತೆ ಮನಸ್ಸಿನ ವರದಿ ತೆಗೆದುಕೊಳ್ಳಲು ೫ ನಿಮಿಷ ಸಹ ತಗಲುವುದಿಲ್ಲ ಆದರೆ ನಿಗದಿತ ಸಮಯದಲ್ಲಿ ಮನಸ್ಸಿನ ವರದಿ ತೆಗೆದುಕೊಳ್ಳುವ ಅಭ್ಯಾಸವಾದರೆ ಅದು ನಮ್ಮ ವೃತ್ತಿಯನ್ನು ಅಂತರ್ಮುಖಗೊಳಿಸಲು ಉಪಯುಕ್ತವಾಗುವುದು.

ನಾವು ಈ ವಾರದಲ್ಲಿ ಕಡಿಮೆಪಕ್ಷ ದಿನದಲ್ಲಿ ೫ ಸಲ ಮನಸ್ಸಿನ ನಿರೀಕ್ಷಣೆಯನ್ನು ಮಾಡಿ ತಪ್ಪುಗಳ ನೋಂದಣಿ ಮಾಡಿಟ್ಟುಕೊಳ್ಳೋಣ ಮತ್ತು ತಖ್ತೆಯನ್ನು ಇನ್ನಷ್ಟು ಮನಃಪೂರ್ವಕವಾಗಿ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿ ಬರೆಯಲು ಪ್ರಯತ್ನಿಸೋಣ.

Leave a Comment