ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆದ ಔಷಧಿ ಗಿಡಗಳನ್ನು ಸಂಗ್ರಹಿಸಿ ! (ಭಾಗ ೨)

‘ನಿಸರ್ಗದಲ್ಲಿ ಗಿಡಗಳ ಸಂಗ್ರಹವನ್ನು ಹೇಗೆ ಮಾಡಬೇಕು’ ಎಂಬ ಲೇಖನಮಾಲೆಯಲ್ಲಿ ಅಣ್ಣೆಸೊಪ್ಪು ಮತ್ತು ತಗಚೆ ಈ ೨ ಗಿಡಗಳ ಬಗ್ಗೆ ಮಾಹಿತಿಯನ್ನು ಪಡೆಯೋಣ.

ಗಿಡಗಳ ಮಾಹಿತಿಯನ್ನು ಓದುವಾಗ ಉಪಯುಕ್ತವಾದ ಕೆಲವು ಸಾಮೂಹಿಕ ಸೂಚನೆಗಳು
ಅ. ಮುಂದೆ ಕೊಡಲಾದ ಗಿಡಗಳ ಮಾಹಿತಿಯಲ್ಲಿ ಗಿಡಗಳ ಲ್ಯಾಟಿನ್ ಹೆಸರು ಕೊಡಲಾಗಿದೆ. ಇವು ಆಧುನಿಕ ಸಸ್ಯಶಾಸ್ತ್ರದಲ್ಲಿನ ಸಂಜ್ಞೆಗಳಾಗಿವೆ. ಇವುಗಳ ಮೂಲಕ ಅಂತರ್ಜಾಲದಲ್ಲಿ ಈ ಗಿಡಗಳ ಬಗ್ಗೆ ಹೆಚ್ಚು ಮಾಹಿತಿಯನ್ನು ಪಡೆಯಲು ಸುಲಭವಾಗುತ್ತದೆ.
ಆ. ಆರಂಭದಲ್ಲಿ ಔಷಧಿ ಗಿಡಗಳ ಉಪಯೋಗವನ್ನು ಕೊಡಲಾಗಿದೆ. ದೊಡ್ಡವರಿಗೆ ಗಿಡಗಳ ಚೂರ್ಣ ಇತ್ಯಾದಿ ಸಾಮಾನ್ಯವಾಗಿ ಎಷ್ಟು ಪ್ರಮಾಣದಲ್ಲಿ ಕೊಡಬೇಕು, ಎಂಬುದನ್ನು ಅದರ ಮುಂದಿನ ಉಪ ಅಂಶದಲ್ಲಿ ಕೊಡಲಾಗಿದೆ. ೩ ರಿಂದ ೭ ವಯೋಮಾನದ ಮಕ್ಕಳಿಗೆ ದೊಡ್ಡವರ ಅಳತೆಯ ಕಾಲು ಪ್ರಮಾಣದಲ್ಲಿ ಮತ್ತು ೮ ರಿಂದ ೧೪ ವಯೋಮಾನದವರಿಗೆ ವಯಸ್ಕರರ ಅಳತೆಯ ಅರ್ಧ ಪ್ರಮಾಣದಲ್ಲಿ ಔಷಧಿಯನ್ನು ಕೊಡಬೇಕು.
ಇ. ಔಷಧದ ಉಪಯುಕ್ತತೆಗನುಸಾರ ೪ ಜನರ ಕುಟುಂಬಕ್ಕಾಗಿ ತಾಜಾ (ಒಣಗಿದ್ದಲ್ಲ) ಗಿಡಗಳನ್ನು ಎಷ್ಟು ಪ್ರಮಾಣದಲ್ಲಿ ಸಂಗ್ರಹಿಸಬೇಕು, ಎಂಬುದನ್ನು ಇಲ್ಲಿ ಕೊಡಲಾಗಿದೆ. ಇದು ಕೇವಲ ಮಾರ್ಗದರ್ಶಕ ಅಂದಾಜಾಗಿದ್ದು ಪ್ರತಿಯೊಬ್ಬರು ತಮ್ಮ ತಮ್ಮ ಆವಶ್ಯಕತೆಗನುಸಾರ ಗಿಡಗಳನ್ನು ಸಂಗ್ರಹಿಸಬೇಕು.
ಈ. ಎಲ್ಲಿ ಔಷಧಗಳ ಪ್ರಮಾಣವನ್ನು ಚಮಚಗಳಲ್ಲಿ ಕೊಡಲಾಗಿದೆ, ಅಲ್ಲಿ ಚಮಚ ಎಂದರೆ ಮಧ್ಯಮ ಆಕಾರದ ಚಮಚವನ್ನು ತೆಗೆದುಕೊಳ್ಳಬೇಕು.

೯. ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆಯುವ ಮತ್ತು ಅದರ ನಂತರ ಒಣಗಿ ಹೋಗುವ ಔಷಧೀಯ ಗಿಡಗಳು

೯ ಅ. ಅಣ್ಣೆಸೊಪ್ಪು / ಹಣ್ಣೆಸೊಪ್ಪು

೯ ಅ ೧. ಆಂಗ್ಲ ಹೆಸರುಗಳು : Silver cockscomb, Plumed cockscomb

೯ ಅ ೨. ಸಂಸ್ಕೃತ ಹೆಸರು : ಶಿತಿವಾರ

೯ ಅ ೩. ಲ್ಯಾಟಿನ್ ಹೆಸರು : Celosia argentea

೯ ಅ ೪. ಕುಲ : Amaranthaceae

೯ ಅ ೫. ಉಪಯೋಗ

ಅ. ಔಷಧೀಯ ಉಪಯೋಗ

೧. ಈ ಗಿಡವು ಎಲ್ಲ ಪ್ರಕೃತಿಗಳ ಜನರಿಗೆ ಹೊಂದುವಂತಹ ಮತ್ತು ಎಲ್ಲರಿಗೂ ಸುರಕ್ಷಿತವಾಗಿದೆ, ಅದು ಅಪಾಯ ಮಾಡದಿರುವುದಾಗಿದೆ.

೨. ಮೂತ್ರಕಲ್ಲು ಮತ್ತು ಮೂತ್ರದ ಸಮಸ್ಯೆಗಳಿಗೆ ಇದು ಹೆಸರಾಂತ ಔಷಧಿಯಾಗಿದೆ. ಮೂತ್ರಕಲ್ಲಿಗೆ ನಿವಾರಣೆಗೆ ಇದರ ಬೀಜಗಳು ಹೆಚ್ಚು ಉಪಯುಕ್ತವಾಗಿವೆ. ಮೂತ್ರಕಲ್ಲಿಗಾಗಿ, ಹಾಗೆಯೇ ತಡೆಗಟ್ಟಿದ ಮೂತ್ರ ವಿಸರ್ಜನೆಯಾಗಲು ೧ ಚಮಚ ಕಲ್ಲುಸಕ್ಕರೆಯೊಂದಿಗೆ ೧ ಚಮಚದಷ್ಟು ಬೀಜಗಳನ್ನು ಸೇವಿಸಬೇಕು.

೩. ಈ ಗಿಡವು ತಂಪು ಗುಣಧರ್ಮದ್ದಾಗಿದ್ದು, ಇದು ಶರೀರದಲ್ಲಿ ಯಾವುದೇ ಕಾರಣದಿಂದ ಹೆಚ್ಚಾದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ದಡಾರ, ಸಿಡುಬು (chickenpox), ಸರ್ಪಸುತ್ತು ಇವುಗಳಂತಹ ರೋಗಗಳಿಂದ ಶರೀರದಲ್ಲಿ ನಿರ್ಮಾಣವಾದ ಉಷ್ಣತೆ, ಆಲೋಪತಿ ಔಷಧಿಗಳಿಂದಾಗುವ ಉಷ್ಣತೆ, ಕೆಂಗಣ್ಣು ಬರುವುದು (conjunctivits) ಮುಖದ ಮೇಲೆ ಮೊಡವೆಗಳಾಗುವುದು (ಪಿಂಪಲ್ಸ), ಶರೀರದ ಮೇಲೆ ಗುಳ್ಳೆಗಳು ಏಳುವುದು, ರಕ್ತ ಮೂಲವ್ಯಾಧಿ, ಮಾಸಿಕ ಸರದಿಯ ಅಥವಾ ಇತರ ಸಮಯದಲ್ಲಿ ಯೋನಿಮಾರ್ಗದಿಂದ ಹೆಚ್ಚು ರಕ್ತಸ್ರಾವವಾಗುವುದು, ಉರಿಮೂತ್ರವಾಗುವುದು, ಹಾಗೆಯೆ ತಲೆ ತಿರುಗುವುದು ಮುಂತಾದ ಉಷ್ಣತೆಯ ರೋಗಗಳಲ್ಲಿ ಅತ್ಯಂತ ಉಪಯುಕ್ತವಾಗಿದೆ.

೪. ಇದು ರಕ್ತವನ್ನು (ಹೀಮೊಗ್ಲೋಬಿನ್) ಹೆಚ್ಚಿಸುವ ಮತ್ತು ದಣಿವನ್ನು ದೂರ ಮಾಡುವ ಔಷಧಿಯಾಗಿದೆ. ಇದರಲ್ಲಿ ಲೋಹ, ಸುಣ್ಣ (calcium), ಸತು (zinc), ಪೊಟ್ಯಾಶಿಯಮ್ ಮುಂತಾದ ಖನಿಜಗಳು ಬಹಳಷ್ಟು ಪ್ರಮಾಣದಲ್ಲಿರುತ್ತವೆ. ಇದರ ಸೊಪ್ಪನ್ನು ಆಹಾರದಲ್ಲಿ ಬಳಸಬಹುದು.

೫. ಕಣ್ಣಿನ ರೋಗಗಳು, ಅತಿಸಾರ (ಭೇದಿ), ಯೋನಿಮಾರ್ಗದ ಮೂಲಕ ಬಿಳಿ ಸೆರಗು ಹೋಗುವುದು, ಚರ್ಮರೋಗ, ಹಾಗೆಯೇ ಹುಣ್ಣುಗಳು ಮಾಯವಾಗಲು ಪಂಚಾಂಗ (ಪಂಚಾಂಗ ಅಂದರೆ ಪೂರ್ಣ ಗಿಡ)ದ ಚೂರ್ಣವನ್ನು ಸೇವಿಸಬೇಕು.

೬. ವೀರ್ಯವೃದ್ಧಿಗಾಗಿ ೧ ಚಮಚದಷ್ಟು ಬೀಜವನ್ನು ೧ ಬಟ್ಟಲು ಹಾಲು ಮತ್ತು ೨ ಚಮಚಗಳಷ್ಟು ತುಪ್ಪದೊಂದಿಗೆ ತೆಗೆದುಕೊಳ್ಳಬೇಕು.

೭. ಅಮಲು ಪದಾರ್ಥಗಳ (ಉದಾ. ಭಾಂಗ, ಗಾಂಜಾ) ಹೆಚ್ಚು ಪರಿಣಾಮವಾದಾಗ ಅದನ್ನು ಇಳಿಸಲು ಈ ಗಿಡಗಳ ಬೇರುಗಳನ್ನು ತಣ್ಣಗಿನ ನೀರಿನಲ್ಲಿ ತೇಯ್ದು ಕೊಡುತ್ತಾರೆ.

೮. ಅನಾರೋಗ್ಯದ ಸ್ಥಿತಿಯಿಂದ ಹೊರಗೆ ಬಂದ ನಂತರ, (ಯಾವುದಾದರೊಂದು ರೋಗ ಗುಣವಾದ ನಂತರ) ಸ್ನಾನದ ನೀರನ್ನು ಬಿಸಿ ಮಾಡುವಾಗ ಆ ನೀರಿನಲ್ಲಿ ಈ ಗಿಡವನ್ನು ಹಾಕಬೇಕು, ನಂತರ ಆ ನೀರನ್ನು ಸೋಸಿ ಅದರಿಂದ ಸ್ನಾನ ಮಾಡಬೇಕು.

ಆ. ಆಹಾರದಲ್ಲಿ ಇದರ ಉಪಯೋಗ

೧. ಇದರ ಎಳೆಯ ಎಲೆಗಳ ಪಲ್ಯ ರುಚಿಕರ ಮತ್ತು ಪೌಷ್ಟಿಕವಾಗಿರುತ್ತದೆ. ಆಪತ್ಕಾಲದಲ್ಲಿ ಆಹಾರಧಾನ್ಯಗಳ ಅಭಾವವಿದ್ದಾಗ ಇದನ್ನು ಆಹಾರವೆಂದು ಉಪಯೋಗಿಸಬಹುದು.

೨. ಬೀಜಗಳಿಂದ ಅಡಿಗೆಯ ಎಣ್ಣೆಯನ್ನು ತೆಗೆಯಬಹುದು.

೯ ಅ ೬. ಗಿಡವನ್ನು ಗುರುತಿಸುವ ಕುರುಹುಗಳು : ಮಳೆಗಾಲದ ಕೊನೆಯಲ್ಲಿ ರಸ್ತೆಯ ಬದಿಗೆ, ಹಾಗೆಯೇ ಬಯಲು ಭೂಮಿಯಲ್ಲಿ ಈ ಗಿಡವು ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತದೆ. ಸೊಂಟದಷ್ಟು ಎತ್ತರದವರೆಗೆ ಬೆಳೆಯುವ ಈ ಗಿಡಯ ಚಂಡಿಕೆಯ ಮೇಲೆ ಬಿಳಿ ಮತ್ತು ಗುಲಾಬಿ ಬಣ್ಣದ ಶಂಖದ ಆಕಾರದ ತುರಾಯಿಗಳಿರುತ್ತವೆ. (ಛಾಯಾಚಿತ್ರವನ್ನು ನೋಡಿರಿ.) ಈ ತುರಾಯಿಗಳಲ್ಲಿ ಕಪ್ಪು ಬಣ್ಣದ ಸಾಸಿವೆಗಿಂತ ಚಿಕ್ಕ ಆಕಾರದ ಬೀಜಗಳಿರುತ್ತವೆ. ಇದು ಹರವಿಯ (ಹರವಿ ಹೆಸರಿನ ಪಲ್ಯ) ಕುಲದ ಗಿಡಯಾಗಿದೆ.

೯ ಅ ೭. ಸಂಗ್ರಹಿಸುವ ಭಾಗ

ಅ. ಸಾಧಾರಣ ಬೇರುಗಳೊಂದಿಗೆ ೫ ಕಿಲೋ ಸಂಪೂರ್ಣ ಗಿಡಯನ್ನು ಸಂಗ್ರಹಿಸಿ ಅದರ ಚೂರ್ಣವನ್ನು ಮಾಡಿಡಬೇಕು.

ಆ. ಒಂದು ಚೀಲದ ತುಂಬ ತುರಾಯಿಗಳನ್ನು ಸಂಗ್ರಹಿಸಬೇಕು. ತುರಾಯಿಗಳನ್ನು ಸಂಗ್ರಹಿಸುವ ಮೊದಲು ಕೆಲವು ತುರಾಯಿಗಳನ್ನು ಕೈಗಳಿಂದ ತಿಕ್ಕಿ ಅದರಲ್ಲಿ ಬೀಜಗಳು ಪರಿಪಕ್ವವಾಗಿವೆಯೇ, ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಪರಿಪಕ್ವ ಬೀಜಗಳು ಕಪ್ಪು ಬಣ್ಣದ್ದಾಗಿರುತ್ತವೆ. ತುರಾಯಿಗಳನ್ನು ತೆಗೆದ ನಂತರ ಅವುಗಳನ್ನು ತೊಳೆಯದೇ ಬಿಸಿಲಿನಲ್ಲಿ ಒಣಗಿಸಿ ಕೈಗಳಿಂದ ತಿಕ್ಕಿ ಅಥವಾ ಕೋಲಿನಿಂದ ಬಡಿದು ಅವುಗಳಲ್ಲಿನ ಬೀಜಗಳನ್ನು ಸಂಗ್ರಹಿಸಿಡಬೇಕು. ಆವಶ್ಯಕವೆನಿಸಿದರೆ ಬೀಜಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿಡಬಹುದು.

ಇ. ಬೀಜಗಳನ್ನು ತೆಗೆದ ನಂತರ ಉಳಿದ ತುರಾಯಿಗಳ ಪುಡಿಯನ್ನು ಬೇರೇ ತೆಗೆದಿಡಬೇಕು ಮತ್ತು ಸ್ನಾನದ ನೀರಿನಲ್ಲಿ ಹಾಕಿ ಉಪಯೋಗಿಸಬೇಕು.

೯ ಅ ೮. ಅಳತೆ (ಪ್ರಮಾಣ)

ಅ. ೧ ಚಮಚದಷ್ಟು ಪಂಚಾಂಗ (ಪೂರ್ಣ ಗಿಡ) ಚೂರ್ಣವನ್ನು ದಿನದಲ್ಲಿ ೨ – ೩ ಬಾರಿ ಒಂದು ಬಟ್ಟಲು ನೀರಿನಲ್ಲಿ ಸೇರಿಸಿ ಸೇವಿಸಬೇಕು.

ಆ. ೧ ಚಮಚದಷ್ಟು ಬೀಜವನ್ನು ಒಂದು ಬಟ್ಟಲು ನೀರಿನೊಂದಿಗೆ ಸೇವಿಸಬೇಕು.

ಇ. ಲಭ್ಯವಿದ್ದಾಗ ಇದರ ಎಲೆಗಳ ಪಲ್ಯವನ್ನು ಮಾಡಬಹುದು.

೯ ಅ ೯. ಕೃಷಿ : ಈ ಗಿಡವು ನಮಗೆ ಬೇಕಾದಾಗ ಲಭ್ಯವಾಗಲು ನಮ್ಮ ಹಿತ್ತಲಿನಲ್ಲಿ ಅಥವಾ ತಾರಸಿಯ ಮೇಲಿನ ಉದ್ಯಾನದಲ್ಲಿ ಬೆಳೆಸಬಹುದು. ಇದರ ಬೀಜಗಳು ಬಿತ್ತಿದ ೫ ರಿಂದ ೭ ದಿನಗಳಲ್ಲಿ ಮೊಳಕೆ ಒಡೆಯುತ್ತವೆ. ೩೦ ರಿಂದ ೪೦ ದಿನಗಳಲ್ಲಿ ಉತ್ತಮ ಸೊಪ್ಪು ಸಿಗುತ್ತದೆ. ೮೦ ರಿಂದ ೯೦ ದಿನಗಳಲ್ಲಿ ಬೀಜಗಳು ಪರಿಪಕ್ವವಾಗುತ್ತವೆ. ಎಳೆಯ ಎಲೆಗಳನ್ನು ಕೀಳುತ್ತಾ ಹೋದರೆ ಬೀಜಗಳು ತಡವಾಗಿ ಸಿಗುತ್ತವೆ. ಸೊಪ್ಪಿಗಾಗಿ ಈ ಗಿಡವನ್ನು ಬೆಳೆಸುವುದಿದ್ದರೆ ಚೆನ್ನಾಗಿ ನೀರು-ಗೊಬ್ಬರವನ್ನು ಹಾಕಿದರೆ ಉತ್ತಮ ಎಲೆಗಳು ಸಿಗುತ್ತವೆ. ೧೦ x ೧೦ ಮೀಟರ್‌ನ ಪರಿಸರದಲ್ಲಿ ಇದನ್ನು ಬೆಳೆಸಿದರೆ ಒಂದೇ ಬಾರಿಗೆ ೧೦ ರಿಂದ ೧೫ ಕಿಲೋ ಸೊಪ್ಪು ಸಿಗುತ್ತದೆ.

೯ ಅ ೧೦. ಗಿಡವನ್ನು ಯಾರು ಬಳಸಬಾರದು ? : ಈ ಗಿಡಯ ಬೀಜಗಳನ್ನು ಸೇವಿಸಿದ ನಂತರ ಕಣ್ಣುಗಳ ಪಾಪೆಗಳು ಸ್ವಲ್ಪ ಪ್ರಮಾಣದಲ್ಲಿ ತೆರೆಯುತ್ತವೆ. ಆದ್ದರಿಂದ ಯಾರಿಗೆ ಗ್ಲುಕೋಮಾದ ತೊಂದರೆ ಇದೆಯೋ, ಅವರು ಇದರ ಬೀಜಗಳನ್ನು ಸೇವಿಸಬಾರದು.

(ಆಧಾರ : http://tropical.theferns.info/viewtropical.php?id=Celosia+argentea (೧೬.೧೧.೨೦೨೦))

೯ ಆ. ತಗಚೆ, ಚಗಚೆ

೯ ಆ ೧. ಆಂಗ್ಲ ಹೆಸರುಗಳು : Stinking Cassia, Chinese senna

೯ ಆ ೨. ಸಂಸ್ಕೃತ ಹೆಸರುಗಳು : ಚಕ್ರಮರ್ದ, ಎಡ್‌ಗಜ್

೯ ಆ ೩. ಲ್ಯಾಟಿನ್ ಹೆಸರುಗಳು : Senna tora, Senna obtusifolia (ಹಿಂದಿನ ಹೆಸರು – Cassia tora)

೯ ಆ ೪. ಕುಲ : Fabaceae

೯ ಆ ೫. ಉಪಯೋಗ

ಅ. ಔಷಧೀಯ ಉಪಯೋಗ

೧. ಇದರ ಸಂಸ್ಕೃತ ಹೆಸರು ಚಕ್ರಮರ್ದ ಎಂದಾಗಿದೆ. ಚಕ್ರ ಎಂದರೆ ಗಜಕರ್ಣ. ಅದನ್ನು ‘ಮರ್ದ್’ ಅಂದರೆ ನಾಶ ಮಾಡುವ ಗಿಡ ಎಂದು ಇದಕ್ಕೆ ‘ಚಕ್ರಮರ್ದ್’ ಎಂದು ಹೇಳುತ್ತಾರೆ. ಕಜ್ಜಿ, ತದ್ದು, ಗಜಕರ್ಣ ಈ ಬುರುಸುಜನ್ಯ ಚರ್ಮರೋಗಗಳಿದ್ದಲ್ಲಿ (Fungal infection) ಇದರ ರಸವನ್ನು ದಿನದಲ್ಲಿ ೩ – ೪ ಬಾರಿ ಚರ್ಮದ ಮೇಲೆ ಹಚ್ಚಿದರೆ ಈ ರೋಗಗಳು ಗುಣವಾಗುತ್ತವೆ.

೨. ತಗಚೆಯ ರಸವನ್ನು ಶರೀರಕ್ಕೆ (ವಿಶೇಷವಾಗಿ ಹೊಟ್ಟೆ, ನಿತಂಬ, ಸ್ತನಗಳು, ಕುತ್ತಿಗೆ ಈ ಭಾಗಗಳ ಮೇಲೆ) ಹಚ್ಚಿದರೆ ಅಥವಾ ಪಂಚಾಂಗದ (ಪೂರ್ಣ ಗಿಡಯ) ಚೂರ್ಣವನ್ನು ಲೇಪನದಂತೆ ಶರೀರಕ್ಕೆ ಉಜ್ಜಿದರೆ ಅನಾವಶ್ಯಕ ಕೊಬ್ಬು ಕಡಿಮೆಯಾಗಿ ಶರೀರವು ಸುಂದರವಾಗುತ್ತದೆ. ಹೆಚ್ಚಿನ ಲಾಭಕ್ಕಾಗಿ ಪ್ರತಿದಿನ ಸೂರ್ಯನಮಸ್ಕಾರಗಳನ್ನು ಮಾಡಬೇಕು.

೩. ತಗಚೆಯ ರಸ ಮತ್ತು ಕಡಲೆ ಹಿಟ್ಟಿನ ಮಿಶ್ರಣವನ್ನು ತ್ವಚೆಯ ಮೇಲೆ ಉಜ್ಜಿ ಹಚ್ಚಬೇಕು. ಇದರಿಂದ ತ್ವಚೆಯು ಕೋಮಲ ಮತ್ತು ಕಾಂತಿಮಯವಾಗುತ್ತದೆ. ತ್ವಚೆಯ ಮೇಲಿನ ಅನಾವಶ್ಯಕ ಜಿಡ್ಡು, ಶರೀರ ಕಪ್ಪಾಗಿ ಕಾಣಿಸುವುದು, ಶರೀರ ಜಡ್ಡುಗಟ್ಟುವುದು ಮುಂತಾದವುಗಳು ಕಡಿಮೆಯಾಗುತ್ತವೆ. ರಸವಿಲ್ಲದಿದ್ದರೆ ತಗಚೆಯ ಚೂರ್ಣ ಮತ್ತು ಕಡಲೆ ಹಿಟ್ಟಿನ ಮಿಶ್ರಣವನ್ನು ಉಪಯೋಗಿಸಬೇಕು.

೪. ಜಂತುಗಳಾಗುವ ಪ್ರವೃತ್ತಿ ಇರುವವರು ೨ ಚಮಚಗಳಷ್ಟು ತಗಚೆಯ ಬೀಜಗಳನ್ನು ಕಚ್ಚಿ ತಿನ್ನಬೇಕು ಮತ್ತು ಒಂದು ಗಂಟೆಯ ನಂತರ ೨ ಚಮಚಗಳಷ್ಟು ಹರಳೆಣ್ಣೆ (castor oil) ಕುಡಿದು ಅನಂತರ ಅರ್ಧ ಬಟ್ಟಲು ಬಿಸಿನೀರು ಕುಡಿಯಬೇಕು. ಇದರಿಂದ ಜಂತುಗಳು ಮಲದೊಂದಿಗೆ ಹೊರಬೀಳುತ್ತವೆ.

೫. ತುಂಬಾ ಕೆಮ್ಮು ಬರುವುದು, ಎದೆಯಲ್ಲಿ ಕಫ ತುಂಬುವುದು, ದಮ್ಮು ಬರುವುದು, ಶರೀರ ಜಡವಾಗುವುದು, ಮಂಪರು ಬರುವುದು ಈ ಅವಸ್ಥೆಗಳಲ್ಲಿ ತಗಚೆಯ ಬೀಜಗಳ ೨ ಚಮಚಗಳಷ್ಟು ಚೂರ್ಣವನ್ನು ೪ ಕಪ್ ನೀರಿನಲ್ಲಿ ಕುದಿಸಿ ೧ ಕಪ್ ಕಷಾಯ ಮಾಡಬೇಕು. ಕಷಾಯ ಮಾಡುವಾಗ ಅದರಲ್ಲಿ ತುಳಸಿಯ ೨ ಎಲೆಗಳನ್ನು ಮತ್ತು ಕಾಳುಮೆಣಸಿನ ೨ ಕಾಳುಗಳನ್ನು ಕುಟ್ಟಿ ಹಾಕಬೇಕು. ಈ ಕಷಾಯವನ್ನು ಬಿಸಿ ಇರುವಾಗಲೇ ಒಂದೊಂದು ಗುಟುಕು ಕುಡಿಯಬೇಕು. ಇದರಿಂದ ಬಿಳಿ, ನೊರೆಯುಳ್ಳ ಕಫವು ಹೊರಹೋಗುತ್ತದೆ.

೬. ಶರೀರದ ಮೇಲೆ ಬಿಳಿ ಕಲೆಗಳು ಕಾಣಿಸುವುದು, ಶರೀರಕ್ಕೆ ತುರಿಕೆ ಬರುವುದು, ಮೇಲಿಂದ ಮೇಲೆ ಶೀತ, ಕೆಮ್ಮು ಬರುವುದು, ಈ ಲಕ್ಷಣಗಳಿರುವಾಗ ತಗಚೆಯ ಎಲೆಗಳ ಪಲ್ಯ ಮತ್ತು ಬೇರೆ ಬೇರೆ ಬೇಳೆಗಳನ್ನು ಹುರಿದ ಮಾಡಿದ ಹಿಟ್ಟಿನಿಂದ ತಯಾರಿಸಿದ ರೊಟ್ಟಿಯನ್ನು ತಿನ್ನಬೇಕು, ಸಾಧ್ಯವಿಲ್ಲದಿದ್ದರೆ ಜೋಳದ ಅಥವಾ ಸಜ್ಜೆಯ ರೊಟ್ಟಿಯೊಂದಿಗೆ ಈ ಪಲ್ಯವನ್ನು ತಿನ್ನಬೇಕು.

೭. ತಗಚೆಯ ಎಣ್ಣೆ : ತಗಚೆಯ ರಸ ೧ ಲೀಟರ್, ಗೋಮೂತ್ರ ೨ ಲೀಟರ್, ಅರಿಶಿಣದ ಚೂರ್ಣ ೨೫ ಗ್ರಾಮ್, ಜ್ಯೇಷ್ಠಮದ್ದಿನ ಚೂರ್ಣ ೨೫ ಗ್ರಾಮ್ ಮತ್ತು ಎಳ್ಳೆಣ್ಣೆ ೧ ಲೀಟರ್ ಇವೆಲ್ಲವುಗಳನ್ನು ಒಟ್ಟು ಮಾಡಿ ಕೇವಲ ಎಣ್ಣೆ ಉಳಿಯುವವರೆಗೆ ಮಂದ ಅಗ್ನಿಯ ಮೇಲೆ ಕುದಿಸಬೇಕು. ಎಣ್ಣೆ ತಣ್ಣಗಾದ ನಂತರ ಬಾಟಲಿಯಲ್ಲಿ ತುಂಬಿಡಬೇಕು ಮತ್ತು ಅದರಲ್ಲಿ ೨ ಗ್ರಾಮ್ ಅಜ್ವಾನದ ಹೂವುಗಳನ್ನು ಪುಡಿ ಮಾಡಿ ಹಾಕಿ ಬಾಟಲಿಯ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಬೇಕು ಮತ್ತು ಬಾಟಲಿಯನ್ನು ಅಲುಗಾಡಿಸಿ ಅಜ್ವಾನದ ಹೂವುಗಳು ಎಣ್ಣೆಯಲ್ಲಿ ಕರಗುವಂತೆ ಮಾಡಬೇಕು. (ಅಜ್ವಾನದ ಹೂವುಗಳು ಆಯುರ್ವೇದಿಕ ಔಷಧಿಗಳ ಅಂಗಡಿಯಲ್ಲಿ ಸಿಗುತ್ತವೆ. ಅವು ಸಿಗದಿದ್ದರೆ ಅದರ ಬದಲು ಅಷ್ಟೇ ಪ್ರಮಾಣದಲ್ಲಿ ಭೀಮಸೇನಿ ಕರ್ಪೂರವನ್ನು ಉಪಯೋಗಿಸ ಬೇಕು.) ಈ ಎಣ್ಣೆಯನ್ನು ಬಾಹ್ಯೋಪಚಾರಕ್ಕಾಗಿ ಉದಾ. ಮೈಗೆ ಹಚ್ಚಿಕೊಳ್ಳಲು ಉಪಯೋಗಿಸಬೇಕು.

ಅ. ಎಲ್ಲ ರೀತಿಯ ಚರ್ಮರೋಗಗಳಲ್ಲಿ, ವಿಶೇಷವಾಗಿ ಯಾವ ಚರ್ಮರೋಗಗಳಲ್ಲಿ ಲಸಿಕೆ ಹೆಚ್ಚು ಪ್ರಮಾಣದಲ್ಲಿ ಬರುವುದು, ಹಸಿ ಇರುವುದು ಮತ್ತು ತುರಿಕೆ ಬರುವುದು ಆಗುತ್ತದೆಯೋ, ಅಂತಹ ಚರ್ಮರೋಗಗಳಲ್ಲಿ ಇದು ತುಂಬಾ ಉಪಯುಕ್ತವಾಗಿದೆ.

ಆ. ಯೋನಿಯಲ್ಲಿ ತುರಿಕೆ ಬರುವುದು, ಹಾಗೆಯೇ ಯೋನಿಯಿಂದ ಜಿಗುಟು ಸ್ರಾವ ಬರುವುದು ಇಂತಹ ತೊಂದರೆಗಳಿದ್ದಲ್ಲಿ ಈ ಎಣ್ಣೆಯಲ್ಲಿ ಹತ್ತಿಯ ಉಂಡೆಯನ್ನು ಅದ್ದಿ ಅದನ್ನು ರಾತ್ರಿ ಮಲಗುವಾಗ ಯೋನಿಯಲ್ಲಿಡಬೇಕು.

ಇ. ಬೆಂಕಿ, ಬಿಸಿನೀರು, ಹಬೆ, ವಿದ್ಯುತ್‌ನ ಆಘಾತ ಇತ್ಯಾದಿಗಳಿಂದ ಸುಟ್ಟ ಗಾಯಗಳಾಗಿದ್ದರೆ ಈ ಎಣ್ಣೆಯು ಬಹಳ ಲಾಭದಾಯಕವಾಗಿದೆ. ಸುಟ್ಟ ಜಾಗಕ್ಕೆ ನೀರು ತಾಗದಂತೆ ಕಾಳಜಿ ವಹಿಸಬೇಕು.

ಈ. ತರಚುಗಾಯ (ತ್ವಚೆ ಕಿತ್ತು ಹೋಗುವುದು), ಬಿದ್ದು ಮೈಮೇಲೆ ದೊಡ್ಡ ಗಾಯವಾಗುವುದು ಇತ್ಯಾದಿ ಗಾಯಗಳಲ್ಲಿ ಈ ಎಣ್ಣೆಯನ್ನು ಹಚ್ಚಿದರೆ ಲಾಭವಾಗುತ್ತದೆ.

ಉ. ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡಲು ಈ ಎಣ್ಣೆಯಿಂದ ಮರ್ದನ ಮಾಡಬೇಕು.

(ಆಧಾರ : ಆಹಾರ ರಹಸ್ಯ (ಭಾಗ ೩ ಮತ್ತು ೪), ಲೇಖಕ : ವೈದ್ಯ ರಮೇಶ ಮಧುಸೂದನ ನಾನಲ್)

ಆ. ಆಹಾರದಲ್ಲಿ ಇದರ ಉಪಯೋಗ

೧. ಬೀಜಗಳನ್ನು ಹುರಿದು ಮಾಡಿದ ಪುಡಿಯನ್ನು ಕಾಫಿಯ ಬದಲು ಉಪಯೋಗಿಸಬಹುದು. ಇದರ ರುಚಿ ಕಾಫಿಯಂತೆಯೇ ಇರುತ್ತದೆ. ಕಾಫಿಯಿಂದಾಗುವ ದುಷ್ಪಪರಿಣಾಮಗಳು ಈ ಪುಡಿಯಿಂದ ಆಗುವುದಿಲ್ಲ. ಈ ಪುಡಿಯು ಕಫ ಮತ್ತು ಶ್ವಸನವ್ಯೂಹದ ರೋಗಗಳನ್ನು ದೂರ ಮಾಡುತ್ತದೆ. ಆದ್ದರಿಂದ ಚಹಾ ಅಥವಾ ಕಾಫಿಯ ಬದಲು ತಗಚೆಯ ಬೀಜಗಳ ಚೂರ್ಣವನ್ನು ಉಪಯೋಗಿಸುವುದು ಆರೋಗ್ಯಕ್ಕೆ ಲಾಭದಾಯಕವಾಗಿದೆ.

೨. ಎಳೆಯ ಎಲೆಗಳ ಪಲ್ಯ ಚೆನ್ನಾಗಿ ಆಗುತ್ತದೆ. ಆಪತ್ಕಾಲದಲ್ಲಿ ಆಹಾರಧಾನ್ಯಗಳ ಅಭಾವವಿದ್ದಾಗ ಇದನ್ನು ಆಹಾರವೆಂದು ಉಪಯೋಗಿಸಬಹುದು.

೯ ಆ ೬. ಗಿಡಯನ್ನು ಗುರುತಿಸುವ ಗುರುತುಗಳು : ಈ ಗಿಡಯು ಎಲ್ಲರ ಪರಿಚಯದ್ದಾಗಿದೆ. ಈ ಗಿಡಗಳು ಮಳೆಗಾಲದಲ್ಲಿ ದೊಡ್ಡ ಪ್ರಮಾಣದಲ್ಲಿ ರಸ್ತೆಯ ಬದಿಯಲ್ಲಿ ಬೆಳೆಯುತ್ತವೆ. ಈ ಗಿಡಗಳು ಸೊಂಟದ ಎತ್ತರದಷ್ಟಿರುತ್ತವೆ. ಇವುಗಳಿಗೆ ಹಳದಿ ಬಣ್ಣದ ಹೂವುಗಳಿರುತ್ತವೆ. ಈ ಗಿಡಗಳಿಗೆ ಈಳಗಿಯಂತೆ (ಕುಡುಗೋಲಿನಂತೆ) ಸಾಧಾರಣ ಅರ್ಧವರ್ತುಲಾಕೃತಿಯ ಕಾಯಿಗಳು ಬರುತ್ತವೆ. ಮಳೆಗಾಲದ ನಂತರ ಕಾಯಿಗಳು ಒಣಗಿ ಮಣ್ಣಿನ ಬಣ್ಣಕ್ಕೆ ತಿರುಗುತ್ತವೆ. ಈ ಕಾಯಿಗಳಲ್ಲಿ ಮೆಂತೆಕಾಳುಗಳಂತಹ ಬೀಜಗಳಿರುತ್ತವೆ. ಅನೇಕ ಜನರು ಇವುಗಳ ಎಳೆಯ ಎಲೆಗಳ ಪಲ್ಯವನ್ನು ಮಾಡಿ ತಿನ್ನುತ್ತಾರೆ.

೧೦. ಆ. ೭. ಸಂಗ್ರಹಿಸಬೇಕಾದ ಭಾಗಗಳು ಮತ್ತು ತಯಾರಾಗುವ ಔಷಧಗಳು

ಅ. ಬೇರುಗಳೊಂದಿಗೆ ಸಂಪೂರ್ಣ ಗಿಡವನ್ನು ಸಾಧಾರಣ ೨ ಕಿಲೋ. ಸಂಗ್ರಹಿಸಿ ಅದರ ಚೂರ್ಣವನ್ನು ಮಾಡಿಡಬೇಕು. ಇದನ್ನು ಬಾಹ್ಯ ಉಪಚಾರಕ್ಕಾಗಿ ಉಪಯೋಗಿಸಬಹುದು.

ಆ. ಗಿಡದ ಮೇಲಿನ ಒಣಗುವ ಸ್ಥಿತಿಯಲ್ಲಿರುವ ಕಾಯಿಗಳನ್ನು ಕತ್ತರಿಯಿಂದ ನಿಧಾನವಾಗಿ ಕತ್ತರಿಸಿ ಸಂಗ್ರಹಿಸಬೇಕು. ಕಾಯಿಗಳನ್ನು ಅಲುಗಾಡಿಸಿದರೆ ಅವುಗಳಲ್ಲಿನ ಬೀಜಗಳು ಬೀಳುತ್ತವೆ. ಸಾಧಾರಣ ೨ ರಿಂದ ೪ ಕಿಲೋ (ಅಥವಾ ವರ್ಷವಿಡಿ ನಮಗೆ ಎಷ್ಟು ಚಹಾ ಅಥವಾ ಕಾಫಿಯ ಪುಡಿ ಬೇಕಾಗುವುದೋ ಅಷ್ಟು ಕಿಲೋ) ಕಾಯಿಗಳನ್ನು ಸಂಗ್ರಹಿಸಿ ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಬೇಕು ಮತ್ತು ಅವುಗಳಲ್ಲಿನ ಬೀಜಗಳನ್ನು ಬೇರೆ ಮಾಡಬೇಕು. ಕಾಯಿಗಳ ತೊಗಟೆಯನ್ನು ಎಸೆಯಬೇಕು ಮತ್ತು ಬೀಜಗಳನ್ನು ಚೆನ್ನಾಗಿ ಒಣಗಿಸಬೇಕು. ಒಣಗಿದ ಬೀಜಗಳನ್ನು ಕಡಾಯಿಯಲ್ಲಿ ಮಂದ ಅಗ್ನಿಯ ಮೇಲೆ ಹುರಿದು ಅವು ತಣ್ಣಗಾಗುವ ಸಮಯದಲ್ಲಿ ಅವುಗಳ ಚೂರ್ಣವನ್ನು ಮಾಡಿಡಬೇಕು.

ಇ. ಎಣ್ಣೆಯನ್ನು ತಯಾರಿಸುವುದಿದ್ದರೆ ಸಾಕಷ್ಟು ರಸ ಬರುವ ಹಾಗೆ ಬೇರುಸಹಿತ ಸಂಪೂರ್ಣ ಗಿಡಯನ್ನು ಒಟ್ಟು ಮಾಡಬೇಕು. ಮಳೆಗಾಲದಲ್ಲಿ ಎಲೆಗಳು ತಾಜಾ ಇರುವಾಗ ಹೆಚ್ಚು ರಸ ಬರುತ್ತದೆ. ಮಳೆಗಾಲ ಮುಗಿದ ನಂತರ ಗಿಡಗಳು ಒಣಗುವುದ ರಿಂದ ಸ್ವಲ್ಪ ಹೆಚ್ಚು ನೀರು ಹಾಕಿ ರಸವನ್ನು ತೆಗೆಯಬೇಕು.

೯. ಆ ೮. ಪ್ರಮಾಣ : ಬೀಜಗಳ ಚೂರ್ಣ ೧ ರಿಂದ ೨ ಚಮಚಗಳು (ಕಾಫಿ ತಯಾರಿಸುವ ಪ್ರಮಾಣಕ್ಕನುಸಾರ)

೯ ಆ ೯. ಕೃಷಿ : ಕೃಷಿ ಮಾಡುವ ಆವಶ್ಯಕತೆ ಇರುವುದಿಲ್ಲ. ಇದು ನಿಸರ್ಗದಲ್ಲಿ ಮಳೆಗಾಲದ ದಿನಗಳಲ್ಲಿ ಅಲ್ಲಲ್ಲಿ ಧಾರಾಳವಾಗಿ ಬೆಳೆಯುತ್ತದೆ; ಆದರೆ ಕೆಲವು ಪ್ರದೇಶಗಳಲ್ಲಿ ಬೀಜಗಳಿಗಾಗಿ ಈ ಗಿಡಗಳ ಕೃಷಿಯನ್ನು ಮಾಡುತ್ತಾರೆ. ಕೃಷಿ ಮಾಡುವುದಿದ್ದರೆ ಒಂದು ಪಾತ್ರೆಯಲ್ಲಿ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದರಲ್ಲಿ ತಗಚೆಯ ಒಣಗಿದ ಬೀಜಗಳನ್ನು ಹಾಕಿ ಅವುಗಳನ್ನು ೧೨ ಗಂಟೆ ನೆನೆಸಿಡಬೇಕು. ಅನಂತರ ಅವುಗಳನ್ನು ಅಂಕುರಿಸಲು ನೆಲದಲ್ಲಿ ಬಿತ್ತಬೇಕು. ಹೀಗೆ ಮಾಡಿದರೆ ಬೀಜಗಳ ಅಂಕುರಿಸುವ ಪ್ರಮಾಣವು ಹೆಚ್ಚಾಗುತ್ತದೆ.

೯ ಆ ೧೦. ಈ ಗಿಡವನ್ನು ಯಾರು ಉಪಯೋಗಿಸಬಾರದು ?

ಅ. ತಗಚೆಯ ಬೀಜಗಳನ್ನು ಒಂದೇ ಬಾರಿಗೆ ಹೆಚ್ಚು ಪ್ರಮಾಣದಲ್ಲಿ ಉಪಯೋಗಿಸಬಾರದು. ಇದರಿಂದ ವಾಂತಿ ಅಥವಾ ಭೇದಿಯಾಗಬಹುದು.

ಆ. ಕೆಲವು ಸ್ಥಳಗಳಲ್ಲಿ ತಗಚೆಯ ಬೀಜಗಳಿಂದ ಎಣ್ಣೆಯನ್ನು ತೆಗೆಯುತ್ತಾರೆ; ಆದರೆ ಇದನ್ನು ಆಹಾರದಲ್ಲಿ ಉಪಯೋಗಿಸಬಾರದು. ಇದರಿಂದ ಕರುಳುಗಳಿಗೆ ಹಾನಿಯಾಗಿ ವಿವಿಧ ರೋಗಗಳು ಉದ್ಭವಿಸಬಹುದು.

ಇ. ತಗಚೆಯ ಹಳೆಯ ಎಲೆಗಳು ಪಚನಕ್ಕೆ ಜಡವಾಗಿರುವುದರಿಂದ ಅವುಗಳನ್ನು ತಿನ್ನಬಾರದು.

– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೮.೧೧.೨೦೨೦)

2 thoughts on “ಮಳೆಗಾಲದಲ್ಲಿ ನೈಸರ್ಗಿಕವಾಗಿ ಬೆಳೆದ ಔಷಧಿ ಗಿಡಗಳನ್ನು ಸಂಗ್ರಹಿಸಿ ! (ಭಾಗ ೨)”

Leave a Comment