ಕೊರೋನಾ ಮಹಾಮಾರಿಯಿಂದ ಉದ್ಭವಿಸಿರುವ ಸದ್ಯದ ಈ ಆಪತ್ಕಾಲದಲ್ಲಿ ನವರಾತ್ರ್ಯುತ್ಸವವನ್ನು ಹೇಗೆ ಆಚರಿಸಬೇಕು ?

ಕೊರೋನಾ ಮಹಾಮಾರಿಯ ಹಿನ್ನೆಲೆಯಲ್ಲಿ ಜಾರಿಗೊಳಿಸಲಾಗಿರುವ ಸಂಚಾರಸಾರಿಗೆ ನಿಷೇಧ, ಹಾಗೆಯೇ ಇತರ ಕೆಲವು ನಿರ್ಬಂಧಗಳಿಂದಾಗಿ ಈ ಬಾರಿ ಕೆಲವು ಸ್ಥಳಗಳಲ್ಲಿ ನವರಾತ್ರಿ ಉತ್ಸವವನ್ನು ಎಂದಿನಂತೆ ಆಚರಿಸಲು ಮಿತಿಗಳು ಇರಬಹುದು. ಇಂತಹ ಸ್ಥಿತಿಯಲ್ಲಿ ‘ನವರಾತ್ರ್ಯುತ್ಸವವನ್ನು ಹೇಗೆ ಆಚರಿಸಬೇಕು ?’ ಎನ್ನುವ ಪ್ರಶ್ನೆ ಅನೇಕ ಜನರ ಮನಸ್ಸಿನಲ್ಲಿದೆ. ಅಂತಹವರಿಗಾಗಿ ಕೆಲವು ಉಪಯುಕ್ತ ಅಂಶಗಳನ್ನು ಮತ್ತು ದೃಷ್ಟಿಕೋನವನ್ನು ಇಲ್ಲಿ ನೀಡುತ್ತಿದ್ದೇವೆ.

(ಟಿಪ್ಪಣಿ: ಈ ಅಂಶಗಳು ಯಾವ ಸ್ಥಳದಲ್ಲಿ ನವರಾತ್ರ್ಯುತ್ಸವವನ್ನು ಆಚರಿಸಲು ನಿರ್ಬಂಧವಿದೆಯೋ ಅಥವಾ ಮಿತಿಯಿದೆಯೋ, ಅಂತಹವರಿಗಾಗಿ ಇವೆ. ಯಾವ ಸ್ಥಳದಲ್ಲಿ ಸರಕಾರದ ಎಲ್ಲ ನಿಯಮಗಳನ್ನು ಪಾಲಿಸಿ ಎಂದಿನಂAತೆ ಉತ್ಸವವನ್ನು ಆಚರಿಸಲು ಸಾಧ್ಯವಿದೆಯೋ, ಆ ಸ್ಥಳಗಳಲ್ಲಿ ಎಂದಿನಂತೆ ಕುಲಾಚಾರವನ್ನು ಪಾಲಿಸಿ)

ಪ್ರಶ್ನೆ : ನವರಾತ್ರ್ಯುತ್ಸವದಲ್ಲಿ ದೇವಿಯ ದೇವಸ್ಥಾನಕ್ಕೆ ಹೋಗಿ ಉಡಿ ತುಂಬಲು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು ?

ಉತ್ತರ : ನವರಾತ್ರ್ಯುತ್ಸವದಲ್ಲಿ ದೇವಿಯ ದೇವಸ್ಥಾನಕ್ಕೆ ಹೋಗಿ ದೇವಿಯ ಉಡಿ ತುಂಬಲು ಸಾಧ್ಯವಿಲ್ಲದಿದ್ದರೆ ಮನೆಯಲ್ಲಿಯೇ ದೇವರ ಕೋಣೆಯಲ್ಲಿ ಕುಲದೇವಿಯ ಉಡಿಯನ್ನು ತುಂಬಬೇಕು. ಉಡಿಯೆಂದು ದೇವಿಗೆ ಅರ್ಪಿಸುವ ಸೀರೆಯನ್ನು ಪ್ರಸಾದವೆಂದು ಉಪಯೋಗಿಸಬಹುದು.

ಪ್ರಶ್ನೆ : ಲಲಿತಾಪಂಚಮಿಯನ್ನು ಆಚರಿಸಲು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು ?

ಉತ್ತರ : ಮನೆಯಲ್ಲಿರುವ ದೇವಿಯೇ ‘ಲಲಿತಾದೇವಿ’ ಆಗಿದ್ದಾಳೆ ಎಂಬ ಭಾವವನ್ನಿಟ್ಟು ಅವಳ ಪೂಜೆಯನ್ನು ಮಾಡಬೇಕು.

ಪ್ರಶ್ನೆ : ಧಾನ್ಯ, ಹೂವು ಅಥವಾ ಪೂಜಾಸಾಮಗ್ರಿಗಳು ಸಿಗದಿದ್ದರೆ, ಘಟಸ್ಥಾಪನೆ, ಹಾಗೆಯೇ ಮಾಲಾಬಂಧನಗಳಂತಹ ಧಾರ್ಮಿಕ ಕೃತಿಗಳನ್ನು ಮಾಡಲು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು ?

ಉತ್ತರ : ಘಟಸ್ಥಾಪನೆಗಾಗಿ ಉಪಯೋಗಿಸುವ ಧಾನ್ಯಗಳು ಅಥವಾ ನವರಾತ್ರ್ಯುತ್ಸವದಲ್ಲಿ ಕೈಗೊಳ್ಳುವ ಧಾರ್ಮಿಕ ಕೃತಿಗಳಲ್ಲಿ ರಾಜ್ಯಗಳಿಗನುಸಾರ ವ್ಯತ್ಯಾಸಗಳಿವೆ. ನವರಾತ್ರ್ಯುತ್ಸವವು ಕುಲಪರಂಪರೆಯ ಅಥವಾ ಕುಲಾಚಾರದ ಒಂದು ಭಾಗವಾಗಿದೆ. ಆಪತ್ಕಾಲೀನ ಮಿತಿಯಿಂದಾಗಿ ಘಟಸ್ಥಾಪನೆ ಅಥವಾ ಮಾಲಾಬಂಧನದ ಧಾರ್ಮಿಕ ಕೃತಿಗಳನ್ನು ಎಂದಿನಂತೆ ಮಾಡಲು ಸಾಧ್ಯವಿಲ್ಲದಿದ್ದರೆ, ಲಭ್ಯವಿರುವ ಸಾಮಗ್ರಿಗಳನ್ನು ಉಪಯೋಗಿಸಿ ಎಷ್ಟು ಸಾಧ್ಯವಿದೆಯೋ ಅಷ್ಟು ಮಾಡಬೇಕು. ಇನ್ನುಳಿದ ಎಲ್ಲ ವಿಧಿಗಳನ್ನು ಮನಸ್ಸಿನಿಂದ (ಮಾನಸ ಉಪಚಾರ) ಮಾಡಬೇಕು.

ಪ್ರಶ್ನೆ : ಕುಮಾರಿಕಾ ಪೂಜೆಯನ್ನು ಹೇಗೆ ಮಾಡಬೇಕು ?

ಉತ್ತರ : ಮನೆಯಲ್ಲಿ ಯಾರಾದರೂ ಕುಮಾರಿಯರು ಇದ್ದರೆ, ಅವರ ಪೂಜೆಯನ್ನು ಮಾಡಬೇಕು. ಕುಮಾರಿಯರನ್ನು ಮನೆಗೆ ಕರೆಯಿಸಿ ಪೂಜೆಯನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಅದರ ಬದಲು ಅರ್ಪಣೆಯ ಸದುಪಯೋಗವಾಗುವಂತಹ ಸ್ಥಳಗಳಿಗೆ ಅಥವಾ ಧಾರ್ಮಿಕ ಕಾರ್ಯಗಳನ್ನು ಮಾಡುವ ಸಂಸ್ಥೆಗಳಿಗೆ ಅರ್ಪಣೆಯ ರೂಪದಲ್ಲಿ ಹಣವನ್ನು ಕೊಡಬಹುದು.

ಪ್ರಶ್ನೆ : ಗರಬಾ ನೃತ್ಯ ಅಥವಾ ಕೊಡ ಊದುವುದು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು?

ಉತ್ತರ : ಗರಬಾ ನೃತ್ಯ ಅಥವಾ ಕೊಡ ಊದುವ ಧಾರ್ಮಿಕ ಕೃತಿಗಳ ಮುಖ್ಯ ಉದ್ದೇಶವೆಂದರೆ ದೇವಿಯ ಉಪಾಸನೆಯನ್ನು ಮಾಡುತ್ತ ಜಾಗರಣೆಯನ್ನು ಮಾಡುವುದಾಗಿದೆ. ಈ ಧಾರ್ಮಿಕ ಕೃತಿಗಳನ್ನು ಮಾಡಲು ಸಾಧ್ಯವಿಲ್ಲದಿದ್ದರೆ, ಕುಲದೇವಿಯ ನಾಮಸ್ಮರಣೆ ಅಥವಾ ದೇವಿಪುರಾಣ ಓದುವುದು, ಸಂಕೀರ್ತನೆ ಮಾಡಿ ದೇವಿಯ ಉಪಾಸನೆ ಮಾಡಬೇಕು.
ಕುಲದೇವಿಯ ನಾಮಸ್ಮರಣೆ, ಹಾಗೆಯೇ ನವರಾತ್ರಿ ಉತ್ಸವದ ಮಾಹಿತಿಯನ್ನು ಸನಾತನದ, ‘ಶಕ್ತಿ’, ‘ಶಕ್ತಿಯ ಉಪಾಸನೆ’ ಈ ಗ್ರಂಥಗಳಲ್ಲಿ ನೀಡಲಾಗಿದೆ. ಈ ಗ್ರಂಥಗಳು www.SanatanShop.com ಈ ಜಾಲತಾಣದಲ್ಲಿ ‘ಆನ್‌ಲೈನ್’ ಖರೀದಿಗೆ ಲಭ್ಯವಿದೆ. ನವರಾತ್ರಿ ಉತ್ಸವದ ಮಾಹಿತಿ ಇಲ್ಲಿ ಲಭ್ಯವಿದೆ.

ಪ್ರಶ್ನೆ : ದಸರಾವನ್ನು ಹೇಗೆ ಆಚರಿಸಬೇಕು?

ಉತ್ತರ : ಮನೆಯಲ್ಲಿ ಪ್ರತಿವರ್ಷ ಪೂಜಿಸುತ್ತಿರುವ ಉಪಲಬ್ಧವಿರುವ ಶಸ್ತ್ರಗಳನ್ನು ಮತ್ತು ಉಪಜೀವನದ ಸಾಮಗ್ರಿಗಳ ಪೂಜೆಯನ್ನು ಮಾಡಬೇಕು. ಬನ್ನಿ ಮರದ ಎಲೆಗಳನ್ನು ಒಬ್ಬರಿಗೊಬ್ಬರು ಕೊಡಲು ಸಾಧ್ಯವಿಲ್ಲದಿದ್ದರೆ, ಅದನ್ನು ಕೇವಲ ದೇವರಿಗೆ ಅರ್ಪಿಸಬೇಕು.

ದೃಷ್ಟಿಕೋನ

1. ಕರ್ಮಕಾಂಡದ ಸಾಧನೆಗನುಸಾರ ಆಪತ್ಕಾಲದಿಂದಾಗಿ ಯಾವುದಾದರೊಂದು ವರ್ಷ ಕುಲಾಚಾರದಂತೆ ಯಾವುದಾದರೂ ವ್ರತ, ಉತ್ಸವ ಅಥವಾ ಧಾರ್ಮಿಕ ಕೃತಿಗಳನ್ನು ಆಚರಿಸಲು ಸಾಧ್ಯವಾಗದಿದ್ದರೆ ಅಥವಾ ಕರ್ಮದಲ್ಲಿ ಏನಾದರೂ ನ್ಯೂನ್ಯತೆಗಳು ಉಳಿದಿದ್ದರೆ, ಮುಂದಿನ ವರ್ಷ ಅಥವಾ ಮುಂದಿನ ಕಾಲದಲ್ಲಿ ಯಾವಾಗ ಸಾಧ್ಯವಿರುತ್ತದೆಯೋ, ಆಗ ಆ ವ್ರತ, ಉತ್ಸವ ಅಥವಾ ಧಾರ್ಮಿಕ ಕೃತಿಗಳನ್ನು ಅಧಿಕ ಉತ್ಸಾಹದಿಂದ ಆಚರಿಸಬೇಕು.

2. ಕೊರೋನಾ ಮಹಾಮಾರಿಯ ಮೂಲಕ ಆಪತ್ಕಾಲವು ಈಗಾಗಲೇ ಪ್ರಾರಂಭವಾಗಿದೆ. ತ್ರಿಕಾಲಜ್ಞಾನಿ (ದೃಷ್ಟಾರ) ಸಂತರು ಮತ್ತು ಭವಿಷ್ಯ ನುಡಿಯುವವರು ಹೇಳಿದಂತೆ ಭೀಕರ ಆಪತ್ಕಾಲ ಇನ್ನೂ 2-3 ವರ್ಷಗಳ ವರೆಗೆ ಮುಂದುವರಿಯಲಿದೆ. ಈ ಕಾಲದಲ್ಲಿ ಎಂದಿನಂತೆ ಧಾರ್ಮಿಕ ಕೃತಿಗಳನ್ನು ಯೋಗ್ಯ ಪದ್ಧತಿಯಂತೆ ಮಾಡಲು ಸಾಧ್ಯವಾಗಬಹುದೆಂದು ಹೇಳಲು ಆಗುವುದಿಲ್ಲ. ಇಂತಹ ಸಮಯದಲ್ಲಿ ಕರ್ಮಕಾಂಡದ ಬದಲು ನಾಮಸ್ಮರಣೆಯನ್ನು ಸಾಧ್ಯವಾದಷ್ಟು ಹೆಚ್ಚಚ್ಚು ಮಾಡಬೇಕು. ಯಾವುದೇ ಧಾರ್ಮಿಕ ಕೃತಿ, ಉತ್ಸವ ಅಥವಾ ವ್ರತದ ಮುಖ್ಯ ಉದ್ದೇಶ ಭಗವಂತನ ಸ್ಮರಣೆ ಮಾಡಿ ನಮ್ಮಲ್ಲಿನ ಸಾತ್ತ್ವಿಕತೆಯನ್ನು ಹೆಚ್ಚಿಸುವುದಾಗಿದೆ. ಆದುದರಿಂದ ಪ್ರತಿಯೊಬ್ಬರೂ ತಮ್ಮಲ್ಲಿರುವ ಸತ್ವಗುಣವನ್ನು ಹೆಚ್ಚಿಸಲು ಕಾಲಾನುಸಾರ ಸಾಧನೆಯನ್ನು ಮಾಡಲು ಪ್ರಯತ್ನಿಸಬೇಕು.

– ಶ್ರೀ. ಚೇತನ ರಾಜಹಂಸ, ವಕ್ತಾರರು, ಸನಾತನ ಸಂಸ್ಥೆ

Leave a Comment