ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಅನುಸರಿಸಬೇಕಾದ ಮೂಲಭೂತ ತತ್ತ್ವಗಳು

ಗುರುಕೃಪಾಯೋಗಾನುಸಾರ ಸಾಧನೆಯ ಏಕಮೇವ ಸಿದ್ಧಾಂತ

ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಪ್ರಕೃತಿಗಳಷ್ಟು ಸಾಧನಾಮಾರ್ಗಗಳು

ಗುರುಕೃಪಾಯೋಗಾನುಸಾರ ಮಾಡಬೇಕಾದ ಸಾಧನೆಯಲ್ಲಿ ಒಂದೇ ಸಿದ್ಧಾಂತವಿದೆ. ಆ ಸಿದ್ಧಾಂತವೆಂದರೆ ‘ವ್ಯಕ್ತಿಗಳಷ್ಟು ಪ್ರಕೃತಿಗಳು ಮತ್ತು ಪ್ರಕೃತಿಗಳಷ್ಟು ಸಾಧನೆಯ ಮಾರ್ಗಗಳು’. ಪೃಥ್ವಿಯ ಮೇಲೆ ಏಳು ನೂರು ಕೋಟಿಗಿಂತಲೂ ಹೆಚ್ಚು ಜನಸಂಖ್ಯೆಯಿದೆ; ಆದುದರಿಂದ ಈಶ್ವರಪ್ರಾಪ್ತಿಗೆ ಏಳು ನೂರು ಕೋಟಿಗಳಿಗಿಂತ ಹೆಚ್ಚು ಮಾರ್ಗಗಳಿವೆ. ಏಳು ನೂರು ಕೋಟಿಗಿಂತಲೂ ಹೆಚ್ಚಿರುವ ಜನರಲ್ಲಿ ಇಬ್ಬರು ಮನುಷ್ಯರು ಒಂದೇ ರೀತಿ ಇರುವುದಿಲ್ಲಾ. ಪ್ರತಿಯೊಬ್ಬರ ಶರೀರ, ಮನಸ್ಸು, ಇಷ್ಟಾನಿಷ್ಟ, ಗುಣದೋಷ, ಆಸೆ ಆಕಾಂಕ್ಷೆ, ವಾಸನೆ ಎಲ್ಲಾವೂ ವಿಭಿನ್ನವಾಗಿರುತ್ತವೆ; ಪ್ರತಿಯೊಬ್ಬರ ಬುದ್ಧಿ ವಿಭಿನ್ನವಾಗಿದೆ; ಸಂಚಿತ, ಪ್ರಾರಬ್ಧ ವಿಭಿನ್ನವಾಗಿದೆ; ಪ್ರತಿಯೊಬ್ಬರಲ್ಲಿರುವ ಪೃಥ್ವಿ, ಆಪ, ತೇಜ, ವಾಯು, ಆಕಾಶ ಈ ತತ್ತ್ವಗಳು (ಮನುಷ್ಯನು ಈ ಪಂಚತತ್ತ್ವಗಳಿಂದ ನಿರ್ಮಾಣವಾಗಿದ್ದಾನೆ) ಮತ್ತು ಸತ್ತ್ವ, ರಜ ಮತ್ತು ತಮ ಈ ತ್ರಿಗುಣಗಳ ಪ್ರಮಾಣ ವಿಭಿನ್ನವಾಗಿದೆ. ಸ್ವಲ್ಪದರಲ್ಲಿ ಹೇಳುವುದಾದರೆ ಪ್ರತಿಯೊಬ್ಬರೂ ವಿಭಿನ್ನ ಪ್ರಕೃತಿಯ ಮತ್ತು ಕ್ಷಮತೆಯವರಾಗಿರುವುದರಿಂದ ಈಶ್ವರಪ್ರಾಪ್ತಿಗಾಗಿ ಅನೇಕ ಸಾಧನಾಮಾರ್ಗಗಳಿವೆ. ನಮ್ಮ ಪ್ರಕೃತಿ ಮತ್ತು ಕ್ಷಮತೆಗನುರೂಪವಾಗಿ ಸಾಧನೆ ಮಾಡಿದರೆ ಈಶ್ವರಪ್ರಾಪ್ತಿಯು ಬೇಗನೇ ಆಗಲು ಸಹಾಯವಾಗುತ್ತದೆ. ಇದಕ್ಕೆ ಬದಲಾಗಿ ಸಾಂಪ್ರದಾಯಿಕ ಮತ್ತು ಪಂಥದಲ್ಲಿನ ಸಾಧನೆಯು ಒಂದೇ ಆಗಿರುತ್ತದೆ.

ಸಾಧನೆಯ ೧೦ ಮೂಲಭೂತ ತತ್ತ್ವಗಳು

ಬಹಳಷ್ಟು ಜನರಿಗೆ ಸಾಧನೆಯ ಹಿಂದಿನ ತತ್ತ್ವಗಳು ತಿಳಿಯದಿರುವುದರಿಂದ ಅವರು ತಪ್ಪು ಸಾಧನೆ ಮಾಡುವುದರಲ್ಲಿ ತಮ್ಮ ಆಯುಷ್ಯವನ್ನು ವ್ಯರ್ಥಗೊಳಿಸುತ್ತಾರೆ. ಹಾಗಾಗಬಾರದೆಂದು; ಮುಂದಿನ ಮಾರ್ಗದರ್ಶಕ ತತ್ತ್ವಗಳನ್ನು ತಿಳಿದುಕೊಂಡು ಅವುಗಳಿಗನುಸಾರ ಸಾಧನೆಯನ್ನು ಮಾಡುವುದು ಆವಶ್ಯಕವಾಗಿರುತ್ತದೆ –

೧. ಅನೇಕದಿಂದ ಏಕಕ್ಕೆ ಬರುವುದು
೨. ಸ್ಥೂಲದಿಂದ ಸೂಕ್ಷ್ಮದ ಕಡೆಗೆ ಹೋಗುವುದು
೩. ಕ್ಷಮತೆಗನುಸಾರ ಸಾಧನೆ
೪. ಮಟ್ಟಕ್ಕನುಸಾರ ಸಾಧನೆ
೫. ಕಾಲಕ್ಕನುಸಾರ ಸಾಧನೆ
೬. ವರ್ಣಕ್ಕನುಸಾರ ಸಾಧನೆ
೭. ಆಶ್ರಮಕ್ಕನುಸಾರ ಸಾಧನೆ
೮. ಸಗುಣಕ್ಕಿಂತ ನಿರ್ಗುಣ ಶ್ರೇಷ್ಠ; ಆದರೆ ಸಾಧನೆಗಾಗಿ ನಿರ್ಗುಣ ಉಪಾಸನೆಗಿಂತ ಸಗುಣ ಉಪಾಸನೆ ಶ್ರೇಷ್ಠ
೯. ತತ್ತ್ವಕ್ಕನುಸಾರ ಸಾಧನೆ
೧೦. ವ್ಯಕ್ತಿನಿಷ್ಠತೆ ಬೇಡ, ತತ್ತ್ವನಿಷ್ಠತೆ ಬೇಕು!

ಅನೇಕದಿಂದ ಏಕಕ್ಕೆ ಹೋಗುವುದು

ಈಶ್ವರನು ಒಬ್ಬನಾಗಿದ್ದಾನೆ ಮತ್ತು ಈ ಜಗತ್ತಿನಲ್ಲಿ ಏನಿರುವುದೋ, ಅದೆಲ್ಲಾ ಅನೇಕ ಅನೇಕ ಅನೇಕವಾಗಿದೆ. ಈ ಎಲ್ಲಾದರಿಂದ ನಮಗೆ ಒಬ್ಬ ಈಶ್ವರನೆಡೆಗೆ ಹೋಗಬೇಕಾಗಿದೆ ಎಂಬುದನ್ನು ಸತತವಾಗಿ ಗಮನದಲ್ಲಿಟ್ಟುಕೊಳ್ಳಬೇಕು. ಉದಾಹರೆಣೆಗೆ :
ಅನೇಕ ದೇವತೆಗಳ ನಾಮ ಜಪಿಸುವ ಬದಲು ಕುಲದೇವತೆಯ ಉಪಾಸನೆ ಮಾಡುವುದು. (ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ : ಕುಲದೇವತೆಯ ನಾಮಜಪ) ಇನ್ನೊಂದು ವಿಷಯವೆಂದರೆ ಅಧ್ಯಾತ್ಮದಲ್ಲಿ ನಮ್ಮ ಇಷ್ಟಾನಿಷ್ಟಗಳಿಗೆ ಮಹತ್ವವಿಲ್ಲಾ. ಇಷ್ಟಾನಿಷ್ಟದ ಮುಂದೆ ಹೋಗಿ ಶಾಸ್ತ್ರಕ್ಕನುಸಾರ ಸಾಧನೆ ಮಾಡಿದರೆ ಮಾತ್ರ ಬೇಗನೇ ಉನ್ನತಿಯಾಗುತ್ತದೆ.ದೇವರಕೋಣೆಯಲ್ಲಿ ಕುಲದೇವತೆ, ಶ್ರೀ ಗಣಪತಿ, ಕುಲಾಚಾರಕ್ಕನುಸಾರವಿರುವ ಬಾಲಕೃಷ್ಣ, ಮಾರುತಿ ಮತ್ತು ಶ್ರೀ ಅನ್ನಪೂರ್ಣಾದೇವಿ ಈ ದೇವತೆಗಳು ಮತ್ತು ಶಿವ, ಶ್ರೀ ದುರ್ಗಾ ಇಂತಹ ಉಚ್ಚದೇವತೆಯ ಉಪಾಸನೆಯನ್ನು ಮಾಡುತ್ತಿದ್ದರೆ ಆ ದೇವತೆ, ಇಷ್ಟು ಮಾತ್ರ ಇಡಬೇಕು. (ಇದರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಓದಿ ದೇವರ ಮಂಟಪದಲ್ಲಿ ದೇವರ ಜೋಡಣೆಯನ್ನು ಹೇಗೆ ಮಾಡಬೇಕು?)
ಭಜನೆ ಮಾಡುವುದು: ನಮ್ಮಲ್ಲಿ ಊರೂರುಗಳಲ್ಲಿ ಭಜನಾ ಮಂಡಳಿಗಳಿರುತ್ತವೆ. ಭಜನೆಗಳಲ್ಲಿ ನಾಮಸ್ಮರಣೆ ಮಾಡಿರಿ, ಸತ್ಸಂಗಕ್ಕೆ ಹೋಗಿರಿ, ಸತ್ಸೇವೆ ಮಾಡಿರಿ, ಈಶ್ವರಪ್ರಾಪ್ತಿಗಾಗಿ ಏನಾದರೂ ತ್ಯಾಗ ಮಾಡಿರಿ, ದೇವರ ಬಗ್ಗೆ ತಳಮಳವಿರಲಿ ಎಂದು ಹೇಳಿರುತ್ತದೆ; ಆದರೆ ಅದನ್ನು ಕೃತಿಯಲ್ಲಿ ತರುವ ಬದಲು ಎಲ್ಲರೂ ಕೇವಲ ದೊಡ್ಡ ಸ್ವರದಲ್ಲಿ ಭಜನೆಗಳನ್ನೇ ಮಾಡುತ್ತಾ ಕುಳಿತುಕೊಳ್ಳುತ್ತಾರೆ. ಅರ್ಥಾತ್ ಸಿನಿಮಾದ ಹಾಡುಗಳನ್ನು ಹೇಳುವ ಬದಲು ಭಜನೆ ಮಾಡುವುದು ಖಂಡಿತವಾಗಿಯೂ ಒಳ್ಳೆಯದು! ಅನೇಕ ಭಜನೆಗಳಿಗಿಂತ ನಿಮ್ಮ ಕುಲದೇವಿಯ ಭಜನೆಗಳನ್ನು ಮಾಡಬೇಕು.

ಸ್ಥೂಲದಿಂದ ಸೂಕ್ಷ್ಮಕ್ಕೆ ಹೋಗುವುದು

ನಾವು ದೇವತೆಗಳ ಸ್ಥೂಲ ಮೂರ್ತಿಯನ್ನು ಅಥವಾ ಚಿತ್ರವನ್ನು ಪೂಜಿಸುತ್ತೇವೆ; ಆದರೆ ಈಶ್ವರತತ್ತ್ವವು ಸೂಕ್ಷ್ಮತಮವಾಗಿದೆ. ಹೀಗಿರುವಾಗ ನಾವು ಆಯುಷ್ಯಪೂರ್ತಿ ಆ ಸ್ಥೂಲ ಮೂರ್ತಿಯನ್ನು ಪೂಜಿಸಿ ಸೂಕ್ಷ್ಮತಮ ತತ್ತ್ವವನ್ನು ಹೇಗೆ ತಲುಪುವುದು? ಆದುದರಿಂದ ಸ್ಥೂಲ ಪೂಜೆಗಿಂತ ಮಾನಸಪೂಜೆಯನ್ನು ಮಾಡಬೇಕು, ಶರೀರದಿಂದ ದೇವಸ್ಥಾನಕ್ಕೆ ಅಥವಾ ತೀರ್ಥಯಾತ್ರೆಗೆ ಹೋಗುವುದಕ್ಕಿಂತ ಮನಸ್ಸಿನಿಂದ ಹೋಗಲು ಪ್ರಯತ್ನಿಸಬೇಕು. ಈ ರೀತಿ ಸೂಕ್ಷ್ಮದಲ್ಲಿ ಸಾಧನೆ ಮಾಡಲು ಅಭ್ಯಾಸವಾದರೆ ಒಂದು ದಿನ ನಾವು ಖಂಡಿತವಾಗಿಯೂ ಸೂಕ್ಷ್ಮತಮ ಈಶ್ವರನ ವರೆಗೆ ತಲುಪಬಲ್ಲೆವು. ನಾಮಜಪವನ್ನೂ ದೊಡ್ಡದಾಗಿ ಮಾಡುವುದಕ್ಕಿಂತ ಮನಸ್ಸಿನಲ್ಲಿಯೇ ಮಾಡಲು ಪ್ರಯತ್ನಿಸಬೇಕು. ಆರತಿಯ ಸಮಯದಲ್ಲಿ ಜೋರಾಗಿ ಆರತಿಗಳನ್ನು ಹಾಡುತ್ತಾರೆ. ಅಧ್ಯಾತ್ಮಶಾಸ್ತ್ರಕ್ಕನುಸಾರ ನಮ್ಮ ಪ್ರವಾಸವು ನಾಲ್ಕು ವಾಣಿಗಳಿಂದ ಆಗುತ್ತಾ ಹೋಗಬೇಕು. ವೈಖರಿಯಿಂದ ಮಧ್ಯಮಾ, ಮಧ್ಯಮಾದಿಂದ ಪಶ್ಯಂತಿ ಮತ್ತು ಪಶ್ಯಂತಿಯಿಂದ ಪರಾ, ಹೀಗಾಗಬೇಕು. ಇದು ನಿಜವಾದ ಸಾಧನೆಯಾಗಿದೆ. ಸಂತ ಕಬೀರರು, ‘ಇರುವೆಯ ಕಾಲಿನ ಒಂದು ಗೆಜ್ಜೆಯ ನಾದವೂ ಕೇಳಿಸುವವನಿಗೆ ನಿಮ್ಮ ಪ್ರಾರ್ಥನೆ ಕೇಳಿಸಲಾರದೇನು?’ ಆದರೆ ಜೋರಾಗಿ ಕೂಗುವುದೆಂದರೆ ಭಕ್ತಿ, ಎಂದು ಕೆಲವರ ತಿಳುವಳಿಕೆಯಾಗಿರುತ್ತದೆ!

ಕ್ಷಮತೆಗನುಸಾರ ಸಾಧನೆ

ನಮಗೆ ಏನೇನು ಮಾಡಲು ಬರುತ್ತದೆಯೋ ಅದನ್ನು ಮಾಡಿ, ಈಶ್ವರನ ಚರಣಗಳಲ್ಲಿ ಅರ್ಪಿಸುವುದು, ಅಂದರೆ ಈ ಮಾಧ್ಯಮದಿಂದ ಸಾಧನೆಯನ್ನು ಮಾಡುವುದು. ಸನಾತನ ಸಂಸ್ಥೆಯ ಪ್ರತಿಯೊಬ್ಬ ಸಾಧಕನು ಈ ತತ್ತ್ವಕ್ಕನುಸಾರ ಸಾಧನೆಯನ್ನು ಮಾಡುತ್ತಾನೆ, ಉದಾ.ಕೆಲವು ಸಾಧಕರು ಸಂಸ್ಥೆಯ ಮೂಲಕ ಪ್ರಕಟಿಸಲಾಗುವ ಗ್ರಂಥಗಳ ಸಂಕಲನದ ಸೇವೆ ಮಾಡುತ್ತಾರೆ, ಕೆಲವು ಸಾಧಕರು ದೇವತೆಗಳ ಸಾತ್ತ್ವಿಕ ಚಿತ್ರಗಳನ್ನು ಮತ್ತು ಮೂರ್ತಿಗಳನ್ನು ನಿರ್ಮಿಸುವ ಸೇವೆ ಮಾಡುತ್ತಾರೆ, ಕೆಲವು ಸಾಧಕರು ಸಮಾಜದಲ್ಲಿ ಸತ್ಸಂಗ-ಪ್ರವಚನ- ಬಾಲಸಂಸ್ಕಾರ ವರ್ಗಗಳನ್ನು ತೆಗೆದುಕೊಳ್ಳುತ್ತಾರೆ. ಕೆಲವು ಸಾಧಕರು ಸಂಸ್ಥೆಯ ಆಶ್ರಮಗಳಲ್ಲಿ ‘ಅಡುಗೆ’, ‘ಸ್ವಚ್ಛತೆ’, ಇವುಗಳ ಸೇವೆ ಮಾಡುತ್ತಾರೆ. ಮಾಧ್ಯಮ ಯಾವುದಾಗಿದ್ದರೂ, ಅನೇಕರ ಆಧ್ಯಾತ್ಮಿಕ ಪ್ರಗತಿಯಾಗುತ್ತಿದೆ.

ಮಟ್ಟಕ್ಕನುಸಾರ ಸಾಧನೆ

ಮಟ್ಟವೆಂದರೆ ಅಧಿಕಾರ. ಸಂತ ತುಕಾರಾಮ ಮಹಾರಾಜರು, ‘ಅಧಿಕಾರಕ್ಕೆ ತಕ್ಕಂತೆ ಉಪದೇಶ ಮಾಡುವೆವು’ ಎಂದು ಹೇಳಿದ್ದಾರೆ. ನಮಗೆ ಸಾಧ್ಯವಾಗುವಷ್ಟೇ ಸಾಧನೆಯನ್ನು ಮಾಡಲು ಪ್ರಯತ್ನಿಸಬೇಕು, ಆಗ ಮಾತ್ರ ಪ್ರಗತಿಯಾಗುತ್ತದೆ. ಯಾವುದು ಆಗುವುದಿಲ್ಲಾವೋ ಅದನ್ನು ಮಾಡಬಾರದು. ಮಟ್ಟಕ್ಕನುಸಾರ ಮುಂದಿನಂತೆ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇದರ ಅರ್ಥವೇನೆಂದರೆ, ಆಯಾ ಮಟ್ಟವನ್ನು ತಲುಪಲು ಆಯಾ ಸಾಧನೆಯನ್ನು ಮಾಡಬೇಕು. ನಿರ್ಜೀವ ವಸ್ತುಗಳ ಮಟ್ಟ ಶೇ.0 ಮತ್ತು ಮೋಕ್ಷವೆಂದರೆ ಶೇ.100 ಎಂದಿದ್ದರೆ, ಕಲಿಯುಗದ ಸಾಮಾನ್ಯ ವ್ಯಕ್ತಿಯ ಮಟ್ಟ ಶೇ.20ರಷ್ಟಿದೆ.

ಕಾಲಾನುಸಾರ ಸಾಧನೆ

ಕಾಲವು ಅನಂತವಾಗಿರುವುದರಿಂದ ಅದನ್ನು ಯುಗಗಳಲ್ಲಿಯೇ ಎಣಿಸಬೇಕು. ಸತ್ಯ, ತ್ರೇತಾ, ದ್ವಾಪರ ಮತ್ತು ಕಲಿ ಹೀಗೆ ನಾಲ್ಕು ಯುಗಗಳ ಒಂದು ಚಕ್ರವಿರುತ್ತದೆ. ಇಂತಹ ಚಕ್ರಗಳು ಅನಂತ ಕಾಲದಿಂದ ನಡೆಯುತ್ತಾ ಬಂದಿವೆ ಮತ್ತು ನಡೆಯುತ್ತಾ ಇರಲಿವೆ. ಕಾಲಾನುಸಾರ ಎಲ್ಲಾವೂ ಬದಲಾಗುತ್ತಿರುತ್ತದೆ. ಸತ್ಯಯುಗದಲ್ಲಿ ಸಮಾಜದ ಸಾತ್ತ್ವಿಕತೆಯು ಹೆಚ್ಚಿದ್ದುದರಿಂದ ಎಲ್ಲಾರ ಬುದ್ಧಿಯು ಪ್ರಗಲ್ಭವಾಗಿತ್ತು. ಅವರಿಗೆ ವೇದ-ಉಪನಿಷತ್ತುಗಳ ಭಾವಾರ್ಥವು ತಿಳಿಯುತ್ತಿತ್ತು. ಆದ್ದರಿಂದ ಅವರು ಜ್ಞಾನಯೋಗಕ್ಕನುಸಾರ ಸಾಧನೆ ಮಾಡುತ್ತಿದ್ದರು. ಕಾಲದ ಪ್ರವಾಹದಲ್ಲಿ ಸಾತ್ತ್ವಿಕತೆ ಮತ್ತು ಬುದ್ಧಿಯ ಪ್ರಗಲ್ಭತೆಯು ಕಡಿಮೆಯಾಗಿದ್ದರಿಂದ ತ್ರೇತಾಯುಗದಲ್ಲಿ ಸತ್ಯಯುಗದ ಸಾಧನೆಯನ್ನು ಮಾಡುವುದು ಕಠಿಣವಾಯಿತು; ಆದ್ದರಿಂದ ಧ್ಯಾನಯೋಗದ ಸಾಧನೆಯನ್ನು ಹೇಳ ಲಾಯಿತು. ಅದಕ್ಕನುಸಾರ ಆಧ್ಯಾತ್ಮಿಕ ಉನ್ನತಿಯಾಗಲು ಎಷ್ಟೋ ವರ್ಷಗಳ ಕಾಲ ಧ್ಯಾನದಲ್ಲಿ ಕುಳಿತುಕೊಳ್ಳಬೇಕಾಗುತ್ತಿತ್ತು. ಮುಂದೆ ದ್ವಾಪರಯುಗದಲ್ಲಿ ಅದೂ ಸಾಧ್ಯವಾಗಲಿಲ್ಲ ಮತ್ತು ಮನುಷ್ಯನ ಆಯುಷ್ಯವೂ ಕಡಿಮೆಯಾಯಿತು. ಇದಕ್ಕಾಗಿ ದ್ವಾಪರಯುಗದಲ್ಲಿ ಯಜ್ಞಯಾಗಾದಿ ಕರ್ಮಕಾಂಡಗಳನ್ನು ಹೇಳಲಾಯಿತು. ಪ್ರಸ್ತುತ ಕಲಿಯುಗದಲ್ಲಿ ಅದೂ ಸಾಧ್ಯವಾಗುವುದಿಲ್ಲ; ಏಕೆಂದರೆ ಯಜ್ಞಕ್ಕೆ ಆವಶ್ಯಕವಿರುವ ಸಾತ್ತ್ವಿಕ ಪುರೋಹಿತರು ಮತ್ತು ಹವನ ಮಾಡಲು ಆವಶ್ಯಕವಾಗಿರುವ ಎಲ್ಲಾ ವಸ್ತುಗಳು ಸಿಗುವುದು ಕಠಿಣವಾಗಿದೆ. ಆದುದರಿಂದ ಕಲಿಯುಗಕ್ಕಾಗಿ ‘ಯಜ್ಞಾನಾಂ ಜಪಯಜ್ಞೋಸ್ಮಿ’ ಎಂದು ಭಗವಂತನು ಗೀತೆಯಲ್ಲಿ (10.25) ಹೇಳಿದ್ದಾನೆ.
ಸಂಧಿಕಾಲದ ಸಾಧನೆಯ ಮಹತ್ವ: ಸೂರ್ಯೋದಯ, ಸೂರ್ಯಾಸ್ತ, ಗ್ರಹಣ ಕಾಲ ಇತ್ಯಾದಿ ಸಂಧಿಕಾಲಗಳಲ್ಲಿ ಸಾಧನೆಯನ್ನು ಮಾಡುವುದು ಮಹತ್ವದ್ದಾಗಿರುತ್ತದೆ. ಇದರ ಕಾರಣವೇನೆಂದರೆ, ಆ ಸಮಯದಲ್ಲಿ ಸತ್ತ್ವ, ರಜ ಅಥವಾ ತಮ ಇವುಗಳಲ್ಲಿನ ಯಾವುದೇ ಗುಣದ ಪ್ರಭಾವ ಇರುವುದಿಲ್ಲಾ, ಅಂದರೆ ಸಮಾವಸ್ಥೆ ಇರುತ್ತದೆ, ಆದುದರಿಂದ ತ್ರಿಗುಣಾತೀತರಾಗಲು ಮಾಡಬೇಕಾದ ಸಾಧನೆಯನ್ನು ಮಾಡಲು ಸುಲಭವಾಗುತ್ತದೆ. ಈಗಿನ ಕಾಲವೂ ಕಲಿಯುಗಾಂತರ್ಗತ….. ಕಲಿಯುಗದ ಕೊನೆಯಾಗಿ ಕಲಿಯುಗಾಂತರ್ಗತ….. ಸತ್ಯಯುಗ ಪ್ರಾರಂಭವಾಗಲಿದೆ, ಆದುದರಿಂದ ಯುಗಗಳ ಭಾಷೆಯಲ್ಲಿ ಸಂಧಿಕಾಲವೇ ಆಗಿದೆ. ಈ ಕಾಲದಲ್ಲಿ, ಅಂದರೆ 1999ರಿಂದ 2022 ಈ ಇಪ್ಪತ್ಮೂರು ವರ್ಷಗಳ ಕಾಲದಲ್ಲಿ, ತ್ರಿಗುಣಗಳ ವಿಷಮಾವಸ್ಥೆಯು ಕಡಿಮೆ ಪ್ರಮಾಣದಲ್ಲಿರುವುದರಿಂದ ಮಾಡಿದ ಸಾಧನೆಯು ಸಾಮಾನ್ಯವಾಗಿ 1000 ವರ್ಷಗಳ ಸಾಧನೆಯಷ್ಟು ಫಲಪ್ರದವಾಗುತ್ತದೆ. ಇದರ ಅರ್ಥವೇನೆಂದರೆ ಯಾರಾದರೊಬ್ಬರು ಪ್ರತಿಯೊಂದು ಜನ್ಮದಲ್ಲಿ 50 ವರ್ಷಗಳ ಕಾಲ ಸಾಧನೆ ಮಾಡಿದರೆ, 20 ಜನ್ಮಗಳ ಸಾಧನೆಯಷ್ಟು (50×20 = 1000) ಫಲವು ಈ 23 ವರ್ಷಗಳಲ್ಲಿ ಅವರಿಗೆ ಸಿಗುತ್ತದೆ; ಆದುದರಿಂದ ಸಾಧಕರು ಈ ಅವಕಾಶವನ್ನು ಬಿಡಬಾರದು.

ವರ್ಣಾನುಸಾರ ಸಾಧನೆ

ಭಗವಾನ ಶ್ರೀಕೃಷ್ಣನು ಹೀಗೆ ಹೇಳಿದ್ದಾನೆ, ‘ಚಾತುರ್ವಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ‘ – ಶ್ರೀಮದ್ಭಗವದ್ಗೀತಾ, ಅಧ್ಯಾಯ 4, ಶ್ಲೋಕ 13. ಇದರ ಅರ್ಥವು ಹೀಗಿದೆ – ‘ನಾನು ಗುಣಕರ್ಮಗಳಿಗನುಸಾರ ನಾಲ್ಕು ವರ್ಣಗಳನ್ನು ನಿರ್ಮಿಸಿದ್ದೇನೆ’. ಯಾರಿಗೆ ಯಾವ ಸಾಧನೆ ಮಾಡುವ ಕ್ಷಮತೆಯಿದೆಯೋ ಮತ್ತು ಯಾರಿಗೆ ಯಾವ ಸಾಧನೆಯು ಆವಶ್ಯಕವಾಗಿದೆಯೋ, ಅದಕ್ಕನುಸಾರ ಪ್ರತಿಯೊಬ್ಬರೂ ಆಯಾ ವರ್ಣದಲ್ಲಿ ಜನಿಸುತ್ತಾರೆ. ಕೊನೆಗೆ ನಮ್ಮ ತನು-ಮನ-ಧನ ಇಷ್ಟೇ ಅಲ್ಲದೇ, ಪ್ರಾಣವನ್ನೂ ಈಶ್ವರನಿಗೆ ಅರ್ಪಿಸಬೇಕಾಗಿದೆ. ತನ್ನಲ್ಲಿ ಏನು ಇದೆಯೋ ಅದನ್ನು ಈಶ್ವರನಿಗೆ ಅರ್ಪಿಸಿ ಅಂದರೆ ವರ್ಣಕ್ಕನುಸಾರ ಸಾಧನೆ ಮಾಡಿ, ಪ್ರತಿಯೊಬ್ಬರೂ ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿಯನ್ನು ಮಾಡಬಲ್ಲಾರು. ವರ್ಣಕ್ಕನುಸಾರ ಮುಂದಿನಂತೆ ಸಾಧನೆ ಮಾಡಬೇಕಾಗಿರುತ್ತದೆ.
1. ಬ್ರಾಹ್ಮಣ : ಅಧ್ಯಾತ್ಮದ ಅಧ್ಯಯನ ಮತ್ತು ಅಧ್ಯಾಪನೆಯನ್ನು ಮಾಡಿ ಸತ್ಸೇವೆ ಮಾಡಬೇಕು. ಇದು ಮನಸ್ಸು ಮತ್ತು ಬುದ್ಧಿಗಳ ಅರ್ಪಣೆಯಾಯಿತು.
2. ಕ್ಷತ್ರಿಯ :
ಅಸತಾಂ ಪ್ರತಿಷೇಧಶ್ಚ ಸತಾಂ ಚ ಪರಿಪಾಲನಯ್‌
ಏಷ ರಾಜ್ಞಾಂ ಪರೋ ಧರ್ಮಃ ಸಮರೇ ಚಾಪಲಾಯನಯ್‌॥
– ಮಹಾಭಾರತ, ಶಾಂತಿಪರ್ವ, ಅಧ್ಯಾಯ 14, ಶ್ಲೋಕ 16
ಅರ್ಥ: ರಾಜನಾದವನು ದುಷ್ಟರನ್ನು ಶಿಕ್ಷಿಸಬೇಕು, ಸತ್ಪುರುಷರನ್ನು ಸಂಭಾಳಿಸಬೇಕು ಮತ್ತು ಯುದ್ಧದಿಂದ ಎಂದಿಗೂ ಪಲಾಯನ ಮಾಡಬಾರದು; ಇದೇ ರಾಜನ ಪರಮಧರ್ಮವಾಗಿದೆ.
3. ವೈಶ್ಯ : ಹಣವನ್ನು ಸಂಪಾದಿಸುವ ಕ್ಷಮತೆಯಿರುವವನು, ಸನ್ಮಾರ್ಗದಿಂದ ಹಣ ಸಂಪಾದಿಸಿ ಅಥವಾ ಆಸ್ತಿ (ಸಂಪತ್ತು) ಇರುವವನು ಅದನ್ನು ಸತ್‌ಗಾಗಿ ಅರ್ಪಿಸಬೇಕು. ಇದು ಧನದ ಅರ್ಪಣೆಯಾಯಿತು.
4. ಶೂದ್ರ : ಯಾರಾದರೊಬ್ಬನಲ್ಲಿ ಬುದ್ಧಿ ಮತ್ತು ಹಣ ಎರಡೂ ಇಲ್ಲದಿದ್ದರೆ, ಅವನು ಶರೀರದಿಂದ ಈಶ್ವರನ, ಅಂದರೆ ಸತ್‌ನ ಸೇವೆ ಮಾಡಬಹುದು. ಇದು ತನುವಿನ ಅರ್ಪಣೆಯಾಯಿತು.

ಆಶ್ರಮಕ್ಕನುಸಾರ ಸಾಧನೆ

ನಾವು ಹೆಚ್ಚಿನ ಜನರು ಗೃಹಸ್ಥಾಶ್ರಮಿಗಳಾಗಿದ್ದೇವೆ. ಪ್ರಸ್ತುತ ಕಾಲದಲ್ಲಿ ಇತರ ಆಶ್ರಮದವರ ಸಂದರ್ಭದಲ್ಲಿ ನಮ್ಮ ಜವಾಬ್ದಾರಿಯು ಹಿಂದೆಂದೂ ಇರದಷ್ಟು ಹೆಚ್ಚಾಗಿದೆ. ಬ್ರಹ್ಮಚರ್ಯಾಶ್ರಮದಲ್ಲಿದ್ದು ಧರ್ಮಗ್ರಂಥಗಳ ಅಧ್ಯಯನ ಮಾಡುವವರ, ವಾನಪ್ರಸ್ಥಾಶ್ರಮಿಯರ, ಹಾಗೆಯೇ ಸಂನ್ಯಾಸಿಗಳ ವ್ಯವಸ್ಥೆಯನ್ನು ಹಿಂದಿನ ರಾಜ-ಮಹಾರಾಜರು ಮಾಡುತ್ತಿದ್ದರು. ಆದರೆ ಇತ್ತೀಚಿನ ನಿಧರ್ಮಿ ರಾಜಕಾರಣಿಗಳಿಂದ ಇದರ ಬಗ್ಗೆ ಯಾವ ಅಪೇಕ್ಷೆಯನ್ನಿಡುವುದು? ಆದುದರಿಂದ ನಮ್ಮ ಮೇಲೆ ಹಿಂದಿನ ಕಾಲಕ್ಕಿಂತ ಇತರ ಮೂರು ಆಶ್ರಮದವರ ಜವಾಬ್ದಾರಿ ಹೆಚ್ಚಾಗಿದೆ.
(ವರ್ಣಕ್ಕನುಸಾರ ಮತ್ತು ಆಶ್ರಮಕ್ಕನುಸಾರ ಸಾಧನೆಯ ಬಗೆಗಿನ ವಿವರವಾದ ಮಾಹಿತಿ ಯನ್ನು ಸನಾತನ-ನಿರ್ಮಿತ ಗ್ರಂಥ ‘ವರ್ಣಾಶ್ರಮವ್ಯವಸ್ಥೆ’ಯಲ್ಲಿ ಕೊಡಲಾಗಿದೆ.)

ಸಗುಣಕ್ಕಿಂತ ನಿರ್ಗುಣ ಶ್ರೇಷ್ಠ; ಆದರೆ ಸಾಧನೆಗಾಗಿ ನಿರ್ಗುಣ ಉಪಾಸನೆಗಿಂತ ಸಗುಣ ಉಪಾಸನೆ ಶ್ರೇಷ್ಠವಾಗಿದೆ

‘ಸಗುಣದ ಉತ್ಪತ್ತಿಯು ನಿರ್ಗುಣದಿಂದ ಆಗುತ್ತದೆ ಮತ್ತು ಲಯವೂ ನಿರ್ಗುಣದಲ್ಲಿಯೇ’ ಆಗುತ್ತದೆ. ಆದುದರಿಂದ ಸಗುಣಕ್ಕಿಂತ ನಿರ್ಗುಣ ಶ್ರೇಷ್ಠವಾಗಿದೆ. ಈ ಅಂಶವು ಮುಂದಿನ ಉದಾಹರಣೆಯಿಂದ ಗಮನಕ್ಕೆ ಬರುತ್ತದೆ.1.ಸಗುಣದಲ್ಲಿನ, ಅಂದರೆ ದೇಹಧಾರಿ ಗುರುಗಳಿಗಿಂತ ನಿರ್ಗುಣ ಗುರುತತ್ತ್ವವು ಹೆಚ್ಚು ಮಹತ್ವದ್ದಾಗಿರುತ್ತದೆ. ಗುರುಗಳ ದೇಹತ್ಯಾಗದ ನಂತರ ಶಿಷ್ಯನಿಗೆ ನಿರ್ಗುಣ ಗುರುತತ್ತ್ವವು ಮಾರ್ಗದರ್ಶನ ಮಾಡುತ್ತದೆ.

2.ಎಲ್ಲಿ ಶಬ್ದಗಳಲ್ಲಿ ಕಲಿಸುವುದು ಮುಗಿಯುತ್ತದೆಯೋ, ಅಲ್ಲಿ ನಿರ್ಗುಣ ಗುರುತತ್ತ್ವವು ಶಬ್ದಾತೀತ ಮಾಧ್ಯಮದಿಂದ ಮಾರ್ಗದರ್ಶನ ಮಾಡುತ್ತದೆ; ಆದುದರಿಂದ ಉನ್ನತರ ಶೇ.70ರ ಮಟ್ಟದಿಂದ ಶೇ.100 ಮಟ್ಟದವರೆಗಿನ, ಅಂದರೆ ಗುರುಪದದಿಂದ ಸದ್ಗುರುಪದ, ಮುಂದೆ ಪರಾತ್ಪರ ಗುರುಪದ ಮತ್ತು ಮೋಕ್ಷದ ವರೆಗಿನ ಪ್ರವಾಸವು ನಿರ್ಗುಣ ಗುರುತತ್ತ್ವದ ಮಾರ್ಗದರ್ಶನದಿಂದಲೇ ಆಗುತ್ತದೆ.

3.ನಿರ್ಗುಣ ಸ್ತರದಲ್ಲಿನ 6ನೇ ಮತ್ತು 7ನೇ ಪಾತಾಳದ ಮಾಂತ್ರಿಕರನ್ನು ನಿರ್ಗುಣ ಈಶ್ವರೀ ತತ್ತ್ವವೇ ಸೋಲಿಸಬಲ್ಲದು.’

– (ಪರಾತ್ಪರ ಗುರು) ಡಾ.ಜಯಂತ ಆಠವಲೆ (2.12.2006)

ತತ್ತ್ವಕ್ಕನುಸಾರ ಸಾಧನೆ

ತತ್ತ್ವಕ್ಕನುಸಾರ ಸಾಧನೆಯ ಸಿದ್ಧಾಂತವು ಅದ್ವೈತವಾದದ ಆಧಾರದಲ್ಲಿದೆ.
1. ಸಿದ್ಧಾಂತಕ್ಕೆ ಸಂಬಂಧಿಸಿದ ಕಾರ್ಯಕಾರಣಭಾವ: ‘ತತ್ತ್ವದಿಂದಲೇ ಉತ್ಪತ್ತಿ ಮತ್ತು ತತ್ತ್ವದಲ್ಲಿಯೇ ಲಯ’ ಈ ಸಿದ್ಧಾಂತಕ್ಕೆ ಸಂಬಂಧಿಸಿದ ಕಾರ್ಯಕಾರಣಭಾವದ ಮೇಲೆ ಈ ತತ್ತ್ವವು ಆಧರಿಸಿದೆ. ಈ ತತ್ತ್ವವು ಸ್ವತಃ ಈಶ್ವರವಾಚಕವಾಗಿದೆ. ಗುರುಕೃಪಾಯೋಗವು ನಿರ್ಗುಣವಾದವನ್ನು ಪುರಸ್ಕರಿಸುವುದರಿಂದ ಅದರ ಸಾಧನಾರೂಪಿ ಕಾರಣಭಾವ, ಅಂದರೆ ತತ್ತ್ವಸ್ವರೂಪದಲ್ಲಿ ಅಥವಾ ಈಶ್ವರಮಯವನ್ನು ಪ್ರಾಪ್ತಗೊಳಿಸುವುದಾಗಿದೆ.
2. ಕೆಟ್ಟದಿಂದ ಒಳ್ಳೆಯದನ್ನು ಪಡೆದುಕೊಳ್ಳುವುದು: ‘ತತ್ತ್ವಕ್ಕನುಸಾರ ಸಾಧನೆ’ ಈ ಸಿದ್ಧಾಂತವು ಮೂಲತತ್ತ್ವಕ್ಕೆ ಸಂಬಂಧಿಸಿದೆ, ಅಂದರೆ ಬ್ರಹ್ಮಾಂಡಧಾರಣೆಗೆ ಸಂಬಂಧಿಸಿದೆ. ಮಾಂತ್ರಿಕರನ್ನೂ ಗುರುಗಳನ್ನಾಗಿ ಮಾಡಿಕೊಂಡು ಸಾಕ್ಷೀಭಾವದಿಂದ ಅವರಲ್ಲಿನ ಈಶ್ವರೀ ತತ್ತ್ವವನ್ನು ಹುಡುಕಿ ಅವರನ್ನು ಸಮಷ್ಟಿ ಕಾರ್ಯಕ್ಕಾಗಿ ಉಪಯೋಗಿಸಿಕೊಂಡು ಅವರನ್ನು ವಿನಾಶದ ಕಡೆಗೆ ಒಯ್ಯುವುದು, ಈ ಉಚ್ಚ ಮೂಲತತ್ತ್ವವಿದೆ; ಏಕೆಂದರೆ ಕೆಟ್ಟದಿಂದ ಒಳ್ಳೆಯದನ್ನು ಪ್ರಾಪ್ತಮಾಡಿಕೊಳ್ಳಲು ಈಶ್ವರನ ಮೇಲೆ ಸಂಪೂರ್ಣ ಶ್ರದ್ಧೆ ಮತ್ತು ಅವನ ಚರಣಗಳಲ್ಲಿ ಸಮರ್ಪಿತರಾಗಬೇಕಾಗುತ್ತದೆ.
3. ಪ್ರತಿಯೊಂದು ವಿಷಯದ ಆಧ್ಯಾತ್ಮೀಕರಣ: ‘ತತ್ತ್ವಕ್ಕನುಸಾರ ಸಾಧನೆ’, ಎಂದರೆ ಪ್ರತಿಯೊಂದು ವಿಷಯವನ್ನು ಆಧ್ಯಾತ್ಮೀಕರಣಗೊಳಿಸಿ ಪ್ರತಿಯೊಂದು ವಿಷಯದಲ್ಲಿ ಚೈತನ್ಯವನ್ನು ಶೋಧಿಸಿ, ಅದನ್ನು ಕಾರ್ಯನಿರತಗೊಳಿಸಿ ಪ್ರಾಪ್ತಮಾಡಿಕೊಳ್ಳುವುದು, ಅಂದರೆ ‘ಚರಾಚರದಲ್ಲಿ ಈಶ್ವರೀ ತತ್ತ್ವವಿರುವುದರ ಅನುಭೂತಿಯನ್ನು ಪಡೆಯುವುದು’. (ಸನಾತನದ ಆಶ್ರಮಗಳಲ್ಲಿ ವಾಸಿಸುವ ಸಾಧಕರ ಉದಾಹರಣೆಯನ್ನು ನೋಡಿ ಈ ಲೇಖನದಲ್ಲಿ!)
4. ಕಂಡದ್ದು ಕರ್ತವ್ಯ: ಈ ಭಾವದಿಂದ ಕೃತಿ ಮಾಡಿದರೆ ಪ್ರತಿಯೊಂದು ಜೀವವು ನಿರ್ಗುಣ ಈಶ್ವರನ ಕಡೆಗೆ ಹೋಗಿ ಶಾಶ್ವತ ತತ್ತ್ವವನ್ನು ಪ್ರಾಪ್ತಮಾಡಿಕೊಳ್ಳುತ್ತದೆ, ಅಂದರೆ ಆಯಾ ಕ್ಷಣದಲ್ಲಿ ಅದು ಕರ್ತವ್ಯದೊಂದಿಗೆ ಏಕರೂಪವಾಗಿ ಮೋಕ್ಷದ ಅಧಿಕಾರಿಯಾಗುತ್ತದೆ. ಈ ಅವಸ್ಥೆಯಲ್ಲಿ ಅದು ಜೀವನ್ಮುಕ್ತವಾಗಿರುತ್ತದೆ. ಯಾವನು ಬದುಕುವ ಕಾರ್ಯಕಾರಿ ಸಿದ್ಧಾಂತದಿಂದಲೇ ಮುಕ್ತನಾಗಿದ್ದಾನೆಯೋ, ಅವನೇ ಜೀವನ್ಮುಕ್ತನಾಗಿರಬಹುದು.

ವ್ಯಕ್ತಿನಿಷ್ಠೆ ಇರಬಾರದು, ತತ್ತ್ವನಿಷ್ಠೆ ಇರಬೇಕು!

ಅ. ವ್ಯಕ್ತಿನಿಷ್ಠರಾಗುವುದರಿಂದ ಸಾಧನೆ ಮಾಡುವವರು ಒಬ್ಬರಲ್ಲೇ ಸಿಕ್ಕಿಹಾಕಿಕೊಳ್ಳಬಹುದು. ತತ್ತ್ವನಿಷ್ಠರಿದ್ದಾರೆ ಹೀಗೆ ಆಗುವುದಿಲ್ಲ. ಸಾಧನೆ ಮಾಡುವಾಗ ಯಾರಲ್ಲಿಯೂ ಸಿಕ್ಕಿಹಾಕಿಕೊಳ್ಳಬಾರದು; ಸಿಕ್ಕಿಹಾಕಿಹೊಳ್ಳುವುದಿದ್ದರೆ ಅದು ಕೇವಲ ಈಶ್ವರನಲ್ಲಿ! ಹೀಗೆ ಮಾಡಿದರೆ ಮಾತ್ರ ಜನ್ಮ ಮೃತ್ಯುವಿನ ಚಕ್ರದಿಂದ ಬಿಡುಗಡೆಹೊಂದಬಹುದು !
ಆ. ವ್ಯಕ್ತಿನಿಷ್ಠರಾಗುವುದರಿಂದ ಸಂಕುಚಿತರಾಗುತ್ತೇವೆ, ತತ್ತ್ವನಿಷ್ಠರಿರುವುದರಿಂದ ಹೀಗೆ ಆಗದೆ, ವ್ಯಾಪಕತೆ ಬರುತ್ತದೆ. ಅಧ್ಯಾತ್ಮದಲ್ಲಿ ಸಂಕುಚಿತತೆಗೆ ಸ್ಥಾನ ಇಲ್ಲ, ಬದಲಾಗಿ ‘ವಸುಧೈವ ಕುಟುಂಬಕಂ’ ಎಂಬ ಸ್ಥಿತಿಯನ್ನು ಗಿಟ್ಟಿಸಲಿಕ್ಕಿರುತ್ತದೆ.

ಆಧಾರ : ಸನಾತನ-ನಿರ್ಮಿತ ‘ಗುರುಕೃಪಾಯೋಗಾನುಸಾರ ಸಾಧನೆ’ ಗ್ರಂಥ

Leave a Comment