ಕೋಟಿ ಕೋಟಿ ಕೃತಜ್ಞತೆಗಳು ಎಂದು ಏಕೆ ಹೇಳುತ್ತಾರೆ ?

ಭಕ್ತರು ಕೃತಜ್ಞತೆಯನ್ನು ವ್ಯಕ್ತಪಡಿಸುವಾಗ ‘ದೇವರೇ, ನಿಮ್ಮ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು’ ಎಂದು ಹೇಳುತ್ತಾರೆ. ‘ಕೋಟಿ ಕೋಟಿ ಕೃತಜ್ಞತೆಗಳು’ ಎಂಬುವುದರ ಅರ್ಥವೇನು? ‘ಕೋಟಿ ಕೋಟಿ ಕೃತಜ್ಞತೆ’  ಎಂಬುದನ್ನೇಕೆ ಬಳಸುತ್ತಾರೆ, ಎಂದಾದರೂ ವಿಚಾರ ಮಾಡಿದ್ದೀರಾ? ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರಗೆ ದೇವರು ನಮಗಾಗಿ ಮಾಡಿದ ಪ್ರತಿಯೊಂದು ಚಿಕ್ಕ ಚಿಕ್ಕ ವಿಷಯಕ್ಕೂ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅದು ಅಪೂರ್ಣವೇ ಆಗುತ್ತದೆ. ಹಾಗಾಗಿ ‘ಕೋಟಿ ಕೋಟಿ ಕೃತಜ್ಞತೆ’ ಎಂದು ಬಳಸಲಾಗುತ್ತದೆ.

(ಸದ್ಗುರು) ಶ್ರೀ. ರಾಜೇಂದ್ರ ಶಿಂದೆ
ಸದ್ಗುರು (ಶ್ರೀ.) ರಾಜೇಂದ್ರ ಶಿಂದೆ

1. ಶರೀರವನ್ನು ವ್ಯವಸ್ಥಿತವಾಗಿ ನಡೆಸುವುದಕ್ಕಾಗಿ ಕೃತಜ್ಞತೆ!

ನಮ್ಮ ಶರೀರದ ಕಾರ್ಯ ಹೇಗೆ ನಡೆಯುತ್ತದೆ? ನನ್ನ ಶ್ವಾಸೋಚ್ಚ್ವಾಸ ಮತ್ತು ಹೃದಯದ ಕಾರ್ಯ ಹೇಗೆ ನಡೆಯುತ್ತದೆ? ಅದರ ಮೇಲೆ ನನ್ನ ನಿಯಂತ್ರಣವಿದೆಯೇ? ನನಗೆ ಹಸಿವು ಹೇಗಾಗುತ್ತದೆ? ನಾನು ಯಾವುದೇ ಆಹಾರವನ್ನು ಸೇವಿಸಿದರೂ, ಅದರಿಂದ ರಕ್ತ, ಮಜ್ಜೆ, ರಸ, ಮಾಂಸ, ಅಸ್ಥಿ, ಮೇದ ಇತ್ಯಾದಿಗಳು ಹೇಗೆ ತಯಾರಾಗುತ್ತವೆ? ಅವುಗಳ ಮೇಲೆ ನನ್ನ ನಿಯಂತ್ರಣವಿದೆಯೇ? ಶರೀರದಲ್ಲಿ ನಡೆಯುವ ಇತರ ಕೃತಿಗಳು ಹೇಗೆ ಆಗುತ್ತವೆ? ಅವುಗಳ ಮೇಲೆ ನನ್ನ ನಿಯಂತ್ರಣವಿಲ್ಲದಿರುವಾಗಲೂ ಈ ಕೃತಿಗಳು ವ್ಯವಸ್ಥಿತವಾಗಿ ಮತ್ತು ನಿರಂತರವಾಗಿ ನಡೆಯುತ್ತಿವೆ. ಅವುಗಳ ಮೇಲಿನ ಪೂರ್ಣ ನಿಯಂತ್ರಣ ಭಗವಂತನಲ್ಲಿದೆ. ಅದಕ್ಕಾಗಿ ಎಷ್ಟು ಕೃತಜ್ಞತೆ ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿದೆ!

2. ಸೃಷ್ಟಿ ಮತ್ತು ನಿಸರ್ಗ ನೀಡಿದ ವಿಷಯಗಳಿಗೆ ಕೃತಜ್ಞತೆ!

ಸೃಷ್ಟಿ ಹೇಗಿದೆ? ವಿವಿಧ ಗಿಡ-ಮರಗಳು, ಪರಿಮಳ ಬೀರುವ ಬಣ್ಣ ಬಣ್ಣದ ಹೂವುಗಳು, ವಿವಿಧ ರುಚಿಯ ಹಣ್ಣುಗಳು, ವಿವಿಧ ಪ್ರಕಾರದ ಧಾನ್ಯಗಳು ಇವೆಲ್ಲವುಗಳನ್ನೂ ದೇವರು ನಮಗಾಗಿ ನಿರ್ಮಿಸಿದ್ದಾರೆ. 1 ಲೀಟರ್ ಶುದ್ಧ ನೀರನ್ನು ಖರೀದಿಸಲು 15 ರಿಂದ 20 ರೂಪಾಯಿಗಳನ್ನು ತೆರಬೇಕಾಗುತ್ತದೆ. ದೇವರು ಗಾಳಿ, ನೀರು ಮತ್ತು ಪ್ರಕಾಶವನ್ನು ಕೊಡದೇ ಇದ್ದರೆ, ನಾವು ಬದುಕಲು ಸಾಧ್ಯವಾಗುತ್ತಿತ್ತೇ? ಇದೆಲ್ಲ ಉಚಿತವಾಗಿ ಸಿಗುತ್ತಿರುವಾಗ ಅದಕ್ಕಾಗಿ ನಾವು ಎಷ್ಟು ಸಲ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ? ಇವೆಲ್ಲವುಗಳಿಗಾಗಿಯೂ ನಾವು ಕ್ಷಣಕ್ಷಣಕ್ಕೂ ಕೃತಜ್ಞತೆಯನ್ನು ಸಲ್ಲಿಸಬೇಕು!

3. ಇತರ ದೇಶಗಳ ತುಲನೆಯಲ್ಲಿ ಭಾರತೀಯರು ಸಮಾಧಾನಿ ಸ್ಥಿತಿಯಲ್ಲಿದ್ದಾರೆ ಎಂಬುದಕ್ಕಾಗಿ ಕೃತಜ್ಞತೆ!

ಇಂದು ಜಗತ್ತಿನಲ್ಲಿನ ಅನೇಕ ದೇಶಗಳಲ್ಲಿ ಆರಾಜಕ ಸ್ಥಿತಿ ಇದೆ. ಅಮೇರಿಕಾದಂತಹ ಶ್ರೀಮಂತ ದೇಶದಲ್ಲಿ ನೈತಿಕತೆ ಎಷ್ಟರ ಮಟ್ಟಿಗೆ ರಸಾತಳಕ್ಕೆ ಇಳಿದಿದೆ ಎಂದರೆ ಅಲ್ಲಿನ ನಾಗರಿಕರಿಗೆ ಮನಃಶಾಂತಿ ಸಿಗುತ್ತಿಲ್ಲ. ಕೆಲವು ದೇಶಗಳಲ್ಲಿ ಕ್ರೌರ್ಯ ಮಿತಿಮೀರಿ ಹೋಗಿದೆ, ಮತ್ತು ಆಫ್ರಿಕಾ ದೇಶಗಳಲ್ಲಿ ಪರಾಕಾಷ್ಠೆಯ ಬಡತನವಿದೆ. ಈ ದೇಶಗಳ ತುಲನೆಯಲ್ಲಿ ಭಾರತದಲ್ಲಿ ಜೀವನವೂ ಇಂದಿಗೂ ಹೆಚ್ಚು ಕಡಿಮೆ ಸಮಾಧಾನಕರವಿದೆ, ಅದು ಕೇವಲ ದೇವರು, ಸಂತರು ಮತ್ತು ಗುರುಗಳ ಕೃಪೆಯಿಂದಲೇ ಇದೆ.

4. ಋಷಿಮುನಿಗಳು, ದಾರ್ಶನಿಕ ಸಂತರು ಮತ್ತು ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು!

4 ಅ. ಎರಡನೇ ಮಹಾಯುದ್ಧದ ಸಮಯದಲ್ಲಿ ಭಾರತವಿರೋಧಿ ಕೆಟ್ಟ ಶಕ್ತಿಗಳಿಂದ ದೇಶವನ್ನು ರಕ್ಷಿಸಲು ಮಹರ್ಷಿ ಅರವಿಂದರು ಸ್ವತಃ ಸೂಕ್ಷ್ಮದಿಂದ ಹೋರಾಡಿದ್ದರು

4 ಆ. ಭಾರತದಲ್ಲಾದ ಅನೇಕ ನೈಸರ್ಗಿಕ ಆಪತ್ತುಗಳು, ಯುದ್ಧ ಸದೃಶ ಪರಿಸ್ಥಿತಿಗಳನ್ನು ಹಿಮಾಲಯದಲ್ಲಿ ತಪಸ್ಸು ಮಾಡುವ ತಪಸ್ವಿಗಳು ತಮ್ಮ ತಪೋಬಲದಿಂದ ತಡೆಗಟ್ಟಿದ್ದರು ಎಂಬುದು ದಾರ್ಶನಿಕ ಸಂತರು ಬರೆದ ಲೇಖನಗಳಿಂದ ಮತ್ತು ಗ್ರಂಥಗಳಿಂದ ಗಮನಕ್ಕೆ ಬರುತ್ತದೆ.

4 ಇ. ಭಾರತದಲ್ಲಿಂದು ಅಪರಾಧ, ಭ್ರಷ್ಟಾಚಾರ, ಸ್ತ್ರೀಯರ ಮೇಲಾಗುವ ಅತ್ಯಾಚಾರಗಳು, ವಿದ್ರೋಹಿ ಚಟುವಟಿಕೆಗಳಲ್ಲಿ ಹೆಚ್ಚಳವಾಗಿದೆ, ಪ್ರಜೆಗಳು ಸಾಧನೆಯನ್ನು ಮಾಡದ ಕಾರಣ ರಜ-ತಮದ ಪ್ರಾಬಲ್ಯವೂ ಬಹಳ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೂ ಭಾರತದ ಜನರು ಸ್ವಲ್ಪ ಸುಸ್ಥಿತಿಯ ಜೀವನವನ್ನು ನಡೆಸುತ್ತಿದ್ದಾರೆ.

ಅದಕ್ಕೆಲ್ಲ ಈಗಲೂ ಅನೇಕ ಜ್ಞಾತ-ಅಜ್ಞಾತ ಸಂತರು ಸಮಷ್ಟಿಗಾಗಿ ಸಾಧನೆ ಮಾಡುತ್ತಿರುವುದೇ ಕಾರಣವಾಗಿದೆ. ಹಿಮಾಲಯದಲ್ಲಿ ಋಷಿಮುನಿಗಳೂ ಸಾಧನೆಯನ್ನು ಮಾಡುತ್ತಿರುವುದರಿಂದ ರಜ-ತಮದ ಪ್ರಕೋಪದಿಂದ ಭಾರತದ ರಕ್ಷಣೆಯಾಗುತ್ತಿದೆ. ಆದರೆ ದುರದೃಷ್ಟವಶಾತ್ ಈಗಿನ ಜನರಿಗೆ ಇದು ತಿಳಿದಿಲ್ಲ.

4 ಈ. ಕೆಟ್ಟ ಶಕ್ತಿಗಳು ಮಾನವರ ಮೇಲೆ ನಿರಂತರವಾಗಿ ಆಕ್ರಮಣಗಳನ್ನು ಮಾಡುತ್ತಿರುತ್ತವೆ; ಆದರೆ ಮಾನವರಿಗೆ ಸೂಕ್ಷ್ಮಜ್ಞಾನ ಇಲ್ಲದ ಕಾರಣ ಅದು ಅವರಿಗೆ ತಿಳಿಯುವುದಿಲ್ಲ. ಆದುದರಿಂದ ಇದರ ಬಗ್ಗೆ ಅವರು ಸಂಪೂರ್ಣ ಅಜ್ಞಾನಿಗಳೇ ಆಗಿರುತ್ತಾರೆ; ಆದರೆ ಹಿಮಾಲಯದಲ್ಲಿರುವ ಸಂತರು ಮತ್ತು ಭಾರತದಲ್ಲಿರುವ ನಿಜವಾದ ಸಂತರು ಮತ್ತು ಗುರುಗಳು ಕೆಟ್ಟ ಶಕ್ತಿಗಳ ವಿರುದ್ಧ ನಿರಂತರವಾಗಿ ಹೋರಾಡುವುದರಿಂದ ಕ್ಷಣಕ್ಷಣಕ್ಕೂ ಮಾನವನ ರಕ್ಷಣೆಯಾಗುತ್ತಿರುತ್ತದೆ. ಅದಕ್ಕಾಗಿ ಪ್ರತಿಯೊಂದು ಕ್ಷಣಕ್ಕೂ ಕೃತಜ್ಞತೆಯನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗುವುದು; ಏಕೆಂದರೆ ಕೆಟ್ಟ ಶಕ್ತಿಗಳ ವಿರುದ್ಧ ಹೋರಾಡುವ ಸಾಮರ್ಥ್ಯವು ಮಾನವರಲ್ಲಿ ಸ್ವಲ್ಪವೂ ಇರುವುದಿಲ್ಲ. ಅದಕ್ಕಾಗಿ ಸಮಾಜವು ಋಷಿ ಮುನಿಗಳ ಮತ್ತು ಸಂತರ ಬಗ್ಗೆ ಸದಾ ಕೃತಜ್ಞವಾಗಿರಬೇಕು!

5. ಯಜ್ಞಯಾಗಾದಿ ಸಾಧನೆಗಳಿಂದ ಕೆಟ್ಟ ಶಕ್ತಿಗಳಿಂದ ಸಮಾಜವನ್ನು ರಕ್ಷಿಸುವ ದಾರ್ಶನಿಕ ಸಂತರ ಬಗ್ಗೆ ಕೃತಜ್ಞತೆ!

5 ಅ. ಪ್ರಾಚೀನ ಕಾಲದಿಂದಲೂ ಋಷಿಮುನಿಗಳು ಯಜ್ಞಯಾಗ ಮುಂತಾದ ಸಾಧನೆಯನ್ನು ಮಾಡುತ್ತಿದ್ದರು. ಅದರಿಂದ ಇಡೀ ಸೃಷ್ಟಿಗೆ ಲಾಭವಾಗುತ್ತಿತ್ತು. ಆದುದರಿಂದ ಆಗಿನ ಕಾಲದ ಪ್ರಜೆಗಳಿಗೆ ಮತ್ತು ರಾಜರಿಗೆ ಅವರ ಬಗ್ಗೆ ಕೃತಜ್ಞತೆ ಅನಿಸುತ್ತಿತ್ತು.

5 ಆ. ಸನಾತನದ ರಾಮನಾಥಿ ಆಶ್ರಮದಲ್ಲಿ ವಿವಿಧ ಪ್ರಕಾರದ ಯಜ್ಞಯಾಗಗಳನ್ನು ಮಾಡಲಾಗುತ್ತದೆ. ಅದರಿಂದ ಸಾಧಕರ ಜೊತೆಗೆ ಸಂಪೂರ್ಣ ಸಮಾಜಕ್ಕೂ ಲಾಭವಾಗುತ್ತದೆ. ಇದರಲ್ಲಿ ಕೆಟ್ಟ ಶಕ್ತಿಗಳ ಆಕ್ರಮಣಗಳು ಕಡಿಮೆಯಾಗುವುದು, ಅತೃಪ್ತ ಪೂರ್ವಜರ ತೊಂದರೆಗಳು ಕಡಿಮೆಯಾಗುವುದು ಮುಂತಾದ ಲಾಭಗಳು ಆಗಿ ಇಡೀ ಸಮಾಜಕ್ಕೆ ಸುಖ-ಸಮಾಧಾನದ ಜೀವನ ಸಿಗಲಿದೆ.

5 ಇ. ದೇವರು, ಸಂತರು ಅಥವಾ ಗುರುಗಳು ಜನಸಾಮಾನ್ಯರಿಗಾಗಿ ಏನೆಲ್ಲ ಮಾಡುತ್ತಾರೆ, ಇದನ್ನು ಸ್ಥೂಲದಲ್ಲಿ ತಿಳಿದುಕೊಳ್ಳುವುದೇ ಕಠಿಣವಾಗಿರುತ್ತದೆ, ಹೀಗಿರುವಾಗ ಅವರ ಸೂಕ್ಷ್ಮದ ಕಾರ್ಯವು ನಮಗೆ ಹೇಗೆ ತಿಳಿಯುವುದು? ಈಶ್ವರನು ನನಗಾಗಿ ಎಷ್ಟೆಲ್ಲ ಮಾಡುತ್ತಿದ್ದಾನೆ, ಎಂಬ ವಿಚಾರವನ್ನು ಸತತವಾಗಿ ಮುಂದಿಟ್ಟುಕೊಂಡು ಕೃತಜ್ಞತೆಯನ್ನು ವ್ಯಕ್ತಪಡಿಸೋಣ!

6. ಸಾಮಾನ್ಯರಿಗೆ ಸಾಧನಾಮಾರ್ಗ ತೋರಿಸಿ ಅವನಲ್ಲಿ ದೇವತ್ವವನ್ನು ಪ್ರಕಟಗೊಳಿಸುವ ಗುರುಗಳ ಬಗ್ಗೆ ಕೃತಜ್ಞತೆ!

ಮನುಷ್ಯನಲ್ಲಿ ದೇವತ್ವವನ್ನು ಪ್ರಕಟ ಮಾಡುವ ಮಾರ್ಗವನ್ನು ಸಂತರು ಮತ್ತು ಗುರುಗಳು ತೋರಿಸುತ್ತಾರೆ. ‘ನರನ ನಾರಾಯಣ’ ಅಂದರೆ ಮನುಷ್ಯನನ್ನು ಸಾಕ್ಷಾತ್ ದೇವರನ್ನಾಗಿಸುವ ಶಕ್ತಿಯು ಅವರಲ್ಲಿರುತ್ತದೆ. ಸಾಧನೆಯನ್ನು ಮಾಡುವುದರಿಂದ ಸಾಮಾನ್ಯ ಮನುಷ್ಯನಲ್ಲಿ ದೇವತ್ವ ಬರುತ್ತದೆ. ಇಂತಹ ಮಾರ್ಗವನ್ನು ತೋರಿಸುವ ಗುರುಗಳ ಬಗ್ಗೆ ಜನಸಾಮನ್ಯರು ಎಷ್ಟೇ ಕೃತಜ್ಞತೆ ವ್ಯಕ್ತಪಡಿಸಿದರೂ, ಅದು ಕಡಿಮೆಯೇ ಆಗಿದೆ.

ಜಗತ್ತಿನಲ್ಲಿ ಕೇವಲ ಶೇ. ೫ ರಷ್ಟು ಜನರು ಸಾಧನೆಯನ್ನು ಮಾಡಿದರೂ ಸಾತ್ವಿಕ ಸಮಾಜದ ನಿರ್ಮಿತಿಯಾಗಬಹುದು. ಈ ಜ್ಞಾನವನ್ನು ಗುರುಗಳಲ್ಲದೆ ಇನ್ಯಾರು ಕೊಡಬಹುದು? ಸಾಧನಾಮಾರ್ಗವನ್ನು ತೋರಿಸುವ ಗುರುಗಳಿಗೆ ಕೃತಜ್ಞತೆ!

7. ಪ್ರೀತಿ ಉಕ್ಕಿ ಹರಿಯುವ ಅಂತಃಕರಣದಿಂದ ಭಗವಂತನು ಮಾನವನಿಗೆ ಎಲ್ಲವನ್ನೂ ಕೊಟ್ಟು ಕಳಿಸಿದ್ದಾನೆ!

ದೇವರು ಮನುಷ್ಯನಿಗೆ ಆನಂದಮಯ ಜೀವನ ನಡೆಸಲು ಎಲ್ಲವನ್ನೂ ಕೊಟ್ಟು ಕಳುಹಿಸಿದ್ದಾನೆ. ಅವನು ಆನಂದದಿಂದ ಮತ್ತು ಸಮಾಧಾನಿ ಜೀವನ ಸಾಗಿಸಬೇಕೆಂದು ಶಾಸ್ತ್ರಶುದ್ಧ ಮಾಹಿತಿಯಿರುವ ಧರ್ಮಾಚರಣೆಯನ್ನು ಹೇಗೆ ಮಾಡಬೇಕು, ಇದನ್ನು ಅವನು ಧರ್ಮಗ್ರಂಥಗಳಿಂದ ಹೇಳಿದ್ದಾನೆ. ಅದನ್ನು ಆಚರಣೆಗೆ ತಂದು ಮಾನವನು ಆನಂದಿ ಆಗಬಹುದು. ಮಾನವನ ಕಲ್ಯಾಣಕ್ಕಾಗಿ ಆವಶ್ಯಕವಿರುವ ಎಲ್ಲ ಜ್ಞಾನವನ್ನು ದೇವರು ಈ ಧರ್ಮಗ್ರಂಥಗಳ ಮೂಲಕ ಕೊಟ್ಟಿದ್ದಾನೆ. ಈಗಿನ ಮಾನವನಿಗೆ ತನ್ನ ಕಲ್ಯಾಣಕ್ಕಾಗಿ ಏನಾದರೂ ಮಾಡುವ ಕ್ಷಮತೆಯಿಲ್ಲ. ಸಂತರು, ಋಷಿಮುನಿಗಳು ಮತ್ತು ದೇವತೆಗಳು ಇದೆಲ್ಲವನ್ನೂ ಬಹಳ ಪ್ರೀತಿಮಯ ಅಂತಃಕರಣದಿಂದ ಮನುಷ್ಯನಿಗೆ ಕೊಟ್ಟಿದ್ದಾರೆ. ಅದಕ್ಕಾಗಿ ಅವರ ಚರಣಗಳಲ್ಲಿ ಎಷ್ಟೇ ಕೃತಜ್ಞತೆಗಳನ್ನು ಸಲ್ಲಿಸಿದರೂ, ಅದು ಸಾಲದು!

ಅಗಾಧ ಕ್ಷಮತೆಯಿಂದ ಬ್ರಹ್ಮಾಂಡದ ಕಾರ್ಯವನ್ನು ಆಯೋಜನಾಬದ್ಧವಾಗಿ ನಡೆಸುವ ಪರಮೇಶ್ವರನ ಚರಣಗಳಿಗೆ ಕೋಟಿ ಕೋಟಿ ಕೃತಜ್ಞತೆಗಳು!

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ.

Leave a Comment