ಸಾಮಾನ್ಯ ವ್ಯಕ್ತಿಯು ಈಶ್ವರನಲ್ಲಿ ಐಕ್ಯವಾಗಲು ಬೇಕಾದ ಸಾಧನೆಯ ಹಂತಗಳು

ಸನಾತನದ ಮೊದಲ ಪರಾತ್ಪರ ಗುರು ಕೈ. ಕಾಲಿದಾಸ ದೇಶಪಾಂಡೆಯವರು ಬಹಿರಂಗಪಡಿಸಿದ ಸಾಮಾನ್ಯ ವ್ಯಕ್ತಿಯು ಈಶ್ವರನಲ್ಲಿ ಐಕ್ಯವಾಗಲು ಬೇಕಾದ ಸಾಧನೆಯ ಹಂತಗಳು !

೨೦೦೭ ರಲ್ಲಿ ನನ್ನ ಮನಸ್ಸಿನಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಪರಾತ್ಪರ ಗುರು ದೇಶಪಾಂಡೆ ಕಾಕಾರವರ ಆಧ್ಯಾತ್ಮಿಕ ಮಟ್ಟವನ್ನು ಹೇಳಿದರು. ಅವರು ಸಂತರಾದರು; ಆದರೆ ನನ್ನ ಆಧ್ಯಾತ್ಮಿಕ ಮಟ್ಟದ ಬಗ್ಗೆ ಏನೂ ಹೇಳಲಿಲ್ಲ. ನಾನು ಕೇವಲ ಸಾಧನೆ ಮಾಡುತ್ತಿದ್ದೇನೆ; ಆದರೆ ಮಟ್ಟವಂತೂ ಕಾಣಿಸುವುದಿಲ್ಲ; ಎಂಬ ವಿಚಾರ ಬಂತು. ಆದ್ದರಿಂದ ನಾನು ಪರಾತ್ಪರ ಗುರು ದೇಶಪಾಂಡೆ ಕಾಕಾರವರನ್ನು “ನಮ್ಮ ಆಧ್ಯಾತ್ಮಿಕ ಮಟ್ಟ ಎಷ್ಟಿದೆ ಎಂಬುದನ್ನು ಹೇಗೆ ಅರಿತುಕೊಳ್ಳುವುದು ?” ಎಂದು ಕೇಳಿದೆ. ಅದಕ್ಕೆ ಅವರು ಈ ಕೆಳಗಿನಂತೆ ವಿವರವಾದ ವಿವೇಚನೆಯನ್ನು ನೀಡಿದರು.

೧. ಶೇ. ೩೫ ರಿಂದ ೫೦ ರವರೆಗಿನ ಆಧ್ಯಾತ್ಮಿಕ ಮಟ್ಟ

೧ ಅ. ನಾಮಸ್ಮರಣೆ ಹಾಗೂ ಸತ್ಸಂಗದ ಆಸಕ್ತಿ ಮೂಡುವುದು ಹಾಗೂ ತಮೋಗುಣ ಕಡಿಮೆಯಾಗಿ ರಜೋಗುಣ ಹೆಚ್ಚಾಗುವುದು : ವ್ಯಕ್ತಿಯ ಶೇ. ೩೫ ರಿಂದ ೪೦ ಆಧ್ಯಾತ್ಮಿಕ ಮಟ್ಟವಿರುವಾಗ ಅವರು ನಾಮಸ್ಮರಣೆಯನ್ನು ಮಾಡುತ್ತಾರೆ. ಗುರುಕೃಪಾಯೋಗಾನುಸಾರ ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ, ನಾಮ, ಸತ್ಸಂಗ, ಸೇವೆ, ಭಾವ, ತ್ಯಾಗ ಹಾಗೂ ಪ್ರೀತಿ ಹೀಗೆ ಹಂತಹಂತವಾಗಿ ಸಾಧನೆ ಮಾಡುತ್ತಾ ನಾಮಜಪವು ಏಕಾಗ್ರತೆಯಿಂದ ಆಗಲು ಪ್ರಾರಂಭವಾಗುತ್ತದೆ. ನಮಗೆ ಸತ್ಸಂಗದ ಬಗ್ಗೆ ಆಸಕ್ತಿ ಹೆಚ್ಚಾಗುತ್ತದೆ. ನಮ್ಮ ತನು, ಮನ ಹಾಗೂ ಧನವನ್ನು ಸ್ವಲ್ಪ ಪ್ರಮಾಣದಲ್ಲಾದರೂ ತ್ಯಾಗ ಮಾಡಲು ಪ್ರಾರಂಭವಾಗುವುದು. ಇದರಿಂದ ನಮಗೆ ಆನಂದ ಸಿಗುತ್ತದೆ. ನಮ್ಮಲ್ಲಿನ ತಮೋಗುಣ ಕಡಿಮೆಯಾಗಿ ರಜೋಗುಣ ಹೆಚ್ಚಾಗುತ್ತದೆ. ವ್ಯವಹಾರದಲ್ಲಿ ಯಶಸ್ಸು ಸಿಗುವುದರಿಂದ ನಮಗೆ ಆನಂದವಾಗುತ್ತದೆ. ಈ ರೀತಿ ಸಾಧನೆ ಮಾಡುವುದರಿಂದ ನಮ್ಮ ಆಧ್ಯಾತ್ಮಿಕ ಮಟ್ಟವು ಶೇ. ೫೦ ರವರೆಗೂ ತಲುಪುತ್ತದೆ.

೨. ಶೇ. ೫೦ ರಿಂದ ೬೦ ಆಧ್ಯಾತ್ಮಿಕ ಮಟ್ಟ

೨ ಅ. ಪ್ರಾರಬ್ಧಕ್ಕನುಸಾರವಾಗಿ ಸಾಧನೆಯಲ್ಲಿ ಅಡಚಣೆಗಳು ಬರುತ್ತದೆ; ಆದರೆ ಭಗವಂತನ ಮೇಲಿನ ಶ್ರದ್ಧೆ ಹೆಚ್ಚಾಗಿ ಮಾಯೆಯ ಮೋಹ ಕಡಿಮೆಯಾಗುತ್ತದೆ : ಈ ಹಂತದಲ್ಲಿ ಸಾಧನೆ ಮಾಡುತ್ತಿರುವಾಗ ಪ್ರಾರಬ್ಧಕ್ಕನುಸಾರವಾಗಿ ಸಾಧನೆಯಲ್ಲಿ ಅಡಚಣೆಗಳು ನಿರ್ಮಾಣವಾಗುತ್ತದೆ. ಆದರೆ ತಳಮಳದಿಂದ ಸಾಧನೆ ಮಾಡುತ್ತಿರುವಾಗ ‘ಭಗವಂತನು ನಮ್ಮನ್ನು ಇದರಿಂದ ಖಂಡಿತ ಹೊರಗೆ ತರುತ್ತಾನೆ’, ಎಂಬ ಶ್ರದ್ಧೆ ದೃಢವಾಗುತ್ತದೆ. ಈ ಹಂತದಲ್ಲಿ ಭಗವಂತನ ಮೇಲಿನ ಶ್ರದ್ಧೆ ಹೆಚ್ಚಾಗಿ ಮಾಯೆಯ ಆಕರ್ಷಣೆಯು ಕಡಿಮೆಯಾಗುತ್ತದೆ. ಪ್ರಾರಬ್ಧವನ್ನು ಶಾಂತವಾಗಿ ಹಾಗೂ ಆನಂದದಿಂದ ಭೋಗಿಸುವ ಸಿದ್ಧತೆಯಾಗುತ್ತದೆ. ವೃತ್ತಿ ಸಕಾರಾತ್ಮಕವಾಗುತ್ತದೆ. ಸಾಧನೆಯ ಅಡಿಪಾಯ ಗಟ್ಟಿಯಾಗುತ್ತದೆ. ಹೀಗೆ ಮಾಡುತ್ತಾ ಶೇ. ೬೦ ಅಧ್ಯಾತ್ಮಿಕ ಮಟ್ಟ ತಲುಪುತ್ತೇವೆ.

೩. ಶೇ. ೬೦ ರಷ್ಟು ಆಧ್ಯಾತ್ಮಿಕ ಮಟ್ಟದಿಂದ ಸಂತಪದವಿಯನ್ನು ತಲುಪುವ ವರೆಗಿನ ಸಾಧನೆಯ ಪ್ರವಾಸ

೩ ಅ. ಶುದ್ಧ ಬುದ್ಧಿಯು ಕಾರ್ಯನಿರತವಾಗುವ ಅವಶ್ಯಕತೆ : ‘ಸಾಧನೆಯನ್ನು ಬಿಟ್ಟು ಬೇರೆ ಪರ್ಯಾಯವಿಲ್ಲ. ಸಾಧನೆಯು ಶ್ರೇಷ್ಠವಾಗಿದೆ. ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವುದೇ ಜೀವನದ ಸಾರವಾಗಿದೆ’, ಎಂಬುದು ಬುದ್ಧಿಗೆ ಅರಿವಾಗುತ್ತದೆ. ಸಾಧನೆಯಲ್ಲಿ ಅಡಚಣೆಗಳೂ ಬರುತ್ತದೆ. ಪ್ರಾರಬ್ಧವು (ದುಃಖವು) ಹೆಚ್ಚಾಗುತ್ತದೆ. ಒಂದು ಕಡೆ ಪ್ರಾರಬ್ಧವು ಎಳೆಯುತ್ತದೆ, ಮತ್ತೊಂದೆಡೆ ಕಡೆ ಭಗವಂತನ ಮೇಲೆ ನಿಷ್ಠೆ ಹೆಚ್ಚುತ್ತಾ ಹೋಗುತ್ತದೆ. ಭಗವಂತನ ಮೇಲಿನ ತಳಮಳವು ಜೀವವನ್ನು ಶಾಂತವಾಗಿ ಕುಳಿತುಕೊಳ್ಳಲು ಬಿಡುವುದಿಲ್ಲ. ಮತ್ತೊಂದು ಕಡೆ ಮನಸ್ಸನ್ನು ಅಸ್ವಸ್ಥಗೊಳಿಸುತ್ತದೆ. ಈಶ್ವರನ ಮೇಲಿರುವ ಶ್ರದ್ಧೆ ಹೆಚ್ಚಾದರೆ ಭಾವವೂ ಹೆಚ್ಚಾಗುತ್ತದೆ, ಸ್ವಭಾವದೋಷ ಪ್ರಕಟವಾಗದಿದ್ದರೆ, ‘ಮಾಡುವವನು – ಮಾಡಿಸಿಕೊಳ್ಳುವವನು ಭಗವಂತನೇ ಆಗಿದ್ದಾನೆ, ಈಶ್ವರೇಚ್ಛೆಯಿಲ್ಲದೆ ಒಂದು ಎಲೆ ಕೂಡ ಅಲುಗಾಡುವುದಿಲ್ಲ’, ಎಂಬುದು ಬುದ್ಧಿಗೆ ತಿಳಿದರೆ ಪ್ರಾರಬ್ಧಕ್ಕನುಸಾರವಾಗಿ ಬಂದ ಭೋಗವನ್ನು ಅನುಭವಿಸುತ್ತಿರುವಾಗ ಭಗವಂತನ ದೃಷ್ಟಿಯಲ್ಲಿರುವಾಗ ಮುಂದೆ ಹೋಗಲು ಸಾಧ್ಯವಾಗುತ್ತದೆ.

ಕ್ರಿಯಮಾಣವು ಯೋಗ್ಯದಿಕ್ಕಿನತ್ತ ಇರಬೇಕು. (ಮಾಯೆಯಲ್ಲಿನ ಕರ್ತವ್ಯವನ್ನು ನಿರ್ವಹಿಸಬೇಕು, ಅಂದರೆ ಅದನ್ನು ಸಾಕ್ಷಿಭಾವದಿಂದ ನೋಡಬೇಕು.) ‘ಭಗವಂತನು ಜೊತೆ ನೀಡುವುದಿಲ್ಲ, ಎಂದು ಹೇಳುತ್ತಾ ಮಾಯೆಯ ಕಡೆ ವಾಲುವಂತಾಗುತ್ತದೆ’ ಹಾಗೂ ‘ನನ್ನನ್ನು ಬಿಟ್ಟು ಯಾರು ಮಾಡುವರು ? ನನ್ನ ಕರ್ತವ್ಯವನ್ನು ನಾನೇ ನಿರ್ವಹಿಸಬೇಕಲ್ಲ. ಸಂಸಾರವನ್ನು ಕೂಡ ಭಗವಂತನೇ ನಿರ್ಮಿಸಿದ್ದಾನಲ್ಲ’, ಎಂಬ ಅಶುದ್ಧ ಬುದ್ಧಿಯಲ್ಲಿನ ವಿಚಾರವು ಶುದ್ಧ ಬುದ್ಧಿಯನ್ನು ಬದಿಗೆ ದೂಡಿ ಕಾರ್ಯನಿರತವಾಗುತ್ತದೆ. ಈ ವಿಚಾರ ಮೇಲಿಂದ ಮೇಲೆ ಸಕಾರಾತ್ಮಕವಾಗಿ ಕಂಡು ಬಂದರೂ ಕೂಡ; ಅದು ಈಶ್ವರನಿಷ್ಠೆಯನ್ನು ಕಡಿಮೆ ಮಾಡುವುದಾಗಿದೆ. ಆಗ ಶುದ್ಧ ಬುದ್ಧಿಯು ಕಾರ್ಯರತವಾಗುವುದರ ಅವಶ್ಯಕತೆ ಇರುತ್ತದೆ.

೩ ಆ. ಪ್ರಾರಬ್ಧಭೋಗವನ್ನು ಆನಂದದಿಂದ ಭೋಗಿಸಿ ಸ್ವೇಚ್ಛೆಯನ್ನು ತ್ಯಜಿಸುವುದು : ಪ್ರತಿಯೊಬ್ಬರ ಪ್ರಾರಬ್ಧವು ಬೇರೆ ಬೇರೆಯಾಗಿರುತ್ತದೆ. ಅದಕ್ಕೆ ತಕ್ಕಂತೆ ಪ್ರತಿಯೊಬ್ಬರೂ ತಮ್ಮ ಭೋಗವನ್ನು ಭೋಗಿಸಲೇ ಬೇಕಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ಕೊಡು-ಕೊಳ್ಳುವ ಲೆಕ್ಕವನ್ನು ಭೋಗಿಸಲೇ ಬೇಕಾಗುತ್ತದೆ. ಸಾಧನೆ ಮಾಡಿದರೆ ಭಗವಂತನೇ ಆ ಕೊಡು-ಕೊಳ್ಳುವ ಲೆಕ್ಕವನ್ನು ತೀರಿಸಿಕೊಳ್ಳುವನು. ಈ ರೀತಿಯ ವಿಚಾರವು ದೃಢವಾಗಿ ಸಾಧನೆ ಹೆಚ್ಚಿಸಿಕೊಂಡರೆ ನಾವು ಈಶ್ವರನ ಕಡೆ ಹೊರಳುತ್ತೇವೆ ಹಾಗೂ ಪ್ರಾರಬ್ಧ ಭೋಗವನ್ನು ಆನಂದದಿಂದ ಭೋಗಿಸುತ್ತೇವೆ. ಕ್ರಮೇಣ ನಮ್ಮ ಗಮನಕ್ಕೆ ಬರುವುದೇನೆಂದರೆ, ‘ಈ ದೇಹವು ಈಶ್ವರನದ್ದೇ ಆಗಿದೆ. ಭಗವಂತನು ಮಾಲೀಕನಾಗಿದ್ದಾನೆ. ಭಗವಂತನು ಕುಣಿಸುವನು ಹಾಗೂ ನಾನು ಗೊಂಬೆಯಂತೆ ಕುಣಿಯಬೇಕು. ನಾನು ಆನಂದದಿಂದ ಜೀವನವನ್ನು ನಡೆಸಬೇಕಾಗುತ್ತದೆ. ನನಗೆ ಪರೇಚ್ಛೆಯಿಂದ ನಡೆದುಕೊಳ್ಳಬೇಕು. ಸ್ವೇಚ್ಛೆಗೆ ಇಲ್ಲಿ ಕಿಂಚಿತ್ತೂ ಸ್ಥಾನವಿಲ್ಲ.

೩ ಇ. ಪ್ರತಿಯೊಂದು ಪ್ರಸಂಗದಲ್ಲಿ ಈಶ್ವರನ ಇಚ್ಛೆಯನ್ನು ಅರಿತುಕೊಂಡು ‘ಭಗವಂತನು ಸತತವಾಗಿ ನನ್ನೊಂದಿಗೆ ಇದ್ದಾನೆ, ಎಂಬ ಅರಿವು ಹೆಚ್ಚಾಗುವುದು : ‘ಮಾಯೆ ಹಾಗೂ ವ್ಯವಹಾರವನ್ನು ಸಾಕ್ಷಿಭಾವದಿಂದ ನೋಡುವುದು’ ಹಾಗೂ ‘ನನ್ನತನವನ್ನು ಹೋಗಲಾಡಿಸುವುದು’, ಇದರಲ್ಲಿ ತುಂಬಾ ಸಂಘರ್ಷವಾಗುತ್ತದೆ. ಅನೇಕ ಪ್ರಸಂಗಗಳು ಬರುತ್ತದೆ. ಇದರಿಂದ ಮನಸ್ಸು ಹಾಗೂ ಬುದ್ಧಿಯ ವ್ಯಾಪಾರವಾಗುತ್ತದೆ. ನಾವು ಒಂದೊಂದೇ ವಿಷಯವನ್ನು ಭಗವಂತನ ಮೇಲೆ ಬಿಡುತ್ತಾ ಹೋದರೆ ನಮ್ಮ ಆಧ್ಯಾತ್ಮಿಕ ಮಟ್ಟ ಶೇ. ೭೦ ರಷ್ಟಾಗುತ್ತದೆ. ಈ ಸ್ಥಿತಿಯಲ್ಲಿ ಸತತವಾಗಿ ಮನಸ್ಸು ಹಾಗೂ ಬುದ್ಧಿಗೆ ತಿಳಿಸಿ ಹೇಳುವಾಗ ಮನಸ್ಸಿಗೆ ಒತ್ತಡ ಬಂದರೂ ‘ಭಗವಂತನೇ ಏನೆಂಬುದನ್ನು ನೋಡುವನು’, ಎಂಬ ಸಕಾರಾತ್ಮಕ ದೃಷ್ಟಿಯಿಂದ ಪ್ರಸಂಗವನ್ನು ನೋಡಿದಾಗ ಆನಂದದ ಅನುಭೂತಿ ಬರುತ್ತದೆ. ಭಗವಂತನ ಮೇಲಿನ ಶ್ರದ್ಧೆ ಹೆಚ್ಚುತ್ತಾ ಹೋಗಿ ಅದು ದೃಢ ಶ್ರದ್ಧೆಗೆ ರೂಪಾಂತರಗೊಳ್ಳುತ್ತದೆ. ನಿಧಾನವಾಗಿ ಬೇರೆಯವರ ಮನಸ್ಸನ್ನು ಅರಿತುಕೊಳ್ಳುವ ಶಕ್ತಿ (ಪ್ರತಿಭೆ) ಪ್ರಾಪ್ತವಾಗುತ್ತದೆ. ಪ್ರತಿಯೊಂದು ಪ್ರಸಂಗದಲ್ಲಿಯೂ ‘ಭಗವಂತನು ಏನು ಹೇಳುತ್ತಿದ್ದಾನೆ ?’, ಎಂಬುದು ತಿಳಿಯುತ್ತದೆ. ‘ಭಗವಂತನು ಸತತವಾಗಿ ನನ್ನೊಂದಿಗೆ ಇದ್ದಾನೆ’, ಎಂಬುದರ ಅರಿವು ಹೆಚ್ಚಾಗುತ್ತದೆ. ನಿಧಾನವಾಗಿ ಸಾಧಕರ ಮಟ್ಟ ಶೇ. ೭೦ ರಷ್ಟಾಗಿ ಅವನಿಗೆ ಸಂತಪದವಿ ಪ್ರಾಪ್ತವಾಗುತ್ತದೆ.

೪. ಸಂತಪದವಿಯನ್ನು ತಲುಪಿದ ನಂತರ ಸಾಧನೆಯ ಪ್ರವಾಸ

೪ ಅ. ೭೦ ರಿಂದ ೮೦ ರಷ್ಟು ಆಧ್ಯಾತ್ಮಿಕ ಮಟ್ಟ

೪ ಅ ೧. ಪ್ರಾರಬ್ಧ ಭೋಗದ ಬಗ್ಗೆ ಏನೂ ಅನಿಸದೆ ಕಠಿಣ ಪ್ರಸಂಗದಲ್ಲಿ ಸ್ಥಿರವಾಗಿರಲು ಸಾಧ್ಯವಾಗುವುದು, ಮನಸ್ಸು ಶಾಂತವಾಗಿರುವುದು ಹಾಗೂ ಸಮಷ್ಟಿ ಸಾಧನೆಯಲ್ಲಿ ಆನಂದ ಸಿಗುವುದು : ಸಂತಪದವಿ ತಲುಪಿದರೂ ಷಡ್ರಿಪು ಸಂಪೂರ್ಣವಾಗಿ ನಾಶವಾಗಿರುವುದಿಲ್ಲ; ಆದರೆ ಅದು ಹಿಂದಿನಂತೆ ಆಕ್ರಮಣಕಾರಿಯಾಗಿರುವುದಿಲ್ಲ. ಹಿಂದಿನಂತೆ ಮನಸ್ಸಿನಲ್ಲಿ ಸತತವಾಗಿ ಸಂಘರ್ಷವಿರುವುದಿಲ್ಲ. ಸ್ವಲ್ಪ ಪ್ರಮಾಣದಲ್ಲಿ ಆನಂದದ ಅನುಭೂತಿ ಬರುತ್ತದೆ. ಆದ್ದರಿಂದ ಈ ಸಂತರ ಮುಖದಲ್ಲಿ ಆನಂದ ಹಾಗೂ ಶಾಂತಿಯಿರುತ್ತದೆ. ಅವರಿಗೆ ಪ್ರಾರಬ್ಧ ಭೋಗದ ಬಗ್ಗೆ ಏನೂ ಅನಿಸುವುದಿಲ್ಲ. ಅವರಿಗೆ ಯಾವುದೇ ಕಠಿಣ ಪ್ರಸಂಗದಲ್ಲಿಯೂ ಸ್ಥಿರವಾಗಿರಲು ಸಾಧ್ಯವಾಗುತ್ತದೆ. ಅವರಿಗೆ ಈಶ್ವರನ ಆಯೋಜನೆ, ಹೆಜ್ಜೆ ಹಾಗೂ ಸಕಾರಾತ್ಮಕತೆ ಸ್ಪಷ್ಟವಾಗಿ ಕಾಣಿಸುತ್ತದೆ. ದ್ವಂದ್ವ ಮನಸ್ಥಿತಿ ಹೋಗಿ ಭಗವಂತನ ಆಯೋಜನೆ ಗಮನಕ್ಕೆ ಬರುತ್ತದೆ. ಗುರುಕೃಪಾಯೋಗಾನುಸಾರ ಸಾಧನೆ ಮಾಡಿ ಸಂತಪದವಿ ತಲುಪಿದ ಮೇಲೆ ವ್ಯಕ್ತಿಗೆ ಸಮಷ್ಟಿಯಲ್ಲಿ ಆಸಕ್ತಿ ಮೂಡುತ್ತದೆ. ಅದರಲ್ಲಿ ಅವರಿಗೆ ಆನಂದವೆನಿಸುತ್ತದೆ.

೪ ಅ ೨. ಗುರುಗಳ ಬಗೆಗಿನ ಕೃತಜ್ಞತಾಭಾವದಿಂದ ಸಾಧಕರಿಗೆ ಆಧಾರ ನೀಡುವುದು : ಅವರ ಮನಸ್ಸಿನಲ್ಲಿ ಗುರುಗಳ ಮೇಲೆ ಕೃತಜ್ಞತೆಯ ಭಾವವಿರುತ್ತದೆ. ಪರಾತ್ಪರ ಗುರುಗಳು ‘ಗುರುಕೃಪಾಯೋಗ’ (ಎಂಬ ಐದನೇ ವೇದವನ್ನು) ನಿರ್ಮಿಸಿದ್ದಾರೆ. ಸಾಧಕರ ಮನಸ್ಸಿನಲ್ಲಿ ಗುರುಕೃಪಾಯೋಗದ ಮಹತ್ವವನ್ನು ಬಿಂಬಿಸಿದ್ದರಿಂದ ಅದರಂತೆ ಕೃತಿ ಮಾಡಿದರೆ ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ. ‘ಇತರ ಸಾಧಕರು ಎಲ್ಲಿ ಸಿಲುಕಿಕೊಂಡಿದ್ದಾರೆ ?’, ಎಂಬುದು ಅವರ ಗಮನಕ್ಕೆ ಬರುತ್ತದೆ. ಅವರಿಂದ ತತ್ತ್ವನಿಷ್ಠವಾಗಿ ಷಡ್ರಿಪುಗಳನ್ನು ದೂರ ಮಾಡಿ ಪ್ರೀತಿಯಿಂದ ಸಮಷ್ಟಿಯಲ್ಲಿನ ಅಡಚಣೆಗಳನ್ನು ನಿವಾರಿಸಲಾಗುತ್ತದೆ, ಅದೇ ರೀತಿ ಬೇರೆ ಸಾಧಕರಿಗೆ ಆಧಾರ ನೀಡಲಾಗುತ್ತದೆ, ಅವರಲ್ಲಿ ಆತ್ಮವಿಶ್ವಾಸ ನಿರ್ಮಿಸಲಾಗುತ್ತದೆ. ‘ಇವೆಲ್ಲವು ಗುರುದೇವರೇ ಮಾಡುತ್ತಿದ್ದಾರೆ’, ಎಂದು ಸತತವಾಗಿ ಅರಿತುಕೊಂಡು ಕೃತಜ್ಞತಾಭಾವದಲ್ಲಿದ್ದರೆ ಶೀಘ್ರವಾಗಿ ಪ್ರಗತಿಯು ಆಗುತ್ತದೆ.

೪ ಅ ೩. ನಿರಂತರವಾಗಿ ಭಗವಂತನೊಂದಿಗೆ ಅನುಸಂಧಾನದಲ್ಲಿರುವುದು ಹಾಗೂ ಗುರುವಾಜ್ಞಾಪಾಲನೆ ಮಾಡುತ್ತಿರುವಾಗ ಕರ್ಮಫಲನ್ಯಾಯವು ಅನ್ವಯಿಸದಿರುವುದು : ಈ ಸ್ಥಿತಿಯಲ್ಲಿ ಪ್ರಾರಬ್ಧವು ಎಷ್ಟೋ ಪ್ರಮಾಣದಲ್ಲಿ ಕಡಿಮೆಯಾಗಿರುತ್ತದೆ; ಆದರೆ ಕೆಟ್ಟ ಶಕ್ತಿಗಳ ಹಲ್ಲೆಯು ಹೆಚ್ಚಾಗುತ್ತದೆ. ಕೆಟ್ಟಶಕ್ತಿಯು ಅದೇ ಹಂತದಲ್ಲಿ ಶಕ್ತಿಗಳ ವಿರುದ್ಧ ಹೋರಾಡುತ್ತಿರುತ್ತದೆ. ಕೆಟ್ಟ ಶಕ್ತಿಗಳು ಶರೀರ, ಮನಸ್ಸು ಹಾಗೂ ಬುದ್ಧಿ ಹೀಗೆ ಕ್ರಮವಾಗಿ ಆಕ್ರಮಣ ನಡೆಸುತ್ತವೆ. ಕೆಟ್ಟ ಶಕ್ತಿಗಳಿಗೆ ನಮಗಿಂತ ಹೆಚ್ಚು ಸೂಕ್ಷ್ಮದ ವಿಷಯಗಳು ತಿಳಿಯುತ್ತದೆ. ಆದ್ದರಿಂದ ಅದೃಶ್ಯ ರೂಪದಲ್ಲಿ ಯುದ್ಧ ನಡೆಯುತ್ತಿರುತ್ತದೆ. ಆದ್ದರಿಂದ ಆಧ್ಯಾತ್ಮಿಕ ಪ್ರಗತಿಯಲ್ಲಿ ಏರಿಳಿತ ಆಗುತ್ತಿರುತ್ತದೆ. ಒಂದೊಂದು ಮೆಟ್ಟಿಲು ಹತ್ತುವುದೆಂದರೆ, ಎಲ್ಲೂ ತಪ್ಪು ಮಾಡದೆ ಭಗವಂತನ ಗುಣವನ್ನು ಅಳವಡಿಸಿಕೊಂಡು ಅದನ್ನು ಪ್ರತ್ಯಕ್ಷವಾಗಿ ಕೃತಿಯಲ್ಲಿ ತರುವುದಾಗಿರುತ್ತದೆ. ಈ ಸ್ಥಿತಿಯಲ್ಲಿ ಸಂತರ ಒಲವು ಈಶ್ವರನ ಸ್ವರೂಪವಾಗಲು ಇರುತ್ತದೆ. ಇದರ ಪರಿಣಾಮವು ಶರೀರದ ಮೇಲೆ, ಮಾತನಾಡುವುದರಲ್ಲಿ ಹಾಗೂ ಆಚರಣೆಯಲ್ಲಿ ದೃಶ ಸ್ವರೂಪವು ಕಾಣಿಸುತ್ತದೆ. ಈ ಸ್ಥಿತಿಯಲ್ಲಿ ಸಂತರು ಮಾಯೆಯಲ್ಲಿದ್ದರೂ ಇಲ್ಲದಂತೆ ಇರುತ್ತಾರೆ. ಅವರು ಹಗಲಿರುಳು ಭಗವಂತನ ಅನುಸಂಧಾನದಲ್ಲಿರುತ್ತಾರೆ. ಅವರು ತಮ್ಮನ್ನು ಸಂಪೂರ್ಣವಾಗಿ ಗುರುಗಳ ಚರಣಗಳಲ್ಲಿ ಅರ್ಪಿಸಿಕೊಂಡಿರುತ್ತಾರೆ. ಅವರು ಗುರುಗಳು ಏನು ಹೇಳುತ್ತಾರೆ ಅದರಂತೆ ಗುರುವಾಜ್ಞಾಪಾಲನೆ ಎಂದು ಕಾರ್ಯನಿರತರಾಗಿರುತ್ತಾರೆ; ಆದ್ದರಿಂದ ಅವರಿಗೆ ಕರ್ಮಬಂಧನ ಇರುವುದಿಲ್ಲ ಅವರಿಗೆ ಕರ್ಮಫಲನ್ಯಾಯವು ಅನ್ವಯಿಸುವುದಿಲ್ಲ. ಆದ್ದರಿಂದ ‘ಸಂತರು ಆಚರಣೆಯ ಕಡೆ ಗಮನ ಕೊಡದಿರಿ. ಅವರ ನಿಷ್ಠೆ ಹಾಗೂ ಅಸ್ತಿತ್ವದ ಲಾಭ ಪಡೆದುಕೊಳ್ಳಿರಿ’, ‘ಅವರು ಹೇಗೆ ಪ್ರಗತಿ ಮಾಡಿಕೊಂಡರು ?’ ಎಂಬ ಬಗ್ಗೆ ಚಿಂತನೆ ಮಾಡಿ, ‘ಅವರು ಏನು ಹೇಳುತ್ತಾರೆ ? ಎಂಬುದರ ಕಡೆ ಗಮನ ನೀಡಿ, ಎಂದು ಹೇಳುತ್ತಾರೆ.

೪ ಆ. ಶೇ. ೮೦ ರಿಂದ ೯೦ ರ ವರೆಗಿನ ಆಧ್ಯಾತ್ಮಿಕ ಮಟ್ಟದ ಸಂತರು

೪ ಆ ೧. ಈ ಸಂತರಿಗೆ ಕರ್ಮಬಂಧನವಿಲ್ಲದಿರುವುದು ಹಾಗೂ ಅವರಿಗೆ ಮಾಯೆ ಹಾಗೂ ಬ್ರಹ್ಮನನ್ನು ಸಾಕ್ಷಿಭಾವದಿಂದ ನೋಡಲು ಆಗುವುದು : ಶೇ. ೮೦ ರ ಆಧ್ಯಾತ್ಮಿಕ ಮಟ್ಟದ ಸಂತರಿಗೆ ಕರ್ಮಬಂಧನವಿರುವುದಿಲ್ಲ. ಅವರು ಸತತವಾಗಿ ಆನಂದದಲ್ಲಿರುತ್ತಾರೆ. ಅವರು ಮಾಯೆ ಹಾಗೂ ಬ್ರಹ್ಮನನ್ನು ಸಮಭಾವದಿಂದ ನೋಡಲು ಸಾಧ್ಯವಾಗುತ್ತದೆ. ಹಲವಾರು ಬಣ್ಣವನ್ನು ಆಟವಾಡುವ ಹಾಗೂ ಅನೇಕರಲ್ಲಿರುವ ಮಾಯೆಯಿರುತ್ತದೆ. ಇಲ್ಲಿ ಎಲ್ಲೆಡೆಯೂ ಒಂದೇ ದಾರ, ಒಂದೇ ಕಣಕ ಹಾಗೂ ಒಂದೇ ತತ್ತ್ವವಿರುತ್ತದೆ. ಈ ಒಂದು ಕಣಕದ ಸುತ್ತಲೂ ಅಥವಾ ತತ್ತ್ವದ ಸುತ್ತಲೂ ಹಲವು ಬಣ್ಣಗಳಿಂದ ಆಟವಾಡಲಾಗುತ್ತದೆ. ಆ ತತ್ತ್ವವೆಂದರೆ ಚೈತನ್ಯ ಅಥವಾ ಬ್ರಹ್ಮವಾಗಿದೆ. ನಮ್ಮಲ್ಲಿಯೂ ಕೂಡ ಈಶ್ವರನಿದ್ದಾನೆ. ಅವನ ಅಧಿಕಾರವನ್ನು ಒಪ್ಪಿಕೊಂಡು ನಡೆದುಕೊಳ್ಳುವುದು, ಅಂದರೆ ಈಶ್ವರೇಚ್ಛೆಯಿಂದ ನಡೆದುಕೊಳ್ಳುವುದು. ಈಶ್ವರನೆಂದರೆ ಪುರುಷನು ಹೌದು. ಅವನೊಂದಿಗೆ ಪ್ರಕೃತಿ (ಮಾಯೆ) ಇರುತ್ತದೆ. ಪ್ರಕೃತಿ (ಮಾಯೆ)ಯು ವಿವಿಧ ವಿಕಾರಗಳಿಂದ ಬದ್ಧವಾಗಿರುತ್ತದೆ. ಈ ಸ್ಥಿತಿಯಲ್ಲಿ ಸಂತರು ಷಡ್ರಿಪುಗಳಿಗೆ ಅಧೀನಗೊಂಡರೆ, ಪ್ರಗತಿಯ ಮಾರ್ಗದಿಂದ ಇಳಿಯುತ್ತಾರೆ. ಆಗ ಗುರುದೇವರು ನಿಧಾನವಾಗಿ ಅವರಿಗೆ ಅದನ್ನು ಮನವರಿಕೆ ಮಾಡಿಕೊಡುತ್ತಾರೆ. ‘ಪುರುಷ’ ಹಾಗೂ ‘ಪ್ರಕೃತಿಯಲ್ಲಿ’ ಇವುಗಳಲ್ಲಿ ಯಾರಿಗೆ ಜಯ ಲಭಿಸುತ್ತದೋ, ಅದರಂತೆ ಅವರ ಪ್ರಗತಿ ಅಥವಾ ಅಧೋಗತಿಯಾಗುತ್ತದೆ, ಆದ್ದರಿಂದ ಇದು ಒಂದು ರೀತಿಯಲ್ಲಿ ಹಾವು-ಏಣಿಯ ಆಟವಾಗಿರುತ್ತದೆ, ಎಂದು ಹೇಳುತ್ತಾರೆ. ಅದರಲ್ಲಿ ಅವರಿಗೆ ಎರಡೂ ಕಡೆಯಲ್ಲಿಯೂ ಕೂಡ ಸಂಪೂರ್ಣವಾದ ಜ್ಞಾನವಿರುತ್ತದೆ. ಇಲ್ಲಿ ಶುದ್ಧ ಬುದ್ಧಿ ಹಾಗೂ ವಿಕಾರ ಮನಸ್ಸಿನ ನಡುವೆ ಸಂಘರ್ಷ ನಡೆಯುತ್ತದೆ. ಈ ಯುದ್ಧ ನಡೆಯುತ್ತಿರುತ್ತದೆ. ಇದಕ್ಕೇ ‘ಭಗವಂತನು ಪರೀಕ್ಷೆ ಮಾಡುತ್ತಾನೆ’, ಎಂದು ಹೇಳುತ್ತಾರೆ.

೪ ಆ ೨. ಎಲ್ಲ ಕಡೆಯಲ್ಲಿಯೂ ಭಗವಂತನನ್ನು ನೋಡುವುದು : ಈ ಸ್ಥಿತಿಯಲ್ಲಿ ಸಂತರು ಗುರುಗಳ ಮೇಲೆ ಶ್ರದ್ಧೆಯನ್ನಿಟ್ಟುಕೊಂಡು, ಸಂಪೂರ್ಣವಾಗಿ ತಮ್ಮನ್ನು ಒತ್ತೆಯಿಟ್ಟು ಹಾಗೂ ಗುರುಗಳ ಆಜ್ಞೆಯನ್ನು ಶಿರಸಾವಹಿಸಿ ಉಕ್ಕಿ ಬರುವ ವಿಚಾರಗಳ ಅಲೆಗಳ ಮೇಲೆ ಗಮನ ನೀಡದೆ ಎಲ್ಲ ಕಡೆಗಳಲ್ಲಿಯೂ ಭಗವಂತನನ್ನು ನೋಡುತ್ತಾರೆ. ಅವರು ಪ್ರೀತಿಯ ಸಾಗರದಲ್ಲಿರುತ್ತಾರೆ. ಆದ್ದರಿಂದ ಅವರ ಮೇಲೆ ಷಡ್ರಿಪುಗಳ ಪರಿಣಾಮವಾಗುವುದಿಲ್ಲ. ಈ ರೀತಿ ಸಂತರು ಶೇ. ೯೦ ರಆಧ್ಯಾತ್ಮಿಕ ಮಟ್ಟವನ್ನು ತಲುಪುತ್ತಾರೆ.

೫. ಬ್ರಹ್ಮರೂಪವಾಗುವುದು

ಇಲ್ಲಿ ಗುರುದೇವರು ಆ ಸಂತರ ಬಗ್ಗೆ ಅವರಿಗೆ “ನೀನು ಬ್ರಹ್ಮರೂಪವಾಗಿರುವೆ” ಎಂದು ಹೇಳುತ್ತಾರೆ. ಈ ರೀತಿಯ ಸಂತರು ನಿರಾಮಯ, ನಿರಾನಂದದಲ್ಲಿ (ಶೂನ್ಯ-ಶೂನ್ಯದೊಡನೆ) ಐಕ್ಯವಾಗುತ್ತಾರೆ.

– ಶ್ರೀಮತಿ ವಸುಧಾ ಕಾಲಿದಾಸ ದೇಶಪಾಂಡೆ, ಸನಾತನ ಆಶ್ರಮ, ರಾಮನಾಥಿ, ಗೋವಾ (೨೭.೮.೨೦೧೭)

Leave a Comment