ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನ

Article also available in :

Contents


೧. ಆಪತ್ಕಾಲದ ಪೂರ್ವತಯಾರಿಯೆಂದು ಪ್ರತಿಯೊಂದು ಮನೆಯಲ್ಲಿ ತರಕಾರಿ, ಹಣ್ಣಿನ ಗಿಡಗಳು ಮತ್ತು ಔಷಧಿ ಸಸ್ಯಗಳನ್ನು ಬೆಳೆಸಿ !

ಸಂತರು-ಮಹಾತ್ಮರು, ಜ್ಯೋತಿಷಿಗಳು ಮೊದಲಾದವರ ಅಭಿಪ್ರಾಯದಂತೆ, ಆಪತ್ಕಾಲವು ಪ್ರಾರಂಭವಾಗಿದೆ ಮತ್ತು ಮುಂದಿನ ೩ ರಿಂದ ೪ ವರ್ಷಗಳ ವರೆಗೆ ಅದರ ತೀವ್ರತೆಯು ಹೆಚ್ಚಾಗುತ್ತಲೇ ಹೋಗಲಿದೆ. ಕೊರೊನಾದ ಕಾಲದಲ್ಲಿ ನಾವು ಆಪತ್ಕಾಲದ ಭೀಕರತೆಯ ಒಂದು ತುಣುಕನ್ನು ಅನುಭವಿಸಿದ್ದೇವೆ. ಆಪತ್ಕಾಲದಲ್ಲಿ ಆಹಾರ ಧಾನ್ಯಗಳು ಮತ್ತು ಸಿದ್ಧ ಔಷಧಿಗಳ ಕೊರತೆಯಾಗಲಿದೆ. ಆದ್ದರಿಂದ ಈಗಿನಿಂದಲೇ ನಾವು ಅದನ್ನು ಎದುರಿಸುವ ಸಿದ್ಧತೆಯನ್ನು ಮಾಡಬೇಕಾಗಿದೆ.

ಇಂದು ಮಾರುಕಟ್ಟೆಯಲ್ಲಿ ಸಿಗುವ ತರಕಾರಿ, ಹಣ್ಣು ಇತ್ಯಾದಿಗಳ ಮೇಲೆ ಹಾನಿಕರ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ಇಂತಹ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದರಿಂದ ವಿಷಯುಕ್ತ ಪದಾರ್ಥಗಳು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ರೋಗಗಳು ಉಂಟಾಗುತ್ತದೆ. ಸಾಧನೆಗಾಗಿ ದೇಹವು ಆರೋಗ್ಯಕರವಾಗಿರಬೇಕು. ಹಾನಿಕರ ರಾಸಾಯನಿಕಗಳಿಂದ ಮುಕ್ತ, ಅಂದರೆ ನಿರ್ವಿಷ ಆಹಾರವನ್ನು ತಿನ್ನುವಂತಾಗಲು ಸದ್ಯದ ಕಾಲದಲ್ಲಿ ಮನೆಯಲ್ಲಿಯೇ ಸ್ವಲ್ಪ ಪ್ರಮಾಣದಲ್ಲಾದರೂ ಕೆಲವು ತರಕಾರಿಗಳನ್ನು ಬೆಳೆಸುವುದು ಅನಿವಾರ್ಯವಾಗಿದೆ.

೨. ಮನೆಯಲ್ಲಿಯೇ ಗಿಡ ಬೆಳೆಸಲು ಸಮಸ್ಯೆಗಳಿದ್ದರೂ, ಅದರ ಮೇಲೆ ಉಪಾಯಯೋಜನೆಯನ್ನು ಕಂಡು ಹಿಡಿಯುವುದು ಆವಶ್ಯಕವಾಗಿದೆ !

ಮನೆಯ ಹತ್ತಿರ ಗಿಡಗಳನ್ನು ಬೆಳೆಸಲು ಸ್ಥಳದ ಕೊರತೆ, ಸಮಯದ ಅಭಾವ, ‘ತೋಟಗಾರಿಕೆ ಮಾಡುವುದು ಹೇಗೆ’, ಎಂಬ ಮಾಹಿತಿ ಇಲ್ಲದಿರುವುದು, ‘ಬೀಜಗಳು, ಗೊಬ್ಬರ ಇತ್ಯಾದಿಗಳನ್ನು ಎಲ್ಲಿಂದ ತರಬೇಕೆಂದು ತಿಳಿಯದಿರುವುದು’ ಇಂತಹ ಅನೇಕ ಸಮಸ್ಯೆಗಳಿಂದ ಬಹಳಷ್ಟು ಜನರಿಗೆ ಮನೆಗಳಲ್ಲಿ ತರಕಾರಿಗಳನ್ನು ಬೆಳೆಸಲು ತಮ್ಮಿಂದ ಸಾಧ್ಯವಿಲ್ಲ ಎಂದೆನಿಸುತ್ತದೆ. ಆದರೆ ಇವೆಲ್ಲವುಗಳ ಮೆಲೆ ಉಪಾಯಯೋಜನೆಯನ್ನು ತಾಯರಿಸಿ ಮನೆಯಲ್ಲೇ ತರಕಾರಿ, ಹಣ್ಣುಗಳು ಮತ್ತು ಔಷಧಿ ಸಸ್ಯಗಳನ್ನು ಖಂಡಿತವಾಗಿಯೂ ಬೆಳೆಸಬಹುದು. ಭೀಕರ ಆಪತ್ಕಾಲದ ಪೂರ್ವ ಸಿದ್ಧತೆಯೆಂದು ಪ್ರತಿಯೊಬ್ಬರೂ ಇದನ್ನು ಮಾಡಲೇಬೇಕಾಗಿದೆ.

೩. ಪರಾತ್ಪರ ಗುರು ಡಾಕ್ಟರರ ಕೃಪಾಶೀರ್ವಾದದಿಂದ ಕಾರ್ತಿಕ ಏಕಾದಶಿಯಿಂದ ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನ ಆರಂಭವಾಗಿದೆ !

ಪರಾತ್ಪರ ಗುರು ಡಾ. ಜಯಂತ ಆಠವಲೆ

ಎಲ್ಲ ಸಾಧಕರಿಗೆ ಈ ಮೇಲಿನ ಸಮಸ್ಯೆಗಳನ್ನು ಮೆಟ್ಟಿನಿಂತು ಮನೆಗಳಲ್ಲೇ ಸ್ವಲ್ಪವಾದರೂ ತರಕಾರಿ, ಹಣ್ಣುಗಳು ಮತ್ತು ಔಷಧಿ ಸಸ್ಯಗಳ ತೋಟಗಾರಿಕೆ ಮಾಡುವಂತಾಗಬೇಕು ಎಂಬ ಉದ್ದೇಶದಿಂದ ಕಾರ್ತಿಕ ಏಕಾದಶಿಯಿಂದ (೧೫.೧೧.೨೦೨೧) ಪರಾತ್ಪರ ಗುರು ಡಾಕ್ಟರರ ಕೃಪಾಶಿರ್ವಾದದಿಂದ ಸನಾತನವು ‘ಮನೆ ಮನೆಯಲ್ಲಿ ಕೈದೋಟ ಅಭಿಯಾನ’ವನ್ನು ಆರಂಭಿಸಿದೆ, ಈ ಅಭಿಯಾನದಡಿಯಲ್ಲಿ ಸಂಪೂರ್ಣವಾಗಿ ನೈಸರ್ಗಿಕ ರೀತಿಯಲ್ಲಿ ತೋಟಗಾರಿಕೆಯನ್ನು ಕಲಿಸಲಾಗುವುದರೊಂದಿಗೆ ಅದನ್ನು ಮಾಡಿಸಿಕೊಳ್ಳಲಾಗುವುದು ಕೂಡ.

೪. ೩೦ ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಮನೆಯ ಮೇಲ್ಛಾವಣಿಯಲ್ಲಿ ಯಾವುದೇ ರಾಸಾಯನಿಕ ಗೊಬ್ಬರವಿಲ್ಲದೆ ನಿರ್ವಿಷ ಆಹಾರವನ್ನು ಬೆಳೆಸುತ್ತಿರುವ ಪುಣೆಯ ಸೌ. ಜ್ಯೋತಿ ಶಹಾ

ಪುಣೆಯ ಸೌ. ಜ್ಯೋತಿ ಶಹಾ ಇವರು ಕಳೆದ ೩೦ ವರ್ಷಗಳಿಂದ ತಮ್ಮ ಮನೆಯ ಮೇಲ್ಛಾವಣಿಯಲ್ಲಿ ನೈಸರ್ಗಿಕ ರೀತಿಯಲ್ಲಿ ತರಕಾರಿಗಳು, ಹಣ್ಣುಗಳು ಮತ್ತು ಔಷಧಿ ಸಸ್ಯಗಳನ್ನು ಬೆಳೆಸುತ್ತಿದ್ದಾರೆ. ಚಿಕ್ಕ ಪ್ರದೇಶದಲ್ಲಿ ಅವರು ೧೮೦ಕ್ಕೂ ಹೆಚ್ಚು ಪ್ರಕಾರದ ಗಿಡಗಳನ್ನು ಬೆಳೆಸಿದ್ದಾರೆ. ಕೇವಲ ಒಂದು ಇಟ್ಟಿಗೆಯಷ್ಟು ದಪ್ಪವಿರುವ ಜಾಗದಲ್ಲಿ ಕಸಕಡ್ಡಿ, ಅಡುಗೆ ಮನೆಯ ತ್ಯಾಜ್ಯ (ಸೌ. ಶಹಾ ಇರು ಅದನ್ನು ‘ತ್ಯಾಜ್ಯ’ ಎಂದು ಕರೆಯದೆ ‘ಗಿಡಗಳ ಆಹಾರ’ ಎಂದು ಕರೆಯುತ್ತಾರೆ), ಜೊತೆಗೆ ದೇಶಿ ಗೋವಿನ ಸಗಣಿ ಮತ್ತು ಗೋಮೂತ್ರದಿಂದ ಮಾಡಿದ ‘ಜೀವಾಮೃತ’ ಹೆಸರಿನ ವಿಶಿಷ್ಟ ಪದಾರ್ಥವನ್ನು ಉಪಯೋಗಿಸಿ ‘ಮಣ್ಣಿಲ್ಲದೇ ಕೃಷಿ’ ಮಾಡಿದ್ದಾರೆ. ಜೀವಾಮೃತ ಬಿಟ್ಟು ಬೇರೆ ಯಾವುದೇ ಗೊಬ್ಬರವನ್ನು ಬಳಸದೆ ತಮ್ಮ ಮನೆಯ ಮೇಲ್ಛಾವಣಿಯಲ್ಲಿ ಅವರು ನಿರ್ವಿಷ ಆಹಾರವನ್ನು ಬೆಳೆಸುತ್ತಿದ್ದಾರೆ. ಅವರ ಸಾಧನೆಯನ್ನು ಹೊಗಳಿದಷ್ಟು ಸಾಲದು ! ಅವರು ಬೆಳೆಸಿದ ತೋಟದ ಛಾಯಾಚಿತ್ರಗಳು ಪ್ರತಿಯೊಬ್ಬರ ಮನಸ್ಸಿನಲ್ಲಿ ‘ನಗರದಗಳಲ್ಲಿ ಎದುರಾಗುವ ಜಾಗದ ಸಮಸ್ಯೆಯನ್ನು ಮೆಟ್ಟಿನಿಂತು ಯಾವುದೇ ಗೊಬ್ಬರವಿಲ್ಲದೆ ತೋಟಗಾರಿಕೆ ಮಾಡಲು ಸಾಧ್ಯವಿದೆ’ ಎಂಬ ಆತ್ಮವಿಶ್ವಾಸ ಮೂಡಿಸುತ್ತದೆ. ಸೌ. ಜ್ಯೋತಿ ಶಹಾ ಅವರು ತಮ್ಮ ಮನೆಯಲ್ಲಿ ತೋಟಗಾರಿಕೆ ಮಾಡಿ ನಿಲ್ಲಲಿಲ್ಲ, ಬದಲಾಗಿ ಅವರು ಇಲ್ಲಿಯ ತನಕ ಅಸಂಖ್ಯಾತ ಜನರಿಗೆ ಈ ತೋಟಗಾರಿಕೆಯ ವಿಧಾನವನ್ನು ಸಹ ಕಲಿಸಿದ್ದಾರೆ.

ಅಡುಗೆಮನೆಯ ತ್ಯಾಜ್ಯವನ್ನು ‘ಗಿಡಗಳ ಆಹಾರ’ ಎಂದು ಕರೆದರೆ, ಆ ಕಸವನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಕೇವಲ ಶಬ್ದವನ್ನು ಬದಲಾಯಿಸಿದ್ದರಿಂದ ನಮ್ಮ ಕೃತಿಯಲ್ಲಿಯೂ ಬದಲಾವಣೆಯಾಗುತ್ತದೆ ಮತ್ತು ನಾವು ‘ಆಹಾರ’ವನ್ನು ಎಸೆಯದೆ ‘ಗಿಡಗಳಿಗೆ ಉಣಬಡಿಸುತ್ತೇವೆ’. – ಸೌ. ಜ್ಯೋತಿ ಶಹಾ, ಪುಣೆ (೨೪.೧೦.೨೦೨೧)
ಹಣ್ಣುಗಳಿಂದ ತುಂಬಿದ ಪಪ್ಪಾಯಿ ಮರ
ಕೇವಲ ಒಂದು ಇಟ್ಟಿಗೆಯಷ್ಟು ದಪ್ಪದಾದ ಮಣ್ಣಿನಲ್ಲಿ ಬೆಳೆದ ನುಗ್ಗೆಯ ಗಿಡ
ಒಂದು ಕುಂಡದಲ್ಲಿ ಬೆಳೆಸಿದ ಮರದಲ್ಲಿ ಬಿಟ್ಟ ಪೆರಳೆಹಣ್ಣು
ಚಿಕ್ಕ ಗಿಡದಲ್ಲಿ ಬೆಳೆದ ನಿಂಬೆ
ಬಾಳೆಗಿಡದಲ್ಲಿ ಬಿಟ್ಟಿರುವ ಬಾಳೆಗೊನೆ
ಮೇಲ್ಛಾವಣಿಯಲ್ಲಿ ಹಾಲು ಕುಂಬಳಕಾಯಿಯ ಬಳ್ಳಿಯಲ್ಲಿ ಬೆಳೆದ ಹಾಲು ಕುಂಬಳಕಾಯಿಗಳು
ಹಳೆಯ ಕಾರ್ಪೆಟ್‌ನಿಂದ ಮಾಡಿದ ಚೀಲದಲ್ಲಿ ದೊಣ್ಣೆ ಮೆಣಸಿನಕಾಯಿ
ಕೃತಜ್ಞತೆಗಳು
‘ಅರ್ಬನ್ ಫಾರ್ಮಿಂಗ್’ನಲ್ಲಿ (ನಗರಗಳಲ್ಲಿ ಕೈದೋಟ) ೩೦ ವರ್ಷಗಳ ಅನುಭವ ಹೊಂದಿರುವ ಪುಣೆಯ ಸೌ. ಜ್ಯೋತಿ ಶಹಾ ಇವರನ್ನು ಸನಾತನದ ಸಾಧಕರು ಸಂಪರ್ಕಿಸಿದಾಗ, ಅವರು ಸನಾತನದ ‘ಮನೆ ಮನೆಯಲ್ಲಿ ಸಸ್ಯಸಿರಿ’ ಅಭಿಯಾನಕ್ಕೆ ಯಾವುದೇ ಸಮಯದಲ್ಲಿ ಉಚಿತ ಮಾರ್ಗದರ್ಶನ ನೀಡುವ ಸಿದ್ಧತೆಯನ್ನು ತೋರಿಸಿದರು. ‘ಯೂಟ್ಯುಬ್’ನಲ್ಲಿ ಅವರು ಮನೆಯಲ್ಲಿಯೇ ಮಾಡಿರುವ ತೋಟಗಾರಿಕೆಯ ವೀಡಿಯೋಗಳು ಇಟ್ಟಿದ್ದಾರೆ. ಈ ವೀಡಿಯೋಗಳನ್ನು ಕೆಳಗೆ ನೀಡಲಾಗಿದೆ. ಅವರು ತಯಾರಿಸಿದ ವೀಡಿಯೋಗಳಿಂದ ‘ಗಿಡಗಳನ್ನು ನೈಸರ್ಗಿಕವಾಗಿ ಹೇಗೆ ಬೆಳೆಸಬಹುದು’, ಎಂಬುದನ್ನು ಅರ್ಥಮಾಡಿಕೊಳ್ಳಲು ಬಹಳ ಸುಲಭ ಮಾಡಿಕೊಟ್ಟಿದ್ದಾರೆ. ಸೌ. ಜ್ಯೋತಿ ಶಹಾ ಅವರ ನೀಡಿದ ಅಮೂಲ್ಯ ಸಹಕಾರಕ್ಕಾಗಿ ನಾವು ಅವರ ಬಗ್ಗೆ ಕೃತಜ್ಞರಾಗಿದ್ದೇವೆ !

೫. ಯಾವುದೇ ರಾಸಾಯನಿಕ ಗೊಬ್ಬರ ಇಲ್ಲದೇ ಸ್ವಂತ ಮನೆಯಲ್ಲಿಯೇ ತೋಟಗಾರಿಕೆ ಮಾಡಬಹುದು’, ಎಂಬ ಆತ್ಮವಿಶ್ವಾಸವನ್ನು ಮೂಡಿಸುವ ಸೌ. ಜ್ಯೋತಿ ಶಹಾ ಅವರ ‘ಅರ್ಬನ್ ಫಾರ್ಮಿಂಗ್’ !

ಸೂಚನೆ : ಇಲ್ಲಿ ನೀಡಿರುವ ವೀಡಿಯೋಗಳು ಮರಾಠಿ ಭಾಷೆಯಲ್ಲಿವೆ. ಇವುಗಳ ಸಾರಾಂಶವನ್ನು ಕನ್ನಡದಲ್ಲಿ ಆಯಾ ವೀಡಿಯೋ ಕೆಳಗಡೆ ನೀಡಲಾಗಿದೆ. ಭಾಷೆ ಅರ್ಥವಾಗದಿದ್ದರೂ ಸಾರಾಂಶವನ್ನು ಓದಿ ವೀಡಿಯೋದಲ್ಲಿ ಏನು ತೋರಿಸುತ್ತಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬಹುದು. ಯಾವ ಕೃತಿಯನ್ನು ಹೇಗೆ ಮಾಡಬೇಕು ಎಂದು ತಿಳಿದುಕೊಳ್ಳಲು ವೀಡಿಯೋಗಳು ಉಪಯುಕ್ತವಾಗಿವೆ.

ವೀಡಿಯೋ ಕಾಲಾವಧಿ : ೩ ನಿಮಿಷಗಳು

ವೀಡಿಯೋ ಕಾಲಾವಧಿ : ೩ ನಿಮಿಷಗಳು

ವೀಡಿಯೋ ಕಾಲಾವಧಿ : ೫ ನಿಮಿಷಗಳು

೬. ಮನೆಯ ಕಿಟಕಿಯಲ್ಲೂ ಹೇಗೆ ತೋಟಗಾರಿಕೆ ಮಾಡಬಹುದು, ಎಂಬುದಕ್ಕೆ ಉದಾಹರಣೆ

(ಸೌಜನ್ಯ : ಶ್ರೀ ರಾಹುಲ್ ರಾಸನೆ, ಪುಣೆ)

ವೀಡಿಯೋ ಕಾಲಾವಧಿ : ೧೧ ನಿಮಿಷಗಳು

 

ವೀಡಿಯೋ ಸಾರಾಂಶ : ಮನೆಯ ಕಿಟಕಿಗಳಲ್ಲಿ ಪಾತಿ ತಯಾರಿಸಿ (segmental farming) ಅಲ್ಲಿ ಗಿಡಗಳನ್ನು ಬೆಳೆಸಬಹುದು. ೪.೫ ಇಂಚಿನ ಕಸಕಡ್ಡಿಗಳ ಪದರು ಮತ್ತು ಅದರ ಮೇಲೆ ೧ ಇಂಚಿನ ಹಸಿ ತ್ಯಾಜ್ಯದ ಪದರನ್ನು (ಸಸ್ಯಗಳ ಆಹಾರ) ಅನುಪಾತದಲ್ಲಿ ಇರಿಸಿದರೆ, ಯಾವುದೇ ರೀತಿಯ ದುರ್ವಾಸನೆ ಬರುವುದಿಲ್ಲ. (ಹಸಿ ತ್ಯಾಜ್ಯದ ಪದರವು ೧ ಇಂಚುಗಿAತ ಹೆಚ್ಚು ಇರಬಾರದು.) ಜೀವಾಮೃತವನ್ನು ಸಿಂಪಡಿಸುವುದರಿಂದ ತ್ಯಾಜ್ಯ ಬೇಗ ವಿಘಟನೆ ಆಗುತ್ತವೆ ಮತ್ತು ಆ ಸ್ಥಳವನ್ನು ಫಲವತ್ತಾಗಿಸುತ್ತದೆ. ಇದರಿಂದ ಕಡಿಮೆ ಜಾಗದಲ್ಲಿಯೂ ತರಕಾರಿ ಇತ್ಯಾದಿ ಬೆಳೆಸಬಹುದು.

೭. ಜೀವಾಮೃತ ತಯಾರಿಸುವ ಮತ್ತು ಅದನ್ನು ಬಳಸುವ ವಿಧಾನ

ವೀಡಿಯೋ ಕಾಲಾವಧಿ: ೪ ನಿಮಿಷಗಳು

ವೀಡಿಯೋ ಸಾರಾಂಶ : ನೈಸರ್ಗಿಕ ಕೃಷಿಯಲ್ಲಿ ಜೀವಾಮೃತ ಅತ್ಯಂತ ಪ್ರಮುಖ ಅಂಶವಾಗಿದೆ. ಈ ಜೀವಾಮೃತವನ್ನು ಪ್ರತಿವಾರ ತಯಾರಿಸಬೇಕು ಮತ್ತು ತಾಜಾ ಆಗಿರುವಾಗ ಬಳಸಬೇಕು.

ಅ. ೧೦೦೦ ಚದರ ಅಡಿ (೧೦೦ ಅಡಿ x ೧೦ ಅಡಿ) ತೋಟಕ್ಕಾಗಿ ಅಗತ್ಯವಿರುವ ೧೦ ಲೀಟರ್ ಜೀವಾಮೃತ ತಯಾರಿಸಲು ಬೇಕಾಗುವ ಪದಾರ್ಥಗಳು

೧. ೧೦ ಲೀಟರ್ ನೀರು

೨. ದೇಶಿ ಹಸುವಿನ ತಾಜಾ ಸಗಣಿ ಅರ್ಧದಿಂದ ೧ ಕೆಜಿ

೩. ಅರ್ಧದಿಂದ ೧ ಲೀಟರ್ ಗೋಮೂತ್ರ (ಅದು ಎಷ್ಟು ಹಳೆಯದಾದರೂ ಪರವಾಗಿಲ್ಲ)

೪. ೧ ಹಿಡಿ ಮಣ್ಣು

೫. ೧೦೦ ಗ್ರಾಂ ನೈಸರ್ಗಿಕ ಅಥವಾ ರಾಸಾಯನಿಕ ಮುಕ್ತ ಬೆಲ್ಲ

೬. ಯಾವುದೇ ಬೇಳೆಕಾಳಿನ ಹಿಟ್ಟು ೧೦೦ ಗ್ರಾಂ

ಆ. ಜೀವಾಮೃತವನ್ನು ಯಾವುದೇ ಧಾತು(ಲೋಹ)ವಿನ ಪಾತ್ರೆಯಲ್ಲಿ ತಯಾರಿಸದೇ ಮಣ್ಣಿನ ಪಾತ್ರೆಗಳಲ್ಲಿ ಅಥವಾ ಪ್ಲಾಸ್ಟಿಕ್ ಪಾತ್ರೆಗಳಲ್ಲಿ ಮಾಡಬೇಕು.

ಇ. ಜೀವಾಮೃತದ ಮಿಶ್ರಣವನ್ನು ಗೊಣಿಯಲ್ಲಿ ಅಥವಾ ಹತ್ತಿ ಬಟ್ಟೆಯಿಂದ ಮುಚ್ಚಬೇಕು.

ಈ. ೩ ದಿನಗಳ ಕಾಲ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ, ಗಡಿಯಾರದ ಮುಳ್ಳುಗಳು ತಿರುಗುವ ರೀತಿಯಲ್ಲಿ ಕೋಲಿನಿಂದ ತಿರುಗಿಸಿ ಮತ್ತು ನಾಲ್ಕನೇ ದಿನದಿಂದ ಅದನ್ನು ಬಳಸಬಹುದು.

ಉ. ಬಳಸುವಾಗ, ೧೦ ಪಟ್ಟು ಹೆಚ್ಚು ನೀರು ಸೇರಿಸಿ ಬಳಸಬೇಕು.

ವೀಡಿಯೋ ಕಾಲಾವಧಿ: ೪ ನಿಮಿಷಗಳು

ವೀಡಿಯೋ ಸಾರಾಂಶ : ಪ್ರತಿ ಸಸ್ಯಕ್ಕೆ ಜೀವಾಮೃತವನ್ನು ನೀಡುವಾಗ, ೧ ತಂಬಿಗೆ ಜೀವಾಮೃತದಲ್ಲಿ ೧೦ ತಂಬಿಗೆ ನೀರನ್ನು ಸೇರಿಸಿ. ಸಣ್ಣ ಗಿಡಗಳಿಗೆ ಈ ಜೀವಾಮೃತವನ್ನು ನೀಡುವಾಗ ಪ್ರತಿಯೊಂದು ಒಂದು ಕಪ್, ಹಾಗೂ ದೊಡ್ಡ ಮರಗಳಿಗೆ ೧ ಲೀಟರ್ ನಂತೆ ಕೊಡಬೇಕು. ಎಲ್ಲಾ ಸಸ್ಯಗಳಿಗೆ ವಾರದಲ್ಲಿ ೧ ದಿನ ಜೀವಾಮೃತ ನೀಡಬೇಕು.

೮. ಇಟ್ಟಿಗೆ, ಒಣಗಿದ ಎಲೆಗಳು ಮತ್ತು ಹುಲ್ಲುಕಡ್ಡಿಗಳಿಂದ ಪಾತಿ ತಯಾರಿಸುವ ಪದ್ಧತಿ

ವೀಡಿಯೋದ ಕಾಲಾವಧಿ : ೬ ನಿಮಿಷ

ವೀಡಿಯೋ ಸಾರಾಂಶ : ಪಾತಿ ಹೆಚ್ಚೆಂದರೆ ೨ ಅಡಿ ಅಗಲವಿರುವಂತೆ ಮಾಡಬೇಕು, ಆಗ ಅದರಲ್ಲಿ ಕೆಲಸ ಮಾಡಲು ಅನುಕೂಲವಾಗುತ್ತದೆ, ಪಾತಿಯ ಉದ್ದ ಎಷ್ಟಿದ್ದರೂ ನಡೆಯುತ್ತದೆ. ಇಟ್ಟಿಗೆ ಜೋಡಿಸಿ ಪಾತಿ ಮಾಡಬಹುದು. ಅದರಲ್ಲಿ ಹುಲ್ಲು, ತೆಂಗಿನ ನಾರು ಮತ್ತು ಎಲೆಗಳು ಹರಡಬೇಕು. ಅದನ್ನು ಕಾಲಿನಿಂದ ತುಳಿದು ಸರಿಪಡಿಸಬೇಕು. ಅದರ ಮೇಲೆ ಸುಮಾರು ಒಂದು ಇಂಚಿನಷ್ಟು ಮಣ್ಣಿನ ಪದರ ಹರಡಬೇಕು. (ಮಣ್ಣು ಇಲ್ಲದೆ ಇದ್ದರೆ ಕೇವಲ ಹುಲ್ಲು ಅಥವಾ ಒಣಗಿದ ಎಲೆಗಳನ್ನು ಹರಡಿದರೂ ನಡೆಯುತ್ತದೆ.) ಅದರ ನಂತರ ಒಂದು ಭಾಗ ಜೀವಾಮೃತ ಮತ್ತು ಹತ್ತು ಭಾಗ ನೀರು ಸೇರಿಸಿ ಮಿಶ್ರಣ ತಯಾರಿಸಿ ಸ್ವಲ್ಪ ಸ್ವಲ್ಪ ಸಿಂಪಡಿಸಬೇಕು. ಈ ಅಚ್ಚುಗಳಲ್ಲಿ ಪ್ರತಿ ದಿನ ಸ್ವಲ್ಪ ಸ್ವಲ್ಪ ನೀರು ಸಿಂಪಡಿಸಿ ಯಾವಾಗಲೂ ತೇವ ಇರುವಂತೆ ನೋಡಿಕೊಳ್ಳಬೇಕು. ವಾರದಲ್ಲಿ ಒಂದು ಬಾರಿ ಜೀವಾಮೃತ ತಯಾರಿಸಿ ಈ ಪಾತಿಗಳ ಮೇಲೆ ಸಿಂಪಡಿಸಬೇಕು. (ಹುಲ್ಲು ಅಥವಾ ಒಣಗಿರುವ ಎಲೆಗಳಲ್ಲಿ ತೇವಾಂಶವಿರುವುದರಿಂದ, ಹಾಗೂ ಜೀವಾಮೃತ ಉಪಯೋಗಿಸಿರುವುದರಿಂದ ಅದೆಲ್ಲವೂ ಬೇಗನೆ ಕೊಳೆತು ಮಣ್ಣು ತಯಾರಾಗುತ್ತದೆ)

ಒಂದು ಇಟ್ಟಿಗೆಯ ಪಾತಿ (ಬೆಡ್) ಮಾಡಿದ್ದರಿಂದ ಮೇಲ್ಛಾವಣಿಗೆ ಹೆಚ್ಚು ಭಾರ ಆಗುವುದಿಲ್ಲ. ಹಸಿಗೊಬ್ಬರದಿಂದ ಮಾಡಿದ ಫಲವತ್ತಾದ ಮಣ್ಣಿನಲ್ಲಿ ಹೆಚ್ಚಿನ ತೇವಾಂಶ ಹಿಡಿದುಕೊಳ್ಳುವ ಸಾಮರ್ಥ್ಯ ಇರುತ್ತದೆ. ಆದ್ದರಿಂದ ಗಿಡಕ್ಕೆ ಬಹಳ ಕಡಿಮೆ ನೀರು ನೀಡಿದರೂ, ಅದು ಸಾಕಾಗುತ್ತದೆ.

೯. ಮಣ್ಣು ಇಲ್ಲದೆ ಕುಂಡಗಳನ್ನು ತುಂಬಿಸುವ ಅಥವಾ ಸಸಿಗಳನ್ನು ನೆಡುವ ಪದ್ಧತಿ

ವೀಡಿಯೋದ ಕಾಲಾವಧಿ : ೫ ನಿಮಿಷ

ವೀಡಿಯೋ ಸಾರಾಂಶ : ಹೂಕುಂಡದ ತಳ (ಬುಡ)ದಲ್ಲಿ ಇರುವ ಛಿದ್ರಗಳ ಮೇಲೆ ಒಡೆದ ಕುಂಡದ ತುಂಡು ಅಥವಾ ಹೆಂಚಿನ ತುಂಡುಗಳನ್ನು ಇಡಬೇಕು. ಕುಂಡದಲ್ಲಿ ಒಣಗಿರುವ ಎಲೆಯನ್ನು ದಬ್ಬಿದಬ್ಬಿ ತುಂಬಿಸಬೇಕು. ಚೀಲದಲ್ಲಿ ನೆಟ್ಟಿರುವ ಸಸಿಯನ್ನು ಕುಂಡದಲ್ಲಿ ನೆಡುವುದಾದರೆ, ಚೀಲವನ್ನು ಕತ್ತರಿಸಿ ಅದನ್ನು ಹೊರತೆಗೆಯಬೇಕು. ಮಣ್ಣು ಸಹಿತ ಸಸಿಯನ್ನು ಕುಂಡದಲ್ಲಿ ಬಿಡಬೇಕು, ಮಣ್ಣು ತೆಗೆಯಬಾರದು (ಮಣ್ಣಿನ ಮುದ್ದೆ ಸಹಿತ ಕುಂಡದ ಒಳಗೆ ಇರಿಸಬೇಕು). ಅದು ಕುಂಡದ ಮೇಲೆ ತನಕ ಬರಬಾರದು. ಅದರ ಸುತ್ತಲೂ ಒಣಗಿರುವ ಎಲೆಗಳನ್ನು ದಬ್ಬಿ ತುಂಬಬೇಕು. ಎಲ್ಲದಕ್ಕೂ ಮೇಲೆ ಒಂದು ಇಂಚು (ಅದಕ್ಕೂ ಹೆಚ್ಚು ಬೇಡ) ಅಡುಗೆಮನೆಯ ಹಸಿ ಕಸವನ್ನು ಹರಡಬೇಕು. ಅದರ ಮೇಲೆ ಒಂದು ಕಪ್ ಜೀವಾಮೃತ (ಒಂದು ಭಾಗ ಜೀವಾಮೃತ ಮತ್ತು ಮತ್ತು ೧೦ ಭಾಗ ನೀರು) ಸಿಂಪಡಿಸಬೇಕು. (ವೀಡಿಯೋದಲ್ಲಿ ಇದರ ಬದಲು ಘನ ಜೀವಾಮೃತ ಉಪಯೋಗಿಸಿ ತೋರಿಸಲಾಗಿದೆ) ನಂತರ ಅದರ ಮೇಲೆ ಸ್ವಲ್ಪ ನೀರನ್ನು ಸಿಂಪಡಿಸಬೇಕು. ಗಿಡಕ್ಕೆ ನೀರು ಹಾಕುವಾಗ ಸ್ವಲ್ಪವೇ ನೀರು ಸಿಂಪಡಿಸಬೇಕು. ಗಿಡಕ್ಕೆ ಸ್ನಾನ ಮಾಡಿಸಬಾರದು.

ವೀಡಿಯೋದ ಕಾಲಾವಧಿ : ೪ ನಿಮಿಷ

ವೀಡಿಯೋ ಸಾರಾಂಶ : ವಾರದಲ್ಲಿ ಒಂದು ಸಲ ಕುಂಡದಲ್ಲಿ ಅಥವಾ ಪಾತಿಗಳಲ್ಲಿ ಒಣಗಿದ ಎಲೆಗಳು, ತೆಂಗಿನ ನಾರಿನಂತಹ ಕಾಷ್ಠದ ಪದರನ್ನು ನಾವು ೪, ೫ ಇಂಚಿನ ತನಕ ಮಾಡಬಹುದು, ಆದರೆ ಹಸಿ ಕಸ (ಅಡುಗೆ ಮನೆಯಲ್ಲಿನ ಹಸಿಕಸ) ಒಂದು ಇಂಚಿಗಿಂತ ಜಾಸ್ತಿ ದಪ್ಪವಾಗಿ ಹಾಕಬಾರದು. ಈ ಮೊದಲು ಹಾಕಿದ ಒಣ ಎಲೆಗಳ, ತೆಂಗಿನ ನಾರು ಮುಂತಾದವುಗಳು ದಬ್ಬಿ ಹೋದರೆ ಇನ್ನಷ್ಟು ಹಾಕಬೇಕು.

೧೦. ಆರಂಭದಿಂದಲೇ ಬಿತ್ತನೆಯಲ್ಲಿ ನೈಸರ್ಗಿಕ ಪದ್ಧತಿಯನ್ನು ಹೇಗೆ ಸೇರಿಸಬಹುದು ಎಂಬುದರ ಪ್ರಾತ್ಯಕ್ಷಿಕೆ

ವೀಡಿಯೋದ ಕಾಲಾವಧಿ : ೩ ನಿಮಿಷ

ವೀಡಿಯೋ ಸಾರಾಂಶ : ಹೂಕುಂಡದಲ್ಲಿ ಈಗಾಗಲೇ ಸಸ್ಯಗಳು ನೆಟ್ಟಿದ್ದರೆ, ಆ ಕುಂಡಗಳಿಂದ ಮಣ್ಣಿನ ಮೇಲಿನ ಪದರನ್ನು (ಸ್ವಲ್ಪವೇ) ತೆಗೆಯಬೇಕು. ಕುಂಡದಲ್ಲಿರುವ ಮಣ್ಣಿನ ಮೇಲೆ ೧ ಭಾಗ ಜೀವಾಮೃತ ಮತ್ತು ೧೦ ಭಾಗ ನೀರು ಇವುಗಳ ಮಿಶ್ರಣದ ೧ ಕಪ್ ಸಿಂಪಡಿಸಬೇಕು. ಮಡಕೆಯ ಖಾಲಿ ಭಾಗದಲ್ಲಿ ಹುಲ್ಲು ಒಣಗಿದ ಎಲೆಗಳು ಇತ್ಯಾದಿಗಳನ್ನು ತುಂಬಿಸಬೇಕು. ಅದರ ಮೇಲೆ ನೀರು ಚಿಮುಕಿಸಬೇಕು ಮತ್ತು ಸಸ್ಯಗಳನ್ನು ತೇವವಾಗಿ ಇರಿಸಬೇಕು. (ನೀರನ್ನು ಕೇವಲ ಚಿಮುಕಿಸಬೇಕು. ಗಿಡಕ್ಕೆ ಸ್ನಾನ ಮಾಡಿಸುವಷ್ಟು ನೀರು ಹಾಕಬಾರದು.)

೧೧. ಕೈದೋಟದಲ್ಲಿ ಬೆಳೆಸಬಹುದಾದ ಸಸ್ಯಗಳು

ವೀಡಿಯೋದ ಕಾಲಾವಧಿ : ೩ ನಿಮಿಷ

ವೀಡಿಯೋ ಸಾರಾಂಶ : ಮನೆಯಲ್ಲೇ ಯಾವ ಬೀಜಗಳನ್ನು ಉಪಯೋಗಿಸಿ ಕೈದೋಟವನ್ನು ಬೆಳೆಸಬಹುದು, ಎಂಬುದನ್ನು ಇಲ್ಲಿ ತೋರಿಸಲಾಗಿದೆ.

೧೨. ಬೀಜಾಮೃತ ತಯಾರಿಸುವ ಕೃತಿ.

ವೀಡಿಯೋ ಕಾಲಾವಧಿ: ೩ ನಿಮಿಷಗಳು

ಅ. ೧೦೦೦ ಚದರ ಅಡಿ (೧೦೦ ಅಡಿ x ೧೦ ಅಡಿ) ತೋಟಕ್ಕಾಗಿ ಅಗತ್ಯವಿರುವ ಅರ್ಧ ಲೀಟರ್ ಬೀಜಾಮೃತ ತಯಾರಿಸಲು ಬೇಕಾಗುವ ಘಟಕಗಳು

೧. ಅರ್ಧ ಲೀಟರ್ ನೀರು

೨. ೫೦ ರಿಂದ ೧೦೦ ಗ್ರಾಂ ದೇಶಿ ಹಸುವಿನ ತಾಜಾ ಸಗಣಿ

೩. ೫೦ ರಿಂದ ೧೦೦ ಮಿಲಿ (ಅರ್ಧದಿಂದ ೧ ಕಪ್) ಗೋಮೂತ್ರ

೪. ಒಂದು ಚಿಟಕೆಯಷ್ಟು ಮಣ್ಣು

೫. ಒಂದು ಚಿಟಕೆಯಷ್ಟು ಸುಣ್ಣ

ಆ. ಬೀಜಾಮೃತವನ್ನು ಧಾತು(ಲೋಹ)ವಿನ ಪಾತ್ರೆಯಲ್ಲಿ ತಯಾರಿಸಬಾರದು ಮಣ್ಣಿನ ಅಥವಾ ಪ್ಲಾಸ್ಟಿಕ್‌ನ ಪಾತ್ರೆಯಲ್ಲಿ ತಯಾರಿಸಬೇಕು.

ಇ. ಬೀಜಾಮೃತದ ಮಿಶ್ರಣವನ್ನು ಗೋಣಿಚೀಲ ಅಥವಾ ಹತ್ತಿಯ ಬಟ್ಟೆಯಿಂದ ಮುಚ್ಚಿಡಬೇಕು.

ಈ. ಬೀಜಾಮೃತದ ಮಿಶ್ರಣವನ್ನು ಬೆಳಗ್ಗೆ ಸಾಯಂಕಾಲ ಕೋಲಿನಿಂದ ಗಡಿಯಾರದ ಮುಳ್ಳಿನ ದಿಕ್ಕಿನಲ್ಲಿ ತಿರುಗಿಸಬೇಕು ಮತ್ತು ಇಪ್ಪತ್ನಾಲ್ಕು ಗಂಟೆಗಳ ನಂತರ ಉಪಯೋಗಿಸಬೇಕು.

೧೩. ಬೀಜ ಸಂಸ್ಕಾರ (ಬೀಜಗಳನ್ನು ಬಿತ್ತುವ ಮುನ್ನ ನಡೆಸುವ ಸಂಸ್ಕಾರ)

ವೀಡಿಯೋದ ಕಾಲಾವಧಿ : ೩ ನಿಮಿಷ

ವೀಡಿಯೋ ಸಾರಾಂಶ : ಬೀಜವನ್ನು ಬಿತ್ತುವಾಗ ಅದನ್ನು ಬೀಜಾಮೃತದಲ್ಲಿ ಮುಳುಗಿಸಿ ನಂತರ ಬಿತ್ತಬೇಕು. ಇದನ್ನು ಬೀಜ ಸಂಸ್ಕಾರ ಎಂದು ಕರೆಯುತ್ತಾರೆ. ಹಾಗೆ ಮಾಡುವುದರಿಂದ ಶಿಲೀಂಧ್ರ ರೋಗಗಳಿಂದ ಬೀಜ ನಷ್ಟದ ಅಪಾಯವನ್ನು ಕಡಿಮೆ ಮಾಡಬಹುದು. ಬೆಳೆ ಕೂಡ ಹೆಚ್ಚು ಬರುತ್ತದೆ.

ಸಸ್ಯಭಾಗಗಳು, ಬಿದ್ದ ಎಲೆ, ಇತ್ಯಾದಿಗಳು ಕೊಳೆತು ಅದು ಅತ್ಯಂತ ಫಲವತ್ತಾದ ಮಣ್ಣನ್ನು ತಯಾರಿಸುತ್ತದೆ. ಅದನ್ನು ಇಂಗ್ಲಿಷ್‌ನಲ್ಲಿ ‘ಹ್ಯೂಮಸ್’ ಎಂದು ಹೇಳುತ್ತಾರೆ. ಈ ‘ಹ್ಯೂಮಸ್’ ತುಂಬಾ ಆರ್ದ್ರವಾಗಿದ್ದು, ಬೆರಳಿನಿಂದ ಸುಲಭವಾಗಿ ಬೀಜಗಳನ್ನು ಬಿತ್ತಬಹುದು. ನಾವು ಪಾತಿ ತಯಾರಿಸಿದಾಗ ಕೆಲವು ಸಸಿಗಳು ತಾವಾಗಿಯೇ ಬೆಳೆಯುತ್ತವೆ. ಅವುಗಳನ್ನು ಪುನಃ ಬೀಜಾಮೃತದಲ್ಲಿ ಅದ್ದಿ ನೆಡಬೇಕು. (ಈ ವೀಡಿಯೋದಲ್ಲಿ ಚೆರ‍್ರಿ ಟೊಮ್ಯಾಟೊ ಮೊಳಕೆಯನ್ನು ನೆಡುವುದನ್ನು ತೋರಿಸಲಾಗಿದೆ.)

ಅವರೆಕಾಳು, ಹೆಸರುಕಾಳು ಇತ್ಯಾದಿ ದವಸ ಧಾನ್ಯಗಳ ಬೀಜಗಳನ್ನು ಪಾತಿಯಲ್ಲಿ ನೆಟ್ಟರೆ ವಾಯುಮಂಡಲದ ಸಾರಜನಕ (ನೈಟ್ರೋಜನ್) ಮಣ್ಣಿನಲ್ಲಿ ಬೆರೆಯಲು ಸಹಾಯವಾಗುತ್ತದೆ. ಸಸ್ಯಗಳ ಬೆಳವಣಿಗೆಗೆ ಮಣ್ಣಿನಲ್ಲಿ ಸಾಕಷ್ಟು ಸಾರಜನಕ ಇರುವುದು ಅಗತ್ಯವಿದೆ.

೧೪. ಬಿತ್ತುವ ಪ್ರತ್ಯಕ್ಷ ಕೃತಿ

ವೀಡಿಯೋದ ಕಾಲಾವಧಿ : ೩ ನಿಮಿಷ

ವೀಡಿಯೋದ ಸಾರಾಂಶ : ಇದರಲ್ಲಿ ಕೈದೋಟದಲ್ಲಿ ಪ್ರತ್ಯಕ್ಷವಾಗಿ ಸಸ್ಯಗಳನ್ನು ಹೇಗೆ ನೆಡಬೇಕೆಂದು ತೋರಿಸಲಾಗಿದೆ. ಶುಂಠಿ, ಆಲೂಗಡ್ಡೆ, ಈರುಳ್ಳಿ ಮುಂತಾದ ಗಡ್ಡೆಗಳನ್ನು ಬೀಜಾಮೃತದಲ್ಲಿ ಅದ್ದಿ ‘ಹ್ಯೂಮಸ್’ನಲ್ಲಿ ನೆಡಬೇಕು.

೧೫. ಬಿತ್ತಲು ಬೇಕಾದ ಬೀಜಗಳನ್ನು ಹೇಗೆ ಸಂಗ್ರಹಿಸಬೇಕು?

ವೀಡಿಯೋದ ಕಾಲಾವಧಿ : ೫ ನಿಮಿಷ

ವೀಡಿಯೋದ ಸಾರಾಂಶ : ಕಾಡು ತುಳಸಿಯಲ್ಲಿ ಬೀಜಗಳು ಇರುತ್ತವೆ. ಪರಾಗಸ್ಪರ್ಶಕ್ಕೆ (ಪಾಲಿನೇಶನ್) ಕಾಡು ತುಳಸಿಯನ್ನು ಬಳಸಲಾಗುತ್ತದೆ. ಜೇನುನೊಣಗಳು ಕಾಡುತುಳಸಿಯ ಬೀಜಗಳಿಗೆ ಆಕರ್ಷಿತವಾಗುತ್ತವೆ. ಜೇನುನೊಣಗಳು ಸುತ್ತಮುತ್ತಲಿನ ಗಿಡಗಳ ಪರಾಗಸ್ಪರ್ಶಕ್ಕೆ ಕಾರಣವಾಗುತ್ತವೆ. ಪರಾಗಸ್ಪರ್ಶ ಹೆಚ್ಚಾದಷ್ಟೂ ಇಳುವರಿ ಹೆಚ್ಚುತ್ತದೆ ! ಕಾಡು ತುಳಸಿ ಅಥವಾ ತುಳಸಿಯ ಬೀಜವನ್ನು ತೆಗೆದು ಕೈಯಲ್ಲಿ ಉಜ್ಜಬೇಕು ಮತ್ತು ಕೈ ಮೇಲೆ ನಿಧಾನವಾಗಿ ಊದಬೇಕು. ಹೀಗೆ ಮಾಡುವುದರಿಂದ  ಸಿಪ್ಪೆ ಬೇರ್ಪಟ್ಟು ಬೀಜಗಳು ಬೇರ್ಪಡುತ್ತವೆ. ಮನೆಯಲ್ಲಿ ಬೆಳೆದ ಕ್ಯಾರೆಟ್, ಪಾಲಕ್, ಜೋಳ, ಕೆಂಪು ಹರಿವೆ, ಹರಿವೆ ಸೊಪ್ಪು ಇತ್ಯಾದಿಗಳ ಬೀಜಗಳನ್ನು ಪಡೆಯಬಹುದು.

೧೬. ನೈಸರ್ಗಿಕ ಕೃಷಿಯ ಮೂಲಭೂತ ತತ್ತ್ವಗಳು

ಪದ್ಮಶ್ರೀ ಸುಭಾಷ್ ಪಾಳೇಕರ್ ಅವರು ‘ಸುಭಾಷ್ ಪಾಳೇಕರ್ ನೈಸರ್ಗಿಕ ಕೃಷಿ’ ಎಂಬ ನೈಸರ್ಗಿಕ ಕೃಷಿತಂತ್ರವನ್ನು ವ್ಯಾಪಕವಾಗಿ ಪ್ರಚಾರ ಮಾಡಿದರು. ಈ ತಂತ್ರದ ೪ ಮೂಲ ತತ್ತ್ವಗಳು ಇಲ್ಲಿವೆ.

ಅ. ಜೀವಾಮೃತ
ಆ. ಬೀಜಾಮೃತ
ಇ. ವಾಫಾಸಾ
ಈ. ಬೆಳೆಗಳ ಹೊದಿಕೆ

೧೬ ಅ. ಜೀವಾಮೃತ

ಜೀವಾಮೃತ ತಯಾರಿಸಿದ ನಂತರ ೭ ದಿನಗಳವರೆಗೆ ಅದನ್ನು ಬಳಸಬಹುದು. ಜೀವಾಮೃತವನ್ನು ತಯಾರಿಸಿದ ಮೇಲೆ ಉಪಯೋಗಿಸುವಾಗ ಅದನ್ನು ಕೈಯಾಡಿಸದೇ ಕೇವಲ ಮೇಲಿನ ನೀರನ್ನು ಬಳಸಿ ಮತ್ತೆ ತಳ ಸೇರಿರುವ ಚರಟದಲ್ಲಿ ಮತ್ತೆ ೧೦ ಪಟ್ಟು ನೀರು ಹಾಕಿದರೆ ೪ ದಿನಗಳ ನಂತರ ಹೊಸದಾಗಿ ಜೀವಾಮೃತ ತಯಾರಾಗುತ್ತದೆ. ೧೦ ಪಟ್ಟು ನೀರಿನಲ್ಲಿ ಬೆರೆಸಿದ ೧೦೦ ಮಿಲಿ (೧ ಕಪ್) ಜೀವಾಮೃತವನ್ನು ೧ ಚದರ ಅಡಿಗಾಗಿ ಉಪಯೋಗಿಸಬೇಕು. ಜೀವಾಮೃತವನ್ನು ಬಿಸಿಲಿನಲ್ಲಿಡದೇ ನೆರಳಿನಲ್ಲಿಡಬೇಕು.

೧೬ ಆ. ಬೀಜಾಮೃತ

೧೬ ಇ. ವಾಫಸಾ

ಮಣ್ಣಿನ ಅಥವಾ ‘ಹ್ಯೂಮಸ್’ನ ೨ ಸಾಲುಗಳ ನಡುವೆ ಟೊಳ್ಳು ಇರುತ್ತದೆ. (ರಾಸಾಯನಿಕ ಗೊಬ್ಬರವನ್ನು ಬಳಸಿದರೆ ಈ ಟೊಳ್ಳು ಉಳಿಯುವುದಿಲ್ಲ. ಆದ್ದರಿಂದ ರಾಸಾಯನಿಕ ಗೊಬ್ಬರವನ್ನು ಬಳಸಬಾರದು.) ಈ ಟೊಳ್ಳು ಜಾಗದಲ್ಲಿರುವ ಸ್ವಚ್ಛಂದ ವಾಯು ಮತ್ತು ಸೂರ್ಯನ ಉಷ್ಣತೆಯಿಂದಾಗಿ ನೀರಿನ ಹಬೆ ಇವುಗಳು ಒಟ್ಟಾಗಿ ಸೇರುವುದರಿಂದ ಅದಕ್ಕೆ ‘ವಾಫಸಾ’ ಎಂದು ಹೇಳುತ್ತಾರೆ. ವಾಫಸಾ ಈ ಸ್ಥಿತಿ ನಿರ್ಮಾಣವಾಗಲು ಮಣ್ಣು ಫಲವತ್ತಾಗಿರಬೇಕು. ಹಸಿಗೊಬ್ಬರ, ತೆಂಗಿನ ನಾರು ಮತ್ತು ಒಣಗಿದ ಹುಲ್ಲಿನ ಪದರನ್ನು ನಿರ್ಮಿಸಿ ಅದರ ಮೇಲೆ ಜೀವಾಮೃತ ಚಿಮುಕಿಸಲಾಗುತ್ತದೆ, ಇದರಿಂದ ಕಾಲಾಂತರದಲ್ಲಿ ಫಲವತ್ತಾದ ಮಣ್ಣು ತಯಾರಾಗುತ್ತದೆ ಅದನ್ನು ‘ಹ್ಯೂಮಸ್’ ಎಂದು ಕರೆಯಲಾಗುತ್ತದೆ. ಸಸ್ಯಗಳಿಗೆ ಪೋಷಕಾಂಶಗಳ ಬೃಹತ್ಪ್ರಮಾಣದ ಸಂಗ್ರಹವೆಂದರೆ ಈ ‘ಹ್ಯೂಮಸ್’. ಹಸಿಗೊಬ್ಬರ ಇತ್ಯಾದಿಗಳ ಪದರನ್ನು ಎಷ್ಟು ಉತ್ತಮವಾಗಿ ಮಾಡುತ್ತೇವೆಯೋ ಅಷ್ಟು ಒಳ್ಳೆಯ ಹ್ಯೂಮಸ್ ಒಳ್ಳೆಯದಾಗಿ ನಿರ್ಮಾಣವಾಗುತ್ತದೆ. ಹ್ಯೂಮಸ್ ಹೆಚ್ಚಾದಷ್ಟೂ ಮಣ್ಣು ಹೆಚ್ಚು ಫಲವತ್ತಾಗುತ್ತದೆ. ಉತ್ತಮ ಹ್ಯೂಮಸ್ ತಯಾರಿಸಲು, ಮೊದಲಿನಿಂದಲೇ ಕೃಷಿಯನ್ನು ಮೇಲಿನ ವೀಡಿಯೋದಲ್ಲಿ ತೋರಿಸಿಲಾಗಿರುವ ನೈಸರ್ಗಿಕ ರೀತಿಯಲ್ಲಿ ಮಾಡಬೇಕು.

೧೬ ಈ. ಬೆಳೆಗಳ ಹೊದಿಕೆ

ವಾಫಸಾ ಸ್ಥಿತಿಗೆ ಬರಲು ಯಾವ ಮಣ್ಣನ್ನು ತಯಾರಿಸಬೇಕಾಗುತ್ತದೆಯೋ, ಅದಕ್ಕಾಗಿ ನಾವು ಹರಡುವ ಹುಲ್ಲು, ಒಣಗಿದ ಎಲೆಗಳು, ತೆಂಗಿನ ಸಿಪ್ಪೆಗಳು, ಒಣಗಿದ ಸಸ್ಯಭಾಗಗಳು ಇತ್ಯಾದಿಗಳನ್ನು ಹೊದಿಕೆ ಎಂದು ಕರೆಯಲಾಗುತ್ತದೆ. ಒಣ ಹುಲ್ಲಿನ ಹೊದಿಕೆಯನ್ನು ೪.೫ ಇಂಚುಗಳವರೆಗೆ, ಮತ್ತು ಸಸ್ಯಗಳ ಆಹಾರದ (ಅಡುಗೆಮನೆಯ ತ್ಯಾಜ್ಯ) ಪದರನ್ನು ಗರಿಷ್ಠ ೧ ಇಂಚಿನವರೆಗೆ ನಿರ್ಮಿಸಿ. ಹಸಿ ತ್ಯಾಜ್ಯದ ಹೊದಿಕೆ ೧ ಇಂಚುಗಿಂತ ಹೆಚ್ಚು ಇರಬಾರದು.

೧೭. ಕೈದೋಟದ ಬಗ್ಗೆ ಪ್ರಶ್ನೆಗಳಿದ್ದಲ್ಲಿ ಜಾಲತಾಣಗಳಲ್ಲಿ ಮುಂದಿನಂತೆ ಕೇಳಿ

ಅ. ಪುಟದ ಕೊನೆಯಲ್ಲಿ ‘Leave a Comment’ ಹೀಗೆ ಬರೆದಿರುವ ಜಾಗದಲ್ಲಿ ಕ್ಲಿಕ್ ಮಾಡಿರಿ.

ಆ. ಅಲ್ಲಿ ನಿಮ್ಮ ಪ್ರಶ್ನೆ ಟೈಪ್ ಮಾಡಬೇಕು. ನಿಮ್ಮ ಹೆಸರು ಮತ್ತು ಇಮೇಲ್ ವಿಳಾಸವನ್ನು ಬರೆಯಬೇಕು.

ಇ. Save my name and email ಪರ್ಯಾಯ ಆರಿಸಿಕೊಳ್ಳಿ, ಅದರಿಂದ ಮುಂದಿನ ಸಾರಿ ಮತ್ತೆ ಹೆಸರು ಮತ್ತು ಇಮೇಲ್ ನಮೂದಿಸುವ ಅವಶ್ಯಕತೆ ಇರುವುದಿಲ್ಲ.

ಈ. Post Comment ಎಂದು ಬರೆದಿರುವ ಜಾಗದಲ್ಲಿ ಕ್ಲಿಕ್ ಮಾಡಿ.

೧೮. ಸಂದೇಹ ನಿವಾರಣೆಯ ಕಾರ್ಯಪದ್ಧತಿ

ಈ ಅಭಿಯಾನ ನಡೆಯುವಾಗ ನಿಶ್ಚಯಿಸಿರುವ ಕೆಲವು ದಿನಗಳವರೆಗೆ ಸಾಧಕರ ಸಂದೇಹ ನಿವಾರಣೆಗಾಗಿ ಆನ್‌ಲೈನ್ ಅಭ್ಯಾಸವರ್ಗ ತೆಗೆದುಕೊಳ್ಳಲಾಗುವುದು. ಈ ಅಭ್ಯಾಸವರ್ಗದಲ್ಲಿ ಜಾಲತಾಣಗಳಲ್ಲಿ ವಿಚಾರಿಸಿರುವ ಪ್ರಶ್ನೆಗಳ ಉತ್ತರ ನೀಡುತ್ತೇವೆ. ಎಲ್ಲರಿಗಾಗಿ ಉಪಯುಕ್ತ ಇರುವ ಪ್ರಶ್ನೆಗಳ ಉತ್ತರಗಳನ್ನು ಸನಾತನ ಪ್ರಭಾತ ಮಾಧ್ಯಮದಿಂದ ನೀಡಲಾಗುವುದು.

೧೯. ಗುರುಗಳ ಆಜ್ಞಾಪಾಲನೆ ಎಂದು ಈ ಅಭಿಯಾನದಲ್ಲಿ ಶ್ರದ್ಧೆ ಮತ್ತು ಭಾವದಿಂದ ಭಾಗವಹಿಸಿ !

ಶ್ರೀಗುರುಚರಿತ್ರೆಯ ನಲವತ್ತನೆಯ ಅಧ್ಯಾಯದಲ್ಲಿ ಒಂದು ಪ್ರಸಂಗವಿದೆ. ನರಹರಿ ಎಂಬ ಬ್ರಾಹ್ಮಣನಿಗೆ ಕುಷ್ಠರೋಗವಗಿತ್ತು. ಶ್ರೀಗುರು ನೃಸಿಂಹಸರಸ್ವತಿ ಆತನಿಗೆ ೪ ವರ್ಷಗಳ ಕಾಲ ಒಣಗಿದ ಔದುಂಬರ ಕಡ್ಡಿಯನ್ನು ನೀಡಿ ದಿನಕ್ಕೆ ೩ ಬಾರಿ ನೀರು ಹಾಕುವಂತೆ ಹೇಳುತ್ತಾರೆ. ಜನರು ಅವನ ಚೇಷ್ಟೆ ಮಾಡುತ್ತಿದ್ದರೂ ಭಕ್ತ ನರಹರಿ ಗುರುವಿನ ಆಜ್ಞಾಪಾಲನೆ ಎಂದು ೭ ದಿನಗಳ ಕಾಲ ಮನಸ್ಸಿನಲ್ಲಿ ಯಾವುದೇ ಸಂದೇಹಗಳನ್ನು ಇಟ್ಟುಕೊಳ್ಳದೇ ಆ ಒಣಗಿದ ಕಡ್ಡಿಗೆ ನೀರು ಹಾಕುತ್ತಾನೆ. ಇದರಿಂದ ಶ್ರೀಗುರುಗಳು ಅವನ ಮೇಲೆ ಪ್ರಸನ್ನರಾಗಿ ತಮ್ಮ ಕಮಂಡಲುವಿನ ತೀರ್ಥವನ್ನು ಆ ಕಡ್ಡಿಯ ಮೇಲೆ ಸಿಂಪಡಿಸುತ್ತಾರೆ. ಅದೇ ಸಮಯದಲ್ಲಿ, ಒಣಗಿದ ಕೊಂಬೆಗಳು ಚಿಗುರೊಡೆಯುತ್ತವೆ ಮತ್ತು ನರಹರಿಯ ಕುಷ್ಠವೂ ಗುಣವಾಗುತ್ತವೆ. ಭಕ್ತ ನರಹರಿಯಂತೆ ನಾವೂ ಕೂಡ ಶ್ರದ್ಧೆ ಮತ್ತು ಭಾವದಿಂದ ಈ ಅಭಿಯಾನದಲ್ಲಿ ಭಾಗಿವಹಿಸೋಣ. ‘ಶ್ರೀಗುರುಗಳೇ ನಿಮ್ಮಿಂದಲೇ ಈ ಸೇವೆಯನ್ನು ಮಾಡಿಸಿಕೊಳ್ಳುತ್ತಿದ್ದಾರೆ’, ಎಂಬ ಭಾವವನ್ನು ಇಟ್ಟುಕೊಳ್ಳೋಣ !

Leave a Comment