‘ಕರಿಯರ್’ ಮತ್ತು ‘ಧನಯೋಗ’

Article also available in :

ಕರಿಯರ್ ಮತ್ತು ಧನಯೋಗ ಇವು ಇಂದಿನ ಸ್ಪರ್ಧಾತ್ಮಕ ಜಗತ್ತಿನ ವ್ಯಕ್ತಿಯ ಆಸಕ್ತಿಯ ವಿಷಯಗಳಾಗಿವೆ. 10 ನೇ ತರಗತಿಯ ಬಳಿಕ ಮಕ್ಕಳನ್ನು ಯಾವ ಶಾಖೆಗೆ (ವಿಭಾಗಕ್ಕೆ) ಸೇರಿಸಿದರೆ ಅವರಿಗೆ ಜೀವನದಲ್ಲಿ ಯಶಸ್ಸು ಸಿಗುವುದು, ನನ್ನ ಜಾತಕದಲ್ಲಿರುವ ಗ್ರಹಗಳನ್ನು ನೋಡಿ ಯಾವ ಕರಿಯರ್‌ ಆಯ್ಕೆ ಮಾಡಿದರೆ ನನಗೆ ಧನ ಲಾಭವಾಗುವುದು, ಎನ್ನುವ ಪ್ರಶ್ನೆಗಳೂ ಸಾಮಾನ್ಯ. ಏಕೆಂದರೆ ಇಂದಿನ ಸ್ಪರ್ಧಾತ್ಮಕ ಕಾಲದಲ್ಲಿ ಉದ್ಯೋಗದಲ್ಲಿ ಬಿಡುವಿಲ್ಲದ ಜೀವನ ನಡೆಸುವ ಬದಲು ವ್ಯಾಪಾರ ಮಾಡುವತ್ತ ಒಲವು ತೋರುತ್ತಿದ್ದಾರೆ.

ಕುಂಡಲಿಗನುಸಾರ ಯಾವ ಕ್ಷೇತ್ರದಿಂದ ಧನಾರ್ಜನೆಯಾಗುವುದು ಎನ್ನುವ ವಿಚಾರವಿಟ್ಟು ಶಿಕ್ಷಣ ಪಡೆಯುವುದು ಸೂಕ್ತವಾಗಿದೆ. ‘ಯಾವ ಉದ್ಯೋಗವನ್ನು ಮಾಡಬೇಕು, ಯಾವ ಉದ್ಯೋಗದಿಂದ ಅಧಿಕ ಹಣಪ್ರಾಪ್ತಿಯಾಗುವುದು’, ಇದಕ್ಕಾಗಿ ಜಾತಕದಲ್ಲಿರುವ ಆರ್ಥಿಕ ತ್ರಿಕೋಣ, ಹಾಗೆಯೇ ಆ ರಾಶಿಯ ಗ್ರಹಸ್ಥಿತಿಗಳು ಉದ್ಯೋಗದ ದೃಷ್ಟಿಯಿಂದ ಮಹತ್ವದ್ದೆಂದು ನಿರ್ಧರಿಸಲ್ಪಡುತ್ತವೆ. ಈ ವಿಷಯದಲ್ಲಿ ಈಗ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ…

1. ಉದ್ಯೋಗದಲ್ಲಿ ಯಶಸ್ವಿಯಾಗಲು ಆವಶ್ಯಕವಿರುವ ಗ್ರಹ

ಅ. ಶ್ರೀಮಂತ ಗ್ರಹ ಶುಕ್ರ

ಆ. ದೈವೀ ಬೆಂಬಲ ಸಿಗಲು ಗುರುಗ್ರಹ

ಇ. ಆತ್ಮಿಕ ಸಮಾಧಾನ ಮತ್ತು ರಾಜಾಶ್ರಯಕ್ಕಾಗಿ ರವಿ ಗ್ರಹ

ಈ. ಮಾನಸಿಕ ಸಮಾಧಾನಕ್ಕಾಗಿ ಚಂದ್ರ ಗ್ರಹ

ಉ. ಕರಿಯರ್‌ನಲ್ಲಿ ಉನ್ನತಿ ಹೊಂದಲು ಶನಿ ಗ್ರಹ

ಊ. ಬೌದ್ಧಿಕ ನಿರ್ಣಯಕ್ಕಾಗಿ ಬುಧ

ಈ ಎಲ್ಲ ಗ್ರಹಗಳು ಶುಭ ಮತ್ತು ಶಕ್ತಿಶಾಲಿಯಾಗಿರುವುದು ಆವಶ್ಯಕವಾಗಿದೆ.

2. ಉದ್ಯೋಗದಲ್ಲಿ ಯಶಸ್ಸು ಗಳಿಸಲು ಜಾತಕದಲ್ಲಿರುವ ಆರ್ಥಿಕ ತ್ರಿಕೋಣ ಮತ್ತು ಲಾಭಸ್ಥಾನ ಮಹತ್ವದ್ದಾಗಿವೆ

ಉದ್ಯೋಗದಲ್ಲಿ ಯಶಸ್ಸು ಗಳಿಸಲು ಕುಂಡಲಿಯಲ್ಲಿರುವ ಆರ್ಥಿಕ ತ್ರಿಕೋಣ, ಅಂದರೆ ಲಗ್ನಸ್ಥಾನದಿಂದ 2, 6 ಮತ್ತು 10 ಈ ಸ್ಥಾನಗಳು, ಅಲ್ಲದೇ ಲಾಭಕ್ಕಾಗಿ ಲಾಭಸ್ಥಾನ ಮಹತ್ವದ್ದಾಗಿರುತ್ತದೆ. ಲಗ್ನಸ್ಥಾನದಿಂದ 2, 6, 10 ಮತ್ತು 11 ಈ ನಾಲ್ಕು ಸ್ಥಾನಗಳ ಸ್ವಾಮಿಗಳು ಪರಸ್ಪರ ಶುಭಯೋಗದಲ್ಲಿದ್ದರೆ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ. ಸಪ್ತಮೇಶ, ಅಂದರೆ ಸಪ್ತಮ ಸ್ಥಾನದ ಸ್ವಾಮಿ ಶುಭಯೋಗದಲ್ಲಿದ್ದರೆ ಉದ್ಯೋಗದಲ್ಲಿ ಒಳ್ಳೆಯ ಪಾಲುದಾರರು ಸಿಗುತ್ತಾರೆ.

3. ಸ್ವಂತ ಉದ್ಯೋಗದ ದೃಢ ವಿಚಾರ ಮನಸ್ಸಿನಲ್ಲಿ ಬರಲು ಆವಶ್ಯಕವಿರುವ ಕುಂಡಲಿಯಲ್ಲಿರುವ ಸ್ಥಾನ ಮತ್ತು ಗ್ರಹ

ಕರಿಯರ್ ಅಥವಾ ಸ್ವಂತ ಉದ್ಯೋಗದ ವಿಚಾರ ಮಾಡುವಾಗ ಕುಂಡಲಿಯಲ್ಲಿರುವ ಲಗ್ನಸ್ಥಾನ, ಲಗ್ನೇಶ, ದಶಮ ಸ್ಥಾನ, ದಶಮೇಶ, ಅಲ್ಲದೇ ರವಿ ಮತ್ತು ಚಂದ್ರ ಈ ಗ್ರಹಗಳ ಸಹಾಯವಿರುವುದು ಮಹತ್ವದ್ದಾಗಿರುತ್ತದೆ. ಲಗ್ನ ಸ್ಥಾನದಿಂದ (ಪ್ರಥಮ ಸ್ಥಾನದಿಂದ) ವ್ಯಕ್ತಿಯ ಮಹತ್ವಾಕಾಂಕ್ಷೆ ನಿರ್ಧರಿಸಲ್ಪಡುತ್ತದೆ ಮತ್ತು ದಶಮ ಸ್ಥಾನ, ಎಂದರೆ ಕರ್ಮಸ್ಥಾನವು ವ್ಯಕ್ತಿಗೆ ಎದುರಾಗುವ ಸವಾಲನ್ನು ಸರಿದೂಗಿಸಿಕೊಂಡು ಹೋಗುವ ಕ್ಷಮತೆಯನ್ನು ತೋರಿಸುತ್ತದೆ. ಲಗ್ನೇಶ ಶಕ್ತಿಶಾಲಿಯಾಗಿದ್ದರೆ, ವ್ಯಕ್ತಿ ಯಾವುದೇ ಸವಾಲನ್ನು ಸರಿದೂಗಿಸಿಕೊಂಡು ಹೋಗಲು ಸಕ್ಷಮನಾಗಿರುತ್ತಾನೆ. ಆ ವ್ಯಕ್ತಿಯ ಸ್ವತಂತ್ರ ಉದ್ಯೋಗ ಮಾಡುವ ವಿಚಾರ ದೃಢವಾಗಿರುತ್ತದೆ. ಇಂತಹವರು ಸ್ವಂತ ಸಾಮರ್ಥ್ಯದಿಂದ ಯಶಸ್ಸು ಗಳಿಸುತ್ತಾರೆ.

4. ಉದ್ಯೋಗದಲ್ಲಿ ಎದುರಾಗುವ ಪರಿಸ್ಥಿತಿಯನ್ನು ಸರಿದೂಗಿಸಿಕೊಂಡು ಹೋಗಲು ಕುಂಡಲಿಯಲ್ಲಿ ಆವಶ್ಯಕವಿರುವ ಸ್ಥಾನ ಮತ್ತು ಗ್ರಹ

ಕರಿಯರ್‌ನಲ್ಲಿ ಎದುರಾಗುವ ಹೊಸ ಹೊಸ ಸವಾಲುಗಳನ್ನು ಎದುರಿಸುವ ಕ್ಷಮತೆ ಒಬ್ಬರಲ್ಲಿ ಎಷ್ಟಿದೆ ಎಂದು ನೋಡಲು ಜಾತಕದಲ್ಲಿ ಲಗ್ನಸ್ಥಾನದಿಂದ 3, 6, 10 ಮತ್ತು 11 ಈ ಉಪಚಯ (ಸಮೃದ್ಧಿ) ಸ್ಥಾನಗಳನ್ನು ಪರಿಶೀಲಿಸಬೇಕಾಗುತ್ತದೆ. ಉಪಚಯ ಸ್ಥಾನಗಳಲ್ಲಿ ಯಾವ ಸ್ಥಾನ ಬಲವಾಗಿರುತ್ತದೆಯೋ, ಆ ಕ್ಷೇತ್ರದಲ್ಲಿ ವ್ಯಕ್ತಿಗೆ ವಿಶೇಷ ಯಶಸ್ಸು ಸಿಗುತ್ತದೆ, ಹಾಗೆಯೇ ಸಂಬಂಧಿಸಿದ ಗ್ರಹಗಳ ದಶೆಯಲ್ಲಿ ಉದ್ಯೋಗ ಪ್ರಾರಂಭವಾಗುತ್ತದೆ ಅಥವಾ ಯಶಸ್ಸು ದೊರಕುತ್ತದೆ.

5. ಜಾತಕದಲ್ಲಿರುವ ಉಪಚಯ ಸ್ಥಾನಗಳ ವಿಶ್ಲೇಷಣೆ

ಅ. ತೃತೀಯ ಸ್ಥಾನ

ತೃತೀಯ ಸ್ಥಾನಕ್ಕೆ ‘ಪರಾಕ್ರಮ ಸ್ಥಾನ’ ಎಂದೂ ಹೇಳುತ್ತಾರೆ. ತೃತೀಯ ಸ್ಥಾನವು ಕರ್ಮ ಸ್ಥಾನದ ಆರನೆಯ ಸ್ಥಾನವಾಗಿದೆ. ಆರನೆಯ ಸ್ಥಾನದಿಂದ ರಿಪು ಅಂದರೆ ಶತ್ರು ಮತ್ತು ರೋಗಗಳ ಬಗ್ಗೆ ತಿಳಿಯುತ್ತದೆ. ಕೈಗೆತ್ತಿಕೊಂಡ ಕಾರ್ಯದಲ್ಲಿ ಎದುರಾಗುವ ಅಡಚಣೆಗಳು ಮತ್ತು ಕಷ್ಟಗಳನ್ನು ತೋರಿಸುವ ಸ್ಥಾನವೂ ಇದಾಗಿದೆ. ತೃತೀಯ ಸ್ಥಾನ ಬಲವಾಗಿಲ್ಲದಿದ್ದರೆ, ಪರಾಕ್ರಮದ ಪರಾಕಾಷ್ಠೆಯನ್ನು ತಲುಪಲು ಆ ವ್ಯಕ್ತಿ ಸಿದ್ಧನಾಗಿರಬೇಕಾಗುತ್ತದೆ.

ಆ. ಷಷ್ಠ ಸ್ಥಾನ

ಷಷ್ಠ ಸ್ಥಾನವು ಕರ್ಮ ಸ್ಥಾನದ ಭಾಗ್ಯಸ್ಥಾನವಾಗಿದೆ. ಭಾಗ್ಯಸ್ಥಾನದಿಂದ ಭಾಗ್ಯೋದಯ, ಗುರುಕೃಪೆ ಮತ್ತು ಈಶ್ವರಿ ಕೃಪೆಯ ಅಧ್ಯಯನ ಮಾಡಲಾಗುತ್ತದೆ. ಇದಕ್ಕಾಗಿ ಕರಿಯರ್‌ನಲ್ಲಿ ನಮ್ಮ ಕೈಕೆಳಗೆ ಕೆಲಸ ಮಾಡುವ ಜನರು ಹೇಗಿರುತ್ತಾರೆ, ನಮಗೆ ಶತ್ರುಗಳಿರುತ್ತಾರೆಯೇ, ಹಾಗೆಯೇ ಕರಿಯರ್‌ಗಾಗಿ ಬೇಕಾಗುವ ಸಾಲ ಸಿಗುವುದೇ ಅಥವಾ ತೆಗೆದುಕೊಂಡ ಸಾಲ ಸಾಧ್ಯವಾದಷ್ಟು ಬೇಗನೆ ತೀರುವುದೇ, ಅಂದರೆ ಉದ್ಯೋಗದಲ್ಲ್ಲಿ ಭಾಗ್ಯೋದಯ ಯಾವಾಗ ಆಗುವುದು, ಮುಂತಾದವುಗಳ ಅಧ್ಯಯನಕ್ಕಾಗಿ ಷಷ್ಠ ಸ್ಥಾನವನ್ನು ನೋಡಬೇಕಾಗುತ್ತದೆ. ಷಷ್ಠ ಸ್ವಾಮಿ ಬಲವಾಗಿರದ್ದರೆ, ಅಂದರೆ ದಶಮಸ್ಥಾನದ ಭಾಗ್ಯ ಕಡಿಮೆ ಬೀಳುತ್ತಿದ್ದಲ್ಲಿ ವ್ಯಕ್ತಿಗೆ ತನ್ನ ಕೈಕೆಳಗಿರುವವರೊಂದಿಗೆ ನಮ್ರತೆಯಿಂದ, ಸಾಮೋಪಚಾರದಿಂದ ವರ್ತಿಸಿ, ಹಾಗೆಯೇ ತೆಗೆದುಕೊಂಡ ಸಾಲವನ್ನು ಯೋಗ್ಯವಾಗಿ ವಿನಿಯೋಗಿಸಿ ಉದ್ಯೋಗ ನಡೆಸುವ ಆವಶ್ಯಕತೆಯಿದೆ.

ಇ. ದಶಮ ಸ್ಥಾನ

ದಶಮ ಸ್ಥಾನ, ಅಂದರೆ ಕರ್ಮಸ್ಥಾನ. ಯಾವ ಉದ್ಯೋಗ ಅಥವಾ ವ್ಯಾಪಾರ ಮಾಡಬೇಕು, ಎಂಬುವುದರ ಮಾಹಿತಿ ನೀಡುವ, ಹಾಗೆಯೇ ಸಾಮಾಜಿಕ ಗೌರವವನ್ನು ತೋರಿಸುವ ಸ್ಥಾನವಾಗಿದೆ. ಕರಿಯರ್‌ನ ಪ್ರತ್ಯಕ್ಷ ವಿಚಾರಕ್ಕೆ ಕೃತಿಗಳನ್ನು ಜೋಡಿಸಬೇಕಾಗುತ್ತದೆ. ಅದಕ್ಕಾಗಿ ಇದು ಮಹತ್ವದ ಸ್ಥಾನವಾಗಿದೆ.

ಈ. ಹನ್ನೊಂದನೇ ಸ್ಥಾನ

ಹನ್ನೊಂದನೇ ಸ್ಥಾನ, ಅಂದರೆ ಲಾಭ ಸ್ಥಾನ. ದಶಮ ಸ್ಥಾನದ ಧನಸ್ಥಾನ ಇದಾಗಿರುವುದರಿಂದ ಉದ್ಯೋಗದಲ್ಲಿ ಸಿಗುವ ಧನ ಮತ್ತು ಆಗುವ ಲಾಭವನ್ನು ತೋರಿಸುವ ಸ್ಥಾನವಾಗಿದೆ. ಈ ಸ್ಥಾನ ಬಲವಾಗಿದ್ದರೆ ಜನಪ್ರಿಯತೆ ಸಿಗುತ್ತದೆ.

6. ಉದ್ಯೋಗದ ಕ್ಷೇತ್ರ ಹೇಗೆ ಆರಿಸಬೇಕು ?

ದಶಮಸ್ಥಾನದಲ್ಲಿರುವ ರಾಶಿಯ ತತ್ತ್ವಕ್ಕನುಸಾರ ಉದ್ಯೋಗದ ಕ್ಷೇತ್ರ ಆರಿಸಲು ಸಾಧ್ಯವಾಗುತ್ತದೆ.

ತತ್ತ್ವ ರಾಶಿ
ಅ. ಅಗ್ನಿತತ್ತ್ವ 1, 5, 9
ಆ. ಪೃಥ್ವಿತತ್ತ್ವ 2, 6, 10
ಇ. ವಾಯುತತ್ತ್ವ 3, 7, 11
ಈ. ಆಪತತ್ತ್ವ 4, 8, 12

ಅ. ದಶಮಸ್ಥಾನದಲ್ಲಿ ಮೇಷ, ಸಿಂಹ ಮತ್ತು ಧನು ಹೀಗೆ ಅಗ್ನಿತತ್ತ್ವದ ರಾಶಿಗಳಿದ್ದರೆ ಕಬ್ಬಿಣ ಮತ್ತು ಧಾತುವಿಗೆ ಸಂಬಂಧಿಸಿದ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ.

ಆ. ದಶಮಸ್ಥಾನದಲ್ಲಿ ವೃಷಭ, ಕನ್ಯಾ ಮತ್ತು ಮಕರ ಹೀಗೆ ಪೃಥ್ವಿತತ್ತ್ವದ ರಾಶಿಗಳಿದ್ದರೆ ಆಡಳಿತ (ಸರಕಾರಿ ನೌಕರಿ), ಆರ್ಥಿಕಕ್ಷೇತ್ರ, ಹಾಗೆಯೇ ಭೂಮಿಗೆ ಸಂಬಂಧಿಸಿದ ಉದ್ಯೋಗದಿಂದ ಯಶಸ್ಸು ಸಿಗುತ್ತದೆ.

ಇ. ದಶಮಸ್ಥಾನದಲ್ಲಿ ಮಿಥುನ, ತುಲಾ ಮತ್ತು ಕುಂಭ ಹೀಗೆ ವಾಯುತತ್ತ್ವದ ರಾಶಿಗಳಿದ್ದರೆ ಶಾಸ್ತ್ರೀಯ ಸಂಶೋಧನೆಗೆ ಸಂಬಂಧಿಸಿದ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ.

ಈ. ದಶಮಸ್ಥಾನದಲ್ಲಿ ಕರ್ಕ, ವೃಶ್ಚಿಕ ಮತ್ತು ಮೀನ ಹೀಗೆ ಜಲತತ್ತ್ವದ ರಾಶಿಗಳು ಇದ್ದರೆ ದ್ರವಪದಾರ್ಥಗಳಿಗೆ ಸಂಬಂಧಿಸಿದ ಉದ್ಯೋಗದಿಂದ ಪ್ರಗತಿಯಾಗುತ್ತದೆ.

7. ಆರ್ಥಿಕ ತ್ರಿಕೋಣದ ಗ್ರಹಗಳಿಗೆ ಸಂಬಂಧಿಸಿದ ಉದ್ಯೋಗ

ಆರ್ಥಿಕ ತ್ರಿಕೋಣ ಮತ್ತು ಲಾಭಸ್ಥಾನಗಳ ಪೈಕಿ ಬಲವಾಗಿರುವ ಗ್ರಹಗಳೊಂದಿಗೆ ಸಂಬಂಧಿಸಿದ ಉದ್ಯೋಗದಲ್ಲಿ ವ್ಯಕ್ತಿಗೆ ಯಶಸ್ಸು ಪ್ರಾಪ್ತವಾಗುತ್ತದೆ.

ಅ. ರವಿ

ತೇಜಕಾರಕ ರವಿ ಗ್ರಹ ಬಲವಾಗಿದ್ದರೆ ಪಿತ್ರಾರ್ಜಿತ ಉದ್ಯೋಗ, ಕಾರ್ಖಾನೆ, ಬಂಗಾರದ ವ್ಯಾಪಾರ, ರಾಜಕೀಯ ಕ್ಷೇತ್ರ, ಬಡಗಿ ಇತ್ಯಾದಿ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ.

ಆ. ಚಂದ್ರ

ಮಾತಾ, ಮನಸ್ಸು ಮತ್ತು ಜಲ ಇವುಗಳಿಗೆ ಕಾರಕವಾಗಿರುವ ಚಂದ್ರ ಗ್ರಹ ಬಲವಾಗಿದ್ದರೆ ದಾದಿ (ಪರಿಚಾರಕಿ), ಮತ್ಸ್ಯೋದ್ಯಮ, ಕೃಷಿ, ಸಂಗೀತ, ಗೃಹೋಪಯೋಗಿ ವಸ್ತು, ಹೋಟೆಲ್‌ ಉದ್ಯಮ, ಹಡಗು, ನೌಕಾದಳ, ಕಲಾಕುಸುರಿ, ಮಾನಸೋಪಚಾರ ತಜ್ಞ ಹಾಗೂ ದ್ರವಪದಾರ್ಥಗಳಿಗೆ ಸಂಬಂಧಿಸಿದ ಉದ್ಯೋಗ ಇತ್ಯಾದಿ ಕ್ಷೇತ್ರಗಳ ಉದ್ಯೋಗಗಳಲ್ಲಿ ಯಶಸ್ಸು ದೊರಕುತ್ತದೆ.

ಇ. ಮಂಗಳ

ಮಂಗಳ ಗ್ರಹ ಬಲವಾಗಿದ್ದರೆ ಸಾಹಸ, ಶೌರ್ಯ ಮತ್ತು ಭೂಮಿಗೆ ಸಂಬಂಧಿಸಿದ ಉದ್ಯೋಗಗಳಲ್ಲಿ ಯಶಸ್ಸು ಸಿಗುತ್ತದೆ. ಉದಾ. ಅಗ್ನಿಶಾಮಕ ದಳ, ಸಿವಿಲ್‌ ಇಂಜನಿಯರ್, ಪದಾರ್ಥ ವಿಜ್ಞಾನ, ಹೋಟೆಲ ಮ್ಯಾನೇಜಮೆಂಟ, ಸೆಕ್ಯುರಿಟಿ, ಸರ್ಜನ್, ಕೃಷಿ ಹಾಗೂ ಬಾಡಿಗೆಗೆ ಮನೆ ಕೊಡುವುದು ಇತ್ಯಾದಿ ಕ್ಷೇತ್ರಗಳ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ.

ಈ. ಬುಧ

ಬುಧ ವಾಣಿ ಮತ್ತು ಬುದ್ಧಿ ಇವುಗಳ ಕಾರಕ ಗ್ರಹವಾಗಿದೆ. ಬುಧ ಗ್ರಹ ಬಲವಾಗಿದ್ದರೆ, ಗಣಕಯಂತ್ರ, ಪತ್ರಿಕೋದ್ಯಮ, ನ್ಯಾಯವಾದಿ, ಆಡಳಿತಾಧಿಕಾರಿ, ಬ್ಯಾಂಕ, ಶೇರು ವ್ಯಾಪಾರ, ಅಧ್ಯಾಪಕ, ಸಣ್ಣ ಕೈಗಾರಿಕೆ, ಪೌರೋಹಿತ್ಯ, ಟ್ಯಾಕ್ಸ ಕನ್ಸಲ್ಟಂಟ್‌ ಇತ್ಯಾದಿ ಕ್ಷೇತ್ರದ ಉದ್ಯೋಗಗಳಲ್ಲಿ ಯಶಸ್ಸು ಸಿಗುತ್ತದೆ.

ಉ. ಗುರು

ಗುರು ಗ್ರಹ ಧಾರ್ಮಿಕ ಮತ್ತು ಶಿಕ್ಷಣ ಕ್ಷೇತ್ರಗಳ ಕಾರಕ ಗ್ರಹ ಆಗಿದೆ. ಧರ್ಮಪ್ರಸಾರಕ, ಲೇಖಕ, ಶಿಕ್ಷಣಕ್ಷೇತ್ರ, ವಿವಿಧ ತರಗತಿಗಳು, ಕಾನೂನುಕ್ಷೇತ್ರ, ವಕ್ತಾರ, ಹಣಕಾಸು ಸಂಸ್ಥೆ, ಅಧ್ಯಾಪಕ, ಸಮಾಜಶಾಸ್ತ್ರ, ಜೀವನಾವಶ್ಯಕ ವಸ್ತು ಇತ್ಯಾದಿ ಕ್ಷೇತ್ರಗಳ ವ್ಯವಹಾರಗಳಲ್ಲಿ ಯಶಸ್ಸು ಸಿಗುತ್ತದೆ.

ಊ. ಶುಕ್ರ

ಶುಕ್ರ ಕಲೆ, ಸೌಂದರ್ಯ, ಮನೋರಂಜನೆ ಇವುಗಳಿಗೆ ಸಂಬಂಧಿಸಿದ ಕ್ಷೇತ್ರಗಳ ಕಾರಕ ಗ್ರಹವಾಗಿದೆ. ಬೆಲೆಬಾಳುವ ವಸ್ತು, ಬಟ್ಟೆ ವ್ಯಾಪಾರ, ಹೋಟೆಲ, ಸಂಗೀತ, ಸುಗಂಧ ದ್ರವ್ಯ, ವಾಹನ, ಮದ್ಯ, ವಜ್ರ ವ್ಯಾಪಾರ, ವಾಹನ ಮಾರಾಟ, ಕಲಾವಿದ, ಶೃಂಗಾರಗೃಹ, ಚಲನಚಿತ್ರಮಂದಿರ, ಮ್ಯಾನೇಜಮೆಂಟ ಅಧಿಕಾರಿ, ಚಿನ್ನದವ್ಯಾಪಾರಿ ಇತ್ಯಾದಿ ಕ್ಷೇತ್ರಗಳ ಉದ್ಯೋಗಗಳಲ್ಲಿ ಯಶಸ್ಸು ಸಿಗುತ್ತದೆ.

ಋ. ಶನಿ

ಶನಿ ಈ ಗ್ರಹ ದೀರ್ಘ ಉದ್ಯೋಗ, ಕಬ್ಬಿಣ ಇವುಗಳ ಕಾರಕ ಗ್ರಹವಾಗಿದೆ. ಕಟ್ಟಡ ಕಾಮಗಾರಿ, ಜ್ಯೋತಿಷ್ಯ, ಗ್ಯಾರೇಜ, ಕಾಷ್ಟಶಿಲ್ಪಕಾರ, ಕೈಗಾರಿಕೋದ್ಯಮ, ಇತಿಹಾಸಕಾರ, ಸಂಶೋಧಕ, ನ್ಯಾಯಾಧೀಶ, ಇದ್ದಿಲು, ಇಂಧನ ಇತ್ಯಾದಿ ಕ್ಷೇತ್ರಗಳ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ.

8. ‘ದಶಮೇಶ ಗ್ರಹ ಯಾವ ಸ್ಥಾನದಲ್ಲಿದೆ’ ಎನ್ನುವುದರ ಮೇಲೆ ಉದ್ಯೋಗದ ಸ್ವರೂಪ ಮತ್ತು ದೊರೆಯುವ ಯಶಸ್ಸು ಅವಲಂಬಿಸಿರುತ್ತದೆ

ದಶಮೇಶ ಅಂದರೆ ದಶಮ ಸ್ಥಾನದ ಸ್ವಾಮಿ.

ಅ. ಪ್ರಥಮ ಸ್ಥಾನದಲ್ಲಿ ದಶಮೇಶ ಇದ್ದರೆ ಹೊಸ ಉದ್ಯೋಗದಲ್ಲಿ ಸ್ವಪ್ರಯತ್ನದಿಂದ, ಸ್ವತಃ ಕಷ್ಟಪಟ್ಟು ಪ್ರಗತಿ ಮತ್ತು ಅಭಿವೃದ್ಧಿ ಹೊಂದುತ್ತಾರೆ. ಯಾವುದಾದರೂ ಸಂಸ್ಥೆಯ ನಿರ್ಮಾಣ ಕಾರ್ಯ ಅವರಿಂದ ಜರುಗುತ್ತದೆ.

ಆ. ದ್ವಿತೀಯ ಸ್ಥಾನದಲ್ಲಿ ದಶಮೇಶ ಇದ್ದರೆ ಪಿತ್ರಾರ್ಜಿತ ಉದ್ಯೋಗದಲ್ಲಿ, ಹೋಟೆಲ ಉದ್ಯೋಗದಲ್ಲಿ ಅಥವಾ ಮನೆ ಖಾನಾವಳಿಯಲ್ಲಿ ಯಶಸ್ಸು ಸಿಗುತ್ತದೆ.

ಇ. ತೃತೀಯ ಸ್ಥಾನದಲ್ಲಿ ದಶಮೇಶ ಇದ್ದರೆ ಲೇಖನ, ಭಾಷಣ ಕಾರ, ಪ್ರವಾಸ ಈ ಮಾಧ್ಯಮಗಳಿಂದ ಯಶಸ್ಸು ಸಿಗುತ್ತದೆ.

ಈ. ಚತುರ್ಥ ಸ್ಥಾನದಲ್ಲಿ ದಶಮೇಶ ಇದ್ದರೆ ಕೃಷಿ, ವಾಹನ, ಆಸ್ತಿಪಾಸ್ತಿ, ಭೂಮಿ ಈ ಉದ್ಯೋಗಗಳಲ್ಲಿ ಯಶಸ್ಸು ಸಿಗುತ್ತದೆ.

ಉ. ಪಂಚಮ ಸ್ಥಾನದಲ್ಲಿ ದಶಮೇಶ ಇದ್ದರೆ ಶೈಕ್ಷಣಿಕ ಕ್ಷೇತ್ರ, ಪ್ರಕಾಶಕ, ಏಜೆಂಟ ಇತ್ಯಾದಿ ಉದ್ಯೋಗಗಳಲ್ಲಿ ಯಶಸ್ಸು ಸಿಗುತ್ತದೆ.

ಊ. ಷಷ್ಠ ಸ್ಥಾನದಲ್ಲಿ ದಶಮೇಶ ಇದ್ದರೆ ನಿಸರ್ಗೋಪಚಾರ ತಜ್ಞ, ಸಲಹೆಗಾರ ಇತ್ಯಾದಿ ಉದ್ಯೋಗಗಳಲ್ಲಿ ಯಶಸ್ಸು ಸಿಗುತ್ತದೆ.

ಋ. ಸಪ್ತಮ ಸ್ಥಾನದಲ್ಲಿ ದಶಮೇಶ ಇದ್ದರೆ ಗುಡಿಕೈಗಾರಿಕೆ, ಸಹೋದ್ಯೋಗಿಗಳ ಸಹವಾಸದಿಂದ ಪಾಲುದಾರಿಕೆ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ.

ಎ. ಅಷ್ಟಮ ಸ್ಥಾನದಲ್ಲಿ ದಶಮೇಶ ಇದ್ದರೆ ಉದ್ಯೋಗದಲ್ಲಿ ಮಂದ ಗತಿಯಿಂದ ಪ್ರಗತಿಯಾಗುತ್ತದೆ. ಮೃತ್ಯೋತ್ತರ ಆವಶ್ಯಕ ಸಾಮಗ್ರಿಗಳನ್ನು ಮಾರಾಟ ಮಾಡುವ ಅಥವಾ ವಿಮಾ ಏಜೆಂಟ ಇವರಿಗೆ ಯಶಸ್ಸು ಸಿಗುತ್ತದೆ.

ಏ. ನವಮ ಸ್ಥಾನದಲ್ಲಿ ದಶಮೇಶ ಇದ್ದಾಗ ಉದ್ಯೋಗದಲ್ಲಿ ಉತ್ತರೋತ್ತರ ಅಭಿವೃದ್ಧಿಯಾಗುತ್ತದೆ. ಸ್ವತಂತ್ರ ಉದ್ಯೋಗದಲ್ಲಿ ಮತ್ತು ಆಧ್ಯಾತ್ಮಕ್ಕೆ ಸಂಬಂಧಿಸಿದ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ.

ಐ. ದಶಮೇಶ ದಶಮದಲ್ಲಿ ಇದ್ದರೆ ಉದ್ಯೋಗದಲ್ಲಿ ಮನಸ್ಸಿನಲ್ಲಿದ್ದ ಯಶಸ್ಸು ಸಿಗುತ್ತದೆ. ಜ್ಯೋತಿಷ್ಯಶಾಸ್ತ್ರದಲ್ಲಿ ಯಶಸ್ಸು ಸಿಗುತ್ತದೆ. ದಶಮ ಸ್ಥಾನದಲ್ಲಿ ಯಾವ ಸ್ವಾಮಿ ಇರುತ್ತಾನೆಯೋ, ಅದಕ್ಕೆ ಸಂಬಂಧಪಟ್ಟ ಉದ್ಯೋಗದಲ್ಲಿ ಅಧಿಕ ಯಶಸ್ಸು ಸಿಗುತ್ತದೆ.

ಒ. ಏಕಾದಶ ಸ್ಥಾನದಲ್ಲಿ ಅಂದರೆ ಲಾಭದ ಸ್ಥಾನದಲ್ಲಿ ದಶಮೇಶ ಇದ್ದರೆ ಸ್ನೇಹಿತರ ಸಹಾಯದಿಂದ ಯಶಸ್ಸು ಲಭಿಸುತ್ತದೆ. ಮಾಸ ಮೀಡಿಯಾ, ಗಣಕಯಂತ್ರ ಇತ್ಯಾದಿ ಸಂಬಂಧಿಸಿದ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ.

ಓ. ವ್ಯಯ ಸ್ಥಾನದಲ್ಲಿ ಅಂದರೆ ಹನ್ನೆರಡನೇಯ ಸ್ಥಾನದಲ್ಲಿ ದಶಮೇಶ ಇದ್ದರೆ ಪ್ರವಾಸ, ದತ್ತಿ ಸಂಸ್ಥೆ, ಆಸ್ಪತ್ರೆ ಇವುಗಳಿಗೆ ಸಂಬಂಧಿಸಿದ ಉದ್ಯೋಗದಲ್ಲಿ ಯಶಸ್ಸು ಸಿಗುತ್ತದೆ.

9. ಕರಿಯರ್‌ನಲ್ಲಿ ಸೋಲು ಯಾವಾಗ ಬರುತ್ತದೆ ?

ಅ. ಜಾತಕದಲ್ಲಿ ಭಾಗ್ಯಸ್ಥಾನವು ಮಹತ್ವದ ಸ್ಥಾನವಾಗಿದೆ. ಅದು ದಶಮ ಸ್ಥಾನದ ವ್ಯಯ ಸ್ಥಾನವಾಗಿದೆ. ಉದ್ಯೋಗದಿಂದ ಆಗುವ ಹಾನಿಯನ್ನು ತೋರಿಸುವ ಸ್ಥಾನವಾಗಿದೆ. ಈ ಸ್ಥಾನ ಬಲವಾಗಿಲ್ಲದಿದ್ದರೆ ವ್ಯಕ್ತಿಗೆ ಉದ್ಯೋಗದಲ್ಲಿ ಹಾನಿ ಸಂಭವಿಸುತ್ತದೆ.

ಆ. ಲಗ್ನ ಸ್ಥಾನ ಅಥವಾ ಲಗ್ನೇಶ ದೋಷಪೂರಿತವಾಗಿದ್ದರೆ, ವ್ಯಕ್ತಿ ಸ್ವತಃ ಪ್ರಯತ್ನ ಮಾಡುವುದರಲ್ಲಿ ಕಡಿಮೆ ಬೀಳುತ್ತಾನೆ. ಲಗ್ನ ಸ್ಥಾನವು ದಶಮ ಸ್ಥಾನದ ಚತುರ್ಥ ಸ್ಥಾನ ಅಂದರೆ ಸುಖಸ್ಥಾನವಾಗಿದೆ.

ಇ. ಪಂಚಮ ಸ್ಥಾನವು ದಶಮಸ್ಥಾನದ ಅಷ್ಟಮ ಸ್ಥಾನವಾಗಿದೆ. ಈ ಸ್ಥಾನ ಬಲವಾಗಿಲ್ಲದಿದ್ದರೆ ವ್ಯಕ್ತಿ ಆಯ್ಕೆ ಮಾಡಿದ ಉದ್ಯೋಗದಿಂದ ಮಾನಸಿಕ ನೆಮ್ಮದಿ ಸಿಗುವುದಿಲ್ಲ.

ಈ. ದಶಮೇಶ ಅಂದರೆ ದಶಮ ಸ್ಥಾನದ ಸ್ವಾಮಿ 6, 8 ಅಥವಾ 12 ಈ ತ್ರಿಕಸ್ಥಾನದಲ್ಲಿದ್ದರೆ, ಉದ್ಯೋಗದಲ್ಲಿ ಸಂಘರ್ಷವಾಗುತ್ತದೆ.

10. ಧನವನ್ನು ಹೇಗೆ ಗಳಿಸಬೇಕು ?

ಈ ವಿಷಯದಲ್ಲಿ ಸಂತ ತುಕಾರಾಮ ಮಹಾರಾಜ ಇವರು ತಮ್ಮ ಅಭಂಗದಲ್ಲಿ ಹೀಗೆ ಹೇಳಿದ್ದಾರೆ – ಇಲ್ಲಿ ಕೇಳಿ, ನೀವು ಒಳ್ಳೆಯ ವ್ಯಾಪಾರವನ್ನು ಮಾಡಿ ಸಂಪತ್ತು ಗಳಿಸಿ ಮತ್ತು ವಿಚಾರಪೂರ್ವಕ ಖರ್ಚು ಮಾಡಿ. ಹೀಗೆ ಯಾರು ಮಾಡುವರೋ, ಅವನಿಗೆ ಉತ್ತಮ ಗತಿ ಸಿಗುವುದು ಮತ್ತು ಅವನು ಮನುಷ್ಯ ಯೋನಿಯಲ್ಲಿ ಜನಿಸಿ ಉತ್ತಮ ಭೋಗವನ್ನು ಅನುಭವಿಸುತ್ತಾನೆ.

– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಿತ ವಿಶಾರದ, ಸನಾತನ ಆಶ್ರಮ, ರಾಮನಾಥಿ, ಗೋವಾ

Leave a Comment