ಇಚ್ಛಿತ ಕಾರ್ಯವನ್ನು ಮುಹೂರ್ತ ನೋಡಿ ಮಾಡುವುದರ ಮಹತ್ವ

Article also available in :

ಪ್ರಾಚೀನ ಕಾಲದಿಂದಲೂ ಭಾರತದಲ್ಲಿ ಮಹತ್ವದ ಕಾರ್ಯಗಳನ್ನು ಶುಭಮುಹುರ್ತದಲ್ಲಿ ಮಾಡುವ ಪರಂಪರೆ ನಡೆದುಬಂದಿದೆ. ನಮ್ಮ ದಿನನಿತ್ಯದ ಜೀವನದಲ್ಲಿ ಮುಹೂರ್ತಗಳ ಸಂಬಂಧ ಮೇಲಿಂದ ಮೇಲೆ ಬಂದೇ ಬರುತ್ತದೆ. ಈ ಲೇಖನದ ಮೂಲಕ ‘ಮುಹೂರ್ತ’ದ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ತಿಳಿದುಕೊಳ್ಳೋಣ.

೧. ಮುಹೂರ್ತ ಎಂದರೇನು ?

ಜ್ಯೋತಿಷ್ಯ ಶಾಸ್ತ್ರದಲ್ಲಿ ಮುಹೂರ್ತ ಶಬ್ದದ ಅರ್ಥವು ‘೪೮ ನಿಮಿಷಗಳ ಕಾಲಾವಧಿ’ ಎಂದಾಗಿದೆ. ಆದರೆ ಪ್ರಸ್ತುತ ಕಾಲದಲ್ಲಿ ಪ್ರಚಲಿತವಿರುವ ಅರ್ಥವಂದರೆ ‘ಶುಭ ಅಥವಾ ಅಶುಭ ಕಾಲಾವಧಿ’ ಎಂದಾಗಿದೆ. ಭಾರತದಲ್ಲಿ ವೈದಿಕ ಕಾಲದಿಂದಲೂ ಮಹತ್ವದ ಕಾರ್ಯಗಳನ್ನು ಶುಭ ಮುಹೂರ್ತದಲ್ಲಿ ಮಾಡುವ ಪರಂಪರೆ ಇದೆ. ‘ಶ್ರೌತ’, ‘ಗೃಹ್ಯ’ ಮತ್ತು ‘ಧರ್ಮಸೂತ್ರ’ಗಳಲ್ಲಿ (ಧರ್ಮಶಾಸ್ತ್ರ ಹೇಳುವು ಪ್ರಚೀನ ಗ್ರಂಥಗಳು) ಧಾರ್ಮಿಕ ವಿಧಿ ಮತ್ತು ಸಂಸ್ಕಾರಗಳನ್ನು ಯಾವ ಮುಹೂರ್ತದಲ್ಲಿ ಮಾಡಬೇಕು ಎನ್ನುವುದನ್ನು ಹೇಳಲಾಗಿದೆ. ಮುಹೂರ್ತದ ಬಗ್ಗೆ ಸ್ವತಂತ್ರ ಮಾಹಿತಿಯನ್ನು ಕೊಡುವ ಅನೇಕ ಗ್ರಂಥಗಳಿದ್ದು ಅವುಗಳಲ್ಲಿ ಅನೇಕ ಮಹತ್ವದ ಕೆಲಸಗಳನ್ನು ಯಾವ ಮುಹೂರ್ತದಲ್ಲಿ ಮಾಡಬೇಕು ಎನ್ನುವುದನ್ನು ಸವಿಸ್ತಾರವಾಗಿ ಕೊಡಲಾಗಿದೆ. ಜೋತಿಷ್ಯವು ಕಾಲಮಾಪನ ಮತ್ತು ಕಾಲವರ್ಣನೆಯ ಶಾಸ್ತ್ರವಾಗಿರುವುದರಿಂದ, ‘ಮುಹೂರ್ತ ನೋಡುವುದು’ ಕೇವಲ ಜ್ಯೋತಿಷ್ಯಶಾಸ್ತ್ರದ ಮೂಲಕವೇ ಸಾಧ್ಯವಾಗುತ್ತದೆ. ಜ್ಯೋತಿಷ್ಯಶಾಸ್ತ್ರ ೬ ವೇದಾಂಗಳಲ್ಲೊಂದಾಗಿದೆ; ಏಕೆಂದರೆ ಕಾಲದ ಜ್ಞಾನ ಆದ ನಂತರವೇ ವೇದಗಳಲ್ಲಿ ಹೇಳಿರುವ ಕರ್ಮಗಳನ್ನು ಮಾಡಬಹುದು.

ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ
ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ

೨. ಮುಹೂರ್ತವನ್ನು ನೋಡಿ ಕಾರ್ಯ ಆರಂಭಿಸುವುದರ ಹಿಂದಿನ ಉದ್ದೇಶ

ವಿಶ್ವದಲ್ಲಿ ನಡೆಯುವ ಪ್ರತಿಯೊಂದು ಘಟನೆಯು ವಿಶಿಷ್ಟ ಸ್ಥಳದಲ್ಲಿ ಮತ್ತು ವಿಶಿಷ್ಟ ಕಾಲದಲ್ಲಿ ನಡೆಯುತ್ತದೆ; ಅಂದರೆ ಪ್ರತಿಯೊಂದು ಘಟನೆಗೆ ಸ್ಥಳ-ಕಾಲದ ಬಂಧನವಿರುತ್ತದೆ. ಯಾವುದೇ ಕಾರ್ಯಕ್ಕೆ ಯಶಸ್ಸು ಸಿಗಬೇಕಾದರೆ ಸ್ಥಳ ಮತ್ತು ಕಾಲ ಇವುಗಳ ಅನುಕೂಲತೆ ಇರಬೇಕು. ಇದಕ್ಕೆ ಮಹಾಭಾರತದಲ್ಲಿರುವ ಮುಂದಿನ ಶ್ಲೋಕವು ಮಾರ್ಗದರ್ಶಕವಾಗಿದೆ.

ನಾದೇಶಕಾಲೇ ಕಿಞ್ಚಿತ್ಸ್ಯಾತ್ ದೇಶಕಾಲೌ ಪ್ರತೀಕ್ಷತಾಮ್ । – ಮಹಾಭಾರತ, ವನಪರ್ವ, ಅಧ್ಯಾಯ ೨೮, ಶ್ಲೋಕ ೩೨

ಅರ್ಥ : ದೇಶಕಾಲ (ಸ್ಥಳ-ಕಾಲ) ಅನುಕೂಲವಿಲ್ಲದಿದ್ದರೆ ಏನೂ ಸಾಧ್ಯವಾಗುವುದಿಲ್ಲ. ಆದುದರಿಂದ ದೇಶಕಾಲದ ಕಡೆಗೆ ಗಮನ ಕೊಡಬೇಕು.

ಆದುದರಿಂದ ‘ಕಾರ್ಯ ಯಶಸ್ವಿಯಾಗುವುದಕ್ಕೆ ಕಾಲ ಅನುಕೂಲವಾಗಿರಬೇಕು’ ಇದುವೇ ಮುಹೂರ್ತ ನೋಡಿ ಕಾರ್ಯ ಆರಂಭಿಸುವುದರ ಹಿಂದಿನ ಉದ್ದೇಶವಾಗಿದೆ.

ಹಿಂದೂ ಧರ್ಮವು ಕೇವಲ ಮಹತ್ವದ ಕಾರ್ಯಗಳನ್ನೇ ಕಾಲನೋಡಿ ಮಾಡುಲು ಹೇಳಿದೆ ಎಂದಲ್ಲ. ಮನುಷ್ಯನು ಯಾವ ಯುಗದಲ್ಲಿ ಯಾವ ಸಾಧನೆ ಮಾಡಬೇಕು, ಜೀವನದ ಯಾವ ಕಾಲಘಟ್ಟದಲ್ಲಿ ಯಾವ ಪುರುಷಾರ್ಥವನ್ನು ಸಾಧಿಸಬೇಕು, ನಿತ್ಯಕರ್ಮಗಳನ್ನು ಯಾವ ಸಮಯದಲ್ಲಿ ಮಾಡಬೇಕು, ಮುಂತಾದ ವಿಷಯಗಳ ಬಗ್ಗೆಯೂ ವಿಸ್ತಾರವಾಗಿ ಹೇಳಲಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಹಿಂದೂ ಧರ್ಮವು ಕಾಲಕ್ಕನುಸಾರ ಜೀವನ ನಡೆಸುವ ಬೋಧನೆಯನ್ನು ಕೊಡುತ್ತದೆ.

೩. ಮುಹೂರ್ತಕ್ಕಾಗಿ ಪರಿಗಣಿಸಲಾಗುವ ಘಟಕಗಳು

ಮುಹೂರ್ತಕ್ಕಾಗಿ ಮುಖ್ಯವಾಗಿ ತಿಥಿ, ನಕ್ಷತ್ರ, ವಾರ, ಯೋಗ ಮತ್ತು ಕರಣ ಈ ೫ ಅಂಗಗಳನ್ನು ಪರಿಗಣಿಸಲಾಗುತ್ತದೆ. ಆವಶ್ಯಕತೆ ಇದ್ದರೆ ಮಾಸ, ಅಯನ (ಉತ್ತರಾಯಣ ಮತ್ತು ದಕ್ಷಿಣಾಯನ) ಮತ್ತು ವರ್ಷ ಇವುಗಳ ವಿಚಾರ ಮಾಡುತ್ತಾರೆ. ಮುಹೂರ್ತವನ್ನು ನಿರ್ಧರಿಸುವಾಗ ಕಾರ್ಯಸ್ವರೂಪಕ್ಕೆ ಪೂರಕವಿರುವ ಗುಣ ಧರ್ಮಗಳನ್ನು ಹೊಂದುವ ತಿಥಿ, ನಕ್ಷತ್ರ ಇತ್ಯಾದಿ ಘಟಕಗಳನ್ನು ಆರಿಸಲಾಗುತ್ತದೆ. ಉದಾ. ಪ್ರವಾಸಕ್ಕೆ ಹೊರಡುವಾಗ ಅಶ್ವಿನಿ, ಮೃಗಶಿರಾ, ಪುನರ್ವಸು, ಚಿತ್ರಾ ಇತ್ಯಾದಿ ವಾಯುತತ್ವದ (ಗತಿ ತೋರಿಸುವ) ನಕ್ಷತ್ರಗಳು ಉಪಯುಕ್ತವಾಗಿವೆ; ವಿವಾಹ ಸಂಸ್ಕಾರಕ್ಕಾಗಿ ಅಮಾವಾಸ್ಯೆ ಮತ್ತು ‘ರಿಕ್ತ’ ತಿಥಿಗಳು ವರ್ಜ್ಯವಾಗಿವೆ. (ಚತುರ್ಥಿ, ನವಮಿ ಮತ್ತು ಚತುರ್ದಶಿ ಇವು ರಿಕ್ತ ತಿಥಿಗಳಾಗಿವೆ. ರಿಕ್ತ ಎಂದರೆ ನ್ಯೂನತೆ); ವಿದ್ಯೆಯ ಪ್ರಾಪ್ತಿ ಮಾಡುವುದಕ್ಕಾಗಿ ಅಶ್ವಿನಿ, ಪುಷ್ಯ, ಹಸ್ತ, ರೇವತಿ ಇತ್ಯಾದಿ ‘ದೇವಗಣ’ ನಕ್ಷತ್ರಗಳು (ಸತ್ವಗುಣಿ ನಕ್ಷತ್ರಗಳು) ಉಪಯುಕ್ತವಾಗಿವೆ; ದೇವತೆಗಳ ಪ್ರತಿಷ್ಠಾಪನೆ ಮಾಡಲು ಉತ್ತರಾಯಣ ಕಾಲವು ಯೋಗ್ಯವಾಗಿದೆ ಇತ್ಯಾದಿ.

ಪಂಚಾಂಗದ ಪ್ರಾಥಮಿಕ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

೪. ಶುಭ ಮುಹೂರ್ತದಲ್ಲಿ ಕಾರ್ಯ ಮಾಡಲು ಸಾಧ್ಯವಿಲ್ಲದಿದ್ದರೆ ಏನು ಮಾಡಬೇಕು ?

ಕೆಲವು ಸಮಯ ಮುಹೂರ್ತಕ್ಕೆ ಸರಿಯಾಗಿ ಕಾರ್ಯ ಆರಂಭ ಮಾಡುವುದು ವ್ಯಕ್ತಿಯ ಕೈಯಲ್ಲಿರುವುದಿಲ್ಲ, ಉದಾ. ಪರೀಕ್ಷೆ ಇದ್ದರೆ, ಸಾರ್ವಜನಿಕ ವಾಹನದಿಂದ ದೂರದ ಪ್ರವಾಸ ಮಾಡುವುದಿದ್ದರೆ ಇತ್ಯಾದಿ. ಇಂತಹ ಸಮಯದಲ್ಲಿ ಉಪಾಸ್ಯ ದೇವತೆಗೆ ಕಾರ್ಯದಲ್ಲಿ ಬರಬಹುದಾದ ಅಡೆತಡೆಗಳನ್ನು ದೂರ ಮಾಡುವುದಕ್ಕಾಗಿ ಮತ್ತು ಕಾರ್ಯವು ನಿರ್ವಿಘ್ನವಾಗಿ ನೆರವೇರಲು ಭಾವಪೂರ್ಣ ಪ್ರಾರ್ಥನೆ ಮಾಡಬೇಕು.

೫. ಸಂತರು ಹೇಳಿದ ಸಮಯದ ಹಿಂದೆ ಅವರ ಸಂಕಲ್ಪಶಕ್ತಿ ಇರುವುದರಿಂದ ಅದೇ ಮುಹೂರ್ತವಾಗುವುದು

ಸಂತರು ಯಾವುದಾದರೊಂದು ಕಾರ್ಯಕ್ಕಾಗಿ ವಿಶಿಷ್ಟ ಸಮಯ ನಿರ್ಧರಿಸಿದ್ದರೆ, ಮತ್ತೆ ಬೇರೆ ಮುಹೂರ್ತ ನೋಡುವ ಆವಶ್ಯಕತೆ ಇರುವುದಿಲ್ಲ. ಸಂತರು ಈಶ್ವರಸ್ವರೂಪರಾಗಿರುತ್ತಾರೆ. ಈಶ್ವರನು ಸ್ಥಳ ಮತ್ತು ಕಾಲವನ್ನು ಮೀರಿದ ತತ್ತ್ವ. ಆದುದರಿಂದ ಸಂತರು ಯಾವುದಾದರೊಂದು ಕಾರ್ಯಕ್ಕಾಗಿ ಹೇಳಿದ ಸಮಯದ ಹಿಂದೆ ಅವರ ಸಂಕಲ್ಪಶಕ್ತಿ ಇರುವುದರಿಂದ ಅದೇ ಮುಹೂರ್ತವಾಗಿರುತ್ತದೆ.

– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೧೦.೧೨.೨೦೨೨)

Leave a Comment