ವಾಸ್ತುಶಾಸ್ತ್ರ ಮತ್ತು ವಿಶ್ವ

ಪಂಚಮಹಾಭೂತಗಳು ಒಟ್ಟಿಗೆ ಬಂದು ಸೃಷ್ಟಿಯ ರಚನೆಯಾಗುವುದು

ಹಿಂದೂ ಧರ್ಮಶಾಸ್ತ್ರಕ್ಕನುಸಾರ ಪಂಚಮಹಾಭೂತಗಳಿಂದ ಸೃಷ್ಟಿಯ ರಚನೆಯಾಗಿದೆ. ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ಇವು ಪಂಚಮಹಾಭೂತಗಳಾಗಿವೆ (ಪಂಚತತ್ತ್ವಗಳು). ಈ 5 ತತ್ತ್ವಗಳು ಸ್ವಯಂಭೂಗಳಾಗಿವೆ. ಅವುಗಳನ್ನು ಯಾರಿಂದಲೂ ನಿರ್ಮಿಸಲು ಸಾಧ್ಯವಿಲ್ಲ ಮತ್ತು ಯಾರು ನಾಶಮಾಡಲೂ ಸಾಧ್ಯವಿಲ್ಲ. ಸೃಷ್ಟಿಯ ಯಾವುದಾದರೊಂದು ರಚನೆಗಾಗಿ 5 ತತ್ತ್ವಗಳು ಒಟ್ಟಿಗೆ ಬರುತ್ತವೆ ಮತ್ತು ಈ ರಚನೆ ನಾಶವಾದರೆ, ಅವು ಪುನಃ ಮೂಲ ಸ್ವರೂಪದಲ್ಲಿ ವಿಲೀನವಾಗುತ್ತವೆ.

ಶರೀರ ಮತ್ತು ಪಂಚಮಹಾಭೂತಗಳು

ಮನುಷ್ಯನ ಶರೀರವು ಪಂಚಮಹಾಭೂತಗಳಿಂದ ತಯಾರಾಗಿದೆ. ಈ ಕುರಿತು ‘ತೈತ್ತಿರಿಯ ಉಪನಿಷತ್ತಿ’ನಲ್ಲಿ ಮುಂದಿನ ಶ್ಲೋಕವಿದೆ –

ತಸ್ಮಾದ್ವಾ ಏತಸ್ಮಾದಾತ್ಮನ ಆಕಾಶ: ಸಂಭೂತ: । ಆಕಾಶಾದ್ವಾಯು: ।
ವಾಯೋರಗ್ನಿ: । ಅಗ್ನೇರಾಪ: । ಅದ್ಭ್ಯ: ಪೃಥಿವೀ । ಪೃಥಿವ್ಯಾ ಓಷಧಯ: ।
ಓಷಧೀಭ್ಯೋಽನ್ನಮ್ । ಅನ್ನಾತ್ಪುರುಷ: । – ತೈತ್ತಿರೀಯೋಪನಿಷತ್, ವಲ್ಲೀ ೨, ಅನುವಾಕ್ ೧, ಶ್ಲೋಕ ೧

ಅರ್ಥ: ಪರಮ ಆತ್ಮದಿಂದ ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಅಗ್ನಿ, ಅಗ್ನಿಯಿಂದ ಜಲ, ಜಲದಿಂದ ಪೃಥ್ವಿ, ಪೃಥ್ವಿಯಿಂದ ಔಷಧಿಗಳು (ವನಸ್ಪತಿ), ಔಷಧಗಳಿಂದ ಆಹಾರ ಮತ್ತು ಆಹಾರದಿಂದ ಮಾನವನ ಉತ್ಪತ್ತಿಯಾಗಿದೆ.

ಆಯುರ್ವೇದದಲ್ಲಿಯೂ ಯಾವ ಮಹಾಭೂತದಿಂದ ದೇಹದ ಯಾವ ಭಾಗವು ತಯಾರಾಗಿದೆಯೋ, ಅದರ ಬಗೆಗಿನ ಆಳವಾದ ಅಧ್ಯಯನವನ್ನು ನೀಡಲಾಗಿದೆ.

ಪಿಂಡದಿಂದ ಬ್ರಹ್ಮಾಂಡ

ನಮ್ಮ ಶರೀರದಲ್ಲಿ ಏನೇನಿದೆಯೋ, ಸೃಷ್ಟಿಯಲ್ಲಿಯೂ ಅದುವೇ ಕಾಣಿಸುತ್ತದೆ. ಇದನ್ನೇ ನಾವು ‘ಪಿಂಡದಿಂದ ಬ್ರಹ್ಮಾಂಡ’ ಎನ್ನುತ್ತೇವೆ. ‘ಚರಕಸಂಹಿತೆ’ಯಲ್ಲಿ ಈ ಕುರಿತು ಮುಂದಿನಂತೆ ಹೇಳಿದ್ದಾರೆ –

ಏವಂ ಅಯಂ ಲೋಕಸಮ್ಮತ: ಪುರುಷ: ।
ಯಾವನ್ತೋ ಹಿ ಲೋಕೇ ಭಾವವಿಶೇಷ: ತಾವನ್ತ: ಪುರುಷೇ ।
ಯಾವನ್ತ: ಪುರುಷೇ ತಾವನ್ತೋ ಲೋಕೇ ಇತಿ । – ಚರಕಸಂಹಿತಾ, ಅಧ್ಯಾಯ ೫, ಶ್ಲೋಕ ೩

ಅರ್ಥ: ಮನುಷ್ಯನು ಸೃಷ್ಟಿಯ ರಚನೆಯೇ ಆಗಿದ್ದಾನೆ. ಆದ್ದರಿಂದ ಬಾಹ್ಯ ಸೃಷ್ಟಿ ಮತ್ತು ಪುರುಷ ಇವೆರಡೂ ಪಂಚಮಹಾಭೂತಾತ್ಮಕ ಆಗಿವೆ. ಬಾಹ್ಯಸೃಷ್ಟಿಯಲ್ಲಿರುವಷ್ಟು ವಿಷಯಗಳು ಮನುಷ್ಯನ ದೇಹದಲ್ಲಿಯೂ ಇವೆ ಮತ್ತು ಯಾವ ವಸ್ತುಗಳು ಮನುಷ್ಯನ ದೇಹದಲ್ಲಿವೆಯೋ, ಅಷ್ಟೂ ಬಾಹ್ಯ ಸೃಷ್ಟಿಯಲ್ಲಿ ಇವೆ.

ವಾಸ್ತುವಿನ ರಚನೆಯ ಮತ್ತು ಪಂಚಮಹಾಭೂತಗಳ ಸಮತೋಲನ

ಮನುಷ್ಯನ ದೇಹದಲ್ಲಿನ ‘ಅಸ್ಥಿ’ ಪೃಥ್ವಿತತ್ತ್ವದಿಂದ, ರಕ್ತ ಮುಂತಾದ ದ್ರವರೂಪ ವಸ್ತುಗಳು ಜಲ (ಆಪ) ತತ್ತ್ವದಿಂದ, ಜೀರ್ಣದ ಕಾರ್ಯವು ಅಗ್ನಿ (ತೇಜ) ತತ್ತ್ವದ ಸಹಾಯದಿಂದ, ದೇಹದ ರಕ್ತಪರಿಚಲನೆ, ವಿಸರ್ಜನೆ ಮುಂತಾದ ಎಲ್ಲ ಕರ್ಮಗಳು ವಾಯುತತ್ತ್ವದ ಸಹಾಯದಿಂದಾಗುತ್ತವೆ, ದೇಹದ ಎಲ್ಲ ಪೊಳ್ಳು ಭಾಗಗಳಲ್ಲಿ ಆಕಾಶತತ್ತ್ವವಿರುತ್ತದೆ. ಈ ಪಂಚಮಹಾಭೂತಗಳ ಸಮತೋಲನವು ನಮ್ಮ ದೇಹದಲ್ಲಿರುತ್ತದೆ. ಈ ಸಮತೋಲನವು ಹಾಳಾದರೆ ರೋಗ ಅಥವಾ ಕಾಯಿಲೆಗಳು ಬರುತ್ತವೆ. ಅದಕ್ಕಾಗಿ ಚಿಕಿತ್ಸೆ ಪಡೆಯುವುದು ಆವಶ್ಯಕವಾಗಿರುತ್ತದೆ.

ಮನುಷ್ಯನ ದೇಹದಂತೆಯೇ ವಾಸ್ತು ಕೂಡ ಸೃಷ್ಟಿಯ ರಚನೆಯಾಗಿದೆ. ಆದ್ದರಿಂದ ವಾಸ್ತು ಕೂಡ ಪಂಚಮಹಾಭೂತಗಳಿಂದಲೇ ಸೃಷ್ಟಿಯಾಗಿದೆ. ವಾಸ್ತುವಿನ ರಚನೆಯು ಪಂಚಮಹಾಭೂತಗಳ ದೃಷ್ಟಿಯಲ್ಲಿ ಅನುಕೂಲವಾಗಿರುವುದು ಆವಶ್ಯಕವಾಗಿದೆ. ವಾಸ್ತುವಿನ ಅಯೋಗ್ಯ ರಚನೆಯಿಂದ ಈ ಸಮತೋಲನವು ಹಾಳಾಗುತ್ತದೆ, ಅಂದರೆ ಅಗ್ನಿತತ್ತ್ವದ ದಿಶೆಯಲ್ಲಿ ನೀರು ಬಂದರೆ ಅಥವಾ ವಾಯುತತ್ತ್ವದ ದಿಶೆಯಿಂದ ಭಾರವಾದ ವಸ್ತುಗಳಿದ್ದರೆ, ವಾಸ್ತುವಿನಲ್ಲಿರುವ ವ್ಯಕ್ತಿಗಳ ದೇಹ ಮತ್ತು ಆಯುಷ್ಯದ ಮೇಲೆ ನೇರ ಪರಿಣಾಮವಾಗುತ್ತದೆ; ಹಾಗಾಗಿ ವಾಸ್ತುರಚನೆಯಲ್ಲಿ ಪಂಚ ಮಹಾಭೂತಗಳ ಯೋಗ್ಯ ಸಮತೋಲನವು ಆವಶ್ಯಕವಾಗಿದೆ.

ವಾಸ್ತುವಿನಲ್ಲಿನ ಪಂಚಮಹಾಭೂತಗಳ ದಿಕ್ಕು, ಕಾರ್ಯ ಮತ್ತು ವೈಶಿಷ್ಟ್ಯಗಳು

ಅ. ಆಕಾಶತತ್ತ್ವ

ಅ ೧. ವಾಸ್ತುವಿನ ಮಧ್ಯದ ಬ್ರಹ್ಮಮಂಡಲದಲ್ಲಿ ಆಕಾಶತತ್ತ್ವದ ಸ್ಥಾನವಿರುತ್ತದೆ. ಆಕಾಶತತ್ತ್ವವೆಂದರೆ ಟೊಳ್ಳು. ಆದ್ದರಿಂದ ವಾಸ್ತುವಿನ ಮಧ್ಯದ ಜಾಗವು ಖಾಲಿ ಇರುವುದು ಆವಶ್ಯಕವಾಗಿದೆ.

ಅ ೨. ಆಕಾಶತತ್ತ್ವದಿಂದಲೇ ಇತರ ತತ್ತ್ವಗಳ ನಿರ್ಮಿತಿಯಾಗಿದೆ. ಆಕಾಶತತ್ತ್ವದಿಂದ ಇತರ ತತ್ತ್ವಗಳಿಗೂ ಊರ್ಜೆಯನ್ನು ಪೂರೈಸಲಾಗುತ್ತದೆ. ಈ ಊರ್ಜೆಯು ‘ವಿದಿಕ್ಷು’, ಅಂದರೆ ಉಪದಿಕ್ಕುಗಳತ್ತ ಪ್ರವಹಿಸುತ್ತಿರುತ್ತದೆ. ಈ ಪ್ರವಾಹಕ್ಕೆ ಅಡೆತಡೆಗಳು ಬರದಿದ್ದರೆ ಎಲ್ಲ ತತ್ತ್ವಗಳು ಶಕ್ತಿಯುತವಾಗಿ ಸರಿಯಾದ ಕಾರ್ಯವನ್ನು ಮಾಡುತ್ತವೆ; ಆದ್ದರಿಂದಲೇ ಬ್ರಹ್ಮಮಂಡಲದಲ್ಲಿ ಯಾವುದೇ ಅಡೆತಡೆ ಅಥವಾ ಭಾರವಾದ ಕಟ್ಟಡ ಇರಬಾರದು.

ಅ ೩. ಬ್ರಹ್ಮಮಂಡಲವು ಏಕೆ ದೋಷಮುಕ್ತವಾಗಿರಬೇಕು?: ಆಕಾಶತತ್ತ್ವವು ದೇಹದ ಟೊಳ್ಳುಗಳ ಮೇಲೆ ಕಾರ್ಯವನ್ನು ಮಾಡುತ್ತದೆ; ಆದ್ದರಿಂದ ಇದರಲ್ಲಿ ಅಡಚಣೆಗಳು ನಿರ್ಮಾಣವಾದರೆ ಕರುಳು ಮತ್ತು ಹೊಟ್ಟೆಯ ಮೇಲೆ ಪರಿಣಾಮವಾಗಿ ಹೊಟ್ಟೆಯ ರೋಗಗಳಾಗುತ್ತವೆ. ಆಕಾಶತತ್ತ್ವದ ಸ್ಥಾನ, ಅಂದರೆ ಬ್ರಹ್ಮ ಮಂಡಲವು ಒಂದು ವೇಳೆ ದೋಷಮುಕ್ತವಾಗಿದ್ದರೆ, ಇತರ ಎಲ್ಲ ತತ್ತ್ವಗಳು ಶಕ್ತಿಯುತವಾಗಿರುವುದರಿಂದ ಮನೆಯ ವಾತಾವರಣವು ಶಾಂತವಾಗಿರುತ್ತದೆ. ಮನೆಯಲ್ಲಿ ಪರಿಪೂರ್ಣತೆ ಲಭಿಸುತ್ತದೆ; ಆದ್ದರಿಂದ ವಾಸ್ತುವಿನಲ್ಲಿ ಬ್ರಹ್ಮಮಂಡಲದ ಬಗ್ಗೆ ಹೆಚ್ಚಿನ ಗಮನ ಹರಿಸುವುದು ಆವಶ್ಯಕವಾಗಿದೆ.

ಆ. ಅಗ್ನಿತತ್ತ್ವ

ಆ ೧. ಈ ತತ್ತ್ವವು ಆಗ್ನೇಯ ದಿಕ್ಕಿನಲ್ಲಿ ಕಾರ್ಯ ಮಾಡುತ್ತದೆ. ಈ ತತ್ತ್ವವು ವಾಸ್ತುವಿನಲ್ಲಿರುವ ಜನರಿಗೆ ಊರ್ಜೆಯನ್ನು ಪ್ರದಾನಿಸುವ ಕಾರ್ಯವನ್ನು ಮಾಡುತ್ತದೆ.

ಆ ೨. ಈ ತತ್ತ್ವವು ನಿಯಂತ್ರಣದಲ್ಲಿರಬೇಕು: ಅಗ್ನಿಯು ನಿಯಂತ್ರಿತ ಅಥವಾ ಸಂಯಮದಲ್ಲಿದ್ದರೆ, ಅನೇಕ ಜಾಗಗಳಲ್ಲಿ ಅದನ್ನು ಉಪಯೋಗಿಸಬಹುದು; ಆದರೆ ಅದು ಅನಿಯಂತ್ರಿತವಾದರೆ ಹಾನಿಯುಂಟು ಮಾಡುತ್ತದೆ. ಅದೇ ರೀತಿ ಅಗ್ನಿ ತತ್ತ್ವ ಕೂಡ ನಿಯಂತ್ರಿತ ಮತ್ತು ದೋಷಮುಕ್ತವಾಗಿದ್ದರೆ, ಸಹಾಯಕವಾಗಿರುತ್ತದೆ, ಇಲ್ಲದಿದ್ದರೆ ಹಾನಿಯಾಗುತ್ತದೆ. ಈ ತತ್ತ್ವವು ಮನೆಯ ಮುಂದಿನ ಪೀಳಿಗೆಯೊಂದಿಗಿನ ಸಂಬಂಧ, ಚಿಕ್ಕ ಮಕ್ಕಳು ಮತ್ತು ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.

ಇ. ಪೃಥ್ವಿತತ್ತ್ವ

ಇ ೧. ಜಡತ್ವವು ಈ ತತ್ತ್ವದ ಮುಖ್ಯ ವೈಶಿಷ್ಟ್ಯವಾಗಿದೆ. ಸ್ಥಿರತೆಯನ್ನು ತೋರಿಸುವ ಈ ತತ್ತ್ವವು ನೈರುತ್ಯ ದಿಕ್ಕಿನಲ್ಲಿ ಕಾರ್ಯವನ್ನು ಮಾಡುತ್ತದೆ. ಮನೆಯಲ್ಲಿನ ಜನರಿಗೆ ಈ ತತ್ತ್ವದ ಊರ್ಜೆಯಿಂದ ಸ್ಥಿರತೆ ದೊರಕುತ್ತದೆ. ಆದ್ದರಿಂದ ‘ಕುಟುಂಬದ ಯಜಮಾನನು ಈ ದಿಕ್ಕಿನಲ್ಲಿ ವಾಸಿಸಬೇಕು’, ಎಂದು ಹೇಳಲಾಗಿದೆ.

ಇ ೨. ಈ ದಿಕ್ಕಿನಲ್ಲಿ ನಿರ್ಮಾಣವಾಗುವ ದೋಷಗಳು ಅಸ್ಥೈರ್ಯ, ಕಲಹ, ವೈವಾಹಿಕ ಸಮಸ್ಯೆಗಳು, ಉದಾಸೀನತೆ ಮತ್ತು ಅಪಯಶಸ್ಸು ಇತ್ಯಾದಿ ವಿಷಯಗಳು ಉಂಟಾಗುತ್ತವೆ.

ಈ. ವಾಯುತತ್ತ್ವ

ಈ ೧. ದೋಷಮುಕ್ತವಾದ ವಾಯುತತ್ತ್ವವು ಮನೆಯಲ್ಲಿನ ನಕಾರಾತ್ಮಕತೆ ಮುಗಿಸುತ್ತದೆ. ವಾಯುತತ್ತ್ವವೆಂದರೆ ಗತಿಮಾನತೆ! ಚಾಂಚಲ್ಯ ಅದರ ವೈಶಿಷ್ಟ್ಯವಾಗಿದೆ. ಈ ತತ್ತ್ವವು ವಾಯುವ್ಯ ದಿಕ್ಕಿನಲ್ಲಿ ಕಾರ್ಯವನ್ನು ಮಾಡುತ್ತದೆ. ವಾಯು ಇದು ನಕಾರಾತ್ಮಕತೆಯನ್ನು ಮುಗಿಸುವ ತತ್ತ್ವವಾಗಿದೆ. ದೇಹದಲ್ಲಿರುವ ಅಶುದ್ಧ ರಕ್ತವನ್ನು ಶುದ್ಧಗೊಳಿಸಲು ಆಮ್ಲಜನಕ (ಪ್ರಾಣವಾಯು) ಹೇಗೆ ಸಹಾಯ ಮಾಡುತ್ತದೆಯೋ, ಅದೇ ರೀತಿ ವಾಯುತತ್ತ್ವವು ದೋಷಮುಕ್ತವಾಗಿದ್ದರೆ ಮನೆಯಲ್ಲಿನ ನಕಾರಾತ್ಮಕತೆ ಮುಗಿಸುವ ಕಾರ್ಯವನ್ನು ನಿರ್ವಹಿಸುತ್ತದೆ. ಈ ಜಾಗದಲ್ಲಿ ದೋಷವಿದ್ದರೆ ಅಸ್ಥಿರತೆ, ವಾದ-ವಿವಾದ ಮತ್ತು ನಿರಂತರದ ಕೊರತೆ ಇವು ಇದ್ದು ಅವು ಆ ಪರಿಣಾಮವನ್ನು ಮಾಡುತ್ತವೆ. ವಾಯುತತ್ತ್ವವು ಮನಸ್ಸಿನ ಮೇಲೆಯೂ ದೊಡ್ಡ ಪರಿಣಾಮ ಬೀರುತ್ತದೆ. ಯಾವ ವಿಷಯಗಳು ಮನೆಯಿಂದ ಹೊರಗೆ ಹೋಗಬೇಕೋ, ಅಂತಹ ವಿಷಯಗಳು ವಾಯುವ್ಯ ದಿಕ್ಕಿಗೆ ಇರಬೇಕು.

ಉ. ಜಲತತ್ತ್ವ

ಉ ೧. ಜಲತತ್ತ್ವದಿಂದ ಮೆದುಳಿನ ವಿಕಾಸವಾಗುತ್ತದೆ. ಪೃಥ್ವಿಯಲ್ಲಿ ಮತ್ತು ಮನುಷ್ಯನ ದೇಹದಲ್ಲಿ ಈ ತತ್ತ್ವವು ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿದೆ. ಅದು ಮನುಷ್ಯನ ವಿಕಾಸಕ್ಕೆ ಸಹಾಯ ಮಾಡುತ್ತದೆ. ನೀರಿಲ್ಲದೇ ಮನುಷ್ಯನು ಬದುಕಲು ಸಾಧ್ಯವಿಲ್ಲ. ಈ ತತ್ತ್ವವು ಈಶಾನ್ಯ ದಿಕ್ಕಿನಲ್ಲಿ ಕಾರ್ಯ ಮಾಡುತ್ತದೆ. ಈ ತತ್ತ್ವದಿಂದ ಮೆದುಳಿನ ಉತ್ತಮ ರೀತಿಯಲ್ಲಿ ಅಭಿವೃದ್ಧಿಯಾಗುತ್ತದೆ.

ಉ ೨. ಭೂಮಿಯ ಅಡಿಯಲ್ಲಿ ನೀರಿನ ಸಂಗ್ರಹವು ಈಶಾನ್ಯ ದಿಕ್ಕಿನಲ್ಲಿರಬೇಕು. ಈ ದಿಶೆಯಲ್ಲಿ ವಾಸ್ತುದೋಷಗಳು ಉಂಟಾದರೆ ದೈಹಿಕ ಕಾಯಿಲೆ, ಮೆದುಳಿನ ಕಾಯಿಲೆ, ಸಾಲದ ಹೊರೆ, ಸಂಬಂಧಿಕರೊಂದಿಗೆ ಸಂಬಂಧ ಹಾಳಾಗುವುದು ಇತ್ಯಾದಿ ಪರಿಣಾಮಗಳು ಬೀರುತ್ತವೆ.

ನಾಲ್ಕು ಪುರುಷಾರ್ಥಗಳು

ಧರ್ಮಶಾಸ್ತ್ರದಲ್ಲಿ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂಬ ನಾಲ್ಕು ಪುರುಷಾರ್ಥಗಳನ್ನು ಹೇಳಲಾಗಿವೆ. ವಾಸ್ತುಶಾಸ್ತ್ರಕ್ಕನುಸಾರ ವಾಸ್ತುವಿನಲ್ಲಿ ನಾಲ್ಕು ಮುಖ್ಯ ದಿಕ್ಕುಗಳಿಗನುಸಾರ ಈ ನಾಲ್ಕು ಪುರುಷಾರ್ಥಗಳ ಸ್ಥಾನವನ್ನು ನಿರ್ಧರಿಸಲಾಗಿದೆ. ಅಂದರೆ ಪುರುಷಾರ್ಥಗಳಿಗೆ ಸಂಬಂಧಿಸಿದ ದಿಕ್ಕುಗಳು ದೋಷಮುಕ್ತವಾಗಿದ್ದರೆ, ವಾಸ್ತುವಿನ ಯಜಮಾನನಿಗೆ ಪುರುಷಾರ್ಥ ಸಾಧಿಸಲು ಯಾವುದೇ ಅಡೆ ತಡೆಗಳು ಉಂಟಾಗುವುದಿಲ್ಲ, ಅಂದರೆ ಪುರುಷಾರ್ಥವನ್ನು ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ.

ಅ. ಧರ್ಮ

ವಾಸ್ತುವಿನಲ್ಲಿ ಪೂರ್ವ ದಿಕ್ಕು ‘ಧರ್ಮ’ ಈ ಪುರುಷಾರ್ಥದ್ದಾಗಿರುತ್ತದೆ. ‘ಸ್ವ’ಧರ್ಮದ ಪಾಲನೆ, ಕರ್ತವ್ಯಗಳ ನಿರ್ವಹಣೆ ಮತ್ತು ಶಾಸ್ತ್ರವು ಹಾಕಿಕೊಟ್ಟ ವಿಧಿ-ನಿಯಮಗಳ ಪಾಲನೆ ಇತ್ಯಾದಿ ವಿಷಯಗಳು ಪುರುಷಾರ್ಥದಲ್ಲಿ ಬರುತ್ತವೆ. ಈ ಸಂಸಾರ ಸಾಗರವನ್ನು ದಾಟಲು ಧರ್ಮವು ದೋಣಿಯಾಗಿದೆ. ಅದನ್ನು ಪಾಲಿಸುತ್ತಲೇ ನಾವು ಮುಕ್ತರಾಗುತ್ತೇವೆ. ಅರ್ಥ ಮತ್ತು ಕಾಮ ಇವೆರಡು ಪುರುಷಾರ್ಥಗಳು ಧರ್ಮವನ್ನು ಅವಲಂಬಿಸಿವೆ. ಈ ಪುರುಷಾರ್ಥವು ಪೂರ್ವ ದಿಕ್ಕಿಗಿರುವುದರಿಂದ ಆ ದಿಕ್ಕಿನ ಶುಭ-ಅಶುಭಗಳ ಮೇಲೆ ಪುರುಷಾರ್ಥದ ಫಲಗಳು ಅವಲಂಬಿಸಿರುತ್ತವೆ. ವಾಸ್ತುವಿನ ಈ ದಿಕ್ಕಿನಲ್ಲಿ ಶೌಚಾಲಯ, ಮೆಟ್ಟಿಲು ಅಥವಾ ಅಶುಭ ವಿಷಯಗಳಿದ್ದರೆ ‘ಧರ್ಮ’ ಈ ಪುರುಷಾರ್ಥವನ್ನು ಸರಿಯಾಗಿ ಸಾಧಿಸಲು ಸಾಧ್ಯವಾಗುವುದಿಲ್ಲ.

ಆ. ಅರ್ಥ

ಧರ್ಮದಿಂದ ಹಣವನ್ನು ಗಳಿಸಿ ಅದರ ಯೋಗ್ಯ ವಿನಿಯೋಗದಿಂದ ‘ಅರ್ಥ’ ಎಂಬ ಪುರುಷಾರ್ಥವನ್ನು ಸಾಧಿಸಲಾಗುತ್ತದೆ. ಉತ್ತರ ದಿಕ್ಕು ‘ಅರ್ಥ’ ಪುರುಷಾರ್ಥಕ್ಕೆ ಸಂಬಂಧಿಸಿದೆ. ಈ ದಿಕ್ಕು ಶುಭವಾಗಿದ್ದರೆ ಈ ಪುರುಷಾರ್ಥವು ಉತ್ತಮ ರೀತಿಯಲ್ಲಿ ಸಾಧಿಸಲ್ಪಡುತ್ತದೆ. ಉತ್ತರ ದಿಕ್ಕು ಮುಚ್ಚಲ್ಪಟ್ಟರೆ ಅಥವಾ ಆ ದಿಕ್ಕಿನಲ್ಲಿ ಮೆಟ್ಟಲುಗಳು, ಶೌಚಾಲಯ ಇತ್ಯಾದಿಗಳಿದ್ದರೆ, ‘ಅರ್ಥ’ ಪುರುಷಾರ್ಥವನ್ನು ಸಾಧಿಸಲು ಅಡೆತಡೆಗಳು ನಿರ್ಮಾಣವಾಗುತ್ತವೆ. ಇದರಿಂದ ಆರ್ಥಿಕ ಅಡಚಣೆಗಳು ಬರುತ್ತವೆ.

ಇ. ಕಾಮ

ಪಶ್ಚಿಮ ದಿಕ್ಕು ‘ಕಾಮ’ ಪುರುಷಾರ್ಥಕ್ಕೆ ಸಂಬಂಧಿಸಿದೆ. ಧರ್ಮಾಚರಣೆಯಿಂದ ಹಣವನ್ನು ಸಂಪಾದಿಸಿ ತಮ್ಮ ಇಚ್ಛೆಗಳನ್ನು ಪೂರ್ತಿಗೊಳಿಸುವುದೇ ‘ಕಾಮ(ಇಚ್ಛೆ) ಪುರುಷಾರ್ಥ’ ಅಂದರೆ ‘ಧರ್ಮಸಮ್ಮತ ಬಯಕೆಗಳು’. ಇಲ್ಲಿ ಅರ್ಥವು ಮುಖ್ಯವಾಗಿದ್ದು ಈ ದಿಕ್ಕು ಹಾಳಾದರೆ ನೈತಿಕತೆಯ ಮೇಲೆ ಪರಿಣಾಮ ಬೀರುತ್ತದೆ. ಈ ದಿಕ್ಕಿಗೆ ತಗ್ಗು ಅಥವಾ ಇಳಿಜಾರಿದ್ದರೆ ಅಥವಾ ಪಶ್ಚಿಮ ದಿಕ್ಕು ತೆರೆದಿದ್ದರೆ ನೈತಿಕ ದೃಷ್ಟಿಯಿಂದ ಪುರುಷಾರ್ಥವನ್ನು ಸಾಧಿಸಲು ಅಡಚಣೆಗಳು ನಿರ್ಮಾಣವಾಗುತ್ತವೆ.

ಈ. ಮೋಕ್ಷ

ಮೋಕ್ಷವು ಅಂತಿಮ ಪುರುಷಾರ್ಥವಾಗಿದೆ. ಈ ಸಂಸಾರ ಬಂಧನದಿಂದ ಮುಕ್ತರಾಗಿ ಭಗವಂತನೊಂದಿಗೆ ಏಕರೂಪವಾಗುವುದೆಂದರೆನೇ ಮೋಕ್ಷ. ದಕ್ಷಿಣ ದಿಕ್ಕು ಮೋಕ್ಷ ಪುರುಷಾರ್ಥಕ್ಕೆ ಸಂಬಂಧಿಸಿದೆ. ಈ ಪುರುಷಾರ್ಥವು ಒಂದೇ ಜನ್ಮದಲ್ಲಿ ಸಾಧ್ಯವಾಗುತ್ತದೆ ಎಂದೇನಿಲ್ಲ; ಆದರೆ ಪ್ರತಿಯೊಂದು ಜನ್ಮದಲ್ಲಿ ಸಾಧನೆ ಮಾಡಿ ಮುಂದಿನ ಹಂತಕ್ಕೆ ಹೋಗುವುದು, ಆ ದೃಷ್ಟಿಯಲ್ಲಿ ಸಾಧನೆಯ ಪ್ರಯತ್ನಗಳನ್ನು ನಿರಂತರ ಮಾಡಬೇಕಾಗುತ್ತದೆ. ದಕ್ಷಿಣ ದಿಕ್ಕಿಗೆ ಇಳಿಜಾರು ಇದ್ದರೆ, ಉತ್ತರ ದಿಕ್ಕು ಮುಚ್ಚಿದ್ದರೆ ಮತ್ತು ದಕ್ಷಿಣ ದಿಕ್ಕು ತೆರೆದಿರುವುದು ಇಂತಹ ದೋಷಗಳಿದ್ದರೆ, ಸಾಧನೆಯ ಪ್ರಯತ್ನಗಳಲ್ಲಿ ಅಡತಡೆಗಳು ಉಂಟಾಗುತ್ತವೆ. ಆದ್ದರಿಂದ ಈ ದಿಕ್ಕು ದೋಷಮುಕ್ತವಾಗಿರಬೇಕು.

ಮೇಲಿನ ೪ ಪುರುಷಾರ್ಥಗಳಲ್ಲಿ ಧರ್ಮ, ಅರ್ಥ ಮತ್ತು ಕಾಮ ಈ ೩ ಪುರುಷಾರ್ಥಗಳನ್ನು ಸಾಧಿಸಲು ನಮಗೆ ದೋಷಮುಕ್ತ ವಾಸ್ತುವಿನ ಆವಶ್ಯಕತೆ ಇರುತ್ತದೆ; ಆದರೆ ‘ಮೋಕ್ಷ’ ಈ ಪುರುಷಾರ್ಥವನ್ನು ಸಾಧಿಸಲು ಅದರ ಮಾರ್ಗವನ್ನು ತೋರಿಸಲು ಕೇವಲ ಗುರುಗಳ ಕೃಪೆಯೇ ಆವಶ್ಯಕವಾಗಿರುತ್ತದೆ.

(ಆಧಾರ ಗ್ರಂಥ : ತೈತ್ತಿರಿಯ ಉಪನಿಷತ್ತು, ಚರಕಸಂಹಿತೆ, ಮಯಮತಮ್, ವಿಶ್ವಕರ್ಮಪ್ರಕಾಶ)

– ಶ್ರೀ. ಶ್ರೇಯಸ ಪಿಸೋಳಕರ, ವಾಸ್ತುವಿಶಾರದ, ಜ್ಯೋತಿಷ್ಯ ಹೋರಾಭೂಷಣ, ಹೋರಾರತ್ನ.

Leave a Comment