ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ

೧. ಗಂಟಲು ನೋವಾಗುವುದು ಅಥವಾ ಕೆರೆಯುವುದು, ಹಾಗೆಯೇ ಯಾವುದೇ ವಿಧದ ಕೆಮ್ಮು

ದಿನದಲ್ಲಿ ೨ – ೩ ಬಾರಿ ಚಂದ್ರಾಮೃತ ರಸ ಔಷಧದ ೧ – ೨ ಗುಳಿಗೆಗಳನ್ನು ಜಗಿದು ತಿನ್ನಬೇಕು. – ವೈದ್ಯ ಮೇಘರಾಜ ಪರಾಡಕರ (೨೫.೭.೨೦೨೨)

೧ ಅ. ಅನುಭವ

ಹೆಚ್ಚಿನ ಬಾರಿ ಯಾವುದೋ ಕಾರಣದಿಂದ ನನ್ನ ಗಂಟಲು ನೋವಾಗಿ ಸ್ವಲ್ಪ ಮಟ್ಟಿಗೆ ಜ್ವರಬಂದಂತೆ ಅನಿಸತೊಡಗಿದಾಗ ನಾನು ಕೂಡಲೇ ಚಂದ್ರಾಮೃತ ರಸದ ೧ ಗುಳಿಗೆಯನ್ನು ಜಗಿಯುತ್ತೇನೆ. ಬಹುತೇಕ ಬಾರಿ ಕೇವಲ ಒಂದು ಗುಳಿಗೆಯಿಂದಲೂ ನನ್ನ ಗಂಟಲು ನೋವು ಕಡಿಮೆಯಾಗಿ ಜ್ವರದ ಲಕ್ಷಣವೂ ದೂರವಾಗುತ್ತದೆ, ಹಾಗೆಯೇ ಮುಂದೆ ಬರಬಹುದಾದ ಕೆಮ್ಮು ಸಹ ತಪ್ಪುತ್ತದೆ.
– (ಪೂ.) ಸಂದೀಪ ಆಳಶಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೫.೭.೨೦೨೨)

೨. ಒಣ ಕೆಮ್ಮು (ವಾತಯುಕ್ತ ಕೆಮ್ಮು)

ಕೆಲವೊಮ್ಮೆ ಕೇವಲ ಕೆಮ್ಮು ಬರುತ್ತಿರುತ್ತದೆ; ಆದರೆ ಕಫ ಹೊರ ಬರುವುದಿಲ್ಲ ಅಥವಾ ಹೊರಬಂದರೂ ಸ್ವಲ್ಪವೇ ಬರುತ್ತದೆ. ಈ ವಿಧದ ಕೆಮ್ಮಿನಲ್ಲಿ ‘ಶ್ವಾಸನಾಳದ ಒಳಸಿಪ್ಪೆ ಸುಲಿದಿದೆಯೋ ಎಂದೆನಿಸತೊಡಗುತ್ತದೆ. ಕೆಮ್ಮಿ ಕೆಮ್ಮಿ ಪಕ್ಕೆಲುಬುಗಳು ಮತ್ತು ಹೊಟ್ಟೆ ನೋಯತೊಡಗುತ್ತದೆ. ಕೆಲವೊಮ್ಮೆ ಕೆಮ್ಮಿಗಾಗಿ ಔಷಧಿಗಳನ್ನು ತೆಗೆದುಕೊಂಡು ಕಫವು ಒಣಗಿಹೋಗುವುದರಿಂದ ಇಂತಹ ಕೆಮ್ಮು ಬರುತ್ತದೆ. ಕೆಲವೊಮ್ಮೆ ನಿದ್ದೆ ಮಾಡುವಾಗ ತಂಪು ಗಾಳಿ ಮೂಗಿನಲ್ಲಿ, ಬಾಯಿಯಲ್ಲಿ ಹೋಗುವುದರಿಂದಲೂ ಈ ರೀತಿ ಕೆಮ್ಮು ಬರುತ್ತದೆ. ಇದು ವಾತದಿಂದ ಬರುವ ಕೆಮ್ಮಿನ ಲಕ್ಷಣವಾಗಿದೆ. ಆಯುರ್ವೇದಲ್ಲಿ ಇದಕ್ಕೆ ‘ವಾತಜ ಕಾಸ’ ಎಂದು ಹೇಳುತ್ತಾರೆ. ‘ಕಾಸ್’ ಎಂದರೆ ‘ಕೆಮ್ಮು’. ಈ ಸಮಯದಲ್ಲಿ ಮುಂದಿನಂತೆ ಚಿಕಿತ್ಸೆ ಮಾಡಬೇಕು.

ಅರ್ಧ ಬಟ್ಟಲು ಬಿಸಿ ನೀರನ್ನು ತೆಗೆದುಕೊಳ್ಳಬೇಕು. ಅದರಲ್ಲಿ ೨ ಚಮಚ (೧೦ ಮಿ.ಲೀ.) ಶುದ್ಧ ತುಪ್ಪ ಮತ್ತು ಚಿಟಿಕೆಯಷ್ಟು ಉಪ್ಪನ್ನು ಹಾಕಿ ಕೈಯಾಡಿಸುತ್ತಾ ಕುಡಿಯಬೇಕು. (ತುಪ್ಪದ ಬದಲು ಕರಿದ ಎಣ್ಣೆಯನ್ನೂ ಬಳಸಬಹುದು. ‘ಕರಿದ ಎಣ್ಣೆ’ಯೆಂದರೆ ಯಾವುದರಲ್ಲಿ ವಡೆ, ಹಪ್ಪಳಗಳು, ಭಜಿಗಳಂತಹ ಖಾದ್ಯಪದಾರ್ಥಗಳನ್ನು ಕರಿಯಲಾಗಿದೆಯೋ, ಅಂತಹ ಎಣ್ಣೆ.) ಕುಡಿದ ನಂತರ ಪಾತ್ರೆಗೆ ಒಳಗಿನಿಂದ ಅಂಟಿಕೊಂಡ ತುಪ್ಪವನ್ನು ಪಾತ್ರೆಯಲ್ಲಿ ಸ್ವಲ್ಪ ಬಿಸಿ ನೀರನ್ನು ಹಾಕಿ ತಿರುಗಿಸಿ ಕುಡಿಯಬೇಕು. ೧ – ೨ ಬಾರಿ ಹೀಗೆ ಮಾಡಿದರೆ ಕೆಮ್ಮು ನಿಲ್ಲುತ್ತದೆ, ಎಂಬ ಅನುಭವವಿದೆ. ಕೆಮ್ಮಿನೊಂದಿಗೆ ಜ್ವರ ಅಥವಾ ಜ್ವರ ಲಕ್ಷಣವಿದ್ದರೆ ತುಪ್ಪದೊಂದಿಗೆ ೧ ಚಮಚದಷ್ಟು ತುಳಸಿ ರಸವನ್ನೂ ತೆಗೆದುಕೊಳ್ಳಬೇಕು. – ವೈದ್ಯ ಮೇಘರಾಜ ಪರಾಡಕರ (೨೫.೭.೨೦೨೨)

೨ ಅ. ಅನುಭವ

ನನ್ನ ಮಗಳು ಚಿ. ಮುಕ್ತಾ ನಾಲ್ಕುವರೆ ವರ್ಷದವಳಿದ್ದಾಳೆ. ಜುಲೈ ೨೦೨೨ ರ ಮೂರನೇ ವಾರದಲ್ಲಿ ಅವಳಿಗೆ ಶೀತವಾಗಿ ಒಣ ಕೆಮ್ಮು ಆರಂಭವಾಯಿತು. ಕೆಮ್ಮಿ ಕೆಮ್ಮಿ ಅವಳು ಹತಾಶಳಾಗಿದ್ದಳು. ಅದರಲ್ಲಿ ಸ್ವಲ್ಪ ಜ್ವರವೂ ಬಂದಿತು. ಈ ಸಮಯದಲ್ಲಿ ಒಂದು ಚಮಚ ತುಳಸಿಯ ರಸದಲ್ಲಿ ೧ ಚಮಚ (೫ ಮಿ.ಲೀ.) ತುಪ್ಪವನ್ನು ಮತ್ತು ಸ್ವಲ್ಪ ಉಪ್ಪು ಹಾಕಿ ಕೈಯಾಡಿಸಿ ಅವಳಿಗೆ ಕುಡಿಸಿದೆ. ಆಗ ಅವಳ ಕೆಮ್ಮು ಬಹಳ ಕಡಿಮೆಯಾಯಿತು. ಅನಂತರ ಸುಮಾರು ೪ ಗಂಟೆಗಳ ನಂತರ ಸ್ವಲ್ಪ ಕೆಮ್ಮು ಬಂದಾಗ ಅವಳಿಗೆ ಇದೇ ರೀತಿ ತುಪ್ಪವನ್ನು ಕುಡಿಸಿದೆ. ನಂತರ ಅವಳಿಗೆ ಕೆಮ್ಮು ಬರಲಿಲ್ಲ ಮತ್ತು ಜ್ವರವೂ ಇಳಿಯಿತು. – ಸೌ. ರಾಘವಿ ಮಯುರೇಶ ಕೋನೆಕರ, ಢವಳಿ, ಫೋಂಡಾ. ಗೋವಾ. (೨೫.೭.೨೦೨೨)

೩. ಜ್ವರ ಬಂದಂತೆ ಅನಿಸುವುದು ಅಥವಾ ಜ್ವರ ಬರುವುದು

೨ ದಿನ ತುಳಸಿಯ ೨-೨ ಎಲೆಗಳನ್ನು ಬೆಳಗ್ಗೆ-ಸಾಯಂಕಾಲ ಜಗಿದು ತಿನ್ನಬೇಕು. ಒಂದು ಊಟದ ಸಮಯದಲ್ಲಿ ಏನನ್ನೂ ತಿನ್ನದೇ ಉಪವಾಸವಿದ್ದು ಅನಂತರ ಹಸಿವಾದಾಗ ಸ್ವಲ್ಪ ಬಿಸಿ ತೊವ್ವೆಯಲ್ಲಿ ೧ ಚಮಚ ತುಪ್ಪ ಹಾಕಿ ಕುಡಿಯಬೇಕು. ೨ ದಿನ ಬೇರೆ ಏನೂ ತಿನ್ನದೇ ಕೇವಲ ಬಿಸಿ ಬಿಸಿ ತೊವ್ವೆ ಅನ್ನವನ್ನು ಸೇವಿಸಬೇಕು. ತೊವ್ವೆ ಅನ್ನದ ಮೇಲೆ ಸ್ವಲ್ಪ ತುಪ್ಪ ಹಾಕಬೇಕು. ರುಚಿಗಾಗಿ ಉಪ್ಪಿನಕಾಯಿ ತೆಗೆದುಕೊಂಡರೂ ನಡೆಯುತ್ತದೆ. ಪೂರ್ತಿ ಗುಣಮುಖವೆನಿಸುವವರೆಗೆ ಇದೇ ಆಹಾರವನ್ನು ತೆಗೆದುಕೊಳ್ಳಬೇಕು. ತಿಂಡಿಯನ್ನು ತಿನ್ನಬಾರದು. ಅದರ ಬದಲು ೧ ಚಮಚದಷ್ಟು ಒಣದ್ರಾಕ್ಷಿಯನ್ನು ಜಗಿದು ಜಗಿದು ತಿನ್ನಬೇಕು ಅಥವಾ ಒಂದು ಬಟ್ಟಲು ಬಿಸಿ ನೀರಿನಲ್ಲಿ ಸ್ವಲ್ಪ ಬೆಲ್ಲವನ್ನು ಹಾಕಿ ಕೈಯಾಡಿಸಿ ಕುಡಿಯಬೇಕು. ಬಾಯಾರಿಕೆಯಾದಾಗಲೆಲ್ಲಾ ಬಿಸಿ ನೀರನ್ನೇ ಕುಡಿಯಬೇಕು. ವಿಶ್ರಾಂತಿಯನ್ನು ಪಡೆದುಕೊಳ್ಳಬೇಕು. ಹೀಗೆ ಮಾಡಿದರೆ ಜ್ವರವನ್ನು ನಿಯಂತ್ರಿಸಲು ಸಹಾಯವಾಗುತ್ತದೆ. ಜ್ವರ ಬಂದರೂ ಅದರಿಂದ ಬಹಳ ತೊಂದರೆಯಾಗುವುದಿಲ್ಲ ಮತ್ತು ಅದು ಬೇಗನೆ ಗುಣಮುಖವಾಗತೊಡಗುತ್ತದೆ. – ವೈದ್ಯ ಮೇಘರಾಜ ಪರಾಡಕರ (೨೫.೭.೨೦೨೨)

ಇಲ್ಲಿ ‘ಪ್ರಾಥಮಿಕ ಚಿಕಿತ್ಸೆ’ಯನ್ನು ನೀಡಲಾಗಿದೆ. ಔಷಧಿಗಳನ್ನು ತೆಗೆದುಕೊಂಡು ಗುಣಮುಖವೆನಿಸದಿದ್ದರೆ ರೋಗವನ್ನು ಸಹಿಸದೇ ಸ್ಥಳೀಯ ವೈದ್ಯರನ್ನು ಭೇಟಿ ಮಾಡಬೇಕು.

1 thought on “ಆಯುರ್ವೇದದ ಪ್ರಾಥಮಿಕ ಚಿಕಿತ್ಸೆ”

Leave a Comment