ಮೃತದೇಹದ ಅಗ್ನಿಸಂಸ್ಕಾರವನ್ನು ಮಾಡಲು ಸಾಧ್ಯವಾಗದಿದ್ದಾಗ ಧರ್ಮಶಾಸ್ತ್ರಕ್ಕನುಸಾರ ಮಾಡಬೇಕಾದ ‘ಪಾಲಾಶವಿಧಿ’ !

ದೇಶದಲ್ಲಿ ಎಲ್ಲೆಡೆ ಕೊರೋನಾ ವಿಷಾಣುವಿನ ಸೋಂಕು ಹೆಚ್ಚಾಗುತ್ತಾ ಹೋಗುತ್ತಿದೆ ಮತ್ತು ಅದರಿಂದ ಅನೇಕ ಜನರು ಸಾವನ್ನಪ್ಪುತ್ತಿದ್ದಾರೆ. ಈ ಸೋಂಕಿನಿಂದಾಗಿ ಯಾರಾದರೂ ಮೃತಪಟ್ಟರೆ ಅವನ ಕುಟುಂಬದವರಿಗೆ ಮೃತದೇಹವನ್ನು ಕೊಡುವುದಿಲ್ಲ. ಸರಕಾರಿ ಸಿಬ್ಬಂದಿಗಳು ಅದನ್ನು ದಹಿಸುತ್ತಾರೆ. ಆದುದರಿಂದ ಮೃತ ದೇಹದ ಅಸ್ಥಿಗಳೂ ಸಿಗುವುದಿಲ್ಲ. ಇಂತಹ ಪ್ರಸಂಗದಲ್ಲಿ ‘ಅಂತ್ಯವಿಧಿಯನ್ನು ಹೇಗೆ ಮಾಡಬೇಕು ?’, ಎಂಬ ಪ್ರಶ್ನೆಯು ಸಮಾಜದಲ್ಲಿ ನಿರ್ಮಾಣವಾಗಿದೆ.

೧. ಮೃತ ವ್ಯಕ್ತಿಯ ದೇಹ ಸಿಗದಿದ್ದರೆ ಇಂತಹ ವ್ಯಕ್ತಿಯ ಅಂತ್ಯಸಂಸ್ಕಾರಕ್ಕಾಗಿ ಧರ್ಮಶಾಸ್ತ್ರವು ‘ಪಾಲಾಶವಿಧಿ’ಯನ್ನು ಮಾಡಲು ಹೇಳಿದೆ

ಒಬ್ಬ ವ್ಯಕ್ತಿಯು ಕಳೆದುಹೋಗಿದ್ದರೆ ಮತ್ತು ಕಾಲಾಂತರದಲ್ಲಿ ‘ಆ ವ್ಯಕ್ತಿಯ ನಿಧನವಾಗಿರುವುದೆಂದು’ ತಿಳಿದರೆ, ಇಂತಹ ಪ್ರಸಂಗಗಳಲ್ಲಿ ವ್ಯಕ್ತಿಯ ಮೃತದೇಹವು ಅಂತಿಮಸಂಸ್ಕಾರಕ್ಕಾಗಿ ಸಿಗುವುದಿಲ್ಲ. ಈ ಸಮಯದಲ್ಲಿ ಧರ್ಮಶಾಸ್ತ್ರವು ‘ಪಾಲಾಶವಿಧಿ’ಯನ್ನು ಮಾಡಲು ಹೇಳಿದೆ. ಕೊರೋನಾ ವಿಷಾಣುವಿನಿಂದಾಗಿ ಮೃತಪಟ್ಟವರ ದೇಹ ಅಥವಾ ಅಸ್ಥಿಗಳು ಅವರ ಸಂಬಂಧಿಕರಿಗೆ ಕೊಡುವುದಿಲ್ಲ. ಈ ಪ್ರಸಂಗದಲ್ಲಿಯೂ ಧರ್ಮಶಾಸ್ತ್ರಕ್ಕನುಸಾರ ‘ಪಾಲಾಶವಿಧಿ’ಯನ್ನು ಮಾಡುವುದು ಯೋಗ್ಯವಾಗಿದೆ.

೨. ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ತಿಳಿದಾಗ ಏನು ಮಾಡಬೇಕು ?

ಅ. ಕುಟುಂಬದಲ್ಲಿನ ವ್ಯಕ್ತಿ ಮರಣ ಹೊಂದಿದಾಗ ಏನು ಮಾಡುತ್ತೇವೆಯೋ, ಹಾಗೆ ಮೊದಲ ೧೦ ದಿನಗಳ ಕಾಲ ಸೂತಕ (ಮರಣಶೌಚ) ವನ್ನು ಪಾಲಿಸಬೇಕು, ಹಾಗೆಯೇ ೧೦ ದಿನಗಳವರೆಗೆ ದಕ್ಷಿಣ ದಿಕ್ಕಿಗೆ ಮುಖ ಮಾಡಿ ಎಣ್ಣೆಯ ದೀಪವನ್ನು ಹಚ್ಚಿಡಬೇಕು.

ಆ. ಮೊದಲ ೧೦ ದಿನಗಳಲ್ಲಿ ನಮ್ಮ ಕುಲದ ಪರಂಪರೆಗನುಸಾರ ಯಾವ ಕೃತಿಗಳನ್ನು ಸಹಜವಾಗಿ ಮಾಡಲು ಸಾಧ್ಯವಿದೆಯೋ, ಅವುಗಳನ್ನು ಮಾಡಬೇಕು.

ಇ. ಈಗ ದೇಶದಲ್ಲಿ ಸಾರಿಗೆಸಂಚಾರ ನಿಷೇಧಿಸಲಾಗಿದೆ ಮತ್ತು ಕೆಲವು ಸ್ಥಳಗಳಲ್ಲಿ ಕೊರೋನಾ ವಿಷಾಣುವಿನ ಹರಡುವಿಕೆಯು ದೊಡ್ಡ ಪ್ರಮಾಣದಲ್ಲಿರುವುದರಿಂದ ಆ ಭಾಗವನ್ನು ‘ನಿಷೇಧಿತ ಕ್ಷೇತ್ರ’ ಎಂದೂ ಘೋಷಿಸಲಾಗಿದೆ. ಆದುದರಿಂದ ಕೊರೋನಾದ ಹರಡುವಿಕೆ ಕಡಿಮೆಯಾದ ನಂತರ ಅಥವಾ ಪರಿಸ್ಥಿತಿಯು ಮೊದಲಿನಂತಾದ ನಂತರ ಆದಷ್ಟು ಬೇಗನೆ ‘ಪಾಲಾಶವಿಧಿ’ಯನ್ನು ಮಾಡಬೇಕು. ಇದಕ್ಕಾಗಿ ತಮ್ಮ ಕುಟುಂಬದ ಅಥವಾ ಸ್ಥಳೀಯ ಪುರೋಹಿತರನ್ನು ಸಂಪರ್ಕಿಸಬೇಕು. ಯಾವುದಾದರೊಂದು ಧಾರ್ಮಿಕ ವಿಧಿಯನ್ನು ಮಾಡುವಾಗ ನಾವು ದಿನಶುದ್ಧಿ, ಅಂದರೆ ‘ಆ ಕರ್ಮಕ್ಕಾಗಿ ಯಾವ ದಿನ ಯೋಗ್ಯವಾಗಿದೆ ?’ ಎಂದು ನೋಡುತ್ತೇವೆ, ಅದೇ ರೀತಿ ಈ ವಿಧಿಗಾಗಿ ಪುರೋಹಿತರಿಂದ ಯೋಗ್ಯ ದಿನವನ್ನು ನಿಶ್ಚಯಿಸಿಕೊಳ್ಳಬೇಕು. ನಂತರ ಅವರ ಮಾರ್ಗದರ್ಶನಕ್ಕನುಸಾರ ಈ ವಿಧಿಯನ್ನು ಮಾಡಬೇಕು.

೩. ‘ಪಾಲಾಶವಿಧಿ’ಯನ್ನು ಹೇಗೆ ಮತ್ತು ಎಲ್ಲಿ ಮಾಡಬೇಕು ?

ಅ. ವ್ಯಕ್ತಿ ಮೃತಪಟ್ಟ ನಂತರ ಅವನು ಪ್ರೇತಯೋನಿಗೆ ಹೋಗುತ್ತಾನೆ. ಅದಕ್ಕಾಗಿ ಮುತ್ತುಗದ ಎಲೆ, ದರ್ಭೆ, ಪುರೋಹಿತರ ಮಾರ್ಗದರ್ಶನಕ್ಕನುಸಾರ ನಿರ್ದಿಷ್ಟ ವಿಧದ ಹಣ್ಣುಗಳು ಮತ್ತು ಎಲೆಗಳನ್ನು ನಿರ್ಧರಿಸಿದ ಸಂಖ್ಯೆಯಲ್ಲಿ ತೆಗೆದುಕೊಂಡು ಆ ವ್ಯಕ್ತಿಯ ಪ್ರತಿಮೆಯನ್ನು ತಯಾರಿಸಬೇಕು.

ಆ. ಆ ಪ್ರತಿಮೆಗೆ ಜವೆಗೋದಿಯ ನಾದಿದ ಹಿಟ್ಟನ್ನು ಲೇಪಿಸಬೇಕು. ಅದರ ನಂತರ ಪ್ರತ್ಯಕ್ಷ ಮೃತದೇಹದ ಅಂತ್ಯಸಂಸ್ಕಾರವನ್ನು ಮಾಡುವಾಗ ಯಾವ ರೀತಿ ಮೃತದೇಹಕ್ಕೆ ಮಂತ್ರಾಗ್ನಿಯನ್ನು ನೀಡಲಾಗುತ್ತದೆಯೋ, ಅದೇ ರೀತಿ ಆ ಪ್ರತಿಮೆಗೆ ಮಂತ್ರಾಗ್ನಿಯನ್ನು ನೀಡಬೇಕು.

ಇ. ಅದರ ಮುಂದಿನ ದಿನಗಳ ವಿಧಿಗಳನ್ನೂ ಎಂದಿನಂತೆ ಅನುಕ್ರಮವಾಗಿ ಮಾಡಬೇಕು.

ಈ. ಆ ವ್ಯಕ್ತಿಯ ಮೃತ್ಯುವಿನ ಸಮಯದಲ್ಲಿ ‘ತ್ರಿಪಾದ ಶಾಂತ’ ಅಥವಾ ‘ಪಂಚಕ (ಅಶುಭ ನಕ್ಷತ್ರಗಳು)’ ಬಂದಿದ್ದರೆ, ಅದಕ್ಕೆ ಸಂಬಂಧಿಸಿದ ವಿಧಿಯನ್ನೂ ಎಂದಿನಂತೆ ಮಾಡಬೇಕು.

ಉ. ಯಾವುದಾದರೊಂದು ತೀರ್ಥಕ್ಷೇತ್ರದ ಸ್ಥಳದಲ್ಲಿ ಅಥವಾ ಯಾವ ಸ್ಥಳದಲ್ಲಿ ದಶಕ್ರಿಯಾವಿಧಿ ಮುಂತಾದ ಅಂತ್ಯವಿಧಿಗಳನ್ನು ಮಾಡಲಾಗುತ್ತದೆಯೋ, ಅಂತಹ ಸ್ಥಳದಲ್ಲಿ ಈ ವಿಧಿಯನ್ನು ಮಾಡಬೇಕು.

ಊ. ಈ ವಿಧಿಯನ್ನು ಮಾಡುವಾಗ ಮನೆಯಲ್ಲಿನ ಆವಶ್ಯಕ ಮತ್ತು ಬೆರಳೆಣಿಕೆಯಷ್ಟು ವ್ಯಕ್ತಿಗಳು ಉಪಸ್ಥಿತರಿರಬೇಕು. ಅಲ್ಲಿ ಜನಸಂದಣಿಯಾಗದಂತೆ, ಕಾಳಜಿ ವಹಿಸಬೇಕು, ಹಾಗೆಯೇ ಸಾಮಾಜಿಕ ಅಂತರವನ್ನು ಪಾಲಿಸಬೇಕು. ಕೊರೋನಾದ / ಸಾಂಕ್ರಾಮಿಕ ಸೋಂಕು ಹರಡದಂತೆ ಸರಕಾರವು ನೀಡಿದ ಎಲ್ಲ ಆದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಎ. ಎಲ್ಲ ಅಂತ್ಯವಿಧಿಗಳು ಪೂರ್ಣವಾದ ನಂತರ ಮನೆಯಲ್ಲಿ ‘ನಿಧನ ಶಾಂತಿ’ ಅಥವಾ ‘ಉದಕಶಾಂತಿ’ ವಿಧಿಯನ್ನು ಮಾಡಬೇಕು.

– ಶ್ರೀ. ಸಿದ್ಧೇಶ ಕರಂದೀಕರ, ಪುರೋಹಿತ ಪಾಠಶಾಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ.

Leave a Comment