ಆಕಾಶದಲ್ಲಿ ಸಿಡಿಲಿನ ಆರ್ಭಟವಿದ್ದರೆ, ಮುಂದಿನ ಎಚ್ಚರಿಕೆ ವಹಿಸಿ ಸುರಕ್ಷಿತರಾಗಿರಿ !

ಮಳೆಗಾಲದಲ್ಲಿ ಮಳೆಯ ಜೊತೆಗೆ ಗುಡುಗಿನ ಆರ್ಭಟವೂ ಇರುತ್ತದೆ. ಕೆಲವು ಸಲ ಇತರ ಋತುಗಳಲ್ಲಿಯೂ ಆಕಾಶದಲ್ಲಿ ಮಿಂಚು ಕಾಣಿಸಬಹುದು. ಮಿಂಚಿನ ಪ್ರಕಾಶ ಮತ್ತು ಅದರ ಶಬ್ದ ಕೇಳಿಸುವುದು, ಇವುಗಳಲ್ಲಿ ೩೦ ಸೆಕೆಂಡುಗಳಿಗಿಂತ ಕಡಿಮೆ ಅಂತರವಿದ್ದರೆ, ಆ ಮಿಂಚು ಅಪಾಯಕಾರಿಯಾಗಿದೆ ಎಂದು ತಿಳಿದುಕೊಳ್ಳಬೇಕು. ಗುಡುಗು ಸಿಡಿಲು ಭೂಮಿಯ ಮೇಲೆ ಅಪ್ಪಳಿಸಿ ದೊಡ್ಡ ಪ್ರಮಾಣದಲ್ಲಿ ಜೀವಹಾನಿ ಮತ್ತು ಆರ್ಥಿಕ ಹಾನಿಯಾಗಬಹುದು. ಇಂತಹ ಸಮಯದಲ್ಲಿ ಯಾವ ಮುಂಜಾಗರೂಕತೆಗಳನ್ನು ವಹಿಸಬೇಕು ? ಎನ್ನುವುದನ್ನು ಕೆಳಗೆ ನೀಡಲಾಗಿದೆ.

೧. ಮಹತ್ವದ ಸೂಚನೆಗಳು

ಲೈಟನಿಂಗ್ ಅರೆಸ್ಟರ್

ಅ. ಸಿಡಿಲು ಬಡಿದರೆ ಕಟ್ಟಡಕ್ಕೆ ಅಪಾಯವಾಗಬಾರದು ಮತ್ತು ಜೀವಹಾನಿಯಾಗಬಾರದು, ಎಂದು ಪ್ರತಿಯೊಂದು ಕಟ್ಟಡಕ್ಕೆ ‘ಸಿಡಿಲು ನಿರೋಧಕ’ (ಲೈಟನಿಂಗ್ ಅರೆಸ್ಟರ್) ವನ್ನು ಅಳವಡಿಸುವುದು ಅನಿವಾರ್ಯವಾಗಿದೆ. ನಿಮ್ಮ ಕಟ್ಟಡದ ಮೇಲೆ ಸಿಡಿಲು ನಿರೋಧಕವನ್ನು ಜೋಡಿಸಲಾಗಿದೆಯೇ ? ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು.

  1. ಆ. ತೇವಾಂಶವಿರುವ ಗೋಡೆಗಳು, ಕಬ್ಬಿಣದ ಪೀಠೋಪಕರಣ ಇತ್ಯಾದಿಗಳು ವಿದ್ಯುತ್ ವಾಹಕಗಳಾಗಿವೆ. ಮನೆಯ ಹೊರಗೆ ಸಿಡಿಲು ಬಿದ್ದರೆ ಮನೆಯ ತೇವಾಂಶದಿಂದ ಅಪಾಯ ಉದ್ಭವಿಸಬಹುದು. ಆದುದರಿಂದ ಮಳೆಗಾಲದ ಮೊದಲು ಮನೆಯ ಗೋಡೆಗಳು ತೇವವಾಗದಂತೆ ನೋಡಿಕೊಳ್ಳಬೇಕು ಮತ್ತು ‘ಭವಿಷ್ಯದಲ್ಲಿ ಪುನಃ ತೇವವಾಗದಂತೆ’ ಕಟ್ಟಡ ತಜ್ಞರ ಮಾರ್ಗದರ್ಶನವನ್ನು ಪಡೆದು ಮನೆಯ ದುರಸ್ತಿ ಮಾಡಿಕೊಳ್ಳಬೇಕು.

ಇ. ತಂತಿಗಳು ವಿದ್ಯುತ್ ವಾಹಕಗಳಾಗಿರುವುದರಿಂದ ಮನೆ, ಹೊಲ, ತೋಟ ಇತ್ಯಾದಿಗಳ ಸುತ್ತಲೂ ಸಾಧ್ಯವಾದಷ್ಟು ತಂತಿಯ ಬೇಲಿಯನ್ನು ಹಾಕ ಬಾರದು. ಈ ಹಿಂದೆಯೇ ಬೇಲಿಯನ್ನು ಹಾಕಿದ್ದರೆ, ಅದರಿಂದ ಅಪಾಯವಾಗಬಾರದೆಂದು ಅದಕ್ಕೆ ಒಳ್ಳೆಯ ರೀತಿಯಲ್ಲಿ ‘ಅರ್ಥಿಂಗ್’ ಮಾಡಿಸಿಕೊಳ್ಳಬೇಕು.

ಈ. ನಿಮ್ಮ ಕಟ್ಟಡದ ಅಥವಾ ಮನೆಯ ಹೊರಗಿನ ರಸ್ತೆಯ ಮೇಲಿನಿಂದ ವಿದ್ಯುತ್ ತಂತಿಗಳು (ವೈಯರ್‌ಗಳು) ಹಾದು ಹೋಗಿದ್ದರೆ ಮತ್ತು ಪಕ್ಕದಲ್ಲಿ ಗಿಡ-ಮರಗಳಿದ್ದರೆ ಮಳೆ ಅಥವಾ ಗಾಳಿಯಿಂದ ಗಿಡಗಳು ತಂತಿಯ ಮೇಲೆ ಬಿದ್ದು ಜೀವಹಾನಿಯಾಗುವ ಸಾಧ್ಯತೆ ಇರುತ್ತದೆ. ಆದುದರಿಂದ ಸ್ಥಳೀಯ ವಿದ್ಯುತ್ ಮಂಡಳಿಯವರನ್ನು ಸಂಪರ್ಕಿಸಿ ವಿದ್ಯುತ್ ತಂತಿಯ ಹತ್ತಿರವಿರುವ ಕೊಂಬೆಗಳನ್ನು ಕತ್ತರಿಸಲು ಹೇಳಬೇಕು.

ಉ. ಸಿಡಿಲು ಬೀಳುವಾಗ ಯಾವುದೇ ವಿದ್ಯುತ್ ತಂತಿಗಳ ಕೆಳಗೆ ನಿಂತುಕೊಳ್ಳಬಾರದು. ಹಾಗೆಯೇ ಅಲ್ಲಿ ಸಂಚಾರಿವಾಣಿಯಲ್ಲಿ (ಮೊಬೈಲ್‌ನಲ್ಲಿ) ಮಾತನಾಡಬಾರದು. ಅವುಗಳ ಕೆಳಗೆ ಪ್ರಾಣಿಗಳು ನಿಂತುಕೊಳ್ಳದಂತೆ ಜಾಗರೂಕತೆ ವಹಿಸಬೇಕು. ವಿದ್ಯುತ್ ತಂತಿಗಳಿಂದ ಕಿಡಿಗಳು ಹಾರುತ್ತಿದ್ದರೆ (ಸ್ಪಾರ್ಕಿಂಗ್) ತಕ್ಷಣವೇ ವಿದ್ಯುತ್ ಮಂಡಳಿಗೆ ತಿಳಿಸಬೇಕು.

ಊ. ವಿದ್ಯುತ್ ಕಂಬ, ವಿದ್ಯುತ್ ತಂತಿ, ಹಾಗೆಯೇ ಮರಗಳ ಕೆಳಗೆ ದ್ವಿಚಕ್ರ ವಾಹನ ಅಥವಾ ಚತುಷ್ಚಕ್ರ ವಾಹನಗಳನ್ನು ನಿಲ್ಲಿಸಿದರೆ ಬಿರುಗಾಳಿಯಿಂದ ಕಂಬ ಅಥವಾ ಮರಗಳು ಬುಡಮೇಲಾಗಿ ಅವುಗಳ ಮೇಲೆ ಬಿದ್ದರೆ ಆರ್ಥಿಕ ಹಾನಿಯಾಗಬಹುದು. ಆದುದರಿಂದ ಅಲ್ಲಿ ವಾಹನಗಳನ್ನು ನಿಲ್ಲಿಸುವುದು, ವಾಹನಗಳನ್ನು ಚಲಾಯಿಸುವುದು ಇತ್ಯಾದಿ ಮಾಡಬಾರದು.

ಋ. ಮಳೆಗಾಲದಲ್ಲಿ ಅನಿಶ್ಚಿತ ಅವಧಿಗಾಗಿ ವಿದ್ಯುತ್ ಪೂರೈಕೆ ಸ್ಥಗಿತಗೊಳ್ಳಬಹುದು. ಈ ಕಾರಣದಿಂದ ಮನೆಯಲ್ಲಿ ಹಣತೆ, ಮೇಣದಬತ್ತಿ, ಟಾರ್ಚ್, ಲಾಂದ್ರದೀಪ ಇತ್ಯಾದಿಗಳ ವ್ಯವಸ್ಥೆಯನ್ನು ಮಾಡಿಟ್ಟುಕೊಳ್ಳಬೇಕು.

ಎ. ಸರಕಾರದಿಂದ ಬರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅವುಗಳನ್ನು ನಿರ್ಲಕ್ಷಿಸಬಾರದು.

೨. ಸಿಡಿಲು ಬೀಳುತ್ತಿರುವಾಗ ಮನೆಯಲ್ಲಿದ್ದರೆ ಯಾವ ಕಾಳಜಿಗಳನ್ನು ತೆಗೆದುಕೊಳ್ಳಬೇಕು ?

ಅ. ಮನೆಯಿಂದ ಹೊರಗೆ ಹೋಗಬಾರದು, ಹಾಗೆಯೇ ಬಾಲ್ಕನಿಗೂ ಹೋಗಬಾರದು.

ಆ. ಮನೆಯಲ್ಲಿನ ವಿದ್ಯುತ್ ಪ್ರವಾಹದ ಮೇನ್ ಸ್ವಿಚ್ ಆಫ್ ಮಾಡಿ ವಿದ್ಯುತ್ ಪ್ರವಾಹವನ್ನು ಸ್ಥಗಿತಗೊಳಿಸಬೇಕು. ದೂರದರ್ಶನ ಉಪಕರಣ, ಮಿಕ್ಸರ್ ಇತ್ಯಾದಿ ವಿದ್ಯುತ್ ಉಪಕರಣಗಳ ಪಿನ್ ಬೋರ್ಡ್ ನಿಂದ ಕಳಚಿಡಬೇಕು.

ಇ. ಈ ಅವಧಿಯಲ್ಲಿ ಲಿಫ್ಟ್, ಹವಾ ನಿಯಂತ್ರಕ (ಎ.ಸಿ), ಹೇರ್ ಡ್ರೈಯರ್ ಇತ್ಯಾದಿಗಳನ್ನು ಉಪಯೋಗಿಸಬಾರದು. ಶೀತಕವನ್ನು (ಫ್ರಿಜ್) ಸ್ಪರ್ಶಿಸಬಾರದು. ಸಂಚಾರವಾಣಿಯನ್ನು (ಮೊಬೈಲ್) ಉಪಯೋಗಿಸಬಹುದೋ ಇಲ್ಲವೋ ? ಎನ್ನುವ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ಸುರಕ್ಷತೆಯ ದೃಷ್ಟಿಯಿಂದ ಸಂಚಾರಿವಾಣಿಯನ್ನು ಉಪಯೋಗಿಸದಿದ್ದರೆ ಒಳ್ಳೆಯದು.

ಈ. ಹೊರಗಿನಿಂದ ನೀರು ಸರಬರಾಜು ಮಾಡುವ ನಲ್ಲಿಯು ಕಬ್ಬಿಣದ್ದಾಗಿದ್ದರೆ, ಅದನ್ನು ಸ್ಪರ್ಶಿಸಬಾರದು.

ಉ. ತೇವವಾಗಿರುವ ಗೋಡೆಗಳನ್ನು ಸ್ಪರ್ಶಿಸಬಾರದು.

ಊ. ಕೆಲವು ಸಲ ಆಪತ್ಕಾಲೀನ ಸ್ಥಿತಿಯಲ್ಲಿ ಸುಳ್ಳು ಸಂದೇಶಗಳು (ಎಸ್.ಎಮ್.ಎಸ್ ಅಥವಾ ವಾಟ್ಸ್ ಆ್ಯಪ್ ಸಂದೇಶಗಳು) ಹಬ್ಬುತ್ತವೆ. ಇಂತಹ ಯಾವುದೇ ವದಂತಿಗಳ ಮೇಲೆ ವಿಶ್ವಾಸವನ್ನಿಡಬಾರದು. ಸರಕಾರವು ಅಧಿಕೃತವಾಗಿ ಪ್ರಸಾರ ಮಾಡುವ ಮಾಹಿತಿಯನ್ನು ನಂಬಬೇಕು.

೩. ಮನೆಯ ಹೊರಗಿರುವಾಗ ತೆಗೆದುಕೊಳ್ಳಬೇಕಾದ ಮುಂಜಾಗರೂತೆ

ಅ. ಖಾಲಿ ಪ್ರದೇಶಗಳಲ್ಲಿ (ಉದಾ. ಬಯಲು ಪ್ರದೇಶ, ಸಮುದ್ರ ದಂಡೆ, ಮೈದಾನ) ಹಾಗೆಯೇ ವಿದ್ಯುತ್ ಕಂಬ, ಮೊಬೈಲ್ ಟವರ್, ಕೆಸರಿನಿಂದ ತುಂಬಿರುವ ಸ್ಥಳ, ನೀರಿನ ಸಂಪು, ತಗಡಿನ ಶೆಡ್ ಇತ್ಯಾದಿ ಸ್ಥಳಗಳಲ್ಲಿ ನಿಲ್ಲಬಾರದು.

ಆ. ದ್ವಿಚಕ್ರ ವಾಹನ ಅಥವಾ ಟ್ರ್ಯಾಕ್ಟರ್ ಚಲಾಯಿಸುತ್ತಿದ್ದರೆ ಅಥವಾ ದೋಣಿಯಲ್ಲಿ ಹೋಗುತ್ತಿದ್ದರೆ ತಕ್ಷಣವೇ ಸುರಕ್ಷಿತ ಸ್ಥಳಕ್ಕೆ ಹೋಗಬೇಕು. ಚತುಷ್ಚಕ್ರ ವಾಹನದಿಂದ ಪ್ರವಾಸ ಮಾಡುತ್ತಿದ್ದರೆ ವಾಹನವನ್ನು ಒಂದು ಬದಿಯಲ್ಲಿ ನಿಲ್ಲಿಸಿ ವಾಹನದಲ್ಲಿಯೇ ಕುಳಿತಿರಬೇಕು.

ಇ. ಮರಗಳು ಮತ್ತು ವಿದ್ಯುತ್ ಕಂಬಗಳಿಗಿಂತ ದೂರ ಸುರಕ್ಷಿತ ಸ್ಥಳಗಳಲ್ಲಿ ದ್ವಿಚಕ್ರ ಅಥವಾ ಚತುಷ್ಚಕ್ರ ವಾಹನಗಳನ್ನು ನಿಲ್ಲಿಸಬೇಕು. ಚತುಷ್ಚಕ್ರ ವಾಹನಗಳ ಬಾಗಿಲು ಮತ್ತು ಕಿಟಕಿಗಳನ್ನು ಸರಿಯಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಬೇಕು.

ಈ. ಸಿಡಿಲು ಮರಗಳಿಂದ ಆಕರ್ಷಿಸಲ್ಪಡುವುದರಿಂದ ಮರಗಳ ಕೆಳಗೆ ನಿಲ್ಲಬಾರದು. ಸಿಡಿಲು ಭೂಮಿಗಿಂತ ಎತ್ತರದ ಸ್ಥಳಗಳಲ್ಲಿ ಅಧಿಕ ಆಕರ್ಷಿಸಲ್ಪಡುವುದರಿಂದ ಅಲ್ಲಿ ಜೀವಕ್ಕೆ ಅಪಾಯವಾಗುವ ಸಾಧ್ಯತೆ ಹೆಚ್ಚಿರುತ್ತದೆ.

ಉ. ಮಳೆ ಬೀಳುತ್ತಿದ್ದರೆ ಅಥವಾ ಮಳೆಯಿಂದ ಎಲ್ಲ ಕಡೆಗೆ ಒದ್ದೆಯಾಗಿದ್ದರೆ ಯಾವುದೇ ವಿದ್ಯುತ್ ಕಂಬವನ್ನು ಸ್ಪರ್ಶಿಸಬಾರದು; ಏಕೆಂದರೆ ಒದ್ದೆಯಾದ ಕಂಬದಿಂದ ವಿದ್ಯುತ್ ಶಾಕ್ ತಗುಲಬಹುದು.

ಊ. ರಸ್ತೆಯ ಮೇಲೆ ಬಿದ್ದಿರುವ ಮರಗಳನ್ನು ಮುಟ್ಟಬಾರದು. ಆ ಮರಗಳ ಮೇಲೆ ವಿದ್ಯುತ್‌ ತಂತಿಗಳು ಬಿದ್ದಿರುವ ಸಾಧ್ಯತೆಯಿರುತ್ತದೆ.

ಋ. ನೀರು ವಿದ್ಯುತ್‌ವಾಹಕವಾಗಿರುವುದರಿಂದ ನೀರಿನ ಮೂಲದಿಂದ ದೂರವಿರಬೇಕು.

ಎ. ಹೊಲದಲ್ಲಿ ಅಥವಾ ನೀರಿನಲ್ಲಿ ಕೆಲಸ ಮಾಡುವ ವ್ಯಕ್ತಿಗಳು ತಕ್ಷಣವೇ ಒಣ ಮತ್ತು ಸುರಕ್ಷಿತವಾದ ಸ್ಥಳಕ್ಕೆ ಹೋಗಬೇಕು.

ಏ. ವಿದ್ಯುತ್ತಿನಿಂದ ನಡೆಯುವ ಯಂತ್ರಗಳು, ಹಾಗೆಯೇ ಲೋಹಗಳಿಂದ (ಮೆಟಲ್) ತಯಾರಿಸಲಾಗಿರುವ ವಸ್ತುಗಳು ವಿದ್ಯುತ್ ವಾಹಕಗಳಾಗಿರುವುದರಿಂದ ಅವುಗಳನ್ನು ಉಪಯೋಗಿಸಬಾರದು. ಲೋಹಗಳ ತಂತಿಗಳಿರುವ ಕೊಡೆಯನ್ನೂ ಉಪಯೋಗಿಸಬಾರದು.

೪. ಗುಡುಗು-ಸಿಡಿಲು ಕಡಿಮೆಯಾದ ಬಳಿಕ ಮಾಡಬೇಕಾದ ಕೃತಿಗಳು

ಅ. ವಾತಾವರಣವು ಸಹಜ ಸ್ಥಿತಿಗೆ ಮರಳುವ ತನಕ ಮನೆಯ ಹೊರಗೆ ಹೋಗಬಾರದು.

ಆ. ಬಿರುಗಾಳಿ ಮತ್ತು ಮಳೆಯಿಂದ ಪರಿಸರದ ಮರಗಳು ಬಿದ್ದಿದ್ದರೆ ಅಥವಾ ವಿದ್ಯುತ್‌ ತಂತಿಗಳು ತುಂಡಾಗಿ ಬಿದ್ದಿದ್ದರೆ, ಅವುಗಳನ್ನು ಸ್ಪರ್ಶಿಸಬಾರದು. ಅಗ್ನಿಶಾಮಕ ದಳ ಮತ್ತು ವಿದ್ಯುತ್ ಮಂಡಳಿಗೆ ತಿಳಿಸಬೇಕು.

ಇ. ಮನೆಯ ಗ್ಯಾಸ್ ಸಿಲಿಂಡರನಿಂದ ಗ್ಯಾಸ ಸೋರಿಕೆಯಾಗುತ್ತಿದ್ದರೆ ವಿದ್ಯುತ್ ಪ್ರವಾಹದ ಮೇನ್ ಸ್ವಿಚ್‌ನ್ನು ಸ್ಥಗಿತಗೊಳಿಸಬೇಕು. ಸಿಲಿಂಡರ್ ಗಾಳಿಯ ಸಂಪರ್ಕಕ್ಕೆ ಬರುವ ಸ್ಥಳದಲ್ಲಿ (ಉದಾ. ಬಾಲ್ಕನಿಯಲ್ಲಿ) ಇಡಬೇಕು. ಸಂಪೂರ್ಣ ಮನೆಯಲ್ಲಿ ಗ್ಯಾಸ್ ವಾಸನೆ ಹರಡಿದ್ದರೆ ಯಾವುದೇ ವಿದ್ಯುತ್ ಸ್ವಿಚ್ ಆನ್-ಆಫ್ ಮಾಡಬಾರದು.

ಈ. ವಾಹನಗಳು, ವಿದ್ಯುತ್ ಉಪಕರಣಗಳು, ಹಾಗೆಯೇ ಮನೆಯ ಸಾಮಗ್ರಿಗಳು ಹೊಸದಾಗಿದ್ದರೆ, ಅವುಗಳ ವಿಮೆ ಮಾಡಿಸಿದ್ದರೆ ಮತ್ತು ನೈಸರ್ಗಿಕ ವಿಪತ್ತಿನಿಂದ ಆಗಿರುವ ಹಾನಿಯ ವಿಮೆ ಸಿಗುತ್ತಿದ್ದರೆ, ವಿಮಾ ಪ್ರತಿನಿಧಿಯ ಮಾರ್ಗದರ್ಶನವನ್ನು ಪಡೆಯಬೇಕು. ಹಾನಿಯಾಗಿರುವ ಮನೆಯ ವಸ್ತುಗಳನ್ನು ಸರಿಪಡಿಸುವ ಮೊದಲು ಅವುಗಳ ಛಾಯಾಚಿತ್ರಗಳನ್ನು ತೆಗೆಯಬೇಕು ಮತ್ತು ಅವುಗಳ ಪಂಚನಾಮೆಯನ್ನು ಮಾಡಿಸಿಕೊಳ್ಳಬೇಕು.

ಆಪತ್ತುಗಳ ಪ್ರಸಂಗಗಳಲ್ಲಿ ರಾಷ್ಟ್ರೀಯ ಆಪತ್ತು ವ್ಯವಸ್ಥಾಪನೆಯ ಪ್ರಾಧಿಕಾರರವರ (National Disaster Management Authority) 011-1078 ಈ ಸಹಾಯವಾಣಿ ಕ್ರಮಾಂಕವನ್ನು ಸಂಪರ್ಕಿಸಿ ಮಾರ್ಗದರ್ಶನವನ್ನು ಪಡೆಯಬಹುದು.

ವಾಚಕರಿಗೆ ಕರೆ !

ಆಪತ್ಕಾಲೀನ ಸ್ಥಿತಿಯಲ್ಲಿ ಕೇವಲ ಭಗವಂತನೇ ನಮ್ಮ ರಕ್ಷಣೆ ಮಾಡಬಹುದು ಆದುದರಿಂದ ಪ್ರತಿನಿತ್ಯ ಸಾಧನೆಯನ್ನು ಮಾಡಿರಿ !

ನೈಸರ್ಗಿಕ ವಿಪತ್ತುಗಳ ದೃಷ್ಟಿಯಿಂದ ಭೌತಿಕ ಸ್ತರದಲ್ಲಿ ಎಷ್ಟೇ ಉಪಾಯಯೋಜನೆಗಳನ್ನು ಮಾಡಿದರೂ, ನಮ್ಮ ರಕ್ಷಣೆಯಾಗಲು ಭಗವಂತ ನನ್ನು ಪ್ರತಿನಿತ್ಯ ಆರಾಧಿಸಬೇಕು. ಇಂತಹ ಸ್ಥಿತಿಯನ್ನು ಧೈರ್ಯದಿಂದ ಎದುರಿಸಲು ಪ್ರತಿದಿನ ಸಾಧನೆಯ ಪ್ರಯತ್ನಗಳನ್ನು ಮಾಡಿ ಆತ್ಮಬಲವನ್ನು ನಿರ್ಮಾಣ ಮಾಡಿಕೊಳ್ಳುವುದು ಆವಶ್ಯಕ ವಾಗಿದೆ. ಆದುದರಿಂದ ವಿಪತ್ತು ಎದುರಾದಾಗ ಅಲ್ಲ, ಈಗಿನಿಂದಲೇ ಸಾಧನೆಯನ್ನು ಪ್ರಾರಂಭಿಸಿರಿ.

ನ ಮೆ ಭಕ್ತಃ ಪ್ರಣಶ್ಯತಿ | (ಶ್ರೀಮದ್ಭಗವದ್ಗೀತೆ, ಅಧ್ಯಾಯ ೯, ಶ್ಲೋಕ ೩೧) ಅಂದರೆ ‘ನನ್ನ ಭಕ್ತರ ನಾಶ ಎಂದಿಗೂ ಆಗುವುದಿಲ್ಲ’ ಎಂದು ಭಗವಂತನು ಭಕ್ತರಿಗೆ ಆಶ್ವಾಸನೆ ನೀಡಿದ್ದಾನೆ. ಆಪತ್ಕಾಲದಲ್ಲಿ ರಕ್ಷಣೆಗಾಗಿ ಭಗವಂತನಿಗೆ ಶರಣಾಗಿ ಈಗಿನಿಂದಲೇ ಭಕ್ತಿಭಾವದಿಂದ ಸಾಧನೆಯನ್ನು ಮಾಡಿರಿ ಮತ್ತು ಭಗವಂತನ ಭಕ್ತರಾಗಿರಿ.

ಗುಡುಗು-ಸಿಡಿಲಿನ ಬಗ್ಗೆ ಓದುಗರಿಗೆ ಯಾವುದಾದರೂ ಅಂಶವನ್ನು ತಿಳಿಸುವುದಿದ್ದರೆ, ಅವರು ಅದನ್ನು ಕೆಳಗಿನ ಗಣಕೀಯ ಅಥವಾ ಅಂಚೆಯ ವಿಳಾಸಕ್ಕೆ ಕಳುಹಿಸಬೇಕೆಂದು, ವಿನಂತಿಸುತ್ತೇವೆ ! ಇದರಿಂದ ಈ ವಿಷಯವನ್ನು ಸಮಾಜದೆದುರು ಇನ್ನೂ ಆಳವಾಗಿ ಮಂಡಿಸಲು ಸಹಾಯವಾಗುವುದು.

ವಿ-ಅಂಚೆ : [email protected]

ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, ಸನಾತನ ಆಶ್ರಮ, ೨೪/ಬಿ, ರಾಮನಾಥಿ, ಬಾಂದಿವಡೆ, ಫೋಂಡಾ, ಗೋವಾ. ಪಿನ್ – ೪೦೩೪೦೧

ಮುಂಬರುವ ಮೂರನೇ ಮಹಾಯುದ್ಧದ ಕಾಲದಲ್ಲಿಯೂ ಇಂತಹ ಸ್ಥಿತಿಯು ನಿರ್ಮಾಣವಾಗಬಹದು. ಅದಕ್ಕಾಗಿಯೂ ಈ ಮಾಹಿತಿಯು ಉಪಯುಕ್ತವಾಗಬಹುದು; ಆದುದರಿಂದ ಇದನ್ನು ಸಂಗ್ರಹಿಸಿಡಬೇಕು.

Leave a Comment