ಮಹಾಯುದ್ಧ, ಭೂಕಂಪ ಮುಂತಾದ ವಿಪತ್ತುಗಳನ್ನು ಹೇಗೆ ಎದುರಿಸುವುದು? (ಭಾಗ 8)

Article also available in :

ಸನಾತನವು ಹಲವು ವರ್ಷಗಳಿಂದ ಹೇಳುತ್ತಿರುವ ಆಪತ್ಕಾಲವು ಇಂದು ಜಗತ್ತಿನ ಹೊಸ್ತಿಲಿಗೆ ಬಂದು ನಿಂತಿದೆ. ಅದು ಯಾವುದೇ ಕ್ಷಣದಲ್ಲಿ ಕದ ತಟ್ಟಬಹುದು. ಕಳೆದ ಒಂದು ವರ್ಷದಿಂದ ಜಗತ್ತನ್ನು ಆವರಿಸಿರುವ ಕೊರೋನಾ ಮಹಾಮಾರಿಯು ಆಪತ್ಕಾಲದ ಒಂದು ಸಣ್ಣ ತುಣುಕು ಅಷ್ಟೇ. ನಿಜವಾದ ಆಪತ್ಕಾಲವು ಇದಕ್ಕಿಂತ ಅನೇಕ ಪಟ್ಟು ಹೆಚ್ಚು ಭಯಾನಕ ಮತ್ತು ಅಮಾನವೀಯವಾಗಿರಲಿದೆ. ಮಾನವನಿರ್ಮಿತ ಇರಬಹುದು ನೈಸರ್ಗಿಕ ವಿಪತ್ತುಗಳ ರೂಪದಲ್ಲಿರಬಹುದು, ವಿಭಿನ್ನ ರೂಪಗಳಲ್ಲಿ ಆಪತ್ಕಾಲವು ಬಂದೆರಗಲಿದೆ. ಇವುಗಳಲ್ಲಿ ಕೆಲವನ್ನು ನಾವು ಈ ಲೇಖನ ಮಾಲೆಯಲ್ಲಿ  ನೋಡಲಿದ್ದೇವೆ. ಆಪತ್ಕಾಲದಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ನೀವು ಏನು ಮಾಡಬಹುದು ಎಂಬುದರ ಕುರಿತು ಮಾಹಿತಿಯನ್ನು ನೀಡಲು ಈ ಲೇಖನವು ಪ್ರಯತ್ನಿಸುತ್ತದೆ. ಓದುಗರಿಗೆ ಈ ಮಾಹಿತಿಯ ಲಾಭವಾಗಬೇಕೆಂಬುವುದೇ ಈ ಲೇಖನ ಮಾಲೆಯನ್ನು ಪ್ರಕಟಿಸುವ ಉದ್ದೇಶವಾಗಿದೆ.

ಈ ಲೇಖನದಲ್ಲಿ ಭೂಕುಸಿತದ ಮಾಹಿತಿಯನ್ನು ನೀಡಲಾಗಿದೆ. ಭೂ ಕುಸಿತವು ಎಲ್ಲ ಕಡೆಗಳಲ್ಲಿ ಆಗದಿದ್ದರೂ, ಮುಂದಿನ ಆಪತ್ಕಾಲದಲ್ಲಿ ಭೂಕಂಪದಂತೆ ಇದರ ಅಪಾಯಗಳು ಗುಡ್ಡಗಾಡು ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಆಗಬಹುದು. ಭೂಕುಸಿತವಾಗುವುದರ ಕಾರಣಗಳು, ಅದರ ಭೀಕರತೆ, ಭೂಕುಸಿತದ ಆಪತ್ತನ್ನು ತಡೆಯಲು ಮಾಡಬೇಕಾದ ಕೆಲವು ಉಪಾಯಗಳು, ಭೂಕುಸಿತವಾಗುವ ಮೊದಲು ದೊರಕುವ ಕೆಲವು ಮುನ್ಸೂಚನೆಗಳು, ಭೂಕುಸಿತ ಆಗುತ್ತಿರವಾಗ ಮತ್ತು ಆದನಂತರ ಯಾವ ಕೃತಿಗಳನ್ನು ಮಾಡಬೇಕು, ಮುಂತಾದ ವಿಷಯಗಳ ಮಾಹಿತಿಯನ್ನು ಇದರಲ್ಲಿ ನೀಡಲಾಗಿದೆ.

ಭಾಗ 7

2. ನೈಸರ್ಗಿಕ ವಿಕೋಪಗಳು

2 ಉ. ಭೂಕುಸಿತ

2 ಉ 1. ‘ಭೂಕುಸಿತ’ ಶಬ್ದದ ಅರ್ಥ

ಘನ ಅಥವಾ ಟೊಳ್ಳು ಗುಡ್ಡ ಅಥವಾ ದಿಬ್ಬದ ಭಾಗವು ಇದ್ದಕ್ಕಿದ್ದಂತೆಯೇ ಇಳಿಜಾರು ದಿಶೆಯಲ್ಲಿ ಕುಸಿಯುವುದಕ್ಕೆ ‘ಭೂಕುಸಿತ’ ಎಂದು ಹೇಳುತ್ತಾರೆ. ಕೆಲವೊಮ್ಮೆ ಈ ಘಟನೆಯು ಬಹಳ ಬೇಗನೆ ಆಗುತ್ತದೆ ಮತ್ತು ಕೆಲವೊಮ್ಮೆ ಅದಕ್ಕೆ ಕೆಲವು ಗಂಟೆ, ಕೆಲವು ದಿನ ಅಥವಾ ಕೆಲವು ತಿಂಗಳುಗಳೂ ಬೇಕಾಗುತ್ತವೆ. ಹೆಚ್ಚಿನ ಸಲ ಭೂಕುಸಿತವಾಗುತ್ತಿರುವಾಗ ಕಲ್ಲು-ಬಂಡೆಗಳು, ಮಣ್ಣು, ನೀರು, ಕೆಸರು ಮುಂತಾದವುಗಳ ಮಿಶ್ರಣವು ಅತಿ ವೇಗದಿಂದ ಜಾರುತ್ತದೆ.

2 ಉ 2. ಭೂಕುಸಿತವಾಗುವುದರ ಕಾರಣಗಳು

2 ಉ 2 ಅ. ನೈಸರ್ಗಿಕ : ಅತಿವೃಷ್ಟಿ, ಮಂಜುಗಡ್ಡೆ ವೇಗವಾಗಿ ಕರಗುವುದು, ಭೂಕಂಪ, ಬಿರುಗಾಳಿ, ಜ್ವಾಲಾಮುಖಿಯ ಉದ್ರೇಕ, ಬೆಂಕಿ (ಮರಗಳ ಘರ್ಷಣೆಯಿಂದ ಅಥವಾ ತಾಪಮಾನದ ಹೆಚ್ಚಳದಿಂದ ನಿರ್ಮಾಣವಾದ ಬೆಂಕಿ) ಇವುಗಳಂತಹ ಅನೇಕ ಕಾರಣಗಳಿಂದ ಭೂಕುಸಿತವಾಗುತ್ತದೆ.

2 ಉ 2 ಆ. ಮಾನವನಿರ್ಮಿತ :

1. ಅತಿಯಾದ ಗಣಿಗಾರಿಕೆಯಿಂದ ಭೂಮಿಯಲ್ಲಿ ಕಂಪನಗಳು ನಿರ್ಮಾಣವಾಗಿ ಬಿರುಕುಗಳು ಬೀಳುತ್ತವೆ.

2. ಸುರಂಗಗಳನ್ನು ಅಗೆಯುವಾಗ ಕೆಲವೊಮ್ಮೆ ಸ್ಫೋಟಕಗಳನ್ನು ಬಳಸಲಾಗುತ್ತದೆ. ಅದರಿಂದಲೂ ಭೂಮಿ ಟೊಳ್ಳಾಗುತ್ತದೆ.

3. ಬಹಳಷ್ಟು ಬಾರಿ ಕಟ್ಟಡ ಕಾಮಗಾರಿಯನ್ನು ಮಾಡುವಾಗ ಮರಗಳನ್ನು ವ್ಯಾಪಕವಾಗಿ ಕಡಿಯುವುದರಿಂದಲೂ ಭೂಕುಸಿತವಾಗುತ್ತದೆ.

2 ಉ 3. ಭೂಕುಸಿತದ ಆಪತ್ತಿನ ಭೀಕರತೆ

ಭಾರತದಲ್ಲಿ ಹಿಮಾಲಯದ ಪರಿಸರದ ಕಾಶ್ಮೀರ, ಉತ್ತರಾಖಂಡ, ಉತ್ತರಪ್ರದೇಶ, ಮಧ್ಯಪ್ರದೇಶ ಮುಂತಾದ ರಾಜ್ಯಗಳಲ್ಲಿ ಅತ್ಯಧಿಕ ಭೂಕುಸಿತವಾಗುತ್ತದೆ. ದೇಶದಲ್ಲಿ ಪ್ರತಿವರ್ಷ ಭೂಕುಸಿತದಿಂದ ಸಾಧಾರಣ ೭೦೦ ಜನರ ಮೃತ್ಯು ಆಗುತ್ತದೆ. ತೀರಾ ಇತ್ತೀಚಿಗಿನ ಉದಾಹರಣೆಯನ್ನು ಕೊಡುವುದಾದರೆ ೩೦.೭.೨೦೧೪ ರಂದು ಮಹಾರಾಷ್ಟ್ರದ ಮಾಳಿಣ (ಆಂಬೆಗಾವ ತಾಲೂಕು, ಪುಣೆ ಜಿಲ್ಲೆ) ಈ ಊರಲ್ಲಿ ಭೂಕುಸಿತ ವಾಗಿ ೭೪ ರ ಪೈಕಿ ೪೪ ಮನೆಗಳೊಂದಿಗೆ ೧೫೫ ಕ್ಕಿಂತ ಹೆಚ್ಚು ವ್ಯಕ್ತಿಗಳು, ಹಾಗೆಯೇ ಅನೇಕ ದನಕರುಗಳು ಇತ್ಯಾದಿ ಕೆಲವು ಕ್ಷಣಗಳಲ್ಲಿಯೇ ಮಣ್ಣಿನಲ್ಲಿ ಹೂತುಹೋದವು.

2 ಉ 4. ಭೂಕುಸಿತದ ಆಪತ್ತನ್ನು ತಡೆಗಟ್ಟಲು ಮಾಡಬೇಕಾದ ಕೆಲವು ಉಪಾಯಗಳು

ಅ. ‘ಭೂಕುಸಿತವನ್ನು ತಡೆಗಟ್ಟಲು ಯಾವ ಭಾಗದಲ್ಲಿ ಭೂಕುಸಿತದ ಸಾಧ್ಯತೆ ಇದೆಯೋ ಅಥವಾ ಎಲ್ಲಿ ಈ ರೀತಿಯ ಘಟನೆಗಳು ಹಿಂದೆ ಘಟಿಸಿವೆಯೋ, ಆ ಭಾಗದಲ್ಲಿ ಹೆಚ್ಚೆಚ್ಚು ಮರಗಳನ್ನು ನೆಡಬೇಕು. ಇದರಿಂದ ಅವುಗಳ ಬೇರುಗಳು ಭೂಮಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವವು ಮತ್ತು ಭೂಕುಸಿತವನ್ನು ತಡೆಗಟ್ಟುವವು. ವಿಶೇಷವಾಗಿ ಗುಡ್ಡಗಾಡು ಪ್ರದೇಶದಲ್ಲಿ ದೊಡ್ಡ ಮರಗಳನ್ನು ಹಾಗೆಯೇ ಇತರ ವನಸ್ಪತಿಯ ಗಿಡಗಳನ್ನು ನೆಡಬೇಕು.

ಆ. ತಡೆಗೋಡೆಗಳಲ್ಲಿ (ಕಂಪೌಂಡ್ ವಾಲ್) ನೀರು ಹರಿದು ಹೋಗಲು ಮಾಡಿರುವ ತೂತುಗಳನ್ನು ಸ್ವಚ್ಛವಾಗಿಡಬೇಕು. ಹಾಗೆಯೇ ನೀರಿನ ನೈಸರ್ಗಿಕ ಹರಿಯುವ ಮಾರ್ಗವನ್ನು ಬದಲಾಯಿಸಬಾರದು. ಹಾಗೆ ಮಾಡಿದರೆ ನೀರಿಗೆ ಹರಿದು ಹೋಗುವ ಮಾರ್ಗವು ಸಿಗುವುದಿಲ್ಲ ಹಾಗೂ ಅದರ ಒತ್ತಡದಿಂದ ಭೂಕುಸಿತದ ಅಪಾಯ ನಿರ್ಮಾಣವಾಗಬಹುದು.

ಇ. ಇಳಿಜಾರು ಮತ್ತು ನೀರು ಹರಿಯುವ ದಾರಿಯಲ್ಲೇ ಕಟ್ಟಡಗಳನ್ನು ಕಟ್ಟಬಾರದು. ಕಸ ಅಥವಾ ಇತರ ಸಾಮಾನುಗಳನ್ನು ಸಂಗ್ರಹಿಸಿಡಬಾರದು. ಹೀಗೆ ಮಾಡಿದರೆ ಭೂಕುಸಿತದಿಂದ ಅವು ಕುಸಿದು ಇನ್ನಷ್ಟು ಹೆಚ್ಚು ಹಾನಿಯಾಗಬಹುದು.

ಈ. ಮಳೆಗಾಲದ ಮೊದಲು ಗುಡ್ಡಗಳ ಇಳಿಜಾರು ಪ್ರದೇಶಗಳ, ಅಪಾಯಕಾರಿ ಬಂಡೆಗಲ್ಲು ಇತ್ಯಾದಿಗಳ ನಿರೀಕ್ಷಣೆಯನ್ನು ಮಾಡಬೇಕು ಮತ್ತು ಆವಶ್ಯಕವಿರುವ ಉಪಾಯಯೋಜನೆಗಳನ್ನು ಮಾಡಿ ಭೂಕುಸಿತವಾಗದಂತೆ ನೋಡಿಕೊಳ್ಳಬೇಕು. ಇದಕ್ಕಾಗಿ ಸಂಬಂಧಿತ ಭಾಗದಲ್ಲಿನ ಯುವಕರು, ಗ್ರಾಮಸೇವಕರು ಮತ್ತು ಅನುಭವವಿರುವ ರೈತರ ಸಹಾಯವನ್ನು ಪಡೆಯಬಹುದು. ಇವರು ಅಪಾಯಕಾರಿ ಬಂಡೆಗಲ್ಲುಗಳ ಕಡೆಗೆ ಗಮನವಿಟ್ಟು ಯಾವುದೇ ಅಪಾಯಕಾರಿ ಬದಲಾವಣೆ ಗಮನಕ್ಕೆ ಬಂದರೆ, ತಕ್ಷಣ ಗ್ರಾಮಸ್ಥರಿಗೆ ಮತ್ತು ಸಂಬಂಧಿತ ಆಡಳಿತ ವ್ಯವಸ್ಥೆಗೆ ಎಚ್ಚರಿಸಬಹುದು.

2 ಉ 5. ಭೂಕುಸಿತವಾಗುವ ಮೊದಲು ಸಿಗುವ ಕೆಲವು ಮುನ್ಸೂಚನೆಗಳು

ಪ್ರತಿ ಸಲ ಭೂಕುಸಿತದ ಮುನ್ಸೂಚನೆ ಸಿಗುತ್ತದೆ ಎಂದೇನಿಲ್ಲ, ಆದರೆ ಕೆಲವೊಮ್ಮೆ ಮುನ್ಸೂಚನೆಗಳು ಸಿಗುತ್ತವೆ; ಆದರೆ ಸಂಕೇತಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಮಹತ್ವದ್ದಾಗಿರುತ್ತದೆ. ಹಾಗೆ ಮಾಡದಿದ್ದರೆ ಮುನ್ಸೂಚನೆಗಳು ದೊರಕಿಯೂ ಭೂಕುಸಿತದ ಮೊದಲಿನ ಸಿದ್ಧತೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ನಮ್ಮ ಸುತ್ತಮುತ್ತಲೂ ಮುಂದಿನಂತೆ ಆಗುವ ಮಂದಗತಿಯ ಬದಲಾವಣೆಗಳು, ಮುಂದೆ ದೊಡ್ಡ ಭೂಕುಸಿತಕ್ಕೆ ಕಾರಣವಾಗುತ್ತವೆ. ಇಂತಹ ನೈಸರ್ಗಿಕ ಸೂಚನೆಗಳ ಕಡೆಗೆ ಗಮನ ಕೊಡಬೇಕು.

ಅ. ಇದ್ದಕ್ಕಿದ್ದಂತೆ ಕಿಟಕಿ-ಬಾಗಿಲುಗಳು ಗಟ್ಟಿಯಾಗುವುದು (ಕಿಟಕಿ-ಬಾಗಿಲುಗಳನ್ನು ಸಂಪೂರ್ಣ ಮುಚ್ಚಲು ಆಗದಿರುವುದು)

ಆ. ಕಟ್ಟಡಗಳ ಅಡಿಪಾಯ ಕುಸಿಯುವುದು. ಇದರಿಂದ ಕಟ್ಟಡವು ಸ್ವಲ್ಪ ಪ್ರಮಾಣದಲ್ಲಿ ಭೂಮಿಯಲ್ಲಿ ಹಣುಗುತ್ತದೆ (ಕೆಳಗೆ ಹೋಗುತ್ತದೆ) ಅಥವಾ ಕಟ್ಟಡಗಳಿಗೆ ಬಿರುಕು ಬೀಳುತ್ತವೆ.

ಈ. ಭೂಮಿಯ ಕೆಳಗಿರುವ ವಿದ್ಯುತ್ತಿನ ತಂತಿ‌ಗಳು ತಾವಾಗಿಯೇ ತುಂಡಾಗುವುದು, ನೀರಿನ ಕೊಳವೆ‌ಗಳು (ಪೈಪ್) ತಾವಾಗಿಯೇ ಒಡೆಯುವುದು.

ಉ. ಇದ್ದಕ್ಕಿದ್ದಂತೆ ಭೂಮಿಯಲ್ಲಿ ಬಿರುಕು ಬೀಳುವುದು.

ಊ. ನದಿಯ ನೀರು ಇದ್ದಕ್ಕಿದ್ದಂತೆ ರಾಡಿಯಾಗುವುದು.

ಋ. ಮಳೆ ಬೀಳುತ್ತಿರುವಾಗ ಅಥವಾ ಈಗಷ್ಟೇ ಮಳೆ ನಿಂತಿರುವಾಗ ನದಿಯ ನೀರು ಇದ್ದಕ್ಕಿದ್ದಂತೆ ಕಡಿಮೆಯಾಗುವುದು.

ಎ. ಗಿಡ, ಬೇಲಿ, ಕಂಬ, ತಡೆಗೋಡೆ ಮುಂತಾದವುಗಳು ಇದ್ದಕ್ಕಿದ್ದಂತೆಯೇ ಒಂದರ ಹಿಂದೊಂದು ಬಾಗುವುದು.

ಏ. ಇಳಿಜಾರಿನ ಮೇಲಿನ ನೆಲವು ಮೇಲೆ ಬರುವುದು (ಉಬ್ಬಿದಂತೆ ಕಾಣಿಸುವುದು).

ಐ. ಭೂಮಿಯ ಮೇಲೆ ಹೊಸ ಝರಿಗಳು ನಿರ್ಮಾಣವಾಗುವುದು.

(ಆಧಾರ : pocketbook-do-dont-1.pdf,pg76 ಮತ್ತು usgs.gov/natural-hazards/landside-hazards/science/landside-preparedness)

2 ಉ 6. ಭೂಕುಸಿತವಾಗುತ್ತಿರುವಾಗ ಇವುಗಳನ್ನು ಮಾಡಿ

2 ಉ 6 ಅ. ಭೂಕುಸಿತದ ಸಮಯದಲ್ಲಿ ನಾವಿರುವಲ್ಲಿ ದೊಡ್ಡ ಕಲ್ಲು, ಮಣ್ಣಿನ ರಾಶಿ ಇತ್ಯಾದಿಗಳು ಬರುತ್ತಿದ್ದರೆ, ಆಗ ರಸ್ತೆ, ಸೇತುವೆಗಳನ್ನು ದಾಟಬಾರದು ಹಾಗೆಯೇ ಸಾಧ್ಯವಾದಷ್ಟು ಬೇಗನೆ ಕಲ್ಲು, ಮಣ್ಣಿನ ರಾಶಿಗಳ ಮಾರ್ಗದಿಂದ ದೂರ ಎತ್ತರದ ಸ್ಥಳಕ್ಕೆ ಹೋಗಲು ಪ್ರಯತ್ನಿಸಬೇಕು. ಭೂಕುಸಿತವಾಗುತ್ತಿರುವಾಗ ಕಲ್ಲು, ಮಣ್ಣು ತಪ್ಪಲು ಅಥವಾ ತಗ್ಗು ಪ್ರದೇಶದಲ್ಲಿ ಸಂಗ್ರಹವಾಗುವುದರಿಂದ ತಗ್ಗು ಪ್ರದೇಶದಲ್ಲಿ, ಹಾಗೆಯೇ ನದಿಯ ಸಮೀಪ ಹೋಗಬಾರದು.

2 ಉ 6 ಆ. ಮರಗಿಡಗಳು, ಹಾಗೆಯೇ ಕಲ್ಲುಗಳು ಉರುಳುವ ಧ್ವನಿಯು ಕೇಳಿಸಿದರೆ ತಕ್ಷಣ ಇಳಿಜಾರು ಅಥವಾ ತಗ್ಗು ಪ್ರದೇಶದಿಂದ ದೂರ ಹೋಗಬೇಕು.

2 ಉ 6 ಇ. ಭೂಕುಸಿತದ ಸಮಯದಲ್ಲಿ ನಮಗೆ ಆ ಭಾಗದಿಂದ ದೂರ ಹೋಗಲು (ತಪ್ಪಿಸಿಕೊಳ್ಳಲು) ಸಾಧ್ಯವಾಗದಿದ್ದರೆ ಅಥವಾ ‘ನಾವು ಮಣ್ಣಿನ ಕೆಳಗೆ ಸಿಕ್ಕಿಕೊಳ್ಳುತ್ತೇವೆ’ ಎಂದೆನಿಸಿದರೆ, ದೊಡ್ಡ ಮೇಜು, ಮಂಚ ಅಥವಾ ಅದರಂತಹ ಭಾರವಾದ ವಸ್ತುವಿನ ಕೆಳಗೆ ಅಡಗಿಕೊಳ್ಳಬೇಕು. ತಲೆಯ ರಕ್ಷಣೆಯಾಗಲು ತಲೆದಿಂಬನ್ನು ಬಳಸಬಹುದು. ಕಿಟಕಿ ಮತ್ತು ಬಾಗಿಲುಗಳ ಬಳಿ ನಿಲ್ಲಬಾರದು.’

2 ಉ 7. ಭೂಕುಸಿತದ ನಂತರ ಇವುಗಳನ್ನು ಮಾಡಿ

ಅ. ಸಡಿಲವಾದ ಮಣ್ಣು ಅಥವಾ ವಸ್ತುಗಳನ್ನು ಸ್ಪರ್ಶಿಸಬಾರದು ಅಥವಾ ಅವುಗಳ ಮೇಲಿನಿಂದ ನಡೆದಾಡಬಾರದು. ಭೂಕುಸಿತದಿಂದ ಇಂತಹ ಮಣ್ಣಿನ ಮೇಲೆ ಒತ್ತಡ ಬಿದ್ದರೆ ಅದು ಕೂಡಲೇ ಕುಸಿಯಬಹುದು ಮತ್ತು ಜೀವಹಾನಿಯಾಗಬಹುದು.

ಆ. ವಿದ್ಯುತ್ತಿನ ಸ್ಪರ್ಶವಾಗಬಾರದೆಂದು ವಿದ್ಯುತ್ ತಂತಿ ಅಥವಾ ಕಂಬಗಳಿಂದ ದೂರವಿರಬೇಕು. ಸಾಧ್ಯವಿದ್ದರೆ ಸಂಬಂಧಿತ (ವಿದ್ಯುತ್, ನೀರು ಮುಂತಾದ) ಖಾತೆಗಳನ್ನು ಸಂಪರ್ಕಿಸಿ ಭೂಕುಸಿತದ ಬಗ್ಗೆ ಹೇಳಬೇಕು. ಇದರಿಂದ ವಿದ್ಯುತ್, ನೀರು ಮುಂತಾದ ಸರಬರಾಜು ನಿಲ್ಲಿಸಿ ಸಂಭಾವ್ಯ ಅಪಾಯಗಳನ್ನು ತಡೆಗಟ್ಟಬಹುದು.

ಇ. ಇಳಿಜಾರು ಅಥವಾ ತಗ್ಗು ಪ್ರದೇಶದಿಂದ ದೂರ ಹೋಗಬೇಕು.

ಈ. ಭೂಕುಸಿತದಿಂದ ನದಿ, ಝರಿ, ಬಾವಿ ಮುಂತಾದವುಗಳ ನೀರು ಕಲುಷಿತವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಅಲ್ಲಿನ ನೀರನ್ನು ಶುದ್ದಿಗೊಳಿಸಿಯೇ (ಸ್ಟೆರಿಲೈಜ್) ಕುಡಿಯಬೇಕು. ಇಂತಹ ಸಮಯದಲ್ಲಿ ನೀರನ್ನು ೧೦ ನಿಮಿಷಗಳ ಕಾಲ ಕುದಿಸಿ ಕುಡಿಯಬಹುದು.

ಉ. ಭೂಕುಸಿತವಾದ ಪ್ರದೇಶದಿಂದ ದೂರವಿರಬೇಕು. ಅಲ್ಲಿ ಮತ್ತೆ ಮತ್ತೆ ಭೂಕುಸಿತಗಳಾಗುವ ಅಥವಾ ನೆರೆ ಬರುವ ಸಾಧ್ಯತೆ ಇರುತ್ತದೆ. ತಜ್ಞರು ಸ್ಥಳವನ್ನು ಪರೀಕ್ಷಿಸಿ ಸುರಕ್ಷಿತವಾಗಿರುವ ಬಗ್ಗೆ ಹೇಳುವವರೆಗೆ ಭೂಕುಸಿತವಾದ ಪ್ರದೇಶದಿಂದ ದೂರವಿರಬೇಕು.

ಊ. ಭೂಕುಸಿತವಾದ ಪ್ರದೇಶಗಳಲ್ಲಿ ಮಳೆಗಾಲದಲ್ಲಿ ನೆರೆಬರುವ ಸಾಧ್ಯತೆ ಇರುವುದರಿಂದ ಅಲ್ಲಿ ಆದಷ್ಟು ಬೇಗನೆ ಭೂಮಿಯಲ್ಲಿ ಭರತಿ ಹಾಕಿ (ತಗ್ಗಿನಲ್ಲಿ ಕಲ್ಲು-ಮಣ್ಣು ಹಾಕಿ) ಭೂಮಿಯನ್ನು ಮೊದಲಿನಂತೆ ಮಾಡಬೇಕು ಮತ್ತು ಗಿಡಗಳನ್ನು ನೆಡಬೇಕು.

(ಆಧಾರ : pocketbook-do-dont-1.pdf,pg77 & 78)

Leave a Comment