ಸಾಧನೆಯ ಬಗ್ಗೆ ಮಾರ್ಗದರ್ಶನ ಮತ್ತು ಪ್ರತ್ಯಕ್ಷ ತಮ್ಮ ಆಚರಣೆಯಿಂದ ಸಾಧಕರನ್ನು ತಯಾರಿಸುವ ಪರಾತ್ಪರ ಗುರು ಡಾ. ಆಠವಲೆ !

ವೈಶಾಖ ಕೃಷ್ಣ ಪಕ್ಷ ಸಪ್ತಮಿಯಂದು (೧೩ ಮೇ) ಪರಾತ್ಪರ ಗುರು ಡಾ. ಜಯಂತ ಬಾಳಾಜಿ ಆಠವಲೆಯವರಿಗೆ ೭೭ ವರ್ಷ ಪೂರ್ತಿಯಾಗಿ ಅವರು ೭೮ ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದರು. ಈ ಶುಭ ಸಂದರ್ಭದಲ್ಲಿ ಅವರ ಅದ್ವೀತಿಯ ಕಾರ್ಯದ ಪರಿಚಯ ಮಾಡಿಸುವ ಲೇಖನವನ್ನು ನೀಡಿದ್ದೇವೆ.

ನನಗೆ ೧೯೮೯ ರಿಂದ ಪರಾತ್ಪರ ಗುರು ಡಾ. ಆಠವಲೆಯವರ ಮುಂಬಯಿಯ ಅಭ್ಯಾಸವರ್ಗಗಳಲ್ಲಿ ಪಾಲ್ಗೊಳ್ಳುವ ಭಾಗ್ಯ ಲಭಿಸಿತು. ಆ ಕಾಲಾವಧಿಯಲ್ಲಿ ನನಗೆ ಐಹಿಕ ಜೀವನದಲ್ಲಿ ಯಶಸ್ಸು ಲಭಿಸಿದ್ದರೂ, ನನ್ನ ಮಾನಸಿಕ ಸ್ಥಿತಿ ಬಹಳ ಸೂಕ್ಷ್ಮವಾಗಿತ್ತು. ಇಂತಹ ಗಂಭೀರ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿಯಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಅವರ ಕೃಪೆಯಿಂದ ನನ್ನನ್ನು ತಮ್ಮ ಆಶ್ರಯದಲ್ಲಿ ಇಟ್ಟುಕೊಂಡರು. ಅವರು ತಮ್ಮ ಚರಣಗಳ ಬಳಿ ಇರಿಸಿಕೊಂಡಿರುವುದರಿಂದ ವ್ಯಷ್ಟಿ ಜೀವನದಲ್ಲಿ ನನಗೆ ಅನೇಕ ಅನುಭೂತಿಗಳನ್ನು ಬಂದವು. ಗುರುರೂಪಿ ಸ್ಪರ್ಶಮಣಿಯು ನನ್ನ ಜೀವನವನ್ನು ಬಂಗಾರವನ್ನಾಗಿ ಮಾಡಿತು! ಇಂತಹ ಸಾಕ್ಷಾತ್ ಶ್ರೀವಿಷ್ಣುಸ್ವರೂಪಿ ಶ್ರೀಮನ್ನಾರಾಯಣ ಪರಾತ್ಪರ ಗುರು ಡಾ. ಆಠವಲೆಯವರ ಚರಣಗಳಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ನಾನು ಈ ಅನುಭೂತಿಗಳ ಪುಷ್ಪಗಳನ್ನು ಅವರ ಚರಣಗಳಿಗೆ ಅರ್ಪಿಸುತ್ತಿದ್ದೇನೆ. – (ಪೂ.) ಶ್ರೀ. ಶಿವಾಜಿ ವಟಕರ

೧. ಸಾಧಕರಿಗೆ ಜನನ-ಮರಣದ ಚಕ್ರಗಳಿಂದ ಬಿಡಿಸಲು ಅವರಿಗೆ ಯೋಗ್ಯ ಮಾರ್ಗದರ್ಶನ ಮಾಡುವ ಪರಾತ್ಪರ ಗುರು ಡಾ. ಆಠವಲೆ !

ಫೆಬ್ರವರಿ ೧೯೯೨ ರಲ್ಲಿ ನನ್ನ ತಾಯಿಗೆ ಪಾರ್ಶ್ವವಾಯು (ಪ್ಯಾರಾಲಿಸಿಸ್) ಆಯಿತು. ಮುಂಬಯಿಯಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಮೊದಲ ಗುರುಪೂರ್ಣಿಮೆಯನ್ನು ಆಯೋಜಿಸಲಾಗಿತ್ತು. ಗುರುಪೂರ್ಣಿಮೆಯ ಸಮಯದಲ್ಲಿ ಕಚೇರಿ ಮತ್ತು ಮನೆ ಕೆಲಸಗಳು, ಹಾಗೂ ತಾಯಿ ಹಾಸಿಗೆ ಹಿಡಿದಿದ್ದರಿಂದ ನನಗೆ ಸೇವೆಗೆ ಸಮಯ ಸಿಗುತ್ತಿರಲಿಲ್ಲ. ಆ ಸಮಯದಲ್ಲಿ ಅಭ್ಯಾಸವರ್ಗದ ಸಾಧಕರು ಸೇವೆಯಲ್ಲಿ ಭಾಗವಹಿಸುತ್ತಿದ್ದರು. ನಾನು ಪರಾತ್ಪರ ಗುರು ಡಾಕ್ಟರರಿಗೆ ತಾಯಿಯ ಬಗ್ಗೆ ವಿಚಾರಿಸಿದಾಗ ಅವರು “ಅವರಿಗೆ ಈಗ ಒಂದು ವಾರದ ಆಯುಷ್ಯವಿದೆ. ನೀವು ತಾಯಿಯ ಸೇವೆಯನ್ನು ಮಾಡುವುದಕ್ಕೆ ಆದ್ಯತೆಯನ್ನು ನೀಡಿರಿ” ಎಂದು ಹೇಳಿದರು. ಆದರೆ ತಾಯಿಯವರು ಮೂರೂವರೆ ತಿಂಗಳು ಹಾಸಿಗೆ ಹಿಡಿದಿದ್ದರು ಮತ್ತು ಎಪ್ರಿಲ್‌ನಲ್ಲಿ ಅವರು ಮರಣ ಹೊಂದಿದರು. ಈ ವಿಷಯದ ಬಗ್ಗೆ ನಾನು ಪುನಃ ಪರಾತ್ಪರ ಗುರು ಡಾಕ್ಟರರಿಗೆ ಅಭ್ಯಾಸವರ್ಗದಲ್ಲಿ ಕೇಳಿದಾಗ ಅವರು ‘ತಾಯಿಯ ಸಂದರ್ಭದಲ್ಲಿ ನಿಮ್ಮ ಮತ್ತು ನಿಮ್ಮ ಸಹೋದರಿಯ ಸೇವೆ ಬಾಕಿ ಉಳಿದಿತ್ತು; ಆದ್ದರಿಂದ ಪ.ಪೂ. ಭಕ್ತರಾಜ ಮಹಾರಾಜರು ಅವರ ಆಯುಷ್ಯವನ್ನು ಹೆಚ್ಚಿಸಿದರು’ ಎಂದು ಹೇಳಿದರು. ‘ಸಾಧಕರನ್ನು ಜೀವನ್ಮರಣದ ಚಕ್ರದಿಂದ ಬಿಡಿಸಲು ಕೇವಲ ಗುರುಗಳೇ ಏನು ಬೇಕಾದರೂ ಮಾಡಬಲ್ಲರು’ ಎಂದು ಅರಿವಾಗಿ ನನ್ನಿಂದ ಕೃತಜ್ಞತೆ ವ್ಯಕ್ತವಾಯಿತು.

ನನಗೆ ಇದೆಲ್ಲವನ್ನು ಪರಾತ್ಪರ ಗುರು ಡಾ. ಆಠವಲೆಯವರಿಂದಲೇ ಅರಿತುಕೊಳ್ಳಲು ಸಾಧ್ಯವಾಯಿತು. ಮುಂದೆ ಅವರ ಕೃಪೆಯಿಂದಲೇ ನನ್ನ ಮತ್ತು ನನ್ನ ಸಹೋದರಿಯ ಆಧ್ಯಾತ್ಮಿಕ ಸ್ತರ ಹೆಚ್ಚಾಗಿ ನಾವು ಜನನ-ಮರಣದ ಚಕ್ರದಿಂದ ಮುಕ್ತರಾದೆವು.

೨. ಸಾಧಕರನ್ನು ಸ್ಥೂಲದಲ್ಲಿ ಸಿಲುಕಿಸದೆ ಅವರಿಂದ ಅಧ್ಯಾತ್ಮ ಪ್ರಸಾರದ ನಿರ್ಗುಣ ತತ್ತ್ವದ ಸೇವೆಯನ್ನು ಮಾಡಿಸಿಕೊಳ್ಳುವುದು

ಪರಾತ್ಪರ ಗುರು ಡಾಕ್ಟರರು ಅಭ್ಯಾಸವರ್ಗದಲ್ಲಿ ‘ಗುರುಗಳ ಸ್ಥೂಲ ದರ್ಶನಕ್ಕಿಂತ ಅಧ್ಯಾತ್ಮ ಪ್ರಸಾರ, ಅಂದರೆ ಅವರ ನಿರ್ಗುಣ ಸೇವೆಯು ಮಹತ್ವದ್ದಾಗಿದೆ’, ಎನ್ನುವುದನ್ನು ಮುಂದಿನ ತಖ್ತೆಯ ಮೂಲಕ ಅಭ್ಯಾಸವರ್ಗದಲ್ಲಿ ಕಲಿಸಿದರು.

ಸೇವೆಯ ಸ್ವರೂಪ ಮಹತ್ವ (ಶೇ.)
ಸಂತರ ಸೇವೆ (ನಿರ್ಗುಣ) ೧೦೦
ಸಂತರ ಸಹವಾಸ ೩೦
ಅರ್ಪಣೆ ೧೦
ದರ್ಶನ ೦೧

೨ ಅ. ಪ.ಪೂ. ಭಕ್ತರಾಜ ಮಹಾರಾಜರ ಸತ್ಸಂಗದಲ್ಲಿರುವ ಭಾಗ್ಯ ಲಭಿಸಿದ ಬಳಿಕ ‘ಇತರ ಭಕ್ತರಂತೆ ನಾನೂ ಅವರೊಂದಿಗಿದ್ದು, ಭಜನೆ, ಭಂಡಾರ (ಅನ್ನಸಂತರ್ಪಣೆ) ಮತ್ತು ಭ್ರಮಣ (ಪ್ರಯಾಣ) ಮಾಡಬೇಕು’ ಎಂಬ ಮೋಹವಾಗುವುದು : ೧೯೯೨ ರಲ್ಲಿ ಮುಂಬಯಿಯಲ್ಲಿ ನಡೆದ ಪ.ಪೂ. ಭಕ್ತರಾಜ ಮಹಾರಾಜರ (ಪ.ಪೂ. ಬಾಬಾ) ಗುರುಪೂರ್ಣಿಮೆಯ ಬಳಿಕ ಅವರ ಸತ್ಸಂಗದಲ್ಲಿರುವ ಭಾಗ್ಯ ನನಗೆ ಬಹಳಷ್ಟು ಸಲ ಲಭಿಸಿತು. ‘ಇತರ ಭಕ್ತರಂತೆ ನಾನೂ ಅವರೊಂದಿಗಿದ್ದು, ಭಜನೆ, ಭಂಡಾರ (ಅನ್ನ ಸಂತರ್ಪಣೆ) ಮತ್ತು ಭ್ರಮಣವನ್ನು ಮಾಡಬೇಕು’, ಎಂದು ಯಾವಾಗಲೂ ಆಸೆಯಾಗುತ್ತಿತ್ತು; ಆದರೆ ‘ನನ್ನ ಆಧ್ಯಾತ್ಮಿಕ ಪ್ರಗತಿಗಾಗಿ ಯಾವುದು ಯೋಗ್ಯ ?’ ಎನ್ನುವ ವಿಷಯದಲ್ಲಿ ಪರಾತ್ಪರ ಗುರು ಡಾಕ್ಟರರು ನನಗೆ ಆಯಾ ಸಮಯಕ್ಕೆ ಮಾರ್ಗದರ್ಶನ ಮಾಡುತ್ತಿದ್ದರು. ಸಹಜ ಪ್ರವೃತ್ತಿಯಂತೆ ಎಲ್ಲಿ ಸಹಜವಾಗಿ ಸುಖ ದೊರಕುವುದೋ ಮತ್ತು ಮನಸ್ಸಿಗೆ ಒಳ್ಳೆಯದೆನಿಸುವುದೋ, ಅದನ್ನು ಮಾಡಬೇಕೆಂದು ಅನಿಸುತ್ತದೆ. ಅದಕ್ಕನುಸಾರ ತತ್ತ್ವದ ಸೇವೆ, ಅಧ್ಯಾತ್ಮ ಪ್ರಸಾರ ಇತ್ಯಾದಿಗಳ ಮೇಲೆ ಶೇ. ೧೦೦ ರಷ್ಟು ವಿಶ್ವಾಸವನ್ನು ಇರದಿರುವುದರಿಂದ ನನ್ನ ಮನಸ್ಸಿನಲ್ಲಿ ಸಂಶಯವಿರುತ್ತಿತ್ತು. ‘ನಾನೂ ಇತರರಂತೆ ಪ.ಪೂ. ಬಾಬಾರವರೊಂದಿಗೆ ತಿರುಗಾಡಬೇಕು’, ಎಂದು ನನಗೆ ಆಗಾಗ ಅನಿಸುತ್ತಿತ್ತು.

೨ ಆ. ಪ.ಪೂ. ಭಕ್ತರಾಜ ಮಹಾರಾಜರು ‘ಡಾ. ಆಠವಲೆಯವರಿಗೆ ಆಠವಲೆಯವರೇ ಸ್ವಸ್ವರೂಪ’, ಎಂದು ೪-೫ ಸಲ ಹೇಳುವುದು, ಅವರ ಭಜನೆಗಳ ಸಾಲುಗಳಿಂದ ಅರಿವಾಗಿ ಪ.ಪೂ. ಡಾ. ಆಠವಲೆಯವರು ಹೇಳಿದಂತೆ ನಾಮಸ್ಮರಣೆ, ಇತರ ಸಾಧನೆ, ಪ.ಪೂ. ಭಕ್ತರಾಜ ಮಹಾರಾಜರ ತತ್ತ್ವದ ಆಚರಣೆ ಹಾಗೂ ಅವರ ಕಾರ್ಯವನ್ನು ಮಾಡಲು ಪ್ರಾರಂಭಿಸುವುದು : ಆ ಕಾಲಾವಧಿಯಲ್ಲಿ ನವೆಂಬರ್ ೧೯೯೨ ರಲ್ಲಿ ಪ.ಪೂ. ಬಾಬಾರವರು ಮುಂಬಯಿಯಲ್ಲಿ ಶ್ರೀ ಕಾರಂಡೆಯವರ ಮದುವೆಗಾಗಿ ಬಂದಿದ್ದರು. ಆ ಸಮಯದಲ್ಲಿ ೪-೫ ಸಲ ಪ.ಪೂ. ಬಾಬಾರವರು ‘ಡಾ. ಆಠವಲೆಯವರಿಗೆ ಆಠವಲೆಯವರೇ ಸ್ವಸ್ವರೂಪರಾಗಿದ್ದಾರೆ’ ಎಂದು ಹೇಳಿದ್ದಾರೆ. ಅನಂತರ ಪರಾತ್ಪರ ಗುರು ಡಾಕ್ಟರರು ಹೇಳಿದಂತೆ ನಾಮಸ್ಮರಣೆ, ಇತರ ಸಾಧನೆ, ಪ.ಪೂ. ಬಾಬಾರವರ ತತ್ತ್ವಗಳ ಆಚರಣೆ ಮತ್ತು ಅವರ ಕಾರ್ಯವನ್ನು ಮಾಡತೊಡಗಿದೆನು. ನನಗೆ ಅದರಿಂದ ಆನಂದ ಸಿಗತೊಡಗಿತು. ಅದರಿಂದಲೇ ‘ದೀನರ ದೀನನಾಥ | ಸದಾ ಭಕ್ತರ ಸಂಗದಲ್ಲಿರುವ ||’ ಎಂಬ ವಿಷಯವುಳ್ಳ ಪ.ಪೂ. ಬಾಬಾರವರ ಭಜನೆಯ ಸಾಲುಗಳ ಅನುಭೂತಿ ನನಗೆ ಬರತೊಡಗಿತು.

೨ ಇ. ‘ಸಾಧಕರು ಭಜನೆ ಮತ್ತು ಭಂಡಾರ ಬದಲು ಅಧ್ಯಾತ್ಮ ಪ್ರಸಾರಕ್ಕೆ ಆದ್ಯತೆಯನ್ನು ನೀಡುವುದೇ ಯೋಗ್ಯವಾಗಿದೆ’ ಎಂದು ಪ.ಪೂ. ಭಕ್ತರಾಜ ಮಹಾರಾಜರು ಹೇಳುವುದು ಮತ್ತು ಅದರಿಂದ ಪರಾತ್ಪರ ಗುರು ಡಾ. ಆಠವಲೆಯವರು ಯೋಗ್ಯ ಮಾರ್ಗದಲ್ಲಿ ಕರೆದೊಯ್ಯುತ್ತಿರುವರೆಂದು ಅರಿವಾಗುವುದು : ಪ.ಪೂ. ಬಾಬಾರವರು ಮುಂಬಯಿಗೆ ಬಂದಾಗ ನನಗೆ ಅವರ ಸತ್ಸಂಗದಲ್ಲಿದ್ದು, ಅವರ ಸೇವೆಯನ್ನು ಮಾಡುವ ಅವಕಾಶ ದೊರಕುತ್ತಿತ್ತು. ನನ್ನ ಬಳಿ ಚತುಷ್ಚಕ್ರ ವಾಹನವಿದ್ದರಿಂದ, ಅದರ ಉಪಯೋಗವೂ ಆಗುತ್ತಿತ್ತು. ಪ.ಪೂ. ಬಾಬಾರವರ ಭಕ್ತ ಶ್ರೀ. ಅಂಜನಿ ಕುಮಾರ (ಪುಣೆಯ ಆದಾಯ ತೆರಿಗೆ ಇಲಾಖೆಯ ಆಗಿನ ಆಯುಕ್ತರು) ಬಂದ ಕೂಡಲೇ, ಪ.ಪೂ. ಬಾಬಾ ನನಗೆ ಅವರೊಂದಿಗೆ ಇರಲು ಹೇಳುತ್ತಿದ್ದರು. ಅದರಂತೆ ವಿಶಾಖಾಪಟ್ಟಣಮ್‌ನ ಅವರ ಭಕ್ತರಾದ ಶ್ರೀ. ಪ್ರಭಾತ ಕುಮಾರ ಮತ್ತು ಅವರ ಇತರ ಸಹಾಯಕರು ಬಂದ ಕೂಡಲೇ ನನಗೆ ಅವರೊಂದಿಗಿದ್ದು ಸೇವೆ ಮಾಡುವ ಅವಕಾಶ ಸಿಗುತ್ತಿತ್ತು. ಪ.ಪೂ. ಬಾಬಾ ಮತ್ತು ಅವರ ವಿವಿಧ ಸ್ಥಳಗಳ ಭಕ್ತರು ಹೀಗೆ ಸುಮಾರು ೪೦ ರಿಂದ ೫೦ ಜನರು ವಿಶಾಖಾಪಟ್ಟಣಮ್‌ಗೆ ಹೋಗುತ್ತಿದ್ದರು. ನನಗೆ ಪ.ಪೂ.ಬಾಬಾ ಮತ್ತು ಶ್ರೀ. ಪ್ರಭಾತಕುಮಾರ ಇವರು ಬಹಳಷ್ಟು ಸಲ ವಿಶಾಖಾಪಟ್ಟಣಮ್‌ಗೆ ಬರುವಂತೆ ಆಗ್ರಹ ಮಾಡಿದರು. ಅಷ್ಟೇ ಅಲ್ಲದೇ ಅವರು ‘ನನ್ನ ಮತ್ತು ನನ್ನ ಪತ್ನಿಯ ವಿಮಾನ ಪ್ರಯಾಣದ ಟಿಕೇಟ್‌ನ್ನು ಕಳುಹಿಸುತ್ತೇನೆ’, ಎಂದೂ ಹೇಳಿದರು. ಆ ಸಮಯದಲ್ಲಿ ನಾನು ಮುಂಬಯಿಯಲ್ಲಿ ಸತ್ಸಂಗ ತೆಗೆದುಕೊಳ್ಳುವುದು ಮತ್ತು ಜಿಲ್ಲೆಯ ಪ್ರಸಾರವನ್ನು ನೋಡುವುದು ಇತ್ಯಾದಿ ಸೇವೆಗಳನ್ನು ಮಾಡುತ್ತಿದ್ದೆ. ಇದರಿಂದ ನನಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ಇಂತಹ ಸಮಯದಲ್ಲಿ ಪರಾತ್ಪರ ಗುರು ಡಾಕ್ಟರರು ‘ಏನು ಯೋಗ್ಯವೆಂಬುದನ್ನು ನೀವೇ ನಿರ್ಧರಿಸಿರಿ’ ಎಂದು ಹೇಳುತ್ತಿದ್ದರು. ಇದರಿಂದ ನಾನು ಭಜನೆ ಮತ್ತು ಅನ್ನ ಸಂತರ್ಪಣೆಯ ಬದಲಾಗಿ ಅಧ್ಯಾತ್ಮ ಪ್ರಸಾರಕ್ಕೆ ಆದ್ಯತೆಯನ್ನು ನೀಡುತ್ತಿದ್ದೆನು. ಇದರಿಂದ ಕೆಲವು ಜನರಲ್ಲಿ ತಪ್ಪು ಕಲ್ಪನೆಯಾಯಿತು. ಆದರೂ ನಾನು ಅದನ್ನು ನಿರ್ಲಕ್ಷಿಸುತ್ತಿದ್ದೆನು. ಕೊನೆಯಲ್ಲಿ ಪ.ಪೂ. ಬಾಬಾರವರು ನನಗೆ “ನೀವು ಡಾಕ್ಟರರಿಗೆ ಅಪೇಕ್ಷಿತವಿರುವಂತೆ ಅಧ್ಯಾತ್ಮ ಪ್ರಸಾರದ ಸೇವೆಯನ್ನು ಮಾಡುತ್ತಿದ್ದೀರಿ, ಇದೇ ಯೋಗ್ಯವಾಗಿದೆ” ಎಂದು ಹೇಳಿದರು. ಇದರಿಂದ ಪರಾತ್ಪರ ಗುರು ಡಾಕ್ಟರರು ನನಗೆ ಯೋಗ್ಯ ಮಾರ್ಗದಲ್ಲಿ ಮುನ್ನಡೆಸಿದ್ದಾರೆ ಎಂಬುದರ ಅರಿವಾಯಿತು. ‘ಸಮಷ್ಟಿ ಸೇವೆ ಮಹತ್ವದ್ದಾಗಿದೆ ಎನ್ನುವುದು ಮನಸ್ಸಿನ ಮೇಲೆ ಬಿಂಬಿಸಿ ಅವರು ನನಗೆ ಯಾವುದರಲ್ಲಿಯೂ ಸಿಲುಕಿಕೊಳ್ಳದಂತೆ ನೋಡಿಕೊಂಡರು.

೨ ಈ. ಮಧ್ಯರಾತ್ರಿ ಪಟಾಕಿಗಳ ಸಪ್ಪಳದಿಂದ ಎಚ್ಚರವಾಗಿ ಪ್ರಕಾಶ ಕಾಣಿಸುವುದು, ಆ ಪ್ರಕಾಶದಲ್ಲಿ ಪ.ಪೂ. ಭಕ್ತರಾಜ ಮಹಾರಾಜರ ಛಾಯಾಚಿತ್ರದ ದರ್ಶನವಾಗುವುದು ಮತ್ತು ಆ ಸಮಯದಲ್ಲಿ ಆನಂದದ ಭರದಲ್ಲಿ ‘ನಿಮ್ಮ ಕಾರ್ಯದಲ್ಲಿ ಆನಂದ ಸಿಗುತ್ತಿದೆ’ ಎಂದು ಅವರಿಗೆ ಪತ್ರವನ್ನು ಬರೆಯುವುದು : ೩೧.೧೨.೧೯೯೨ರ ರಾತ್ರಿ ಮಲಗಿದ್ದಾಗ ಮಧ್ಯರಾತ್ರಿ ಪಟಾಕಿಗಳ ಸಪ್ಪಳದಿಂದ ನನಗೆ ಎಚ್ಚರವಾಯಿತು. ಆ ಸಮಯದಲ್ಲಿ ನನಗೆ ಪ್ರಕಾಶ ಕಾಣಿಸಿತು ಮತ್ತು ಅದರಲ್ಲಿ ಆಂಗ್ಲ ಹೊಸವರ್ಷದ ನಿಮಿತ್ತದಿಂದ ಪ.ಪೂ. ಬಾಬಾರವರ ಛಾಯಾಚಿತ್ರದ ಪ್ರಥಮ ದರ್ಶನವಾಯಿತು. ನನಗೆ ಬಹಳ ಆನಂದವಾಯಿತು ಮತ್ತು ಆ ಆನಂದದ ಸ್ಥಿತಿಯಲ್ಲಿಯೂ ನಾನು ಪ.ಪೂ. ಬಾಬಾರವರಿಗೆ ‘ನಿಮ್ಮೊಂದಿಗೆ ಇಲ್ಲದಿರುವಾಗ ಈಗ ಮೊದಲಿನಂತೆ ನನಗೆ ದುಃಖವಾಗುವುದಿಲ್ಲ; ಏಕೆಂದರೆ ನಿಮ್ಮ ಕಾರ್ಯದಲ್ಲಿ ಆನಂದ ಸಿಗುತ್ತಿದೆ’ ಮತ್ತು ‘ನೀವು ಸದಾ ನನ್ನೊಂದಿಗಿದ್ದೀರಿ ಎಂದೆನಿಸುತ್ತದೆ’ ಎಂದು ಪತ್ರ ಬರೆದೆನು.

೨ ಉ. ಪ.ಪೂ. ಭಕ್ತರಾಜ ಮಹಾರಾಜರ ಆಶೀರ್ವಾದರೂಪಿ ಪತ್ರ ಬರುವುದು ಮತ್ತು ತದನಂತರ ಸದ್ಗುರುಗಳ ಸೇವೆ, ಅಂದರೆ ಅಧ್ಯಾತ್ಮ ಪ್ರಸಾರವನ್ನು ಮಾಡುವ ನಿರ್ಧಾರ ದೃಢವಾಗುವುದು : ೧೬.೧.೧೯೯೩ ರಂದು ಪ.ಪೂ. ಬಾಬಾರವರ ಆಶೀರ್ವಾದರೂಪಿ ಪತ್ರ ಬಂದಿತು ಮತ್ತು ಅದರಲ್ಲಿ ಅವರು ‘ನೆನಪೇ ಸುಖದ ಗುರುತಾಗಿದೆ’ ಎಂದು ಬರೆದಿದ್ದರು. ಸುಖಕ್ಕಾಗಿ ಸದ್ಗುರುಗಳ ನೆನಪಿಡುವುದು ಮತ್ತು ನೆನಪಿಡಲು ಸದ್ಗುರುಗಳ ಸೇವೆಯನ್ನು ಮಾಡುವುದು, ಅಂದರೆ ಅವರಿಗೆ ಇಷ್ಟವಾಗುವ ವಿಷಯವನ್ನು (ಅಧ್ಯಾತ್ಮ ಪ್ರಸಾರ) ಮಾಡಲು ನಾನು ದೃಢನಿರ್ಧಾರ ಮಾಡಿದೆ. ‘ಪರಾತ್ಪರ ಗುರು ಡಾ. ಆಠವಲೆಯವರು ಹೇಳುತ್ತಾರೆ ಮತ್ತು ಸ್ಫೂರ್ತಿಯನ್ನು ನೀಡುತ್ತಾರೆ, ಅದೇ ನನ್ನ ಪ್ರಗತಿಗೆ ಯೋಗ್ಯವಾಗಿದೆ’, ಎನ್ನುವುದು ನನಗೆ ದೃಢವಾಗಿ ಅರಿವಾಯಿತು. ಅದಕ್ಕಾಗಿ ನಾನು ನನ್ನ ಮೋಹವನ್ನು ಪಕ್ಕಕ್ಕಿರಿಸಿ, ನನ್ನ ಬುದ್ಧಿಯನ್ನು ಉಪಯೋಗಿಸದೇ ಅವರ ಮಾರ್ಗದರ್ಶನಕ್ಕನುಸಾರ ಮುನ್ನಡೆಯುವುದೆಂದು ನಿರ್ಧರಿಸಿದೆ.

೩. ಸ್ವಂತ ತಂದೆ-ತಾಯಿಯವರ ನಿಧನದ ಸಮಯದಲ್ಲಿಯೂ ಅಧ್ಯಾತ್ಮ ಪ್ರಸಾರಕ್ಕೆ ಆದ್ಯತೆಯನ್ನು ನೀಡುವುದು

೩ ಅ. ಪ.ಪೂ. ಭಕ್ತರಾಜ ಮಹಾರಾಜರ ಅಮೃತ ಮಹೋತ್ಸವದ ಸೇವೆಗಾಗಿ ಇಂದೂರಿಗೆ ಹೋಗುವ ದಿನ ಪರಾತ್ಪರ ಗುರು ಡಾ. ಆಠವಲೆಯವರ ತಂದೆಯವರ ದೇಹತ್ಯಾಗವಾಗುವುದು : ೧೯೯೫ರಲ್ಲಿ ಮುಂಬಯಿಯ ಸಾಧಕರು ಮತ್ತು ಪರಾತ್ಪರ ಗುರು ಡಾ. ಆಠವಲೆಯವರು ಪ.ಪೂ. ಭಕ್ತರಾಜ ಮಹಾರಾಜರ ಅಮೃತ ಮಹೋತ್ಸವದ ಸೇವೆಗಾಗಿ ೨ ವಾರಗಳಿಗಾಗಿ ಇಂದೂರಿಗೆ ಹೋಗುವವರಿದ್ದರು. ಹಿಂದಿನ ರಾತ್ರಿ ನಾನು ಸೇವಾಕೇಂದ್ರಕ್ಕೆ ಹೋಗಿ ಬಂದಿದ್ದೆನು. ನಾನು ಹೋಗುವ ದಿನ ಬೆಳಗ್ಗೆ ೧೧ ಗಂಟೆಗೆ ಪರಾತ್ಪರ ಗುರು ಡಾಕ್ಟರರೊಂದಿಗೆ ಮಾತನಾಡಲು ಸೇವಾಕೇಂದ್ರಕ್ಕೆ ದೂರವಾಣಿ ಕರೆ ಮಾಡಿದೆನು. ಆಗ ಓರ್ವ ಸಾಧಕರು “ಅವರು ಕೆಳಗೆ ಹೋಗಿದ್ದಾರೆ” ಎಂದು ಹೇಳಿದರು. ಅವರು ಎರಡನೆಯ ಮಹಡಿಯಲ್ಲಿ ವಾಸಿಸುತ್ತಿದ್ದರು ಮತ್ತು ಸಾಮಾನ್ಯವಾಗಿ ಅವರು ಕೆಳಗೆ ಹೋಗುತ್ತಿರಲಿಲ್ಲ. ಈ ವಿಷಯದ ಬಗ್ಗೆ ಕೇಳಿದಾಗ ಸಾಧಕರು “ಪರಾತ್ಪರ ಗುರು ಡಾಕ್ಟರರ ತಂದೆಯವರು ದೇಹತ್ಯಜಿಸಿದ್ದಾರೆ ಮತ್ತು ಅವರು ಸ್ಮಶಾನಕ್ಕೆ ಹೋಗಿದ್ದಾರೆ” ಎಂದು ಹೇಳಿದರು.

೩ ಆ. ತಂದೆಯವರ ನಿಧನದ ಸಮಯದಲ್ಲಿ ಕರ್ತವ್ಯವನ್ನು ನಿರ್ವಹಿಸಿ ಗುರುಸೇವೆಗೆ ಆದ್ಯತೆಯನ್ನು ನೀಡುವ ಪರಾತ್ಪರ ಗುರು ಡಾ. ಆಠವಲೆ ! : ನಾನು ಹಿಂದಿನ ದಿನ ರಾತ್ರಿ ಅವರ ತಂದೆಯವರೊಂದಿಗೆ ಮಾತನಾಡಿದ್ದೆ. ಅವರು ಹೆಚ್ಚು ಮಾತನಾಡುತ್ತಿರಲಿಲ್ಲ. ಅವರು ಯಾವಾಗಲೂ ಕೈಯಲ್ಲಿ ಮಾಲೆಯನ್ನು ಹಿಡಿದುಕೊಂಡು ನಿರಂತರ ಜಪ ಮಾಡುತ್ತಿದ್ದರು; ಆದರೆ ಅವರಲ್ಲಿ ಬಹಳ ಪ್ರೇಮವಿತ್ತು ಮತ್ತು ಎಲ್ಲರನ್ನೂ ಆತ್ಮೀಯತೆಯಿಂದ ಮಾತನಾಡಿಸುತ್ತಿದ್ದರು. ಅವರ ನಿಧನದ ಸುದ್ದಿ ತಿಳಿದ ಬಳಿಕ ನಾನು ಮತ್ತು ನನ್ನ ಪತ್ನಿ ಕೂಡಲೇ ಸ್ಮಶಾನಕ್ಕೆ ಹೋದೆವು. ಅಲ್ಲಿನ ಎಲ್ಲ ಜನರು ಅಂತ್ಯವಿಧಿಯನ್ನು ಮುಗಿಸಿ ಸ್ಮಶಾನದಿಂದ ಹೊರಗೆ ಬರುತ್ತಿದ್ದರು. ಪ್ರವೇಶದ್ವಾರದಲ್ಲಿ ನನಗೆ ಪ.ಪೂ. ಡಾಕ್ಟರರ ಭೇಟಿಯಾಯಿತು. ಅವರು “ನೀವು ಬಂದಿದ್ದು ಬಹಳ ಒಳ್ಳೆಯದಾಯಿತು. ಪ.ಪೂ. ಬಾಬಾರವರು ಹೇಳಿದಂತೆ ನಾನು ೩ ದಿನ ಮುಂಬಯಿಯಲ್ಲಿಯೇ ಇದ್ದು, ಬಳಿಕ ಇಂದೂರಿಗೆ ಬರುತ್ತೇನೆ. ನೀವೆಲ್ಲರೂ ನಿಯೋಜನೆಯಾಗಿರುವಂತೆ ಇಂದೂರಿಗೆ ಹೋಗಿ” ಎಂದು ಹೇಳಿದರು. ಅವರ ಈ ಮಾತುಗಳನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಅವರು ತಮ್ಮ ತಂದೆಯ ಬಗ್ಗೆ ಏನನ್ನೂ ಮಾತನಾಡಲಿಲ್ಲ. ‘ಏನೂ ಆಗಿಯೇ ಇಲ್ಲ, ಎನ್ನುವ ಭಾವದಲ್ಲಿಯೇ ಅವರು ಸೇವೆ ಮತ್ತು ಅಧ್ಯಾತ್ಮ ಪ್ರಸಾರದ’ ಬಗ್ಗೆ ಮಾತನಾಡುತ್ತಿದ್ದರು. ‘ಸಾಧಕರು ಇಂತಹ ಪ್ರಸಂಗಗಳಲ್ಲಿಯೂ ಕರ್ತವ್ಯವನ್ನು ನಿರ್ವಹಿಸಿ ಹೇಗೆ ನಡೆದುಕೊಳ್ಳಬೇಕು ?’ ಎಂದು ಅವರು ತಮ್ಮ ಉದಾಹರಣೆಯಿಂದ ಕಲಿಸಿದರು.

೩ ಇ. ಪರಾತ್ಪರ ಗುರು ಡಾಕ್ಟರ್ ಆಠವಲೆಯವರು ತಮ್ಮ ತಾಯಿಯ ಅಂತ್ಯವಿಧಿಗಾಗಿ ನಿಲ್ಲಲು ಹೇಳದೇ ಸಾಧಕನಿಗೆ ಕಚೇರಿಗೆ ಹೋಗಲು ಹೇಳುವುದು : ನಾವು ಸೇವಾಕೇಂದ್ರಕ್ಕೆ ಹೋದಾಗ ಪರಾತ್ಪರ ಗುರು ಡಾ. ಆಠವಲೆಯವರ ತಾಯಿ ಪೂ. ತಾಯಿಯವರೊಂದಿಗೆ ಮನಮುಕ್ತವಾಗಿ ಮಾತನಾಡುತ್ತಿದ್ದೆವು. ಅವರಲ್ಲಿ ಬಹಳ ಪ್ರೇಮವಿತ್ತು ಮತ್ತು ಮನಮುಕ್ತವಾಗಿದ್ದರು. ನಮಗೆ ಅವರ ಬಗ್ಗೆ ಬಹಳ ಆತ್ಮೀಯತೆ ಇತ್ತು. ಅವರ ದೇಹತ್ಯಾಗವಾಗಿದೆ ಎಂದು ತಿಳಿದಾಗ ನಾನು ಕಚೇರಿಗೆ ಹೋಗುವ ಬದಲು ಅಂತ್ಯವಿಧಿಗಾಗಿ ಹೋದೆನು. ಅಲ್ಲಿಗೆ ಹೋದಾಗ, ಕೆಳಗೆ ಸಿದ್ಧತೆ ನಡೆದಿತ್ತು, ಎರಡನೇ ಮಹಡಿಯ ಮನೆಯಲ್ಲಿ ಪೂ. ತಾಯಿಯವರ ದರ್ಶನವನ್ನು ಪಡೆದುಕೊಂಡು ನಾನು ಅಂತ್ಯವಿಧಿಗಾಗಿ ಅಲ್ಲಿಯೇ ನಿಲ್ಲಲು ನಿರ್ಧರಿಸಿದೆನು.

ನಾನು ಅವರ ಮನೆಯ ಒಂದು ಕೋಣೆಗೆ ಹೋದಾಗ, ಆ ಕೋಣೆಯಲ್ಲಿ ಪರಾತ್ಪರ ಗುರು ಡಾಕ್ಟರರು ಭೇಟಿಯಾದರು. ಅವರು ‘ಇಂದು ನಿಮಗೆ ಕಚೇರಿ ಇದೆಯಲ್ಲವೇ ? ಈಗ ನೀವು ಕಚೇರಿಗೆ ಹೋದರೂ ಆಗಬಹುದು’ ಎಂದು ಹೇಳಿದರು. ಅದರಂತೆ ನಾನು ಕಚೇರಿಗೆ ಹೋದೆನು. ಪೂ. ತಾಯಿಯವರು ನಮ್ಮನ್ನು ಬಹಳ ಪ್ರೀತಿಸುತ್ತಿದ್ದರು. ಆದ್ದರಿಂದ ‘ಅಂತ್ಯವಿಧಿಗಾಗಿ ನನಗೆ ಕೊನೆಯವರೆಗೆ ನಿಲ್ಲಲು ಹೇಳಿದರೆ, ಒಳ್ಳೆಯದಾಗಿತ್ತು’ ಎಂಬ ವಿಚಾರವನ್ನು ಮಾಡುತ್ತಾ ನಾನು ಅಲ್ಲಿಗೆ ಹೋಗಿದ್ದೆ; ಆದರೆ ‘ನನ್ನ ಅರ್ಧ ದಿನದ ರಜೆಯನ್ನು ಉಳಿಸಿ, ಆ ಸಮಯವನ್ನು ನಾನು ಅಧ್ಯಾತ್ಮ ಪ್ರಸಾರಕ್ಕಾಗಿ ವಿನಿಯೋಗಿಸಬೇಕು’ ಎನ್ನುವುದು ಪರಾತ್ಪರ ಗುರು ಡಾ. ಆಠವಲೆಯವರ ಅಪೇಕ್ಷೆಯಾಗಿತ್ತು. ಈ ಕಾರಣದಿಂದ ಅವರು ನನಗೆ ಕಚೇರಿಗೆ ಹೋಗುವಂತೆ ಹೇಳಿದರು. ಅವರು ಸಾಧಕರಿಗೆ ಭಾವನೆಯಲ್ಲಿ ಸಿಲುಕಿಕೊಳ್ಳಲು ಬಿಡುತ್ತಿರಲಿಲ್ಲ. ಈ ರೀತಿಯಿಂದ ಅವರು ತಮ್ಮ ಉದಾಹರಣೆಯಿಂದ ಸಾಧಕರಿಗೆ ಕಲಿಸುತ್ತಿದ್ದರು.

೪. ಸಾಧಕರ ಹುಟ್ಟುಹಬ್ಬವನ್ನು ಆಧ್ಯಾತ್ಮಿಕ ಸ್ತರದಲ್ಲಿ ಮತ್ತು ಆತ್ಮೀಯತೆಯಿಂದ ಆಚರಿಸುವುದು

ಸಾಕ್ಷಾತ್ ಶ್ರೀವಿಷ್ಣುಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರ ಹುಟ್ಟುಹಬ್ಬ ಮೇ ೬ ರಂದು ಇರುತ್ತಿತ್ತು. ಆ ದಿನ ನಾವು ಅವರಿಗಾಗಿ ಏನನ್ನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವರಿಗೆ ಇತರರಿಂದ ಯಾವುದೇ ಅಪೇಕ್ಷೆಯಿರಲಿಲ್ಲ ಮತ್ತು ಅವರಿಗೆ ಅವರ ವಿಷಯದಲ್ಲಿ ಔಪಚಾರಿಕತೆಯೂ ಇಷ್ಟವಾಗುತ್ತಿರಲಿಲ್ಲ. ನಾವು ಕೇವಲ ನಮಸ್ಕಾರವನ್ನು ಮಾಡಿ ಅವರಿಗೆ ಶುಭೇಚ್ಛೆಯನ್ನು ನೀಡುತ್ತಿದ್ದೆವು. ಅವರು ಮಾತ್ರ ನಮ್ಮ ಸಾಧನೆಯಾಗಲು ಯಾವುದೇ ವಿಷಯವನ್ನು ಬಾಕಿ ಉಳಿಸಲಿಲ್ಲ. ಉದಾ. ೯ ಅಕ್ಟೋಬರ್‌ರಂದು ನನ್ನ ಮತ್ತು ಶ್ರೀ. ದಿನೇಶ ಶಿಂದೆಯವರ ಜನ್ಮ ದಿನವಾಗಿತ್ತು. ಬಾಲ್ಯವು ಹಳ್ಳಿಯಲ್ಲಿ ಕಳೆದಿದ್ದರಿಂದ ‘ಹುಟ್ಟುಹಬ್ಬವನ್ನು ಆಚರಿಸುವುದಿರುತ್ತದೆ’ ಎನ್ನುವುದೂ ನನಗೆ ತಿಳಿದಿರಲಿಲ್ಲ; ಆದರೆ ಪ್ರತಿವರ್ಷ ಪರಾತ್ಪರ ಗುರು ಡಾ. ಆಠವಲೆಯವರು ನಮ್ಮಿಬ್ಬರ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದರು. ಅವರು ಸಾಧಕಿಯರಿಂದ ನಮ್ಮ ಆರತಿಯನ್ನು ಮಾಡಿಸುತ್ತಿದ್ದರು. ನಮಗೆ ತಿಂಡಿಗಳನ್ನು ಕೊಡುತ್ತಿದ್ದರು, ಆ ದಿನ ಸೇವಾಕೇಂದ್ರದಲ್ಲಿ ಸಿಹಿ ಪದಾರ್ಥವನ್ನು ಮಾಡುತ್ತಿದ್ದರು. ನಮ್ಮ ಛಾಯಾಚಿತ್ರವನ್ನು ತೆಗೆಯಲು ಹೇಳುತ್ತಿದ್ದರು ಮತ್ತು ನಮ್ಮನ್ನು ಪ್ರಶಂಸಿಸುತ್ತಿದ್ದರು. ಶ್ರೀಮಂತ ಮತ್ತು ಪ್ರತಿಷ್ಠಿತ ವ್ಯಕ್ತಿ ತಮ್ಮ ಮಕ್ಕಳ ಹುಟ್ಟುಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಿರಬಹುದು; ಆದರೆ ಪರಾತ್ಪರ ಗುರು ಡಾಕ್ಟರರು ನಮ್ಮ ಹುಟ್ಟುಹಬ್ಬವನ್ನು ಆಧ್ಯಾತ್ಮಿಕ ಸ್ತರದಲ್ಲಿ ಮತ್ತು ಆತ್ಮೀಯತೆಯಿಂದ ಆಚರಿಸುತ್ತಿದ್ದರು. ಸಾಧಕರಿಗಾಗಿ ಪ್ರತಿಯೊಂದು ವಿಷಯವನ್ನು ಅವರು ಈ ರೀತಿ ಮಾಡುತ್ತಿದ್ದರು. ಅವರ ಚರಣಗಳಲ್ಲಿ ಎಷ್ಟು ಕೃತಜ್ಞತೆ ವ್ಯಕ್ತಪಡಿಸಿದರೂ, ಕಡಿಮೆಯೇ !

೪ ಅ. ಸಾಧಕರ ಹುಟ್ಟುಹಬ್ಬದ ದಿನ ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಂದ ಪ.ಪೂ. ರಾಮಾನಂದ ಮಹಾರಾಜರ ಆಶೀರ್ವಾದವನ್ನು ಪಡೆದು ಪ್ರಸಾರಕ್ಕಾಗಿ ಹೋಗುವಂತೆ ಹೇಳುವುದು ಮತ್ತು ಅವರ ಆಶೀರ್ವಾದಿಂದಲೇ ಸಾಧಕರಿಂದ ಅವರಿಗೆ ಅಪೇಕ್ಷಿತವಿರುವಂತೆ ಸೇವೆಯಾಗುವುದು : ೧೯೯೬ ರಲ್ಲಿ ನನ್ನ ೫೦ ನೇ ಹುಟ್ಟುಹಬ್ಬದ ದಿನದಂದು ಪ.ಪೂ. ರಾಮಾನಂದ ಮಹಾರಾಜರು (ಪ.ಪೂ. ಭಕ್ತರಾಜ ಮಹಾರಾಜರ ಉತ್ತರಾಧಿಕಾರಿ) ಪರಾತ್ಪರ ಗುರು ಡಾಕ್ಟರರ ಮನೆಗೆ ಬಂದಿದ್ದರು. ಪರಾತ್ಪರ ಗುರು ಡಾಕ್ಟರರು ನಮ್ಮಿಂದ ಪ.ಪೂ. ರಾಮಾನಂದ ಮಹಾರಾಜರ ಪಾದಪೂಜೆಯನ್ನು ಮಾಡಿಸಿಕೊಂಡರು. ಪರಾತ್ಪರ ಗುರು ಡಾಕ್ಟರ್ ಮತ್ತು ಪ.ಪೂ. ರಾಮಾನಂದ ಮಹಾರಾಜರ ಆಶೀರ್ವಾದವನ್ನು ಪಡೆದುಕೊಂಡು ನಾನು ಸೋಲಾಪುರಕ್ಕೆ ಮೊದಲ ಬಾರಿಗೆ ಅಧ್ಯಾತ್ಮ ಪ್ರಸಾರಕ್ಕೆ ಹೋದೆನು. ಅವರ ಆಶೀರ್ವಾದ ಮತ್ತು ಸಂಕಲ್ಪದಿಂದ ಅವರು ನನ್ನಿಂದ ಅವರಿಗೆ ಅಪೇಕ್ಷಿತವಿರುವಂತಹ ಸೇವೆಯನ್ನು ಮಾಡಿಸಿಕೊಂಡರು.

೫. ಸಾಧಕರಿಗೆ ಸತ್ಸಂಗದಲ್ಲಿ ಮಾರ್ಗದರ್ಶನ ಮಾಡುವುದು

೩.೫.೧೯೯೬ ರಂದು ಪರಾತ್ಪರ ಗುರು ಡಾ. ಆಠವಲೆಯವರು ಮಾನಖುರ್ದ(ಮುಂಬಯಿ)ದಲ್ಲಿ ಹಿಂದಿಯಲ್ಲಿ ನಡೆಯುವ ಸತ್ಸಂಗಕ್ಕೆ ಭೇಟಿ ನೀಡಲು ಬಂದಿದ್ದರು. ಆ ದಿನ ನಮ್ಮ ಮನೆಗೆ ಅವರ ಚರಣಕಮಲಗಳ ಸ್ಪರ್ಶವಾಯಿತು. ಆದರೆ ಅವರು ನನಗೆ ಸಾಂಗ್ಲಿಗೆ ಗುರುಪೂರ್ಣಿಮೆಯ ಸಭೆಗೆ ಕಳುಹಿಸಿದ್ದರು. ತದನಂತರದ ಸತ್ಸಂಗದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಮುಂದಿನ ಮಾರ್ಗದರ್ಶನ ಮಾಡಿದರು.

೫ ಅ. ಸಂಸಾರದಲ್ಲಿದ್ದು ಸಾಧನೆಯನ್ನು ಮಾಡುವುದೆಂದರೆ, ಸಮಸ್ಯೆಗಳು ಮತ್ತು ತೊಂದರೆಗಳು ಬಂದೇ ಬರುತ್ತವೆ. ಮನೆಯಲ್ಲಿನ ಮಾನಸಿಕ ಒತ್ತಡದಿಂದ ಬಹಳಷ್ಟು ಆಧ್ಯಾತ್ಮಿಕ ಶಕ್ತಿ ವ್ಯಯವಾಗುತ್ತದೆ; ಆದುದರಿಂದ ಹಿಂದಿನ ಕಾಲದಲ್ಲಿ ಜನರು ಅರಣ್ಯಕ್ಕೆ ಹೋಗುತ್ತಿದ್ದರು.

೫ ಆ. ಸಂಸಾರದಲ್ಲಿದ್ದು ಸಾಧನೆಯನ್ನು ಮಾಡುವಾಗ ಯಾರ ಪ್ರಕೃತಿದೋಷದ ಕಡೆಗೆ ಗಮನವಿಡಬಾರದು. ಅದರ ಬದಲು ತಮ್ಮ ಸಾಧನೆಯ ಪುರುಷತತ್ವದ (ಕರ್ತೃತ್ವದ) ಸೆಳೆತವಿರಬೇಕು.

೫ ಇ. ಸಾಧನೆಯಲ್ಲಿ ಕ್ರಿಯಮಾಣವನ್ನು ಉಪಯೋಗಿಸಿ ಪ್ರಾರಬ್ಧವನ್ನು ಜಯಿಸಲು ಸಾಧ್ಯವಾಗುತ್ತದೆ ! : ಒಬ್ಬ ಮನುಷ್ಯನು ಬಹಳ ಶ್ರೀಮಂತನಾಗಿದ್ದನು. ಅವನ ಐಹಿಕ ಜೀವನ ಬಹಳ ಚೆನ್ನಾಗಿತ್ತು. ಅವನು ಮನೆಯ ಹೊರಗೆ ಹೋದಾಗ ಹುಲಿಯಂತೆ ವರ್ತಿಸುತ್ತಿದ್ದನು; ಆದರೆ ಮನೆಯಲ್ಲಿ ಬಂದಾಗ ಅವನು ಕುರಿಯಂತೆ ಇದ್ದನು, ಏಕೆಂದರೆ ಅವನ ಪತ್ನಿ ದೊಡ್ಡ ಜಗಳಗಂಟಿಯಾಗಿದ್ದಳು. ಸಾಧನೆಯನ್ನು ಮಾಡಲು ಸಾಧ್ಯವಾಗುವುದಿಲ್ಲವೆಂದು ಅವನಿಗೆ ಬಹಳ ದುಃಖವಾಗುತ್ತಿತ್ತು. ಓರ್ವ ಸಂತರು ಅವನ ಮನೆಗೆ ಬಂದರು ಮತ್ತು ಅವನಿಗೆ ಒಂದು ‘ಕಂಬವನ್ನು ಗಟ್ಟಿಯಾಗಿ ಹಿಡಿದುಕೊ ಮತ್ತು ಏನು ಮಾಡಿದರೂ ಬಿಡಬೇಡ, ಆ ಸಮಯದಲ್ಲಿ “ನನ್ನನ್ನು ಬಿಡಿಸಿರಿ, ನನ್ನನ್ನು ಬಿಡಿಸಿರಿ ! ಎಂದು ಕೂಗುವಂತೆ ಹೇಳಿದರು. ಎಲ್ಲಿಯವರೆಗೆ ನಿನ್ನನ್ನು ಯಾರೂ ಬಿಡಿಸುವುದಿಲ್ಲವೋ ಅಲ್ಲಿಯವರೆಗೆ ಹೀಗೆ ಮಾಡು ಎಂದು ಹೇಳಿದರು. ಬಹಳಷ್ಟು ಸಮಯದವರೆಗೆ ಅವನು ತಾನೇ ಕಂಬವನ್ನು ಗಟ್ಟಿಯಾಗಿ ಹಿಡಿದುಕೊಂಡು ಬಹಳಷ್ಟು ಕೂಗುತ್ತಿದ್ದನು. ಜನರು ಬಂದು ನೋಡಿ ಹೋಗುತ್ತಿದ್ದರು. ‘ಅವನನ್ನು ಯಾರೂ ಕಟ್ಟಿರಲಿಲ್ಲ, ಹೀಗಿರುವಾಗ ಅವನನ್ನು ಯಾರು ಬಿಡಿಸಬೇಕು ? ಅವನು ಹುಚ್ಚನಂತೆ ವರ್ತಿಸುತ್ತಿದ್ದಾನೆ ಎಂದು ಹೇಳುತ್ತ ನಗುತ್ತ ಅವರು ಮುಂದೆ ಹೋಗುತ್ತಿದ್ದರು. ಆಗ ಅವನಿಗೆ “ನಮ್ಮನ್ನು ನಾವೇ ಮಾಯೆಯ ಬಂಧನದಿಂದ ಕಟ್ಟಿಕೊಂಡಿದ್ದೇವೆ ನಮ್ಮನ್ನು ನಾವೇ ಅಂತರ್ಮುಖರಾಗಿ ನೋಡಬೇಕು. ಪ್ರಾರಬ್ಧಕ್ಕನುಸಾರ ವಿಷಯಗಳು ನಡೆಯುತ್ತಿರುತ್ತವೆ; ಆದರೆ ನಮ್ಮ ಕ್ರಿಯಮಾಣವನ್ನು ಉಪಯೋಗಿಸಿ ಗುರುಕೃಪೆಯಿಂದ ವಿಜಯವನ್ನು ಸಾಧಿಸಬಹುದು” ಎಂಬುವುದರ ಅರಿವಾಯಿತು.

೬. ಸಾಧಕರ ಆಧ್ಯಾತ್ಮಿಕ ತೊಂದರೆಯನ್ನು ದೂರಗೊಳಿಸಲು ಮಾರ್ಗದರ್ಶನ ಮಾಡಿ ಅವರಿಂದ ಸಾಧನೆಯನ್ನು ಮಾಡಿಸಿಕೊಳ್ಳುವ ಪರಾತ್ಪರ ಗುರು ಡಾಕ್ಟರರು !

೬ ಅ. ಆಧ್ಯಾತ್ಮಿಕ ಸ್ತರದಲ್ಲಿ ಮಾರ್ಗದರ್ಶನ ಮಾಡಿ ಕೌಟುಂಬಿಕ ಜೀವನದಲ್ಲಿನ ತೊಂದರೆಗಳನ್ನು ದೂರಗೊಳಿಸುವುದು : ಪರಾತ್ಪರ ಗುರು ಡಾಕ್ಟರರು ಪ್ರಾರಂಭದಿಂದಲೇ ಆಧ್ಯಾತ್ಮಿಕ ತೊಂದರೆಯ ತೀವ್ರತೆಯನ್ನು ನೋಡಿ ನನಗೆ ಮತ್ತು ಪತ್ನಿಗೆ ಕೌಟುಂಬಿಕ ಪ್ರಶ್ನೆಗಳ ಬಗ್ಗೆ ಆಧ್ಯಾತ್ಮಿಕ ಸ್ತರದಲ್ಲಿ ವಿಶ್ಲೇಷಣೆಯನ್ನು ಮಾಡಿ ಉಪಾಯವನ್ನು ಹೇಳುತ್ತಿದ್ದರು. ಇದರಿಂದ ನಮ್ಮ ಮೇಲೆರಗಿದ ಅನೇಕ ಸಂಕಟಗಳು ದೂರವಾದವು. ಸ್ವಭಾವದೋಷ ಮತ್ತು ಪ್ರಾರಬ್ಧದಿಂದ ಹಾಳಾಗುತ್ತಿದ್ದ ಕೌಟುಂಬಿಕ ಜೀವನ ಅವರ ಕೃಪೆಯಿಂದಲೇ ರಕ್ಷಿಸಲ್ಪಟ್ಟಿತು. ಅವರು ನನ್ನ ಜೀವನದಲ್ಲಿ ಬರದಿದ್ದರೆ, ನನ್ನ ಜೀವನ ಆಗಲೇ ಮುಗಿದಿರುತ್ತಿತ್ತು; ಆದರೆ ಅವರು ನಮ್ಮನ್ನು ಬದುಕಿಸಿದ್ದಲ್ಲದೇ ಜಾಗೃತಗೊಳಿಸಿದರು ಮತ್ತು ಸಾಧನೆಯ ಸಂಜೀವಿನಿಯನ್ನು ನೀಡಿ ಜನ್ಮ-ಮರಣದ ಚಕ್ರದಿಂದ ಹೊರತೆಗೆದರು.

ಅವರು ನಮಗೆ ಅಧ್ಯಾತ್ಮ ಮತ್ತು ಸತ್ಸಂಗದ ಬಗ್ಗೆ ಕಲಿಸಿದರು. ಇದರಿಂದ ನನ್ನ ಪತ್ನಿ “ಪರಾತ್ಪರ ಗುರು ಡಾ. ಆಠವಲೆಯವರು ನನಗೆ ಸತ್ಸಂಗವನ್ನು ತೆಗೆದುಕೊಳ್ಳಲು ಕಲಿಸಿದರು, ಸಾಧನೆಯನ್ನು ಕಲಿಸಿದರು. ನನ್ನ ಚರ್ಮದಿಂದ ಚಪ್ಪಲಿಗಳನ್ನು ಮಾಡಿ ಅವರಿಗೆ ನೀಡಿದರೂ, ಅವರ ಉಪಕಾರವನ್ನು ನಾನು ತೀರಿಸಲು ಸಾಧ್ಯವಿಲ್ಲ” ಎಂದು ಹೇಳುತ್ತಾಳೆ.

೬ ಆ. ವಿವಿಧ ಆಧ್ಯಾತ್ಮಿಕ ಉಪಾಯಗಳನ್ನು ಹೇಳಿ ಅದನ್ನು ಅವರು ಮಾಡಿಸಿಕೊಳ್ಳುವುದು : ಪ್ರಾರಂಭದಿಂದಲೇ ಪರಾತ್ಪರ ಗುರು ಡಾಕ್ಟರರು ನನಗೆ ಆಧ್ಯಾತ್ಮಿಕ ಉಪಾಯಗಳನ್ನು ಮಾಡಲು ಹೇಳುತ್ತಿದ್ದರು. ಉದಾ : ಮನೆಯಲ್ಲಿ ತುಪ್ಪದ ದೀಪವನ್ನು ಹಚ್ಚುವುದು, ಮನೆಯಲ್ಲಿ ಊದುಬತ್ತಿಯನ್ನು ಹಚ್ಚುವುದು, ಪ.ಪೂ. ಭಕ್ತರಾಜ ಮಹಾರಾಜರ ಭಜನೆಗಳನ್ನು ಹಚ್ಚಿಡುವುದು. ಎಪ್ರಿಲ್ ೧೯೯೮ ರಲ್ಲಿ ಪರಾತ್ಪರ ಗುರು ಡಾಕ್ಟರರು ನನಗೆ ಮತ್ತು ಪತ್ನಿಗೆ ಮೂರು ತಿಂಗಳವರೆಗೆ ‘ದಿಗಂಬರಾ ದಿಗಂಬರಾ ಶ್ರೀಪಾದ ವಲ್ಲಭ ದಿಗಂಬರಾ” ಈ ಜಪವನ್ನು ಮಾಡಲು ಹೇಳಿದ್ದರು. ಹಾಗೆಯೇ ಕುಲದೇವತೆಯ ನಾಮಸ್ಮರಣೆಯೊಂದಿಗೆ ‘ಶ್ರೀ ಗುರುದೇವ ದತ್ತ |’ ಈ ಜಪವನ್ನು ೩ ಮಾಲೆಯಷ್ಟು ಮಾಡಲು ಹೇಳಿದ್ದರು. ಗುರುದೇವರ ಗಮನ ಸತತವಾಗಿ ನನ್ನೆಡೆಗೆ ಇರುತ್ತದೆ. ಅವರ ಸಂರಕ್ಷಕ ಕವಚದಿಂದಲೇ ಇಲ್ಲಿಯವರೆಗೆ ನಾನು ಆನಂದದಿಂದ ಜೀವಿಸುತ್ತಿದ್ದೇನೆ.

೬ ಇ. ಪ.ಪೂ. ಜೋಶಿ ಬಾಬಾರವರ ಬಳಿಗೆ ಕಳುಹಿಸಿ ದೊಡ್ಡ ಸಂಕಟದಿಂದ ರಕ್ಷಿಸುವುದು : ೧೯೯೮ ರಲ್ಲಿ ಪ.ಪೂ. ದತ್ತಾತ್ರೆಯ ಜೋಶಿ ಬಾಬಾರವರು ದೇಹತ್ಯಾಗ ಮಾಡಿದ ಬಳಿಕ ಅವರ ಪುತ್ರ ಪ.ಪೂ. ವಿಜಯ ಜೋಶಿ ಬಾಬಾರ ಬಳಿಗೆ ಪರಾತ್ಪರ ಗುರು ಡಾಕ್ಟರರು ಸಾಧಕರನ್ನು ಮತ್ತು ನನ್ನನ್ನು ಕಳುಹಿಸಿದರು. ೨೦೦೦ ರಲ್ಲಿ ನನಗೆ ಹೃದಯದ ತೊಂದರೆಗಳು ಪ್ರಾರಂಭವಾದವು. ಆ ಸಮಯದಲ್ಲಿ ಅವರೇ ನನಗೆ ಪ.ಪೂ. ಜೋಶಿ ಬಾಬಾರವರಿಂದ ಉಪಾಯವನ್ನು ತೆಗೆದುಕೊಳ್ಳಲು ಹೇಳಿ ನನ್ನನ್ನು ದೊಡ್ಡ ಸಂಕಟದಿಂದ ರಕ್ಷಿಸಿದರು; ಏಕೆಂದರೆ ಆ ಸಮಯದಲ್ಲಿ ನನ್ನ ಮೇಲೆ ಬಲಾಢ್ಯ ಕೆಟ್ಟ ಶಕ್ತಿಗಳು ದೊಡ್ಡ ಆಕ್ರಮಣವನ್ನು ಮಾಡಿದ್ದವು.

೭. ಸಾಧಕರಿಗೆ ಅವರಲ್ಲಿರುವ ಸ್ವಭಾವದೋಷಗಳನ್ನು ತೋರಿಸಿ ಸಾಧನೆಯಲ್ಲಿ ಎಲ್ಲ ರೀತಿಯಿಂದಲೂ ಸಹಾಯ ಮಾಡುವುದು

ನಾನು ಮುಂಬಯಿ ಜಿಲ್ಲೆ ಮತ್ತು ಸೋಲಾಪುರದಲ್ಲಿ ಪ್ರಸಾರ ಕಾರ್ಯದ ಸೇವೆಯನ್ನು ಮಾಡುತ್ತಿದ್ದೆನು. ಸ್ವಭಾವದೋಷ ಮತ್ತು ಅಹಂನಿಂದಾಗಿ ನನ್ನಿಂದ ಬಹಳ ತಪ್ಪುಗಳಾಗುತ್ತಿದ್ದವು. ನನಗೆ ಸೇವೆಯಲ್ಲಿ ಆನಂದ ಸಿಗುತ್ತಿರಲಿಲ್ಲ. ಒಮ್ಮೆ ನಾನು ಮತ್ತು ಶ್ರೀ. ಮಾಧವ ದೇಶಪಾಂಡೆಯವರು (ವರಳಿ (ಮುಂಬಯಿ) ಎಂಬಲ್ಲಿರುವ ಸಾಧಕರು) ಪರಾತ್ಪರ ಗುರು ಡಾ. ಆಠವಲೆಯವರ ಬಳಿಗೆ ಹೋದಾಗ ಅವರು ನಮಗೆ ಮುಂದಿನ ಮಾರ್ಗದರ್ಶನವನ್ನು ಮಾಡಿದರು.

ಅ. ಪ್ರಸಾರದ ಬಗ್ಗೆ ನಮ್ಮ ಅಭಿಪ್ರಾಯವನ್ನು ಹೇಳದೇ, ಅದನ್ನು ಸಾಕ್ಷಿಭಾವದಿಂದ ನೋಡಿ ವರದಿಯನ್ನು ನೀಡಬೇಕು ಮತ್ತು ಕೇಳಿದ್ದಕ್ಕಷ್ಟೇ ಉತ್ತರಿಸಬೇಕು.

ಆ.’ಇದು ನಮ್ಮ ಕಾರ್ಯವಾಗಿದೆ’, ಎಂದು ತಿಳಿದುಕೊಂಡು ಆತ್ಮೀಯತೆಯಿಂದ ಸತ್ಸೇವೆಯನ್ನು ಮಾಡಬೇಕು.

ಇ. ಶ್ರೀ. ತನಪುರೆ ಮತ್ತು ಶ್ರೀ. ಬಬನ ವಾಳುಂಜ ಇವರಂತೆ ಪ್ರೇಮಭಾವ ಹೊಂದಿರಬೇಕು. ಅಧ್ಯಾತ್ಮವೆಂದರೆ ಜನರನ್ನು ಸೇರಿಸುವುದು, ಈಶ್ವರನ ಬಳಿಗೆ ಹೋಗುವುದು. ಇದಕ್ಕಾಗಿ ಪ್ರೇಮಭಾವ ಹೆಚ್ಚಿಸಬೇಕು.

ಈ. ಸೂಕ್ಷ್ಮದಲ್ಲಿನ ವಿಷಯ ಹಾಗೂ ಅವುಗಳ ಭಾವಾರ್ಥ ತಿಳಿಯಬೇಕು.

ಉ. ಪ್ರಶ್ನೆಗಳಿಗೆ ಉತ್ತರ ಸಿಗುವವರೆಗೆ, ತೊಂದರೆಗಳು ದೂರವಾಗುವವರೆಗೆ ಮತ್ತು ಯಶಸ್ಸು ದೊರೆಯುವವರೆಗೆ ಪ್ರಯತ್ನಿಸಬೇಕು.

ಊ. ಎಲ್ಲ ಸಾಧಕರು ಒಟ್ಟಿಗೆ ಬಂದು ಕಲಿಯಬೇಕು.

ಎ. ಸಹಸಾಧಕ ಶ್ರೀ. ಮಾಧವ ದೇಶಪಾಂಡೆಯವರಿಂದ ಕೇಳಿ ಕಲಿಯಿರಿ.

ಏ. ಈಗ ನಿಮ್ಮ ನಕಾರಾತ್ಮಕ ಭಾಗ ಮುಗಿದಿದೆ. ಮುಂದಿನ ಎರಡು ತಿಂಗಳುಗಳಲ್ಲಿ ಮನಸ್ಸು ಸಕಾರಾತ್ಮಕವಾಗುವುದು.

೮. ಮುಂಬಯಿಯ ಅಧ್ಯಾತ್ಮ ಪ್ರಸಾರದ ಬಗ್ಗೆ ಮಾಡಿದ ಮಾರ್ಗದರ್ಶನ

ಸತ್ಸಂಗವನ್ನು ಹೆಚ್ಚಿಸಬೇಕು. ಯುವಕರ ಕಡೆಗೆ ಗಮನ ಕೊಡಬೇಕು. ಆ ಸಾಧಕರಲ್ಲಿ ಹೆಚ್ಚಳವಾಗಬೇಕು. ೨೦೦೦ ನೇ ಇಸವಿಯವರೆಗೆ ದೈನಿಕ ‘ಸನಾತನ ಪ್ರಭಾತದ ಮುಂಬಯಿ, ಠಾಣೆ ಮತ್ತು ರಾಯಗಡ ಆವೃತ್ತಿ ಪ್ರಾರಂಭವಾಗುವುದು. ಪ್ರಸಾರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸ್ಕೂಟರ್‌ಗಳು ಬೇಕಾಗಬಹುದು. ರೈಲಿನಿಂದ ಸಂಚಿಕೆಗಳನ್ನು ಕಳುಹಿಸಬಹುದು.

೯. ಪರಾತ್ಪರ ಗುರು ಡಾಕ್ಟರರು ಅವತಾರಿ ಪುರುಷರಾಗಿರುವ ಬಗ್ಗೆ ಸಾಧಕರಿಗೆ ಬಂದ ಅನುಭೂತಿ !

೯ ಅ. ಸಾಮಾನ್ಯ ವ್ಯಕ್ತಿಯನ್ನು ಸಾಧನೆಯಲ್ಲಿ ತೊಡಗಿಸಿ ತಮ್ಮ ಅವತಾರತ್ವವನ್ನು ಸಿದ್ಧಪಡಿಸುವ ಪರಾತ್ಪರ ಗುರು ಡಾ. ಆಠವಲೆ ! : ಪರಾತ್ಪರ ಗುರು ಡಾಕ್ಟರರು ನನ್ನಂತಹ ಸಾಮಾನ್ಯ ವ್ಯಕ್ತಿಯನ್ನು ಸಾಧನೆಯಲ್ಲಿ ತೊಡಗಿಸಿ ಸಾಧನೆಯನ್ನು ಮಾಡಿಸಿಕೊಂಡರು. ಇದಕ್ಕಾಗಿ ಅವರು ಅಪಾರ ಶ್ರಮವಹಿಸಿದರು. ಒಳ್ಳೆಯ ಜಾಣ ವಿದ್ಯಾರ್ಥಿಗೆ ಕಲಿಸಿ ಯಾರು ಬೇಕಾದರೂ ಉನ್ನತ ದರ್ಜೆಯಲ್ಲಿ ತೇರ್ಗಡೆಯಾಗುವಂತೆ ಮಾಡಬಹುದು; ಆದರೆ ‘ದಡ್ಡ ವಿದ್ಯಾರ್ಥಿಗೆ ಕಲಿಸಿ ಅವನನ್ನು ಉನ್ನತ ದರ್ಜೆಯಲ್ಲಿ ತೇರ್ಗಡೆ ಮಾಡುವುದು’ ಎಷ್ಟು ಕಠಿಣವಾಗಿರುತ್ತದೆಯೋ, ಇದು ಕೂಡ ಅಷ್ಟೇ ಕಠಿಣವಾಗಿದೆ. ಸಾಕ್ಷಾತ್ ಭಗವಂತನೇ ಸಂತ ಜನಾಬಾಯಿಯ ಬಟ್ಟೆಗಳನ್ನು ತೊಳೆದನು; ಧಾನ್ಯ ಬೀಸಿದನು; ಶ್ರೀಖಂಡ್ಯಾ ಆಗಿ ಸಂತ ಏಕನಾಥ ಮಹಾರಾಜರ ಮನೆಯಲ್ಲಿ ಚಾಕರಿ ಮಾಡಿದನು. ಭಗವಂತನೇ ಮಾತ್ರ ಇಷ್ಟು ಕೆಳಗಿನಸ್ತರಕ್ಕೆ ಬಂದು (ಅವತರಿಸಿ) ಕಾರ್ಯವನ್ನು ಮಾಡಬಲ್ಲನು. ಅವನೇ ಮಾಡಬಲ್ಲನು; ಆದ್ದರಿಂದಲೇ ಅವನು ಅವತಾರಿ ಆಗಿರುತ್ತಾನೆ. ಮುಂದಿನ ಪ್ರಸಂಗದಿಂದ ‘ಪರಾತ್ಪರ ಗುರು ಡಾಕ್ಟರರು ಹೇಗೆ ಅವತಾರಿ ಪುರುಷರು ? ಎಂದು ನನಗೆ ಕಲಿಯಲು ಸಿಕ್ಕಿತು.

೯ ಆ. ಪರಾತ್ಪರ ಗುರು ಡಾ. ಆಠವಲೆಯವರ ಪ್ರೀತಿಯನ್ನು ಅನುಭವಿಸಿದ ಕುರಿತು

೯ ಆ ೧. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರು ಸೇವೆಯನ್ನು ಮಾಡುತ್ತಿರುವಾಗ ಅವರು ಚಹಾ ಕುಡಿದ ಖಾಲಿ ಲೋಟಗಳನ್ನು ಅಡುಗೆ ಮನೆಗೆ ತೆಗೆದುಕೊಂಡು ಹೋಗಿಡುವುದು : ನಾನು ಮತ್ತು ಶ್ರೀ. ಪ್ರಹ್ಲಾದ ನೇಮಾಡೆ ಪರಾತ್ಪರ ಗುರು ಡಾ. ಆಠವಲೆಯವರು ಹೇಳಿದಂತೆ ಸೇವಾ ಕೇಂದ್ರದಲ್ಲಿ ಸೇವೆಯನ್ನು ಮಾಡುತ್ತಿದ್ದೆವು. ಶ್ರೀ. ನೇಮಾಡೆಯವರು ಸ್ಟೇಟ್ ಬ್ಯಾಂಕಿನಲ್ಲಿ ಸಹಾಯಕ ವ್ಯವಸ್ಥಾಪಕರಾಗಿದ್ದರು. ನಾವು ಇಬ್ಬರೂ ಚಹಾ ಕುಡಿದ ಬಳಿಕ ಲೋಟಗಳನ್ನು ಹತ್ತಿರದಲ್ಲಿ ಇಟ್ಟೆವು ಮತ್ತು ಕೆಲವು ನಿಮಿಷಗಳಲ್ಲಿಯೇ ನಮ್ಮ ಸೇವೆಯ ವಿಷಯದಲ್ಲಿನ ಮಾತುಕತೆ ಮುಗಿದ ಬಳಿಕ ನಾವು ಲೋಟಗಳನ್ನು ಅಡುಗೆ ಮನೆಯಲ್ಲಿ ಇಡಲು ಹೋಗುವವರಿದ್ದೆವು. ಅಷ್ಟರಲ್ಲಿಯೇ ಪರಾತ್ಪರ ಗುರು ಡಾಕ್ಟರರು ಬಂದರು ಮತ್ತು ಅವರು ಎರಡೂ ಖಾಲಿ ಲೋಟಗಳನ್ನು ತೆಗೆದುಕೊಂಡು ಹೋದರು. ‘ನಾವು ತೆಗೆದುಕೊಂಡು ಹೋಗುವವರಿದ್ದೆವು’, ಎಂದು ಹೇಳುವಷ್ಟರಲ್ಲಿಯೇ ಅವರು “ನಾನು ಅಡುಗೆಮನೆಯ ಕಡೆಗೆ ಹೋಗುವವನಿದ್ದೇನೆ. ನೀವು ಸೇವೆಯನ್ನು ಮುಂದುವರಿಸಿರಿ” ಎಂದು ಹೇಳಿದರು. ಆಗ ನಮಗೆ ಬಹಳ ಕೆಟ್ಟದೆನಿಸಿತು. ಆಗ ನಮಗೆ ನಮ್ಮಲ್ಲಿ ‘ತತ್ಪರತೆ ಇಲ್ಲದಿರುವುದು, ನಮ್ಮ ಸೇವೆಯೆ ಮಹತ್ವದೆಂದು ಅನಿಸುವುದು’ ಇತ್ಯಾದಿ ಸ್ವಭಾವದೋಷಗಳ ಅರಿವಾಯಿತು. ಇದರಿಂದ ‘ಸಾಧಕರು ಸಾಧಕರಿಗೆ ಹೇಗೆ ಸಹಾಯ ಮಾಡಬೇಕು ?’, ಎಂಬುದನ್ನು ಅವರು ತಮ್ಮ ಕೃತಿಯಿಂದ ಕಲಿಸಿದರು. ಇಂತಹ ನೆನಪುಗಳು ಬಂದಾಗಲೆಲ್ಲ ನನಗೆ ಪ.ಪೂ. ಭಕ್ತರಾಜ ಮಹಾರಾಜರು ಹಾಡಿರುವ ‘(ನಾನು ನಿನ್ನ ಸೇವೆಯನ್ನು ಮಾಡಲಿಲ್ಲ, ನನ್ನ ಜೀವಕ್ಕೆ ದುಃಖವಾಗುತ್ತಿದೆ !) ಎನ್ನುವ ಸಂತ ಜನಾಬಾಯಿಯ ಭಜನೆ ನೆನಪಾಗುತ್ತದೆ ಮತ್ತು ನನ್ನ ಭಾವಜಾಗೃತಿಯಾಗುತ್ತದೆ.

೯ ಆ ೨. ಸಾಧಕರು ಪರ ಊರಿನಿಂದ ಬಂದಾಗ ಕೆಳಮಹಡಿಗೆ ಬಂದು ಅವರ ಕೈಯಲ್ಲಿನ ಕೈಚೀಲವನ್ನು ತೆಗೆದುಕೊಳ್ಳುವುದು : ಪರಾತ್ಪರ ಗುರು ಡಾಕ್ಟರರು ಎರಡನೇ ಮಹಡಿಯಲ್ಲಿ ಇರುತ್ತಿದ್ದರು. ಅವರು ತಿರುಗಾಡಲು ಅಥವಾ ಕೆಲಸಕ್ಕಾಗಿ ಕೆಳಗೆ ಬಂದಿರುವುದನ್ನು ನಾನು ಎಂದಿಗೂ ನೋಡಿರಲಿಲ್ಲ. ಒಮ್ಮೆ ಬೆಳಗ್ಗೆ ೬ ಗಂಟೆಗೆ ನಾನು ಪರಾತ್ಪರ ಗುರು ಡಾಕ್ಟರರ ಕಟ್ಟಡದ ಕೆಳಮಹಡಿಗೆ ತಲುಪಿದೆನು. ನಾನು ಸೋಲಾಪುರದಿಂದ ಪ್ರಸಾರದ ಸೇವೆಯಿಂದ ಬಂದಿದ್ದೆನು ಮತ್ತು ತಯಾರಾಗಿ ಕಚೇರಿಗೆ ಹೋಗುವವನಿದ್ದೆನು. ನನ್ನ ಕೈಯಲ್ಲಿ ಎರಡು ಚೀಲಗಳಿದ್ದವು. ಮಹಡಿಯ ಮೊದಲ ಮೆಟ್ಟಿಲುಗಳನ್ನು ಹತ್ತುತ್ತಿರುವಾಗ, ಪರಾತ್ಪರ ಗುರು ಡಾಕ್ಟರರು ಎದುರಿಗೆ ಬಂದರು. ಅವರು ನನ್ನ ಕೈಯಲ್ಲಿನ ಒಂದು ಚೀಲವನ್ನು ತೆಗೆದುಕೊಂಡರು. ನಾನು ಅವರಿಗೆ “ನಾನು ಎರಡೂ ಚೀಲವನ್ನು ಹಿಡಿದುಕೊಂಡು ಮೇಲೆ ಬರಬಲ್ಲೆನು. ನೀವು ಕೆಳಗೆ ಏಕೆ ಬಂದಿರಿ ?” ಎಂದು ಕೇಳಿದೆನು. ಅದಕ್ಕೆ ಪರಾತ್ಪರ ಗುರು ಡಾಕ್ಟರರು “ಕಾಲುಗಳನ್ನು ಹಗುರ ಮಾಡಿಕೊಳ್ಳಲು ಬಂದಿದ್ದೆನು” ಎಂದು ಹೇಳಿದರು. ನಿಜ ಹೇಳಬೇಕೆಂದರೆ ಅವರು ನನ್ನನ್ನು ಮೇಲಿನಿಂದ ನೋಡಿರಬೇಕು. ಆ ಸಮಯದಲ್ಲಿ ‘ಲಿಫ್ಟ್ ಬಂದ್ ಇದ್ದ ಕಾರಣ ನನಗೆ ಚೀಲಗಳು ಭಾರವಾಗುತ್ತಿದೆ’ ಎಂಬುವುದು ಗಮನಕ್ಕೆ ಬಂದಿದ್ದರಿಂದ ಅವರು ಕೆಳಗೆ ಬಂದಿದ್ದರು. ಅವರಲ್ಲಿ ‘ಇತರರ ವಿಚಾರ ಮಾಡುವುದು’ ಮತ್ತು ‘ಅಪಾರ ಪ್ರೇಮಭಾವ’ ಈ ಈಶ್ವರಿ ಗುಣಗಳಿರುವುದರಿಂದ ಅವರು ನನ್ನಂತಹ ಸಾಮಾನ್ಯ ಸಾಧಕನಿಗೆ ಸಹಾಯ ಮಾಡಿದರು. ಪ್ರತ್ಯಕ್ಷ ಪರಮೇಶ್ವರನೇ ನನ್ನ ಭಾರವನ್ನು ತೆಗೆದುಕೊಳ್ಳಲು ಬಂದಿದ್ದನು. ಈ ಉದಾಹರಣೆಯಿಂದ ‘ಅವರು ನನ್ನ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಭಾರವನ್ನು ತಾವೇ ತೆಗೆದುಕೊಂಡು ನನ್ನನ್ನು ಹಗುರಗೊಳಿಸಿದ್ದಾರೆ’ ಎನ್ನುವುದೇ ಸಿದ್ಧವಾಗುತ್ತದೆ. ಮೇಲಿನ ಎರಡೂ ಪ್ರಸಂಗಗಳು ನನ್ನ ಅಂತರ್ಮನದಲ್ಲಿ ಕೊರೆದು ಇಟ್ಟಿರುವಂತಿದೆ.

೯ ಇ. ಸ್ಥೂಲದಿಂದಷ್ಟೇ ಅಲ್ಲ, ಸೂಕ್ಷ್ಮದಿಂದಲೂ ಮತ್ತು ಆಧ್ಯಾತ್ಮಿಕ ಸ್ತರದಲ್ಲಿಯೂ ಸಾಧಕರಿಗೆ ಸಹಾಯ ಮಾಡುವ ಏಕಮೇವಾದ್ವಿತೀಯ ಪ.ಪೂ. ಡಾಕ್ಟರರು ! : ನನ್ನಲ್ಲಿ ಬಹಳ ಸ್ವಭಾವದೋಷಗಳು ಮತ್ತು ಬಹಳ ಅಹಂ ಇರುವಾಗಲೂ ಮತ್ತು ನಾನು ಅವರ ಯಾವುದೇ ಸೇವೆಯನ್ನು ಮಾಡದೇ ಇರುವಾಗಲೂ ಅವರು ನನಗಾಗಿ ಎಲ್ಲವನ್ನೂ ಮಾಡಿದ್ದಾರೆ. ‘ಇಲ್ಲಿಯವರೆಗೆ ನಾನು ಸಾಧಕರಿಗೆ ಸಹಾಯ ಮಾಡಿರಲಿಲ್ಲ ಮತ್ತು ಪರಾತ್ಪರ ಗುರು ಡಾಕ್ಟರರ ಕಾರ್ಯದಲ್ಲಿ ಅಳಿಲಿನಷ್ಟೂ ಸಹಾಯವನ್ನು ಮಾಡಿರಲಿಲ್ಲ’ ಎಂದು ನನಗೆ ಅನಿಸುತ್ತದೆ. ಅವರು ಸ್ಥೂಲದಲ್ಲಿಯೇ ಎಷ್ಟೊಂದು ಸಹಾಯ ಮಾಡುತ್ತಾರೆ, ಹೀಗಿರುವಾಗ ಅವರು ‘ಸೂಕ್ಷ್ಮದಿಂದ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ನಮಗಾಗಿ ಎಷ್ಟೊಂದು ಮಾಡುತ್ತಿರಬಹುದು !’ ಎಂಬುದರ ಕಲ್ಪನೆಯನ್ನೂ ನಾವು ಮಾಡಲಾರೆವು. ಇದಕ್ಕಾಗಿ ನಾನು ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಯನ್ನು ವ್ಯಕ್ತ ಪಡಿಸುತ್ತೇನೆ.

೧೦. ಸಾಧಕರಿಗೆ ಸಾಧನೆಯನ್ನು ಮಾಡಿ ಸ್ವಯಂಪೂರ್ಣರಾಗಲು ಸಹಾಯ ಮಾಡುವುದು

ಪರಾತ್ಪರ ಗುರು ಡಾಕ್ಟರರು ಅಭ್ಯಾಸವರ್ಗದಲ್ಲಿ ಆಂಗ್ಲದ ಒಂದು ಗಾದೆಯನ್ನು ಹೇಳುತ್ತಿದ್ದರು, ‘Give a man fishing rod not fish’ ( ಗಿವ್ ಎ ಮ್ಯಾನ ಎ ಫಿಶಿಂಗ ರಾಡ್ ನ್ವಾಟ್ ಫಿಶ್) ! ಅಂದರೆ ‘ವ್ಯಕ್ತಿಗೆ ಅವನ ಜೀವನ, ಹೊಟ್ಟೆಪಾಡು ನಡೆಸಲು ಪ್ರತಿ ತಿಂಗಳೂ ಮೀನಿಗಾಗಿ ದುಡ್ಡು ಕೊಡುವುದಕ್ಕಿಂತ ಅವನಿಗೆ ಅವನೇ ಸ್ವಂತ ದುಡಿದು ಹಣಗಳಿಸಲು ಸಬಲಗೊಳಿಸಬೇಕು. ಇದಕ್ಕಾಗಿ ಅವನಿಗೆ ಸಹಾಯ ಮಾಡಬೇಕು’. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರನ್ನು ಸ್ವಯಂಪ್ರಕಾಶಿಯನ್ನಾಗಿ ಮಾಡುತ್ತಾರೆ. ಮಾನಸೋಪಚಾರ ವೈದ್ಯರಾಗಿದ್ದು ಅವರು ‘ಸ್ವಯಂಸೂಚನಾ ಯೋಗ’ ಈ ಸಾಧನೆಯ ಪದ್ಧತಿಯನ್ನು ಕಂಡುಹಿಡಿದಿದ್ದಾರೆ. ಅದರಂತೆ, ಮನೋರೋಗಿಯು ಕೂಡ ಸ್ವತಃ ಸ್ವಯಂಸೂಚನೆಯ ಸತ್ರಗಳನ್ನು ಮಾಡಿ ಮತ್ತು ಸ್ವಭಾವದೋಷಗಳನ್ನು ನಿರ್ಮೂಲನೆ ಮಾಡಿ ಸಾಮಾನ್ಯ ವ್ಯಕ್ತಿಯ ವ್ಯಕ್ತಿತ್ವದವರೆಗೆ ತಲುಪಬಲ್ಲನು ಹಾಗೂ ಸಾಮಾನ್ಯ ವ್ಯಕ್ತಿತ್ವದ ಸಾಧಕನು ಸಾಧನೆಯನ್ನು ಮಾಡಿ ಸ್ವಯಂಪೂರ್ಣಗೊಂಡು ಸಂತರಂತೆ ದೃಢ ವ್ಯಕ್ತಿತ್ವವನ್ನು ಹೊಂದಲು ಸಕ್ಷಮನಾಗಬಲ್ಲನು.

೧೧. ಪರಾತ್ಪರ ಗುರು ಡಾ. ಆಠವಲೆಯವರಂತಹ ಗುರು ಸಿಗುವುದು, ನಮ್ಮ ಭಾಗ್ಯವೇ ಆಗಿದೆ ಎಂದು ಸಾಧಕರು ವ್ಯಕ್ತ ಪಡಿಸಿದ ಕೃತಜ್ಞತೆ !

ಪರಾತ್ಪರ ಗುರು ಡಾ. ಆಠವಲೆಯವರನ್ನು ಭೇಟಿಯಾದಾಗಿನಿಂದ ‘ಕೊಡುವವರ ಕೈಗಳು ಸಾವಿರಾರು, ಆದರೆ ಹರಕು ನನ್ನ ಜೋಳಿಗೆ !’ ಎನ್ನುವ ಅನುಭವ ನನಗೆ ಬಂದಿತು. ನನ್ನ ಮಾನಸಿಕ ಮತ್ತು ಆಧ್ಯಾತ್ಮಿಕ ಸ್ಥಿತಿ ಅತ್ಯಂತ ಕೆಳಮಟ್ಟವನ್ನು ತಲುಪುತ್ತಿರುವಾಗ ಪರಾತ್ಪರ ಗುರು ಡಾ. ಆಠವಲೆಯವರು ನನ್ನನ್ನು ಮಾಯೆಯ ಆಸಕ್ತಿಯಿಂದ ದೂರಗೊಳಿಸಿ ಶಾಶ್ವತ ಸನಾತನ ಸತ್ಯದೊಂದಿಗೆ ಜೋಡಿಸಿದರು. ಇಷ್ಟೇ ಅಲ್ಲ, ಅವರು ನನಗೆ ಇತರ ಸಂತರ, ಪ.ಪೂ. ಭಕ್ತರಾಜ ಮಹಾರಾಜರ ಮತ್ತು ಅವರ ಸತ್ಸಂಗವನ್ನು ನೀಡಿದರು. ಸಂತರ ಮತ್ತು ಅವರ ಸ್ಥೂಲ ದೇಹದಲ್ಲಿ ಮತ್ತು ಮಾಯೆಯ ಮೋಹದಲ್ಲಿ ಅವರು ನನ್ನನ್ನು ಸಿಲುಕಲು ಬಿಡಲಿಲ್ಲ. ಅವರು ಸಾಧನೆಯಲ್ಲಿ ಸ್ವಯಂಪೂರ್ಣಗೊಳಿಸಿ ನನಗೆ ಶಾಶ್ವತ ಆನಂದವನ್ನು ನೀಡಿದರು. ‘ಇಂತಹ ಗುರುಗಳು ದೊರೆಯುವುದು, ಇದು ಎಷ್ಟು ದೊಡ್ಡ ಭಾಗ್ಯವಾಗಿದೆ !’ ಎನ್ನುವುದನ್ನು ನಾನು ಶಬ್ದಗಳಲ್ಲಿ ವರ್ಣಿಸಲು ಸಾಧ್ಯವಿಲ್ಲ. ಇದು ಕೇವಲ ಅವರ ಕೃಪೆಯೇ ಆಗಿದೆ. ಅದುದರಿಂದ ನಾನು ಅವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.

– (ಪೂ.) ಶ್ರೀ. ಶಿವಾಜಿ ವಟಕರ, ಸನಾತನ ಆಶ್ರಮ, ದೇವದ, ಪನವೇಲ, (೧೫.೮.೨೦೧೭)

ವಯಸ್ಸು ಹೆಚ್ಚಾಗುತ್ತಿರುವುದರಿಂದ ನನ್ನ ನೆನಪಿನಶಕ್ತಿಯು ಬಹಳ ಕಡಿಮೆಯಾಗಿದೆ. ಪೂ. ಶಿವಾಜಿ ವಟಕರ ಇವರು ಬರೆದಿರುವ ಈ ಲೇಖನವನ್ನು ಓದಿ ‘ಹಿಂದೆ ನನ್ನ ಆಚರಣೆ ಹೇಗಿತ್ತು ?’ ಎಂದು ನನಗೆ ಸ್ವಲ್ಪಮಟ್ಟಿಗೆ ನೆನಪಾಯಿತು. ಇದರಿಂದ ನನಗೆ ನನ್ನ ಬಗ್ಗೆ ಏನಾದರೂ ಬರೆಯಲು ಸ್ವಲ್ಪ ದಿಶೆ ಸಿಕ್ಕಿತು. ಪೂ. ಶಿವಾಜಿ ವಟಕರ ಇವರಿಂದ ಸ್ಫೂರ್ತಿಯನ್ನು ಪಡೆದು ಇತರ ಸಾಧಕರೂ ಏನಾದರೂ ಲೇಖನಗಳನ್ನು ಬರೆದು ಕಳುಹಿಸಿದರೆ ಸನಾತನದ ಇತರ ಸಾಧಕರಿಗೆ ಅವುಗಳಿಂದ ಏನಾದರೂ ಕಲಿಯಲು ಸಿಗುವುದು. ‘ಮುಂದೆ ಪೂ. ಶಿವಾಜಿ ವಟಕರ ಇವರ ಪ್ರಗತಿ ಶೀಘ್ರವಾಗಿ ಆಗುವುದು. ಇಷ್ಟೇ ಅಲ್ಲ, ಅವರಿಂದ ಇತರರ ಪ್ರಗತಿಯೂ ಆಗುವುದು’, ಎಂದು ನನಗೆ ವಿಶ್ವಾಸವಿದೆ. – (ಪರಾತ್ಪರ ಗುರು) ಡಾ. ಆಠವಲೆ

Leave a Comment