ಲಗ್ನಪತ್ರಿಕೆ

ಅ. ಲಗ್ನಪತ್ರಿಕೆ ಸಾತ್ತ್ವಿಕವಾಗಿರಬೇಕು !

ಸಮಾಜದಲ್ಲಿನ ದುಂದುವೆಚ್ಚದ ಪ್ರಭಾವದಿಂದ ವಿವಾಹವಿಧಿಯು ಹೆಚ್ಚಿನವರಿಗೆ ಪ್ರತಿಷ್ಠೆಯ ವಿಷಯವಾಗಿದೆ. ಆದುದರಿಂದಲೇ ವಿವಾಹದಲ್ಲಿ ಹಣವನ್ನು ಮಿತಿಮೀರಿ ಖರ್ಚು ಮಾಡುವುದು ಕಾಣಿಸುತ್ತದೆ. ಈ ದುಂದುವೆಚ್ಚವು ವಿವಾಹದ ಆಮಂತ್ರಣಪತ್ರಿಕೆಯಿಂದ ಪ್ರಾರಂಭವಾಗುತ್ತದೆ. ವೈವಿಧ್ಯಮಯ ವಿನ್ಯಾಸವಿರುವ, ಸುಗಂಧಯುತ ವಿವಿಧ ಸಂಕಲ್ಪನೆಯ ದುಬಾರಿ ಲಗ್ನಪತ್ರಿಕೆಗಳು ಈಗ ಸಾಮಾನ್ಯವಾಗಿವೆ. ದುಬಾರಿ ಲಗ್ನ ಪತ್ರಿಕೆಗಳನ್ನು ಮುದ್ರಿಸುವುದಕ್ಕಿಂತ ಅವುಗಳನ್ನು ಸಾತ್ತ್ವಿಕವನ್ನಾಗಿಸಲು ಪ್ರಯತ್ನಿಸಬೇಕು. ಅದಕ್ಕಾಗಿ –

೧. ಲಗ್ನಪತ್ರಿಕೆಯ ಮೇಲಿನ ಶ್ರೀ ಗಣೇಶನ ಚಿತ್ರವು ಬಹಳಷ್ಟು ಸಲ ವಿಡಂಬನಾತ್ಮಕ ರೀತಿಯಲ್ಲಿ (ಉದಾ. ಕೇವಲ ಶ್ರೀ ಗಣೇಶನ ತಲೆಯ ಚಿತ್ರ, ಎಲೆ ಮತ್ತು ಹೂವುಗಳಿಂದ ಸಾಕಾರವಾದ ಶ್ರೀ ಗಣೇಶನ ಚಿತ್ರ) ಇರುತ್ತದೆ. ಇದಕ್ಕಿಂತ ಧರ್ಮಶಾಸ್ತ್ರದಲ್ಲಿ ವರ್ಣಿಸಿದಂತೆ ಆಸನದ ಮೇಲೆ ಕುಳಿತ ಶ್ರೀ ಗಣೇಶನ ಪೂರ್ಣ ಚಿತ್ರವನ್ನು ಮುದ್ರಿಸಬೇಕು.

೨. ಲಗ್ನಪತ್ರಿಕೆಯ ಆರಂಭದಲ್ಲಿ ಆರಾಧ್ಯದೇವತೆ, ಕುಲದೇವತೆ, ಗ್ರಾಮದೇವತೆ ಮುಂತಾದವರ ಹೆಸರುಗಳನ್ನು ಉಲ್ಲೇಖಿಸಬೇಕು.

೩. ಲಗ್ನಪತ್ರಿಕೆಯನ್ನು ಮಾತೃಭಾಷೆ ಅಥವಾ ಇತರ ರಾಷ್ಟ್ರೀಯ ಭಾಷೆಗಳಲ್ಲಿ ಮುದ್ರಿಸಬೇಕು; ಆಂಗ್ಲ ಭಾಷೆಯಲ್ಲಿ ಮುದ್ರಿಸಲೇಬಾರದು.

೪. ಲಗ್ನಪತ್ರಿಕೆಯ ಮೇಲಿನ ವಿನ್ಯಾಸವು ಸಾತ್ತ್ವಿಕವಾಗಿರಬೇಕು.

೫. ಲಗ್ನಪತ್ರಿಕೆಯು ವ್ಯಾಕರಣದ ದೃಷ್ಟಿಯಿಂದ ಶುದ್ಧ ಭಾಷೆಯಲ್ಲಿರಬೇಕು. ಹಾಗೆಯೇ ಅದರಲ್ಲಿ ಪರಕೀಯ ಭಾಷೆಗಳಲ್ಲಿನ ಶಬ್ದಗಳನ್ನು ಉಪಯೋಗಿಸಬಾರದು.

೬. ಲಗ್ನಪತ್ರಿಕೆಯಲ್ಲಿ ಧರ್ಮಶಿಕ್ಷಣದ ಬಗ್ಗೆ ಅಥವಾ ರಾಷ್ಟ್ರ ಮತ್ತು ಧರ್ಮಜಾಗೃತಿಯ ಬರವಣಿಗೆ ಇರಬೇಕು.

ಆ. ಲಗ್ನಪತ್ರಿಕೆಗಳ ಮೇಲೆ ದೇವತೆಗಳ ಚಿತ್ರಗಳನ್ನು ಮುದ್ರಿಸುವುದು ಏಕೆ ಯೋಗ್ಯವಾಗಿದೆ ?

ಲಗ್ನಪತ್ರಿಕೆ ಅಥವಾ ಶುಭಾಶಯ ಪತ್ರಗಳ ಮೇಲೆ ದೇವತೆಗಳ ಚಿತ್ರಗಳನ್ನು ಮುದ್ರಿಸುವ ಪದ್ಧತಿ ಇದೆ. ಹೆಚ್ಚಾಗಿ ಚಿತ್ರದೊಂದಿಗೆ ದೇವತೆಯ ಹೆಸರನ್ನೂ ಮುದ್ರಿಸುತ್ತಾರೆ. ಲಗ್ನಪತ್ರಿಕೆ ಅಥವಾ ಶುಭಾಶಯ ಪತ್ರಗಳನ್ನು ಉಪಯೋಗಿಸಿದ ನಂತರ ಕಸದ ಬುಟ್ಟಿಯಲ್ಲಿ ಹಾಕುತ್ತಾರೆ ಅಥವಾ ಹಾಗೆ ಅಸ್ತವ್ಯಸ್ತವಾಗಿ ಬಿದ್ದಿರುತ್ತವೆ. ಇದರಿಂದ ಆ ದೇವತೆಯ ವಿಡಂಬನೆಯಾಗುತ್ತದೆ; ಏಕೆಂದರೆ ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿಯು ಒಟ್ಟಿಗೆ ಇರುತ್ತವೆ’ ಎಂಬ ತತ್ತ್ವಕ್ಕನುಸಾರ ಎಲ್ಲಿ ದೇವತೆಯ ರೂಪ ಅಥವಾ ಹೆಸರಿರುತ್ತದೆಯೋ, ಅಲ್ಲಿ ಅವರ ತತ್ತ್ವವಿರುತ್ತದೆ. ಆದುದರಿಂದ ‘ಲಗ್ನಪತ್ರಿಕೆ ಅಥವಾ ಶುಭಾಶಯ ಪತ್ರಗಳ ಮೇಲೆ ದೇವತೆಗಳ ಚಿತ್ರಗಳನ್ನು ಮುದ್ರಿಸಬಾರದು’ ಎಂಬ ವಿಚಾರವು ಬರುವುದು ಸಹಜವಾಗಿದೆ; ಆದರೆ ದೇವತೆಗಳ ಚಿತ್ರಗಳ ವಿಡಂಬನೆಯಿಂದಾಗುವ ಆಧ್ಯಾತ್ಮಿಕ ಹಾನಿಗಿಂತ, ದೇವತೆಗಳ ಚಿತ್ರಗಳ ಅಸ್ತಿತ್ವದಿಂದಾಗುವ ದೇವತೆಗಳ ತತ್ತ್ವದ ಲಾಭವು ಅಧಿಕವಾಗಿರುತ್ತದೆ. ಮುಂದಿನ ವಿವೇಚನೆಯಿಂದ ಇದು ಗಮನಕ್ಕೆ ಬರುತ್ತದೆ.

ದೇವತೆಗಳ ಚಿತ್ರಗಳಿರುವ ಲಗ್ನಪತ್ರಿಕೆ ಅಥವಾ ಶುಭಾಶಯ ಪತ್ರಗಳ ತಯಾರಿಕೆ ಮತ್ತು ಅವುಗಳ ಉಪಯೋಗ ಅಂದರೆ ಕ್ರಮವಾಗಿ ಉತ್ಪತ್ತಿ ಮತ್ತು ಸ್ಥಿತಿಯಾಗಿದೆ. ಅವುಗಳ ಪ್ರಮಾಣವು ಕ್ರಮವಾಗಿ ಶೇ. ೨೦ ಮತ್ತು ೫೦ ರಷ್ಟಿದೆ, ಅಂದರೆ ಒಟ್ಟು ಶೇ. ೭೦ ರಷ್ಟಿರುತ್ತದೆ (ಅಂದರೆ ದೇವತೆಯ ತತ್ತ್ವದಿಂದ ಇಷ್ಟು ಪ್ರಮಾಣದಲ್ಲಿ ಲಾಭವಾಗುತ್ತದೆ). ಇದರ ತುಲನೆಯಲ್ಲಿ ದೇವತೆಗಳ ಚಿತ್ರಗಳಿರುವ ಲಗ್ನಪತ್ರಿಕೆ ಅಥವಾ ಶುಭಾಶಯ ಪತ್ರಗಳನ್ನು ಬಿಸಾಡು ವುದು ಅಥವಾ ಅವು ಹಾಳಾಗುವುದೆಂದರೆ ಲಯವಾಗುವುದರ (ಹಾನಿಯಾಗುವುದು) ಪ್ರಮಾಣವು ಶೇ. ೩೦ ರಷ್ಟಿದೆ. ಅಂದರೆ ನಮಗೆ ದೇವತೆಗಳ ಚಿತ್ರಗಳಿಂದ (೭೦ ರಲ್ಲಿ ೩೦ ಕಳೆದು) ಶೇ. ೪೦ ರಷ್ಟು ನಿವ್ವಳ ಲಾಭವಾಗುತ್ತದೆ. ಹಾಗೆಯೇ ಸಾಮಾನ್ಯವಾಗಿ ಉತ್ಪತ್ತಿ ಮತ್ತು ಸ್ಥಿತಿಯ ಸಮಯವು ಲಯಕ್ಕಿಂತ ಹೆಚ್ಚಿಗೆ ಇರುತ್ತದೆ, ಅಂದರೆ ಲಯವು ಬೇಗನೇ ಆಗುತ್ತದೆ (ಹಾನಿಯಾಗುವ ಕಾಲಾವಧಿಯೂ ಕಡಿಮೆಯಿರುತ್ತದೆ), ಉದಾ. ಯಾವಾಗ ದೇವತೆಯ ವಿಡಂಬನೆಯಾಗಲು ಪ್ರಾರಂಭವಾಗುತ್ತದೆಯೋ, ಆಗ ಅವರ ಅಸ್ತಿತ್ವವು ಅಲ್ಲಿಂದ ಬೇಗನೇ ಲೋಪವಾಗುತ್ತದೆ. ಈ ಎಲ್ಲ ಅಂಶಗಳನ್ನು ಗಮನಿಸಿದರೆ, ‘ದೇವತೆಗಳ ಚಿತ್ರಗಳನ್ನು ಲಗ್ನಪತ್ರಿಕೆ / ಶುಭಾಶಯ ಪತ್ರಗಳ ಮೇಲೆ ಮುದ್ರಿಸುವುದು ಯೋಗ್ಯವಾಗಿದೆ’ ಎನ್ನಬಹುದು. ಲಗ್ನಪತ್ರಿಕೆ ಅಥವಾ ಶುಭಾಶಯ ಪತ್ರಗಳು ನಿರುಪಯುಕ್ತವಾದಾಗ ಅವುಗಳ ಮೇಲಿನ ದೇವತೆಗಳ ಚಿತ್ರಗಳನ್ನು ವಿಸರ್ಜನೆ ಮಾಡಬೇಕು.

– (ಪರಾತ್ಪರ ಗುರು) ಡಾ. ಜಯಂತ ಆಠವಲೆ (೨೫.೧೦.೨೦೦೬)

Leave a Comment