ಧನುರ್ಮಾಸ

ಧನುರ್ಮಾಸದ ಈ ಮೂವತ್ತು ದಿನಗಳೂ ಶ್ರೀ ವೈಷ್ಣವ ದೇವಾಲಯಗಳಲ್ಲಿ ದಿನಕ್ಕೊಂದರಂತೆ ಮೂವತ್ತು ಶ್ಲೋಕಗಳನ್ನು ಪಾರಾಯಣ ಮಾಡಲಾಗುವುದು. ಪ್ರತೀ ದಿನ ಸಂಜೆ ಶ್ಲೋಕಗಳನ್ನು ಕುರಿತ ವಿಸ್ತಾರ ಉಪನ್ಯಾಸಗಳನ್ನೇರ್ಪಡಿಸಲಾಗುವುದು. ಧನುರ್ಮಾಸವನ್ನು ಎಲ್ಲ ಹಿಂದೂ ದೇವಾಲಯಗಳಲ್ಲೂ ಆಚರಿಸಲಾಗುವುದು.

ಈ ಕಾಲದಲ್ಲಿ ಧನು ರಾಶಿಯಲ್ಲಿ ರವಿ ಸಂಚರಿಸುವ ಮಾಸವಾದ್ದರಿಂದ ಧನುರ್ಮಾಸ ಎನ್ನುವರು. ಭಗವದ್ಗೀತೆಯ 10 ನೇ ಅಧ್ಯಾಯದಲ್ಲಿ ಕೃಷ್ಣನು ಅರ್ಜುನನಿಗೆ ತಾನು ಎಲ್ಲೆಲ್ಲಿ ಇದ್ದೇನೆಂದೂ ವಿವರಿಸುತ್ತಾ “ಮಾಸಾನಾಂ ಮಾರ್ಗಶೀರ್ಷೋ” ಎಂದಿದ್ದಾನೆ. “ಅಂದರೆ ತಿಂಗಳುಗಳಲ್ಲಿ ಮಾರ್ಗಶೀರ್ಷ, ನಾನು ಋತುಗಳಲ್ಲಿ ವಸಂತ ಋತು” ಎಂದಿದ್ದಾನೆ. ಹಾಗಾಗಿ ಮಾರ್ಗಶೀರ್ಷ ತಿಂಗಳಿಗೆ ಅಷ್ಟು ಪ್ರಾಮುಖ್ಯತೆ.

ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ದೇವರನ್ನು ಪೂಜಿಸಿ ಅರಳಿವೃಕ್ಷ ಹಾಗೂ ನಾಗರಕಟ್ಟೆ ಪ್ರದಕ್ಷಿಣೆ ಮಾಡುವುದು ವಿಶೇಷ. ವೃಕ್ಷಗಳ ರಾಜ ಅರಳಿ ಹಾಗೂ ರಾಣಿ ಬೇವಿನ ಮರ. ಬೇವು ದುರ್ಗೆಯ ಪ್ರತೀಕ. ಇದನ್ನು ಪ್ರದಕ್ಷಿಣೆ ಮಾಡಿದರೆ ಮದುವೆಯಾಗುವುದು ಹಾಗೂ ಮಕ್ಕಳಾಗುವುದೆಂಬುದು ಧಾರ್ಮಿಕ ನಂಬಿಕೆ. ಆದರೂ ವೈಜ್ಞಾನಿಕವಾಗಿ ವಿಶ್ಲೇಷಿಸಿದಾಗ ಬೇವು ಹಾಗೂ ಅರಳಿ ಮರದಿಂದ ಉತ್ತಮ ಆಮ್ಲಜನಕ ದೊರೆಯುವುದು. ಬೇವಿನ ಗಾಳಿಯಿಂದ ಸಕ್ಕರೆ ಕಾಯಿಲೆ, ಕಜ್ಜಿ, ಗಾಯಗಳು ಗುಣವಾಗುತ್ತದೆ. ಜೊತೆಗೆ ಅರಳಿ ಎಲೆ ತಿನ್ನುವುದರಿಂದ ವ್ಯಾಧಿ ನಿವಾರಣೆಯಾಗುವುದು. ಇದು ಶ್ವಾಸಕೋಶವನ್ನು ಶುದ್ಧಿ ಮಾಡಿ ಮೆದುಳನ್ನು ಚುರುಕುಗೊಳಿಸುತ್ತದೆ” ಎಂಬ ವಿವರಣೆಯನ್ನು ಹಿರಿಯರು ನೀಡುತ್ತಾರೆ.
ಒಟ್ಟಿನಲ್ಲಿ ಈ ಆಚರಣೆಯಲ್ಲಿ ಪಾರಮಾರ್ಥಿಕತೆ, ವೈಜ್ಞಾನಿಕತೆ, ಭಾವನಾತ್ಮಕ ಸಂಬಂಧವೆಲ್ಲಾ ಮಿಳಿತವಾಗಿದೆ. ಅರಳಿ ಮರದ ಗಾಳಿ ಸೇವನೆಯಿಂದ ಗರ್ಭಕೋಶದ ಸಮಸ್ಯೆಗಳೂ ದೂರವಾಗುವುದೆಂಬುದು ವೈಜ್ಞಾನಿಕ ಕಾರಣವಾದರೆ, ರಾಹು, ಕೇತು, ಅಂಗಾರಕ ದೋಷ ನಿವಾರಣೆಯಾಗುತ್ತದೆ ಎನ್ನುವುದು ಪುರಾಣ. ಒಟ್ಟಿನಲ್ಲಿ ಕಾಕತಾಳೀಯವೆನ್ನುವಂತೆ ಒಳ್ಳೆಯದೇ ಆಗುತ್ತದೆ. ಆದ್ದರಿಂದ “ಮೂಢನೇ ಆದರೂ ನಂಬಿಕೆ ಕಳೆದುಕೊಳ್ಳಬೇಡ” ಎನ್ನುವರು ಹಿರಿಯರು.

ಪ್ರಸಾದ:

“ಧನುರ್ಮಾಸದ ಪೂಜೆಗೆ ಪೊಂಗಲ್ ಪ್ರಸಾದ. ಪ್ರಸಾದವಿಲ್ಲದೇ ಪೂಜೆ ಪರಿಸಮಾಪ್ತಿಯಾಗುವುದಿಲ್ಲ. ಪ್ರಸಾದದಲ್ಲಿ ಹರ್ವಿನಿವೇಧನಕ್ಕೆ ಹೆಚ್ಚು ಒತ್ತು. ಹವಿಸ್ಸು ಎಂದರೆ ತುಪ್ಪ. ಮೇದಸ್ಸನ್ನು ವೃದ್ಧಿಸುವ ತುಪ್ಪ ಭಗವಂತನಿಗೆ ಶ್ರೇಷ್ಠ. ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಚಳಿಗಾಲದಲ್ಲಿ ದೇಹ ಎಣ್ಣೆ ಅಂಶ ಕಳೆದುಕೊಂಡಿರುತ್ತದಾದ್ದರಿಂದ ತುಪ್ಪವನ್ನು ಬಳಸಲಾಗುವುದೇನೋ ಎನಿಸುತ್ತದೆ. ಮೆಣಸು, ಜೀರಿಗೆ ಇದು ಶೀತ ತಡೆಯುವುದು, ಕಫ, ವಾಂತಿ ಪಿತ್ತ ನಿವಾರಿಸುವುದು ಹಾಗೂ ಹಸಿ ಶುಂಠಿ ಜೀರ್ಣಕ್ರಿಯೆಗೆ ಶ್ರೇಷ್ಠವಾದುದು. ಇದು ಮೊದಲ ಬೆಳೆಯಾದುದರಿಂದ, ಭತ್ತದಲ್ಲಿ ಗಂಜಿ ಹೆಚ್ಚಿರುವುದರಿಂದ ಪೊಂಗಲ್‌ಗೆ ಬಳಸಲಾಗುವುದು. ಮೊದಲ ಬೆಳೆಯನ್ನು ದೇವರಿಗೆ ಸಮರ್ಪಿಸಬೇಕೆನ್ನುವುದೂ ಒಂದು ಕಾರಣವಾಗಿದೆ” ಎನ್ನುತ್ತಾರೆ.

“ಬ್ರಾಹ್ಮೀ ಮುಹೂರ್ತದಲ್ಲಿ ದೇವಸ್ಥಾನಕ್ಕೆ ಹೋಗಬೇಕೆಂದೇನೂ ಇಲ್ಲ. ಮನೆಯಲ್ಲೇ ಕುಳಿತು ಪೂಜೆ ಮಾಡಲೂಬಹುದು. ಇದರಿಂದ ಮನಸ್ಸು ಹಗುರವಾಗುತ್ತದೆ” ಎನ್ನುವರು ರಾಜಮಣಿ. ಹಿಂದೂ ಸಂಸ್ಕೃತಿ ಜಪ ತಪ ವ್ರತಗಳ ಬುನಾದಿಯಿಂದಲೇ, ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಭಗವಂತನೇ ಹಿಂದೂ ಸಂಪ್ರದಾಯದ ಕೇಂದ್ರಬಿಂದುವಾಗಿದ್ದಾನೆ. ಈ ಆಚರಣೆಗಳ ಹಿಂದೆ ಅರ್ಥಪೂರ್ಣತೆ, ಗಹನವಾದ ಕಾರಣ ಅಡಕವಾಗಿಯೇ ಇರುತ್ತದೆ.

ಧನುರ್ಮಾಸದಲ್ಲಿ ಬ್ರಾಹ್ಮೀ ಮುಹೂರ್ತದಲ್ಲೇ ದೇವರನ್ನು ಪೂಜಿಸಬೇಕು :

ದೇವಮಾನದ ಪ್ರಕಾರ ದಕ್ಷಿಣಾಯಣ ರಾತ್ರಿಯಾಗಿದ್ದು, ಅದರ ಕೊನೆಯ ಸಮಯ ಬ್ರಾಹ್ಮೀ ಮುಹೂರ್ತದಲ್ಲಿ ವೈಕುಂಠದ ಬಾಗಿಲು ತೆರೆದಿರುತ್ತದೆ. ಉತ್ತರಾಯಣ ಪುಣ್ಯಕಾಲದಿಂದ ಹಗಲು ಪ್ರಾರಂಭವಾಗುವುದರಿಂದ, ಅಂದರೆ ೨ ಗಂಟೆಯು ರಾತ್ರಿಯ ಕೊನೆಯ ವೇಳೆಯಾಗಿ ಧನುರ್ಮಾಸವಾಗಿರುತ್ತದೆ. ಧನುರ್ಮಾಸ ಪ್ರಕಾರ ಈ ಸಮಯ ವಿಷ್ಣು ಏಳುವ ಸಮಯ ಆಗಿರುವುರಿಂದ ಆ ವೇಳೆಯಲ್ಲಿಯೇ ದೇವತಾ ಪೂಜೆ ಮಾಡಬೇಕು.

ಸೌಜನ್ಯ : ಮೈಸೂರು ಮಿತ್ರ

Leave a Comment