ದೇವರಿಗೆ ಅರ್ಪಿಸಿದ ಹೂವು ಮತ್ತು ಮಾಲೆಗಳ ಮಹತ್ವ

ನಿಸರ್ಗದ ವಿವಿಧ ಘಟಕಗಳು ಪಂಚತತ್ತ್ವಗಳಲ್ಲಿ ವಿವಿಧ ತತ್ತ್ವಗಳೊಂದಿಗೆ ಸಂಬಂಧ ಹೊಂದಿರುತ್ತವೆ, ಉದಾ. ಮಣ್ಣು ಪೃಥ್ವಿತತ್ತ್ವದೊಂದಿಗೆ, ನೀರು ಆಪತತ್ತ್ವದೊಂದಿಗೆ ಮತ್ತು ಮೋಡಗಳು ವಾಯುತತ್ತ್ವದೊಂದಿಗೆ. ನಿಸರ್ಗದಲ್ಲಿ ನೋಡಲು ಸಿಗುವ ಹೂವುಗಳು ಎಲ್ಲರನ್ನು ತಮ್ಮತ್ತ ಆಕರ್ಷಿಸುತ್ತವೆ; ಏಕೆಂದರೆ ನೈಸರ್ಗಿಕ ಹೂವುಗಳಲ್ಲಿ ಮೂಲತಃ ತುಂಬಾ ಸಾತ್ತ್ವಿಕತೆ ಇರುತ್ತದೆ. ಆದ್ದರಿಂದ ಅವುಗಳ ಗಂಧ, ಬಣ್ಣ ಮತ್ತು ಸ್ಪರ್ಶ ಆಕರ್ಷಕವಾಗಿರುತ್ತದೆ. ವಿವಿಧ ಬಣ್ಣಗಳ ಹೂವುಗಳು ಕೇವಲ ಮನುಷ್ಯನನ್ನು ಆಕರ್ಷಿಸುತ್ತವೆ ಎಂದಲ್ಲಿ, ಅವು ದೇವರಿಗೂ ಪ್ರಿಯವಾಗಿರುತ್ತವೆ.

೧. ದೇವರಿಗೆ ಅರ್ಪಿಸಿದ ಹೂವು ಮತ್ತು ಮಾಲೆಗಳ ಮಹತ್ವ

ಹೂವುಗಳ ಸಾತ್ತ್ವಿಕತೆಯಿಂದಾಗಿ ಅವುಗಳನ್ನು ನೋಡಿದಾಗ ನಮ್ಮ ಭಾವ ಜಾಗೃತವಾಗುತ್ತದೆ. ಆದ್ದರಿಂದ ಯಾವಾಗ ನಾವು ದೇವರಿಗೆ ಹೂವುಗಳನ್ನು ಅಥವಾ ಹೂಮಾಲೆಯನ್ನು ಅರ್ಪಿಸುತ್ತೇವೆಯೋ, ಆಗ ನಮಗೆ ದೇವರ ಬಗೆಗಿನ ಭಾವವು ಜಾಗೃತವಾಗುತ್ತದೆ. ಆ ಹೂವುಗಳಲ್ಲಿ ದೇವರ ಬಗೆಗಿರುವ ಭಕ್ತನ ಭಾವವು ಆಕರ್ಷಿತಗೊಳ್ಳುತ್ತದೆ.

ಆದ್ದರಿಂದ ಯಾವಾಗ ದೇವರಿಗೆ ಭಾವಪೂರ್ಣವಾಗಿ ಹೂವುಗಳನ್ನು ಅರ್ಪಿಸಲಾಗುತ್ತದೆಯೋ ಅಥವಾ ಮಾಲೆಯನ್ನು ಹಾಕಲಾಗುತ್ತದೆಯೋ, ಆಗ ಹೂವುಗಳ ಭಾವಸ್ಪರ್ಶದಿಂದ ದೇವರ ಮೂರ್ತಿ ಅಥವಾ ಚಿತ್ರಗಳಲ್ಲಿ ದೇವತೆಯ ತತ್ತ್ವವು ಜಾಗೃತವಾಗುತ್ತದೆ. ಅನಂತರ ದೇವತೆಯ ಮೂರ್ತಿ ಮತ್ತು ಚಿತ್ರದಲ್ಲಿ ಕಾರ್ಯನಿರತವಾಗಿರುವ ಸಾತ್ತ್ವಿಕತೆ ಮತ್ತು ಚೈತನ್ಯವು ಹೂವುಗಳ ತೊಟ್ಟಿನ ಮೂಲಕ ಹೂವುಗಳಲ್ಲಿ ಪ್ರವೇಶಿಸಿ ಹೂವುಗಳ ಗಂಧ, ಹೂವುಗಳ ಬಣ್ಣ ಮತ್ತು ಹೂವುಗಳ ಪಕಳೆಗಳಿಂದ (ಎಸಳುಗಳಿಂದ) ಸಂಪೂರ್ಣ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತದೆ. ಈ ರೀತಿ ದೇವರಿಗೆ ಅರ್ಪಿಸಿದ ಹೂವುಗಳು ಸಾತ್ತ್ವಿಕವಾಗಿರುವುದರಿಂದ ಅವುಗಳು ಭಾವ, ಚೈತನ್ಯ ಮತ್ತು ಆನಂದವನ್ನು ಪ್ರವಹಿಸಿ ಪ್ರಕ್ಷೇಪಿಸುತ್ತವೆ. ಆದ್ದರಿಂದ ವಾತಾವರಣವು ಸಾತ್ತ್ವಿಕ, ಶುದ್ಧ ಮತ್ತು ಭಾವಮಯವಾಗುತ್ತದೆ.

೨. ದೇವರಿಗೆ ಅರ್ಪಿಸಿದ ಹೂವುಗಳು ವಾತಾವರಣದಲ್ಲಿರುವ ರಜ-ತಮದೊಂದಿಗೆ ಹೋರಾಡುತ್ತವೆ

ದೇವರಿಗೆ ಅರ್ಪಿಸಿದ ಹೂವುಗಳಲ್ಲಿ ಮತ್ತು ಮಾಲೆಯಲ್ಲಿ ಆ ದೇವತೆಯ ಸಗುಣ-ನಿರ್ಗುಣ ಸ್ತರದ ತತ್ತ್ವಲಹರಿಗಳು ಕಾರ್ಯನಿರತವಾಗುತ್ತವೆ. ಆದ್ದರಿಂದ ದೇವರಿಗೆ ಅರ್ಪಿಸಿದ ಹೂವುಗಳು ಸಾತ್ತ್ವಿಕತೆ, ಶಕ್ತಿ ಮತ್ತು ಚೈತನ್ಯದಿಂದ ತುಂಬಿಕೊಂಡಿರುವುದರಿಂದ ಅವು ವಾತಾವರಣದಲ್ಲಿನ ರಜ-ತಮ ಕಣಗಳೊಂದಿಗೆ ಸೂಕ್ಷ್ಮ ಸ್ತರದಲ್ಲಿ ಯುದ್ಧ ಮಾಡುತ್ತವೆ.

ಯಾವಾಗ ದೇವರಿಗೆ ಅರ್ಪಿಸಿದ ಹೂವುಗಳು ನಿರ್ಮಾಲ್ಯದಲ್ಲಿ ರೂಪಾಂತರವಾಗುತ್ತವೆಯೋ, ಆಗ ಸ್ಥೂಲದಿಂದ ಹೂವುಗಳು ಒಣಗಿದ್ದರೂ, ಸೂಕ್ಷ್ಮ ಸ್ತರದಲ್ಲಿ ಅವುಗಳಲ್ಲಿ ಸಾತ್ತ್ವಿಕತೆ ಮತ್ತು ಚೈತನ್ಯ ಕಾರ್ಯನಿರತವಾಗಿರುತ್ತದೆ. ಆದ್ದರಿಂದ ನಿರ್ಮಾಲ್ಯವೂ ರಜ-ತಮ ಪ್ರಧಾನ ತೊಂದರೆದಾಯಕ ಶಕ್ತಿಯ ಸ್ಪಂದನಗಳೊಂದಿಗೆ ಸೂಕ್ಷ್ಮ ಯುದ್ಧವನ್ನು ಮಾಡಿ ವಾತಾವರಣವನ್ನು ಶುದ್ಧ ಮತ್ತು ಸಾತ್ತ್ವಿಕವಾಗಿಡಲು ಸಹಾಯ ಮಾಡುತ್ತವೆ. ಹೂವುಗಳು ವ್ಯಕ್ತಿ ಅಥವಾ ವಾತಾವರಣದಲ್ಲಿರುವ ತೊಂದರೆಯನ್ನು ಹೀರಿಕೊಂಡು ಚೈತನ್ಯವನ್ನು ಪ್ರಕ್ಷೇಪಿಸುತ್ತವೆ. ಈ ಪ್ರಕ್ರಿಯೆಯಿಂದ ಹೂವುಗಳು ಬೇಗ ಒಣಗುವುದು, ಕಮರಿದಂತೆ ಕಾಣಿಸುವುದು ಅಥವಾ ಅವುಗಳ ಬಣ್ಣದಲ್ಲಿ ಬದಲಾವಣೆಯಾಗುವುದು ಇಂತಹ ಸ್ಥೂಲದ ಪರಿಣಾಮಗಳು ಆಗುತ್ತಿರುತ್ತವೆ.

೩. ದೇವರಿಗೆ ಅರ್ಪಿಸಿದ ಹೂವು ಮತ್ತು ಮಾಲೆಯಲ್ಲಿನ ವ್ಯತ್ಯಾಸ ಹಾಗೂ ಅವುಗಳಿಂದ ಆಗುವ ಆಧ್ಯಾತ್ಮಿಕ ಲಾಭ

ದೇವರಿಗೆ ಅರ್ಪಿಸಿದ ಒಂದೊಂದು ಹೂವು ವ್ಯಷ್ಟಿ ಸ್ತರದಲ್ಲಿ ಮತ್ತು ಸೀಮಿತ ಸ್ಥಳದವರೆಗೆ ಮಾತ್ರ ಕಾರ್ಯನಿರತವಾಗಿರುತ್ತದೆ.

ಅದೇ ಮಾಲೆಯಲ್ಲಿ ಅನೇಕ ಹೂವುಗಳು ಸೇರಿರುವುದರಿಂದ ಹೂವುಗಳ ಶಕ್ತಿಗಳು ಸಂಘಟಿತವಾಗಿರುತ್ತವೆ. ಆದ್ದರಿಂದ ಮಾಲೆಯಿಂದ ವ್ಯಷ್ಟಿ-ಸಮಷ್ಟಿ ಹೀಗೆ ಎರಡೂ ಸ್ತರಗಳಲ್ಲಿ ಲಾಭವಾಗಿ ವಾಯುಮಂಡಲದ ಶುದ್ಧಿಯು ಹೆಚ್ಚು ಪ್ರಮಾಣದಲ್ಲಾಗುತ್ತದೆ. ದೇವತೆಗಳಿಗೆ ಅರ್ಪಿಸಿದ ಹೂವುಗಳಲ್ಲಿ ಮತ್ತು ಮಾಲೆಯಲ್ಲಿ ಆಯಾ ದೇವತೆಯ ತತ್ತ್ವಗಳನ್ನು ಗ್ರಹಿಸಿರುವುದರಿಂದ ಅದರ ಉಪಯೋಗವನ್ನು ನಿರ್ಮಾಲ್ಯವೆಂದು ತಲೆಯಲ್ಲಿ ಮುಡಿದರೆ ಅಥವಾ ಹರಿಯುವ ನೀರಿನಲ್ಲಿ ವಿಸರ್ಜನೆ ಮಾಡಿದರೆ ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚು ಪ್ರಮಾಣದಲ್ಲಿ ಲಾಭವಾಗುತ್ತದೆ.

– ಕು. ಮಧುರಾ ಭೋಸಲೆ (ಸೂಕ್ಷ್ಮದಿಂದ ದೊರಕಿದ ಜ್ಞಾನ) ಸನಾತನ ಆಶ್ರಮ, ರಾಮನಾಥಿ, ಗೋವಾ. (೧೫.೪.೨೦೨೧)

Leave a Comment