ಭಕ್ತ ಶಿರೋಮಣಿ ಸಂಕಟಮೋಚನ ಹನುಮಂತನ ವಿವಿಧ ಗುಣವೈಶಿಷ್ಟ್ಯಗಳು !

೧. ಜಿತೇಂದ್ರೀಯ

ಮಾರುತಿ ಎಂದರೆ ಮೂರನೇ ನೇತ್ರವನ್ನು ತೆರೆದು ಕಾಮದೇವನನ್ನು ಭಸ್ಮಗೊಳಿಸಿದ ಶಿವಶಂಕರನ ಅಂಶಾವತಾರವಾಗಿದ್ದಾನೆ. ಆದ್ದರಿಂದ ಅವನು ಕಾಮವಾಸನೆ ಸಹಿತ ಷಡ್ರಿಪುಗಳನ್ನು ಜಯಿಸಿದ್ದಾನೆ. ಎಲ್ಲ ಇಂದ್ರಿಯಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಳ್ಳುವ ಸಾಮರ್ಥ್ಯ ಹನುಮಂತನಿಗಿರುವುದರಿಂದ ಅವನನ್ನು ‘ಜಿತೇಂದ್ರಿಯ’ನೆಂದು ಗೌರವಿಸಲಾಗಿದೆ.

೨. ವಜ್ರಾಂಗ ಬಜರಂಗಬಲಿ

ಹನುಮಂತನ ದೇಹ ವಜ್ರದಂತೆ ಕಠೋರವಾಗಿದೆ. ಆದ್ದರಿಂದ ಶತ್ರುಗಳು ಬಿಡುವ ದಿವ್ಯಾಸ್ತ್ರಗಳು ಅವನ ದೇಹವನ್ನು ಭೇದಿಸುವುದಿಲ್ಲ. ತ್ರೇತಾಯುಗದಲ್ಲಿ ರಾವಣನ ಸೈನ್ಯವು ವಾನರ ಸೈನ್ಯದ ಮೇಲೆ ಮತ್ತು ದ್ವಾಪರಯುಗದಲ್ಲಿ ಮಹಾಭಾರತ ಯುದ್ಧದಲ್ಲಿ ಕೌರವರು ಪಾಂಡವರ ಮೇಲೆ ಪ್ರಯೋಗಿಸಿದ ದಿವ್ಯಾಸ್ತ್ರಗಳು ಹನುಮಂತನ ಕೃಪೆಯಿಂದ ವಿಫಲವಾದವು. ತ್ರೇತಾ ಮತ್ತು ದ್ವಾಪರ ಯುಗದ ಯುದ್ಧಗಳಲ್ಲಿ ಶತ್ರುಗಳಿಂದ ಅಸಂಖ್ಯಾತ ಶಸ್ತ್ರಾಸ್ತ್ರಗಳ ಆಘಾತವಾದರೂ ವಜ್ರಾಂಗ ಹನುಮಂತನ ಮೇಲೆ ಯಾವುದೇ ಪರಿಣಾಮವಾಗಲಿಲ್ಲ.

೩. ಮಹಾವೀರ ಮತ್ತು ಮಹಾಶಕ್ತಿಶಾಲಿ

ಹನುಮಂತನು ಸೀತೆಯನ್ನು ಹುಡುಕಲು ಮಾರುವೇಷದಲ್ಲಿ ಲಂಕಾನಗರದೊಳಗೆ ಪ್ರವೇಶಿಸಿದಾಗ, ಲಂಕೆಯನ್ನು ರಕ್ಷಿಸುತ್ತಿದ್ದ ಲಂಕಿಣಿ ಎಂಬ ಹೆಸರಿನ ರಾಕ್ಷಸಿ ಅವನನ್ನು ಪ್ರವೇಶದ್ವಾರದಲ್ಲಿ ತಡೆದಳು. ಆಗ ಹನುಮಂತನು ತಕ್ಷಣ ವಿರಾಟ ರೂಪ ಧರಿಸಿ ಲಂಕಿಣಿಯ ಹಣೆಗೆ ರಭಸದಿಂದ ಮುಷ್ಟಿಪ್ರಹಾರ ಮಾಡಿದನು. ಒಂದು ಮುಷ್ಟಿ ಪ್ರಹಾರದಲ್ಲಿ ಲಂಕಿಣಿಯ ದುರ್ದಶೆಯಾಯಿತು ಹಾಗೂ ಅವಳು ಹನುಮಂತನಿಗೆ ಶರಣಾದಳು.

೪. ಯುದ್ಧಕುಶಲ ಮತ್ತು ದಿವ್ಯಾಸ್ತ್ರಗಳ ಬಗ್ಗೆ ಜ್ಞಾನವಿರುವವನು

ಹನುಮಂತನು ವೀರರೂಪವನ್ನು ಧರಿಸಿ ಸೂರಸಾ ರಾಕ್ಷಸಿ, ಅಕ್ಷಯಕುಮಾರ, ಜಂಬುಮಾಳಿ, ದೇವಾಂತಕ, ನರಾಂತಕ, ತ್ರಿಶಿರಾ, ಅಹಿರಾವಣ, ಮಹಿರಾವಣ, ಮಾಯಾಸುರ ಮೊದಲಾದ ರಾಕ್ಷಸರೊಂದಿಗೆ ಯುದ್ಧ ಮಾಡಿ ಅವರನ್ನು ವಧಿಸಿದನು. ಅವನಿಗೆ ದಿವ್ಯಾಸ್ತ್ರಗಳ ಜ್ಞಾನವಿತ್ತು.

೫. ನೇತೃತ್ವಗುಣ ಸಂಪನ್ನನಾಗಿರುವ ಹನುಮಂತ

ಹನುಮಂತನು ಅನೇಕ ಪ್ರಸಂಗಗಳಲ್ಲಿ ಉತ್ತಮ ನೇತೃತ್ವವನ್ನು ಮಾಡಿದನು. ಅದರ ಉದಾಹರಣೆಗಳು ಈ ಮುಂದಿನಂತಿವೆ.

೫ ಅ. ೧೦೦ ಯೋಜನ ಸಮುದ್ರವನ್ನು ಒಂದೇ ಉಸಿರಿನಲ್ಲಿ ದಾಟಿ ಶತ್ರುವಿನ ನಗರವನ್ನು ಪ್ರವೇಶಿಸಿ ಸೀತಾಮಾತೆಯನ್ನು ಹುಡುಕುವ ಹೊಣೆಯನ್ನು ಪೂರ್ಣಗೊಳಿಸುವುದು

ಹನುಮಂತ, ಅಂಗದ, ಜಾಂಬವಂತ ಮತ್ತು ವಾನರ ಸೇನೆಯು ಸೀತೆಯನ್ನು ಹುಡುಕಲು ದಕ್ಷಿಣ ದಿಕ್ಕಿಗೆ ಹೋದಾಗ ಸಂಪಾತಿಯು ಅವರಿಗೆ ಸೀತಾಮಾತೆಯು ಸಮುದ್ರದಲ್ಲಿರುವ ಲಂಕೆಯ ದ್ವೀಪದಲ್ಲಿ ಬಂಧನದಲ್ಲಿದ್ದಾಳೆಂದು ಹೇಳಿತು. ‘೧೦೦ ಯೋಜನ ಸಮುದ್ರವನ್ನು ದಾಟಿ ಲಂಕೆಗೆ ಯಾರು ಹೋಗುವರು’, ಎನ್ನುವ ಪ್ರಶ್ನೆ ಎಲ್ಲ ವಾನರರ ಮುಂದಿತ್ತು. ಆಗ ಹನುಮಂತನು ೧೦೦ ಯೋಜನ ಸಮುದ್ರವನ್ನು ಒಂದೇ ಉಸಿರಿನಲ್ಲಿ ದಾಟಿ ಶತ್ರುವಿನ ನಗರದೊಳಗೆ ಪ್ರವೇಶಿಸಿ ಸೀತಾಮಾತೆಯನ್ನು ಹುಡುಕುವ ಹೊಣೆಯನ್ನು ಸ್ವೀಕರಿಸಿ ಅದನ್ನು ಪೂರ್ಣಗೊಳಿಸಿದನು.

೫ ಆ. ಸಂಕಟದಲ್ಲಿಯೂ ಭಯಭೀತನಾಗದೆ ಧೈರ್ಯದಿಂದ ಉಪಾಯವನ್ನು ಕಂಡು ಹಿಡಿಯುವ ಹನುಮಂತ !

ಲಂಕೆಯಲ್ಲಿ ಯುದ್ಧದ ಸಮಯದಲ್ಲಿ ಇಂದ್ರಜಿತನು ರಾಮ ಮತ್ತು ಲಕ್ಷ್ಮಣನ ಮೇಲೆ ನಾಗಪಾಶವನ್ನು ಪ್ರಯೋಗಿಸಿ ಅವರನ್ನು ಬಂಧಿಸಿದನು, ಆಗ ವಾನರ ಸೇನೆಯಲ್ಲಿ ಹಾಹಾಕಾರ ಹರಡಿತು. ಆಗ ಹನುಮಂತನು ಶೂನ್ಯ ಗತಿಯಲ್ಲಿ (ಅತ್ಯಂತ ವೇಗವಾಗಿ ಚಲಿಸುವುದು. ದೇವತೆಗಳು ಭಕ್ತರಿಗೆ ದರ್ಶನ ಕೊಡಲು ಅವರ ಲೋಕದಿಂದ ಪೃಥ್ವಿಗೆ ಬರುವಾಗ ಶೂನ್ಯ ಗತಿಯಲ್ಲಿ ಬರುತ್ತಾರೆ. ಇದಕ್ಕೆ ‘ಹಂಸ ಗತಿ’ ಎಂದು ಕೂಡ ಹೇಳುತ್ತಾರೆ. ಅವತಾರಗಳು ಮಹಾಹಂಸ ಗತಿಯಲ್ಲಿ ಚಲಿಸುತ್ತಾರೆ) ವೈಕುಂಠಕ್ಕೆ ಹೋಗಿ ಗರುಡನನ್ನು ಕರೆದುಕೊಂಡು ಪೃಥ್ವಿಗೆ ಬಂದನು. ಗರುಡನು ರಾಮ ಮತ್ತು ಲಕ್ಷ್ಮಣರನ್ನು ನಾಗಪಾಶದಿಂದ ತಕ್ಷಣ ಮುಕ್ತಗೊಳಿಸಿದನು.

೬. ರಾಜನೀತಿಜ್ಞ ಹಾಗೂ ಕೂಟನೀತಿಜ್ಞ ಹನುಮಂತ

೬ ಅ. ಸುಗ್ರೀವನ ಚತುರ ಹಾಗೂ ನೀತಿವಂತ ಮಹಾಮಂತ್ರಿ

ಹನುಮಂತನು ಕಿಶ್ಕಿಂಧಾನರೇಶ ಸುಗ್ರೀವನ ಮಹಾಮಂತ್ರಿ ಆಗಿದ್ದನು. ಸುಗ್ರೀವನು ರಾಜ್ಯಾಡಳಿತವನ್ನು ಉತ್ತಮವಾಗಿ ನಡೆಸಲು ಜಾಂಬವಂತನ ಜೊತೆಗೆ ಹನುಮಂತನ ಸಲಹೆಯನ್ನೂ ಪಡೆಯುತ್ತಿದ್ದನು. ಮಹಾಮಂತ್ರಿಯೆಂದು ಆಡಳಿತ ನಡೆಸುತ್ತಿರುವಾಗ ಹನುಮಂತನು ಮಂತ್ರಿಮಂಡಳದ ಎಲ್ಲ ಮಂತ್ರಿಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜನ ಮನಸ್ಸನ್ನೂ ಗೆದ್ದು ಕೊಂಡಿದ್ದನು. ರಾಜನು ಧರ್ಮಾಧಿಷ್ಠಿತ ರಾಜ್ಯವ್ಯವಹಾರವನ್ನು ನಡೆಸಲು ಕರ್ತವ್ಯಗಳು ಮತ್ತು ರಾಜಧರ್ಮವನ್ನು ಹೇಗೆ ಪಾಲಿಸಬೇಕು, ಎನ್ನುವ ವಿಷಯದಲ್ಲಿ ಹನುಮಂತನು ಸುಗ್ರೀವನಿಗೆ ಮಾರ್ಗದರ್ಶನ ಮಾಡಿದ್ದನು.

೬ ಆ. ಶ್ರೀರಾಮನ ದೂತನಾಗಿ ಕಾರ್ಯ

ಸೀತೆಯನ್ನು ಹುಡುಕುತ್ತಾ ಹನುಮಂತನು ಲಂಕೆಗೆ ತಲುಪಿದಾಗ ಇಂದ್ರಜಿತನು ಹನುಮಂತನನ್ನು ಬ್ರಹ್ಮಾಸ್ತ್ರದಲ್ಲಿ ಬಂಧಿಸಿ ಅವನನ್ನು ರಾವಣನ ಮುಂದೆ ತಂದನು. ಹನುಮಂತನು ಕೇವಲ ಸೆರೆಯಾಳು ಎಂಬ ಭೂಮಿಕೆಯನ್ನು ನಿರ್ವಹಿಸದೆ ಶ್ರೀರಾಮನ ದೂತನೆಂದು ರಾವಣನೊಂದಿಗೆ ಸಂಭಾಷಣೆ ನಡೆಸಿದನು. ಈ ಸಂಭಾಷಣೆಯಲ್ಲಿ ಅವನು ಶ್ರೀರಾಮನ ಶ್ರೇಷ್ಠತೆಯನ್ನು ಹೇಳಿ ಅವನ ಗುಣಗಾನ ಮಾಡಿದನು ಹಾಗೂ ಶ್ರೀರಾಮನ ವತಿಯಿಂದ ರಾವಣನಿಗೆ ಸೀತಾಮಾತೆಯನ್ನು ಮುಕ್ತಗೊಳಿಸಲು ಆದೇಶ ನೀಡಿದನು. ಹನುಮಂತನು ದೂತನೆಂದು ಕಾರ್ಯ ಮಾಡುವಾಗ ‘ಶತ್ರುವಿನ ಮನೋಧೈರ್ಯವನ್ನು ಹೇಗೆ ದುರ್ಬಲಗೊಳಿಸುವುದು ಹಾಗೂ ಅವನು ಶರಣಾಗುವಂತೆ ಮಾಡುವುದು ಹೇಗೆ’, ಎಂಬುದನ್ನು ಕಲಿಸಿದನು. ರಾಮದೂತನೆಂದು ಪಾತ್ರವನ್ನು ನಿರ್ವಹಿಸುವಾಗ ಹನುಮಂತನು ರಾಜನೀತಿ ಮತ್ತು ಕೂಟನೀತಿಯನ್ನು ಒಟ್ಟಿಗೆ ಉಪಯೋಗಿಸಿದನು. ಇದರಿಂದ ಹನುಮಂತನ ಚಾತುರ್ಯದ ಪರಿಚಯವಾಗುತ್ತದೆ.

೭. ಭಕ್ತವತ್ಸಲ ಹನುಮಂತ

ಹನುಮಂತನು ಭಕ್ತವತ್ಸಲನಾಗಿದ್ದಾನೆ, ಎಂಬುದಕ್ಕೆ ಮುಂದಿನ ಉದಾಹರಣೆಗಳಿಂದ ಸಾಕ್ಷಿ ಸಿಗುತ್ತದೆ.

೭ ಅ. ಸುಗ್ರೀವನ ಪತ್ನಿ ರೂಮಾಳನ್ನು ರಕ್ಷಿಸುವುದು

ಸುಗ್ರೀವನ ಪತ್ನಿ ರೂಮಾ ಇವಳು ವಾಲಿಯ ಸೆರೆಮನೆಯಲ್ಲಿರುವಾಗ ಅವಳ ಮೇಲೆ ಬಲತ್ಕಾರ ಮಾಡಲು ವಾಲಿ ಬರುತ್ತಿದ್ದನು, ಆಗ ರೂಮಾ ಹನುಮಂತನನ್ನು ಸ್ಮರಿಸುತ್ತಿದ್ದಳು. ರೂಮಾ ಸ್ಮರಣೆ ಮಾಡಿದ ತಕ್ಷಣ ಹನುಮಂತ ಪ್ರತ್ಯಕ್ಷನಾಗಿ ಅವಳನ್ನು ವಾಲಿಯಿಂದ ರಕ್ಷಿಸುತ್ತಿದ್ದನು.

೭ ಆ. ಸುಗ್ರೀವನಿಗೆ ಪ್ರಭು ಶ್ರೀರಾಮರೊಂದಿಗೆ ಭೇಟಿ ಮಾಡಿಸುವುದು

ಋಷ್ಯಮುಖ ಪರ್ವತದ ಬುಡದಲ್ಲಿ ಸುಗ್ರೀವನನ್ನು ಹುಡುಕುತ್ತಾ ಬಂದಿರುವ ಪ್ರಭು ಶ್ರೀರಾಮ ಮತ್ತು ಲಕ್ಷ್ಮಣರನ್ನು ಗುರುತಿಸಿದ ರಾಜಪುರೋಹಿತರ ರೂಪದಲ್ಲಿದ್ದ ಹನುಮಂತನು ಅವರಿಬ್ಬರನ್ನೂ ಸುಗ್ರೀವನ ಬಳಿಗೆ ಕರೆದುಕೊಂಡು ಬಂದನು. ಹನುಮಂತನಿಂದಾಗಿ ಸುಗ್ರೀವನಿಗೆ ಪ್ರಭು ಶ್ರೀರಾಮರ ಭೇಟಿಯಾಯಿತು.

೭ ಇ. ಇಂದ್ರನನ್ನು ಮುಕ್ತಗೊಳಿಸುವುದು

ಹನುಮಂತನು ಸೀತೆಯನ್ನು ಹುಡುಕುತ್ತಾ ಲಂಕೆಗೆ ಹೋದಾಗ ಅವನು ಬ್ರಹ್ಮದೇವರ ಆಜ್ಞೆಗನುಸಾರ ಇಂದ್ರಜಿತನ ಸೆರೆಮನೆಯಲ್ಲಿದ್ದ ಇಂದ್ರನನ್ನು ಮುಕ್ತಗೊಳಿಸಿದನು.

೭ ಈ. ರಾವಣನ ಸೆರೆಮನೆಯಿಂದ ನವಗ್ರಹಗಳನ್ನು ಮುಕ್ತಗೊಳಿಸುವುದು

ರಾವಣನಿಗೆ ಎಚ್ಚರಿಕೆ ನೀಡಲು ಲಂಕೆಗೆ ಬಂದಿರುವ ನವಗ್ರಹಗಳನ್ನು ರಾವಣನು ತನ್ನ ಮಾಯಾವಿ ಸಿದ್ಧಿಯ ಸಹಾಯದಿಂದ ಬಂಧಿಸಿದ್ದನು. ನವಗ್ರಹಗಳ ಮುಕ್ತಿಗಾಗಿ ಬ್ರಹ್ಮದೇವರಲ್ಲಿ ಪ್ರಾರ್ಥನೆ ಮಾಡಿದಾಗ ಬ್ರಹ್ಮದೇವರ ಆಜ್ಞೆಗನುಸಾರ ಹನುಮಂತನು ನವಗ್ರಹಗಳನ್ನು ರಾವಣನ ಸೆರೆಮನೆಯಿಂದ ಮುಕ್ತಗೊಳಿಸಿದನು.

೭ ಉ. ವಿಭೀಷಣನಿಗೆ ಆಶ್ರಯ ನೀಡುವಂತೆ ಪ್ರಭು ಶ್ರೀರಾಮನಿಗೆ ಸಲಹೆ ನೀಡುವುದು

ವಾನರ ಸೈನ್ಯವು ಲಂಕೆಗೆ ತಲುಪುವ ಮೊದಲು ಅದು ದಕ್ಷಿಣ ಭಾರತದ ಸಮುದ್ರ ತೀರದಲ್ಲಿರುವಾಗ ರಾವಣನ ತಮ್ಮನಾದ ವಿಭೀಷಣನು ಪ್ರಭುಶ್ರೀರಾಮನಿಗೆ ಶರಣಾದನು. ‘ವಿಭೀಷಣನಿಗೆ ಆಶ್ರಯ ನೀಡಬೇಕೋ ಅಥವಾ ಬೇಡವೋ ?’, ಎನ್ನುವ ಪ್ರಶ್ನೆಯು ಪ್ರಭು ರಾಮನನ್ನು ಕಾಡುತ್ತಿರುವಾಗ ಅಂಗದ, ಸುಗ್ರೀವ, ಲಕ್ಷ್ಮಣ ಮತ್ತು ಜಾಂಬವಂತ ಇವರು ವಿಭೀಷಣನ ವಿಷಯದಲ್ಲಿ ಅವಿಶ್ವಾಸವನ್ನು ತೋರಿಸಿ ಅವನಿಗೆ ಆಶ್ರಯ ನೀಡಬಾರದೆಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಅಂತರ್ಯಾಮಿ ಹನುಮಂತನು ವಿಭೀಷಣನ ಮನಸ್ಸಿನಲ್ಲಿದ್ದ ರಾಮಭಕ್ತಿಯನ್ನು ಗುರುತಿಸಿ ಅವನಿಗೆ ಆಶ್ರಯ ನೀಡಬೇಕೆಂದು ಪ್ರಭು ಶ್ರೀರಾಮರಿಗೆ ಸಲಹೆ ನೀಡಿದನು. ಹನುಮಂತನಿಂದಾಗಿ ಪ್ರಭು ಶ್ರೀರಾಮರು ವಿಭೀಷಣನನ್ನು ಸ್ವೀಕರಿಸಿದರು.

೭ ಊ. ಲಕ್ಷ್ಮಣನಿಗೆ ಸಂಜೀವನಿ ರೂಪದಲ್ಲಿ ಪುನರ್ಜೀವನ ನೀಡುವುದು !

ಹನುಮಂತನು ದ್ರೋಣಗಿರಿ ಪರ್ವತವನ್ನು ತಂದು ವೈದ್ಯ ಸುಶೇನರಿಗೆ ಲಕ್ಷ್ಮಣನ ಉಪಚಾರಕ್ಕಾಗಿ ಸಂಜೀವನಿಯನ್ನು ಒದಗಿಸಿದನು. ಸರಿಯಾದ ಸಮಯಕ್ಕೆ ಸಂಜೀವನಿ ಲಭಿಸಿದುದರಿಂದ ಲಕ್ಷ್ಮಣನ ಜೀವದ ರಕ್ಷಣೆಯಾಯಿತು. ಆದ್ದರಿಂದ ಲಕ್ಷ್ಮಣನಿಗೆ ಸಂಜೀವನಿ ಸ್ವರೂಪದ ಪುನರ್ಜೀವನ ನೀಡಿದ ಶ್ರೇಯಸ್ಸು ಹನುಮಂತನಿಗೆ ಸಲ್ಲುತ್ತದೆ.

೭ ಎ. ಹನುಮಂತನು ಮುಕ್ತಾಸುರನೊಂದಿಗೆ ಯುದ್ಧ ಮಾಡಿ ಅಪ್ಸರೆಯರನ್ನು ಮುಕ್ತಗೊಳಿಸುವುದು

ತ್ರೇತಾಯುಗದಲ್ಲಿ ರಾಮ-ರಾವಣರ ಯುದ್ಧದ ನಂತರ ಪಾತಾಳದ ದೊಡ್ಡ ಅಸುರ ಮುಕ್ತಾಸುರನು ಸ್ವರ್ಗದ ಅಪ್ಸರೆಯರನ್ನು ಸಮುದ್ರದೊಳಗೆ ಕರೆದೊಯ್ದು ಮುತ್ತಿನ ಸರಪಳಿಯಿಂದ ಬಂಧಿಸಿಟ್ಟನು. ನಾರದ ಮುನಿಗಳು ಹೇಳಿದ ನಂತರ ಹನುಮಂತನು ಸಮುದ್ರದೊಳಗೆ ಹೋಗಿ ಮುಕ್ತಾಸುರನೊಂದಿಗೆ ಯುದ್ಧ ಮಾಡಿ ಅವನನ್ನು ವಧಿಸಿ ಅಪ್ಸರೆಯರನ್ನು ಮುಕ್ತಗೊಳಿಸಿದನು.

೭ ಏ. ಹನುಮಂತನ ಕೃಪೆಯಿಂದ ವಿಭೀಷಣ ಮತ್ತು ಸರಮಾ ಇವರು ಅಸುರೀ ಆಕ್ರಮಣದಿಂದ ರಕ್ಷಿಸಲ್ಪಡುವುದು

ಪ್ರಭು ಶ್ರೀರಾಮರು ದೇಹತ್ಯಾಗ ಮಾಡಿದ ನಂತರ ಪುನಃ ಅಸುರರು ಬಲಶಾಲಿಗಳಾಗತೊಡಗಿದರು. ಪ್ರಚಂಡಾಸುರ, ವಿಕಟಾಸುರ ಮೊದಲಾದ ಅಸುರರು ವಿಭೀಷಣ ಮತ್ತು ಅವನ ಧರ್ಮಪತ್ನಿ ಸರಮಾಳ ಮೇಲೆ ಆಕ್ರಮಣ ಮಾಡಿ ಅವರನ್ನು ವಧಿಸಲು ಪ್ರಯತ್ನಿಸಿದರು; ಆದರೆ ಮಹಾಬಲಿ ಹನುಮಂತನ ಕೃಪೆಯಿಂದ ವಿಭೀಷಣ ಮತ್ತು ಸರಮಾ ಇವರು ಅಸುರರಿಂದ ರಕ್ಷಿಸಲ್ಪಟ್ಟರು.

೭ ಐ. ಲವ-ಕುಶರ ರಕ್ಷಕ ಹನುಮಂತ

ಪ್ರಭು ಶ್ರೀರಾಮರು ದೇಹತ್ಯಾಗ ಮಾಡಿದ ನಂತರ ಲವ-ಕುಶರು ರಾಜ್ಯಾಡಳಿತ ನಡೆಸಿದರು. ಹನುಮಂತನು ಅವರಿಗೆ ಆಗಾಗ ಮಾರ್ಗದರ್ಶನ ಮಾಡಿ ಸಹಾಯ ಮಾಡಿದನು. ಅದೇ ರೀತಿ ಪ್ರಚಂಡಾಸುರ, ವಿಕಟಾಸುರ ಮುಂತಾದ ರಾಕ್ಷಸರಿಂದ ಅವರ ಮೇಲಾದ ಆಕ್ರಮಣದಿಂದ ಹನುಮಂತನು ಅವರನ್ನು ರಕ್ಷಿಸಿದನು. ಒಮ್ಮೆ ಲವ-ಕುಶರ ಮೇಲೆ ರಾಹು ಮತ್ತು ಶನಿಯ ವಕ್ರದೃಷ್ಟಿಯಾಗಿ ಅವರು ಜೀವವನ್ನು ಕಳೆದುಕೊಳ್ಳುವಂತಹ ಸಂಕಟದಲ್ಲಿ ಸಿಲುಕಿದರು. ಹನುಮಂತನ ಕೃಪೆಯಿಂದ ಅವರ ಕಷ್ಟ ಪರಿಹಾರವಾವಾಗಿ ಅವರು ಸುಖವಾಗಿ ತಮ್ಮ ಧಾಮಕ್ಕೆ ತಲಪಿದರು.

೮. ಸ್ವಲ್ಪವೂ ಅಹಂಕಾರವಿಲ್ಲದ ಮತ್ತು ಸರ್ವಗುಣಸಂಪನ್ನ ಆಗಿರುವ ಮಹಾಬಲಿ ಹನುಮಂತ !

ದೇವರಾಗಿದ್ದರೂ ಭಕ್ತನಾಗಿರುವುದು : ಹನುಮಂತ ಸ್ವತಃ ಉಚ್ಚದೇವತೆಯಾಗಿದ್ದರೂ ದೇವತ್ವ ಸ್ವೀಕರಿಸದೆ ಶ್ರೀರಾಮನ ಭಕ್ತಿ ಮಾಡಿದನು.

– ಕು. ಮಧುರಾ ಭೋಸಲೆ, ಸನಾತನ ಆಶ್ರಮ, ಗೋವಾ.

2 thoughts on “ಭಕ್ತ ಶಿರೋಮಣಿ ಸಂಕಟಮೋಚನ ಹನುಮಂತನ ವಿವಿಧ ಗುಣವೈಶಿಷ್ಟ್ಯಗಳು !”

Leave a Comment