ನೆರೆಗೆ ತುತ್ತಾಗುವ ಕ್ಷೇತ್ರದ ಜನರಿಗಾಗಿ ಮಹತ್ವದ ಮಾಹಿತಿ (ಭಾಗ 4)

ಪ್ರತ್ಯಕ್ಷ ನೆರೆ ಬಂದಾಗ ಯಾವ ಕಾಳಜಿಯನ್ನು ವಹಿಸಬೇಕು ಎಂಬುದರ ಬಗ್ಗೆ ಮಾರ್ಗದರ್ಶಕ ಸೂಚನೆಗಳು

ಪ್ರತ್ಯಕ್ಷ ನೆರೆ ಬಂದಾಗ ಉಪಾಯಯೋಜನೆ

೨೦೧೯ ರಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರದ ಕೆಲವು ನಗರಗಳಲ್ಲಿ ಭಯಂಕರ ನೆರೆ (ಪ್ರವಾಹ) ಬಂದಾಗ ‘ಯಾವ ಯೋಗ್ಯ ಕೃತಿಗಳನ್ನು ಮಾಡಬೇಕು ?’ ಎಂಬುದರ ಬಗ್ಗೆ ಅರಿವಿಲ್ಲದ ಕಾರಣ ಅನೇಕ ನಾಗರಿಕರು ಗೊಂದಲದಕ್ಕೀಡಾದರು. ಇಂತಹ ಪ್ರಸಂಗಗಳಲ್ಲಿ ಜನರಿಂದ ಅಯೋಗ್ಯ ಕೃತಿಗಳನ್ನು ಮಾಡುವ ಅಥವಾ ಅಯೋಗ್ಯ ನಿರ್ಣಯಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾಗಬಾರದೆಂದು ‘ಪ್ರತ್ಯಕ್ಷ ಪ್ರವಾಹದ ಸ್ಥಿತಿ ಉದ್ಭವಿಸಿದರೆ ಯಾವ ಕಾಳಜಿಯನ್ನು ವಹಿಸಬೇಕು, ನೆರೆ ಬಂದಾಗ ಮನೆಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗಬೇಕಾದರೆ ಏನು ಮಾಡಬೇಕು ?, ಹಾಗೆಯೇ ಪ್ರವಾಹ ಇಳಿದ  ನಂತರ ತೆಗೆದುಕೊಳ್ಳಬೇಕಾದ ಕಾಳಜಿ, ಈ ಬಗ್ಗೆ ಮಾರ್ಗದರ್ಶಕ ಸೂಚನೆಗಳನ್ನು ಮುಂದೆ ಕೊಡಲಾಗಿದೆ.

೧. ಪ್ರತ್ಯಕ್ಷ ನೆರೆ ಹಾವಳಿಯ ಸ್ಥಿತಿ ಉದ್ಭವಿಸಿದರೆ ಮುಂದಿನಂತೆ ಎಚ್ಚರ ವಹಿಸಿ ಸುರಕ್ಷಿತವಾಗಿರಬೇಕು !

ಅ. ನೀರಿನ ಮಿತವ್ಯಯ ಮಾಡಬೇಕು. ನೀರನ್ನು ಕುದಿಸಿ ಜಂತುರಹಿತ ಮಾಡಿ ಕುಡಿಯಬೇಕು. ಆದಷ್ಟು ತಂಗಳನ್ನವನ್ನು ಸೇವಿಸಬಾರದು, ಹಾಗೆಯೇ ಅನ್ನವನ್ನು ಯಾವಾಗಲೂ ಮುಚ್ಚಿಡಬೇಕು.

ಆ. ವಿದ್ಯುತ್ ಉಪಕರಣಗಳು ನೀರಿನಲ್ಲಿ ಮುಳುಗುತ್ತಿದ್ದರೆ ಅವುಗಳ ವಿದ್ಯುತ್ ಜೋಡಣೆ ತಕ್ಷಣ ಕಡಿತಗೊಳಿಸಬೇಕು. ಇಂತಹ ಪರಿಸ್ಥಿತಿಯಲ್ಲಿ ಅವುಗಳನ್ನು ಉಪಯೋಗಿಸಬಾರದು.

ಇ. ಮನೆಯೊಳಗೆ ನೀರು ಬಂದಿದ್ದರೆ ವಿದ್ಯುತ್ ಕಂಬದಿಂದ ಮನೆಗೆ ಬರುವ ವಿದ್ಯುತ್ ಜೋಡಣೆಯನ್ನು ಕಡಿತಗೊಳಿಸಬೇಕು. ನೀರು ಮತ್ತು ವಿದ್ಯುತ್ ಒಂದಕ್ಕೊಂದು ಸಂಪರ್ಕವಾದರೆ ವಿದ್ಯುತ್ ಆಘಾತ (ಶಾಕ್) ಆಗಬಹುದು.

ಈ. ಮನೆಯ ನೆಲಮನೆಯಲ್ಲಿ (ಗ್ರೌಂಡ್‌ಫ್ಲೋರ್) ನೀರು ತುಂಬಿದ್ದರೆ, ಅದರಿಂದ ರಕ್ಷಿಸಿಕೊಳ್ಳಲು ಮೇಲಿನ ಅಂತಸ್ತಿಗೆ (ಮೊದಲ ಮಾಳಿಗೆ, ಎರಡನೇ ಮಾಳಿಗೆ, ಟೆರೇಸ್) ಆದಷ್ಟು ಹೋಗಬಾರದು. ಇದರ ಕಾರಣವೆಂದರೆ, ನಂತರ ನೀರಿನ ಮಟ್ಟ ಇನ್ನಷ್ಟು ಹೆಚ್ಚಾದರೆ, ಮನೆಯಿಂದ ಹೊರಗೆ ಸುರಕ್ಷಿತ ಸ್ಥಳಕ್ಕೆ ತೆರಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಸರಕಾರದ ವತಿಯಿಂದ ನೆರೆಪೀಡಿತರಿಗಾಗಿ ಮಾಡಲಾದ ಆಶ್ರಯಸ್ಥಾನಗಳಿಗೆ (ನೀರು ಕಡಿಮೆ ಇರುವಾಗಲೇ) ತೆರಳಬೇಕು.

ಉ. ಸಂಚಾರಿವಾಣಿಯ ಅತಿ ಬಳಕೆಯನ್ನು ಮಾಡದೇ ಆವಶ್ಯಕತೆ ಇದ್ದರೆ ಮಾತ್ರ ಅದನ್ನು ಉಪಯೋಗಿಸಬೇಕು. ಸದ್ಯ ಮನೆಯಲ್ಲಿ ಎಲ್ಲರ ಬಳಿ ಸಂಚಾರಿವಾಣಿಗಳು ಇರುವುದರಿಂದ ಒಂದೇ ಸಂಚಾರಿವಾಣಿಯನ್ನು ಸಂಪರ್ಕಕ್ಕಾಗಿ ಉಪಯೋಗಿಸಬಹುದು. ಇದರಿಂದ ಎಲ್ಲ ಸಂಚಾರಿವಾಣಿಗಳ ಬ್ಯಾಟರಿಗಳು ಒಟ್ಟಿಗೆ ‘ಡಿಸ್ಚಾರ್ಜ್’ (ಖಾಲಿ) ಆಗಿ ಅಡಚಣೆ ಬರುವುದಿಲ್ಲ.

ಊ. ನೆರೆಯ ನೀರಿನಲ್ಲಿ ವಾಹನಗಳು ಸಿಲುಕುವುದು, ವಾಹನಗಳಿಗೆ ತಡೆಯುಂಟಾಗುವುದು, ಇಂತಹ ಘಟನೆಗಳು ಘಟಿಸುತ್ತವೆ. ಆದ್ದರಿಂದ ನೆರೆಹಾವಳಿಯ ಕ್ಷೇತ್ರದಲ್ಲಿ ದ್ವಿಚಕ್ರ ಅಥವಾ ಚತುಶ್ಚಕ್ರ ವಾಹನಗಳನ್ನು ತೆಗೆದುಕೊಂಡು ಹೋಗಬಾರದು. ಮನೆಯಲ್ಲಿ ಅಥವಾ ಬೇರೆ ಎಲ್ಲಿಯಾದರೂ ವಾಹನಗಳನ್ನು ನಿಲ್ಲಿಸಿದ್ದರೆ ಅವುಗಳನ್ನು ಸರಪಳಿಯಿಂದ ಕಟ್ಟಿಡಬೇಕು, ಅದರಿಂದ ಅವು ನೀರಿನ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುವುದಿಲ್ಲ.

ಋ. ಮನೆಯಲ್ಲಿ ಮಕ್ಕಳು, ವೃದ್ಧರು ಹಾಗೆಯೇ ಅಂಗವಿಕಲರಿದ್ದರೆ, ಅವರ ಕಡೆ ವಿಶೇಷವಾಗಿ ಗಮನಕೊಡಬೇಕು ಮತ್ತು ಅವರಲ್ಲಿ ಧೈರ್ಯವನ್ನು ತುಂಬಬೇಕು.

ಎ. ಆಪತ್ಕಾಲದ ಸ್ಥಿತಿಯಲ್ಲಿ ಸುಮ್ಮನೇ ಎಲ್ಲೆಡೆ ಗಾಳಿಸುದ್ಧಿ ಹಬ್ಬಿಸಲಾಗುತ್ತದೆ. ಆದ್ದರಿಂದ ಯಾವುದೇ ಗಾಳಿಸುದ್ಧಿಯನ್ನು ನಂಬಬಾರದು. ಸರಕಾರ ಅಧಿಕೃತವಾಗಿ ಪ್ರಸಾರ ಮಾಡಿದ ಮಾಹಿತಿಯನ್ನು ಸತ್ಯವೆಂದು ತಿಳಿಯಬೇಕು.

೨. ಆರೋಗ್ಯದ ಬಗ್ಗೆ ವಹಿಸಬೇಕಾದ ಕಾಳಜಿ !

೨ ಅ. ಸಾಂಕ್ರಾಮಿಕ ರೋಗಗಳು ಆಗದಂತೆ ಎಚ್ಚರ ವಹಿಸುವುದು : ಅತಿವೃಷ್ಟಿಯಿಂದಾಗಿ ಎಲ್ಲೆಡೆ ತೇವಾಂಶ ಹಾಗೂ ಆರ್ದ್ರತೆ ನಿರ್ಮಾಣವಾಗುತ್ತದೆ. ಸೂರ್ಯನು ಮೋಡದಿಂದ ಕವಿದಿರುವುದರಿಂದ ಶುಭ್ರವಾದ ಸೂರ್ಯ ಪ್ರಕಾಶದ ಅಭಾವವಿರುತ್ತದೆ. ಇದರಿಂದ ರೋಗರುಜಿನೆಗಳು ಹರಡಿ ಸಾಂಕ್ರಾಮಿಕ ಕಾಯಿಲೆಗಳು ಉದ್ಭವಿಸುವ ಸಾಧ್ಯತೆ ಇರುತ್ತದೆ. ಆದ್ದರಿಂದ ಈ ಸಮಯದಲ್ಲಿ ಅಶುದ್ಧ ನೀರಿನಿಂದ ಆಗುವ ರೋಗಗಳು (ಕಾಮಾಲೆ, ವಿಷಮಶೀತಜ್ವರ [ಟೈಫೈಡ್], ಅತಿಸಾರ [ಭೇದಿ], ಲೆಪ್ಟೋಸ್ಪೈರೋಸಿಸ್ ಇತ್ಯಾದಿ) ಆಗಬಹುದು. ಆದ್ದರಿಂದ ಆರೋಗ್ಯದ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು.

೨ ಆ. ಸೊಳ್ಳೆಗಳನ್ನು ನಿಯಂತ್ರಿಸುವ ಊದುಬತ್ತಿಗಳನ್ನು ಉಪಯೋಗಿಸುವುದು : ನೆರೆ ಬಂದಾಗ ಸೊಳ್ಳೆಗಳ ಹಾವಳಿ ಹೆಚ್ಚಾಗುತ್ತದೆ. ಅದ್ದರಿಂದ ಮಲೇರಿಯಾ, ಡೇಂಗ್ಯೂದಂತಹ ಕಾಯಿಲೆಗಳು ಬರಬಹುದು. ಪರಿಸರದಲ್ಲಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದ್ದರೆ, ಸೊಳ್ಳೆಯ ಪರದೆ ಅಥವಾ ಸೊಳ್ಳೆಗಳ ನಿಯಂತ್ರಣಕ್ಕಾಗಿ ಊದುಬತ್ತಿಗಳನ್ನು ಹಚ್ಚುವುದು, ಸೊಳ್ಳೆಗಳು ಕಚ್ಚಬಾರದೆಂದು ಮುಲಾಮು (ಉದಾ. ಓಡೋಮಾಸ್) ಹಚ್ಚುವುದು ಇತ್ಯಾದಿಗಳನ್ನು ಮಾಡಬಹುದು.

೩. ಆಧ್ಯಾತ್ಮಿಕ ಸ್ತರದಲ್ಲಿ ಮಾಡುವ ಪ್ರಯತ್ನಗಳು !

೩ ಅ. ದೇವರಿಗೆ ಪ್ರಾರ್ಥನೆ ಮಾಡುವುದು : ಭಗವಾನ ಶ್ರೀಕೃಷ್ಣ, ಗ್ರಾಮದೇವತೆ, ಸ್ಥಾನದೇವತೆ ಮತ್ತು ವಾಸ್ತುದೇವತೆಗಳಿಗೆ ಪ್ರತಿ ೧೫ ನಿಮಿಷಗಳಿಗೊಮ್ಮೆ ಅಥವಾ ಅರ್ಧ ಗಂಟೆಗೊಮ್ಮೆ ಮನಃಪೂರ್ವಕ ಪ್ರಾರ್ಥನೆ ಮಾಡಬೇಕು. ‘ಈಶ್ವರಾ, ನಾವು ನಿನಗೆ ಶರಣಾಗಿದ್ದೇವೆ, ನೀನೇ ನಮ್ಮನ್ನು ಕಾಪಾಡಬೇಕು. ನನ್ನಿಂದ ನಿರಂತರವಾಗಿ ನಿನ್ನ ನಾಮಜಪ ನಡೆಯಲಿ. ನನ್ನ ಕುಟುಂಬದವರ ಮತ್ತು ನನ್ನ ಮನೆಯ ಸುತ್ತಲೂ ನಿನ್ನ ನಾಮಜಪದ ಸಂರಕ್ಷಣಾ ಕವಚ ನಿರ್ಮಾಣವಾಗಲಿ’ ಎಂದು ಪ್ರಾರ್ಥನೆಯನ್ನು ಮಾಡಬೇಕು.

೩ ಆ. ಹೆಚ್ಚೆಚ್ಚು ನಾಮಜಪ ಮಾಡುವುದು : ದಿನವಿಡೀ ಆದಷ್ಟು ಹೆಚ್ಚು ಸಮಯ ಭಗವಾನ ಶ್ರೀಕೃಷ್ಣ, ಕುಲದೇವತೆ ಆಥವಾ ಇಷ್ಟದೇವತೆಯ ನಾಮಜಪವನ್ನು ಮಾಡಬೇಕು. ಕಲಿಯುಗದಲ್ಲಿ ‘ದೇವರ ನಾಮಜಪವೇ ಆಧಾರ’ವಾಗಿರುವುದರಿಂದ ಮನಸ್ಸಿನಲ್ಲಿ ಸತತವಾಗಿ ನಾಮಜಪವನ್ನು ಮಾಡುತ್ತಿರಬೇಕು. ನಾಮಜಪವನ್ನು ಹಚ್ಚಿಡುವ ವ್ಯವಸ್ಥೆಯಿದ್ದರೆ, ಸಂಚಾರಿವಾಣಿಯಲ್ಲಿ ಮತ್ತು ಸ್ಪೀಕರ್‌ನಲ್ಲಿ ನಾಮಜಪವನ್ನು ಹಚ್ಚಿಡಬೇಕು. ಇದರಿಂದ ನಮಗೆ ನಾಮಜಪ ಮಾಡಲು ನೆನಪಾಗುವದು.

೩ ಇ. ಇತರರಿಗೆ ಸಹಾಯ ಮಾಡುವಾಗ ಭಾವ ಹೇಗಿರಬೇಕು ? : ಇಂತಹ ಆಪತ್ತಿನಲ್ಲಿ ಎಲ್ಲರೂ ಪರಸ್ಪರರಿಗೆ ಸಹಾಯ ಮಾಡಬೇಕು, ಹಾಗೆಯೇ ಮಾನಸಿಕ ಆಧಾರವನ್ನು ನೀಡಿ ಭಗವಂತನ ಮೇಲಿನ ಶ್ರದ್ಧೆಯನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ‘ಸಾಮಾಜಿಕ ಬಂಧುತ್ವವನ್ನು ಪಾಲಿಸುವುದು’ ಪ್ರತಿಯೊಬ್ಬರ ಧರ್ಮಕರ್ತವ್ಯವೇ ಆಗಿದೆ; ಆದರೆ ಇತರರಿಗೆ ಸಹಾಯ ಮಾಡುವಾಗ ‘ನಾನು ಸಹಾಯ ಮಾಡದೆ, ಈಶ್ವರನೇ ನನ್ನಿಂದ ಇದನ್ನು ಮಾಡಿಸಿಕೊಳ್ಳುತ್ತಿದ್ದಾನೆ’, ಎನ್ನುವ ಭಾವದಿಂದ ನಾಮಜಪ ಮಾಡುತ್ತಾ ಸಹಾಯ ಮಾಡಬೇಕು. ಅದರಿಂದ ನಮ್ಮ ಮನಸ್ಸಿನಲ್ಲಿ ಕರ್ತೃತ್ವದ ವಿಚಾರಗಳು ಬರುವುದಿಲ್ಲ ಹಾಗೂ ಆ ವ್ಯಕ್ತಿಯೊಂದಿಗೆ ಕೊಡು-ಕೊಳ್ಳುವ ಲೆಕ್ಕಾಚಾರವೂ ನಿರ್ಮಾಣವಾಗುವುದಿಲ್ಲ.

© ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿ ಸಂರಕ್ಷಿತವಿದೆ.

Leave a Comment