ನೆರೆಗೆ ತುತ್ತಾಗುವ ಕ್ಷೇತ್ರದ ಜನರಿಗಾಗಿ ಮಹತ್ವದ ಮಾಹಿತಿ (ಭಾಗ 2)

ಪ್ರವಾಹದ ದೃಷ್ಟಿಯಿಂದ ಭೌತಿಕ ಸ್ತರದಲ್ಲಿ ಏನೆಲ್ಲ ಪೂರ್ವಸಿದ್ಧತೆಗಳನ್ನು ಮಾಡಬೇಕು ?

‘ನೆರೆಗೆ ತುತ್ತಾಗುವ ಕ್ಷೇತ್ರದ ಜನರು ಯಾವ ರೀತಿ ಪೂರ್ವಸಿದ್ಧತೆಯನ್ನು ಮಾಡಿಕೊಳ್ಳಬೇಕು ?’, ಎನ್ನುವ ಬಗ್ಗೆ ಮಾರ್ಗದರ್ಶಕ ಅಂಶಗಳನ್ನು ಮುಂದೆ ನೀಡಲಾಗಿದೆ. ಹಿಂದಿನ ಲೇಖನದಲ್ಲಿ ನಾವು ನೆರೆಗೆ ತುತ್ತಾಗುವ ಪ್ರದೇಶದಲ್ಲಿ ಹೊಸ ಮನೆಗಳ ನಿರ್ಮಾಣವನ್ನು ಮಾಡುವವರಿದ್ದರೆ ಏನು ಮಾಡಬೇಕು ?, ಮಹತ್ವದ ಕಾಗದಪತ್ರಗಳು ಮತ್ತು ಬೆಲೆಬಾಳುವ ವಸ್ತುಗಳು ಸುರಕ್ಷಿತವಾಗಿರಲು ಏನು ಮಾಡಬೇಕು ?, ಇವುಗಳ ಮಾಹಿತಿಯನ್ನು ನೋಡಿದೆವು. ಈಗ ಮುಂದಿನ ಅಂಶಗಳನ್ನು ನೊಡೋಣ. (ಭಾಗ-೨)

೪. ನೀರು, ಆಹಾರಧಾನ್ಯ ಇತ್ಯಾದಿಗಳ ಕೊರತೆಯಾಗಬಾರದು, ಇದಕ್ಕಾಗಿ ಏನು ಮಾಡಬೇಕು ?

೪ ಅ. ಶುದ್ಧ ನೀರಿನ ಕೊರತೆಯಾದರೆ ನೀರನ್ನು ಸಂಗ್ರಹಿಸಲು ಮಾಡಿಕೊಳ್ಳಬೇಕಾದ ಪರ್ಯಾಯ ವ್ಯವಸ್ಥೆ ! : ಪ್ರವಾಹ ಬಂದಾಗ ವಿದ್ಯುತ್ ಟ್ರಾನ್ಸಫಾರ್ಮರ್‌ಗಳು ನೀರಿನಲ್ಲಿ ಮುಳುಗಿ ಹೋಗುವುದರಿಂದ ವಿದ್ಯುತ್ ಕೊರತೆ ನಿರ್ಮಾಣವಾಗುತ್ತದೆ. ವಿದ್ಯುತ್‌ದ ಅಭಾವದಿಂದ ಶುದ್ಧ ನೀರಿನ ಕೊರತೆ ಉಂಟಾಗುತ್ತದೆ. ರಸ್ತೆಗಳ ಮೇಲೆ ದೊಡ್ಡ ಪ್ರಮಾಣದಲ್ಲಿ ನೀರು ನಿಲ್ಲುವುದರಿಂದ ನೀರಿನ ಟ್ಯಾಂಕರ್‌ಗಳೂ ತಲುಪುವುದು ಕಠಿಣವಾಗುತ್ತದೆ. ಇದರ ಪರಿಣಾಮವಾಗಿ ಕುಡಿಯುವ ನೀರು ದೊರೆಯುವುದಿಲ್ಲ. ಇದಕ್ಕಾಗಿ ಮುಂದಿನ ಸಿದ್ಧತೆಗಳನ್ನು ಮಾಡಿಕೊಳ್ಳಬಹುದು.

೧. ಹೆಚ್ಚು ನೀರನ್ನು ಸಂಗ್ರಹಿಸಲು ದೊಡ್ಡ ಸಂಪು, ಪಾತ್ರೆ ಮತ್ತು ಕೊಳಾಯಿಗಳು ಇರಬೇಕು.

೨. ಅನೇಕ ಮನೆಗಳ ಮೇಲ್ಛಾವಣಿಯ ಮೇಲೆ ನೀರನ್ನು ಸಂಗ್ರಹಿಸಲು ಟ್ಯಾಂಕಿರುತ್ತದೆ. ಸಾಧ್ಯವಿದ್ದರೆ ಅದೇ ಸಂಪಿಗೆ ಹೆಚ್ಚುವರಿ ಸಂಪನ್ನು ಜೋಡಿಸಿ ನೀರನ್ನು ಸಂಗ್ರಹಿಸಬಹುದು, ಇದರಿಂದ ಅಧಿಕ ಕಾಲಾವಧಿಗಾಗಿ ನೀರು ಶೇಖರಣೆಗೊಳ್ಳಬಹುದು.

೩. ಮನೆಯ ಮೇಲ್ಛಾವಣಿಯಿಂದ ಮಳೆಯ ನೀರು ಕೆಳಗೆ ಬರುವಲ್ಲಿ ಮೇಲ್ಛಾವಣಿಗೆ ನೀರಿನ ಹರಿನಾಳವನ್ನು ಜೋಡಿಸಿ ಸ್ವಚ್ಛ ನೀರನ್ನು ಉಪಯೋಗಿಸಬಹುದು ಮತ್ತು ಸಂಗ್ರಹಿಸಿಟ್ಟುಕೊಳ್ಳಬಹುದು.

೪. ಉಪಲಬ್ಧವಿರುವ ನೀರನ್ನು ಮಿತವಾಗಿ ಬಳಸಬೇಕು. ನೀರನ್ನು ಮಿತವಾಗಿ ಬಳಸಲು ಊಟಕ್ಕೆ ತಟ್ಟೆ ಮತ್ತು ಬಟ್ಟಲುಗಳ ಬದಲು ಪತ್ರಾವಳಿ ಅಥವಾ ಕಾಗದದ (ಡಿಸ್ಪೋಸೆಬಲ್) ತಟ್ಟೆ, ಬಟ್ಟಲು, ಚಮಚ ಇತ್ಯಾದಿಗಳನ್ನು ಉಪಯೋಗಿಸಬೇಕು.

೪ ಆ. ನೀರನ್ನು ಶುದ್ಧಗೊಳಿಸುವ ಪದ್ಧತಿಗಳು

೧. ಮಳೆಗಾಲದಲ್ಲಿ, ಹಾಗೆಯೇ ಪ್ರವಾಹಗಳ ಪರಿಸ್ಥಿತಿಯಲ್ಲಿ ಕಲುಷಿತ ನೀರಿನ ಪೂರೈಕೆಯಾಗುತ್ತದೆ. ಆದುದರಿಂದ ನೀರನ್ನು ಕುದಿಸಿ, ಸೋಸಿ ಕುಡಿಯುವುದು, ಸ್ಫಟಿಕದ ಉಪಯೋಗ ಇತ್ಯಾದಿ ನೀರು ಶುದ್ಧಗೊಳಿಸುವ ದೇಶಿ ಪದ್ಧತಿಗಳನ್ನು ಉಪಯೋಗ ಮಾಡಬೇಕು.

೨. ತೆಂಗಿನಕಾಯಿಯ ಗೆರಟೆಗಳನ್ನು ಸುಟ್ಟ ನಂತರ ಅದರ ಸುಟ್ಟ ತುಂಡುಗಳು ಉಳಿಯುತ್ತವೆ. ಅವುಗಳನ್ನು ನೀರಿನಲ್ಲಿ ಹಾಕಿದರೆ ನೀರು ನೈಸರ್ಗಿಕ ರೀತಿಯಲ್ಲಿ ಶುದ್ಧವಾಗುತ್ತದೆ.

೩. ಅನೇಕ ಔಷಧಾಲಯಗಳಲ್ಲಿ ‘ವಾಟರ್ ಡಿಸ್‌ಇನ್ಫೆಕ್ಷನ್ ಟ್ಯಾಬಲೆಟ್ಸ್ (ನೀರು ಶುದ್ಧೀಕರಿಸುವ ಮಾತ್ರೆಗಳು) ಸಿಗುತ್ತವೆ. ೨೦ ಲೀಟರ್ ನೀರಿಗೆ ಒಂದು ಮಾತ್ರೆ ಹಾಕಿದರೆ ಅರ್ಧ ಗಂಟೆಯಲ್ಲಿ ನೀರು ಉಪಯೋಗಿಸುವಷ್ಟು ಶುದ್ಧವಾಗುತ್ತದೆ.

೪. ಸದ್ಯ ಮಾರುಕಟ್ಟೆಯಲ್ಲಿ ಫಿಲ್ಟರ್ ಇರುವ ಬಾಟಲಿಗಳು ಸಿಗುತ್ತವೆ. ಈ ಬಾಟಲಿಗಳಲ್ಲಿ ಅಳವಡಿಸಿದ ಫಿಲ್ಟರ್‌ಗೆ ೧ ಸಾವಿರ ಲೀಟರ್ ನೀರನ್ನು ಶುದ್ಧಗೊಳಿಸುವ ಕ್ಷಮತೆಯಿರುತ್ತದೆ. ಈ ಬಾಟಲಿಯಲ್ಲಿ ಅಶುದ್ಧ ನೀರನ್ನು ಹಾಕಿದಾಗ ಅದರಲ್ಲಿರುವ ಫಿಲ್ಟರಿನಿಂದಾಗಿ ನೀರಿನಲ್ಲಿರುವ ಜೀವ-ಜಂತುಗಳು, ಕ್ಷಾರ ಇತ್ಯಾದಿಗಳು ನಾಶವಾಗಿ ನೀರು ಶುದ್ಧವಾಗುತ್ತದೆ. ಆಪತ್ಕಾಲದ ಸ್ಥಿತಿಯಲ್ಲಿ ಕುಡಿಯುವ ನೀರು ಉಪಲಬ್ಧವಿಲ್ಲದಿದ್ದರೆ, ನೀರು ಶುದ್ಧೀಕರಿಸಲು ಈ ಪರ್ಯಾಯವನ್ನು ಉಪಯೋಗಿಸಬಹುದು.

೪ ಇ. ಧಾನ್ಯಗಳನ್ನು ಬಿಸಿಲಿನಲ್ಲಿ ಒಣಗಿಸಿ ಗಾಳಿಯಾಡದ ಪ್ಲಾಸ್ಟಿಕಿನ ಚೀಲಗಳಲ್ಲಿ ಇಡುವುದು : ಪ್ರವಾಹಗಳ ಸ್ಥಿತಿಯಲ್ಲಿ ತರಕಾರಿ, ಹಣ್ಣು ಇತ್ಯಾದಿ ಪೂರೈಕೆಯಾಗುವುದಿಲ್ಲ. ಆದುದರಿಂದ ಅಕ್ಕಿ, ಧಾನ್ಯ, ದ್ವಿದಳ ಧಾನ್ಯ ಇತ್ಯಾದಿಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳಬೇಕು. ಇದಕ್ಕಾಗಿ ಅವುಗಳನ್ನು ವ್ಯವಸ್ಥಿತವಾಗಿ ಸ್ವಚ್ಛಗೊಳಿಸಿ ಬಿಸಿಲಿನಲ್ಲಿ ಒಣಗಿಸಿಕೊಳ್ಳಬೇಕು. ಧಾನ್ಯಗಳಿಗೆ ಹುಳ ಆಗಬಾರದು, ಎಂದು ಅವುಗಳಲ್ಲಿ ಔಷಧಿಯನ್ನು ಹಾಕಿ ಅದನ್ನು ಗಾಳಿಯಾಡದಂತಹ ಒಳ್ಳೆಯ ಪ್ಲಾಸ್ಟಿಕಿನ ಚೀಲಗಳಲ್ಲಿ ಹಾಕಬೇಕು. ಈ ಚೀಲಗಳನ್ನು ದೊಡ್ಡ ಡ್ರಮ್‌ನಲ್ಲಿ ಹಾಕಿ ಡ್ರಮ್‌ನ್ನು ಎತ್ತರದ ಸ್ಥಳದಲ್ಲಿ (ಉದಾ : ಮಾಳಿಗೆಯಲ್ಲಿ) ಇಡಬೇಕು. ಧಾನ್ಯದ ಡ್ರಮ್‌ನ್ನು ಪದೇ ಪದೇ ತೆರೆದರೆ ಔಷಧದ ಪರಿಣಾಮ ಉಳಿಯುವುದಿಲ್ಲ. ಹಾಗೆಯೇ ಹೊರಗಿನ ಗಾಳಿ ತಗುಲಿ ಧಾನ್ಯ ಹಾಳಾಗುತ್ತದೆ. ಹಾಗಾಗಿ ಒಂದು ತಿಂಗಳಿಗೆ ಅಗತ್ಯವಿರುವ ಧಾನ್ಯಗಳನ್ನು ಒಂದೇ ಸಲ ತೆಗೆದಿಡಬೇಕು. ಹಿಟ್ಟಿನಲ್ಲಿಯೂ ಹುಳಗಳಾಗುತ್ತವೆ, ಆದುದರಿಂದ ಅದನ್ನು ಮೇಲೆ ಹೇಳಿದಂತೆ ಸಂಗ್ರಹಿಸಲು ಸಾಧ್ಯವಾಗುವುದಿಲ್ಲ.

೪ ಈ. ತರಕಾರಿಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದು : ಪ್ರವಾಹದ ಸ್ಥಿತಿಯಲ್ಲಿ ಸಂಚಾರಸಾರಿಗೆ ವ್ಯತ್ಯಯಗೊಳ್ಳುವುದರಿಂದ ತರಕಾರಿ, ಹಾಲು, ಹಾಗೆಯೇ ಇತರ ತಿಂಡಿ ತಿನಿಸುಗಳು ದೊರೆಯುವುದಿಲ್ಲ. ಆದುದರಿಂದ ಅವುಗಳನ್ನು ಮೊದಲೇ ಸಂಗ್ರಹಿಸಿಟ್ಟುಕೊಳ್ಳುವುದು ಆವಶ್ಯಕವಾಗಿದೆ.

೧. ಚೆನ್ನಾಗಿ ಒಣಗಿದ ಈರುಳ್ಳಿ, ಬೆಳ್ಳುಳ್ಳಿ, ಸುವರ್ಣಗೆಡ್ಡೆ ಇತ್ಯಾದಿ ತರಕಾರಿಗಳು ೧-೨ ತಿಂಗಳುಗಳವರೆಗೆ ಉಳಿಯುತ್ತವೆ. ಈ ತರಕಾರಿಗಳನ್ನು ಒಣ ಜಾಗದಲ್ಲಿ ಇಡಬೇಕು.

೨. ಬದನೆಕಾಯಿ, ಗೋರಿಕಾಯಿ, ಕೊತ್ತಂಬರಿ, ಕರಿಬೇವು, ಹಸಿಮೆಣಸಿನಕಾಯಿ, ಮೆಂತೆ ಸೊಪ್ಪು ಇತ್ಯಾದಿ ತರಕಾರಿಗಳನ್ನು ಉರಿ ಬಿಸಿಲಿನಲ್ಲಿಟ್ಟು ಒಣಗಿಸಿಕೊಳ್ಳಬೇಕು. ಅವುಗಳಲ್ಲಿರುವ ನೀರಿನ ಅಂಶ ಸಂಪೂರ್ಣ ಹೋಗಲು ಅವುಗಳನ್ನು ೫-೬ ದಿನಗಳವರೆಗೆ ಬಿಸಿಲಿನಲ್ಲಿ ಇಡಬೇಕಾಗುತ್ತದೆ. ತದನಂತರ ಈ ತರಕಾರಿಗಳನ್ನು ಒಣ ಜಾಗದಲ್ಲಿ ಇಡಬೇಕು. ಅವುಗಳನ್ನು ಫ್ರಿಜ್ ನಲ್ಲಿ ಇಡುವ ಅವಶ್ಯಕತೆಯಿಲ್ಲ. ಇಂತಹ ಒಣಗಿದ ತರಕಾರಿಗಳು ೧-೨ ತಿಂಗಳುಗಳವರೆಗೆ ಚೆನ್ನಾಗಿ ಇರುತ್ತವೆ. ಈ ತರಕಾರಿಗಳನ್ನು ಉಪಯೋಗಿಸುವ ಮೊದಲು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಇಟ್ಟರೆ ತರಕಾರಿಗಳು ನೀರನ್ನು ಹೀರಿಕೊಂಡು ಸ್ವಲ್ಪಮಟ್ಟಿಗೆ ಮೊದಲಿನಂತೆ ನಳನಳಿಸುತ್ತವೆ.

೩. ಹಾಗಲಕಾಯಿ ಮತ್ತು ಬಟಾಟೆಗಳನ್ನು ತೆಳುವಾಗಿ ಗೋಲಾಕಾರದಲ್ಲಿ ಕತ್ತರಿಸಿ, ಉಪ್ಪು ಹಚ್ಚಿ ಬಿಸಿಲಿನಲ್ಲಿ ಒಣಗಿಸಬೇಕು. ಹೀಗೆ ಮಾಡಿದರೆ ಅವು ಕೆಲವು ತಿಂಗಳುಗಳವರೆಗೆ ಬಾಳಿಕೆ ಬರುತ್ತವೆ.

೪. ಬೂದುಗುಂಬಳಕಾಯಿ, ಸೊರೆಕಾಯಿ (ಹಾಲುಗುಂಬಳ) ಇತ್ಯಾದಿ ತರಕಾರಿಗಳನ್ನು ಒಣಗಿಸಿ ಅವುಗಳ ಸಂಡಿಗೆಗಳನ್ನು ಮಾಡಿಟ್ಟುಕೊಳ್ಳಬೇಕು. ಮುಂದೆ ಈ ಸಂಡಿಗೆಗಳ ಪಲ್ಯ ಅಥವಾ ಸಾರು ಮಾಡಿಕೊಳ್ಳಬಹುದು.

೪ ಉ. ಒಣ ಮತ್ತು ಬಹಳ ದಿನಗಳವರೆಗೆ ಬಾಳಿಕೆ ಬರುವ ತಿನಿಸುಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬೇಕು ! : ಉಪ್ಪಿನಕಾಯಿ, ಚಟ್ನಿಪುಡಿ, ಮೊರಬ್ಬಾ ಇತ್ಯಾದಿ ಬಹುದಿನ ಬಾಳಿಕೆ ಬರುವ ಪದಾರ್ಥಗಳನ್ನು, ಹಾಗೆಯೇ ಮಸಾಲೆ, ಎಣ್ಣೆ ಇತ್ಯಾದಿಗಳನ್ನು ಗಾಳಿಯಾಡದ (ಏರ್ ಟೈಟ್) ಡಬ್ಬಿಗಳಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳಬಹುದು. ಇದರೊಂದಿಗೆ ಹಾಲಿನ ಪುಡಿ, ಹಾಗೆಯೇ ಒಣ ಮತ್ತು ಬಹಳ ದಿನಗಳವರೆಗೆ ಬಾಳಿಕೆ ಬರುವ ತಿಂಡಿ ತಿನಿಸುಗಳನ್ನು ಮನೆಯಲ್ಲಿ ಇಡಬೇಕು. ಕಚೇರಿಗೆ ಅಥವಾ ಬೇರೆ ಸ್ಥಳಗಳಿಗೆ ಹೋಗುವಾಗಲೂ ಜೊತೆಯಲ್ಲಿ ತಿಂಡಿತಿನಿಸುಗಳನ್ನು ಒಯ್ಯಬೇಕು. ವಿಪರೀತ ಪರಿಸ್ಥಿತಿಯ ಸಂದರ್ಭದಲ್ಲಿ ಮನೆ ತಲುಪಲು ತೊಂದರೆಯಾಗುತ್ತಿದ್ದರೆ, ಕನಿಷ್ಠಪಕ್ಷ ಈ ತಿನಿಸುಗಳನ್ನು ತಿಂದು ಸ್ವಲ್ಪ ಹೊತ್ತಿನವರೆಗಾದರೂ ಹಸಿವೆಯನ್ನು ನೀಗಿಸಿಕೊಳ್ಳಬಹುದು.

೫. ನಿಯಮಿತವಾಗಿ ತೆಗೆದುಕೊಳ್ಳುವ ಔಷಧಿಗಳನ್ನು ಸ್ವಲ್ಪ ಸಂಗ್ರಹಿಸಿ ಸುರಕ್ಷಿತ ಸ್ಥಳದಲ್ಲಿ ಇಟ್ಟುಕೊಳ್ಳಬೇಕು

ಔಷಧಿಗಳು ಮುಗಿದರೆ ಅವು ನಮಗೆ ಬೇಕಾಗಿರುವ ಸಮಯದಲ್ಲಿ ದೊರೆಯಲು ಅನೇಕ ಅಡಚಣೆಗಳು ಬರಬಹುದು. ನಿತ್ಯ ಉಪಯೋಗಿಸುವ ಔಷಧಿಗಳನ್ನು (ಉದಾ : ರಕ್ತದೊತ್ತಡದ ಮಾತ್ರೆಗಳು, ಸಕ್ಕರೆ ರೋಗದ ಔಷಧಿಗಳು, ಜ್ವರ, ನೆಗಡಿ, ಕೆಮ್ಮು, ಸಂಧಿನೋವು ಇವುಗಳ ಔಷಧಿ) ಹೆಚ್ಚು ಪ್ರಮಾಣದಲ್ಲಿ ಇಟ್ಟುಕೊಂಡರೆ, ಅವುಗಳನ್ನು ಹೆಚ್ಚು ಕಾಲದವರೆಗೆ ಉಪಯೋಗಿಸಬಹುದು. ಈ ದೃಷ್ಟಿಯಿಂದ ತುಂಬಾ ಸಮಯದ ನಂತರ ಎಕ್ಸಪಾಯರ್ ಆಗುವ (ಲಾಂಗ್ ಎಕ್ಸಪಾಯರಿ) ಔಷಧಿಗಳ ಸಂಗ್ರಹವನ್ನು ಇಟ್ಟುಕೊಳ್ಳಬೇಕು.

ಈ ಔಷಧಿಗಳು ಸುರಕ್ಷಿತವಾಗಿ ಉಳಿಯಲು ಅವುಗಳನ್ನು ಪ್ಲಾಸ್ಟಿಕ್‌ನ ಚೀಲಗಳಲ್ಲಿ ಹಾಕಿ ಎತ್ತರದ ಸ್ಥಳದಲ್ಲಿ ಇಡಬೇಕು. ಹೀಗೆ ಮಾಡುವಾಗ ‘ಅವುಗಳ ಮೇಲೆ ನೇರವಾಗಿ ಸೂರ್ಯಕಿರಣಗಳು ಬೀಳದಂತೆ, ಜಾಗ್ರತೆ ವಹಿಸಬೇಕು. ಔಷಧಿಯು ಇಂಜೆಕ್ಷನ್‌ನ ಮೂಲಕ (‘ಉದಾ:‘ಇನ್ಸುಲಿನ್) ತೆಗೆದುಕೊಳ್ಳುವಂತಹದಾಗಿದ್ದರೆ ಅದನ್ನು ಫ್ರಿಜ್ ನಲ್ಲಿ ಇಡುವುದು ಆವಶ್ಯಕವಾಗಿರುತ್ತದೆ. ಫ್ರಿಜ್ ಇಲ್ಲದೇ ಔಷಧಿಗಳು ಬಾಳಿಕೆ ಬರಬೇಕಾದರೆ ಅವುಗಳನ್ನು ಐಸ್ ಬ್ಯಾಗ್ನಲ್ಲಿ, ಅಂದರೆ ಮಂಜುಗಡ್ಡೆ ಚೀಲದಲ್ಲಿ ಇಡಬೇಕು. ಒಟ್ಟಾರೆ ಆಪತ್ಕಾಲೀನ ಸ್ಥಿತಿಯಲ್ಲಿ ಮನೆಯಿಂದ ಹೊರಗೆ ಹೋಗಬೇಕಾಗಿದ್ದರೆ, ಸ್ವಲ್ಪ ಕಾಲಾವಧಿಯವರೆಗಾದರೂ ಅವು ಬಾಳಿಕೆ ಬರಬಹುದು.

ಭಾಗ 1 | ಭಾಗ 3

© ಪ್ರಸ್ತುತ ಲೇಖನಮಾಲೆಯ ಕೃತಿಸ್ವಾಮ್ಯ (ಕಾಪಿರೈಟ್) ‘ಸನಾತನ ಭಾರತೀಯ ಸಂಸ್ಕೃತಿ ಸಂಸ್ಥೆ’ಯ ಬಳಿ ಸಂರಕ್ಷಿತವಿದೆ.

Leave a Comment