ಶಾಶ್ವತ ಆನಂದ ಮತ್ತು ಮನಃಶಾಂತಿಯನ್ನು ದೊರಕಿಸಿಕೊಡುವ ಭಾರತ !

ಆಗಸ್ಟ್ ೧೫ ರ ಸ್ವಾತಂತ್ರ್ಯದಿನದ ನಿಮಿತ್ತ ಲೇಖನ

ಭಾರತದ ಯುವಕರು ವಿದೇಶಕ್ಕೆ ಹೋದಾಗ ಅಲ್ಲಿ ಅವರ ‘ಬ್ರೇನ್‌ವಾಶ್’, ಅಂದರೆ ಬಲಪೂರ್ವಕ ಮನಪರಿವರ್ತನವಾಗುತ್ತದೆ. ಆ ಯುವಕರು ವಿದೇಶದ ‘ಸಂಸ್ಕೃತಿ’ಯಿಂದ ಎಷ್ಟು ಪ್ರಭಾವಿತರಾಗುತ್ತಾರೆಂದರೆ, ಯಾವ ಭೂಮಿ ಅವರಿಗೆ ಜನ್ಮವಿತ್ತಳೋ, ಯಾವುದು ಋಷಿಮುನಿಗಳ ಭೂಮಿಯಾಗಿದೆಯೋ, ಯಾವ ಭೂಮಿಯಲ್ಲಿ ಭಗವಂತನೂ ಅನೇಕ ಅವತಾರಗಳನ್ನು ತಾಳಿದನೋ, ಯಾವ ಭೂಮಿಯಲ್ಲಿ ಅನೇಕ ಸಂತ-ಮಹಾತ್ಮರು, ವೇದಾಂತಿ ಸತ್ಪುರುಷರು ಅವತರಿಸುತ್ತಿರುತ್ತಾರೆಯೋ, ಅಂತಹ ಮಾತೃಭೂಮಿ ಭಾರತದ ಬಗ್ಗೆ ಅವರ ಮನಸ್ಸಿನಲ್ಲಿ ತಿರಸ್ಕಾರ ಉತ್ಪನ್ನವಾಗುತ್ತದೆ.

೧. ವಿದೇಶಗಳಲ್ಲಿ ಎಲ್ಲ ಸುಖಸೌಲಭ್ಯಗಳಿರುವಾಗ ಅವರ ಹೃದಯದಲ್ಲಿ ಪ್ರೇಮ ಹೇಗೆ ಕಡಿಮೆಯಾಗಿದೆ ?

ಅನೇಕ ವಿದೇಶಿಗಳು ಭಾರತಕ್ಕೆ ಬಂದು ಇಲ್ಲಿ ಯೋಗ, ಧ್ಯಾನ, ಅಧ್ಯಾತ್ಮ ಕಲಿತು ಸ್ವದೇಶಕ್ಕೆ ಮರಳಿ ಹೆಸರುವಾಸಿಯಾದರು. ಇಂತಹ ದಿವ್ಯ ಭಾರತಭೂಮಿಯ ಬಗ್ಗೆ ಈ ಯುವಕರು, ‘ಇಂಡಿಯಾ ಇಸ್ ನಥಿಂಗ್; ಇಂಡಿಯಾ ಇಸ್ ವೇರಿ ಪೂವರ್’ (ಭಾರತದಲ್ಲಿ ಏನೂ ಇಲ್ಲ. ಅದೊಂದು ಬಡ ದೇಶ!) ಹೇಳತೊಡಗುತ್ತಾರೆ. ಓರ್ವ ಸಂತರು ಅಮೇರಿಕಾಗೆ ಹೋದಾಗ, ಅಲ್ಲಿ ಜನರು, ‘ತಾವು ಆಧ್ಯಾತ್ಮದ ಬಗ್ಗೆ ಮಾತಾಡುತ್ತೀರಿ; ಆದರೆ ಭಾರತದಲ್ಲಿ ಆಧ್ಯಾತ್ಮದ ಬಲವಾದ ಬೇರುಗಳಿದ್ದರೂ ಭಾರತವು ಇಷ್ಟು ಬಡ ರಾಷ್ಟ್ರ ಏಕೆ ?’ ಎಂದು ಪ್ರಶ್ನೆ ಕೇಳಿದರು. ಅದಕ್ಕೆ ಅವರು, “ನಾನು ನಮ್ಮ ಭಾರತ ಏಕೆ ಬಡದೇಶ, ಎಂಬುದನ್ನು ನಿಮಗೆ ಹೇಳುವೆ; ಆದರೆ ಮೊದಲು ನೀವು ನನಗೆ, ‘ನಿಮ್ಮ ಬಳಿ ಎಲ್ಲ ಭೌತಿಕ ಸುಖಸೌಲಭ್ಯಗಳಿದ್ದರೂ ಹೃದಯದ ದಾರಿದ್ರ್ಯವು ಏಕೆ ಮುಗಿದಿಲ್ಲ ? ಪತಿ-ಪತ್ನಿ ಇಬ್ಬರೂ ಹಣ ಸಂಪಾದಿಸುತ್ತಾರೆ, ಮಕ್ಕಳೂ ಸಂಪಾದಿಸುತ್ತಾರೆ, ಆದರೂ ಯಾವ ರೀತಿ ವೃದ್ಧ ಪಶುಗಳನ್ನು ಗೋಶಾಲೆಗೆ ಕಳಿಸಿದ ಹಾಗೆಯೇ ನೀವು ನಿಮ್ಮ ತಂದೆ-ತಾಯಿಯನ್ನು ‘ನರ್ಸಿಂಗ್ ಹೋಮ್’ಗೆ (ವೃದ್ಧಾಶ್ರಮಕ್ಕೆ) ಏಕೆ ಕಳುಹಿಸುತ್ತೀರಿ ? ನಿಮ್ಮ ಹೃದಯದಲ್ಲಿ ಪ್ರೀತಿ ಇಷ್ಟು ಕಡಿಮೆ ಏಕಿದೆ ?’ ಎಂದು ಹೇಳಿ” ಎಂದರು.

೨. ಒಂದು ಕಾಲದಲ್ಲಿ ಭಾರತದ ಜನರು ಬಂಗಾರದ ಪಾತ್ರೆಗಳ ಬದಲು ಆತ್ಮಧನದ ಬಗ್ಗೆ ವಿಚಾರ ಮಾಡುತ್ತಿದ್ದರು !

ಅವರು ಮುಂದೆ ಮಾತನಾಡುತ್ತಾ, “ಈಗ ನಾನು ಭಾರತ ಬಡದೇಶ ಏಕಾಯಿತು ಎಂಬುದನ್ನು ಹೇಳುತ್ತೇನೆ. ಭಾರತದಲ್ಲಿ ಒಂದಾನೊಂದು ಕಾಲದಲ್ಲಿ ಜನರು ಬಂಗಾರದ ಪಾತ್ರೆಗಳಲ್ಲಿ ಊಟ ಮಾಡುತ್ತಿದ್ದರು. ಯುಧಿಷ್ಠಿರ ಮಹಾರಾಜರು ಯಜ್ಞ ಮಾಡಿದಾಗ, ಅವರು ಪ್ರತಿದಿನ ೧ ಲಕ್ಷ ಜನರಿಗೆ ಅನ್ನದಾನ ಮಾಡುತ್ತಿದ್ದರು. ೧೦ ಸಾವಿರ ಸಾಧುಸಂತರು ಮತ್ತು ಬ್ರಾಹ್ಮಣರಿಗೆ ಬಂಗಾರದ ತಟ್ಟೆಯಲ್ಲಿ ಅನ್ನ ಬಡಿಸಲಾಗುತ್ತಿತ್ತು. ನಂತರ ಕೈಜೋಡಿಸಿ, ‘ಭೋಜನದ ನಂತರ ಕೃಪೆ ತೋರಿ ಬಂಗಾರದ ತಟ್ಟೆಯನ್ನು ಸ್ವೀಕರಿಸಿ, ನಿಮ್ಮೊಂದಿಗೆ ತೆಗೆದುಕೊಂಡು ಹೋಗಿ’, ಎಂದು ವಿನಂತಿಸಿಕೊಳ್ಳುತ್ತಿದ್ದರು. ಕೆಲವು ಜನರು ತಟ್ಟೆಯನ್ನು ತೆಗೆದುಕೊಂಡು ಹೋಗುತ್ತಿದ್ದರು ಮತ್ತು ಕೆಲವರು, ‘ನಾವು ಈ ಬಂಗಾರದ ತುಂಡನ್ನು ಸಂಭಾಳಿಸಬೇಕೋ ಅಥವಾ ನಮ್ಮ ಆತ್ಮಧನದ ವಿಚಾರ ಮಾಡಬೇಕೋ ?’, ಎಂದು ಕೇಳುತ್ತಿದ್ದರು ಮತ್ತು ಬಂಗಾರದ ತಟ್ಟೆಯನ್ನು ಅಲ್ಲಿಯೇ ಬಿಟ್ಟು ಹೋಗುತ್ತಿದ್ದರು, ಹೀಗಿತ್ತು ನಮ್ಮ ಭಾರತ ದೇಶ !

೩. ಪರಕೀಯರು ಭಾರತದ ಮೇಲೆ ಆಕ್ರಮಣ ಮಾಡಿ, ಭಾರತವನ್ನು ಲೂಟಿ ಮಾಡಿ ಅದನ್ನು ಪರಾಧೀನ ಮಾಡುವುದು ಮತ್ತು ಸ್ವಾರ್ಥಾಂಧರು ಭಾರತದ ಆರ್ಥಿಕ ಸ್ಥಿತಿಯನ್ನು ಪೂರ್ಣ ಹದಗೆಡಿಸುವುದು

ಕಾಲವು ಬದಲಾಯಿತು. ವಿದೇಶಿ ಲೂಟಿಕೋರರು ದೇಶದ ಮೇಲೆ ಆಕ್ರಮಣ ಮಾಡಿದರು. ಭಾರತೀಯರಲ್ಲಿ ದುರ್ಬಲತೆ ಸೇರಿಕೊಂಡಿತು. ‘ಎಲ್ಲರಲ್ಲಿ ಈಶ್ವರನಿದ್ದಾನೆ’, ಎಂಬ ಭಾವದಿಂದ ಎಲ್ಲ ವಿದೇಶಿಯರನ್ನು ತಮ್ಮವರನ್ನಾಗಿ ಮಾಡಿಕೊಂಡರು; ಆದರೆ ವಿದೇಶಿ ಲೂಟಿಕೋರರು ಭಾರತದ ಎಲ್ಲ ಆಸ್ತಿ-ಪಾಸ್ತಿಗಳನ್ನು ಲಪಟಾಯಿಸಿದರು. ನಂತರ ಅಫಘಾನಿಸ್ತಾನದವರು ಬಂದರು, ಹೂಣರು ಬಂದರು, ಶಕರು ಬಂದರು, ಗ್ರೀಕರು (ಯವನರು) ಬಂದರು, ಫಿರಂಗಿಗಳು (ಆಂಗ್ಲರು/ಫ್ರೆಂಚ/ಪೋರ್ತುಗೀಜರು) ಬಂದರು. ನೂರಾರು ವರ್ಷಗಳ ಕಾಲ ಭಾರತವು ಪರಾಧೀನವಾಗಿತ್ತು. ಸ್ವಾರ್ಥಾಂಧರು ಭಾರತದ ಆರ್ಥಿಕ ಸ್ಥಿತಿಯನ್ನು ಸಂಪೂರ್ಣ ಕೆಡಿಸಿದರು. ಸುಲಿಗೆ ಹೆಚ್ಚಾಯಿತು, ಕಂಸ ಮತ್ತು ರಾವಣ ವೃತ್ತಿಗಳ ಪ್ರಭಾವವು ಹೆಚ್ಚಾಯಿತು. ಸಮಾಜದ ರಕ್ತವನ್ನು ಹೀರುವ ಈ ದುಷ್ಟರನ್ನು ಜನರು ಕ್ಷಮಿಸಿದರು, ದುರ್ಲಕ್ಷಿಸಿದರು. ಅವರು ತಮ್ಮ ಶಕ್ತಿಯುತ ಸಂಕಲ್ಪ ಶಕ್ತಿಯನ್ನು ಕಳೆದುಕೊಂಡರು. ಅವರು ತಮ್ಮ ದಿಟ್ಟತನ ಮತ್ತು ಪ್ರಾಣಶಕ್ತಿಯನ್ನು ಮರೆಯುತ್ತಾ ಹೋದರು. ಆಧ್ಯಾತ್ಮಿಕ ಸಾಮರ್ಥ್ಯ, ವೇದ, ಉಪನಿಷತ್ತುಗಳು ಮತ್ತು ಅಮೃತೋಪದೇಶವು ಗುಡ್ಡ-ಗುಹೆಗಳಿಗಷ್ಟೇ ಸೀಮಿತವಾಗತೊಡಗಿದವು. ಜನರು ದಿಟ್ಟತನ, ಸಾಹಸ, ಪ್ರಸನ್ನತೆ, ಮತ್ತು ದಕ್ಷತೆಯನ್ನು ಮರೆಯತೊಡಗಿದರು. ‘ಭಯ, ಅಸಹಾಯಕತೆ, ಮುಖಸ್ತುತಿ ಮಾಡುವುದು, ಪಲಾಯನವಾದ’ ಈ ರೀತಿಯ ನಿಲುವಿನಿಂದ ಸಮಾಜವು ಹಿಂದೆಯೇ ಉಳಿಯಿತು. ಸುಲಿಗೆ ಮಾಡುವವರು ಇದರ ದುರುಪಯೋಗ ಮಾಡಿಕೊಂಡರು.

೪. ಭಾರತದಲ್ಲಿ ಅಮೇರಿಕಾಗಿಂತ ಸುಖ-ಸೌಲಭ್ಯಗಳು ಕಡಿಮೆ ಇದ್ದರೂ ಅದು ಆಧ್ಯಾತ್ಮಿಕ ದೃಷ್ಟಿಯಿಂದ ಅನೇಕ ಪಟ್ಟು ಶ್ರೇಷ್ಠವಾಗಿದೆ

ಭಾರತದ ಜನಸಂಖ್ಯೆಯು ಅಮೇರಿಕಾದ ಜನಸಂಖ್ಯೆಗಿಂತ ಮೂರು ಪಟ್ಟು ಹೆಚ್ಚಿದೆ. ಈ ರೀತಿ ನೋಡಿದರೆ ಅಮೇರಿಕದಲ್ಲಿ ಭಾರತಕ್ಕಿಂತ ಸುಮಾರು ಒಂಬತ್ತುವರೆ ಪಟ್ಟು ಹೆಚ್ಚು ಐಹಿಕ ಸುಖ-ಸೌಲಭ್ಯಗಳಿವೆ, ಆದರೂ ನಮಗೆ ದುಃಖವಿಲ್ಲ. ನಿಮ್ಮಲ್ಲಿ ಇಷ್ಟು ಸೌಲಭ್ಯಗಳಿವೆ; ಆದರೆ ಭಾರತವು ಆಧ್ಯಾತ್ಮಿಕ ಸುಪುತ್ರರ ಪ್ರಸಾದದಿಂದ ಪ್ರೇಮ, ಸಹನಶಕ್ತಿ, ಸಹಾನುಭೂತಿ, ಸ್ನೇಹ, ಸದ್ಭಾವನೆ ಮತ್ತು ಸಾಮಾಜಿಕ ಜೀವನದಲ್ಲಿ ಅಮೇರಿಕಾಗಿಂತ ಇನ್ನೂ ಅನೇಕ ಪಟ್ಟು ಶ್ರೇಷ್ಠವಾಗಿದೆ. ಸಿನೆಮಾ ಮತ್ತು ದೂರಚಿತ್ರವಾಣಿ ಇವುಗಳ ಮಾಧ್ಯಮದಿಂದ ಪಾಶ್ಚಾತ್ಯ ದೇಶಗಳ ಕೊಳಕು ಭಾರತಕ್ಕೆ ಬರುತ್ತಿದೆ, ಆದರೂ ಆಧ್ಯಾತ್ಮಿಕ ಸುಗಂಧ, ಹೃದಯದ ಶಾಂತಿ (ಮನಃಶಾಂತಿ) ಯಾರಿಗಾದರೂ ಬೇಕೆಂದೆನಿಸಿದರೆ, ಅವರಿಗೆ ಅದು ಭಾರತದಿಂದಲೇ ದೊರಕುವುದು !

(ಆಧಾರ : ಋಷಿ ಪ್ರಸಾದ, ಮೇ ೨೦೦೦)

Leave a Comment