ಕಾಳಿಮಾತೆಯ ಮಹಾನ್ ಭಕ್ತ ರಾಮಕೃಷ್ಣ ಪರಮಹಂಸ !

೧೮೩೬ ರಲ್ಲಿ ಕಾಮಾರಪುಕುರ (ಬಂಗಾಳದ ಒಂದು ಹಳ್ಳಿ) ಎಂಬಲ್ಲಿ ಒಂದು ಬಾಲಕನ ಜನನವಾಯಿತು. ಅವನಿಗೆ ಗದಾಧರ ಎಂಬ ನಾಮಕರಣವನ್ನು ಮಾಡಿದರು. ಚಿಕ್ಕಂದಿನಿಂದಲೇ ಆ ಬಾಲಕನಿಗೆ ದೇವರ ಪೂಜೆ, ಭಜನೆ, ಸತ್ಸಂಗ ಇವುಗಳಲ್ಲಿ ಅಭಿರುಚಿ ಇತ್ತು. ತಾರುಣ್ಯದಲ್ಲಿ ದಕ್ಷಿಣೇಶ್ವರಕ್ಕೆ ಬಂದ ಗದಾಧರನು ಅಲ್ಲಿ ಕಾಳಿ ಮಾತೆಯ ಉಪಾಸನೆಯಲ್ಲಿ ತನ್ನನ್ನು ತೊಡಗಿಸಿಕೊಂಡನು. ಗುರು ತೋತಾಪುರಿ ಮಹಾರಾಜರ ಮಾರ್ಗದರ್ಶನದಲ್ಲಿ ಕಠೋರ ಸಾಧನೆಯನ್ನು ಮಾಡಿ ಪರಮಹಂಸ ಪದವಿಯನ್ನು ತಲುಪಿದರು. ರಾಮಕೃಷ್ಣ ಪರಮಹಂಸರೆಂದು ಗುರುತಿಸಲ್ಪಟ್ಟರು. ಶ್ರೀರಾಮ ಮತ್ತು ಶ್ರೀಕೃಷ್ಣ ಇಬ್ಬರೂ ತನ್ನ ಹೃದಯದಲ್ಲಿ ವಾಸಿಸುತ್ತಿರುವ ಬಗ್ಗೆ ಅವರು ಹೇಳುತ್ತಿದ್ದರು. ಸಾವಿರಾರು ಜನರು ಅವರ ಶಿಷ್ಯರಾದರು, ಆದರೆ ಅವರ ಕಾರ್ಯವನ್ನು ಸಮರ್ಥವಾಗಿ ಮುಂದುವರೆಸಿದ್ದು ಸ್ವಾಮಿ ವಿವೇಕಾನಂದರು ! ಶ್ರೀ ರಾಮಕೃಷ್ಣ ಪರಮಹಂಸರು ದೇವಿ ಕಾಳಿಮಾತೆಯ ಭಕ್ತರೆಂಬುವುದು ತಿಳಿದಿರುವ ವಿಷಯ. ಆದರೆ ಅವರು ವಿವಿಧ ರೀತಿಯ ಭಕ್ತಿಯನ್ನು ಅನುಸರಿಸಿ ಇತರ ದೇವತೆಗಳ ದರ್ಶನವನ್ನು ಕೂಡ ಪಡೆದಿದ್ದರು. ಅದರ ಕೆಲವು ಉದಾಹರಣೆಗಳನ್ನು ನೋಡೋಣ.

ಶ್ರೀರಾಮನ ದರ್ಶನಕ್ಕಾಗಿ ಹನುಮಂತನಂತೆ ಪರಿತಪಿಸುವ ರಾಮಕೃಷ್ಣರು !

ದೈವೀ ತತ್ತ್ವದ ವಿವಿಧ ರೂಪಗಳನ್ನು ಹಾಗು ಭಕ್ತಿಯ ವಿವಿಧ ಪದ್ಧತಿಗಳನ್ನು ತಿಳಿದುಕೊಳ್ಳಲು ರಾಮಕೃಷ್ಣರು ಅನೇಕ ಪ್ರಯತ್ನಗಳನ್ನು ಮಾಡಿದರು. ರಾಮಾಯಣದ ಸಮಯದಲ್ಲಿ ಶ್ರೀರಾಮನ ದರ್ಶನಕ್ಕಾಗಿ ಹೇಗೆ ಹನುಮಂತನು ಪರಿತಪಿಸಿದನೋ ಅದೇ ರೀತಿಯ ಸ್ಥಿತಿಯು ರಾಮಕೃಷ್ಣರು ಅನುಭವಿಸಿದರು. ಹನುಮಂತನ ಹಾಗೆಯೆ ಶ್ರೀರಾಮನ ಅನುಭೂತಿಯನ್ನು ಪಡೆಯಬೇಕು ಎಂಬ ಭಕ್ತಿಯು ಎಷ್ಟು ತೀವ್ರವಾಗಿತ್ತೆಂದರೆ, ಅವರಲ್ಲಿ ವಾನರರ ಅನೇಕ ಲಕ್ಷಣಗಳು ಕಂಡು ಬರತೊಡಗಿದವು ! ಈ ಪ್ರಯತ್ನಗಳಿಂದ ಪ್ರಸನ್ನನಾದ ಶ್ರೀರಾಮನು ಅವರಿಗೆ ದರ್ಶನವಿತ್ತನು!

ಗೋಪಿಕೆಯರಂತೆ ಶ್ರೀಕೃಷ್ಣನ ದರ್ಶನದ ಇಚ್ಛೆ !

ಭಗವಾನ್ ಕೃಷ್ಣನೊಂದಿಗೆ ಇರುವಾಗ ಮತ್ತು ಅವನ ಭಕ್ತಿರಸದಲ್ಲಿ ತಲ್ಲೀನರಾಗಿರುವ ಗೋಪಿಕೆಯರು ಯಾವ ರೀತಿ ಕೃಷ್ಣನ ದರ್ಶನಕ್ಕಾಗಿ ಪರಿತಪಿಸುತ್ತಿದ್ದರೋ ಅದೇ ರೀತಿ ಕೃಷ್ಣನ ದರ್ಶನವಾಗಬೇಕು ಎಂಬ ಇಚ್ಛೆಯು ರಾಮಕೃಷ್ಣರಿಗೆ ಆಯಿತು. ಓರ್ವ ಸ್ತ್ರೀಯ ದೃಷ್ಟಿಕೋನದಿಂದ ಶ್ರೀಕೃಷ್ಣನ ಭಕ್ತಿಯನ್ನು ಮಾಡುವಾಗ ಅವರು ಸ್ತ್ರೀಯಂತೆಯೇ ಕಾಣಿಸಲು ಮತ್ತು ವರ್ತಿಸಲು ಪ್ರಾರಂಭಿಸಿದರು. ಅವರ ವರ್ತನೆ ಹೇಗಿತ್ತೆಂದರೆ ಕೆಲವರು ಅವರನ್ನು ಸ್ತ್ರೀಯೆಂದು ಭಾವಿಸಿದರು! ತನ್ನಲ್ಲಿ ಓರ್ವ ಸ್ತ್ರೀಯ ಶ್ರೀಕೃಷ್ಣನ ದರ್ಶನದ ಇಚ್ಛೆಯನ್ನು ಜಾಗೃತಗೊಳಿಸಿದ ರಾಮಕೃಷ್ಣರಿಗೆ ಭಗವಾನ್ ಶ್ರೀ ಕೃಷ್ಣನ ದರ್ಶನದ ಭಾಗ್ಯವೂ ಲಭಿಸಿತು.

Leave a Comment