ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ !

ದೇವತೆಗಳ ಉಪಾಸನೆಯ ಹಿಂದಿನ ಶಾಸ್ತ್ರವು ನಮಗೆ ತಿಳಿದರೆ ಉಪಾಸನೆಯನ್ನು ಹೆಚ್ಚು ಶ್ರದ್ಧೆಯಿಂದ ಮಾಡಲು ಸಹಾಯವಾಗುತ್ತದೆ. ಶ್ರದ್ಧಾಯುಕ್ತವಾಗಿ ಮಾಡಿದ ಉಪಾಸನೆಯಿಂದ ಒಳ್ಳೆಯ ಫಲವು ದೊರೆಯುತ್ತದೆ. ಹಾಗೆಯೇ ಉಪಾಸನೆಗೆ ಸಂಬಂಧಿಸಿದ ಕೃತಿಗಳು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯವಾಗಿರುವುದು ಅವಶ್ಯಕವಾಗಿರುತ್ತದೆ. ಏಕೆಂದರೆ ಇಂತಹ ಕೃತಿಯಿಂದಲೇ ಹೆಚ್ಚು ಫಲವು ದೊರೆಯುತ್ತದೆ. ಈ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ ಹಾಗೂ ಉಪಾಸನೆಗೆ ಸಂಬಂಧಿಸಿದ ಕೃತಿಗಳನ್ನು ಅಧ್ಯಾತ್ಮಶಾಸ್ತ್ರದ ದೃಷ್ಟಿಯಿಂದ ಯೋಗ್ಯ ರೀತಿಯಲ್ಲಿ ಹೇಗೆ ಮಾಡಬೇಕು ಎಂಬುದನ್ನು ಮುಂದೆ ನೀಡಲಾಗಿದೆ.

ಪೂಜೆಯ ಆರಂಭಿಕ ಕೃತಿಗಳ ಶಾಸ್ತ್ರ !

ದತ್ತನ ಪೂಜೆಯನ್ನು ಪ್ರಾರಂಭಿಸುವ ಮೊದಲು ಹಣೆಯ ಮೇಲೆ ಕಿರುಬೆರಳಿನ ಹತ್ತಿರದ ಬೆರಳಿನಿಂದ (ಅನಾಮಿಕದಿಂದ) ವಿಷ್ಣುವಿನಂತೆ ಎರಡು ನೇರ ರೇಖೆಗಳಲ್ಲಿ ಗಂಧವನ್ನು ಹಚ್ಚಿಕೊಳ್ಳಬೇಕು. ಈ ರೀತಿ ಗಂಧವನ್ನು ಹಚ್ಚಿಕೊಳ್ಳುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ದತ್ತತತ್ತ್ವ್ವದ ಲಾಭವಾಗುತ್ತದೆ. ಹಾಗೆಯೇ ಗಂಧದಲ್ಲಿನ ಸಾತ್ತ್ವಿಕತೆಯಿಂದ ಭಾವಜಾಗೃತಿಯಾಗಿ ಮನಸ್ಸು ಬೇಗನೆ ಏಕಾಗ್ರವಾಗುತ್ತದೆ. ಇದರಿಂದಾಗಿ ಪೂಜೆಯಿಂದ ಪ್ರಾಪ್ತವಾಗುವ ಚೈತನ್ಯವನ್ನು ಅಧಿಕ ಪ್ರಮಾಣದಲ್ಲಿ ಗ್ರಹಣ ಮಾಡಲು ಸಾಧ್ಯವಾಗುತ್ತದೆ.

ದತ್ತನ ಪೂಜೆ ಮಾಡುವಾಗ ದತ್ತನಿಗೆ ಗಂಧವನ್ನು ಅನಾಮಿಕಾದಿಂದ (ಕಿರುಬೆರಳಿನ ಪಕ್ಕದ ಬೆರಳು) ಹಚ್ಚಬೇಕು. ಹಾಗೆಯೇ ಬಲಗೈಯ ಹೆಬ್ಬೆರಳು ಮತ್ತು ಅನಾಮಿಕಾವನ್ನು ಜೋಡಿಸಿದ ಚಿಟಿಕೆಯಿಂದ ದತ್ತನ ಚರಣಗಳಲ್ಲಿ ಮೊದಲು ಅರಿಶಿಣ ಆಮೇಲೆ ಕುಂಕುಮವನ್ನು ಅರ್ಪಿಸಬೇಕು.

ನೈರ್ಮಾಲ್ಯವನ್ನು ತೆಗೆಯುವಾಗಲೂ ಹೆಬ್ಬೆರಳು ಮತ್ತು ಅನಾಮಿಕ ಬೆರಳುಗಳನ್ನೇ ಉಪಯೋಗಿಸಬೇಕು. ಹೆಬ್ಬೆರಳು ಮತ್ತು ಅನಾಮಿಕಾ ಬೆರಳುಗಳನ್ನು ಜೋಡಿಸುವುದರಿಂದಾಗುವ ಮುದ್ರೆಯಿಂದ ಶರೀರದಲ್ಲಿನ ಅನಾಹತ ಚಕ್ರವು ಜಾಗೃತವಾಗಿ ಭಕ್ತಿಭಾವವು ನಿರ್ಮಾಣವಾಗಲು ಸಹಾಯವಾಗುತ್ತದೆ.

ದತ್ತಾತ್ರೇಯನ ಉಪಾಸನೆ ಹೇಗೆ ಮಾಡಬೇಕು ?

ದತ್ತನಿಗೆ ಎಷ್ಟು ಊದುಬತ್ತಿಯಿಂದ ಮತ್ತು ಹೇಗೆ ಬೆಳಗಬೇಕು?

ವಿಶಿಷ್ಟ ದೇವತೆಗಳ ತತ್ತ್ವವು ವಿಶಿಷ್ಟ ಗಂಧದ ಕಡೆ ಬೇಗನೇ ಆಕರ್ಷಿತವಾಗುತ್ತದೆ. ಈ ತತ್ವಕ್ಕನುಸಾರ ದತ್ತನ ಪೂಜೆಯಲ್ಲಿ ಚಂದನ, ಕೇದಗೆ, ಮಲ್ಲಿಗೆ ಮತ್ತು ಜಾಜಿ ಈ ಪರಿಮಳದ ಊದುಬತ್ತಿಗಳನ್ನು ಉಪಯೋಗಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ದತ್ತತತ್ವದ ಲಾಭವಾಗುತ್ತದೆ. ಆದುದರಿಂದ ದತ್ತನ ಪೂಜೆಯ ಸಂದರ್ಭದಲ್ಲಿ ಈ ಗಂಧದ ಊದುಬತ್ತಿಯನ್ನು ಉಪಯೋಗಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ದತ್ತತತ್ವದ ಲಾಭವಾಗುತ್ತದೆ. ದತ್ತನೊಂದಿಗೆ ಇತರ ಎಲ್ಲ ದೇವತೆಗಳಿಗೆ ಎಷ್ಟು ಊದುಬತ್ತಿಯನ್ನು ಬೆಳಗಬೇಕು ಎನ್ನುವ ಶಾಸ್ತ್ರವು ಮುಂದಿನಂತಿದೆ. ಒಂದು ಎಂಬುದು ಅದ್ವೈತದ ಪ್ರತೀಕವಾದರೆ ಎರಡು ದ್ವೈತದ ಪ್ರತೀಕವಾಗಿದೆ. ಪ್ರಾಥಮಿಕ ಹಂತದಲ್ಲಿ ಉಪಾಸಕನು ದೇವರು ಮತ್ತು ತಾನು ಹೀಗೆ ದ್ವೈತದ ಸ್ಥಿತಿಯನ್ನು ಅನುಭವಿಸುತ್ತಿರುತ್ತಾನೆ; ಆದ್ದರಿಂದ ಅವನು ಎರಡು ಊದುಬತ್ತಿಗಳನ್ನು ಬೆಳಗುವುದು ಹೆಚ್ಚು ಯೋಗ್ಯವಾಗಿದೆ. ಉಪಾಸಕನು ಭಕ್ತಿಯ ಮುಂದಿನ ಹಂತದಲ್ಲಿ ಒಂದು ಊದುಬತ್ತಿಯನ್ನು ಬೆಳಗಬಹುದು. ದೇವರಿಗೆ ಊದುಬತ್ತಿಯನ್ನು ಬೆಳಗುವಾಗ ಅದನ್ನು ತನ್ನ ಬಲಗೈಯ ತೋರುಬೆರಳು ಮತ್ತು ಹೆಬ್ಬೆರಳಿನಿಂದ ಹಿಡಿದು ಗಡಿಯಾರದ ಮುಳ್ಳು ತಿರುಗುವ ದಿಶೆಯಲ್ಲಿ ಮೂರು ಬಾರಿ ಬೆಳಗಬೇಕು.

(ಆಧಾರ : ಸನಾತನವು ಪ್ರಕಾಶಿಸಿದ ಗ್ರಂಥ ‘ದತ್ತ’)

 

1 thought on “ದತ್ತನ ಉಪಾಸನೆಯ ಹಿಂದಿನ ಶಾಸ್ತ್ರ !”

  1. ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ. ಧನ್ಯವಾದಗಳು.

    Reply

Leave a Comment