ಕೋಜಾಗರಿ ಹುಣ್ಣಿಮೆ (ಶರದ ಪೂರ್ಣಿಮೆ)

ತಿಥಿ : ಆಶ್ವಯುಜ ಹುಣ್ಣಿಮೆ

ಇತಿಹಾಸ : ಈ ದಿನವೇ ಶ್ರೀಕೃಷ್ಣನು ವ್ರಜಮಂಡಲದಲ್ಲಿ ರಾಸಕ್ರೀಡೆಯನ್ನಾಡಿದನೆಂದು ಶ್ರೀಮದ್‌ಭಾಗವತದಲ್ಲಿ ಹೇಳಲಾಗಿದೆ.

ಆಶ್ವಯುಜ ಹುಣ್ಣಿಮೆಯ ವಿವಿಧ ಹೆಸರುಗಳು

ಆಶ್ವಯುಜ ಹುಣ್ಣಿಮೆಯನ್ನು ಕೋಜಾಗರಿ ಹುಣ್ಣಿಮೆ, ನವಾನ್ನ ಹುಣ್ಣಿಮೆ ಅಥವಾ ಶರದ್ ಹುಣ್ಣಿಮೆ ಎಂದೂ ಕರೆಯುತ್ತಾರೆ. ಹುಣ್ಣಿಮೆ ಪೂರ್ತಿಯಾಗುವ ದಿನದಂದು ನವಾನ್ನ ಹುಣ್ಣಿಮೆಯನ್ನು ಆಚರಿಸಲಾಗುತ್ತದೆ.

ಅ. ಆಶ್ವಯುಜ ಹುಣ್ಣಿಮೆಯಂದು ತಡ ರಾತ್ರಿ ಲಕ್ಷ್ಮೀ ದೇವಿಯು ‘ಕೋ ಜಾಗರ್ತಿ’ ಅಂದರೆ ‘ಯಾರು ಎಚ್ಚರವಾಗಿದ್ದರೆ’ ಎಂದೂ ವಿಚಾರಿಸಲು ಬರುತ್ತಾಳೆ; ಆದುದರಿಂದ ಈ ಹುಣ್ಣಿಮೆಯನ್ನು ಕೋಜಾಗರಿ ಹುಣ್ಣಿಮೆ ಎಂದೂ ಕರೆಯುತ್ತಾರೆ.

ಆ. ಆಶ್ವಯುಜ ಹುಣ್ಣಿಮೆಯಂದು ರೈತರು ನಿಸರ್ಗದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಲು ಹೊಸ ಧಾನ್ಯವನ್ನು ಪೂಜಿಸಿ ಅದರ ನೈವೇದ್ಯವನ್ನು ಮಾಡುತ್ತಾರೆ; ಆದುದರಿಂದ ಈ ಹುಣ್ಣಿಮೆಯನ್ನು ನವಾನ್ನ ಹುಣ್ಣಿಮೆ ಎಂದೂ ಕರೆಯುತ್ತಾರೆ.

ಇ. ಆಶ್ವಯುಜ ಹುಣ್ಣಿಮೆಯು ಶರದ್ ಋತುವಿನಲ್ಲಿ ಬರುತ್ತದೆ, ಆದುದರಿಂದ ಇದಕ್ಕೆ ಶರದ್ ಹುಣ್ಣಿಮೆ ಎಂಬ ಹೆಸರೂ ಇದೆ.

ಮಹತ್ವ

ಅ. ಮೂಲ ಚಂದ್ರತತ್ತ್ವದ ಅಂದರೆ, ‘ಚಂದ್ರಮ’ನನ್ನು ಪ್ರತಿನಿಧಿಸುವ ಮತ್ತು ನಮಗೆ ಕಾಣಿಸುವ ಚಂದ್ರನು, ‘ಚಂದ್ರಮ’ನಂತೆಯೇ ಶೀತಲ ಹಾಗೂ ಆಹ್ಲಾದದಾಯಕವಾಗಿದ್ದಾನೆ. ಸಾಧಕರು ಚಂದ್ರನ ಶೀತಲತೆಯನ್ನು ಈಶ್ವರನ ಅವತಾರಗಳಿಂದ ಅನುಭವಿಸಬಲ್ಲರು. ಆದುದರಿಂದಲೇ ರಾಮಚಂದ್ರ, ಕೃಷ್ಣಚಂದ್ರ ಎನ್ನುವ ಹೆಸರುಗಳನ್ನು ರಾಮ-ಕೃಷ್ಣರಿಗೆ ಕೊಡಲಾಗಿದೆ. ಚಂದ್ರನ ಈ ಗುಣದಿಂದಲೇ ‘ನಕ್ಷತ್ರಾಣಾಮಹಂ ಶಶಿ’ ಅಂದರೆ ‘ನಕ್ಷತ್ರಗಳಲ್ಲಿ ನಾನು ಚಂದ್ರನಾಗಿದ್ದೇನೆ’ ಎಂದು ಭಗವಾನ ಶ್ರೀಕೃಷ್ಣನು ಶ್ರೀಮದ್‌ಭಗವದ್ಗೀತೆ ಯಲ್ಲಿ (೧೦:೨೧) ಹೇಳಿದ್ದಾನೆ.

ಆ. ಮಧ್ಯರಾತ್ರಿಯಲ್ಲಿ ಶ್ರೀ ಲಕ್ಷ್ಮೀಯು ಚಂದ್ರಮಂಡಲದಿಂದ ಭೂಮಂಡಲಕ್ಕೆ ಬಂದು ‘ಕೋ ಜಾಗರ್ತಿ’ ಅಂದರೆ ‘ಯಾರು ಎಚ್ಚರವಾಗಿದ್ದಾರೆ?’, ಎಂದು ಕೇಳಿ ಎಚ್ಚರವಾಗಿರುವವರನ್ನು ಧನಧಾನ್ಯಗಳಿಂದ ಸಂತುಷ್ಟರನ್ನಾಗಿ ಮಾಡುತ್ತಾಳೆ.

ಉತ್ಸವವನ್ನು ಆಚರಿಸುವ ಪದ್ಧತಿ

aativ_dudh_400.jpg
ಕುದಿಸಿ ಗಟ್ಟಿ ಮಾಡಿದ ಹಾಲಿನ ನೈವೇದ್ಯ

ಈ ದಿನ ನವಾನ್ನ (ಹೊಸತಾಗಿ ಬೆಳೆದ ಧಾನ್ಯದಿಂದ) ಊಟವನ್ನು ಮಾಡುತ್ತಾರೆ. ಶ್ರೀ ಲಕ್ಷ್ಮೀ ಮತ್ತು ಐರಾವತದ ಮೇಲೆ ಕುಳಿತ ಇಂದ್ರನ ಪೂಜೆಯನ್ನು ಮಾಡುತ್ತಾರೆ. ಪೂಜೆಯಾದ ಮೇಲೆ ಅವಲಕ್ಕಿ ಮತ್ತು ಎಳನೀರನ್ನು ದೇವರಿಗೆ ಮತ್ತು ಪಿತೃಗಳಿಗೆ ಸಮರ್ಪಿಸಿ ನಂತರ ನೈವೇದ್ಯವೆಂದು ಸೇವಿಸುತ್ತಾರೆ ಮತ್ತು ತಮ್ಮ ಕಡೆಗೆ ಬಂದವರಿಗೆಲ್ಲರಿಗೂ ಪ್ರಸಾದವೆಂದು ಕೊಡುತ್ತಾರೆ. ಶರದ ಋತುವಿನ ಪೂರ್ಣಿಮೆಯ ಸ್ವಚ್ಛ ಬೆಳದಿಂಗಳಿನಲ್ಲಿ ಚಂದ್ರನಿಗೆ ಕುದಿಸಿ ಗಟ್ಟಿ ಮಾಡಿದ ಹಾಲಿನ ನೈವೇದ್ಯವನ್ನು ಮಾಡುತ್ತಾರೆ, ಆಮೇಲೆ ನೈವೇದ್ಯವೆಂದು ಆ ಹಾಲನ್ನು ಸೇವಿಸುತ್ತಾರೆ. ಚಂದ್ರನ ಪ್ರಕಾಶದಲ್ಲಿ ಒಂದು ವಿಧದ ಆಯುರ್ವೇದಿಯ ಶಕ್ತಿಯಿದೆ. ಆದ್ದರಿಂದಾಗಿ ಈ ಹಾಲು ಆರೋಗ್ಯ ದಾಯಕವಾಗಿದೆ. ಈ ರಾತ್ರಿ ಜಾಗರಣೆ ಮಾಡುತ್ತಾರೆ. ಮನೋರಂಜನೆಗಾಗಿ ಕುಳಿತು ಆಡುವ ವಿವಿಧ ಆಟಗಳನ್ನು ಆಡುತ್ತಾರೆ. ಮರುದಿನ ಬೆಳಗ್ಗೆ ಪೂಜೆಯ ಪಾರಣೆ (ಉಪವಾಸವನ್ನು ಬಿಡುವುದು) ಯನ್ನು ಮಾಡುತ್ತಾರೆ.

ಭಾವಾರ್ಥ: ಕೋಜಾಗರಿಯ ರಾತ್ರಿ ಯಾರು ಜಾಗೃತ ಮತ್ತು ಎಚ್ಚರಿಕೆಯಿಂದಿರುತ್ತಾರೆಯೋ, ಅವರಿಗೆ ಮಾತ್ರ ಅಮೃತಪ್ರಾಶನದ ಲಾಭವು ದೊರೆಯುತ್ತದೆ!

ಕೋಜಾಗರಿ ಹುಣ್ಣಿಮೆಯಂದು ಚಂದ್ರದರ್ಶನ – ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಹತ್ವ

ಈ ದಿನದಂದು ಲಕ್ಷ್ಮೀ ಮತ್ತು ಇಂದ್ರ ದೇವನನ್ನು ಪೂಜಿಸುತ್ತಾರೆ. ಈ ರೀತಿಯ ಪೂಜೆಯಿಂದ ಲಕ್ಷ್ಮೀಕೃಪೆಯಾಗಿ ಸುಖ ಸಮೃದ್ಧಿ ಪ್ರಾಪ್ತಿಯಾಗುತ್ತದೆ. ರಾತ್ರಿ ಹಾಲಿನಲ್ಲಿ ಚಂದ್ರದರ್ಶನ ಪಡೆಯುವುದರಿಂದ ಚಂದ್ರನ ಕಿರಣಗಳ ಮಾಧ್ಯಮದಿಂದ ಅಮೃತ ಪ್ರಾಪ್ತವಾಗುತ್ತದೆ. ಆಶ್ವಯುಜ ಹುಣ್ಣಿಮೆಯಂದು, ಅಶ್ವಿನಿ ನಕ್ಷತ್ರವಿರುವಾಗ ಈ ರೀತಿಯ ಫಲ ಸಿಗುತ್ತದೆ. ದೇವ-ದೇವತೆಗಳ ವೈದ್ಯರಾದ ಅಶ್ವಿನಿ ಕುಮಾರರು ಅಶ್ವಿನಿ ನಕ್ಷತ್ರದ ದೇವತೆಗಳಾಗಿದ್ದರೆ. ಭಕ್ತಿ ಭಾವದಿಂದ ಮಾಡಿದ ಅವರ ಆರಾಧನೆಯಿಂದ ಅಸಾಧ್ಯ ರೋಗಗಳ ನಿವಾರಣೆಯೂ ಆಗುತ್ತದೆ. ಆದುದರಿಂದ ಇತರ ಹುಣ್ಣಿಮೆಗಳ ತುಲನೆಯಲ್ಲಿ ಆಶ್ವಯುಜ ಹುಣ್ಣಿಮೆಯ ಚಂದ್ರದರ್ಶನದಿಂದ ಆಧ್ಯಾತ್ಮಿಕ ತೊಂದರೆಯಾಗುವುದಿಲ್ಲ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಚಂದ್ರನು ಮನಸ್ಸಿನ ಕಾರಕನಾಗಿದ್ದಾನೆ. ಆದುದರಿಂದ ನಮ್ಮ ಮನಸ್ಸಿನ ಭಾವನೆಗಳು, ಉತ್ಸಾಹ, ನಿರಾಶೆ ಇವೆಲ್ಲವುಗಳ ಸಂಬಂಧವು ಚಂದ್ರನೊಂದಿಗಿದೆ. ಆದುದರಿಂದ ಯಾರ ಜಾತಕದಲ್ಲಿ ಚಂದ್ರಬಲ ಕಡಿಮೆಯಿದೆಯೋ, ಅಂತಹವರಿಗೆ ಹುಣ್ಣಿಮೆಯ ಹತ್ತಿರದ ದಿನಗಳಲ್ಲಿ ಮಾನಸಿಕ ತೊಂದರೆಗಳಾಗುವ ಪ್ರಮಾಣ ಹೆಚ್ಚಾಗುತ್ತದೆ. ಯಾರ ಜಾತಕದಲ್ಲಿ ಚಂದ್ರಬಲ ಉತ್ತಮವಾಗಿದೆಯೋ, ಅಂತಹವರ ಪ್ರತಿಭೆಯು ಹುಣ್ಣಿಮೆಯ ಚಂದ್ರನ, ಅಥವಾ ಬೆಳದಿಂಗಳಲ್ಲಿ ಜಾಗೃತವಾಗುತ್ತದೆ. ಅವರ ಕವಿತ್ವ ಜಾಗೃತವಾಗುತ್ತದೆ.

ಚಂದ್ರ ಗ್ರಹವು ಮಾತೃಕಾರಕವಾಗಿದೆ, ಅಂದರೆ ಜಾತಕದಲ್ಲಿರುವ ಚಂದ್ರನಿಂದ ತಾಯಿಯ ಜೊತೆಗಿನ ಬಾಂಧವ್ಯವನ್ನು ಅಳೆಯುತ್ತಾರೆ. ಆಶ್ವಯುಜ ಹುಣ್ಣಿಮೆಯಂದು ಚಂದ್ರನು ಸಾಕ್ಷಿಯಾಗಿದ್ದು ತಾಯಿಯು ಕೃತಜ್ಞತೆಯ ಭಾವವಿಟ್ಟು ತನ್ನ ಜ್ಯೇಷ್ಠ ಮಗುವಿಗೆ ಆರತಿಯನ್ನು ಬೆಳಗುತ್ತಾಳೆ; ಏಕೆಂದರೆ ಮೊದಲನೇ ಮಗು ಹುಟ್ಟಿದ ಮೇಲೆ ಓರ್ವ ಹೆಣ್ಣಿಗೆ ಮಾತೃತ್ವದ ಆನಂದ ಪ್ರಾಪ್ತವಾಗುತ್ತದೆ.

– ಸೌ. ಪ್ರಾಜಕ್ತಾ ಜೋಶಿ, ಜ್ಯೋತಿಷ್ಯ ಫಲಶಾಸ್ತ್ರ ವಿಶಾರದೆ, ವಾಸ್ತು ವಿಶಾರದೆ, ಸಂಖ್ಯಾಜ್ಯೋತಿಷ್ಯ ವಿಶಾರದೆ, ರತ್ನಶಾಸ್ತ್ರ ವಿಶಾರದೆ, ಅಷ್ಟಕವರ್ಗ ವಿಶಾರದೆ, ಸರ್ಟಿಫಾಯಿಡ್ ಡೌಸರ್, ರಮಲ ಪಂಡಿತೆ, ಹಸ್ತಾಕ್ಷರ ಮನೋವಿಶ್ಲೇಷಣಶಾಸ್ತ್ ವಿಶಾರದೆ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ರಾಮನಾಥಿ ಗೋವಾ (11.10.2020)

ಕೋಜಾಗರ = ಕೋ + ಓಜ + ಆಗರ

ಈ ದಿನದಂದು ಎಲ್ಲರಿಗೂ ಚಂದ್ರನ ಕಿರಣಗಳಿಂದ ಆತ್ಮಶಕ್ತಿರೂಪೀ (ತೇಜಸ್ಸು) ಆನಂದ, ಆತ್ಮಾನಂದ, ಬ್ರಹ್ಮಾನಂದ ಅತಿ ಹೆಚ್ಚಿನ ಪ್ರಮಾಣದಲ್ಲಿ ದೊರೆಯುತ್ತದೆ; ಆದರೆ ಈ ಅಮೃತಪ್ರಾಶನ ಮಾಡಲು ‘ಕೋ ಜಾಗ್ರತಿ?’, ಅಂದರೆ ‘ಯಾರು ಜಾಗೃತರಾಗಿದ್ದಾರೆ? ಯಾರು ಎಚ್ಚರಿಕೆಯಿಂದ ಇದ್ದಾರೆ? ಯಾರು ಇದರ ಮಹತ್ವವನ್ನು ಅರಿತಿದ್ದಾರೆ? ಯಾರು ಜಾಗೃತ ಮತ್ತು ಎಚ್ಚರಿಕೆಯಿಂದಿದ್ದಾರೆಯೋ ಮತ್ತು ಯಾರಿಗೆ ಇದರ ಮಹಾತ್ಮೆಯು ತಿಳಿದಿದೆಯೋ, ಅವರಿಗೆ ಮಾತ್ರ ಈ ಅಮೃತಪ್ರಾಶನದ ಲಾಭ ದೊರೆಯುತ್ತದೆ ಎಂದು ಋಷಿಗಳು ಹೇಳುತ್ತಾರೆ!’

– ಪ.ಪೂ.ಪರಶುರಾಮ ಪಾಂಡೇ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.

(ಆಧಾರ ಗ್ರಂಥ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು’)

4 thoughts on “ಕೋಜಾಗರಿ ಹುಣ್ಣಿಮೆ (ಶರದ ಪೂರ್ಣಿಮೆ)”

  1. ಉಗುರು ಕತರಿಸುವ ಬಗ್ಗೆ ಕೊಟ್ಟಿದ್ದ ಮಾಹಿತಿಯ ಯನ್ನ ಪಾಲಿಸಿ ಬಹುದ.

    Reply

Leave a Comment