ವೈಕುಂಠ ಏಕಾದಶಿಯ ಮಹತ್ವ ಏನು ?

ಹಿಂದೂಗಳಲ್ಲಿ ಅತ್ಯಂತ ಮುಗ್ಧ ಸಾಮಾನ್ಯ ವ್ಯಕ್ತಿಯ ದೃಷ್ಟಿಯಲ್ಲಿ ಕೂಡಾ ‘ಏಕಾದಶಿಯ ಮತ್ತು ಉಪವಾಸ ಎರಡು ಒಂದೇ ಅರ್ಥವುಳ್ಳ ಶಬ್ದಗಳು’ ಆಧ್ಯಾತ್ಮಿಕ ಸಾಧನೆಯಲ್ಲಿ ಆದ ಪಾಪಗಳು, ಪ್ರಾಯಶ್ಚಿತ್ತಗಾಗಿಯೋ ಅಥವಾ ಮನೋವೃತ್ತಿಗಳ ನಿಯಂತ್ರಣಗಳ ಮೂಲಕ ಆತ್ಮ ಸಂಯಮದ ಪ್ರಾಪ್ತಿಗಾಗಿಯೂ ನಿರಶನ ವ್ರತ ಸಹಕಾರಿ ಎನ್ನುವುದು ಹಿಂದೂಗಳ ಶೃದ್ಧೆಯಾಗಿದೆ. ನಿರಾಹಾರದಿಂದ ಮನಸ್ಸಿನ ಮೇಲೆ ಒತ್ತಡ ಕಡಿಮೆಯಾಗುತ್ತದೆ. ಮನದ ನಿಯಮನ ಸುಲಭವಾಗುತ್ತದೆ. ಅಂತರಾತ್ಮದ ಕಡೆ ಅಭಿಮುಖವಾಗಿ ನೆಲೆಗೊಳ್ಳಲು ಸಾಧ್ಯವಾಗುತ್ತದೆ.

ಧರ್ಮಶಾಸ್ತ್ರಗಳು ಹೇಳುವಂತೆ

ಅಶ್ವಮೇಧ ಸಹಸ್ರಾಣಿ, ವಾಜಪೇಯಾಯುತಾನಿಚ | ಏಕಾದಶೋ ಉಪವಾಸಸ್ಯ ಕಲಂ ನಾರಹಂತಿ ಷೋಡಶಿಃ|

ಅರ್ಥ : ಒಂದು ಏಕಾದಶಿ ಉಪವಾಸವೆಂಬುದು ಅಶ್ವಮೇಧಯಾಗ ಹಾಗೂ ವಾಜಪೇಯ ಯಾಗಕ್ಕೆ ಸಮಾನವಾದದ್ದು ಎಂದು ಧರ್ಮಶಾಸ್ತ್ರ ಹೇಳುತ್ತದೆ.

ಮಾನವನಿಂದ ಹನ್ನೊಂದು ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳಿಂದ ಆದ ಪಾಪವನ್ನು ಏಕಾದಶಿ ವ್ರತದಿಂದ ನಾಶಪಡಿಸಬಲ್ಲದು ಎಂದು ಶಾಸ್ತ್ರಗಳು ಪ್ರಮಾಣಿಕರಿಸಿದೆ.

ಏಕಾದಶೇಂದ್ರಿಯೇ ಪಾಪಂ ಯತ್‌ಕೃತಂ ಭವತಿ ಪ್ರಭೋ | ಏಕಾದಶಿ ಉಪವಾಸನ್ ತತ್ ಸರ್ವಂ ವಿಲೆಯಂ ವಜೇತ್ | 

ಅರ್ಥ : ಮನುಷ್ಯನು ಮಾಡಿದ ತಪ್ಪುಗಳಿಗೆ, ಪಾಪಕಾರ್ಯಗಳಿಗೆ, ಪ್ರಾಯಶ್ಚಿತ್ತ ಆಗಬೇಕಾದರೆ ‘ಏಕಾದಶಿ ವ್ರತ’ ಮಾಡಬೇಕು. ಅದರಲ್ಲೂ ವೈಕುಂಠ ಏಕಾದಶಿ ಸರ್ವಶ್ರೇಷ್ಠವಾಗಿದೆ. ಪ್ರತಿ ತಿಂಗಳಿಗೆ ಶುಕ್ಲಪಕ್ಷ, ಕೃಷ್ಣಪಕ್ಷದಲ್ಲಿ ಏಕಾದಶಿ ಬರುತ್ತದೆ. ಅಂದರೆ ವರ್ಷಕ್ಕೆ ೨೪ ಏಕಾದಶಿಯಾಗುತ್ತದೆ. (ಕಾಮದ ಏಕಾದಶಿ, ವರುಧಿನಿಏಕಾದಶಿ, ಮೋಹಿನಿ, ಅಪರ, ನಿರ್ಜಲ, ಜೇಷ್ಠಯೋಗಿನಿ, ಪ್ರಥಮ ಏಕಾದಶಿ, ಕಾಮ್ಯದಏಕಾದಶಿ, ಪುತ್ರದಏಕಾದಶಿ, ಇಂದಿರಾ, ಪಾಶಾಂಕುಶ, ರಮಾಏಕಾದಶಿ, ಪ್ರಭೋದಿನಿ ಏಕಾದಶಿ, ಉತ್ಪತ್ತಿ, ಮೋಕ್ಷ, ಸಫಲ, ವೈಕುಂಠ ಏಕಾದಶಿ, ಪಾಪ ವಿಮೋಚನ ಏಕಾದಶಿ, ಅಮಲಕ ಏಕಾದಶಿ ವಿಜಯ ಏಕಾದಶಿ, ಜಯ ಏಕಾದಶಿ.)

ಪದ್ಮ ಪುರಾಣದಲ್ಲಿ ಹೇಳಲಾದ ಕಥೆಯನ್ನು ಇಲ್ಲಿ ಉಲ್ಲೇಖಿಸಲಾಗಿದೆ. ಮುರನೆಂಬ ರಾಕ್ಷಸನು ದೇವತೆಗಳಿಗೆ ತುಂಬಾ ಉಪಟಳ ಕೋಡುತ್ತಿದ್ದ. ಆಗ ವಿಷ್ಣುನೇ ಆ ರಾಕ್ಷಸನ ಸಂಹಾರಕ್ಕೆ ಮುಂದಾಗುತ್ತಾನೆ. ವಿಷ್ಣುವಿನ ಅಂಶದಿಂದ ಪ್ರಕಟಗೊಂಡ ‘ಹೈನಮತಿ’ ಎಂಬ ಸ್ತ್ರೀ ದೇವತೆ ಆ ರಾಕ್ಷಸನನ್ನು ಸಂಹರಿಸುತ್ತಾಳೆ. ಆಗ ವಿಷ್ಣುವು ಸಂಪ್ರಿತಗೊಂಡು ಏನಾದರೂ ವರವನ್ನು ಕೇಳು ಎಂದು ಆ ದೇವತೆಗೆ ಹೇಳುತ್ತಾನೆ. ಆಗ ಅವಳು ‘ಯಾರು ಈ ವೈಕುಂಠ ಏಕಾದಶಿ ದಿನದಂದು ವ್ರತವನ್ನು ಆಚರಿಸಿ ನಿನ್ನ ಸ್ಮರಣೆ ಮಾಡುತ್ತಾರೋ ಅವರಿಗೆಲ್ಲ ಮೋಕ್ಷವನ್ನು ಕರುಣಿಸು’ ಎಂದು ಬೇಡುತ್ತಾಳೆ.

ಇನ್ನೊಂದು ಪೌರಾಣಿಕ ಕಥೆಯ ಪ್ರಕಾರ ಹಿಂದೆ ಒಬ್ಬ ರಕ್ಕಸಿಯ ಕಾಟದಿಂದ ಏಕಾದಶಿ ವ್ರತವನ್ನು ತ್ಯಜಿಸಿ, ಉಪವಾಸನಾದಿ ವ್ರತಗಳನ್ನು ಮಾಡದೇ ವ್ರತ ಭೃಷ್ಟನಾದಂತಹ ತನ್ನ ಭಕ್ತ ರುಕ್ಮಾಂಗಧನನ್ನು ವಿಷ್ಣುವು ಉದ್ದರಿಸಿ ಅಂದು ವೈಕುಂಠಕ್ಕೆ ಕರೆದೊಯ್ದ ದಿನ, ಅದು ಕೂಡ ‘ವೈಕುಂಠ ಏಕಾದಶಿ’ಯಾಗಿತ್ತು.

ವ್ರತವನ್ನಾಚರಿಸುವ ರೀತಿ

ಈ ಏಕಾದಶಿಯನ್ನು ‘ಮುಕ್ಕೋಟಿ ಏಕಾದಶಿ’, ‘ಮೋಕ್ಷ ಏಕಾದಶಿ’ ಎಂದೂ ಕರೆಯುತ್ತಾರೆ. ಅಂದು ರಾಜಸ ತಾಮಸ ಪದಾರ್ಥಗಳನ್ನು ಸ್ವಿಕರಿಸದೇ ಅಶಕ್ತರು, ರೋಗಿಗಳು, ಹಾಲು, ಹಣ್ಣು, ಶಾಬು ಅಕ್ಕಿಯಿಂದ ಮಾಡಿದ ಪದಾರ್ಥಗಳನ್ನು ಉಪಯೋಗಿಸಬಹುದು, ಅನ್ನ ಸ್ವೀಕಾರ ನಿಷಿದ್ಧ. ಮದ್ಯಪಾನ, ಮಾಂಸಾಹಾರ ಸೇವನೆ ನಿಷಿದ್ಧ, ದೇಹದ ಆತ್ಮದ ನಿಗ್ರಹಕ್ಕಾಗಿ ಆ ದಿನ ಉಪವಾಸವಿದ್ದರೆ ತುಂಬಾ ಉತ್ತಮ ಎಂಬುದು ನಮ್ಮ ಸಂಪ್ರದಾಯ ಹೇಳುತ್ತದೆ.

ಅಂದು ಭಗವಾನ ವಿಷ್ಣುವಿಗೆ ತುಳಸಿ ಅರ್ಚನೆ, ವಿಷ್ಣು ಸಹಸ್ರನಾಮ ಪಾರಾಯಣ, ಮನೆಯಲ್ಲಿ ಘಂಟಾನಾದ (ಮನೆಯ ದೇವರಿಗೆ ಪೂಜೆ) ಮತ್ತು ವೈಕುಂಠ ದ್ವಾರದ ಮೂಲಕ (ಉತ್ತರದ್ವಾರದ) ಭಗವಂತನ ದರ್ಶನ ಮಾಡಬೇಕು.

ಆ ದಿನ ನಾವು ಮಾಡುವ ಪದಾರ್ಥಗಳಿಗೆ ಈರುಳ್ಳಿ, ಬೆಳ್ಳುಳ್ಳಿ, ಕ್ಯಾರೇಟ್, ಬೀಟರೋಟ್ ಬಳಸಬಾರದು. ಅನ್ನದಿಂದ ಮಾಡಿದ ಪದಾರ್ಥಗಳನ್ನು ಸ್ವೀಕರಿಸದೇ, ಅವಲಕ್ಕಿ, ಶಾಬು ಅಕ್ಕಿಯಿಂದ ಮಾಡಿದ ಪದಾರ್ಥ ಸ್ವೀಕರಿಸಬುಹುದು.

ದಕ್ಷಿಣಭಾರತದ ತಿರುಪತಿ, ತಮಿಳುನಾಡಿನ ರಂಗನಾಥ ದೇವಾಲಯದಲ್ಲಿ ವೈಕುಂಠ ಏಕಾದಶಿ ದಿನದಿಂದ ೨೧ ದಿನದ ವರೆಗೂ ವಿಶೇಷ ಪೂಜೆ ಇರುತ್ತದೆ. ಹಾಗೇಯೇ ಶ್ರೀಕೃಷ್ಣನು ಅರ್ಜುನನಿಗೆ ರಣರಂಗದಲ್ಲಿ ‘ಗೀತೆಯ ಭೋಧನೆ’ ಮಾಡಿದ ದಿನವು ಇದೇ ಆಗಿದೆ. ಅದಕ್ಕಾಗಿ ವೈಕುಂಠ ಏಕಾದಶಿಯಂದು ‘ಗೀತಾಜಯಂತಿ”ಯನ್ನು ಆಚರಿಸುತ್ತಾರೆ. ಅಂದು ಗೀತಾ ಪಾರಾಯಣವನ್ನು ಮಾಡಲಾಗುತ್ತದೆ.

ಇಂತಹ ಒಂದು ವಿಶಿಷ್ಟ ದಿನವನ್ನು ಆಚರಿಸೋಣ ಹಾಗೂ ಉತ್ತರದ್ವಾರದಿಂದ ವಿಷ್ಣುವಿನ ದರ್ಶನ ಪಡೆದು ಆತನ ಕೃಪೆಗೆ ಪಾತ್ರರಾಗೋಣ, ಆಯುರಾರೋಗ್ಯ, ನೆಮ್ಮದಿಯ ಜೀವನವನ್ನು ಪಡೆಯೋಣ.

ಸಂಗ್ರಹ – ಶ್ರೀ. ಪುಂಡಲಿಕ ಪೈ, ಭಟ್ಕಳ

3 thoughts on “ವೈಕುಂಠ ಏಕಾದಶಿಯ ಮಹತ್ವ ಏನು ?”

Leave a Comment