ವಾಸ್ತುದೋಷವನ್ನು ದೂರಗೊಳಿಸುವ ಸುಲಭ ಪದ್ಧತಿಗಳು !

ವಾಸ್ತುವಿನಲ್ಲಿನ ಅಯೋಗ್ಯ ಮತ್ತು ತೊಂದರೆದಾಯಕ ಸ್ಪಂದನಗಳನ್ನು ದೂರಗೊಳಿಸಿ, ಅಲ್ಲಿ ಉತ್ತಮ ಸ್ಪಂದನಗಳನ್ನು ನಿರ್ಮಾಣ ಮಾಡುವುದೆಂದರೆ ವಾಸ್ತುವಿನ ಶುದ್ಧೀಕರಣ ಮಾಡುವುದು. ಇತ್ತೀಚೆಗೆ, ವಾಸ್ತುವಿನಲ್ಲಿ ದೋಷಗಳು ಇರಬಾರದೆಂದು ವಾಸ್ತುಶಾಸ್ತ್ರದ ಬಗ್ಗೆ ಗಂಭೀರವಾಗಿ ವಿಚಾರ ಮಾಡುತ್ತಾರೆ. ಇದಕ್ಕಾಗಿ ವಾಸ್ತುದೋಷದಿಂದಾಗುವ ದುಷ್ಪರಿಣಾಮಗಳ ಕೆಲವು ಉದಾಹರಣೆಗಳು ಮತ್ತು ವಾಸ್ತುದೋಷಗಳನ್ನು ದೂರಗೊಳಿಸಲು ಪ್ರಚಲಿತವಿರುವ ಪದ್ಧತಿಗಳಿಗಿಂತ ಕಡಿಮೆ ಖರ್ಚಿನ ಮತ್ತು ಸುಲಭ ವಿಧಾನಗಳ ಮಾಹಿತಿಯನ್ನು ಮುಂದೆ ಕೊಟ್ಟಿದ್ದೇವೆ.

ವಾಸ್ತುದೋಷದಿಂದಾಗುವ ದುಷ್ಪರಿಣಾಮಗಳ ಕೆಲವು ಉದಾಹರಣೆಗಳು

೧. ಹೊಟ್ಟೆಯ ವಿಕಾರ, ಅಂಗವಿಕಲತೆ ಮುಂತಾದ ಶಾರೀರಿಕ ರೋಗಗಳು
೨. ಚಿಂತೆ, ನಿರಾಶೆ ಮುಂತಾದ ಮಾನಸಿಕ ರೋಗಗಳು
೩. ಸತತವಾಗಿ ಆರ್ಥಿಕ ನಷ್ಟವಾಗುವುದು, ಮನೆಯಲ್ಲಿ ಜಗಳವಾಗುವುದು
೪. ನಾಮಜಪದಲ್ಲಿ ಅಡಚಣೆಯುಂಟಾಗುವುದು, ಕೆಟ್ಟಶಕ್ತಿಗಳ ಅಸ್ತಿತ್ವದ ಅರಿವಾಗುವುದು.

ವಾಸ್ತುಶುದ್ಧಿಯ ಕೆಲವು ಸುಲಭ ಪದ್ಧತಿಗಳು

೧. ಅನಾವಶ್ಯಕ ವಸ್ತುಗಳನ್ನು ಕಡಿಮೆ ಮಾಡುವುದು: ಮನೆಯಲ್ಲಿನ ಅನಾವಶ್ಯಕ ವಸ್ತುಗಳನ್ನು ಕಡಿಮೆ ಮಾಡಿ ಉಳಿದ ವಸ್ತುಗಳನ್ನು ಸುವ್ಯವಸ್ಥಿತವಾಗಿ ಇಡಬೇಕು.

೨. ವಿಭೂತಿಯನ್ನು ಊದುವುದು: ತೀರ್ಥಕ್ಷೇತ್ರಗಳ ಅಥವಾ ಯಜ್ಞದ ವಿಭೂತಿಯನ್ನು ಕೈಯಲ್ಲಿ ತೆಗೆದುಕೊಂಡು ಪ್ರಾರ್ಥನೆ ಮಾಡಿ ವಾಸ್ತುವಿನಿಂದ ಹೊರಗಿನ ದಿಕ್ಕಿಗೆ ಊದಬೇಕು. ವಾಸ್ತುವಿನಲ್ಲಿ ವಿಭೂತಿಯ ತೀರ್ಥವನ್ನು (ನೀರಿನಲ್ಲಿ ವಿಭೂತಿಯನ್ನು ಹಾಕಿ ತಯಾರು ಮಾಡಿದ ನೀರು) ಸಿಂಪಡಿಸಿದರೆ ಅದರ ಪರಿಣಾಮವು ಹೆಚ್ಚು ಕಾಲ ಉಳಿಯುತ್ತದೆ.

೩. ಗೋಮೂತ್ರ ಸಿಂಪಡಿಸುವುದು: ವಾಸ್ತುವಿನಲ್ಲಿ ಗೋಮೂತ್ರವನ್ನು ಸಿಂಪಡಿಸಬೇಕು. ಇದರಿಂದ ಕೆಟ್ಟಶಕ್ತಿಗಳ ತೊಂದರೆಯ ನಿವಾರಣೆಯಾಗುತ್ತದೆ.

೪. ಧೂಪ ಹಾಕುವುದು: ಪ್ರತಿದಿನ ಎರಡು ಸಲ ಮನೆಯಲ್ಲಿ ಧೂಪವನ್ನು ಹಾಕಬೇಕು. ಇದರಿಂದ ವಾಸ್ತುವಿನಲ್ಲಿ ಒಳ್ಳೆಯ ಶಕ್ತಿಗಳು ಆಕರ್ಷಿತವಾಗಿ ವಾಸ್ತುವಿನ ಸಾತ್ತ್ವಿಕತೆಯು ಹೆಚ್ಚಾಗುತ್ತದೆ. ಹಾಗೆಯೇ ಕೆಲವೊಂದು ಕೆಟ್ಟಶಕ್ತಿಗಳು ವಾಸ್ತುವಿನಿಂದ ದೂರ ಹೋಗುತ್ತವೆ.

೫. ನಾಮಜಪ ಮಾಡುವುದು: ವಾಸ್ತುಶುದ್ಧಿಗಾಗಿ ಉಪಾಸ್ಯದೇವತೆ ಮತ್ತು ವಾಸ್ತುದೇವತೆಗೆ ಪ್ರಾರ್ಥನೆ ಮಾಡಿ ನಾಮಜಪ ಮಾಡಬೇಕು. ಮೇಲೆ ಹೇಳಿದ ನಾಲ್ಕು ಉಪಾಯಗಳಿಗಿಂತ ನಾಮಜಪದಿಂದ ಅಧಿಕ ಲಾಭವಾಗುತ್ತದೆ.

೬. ದೇವತೆಗಳ ನಾಮಜಪದ ಪಟ್ಟಿಗಳನ್ನು ಅಂಟಿಸುವುದು: ಹಂಚಿನ ಮನೆಗಳಲ್ಲಿ ಅಥವಾ ಮನೆಗಳ ಕೋಣೆಗಳಲ್ಲಿ ಛಾವಣಿಯು ಇಳಿಜಾರಾಗಿರುತ್ತದೆ, ಅಂದರೆ ಛಾವಣಿಯು ನೆಲಕ್ಕೆ ಸಮಾನಾಂತರವಾಗಿರುವುದಿಲ್ಲ. ಇದರಿಂದ ವಾಸ್ತುವಿನಲ್ಲಿ ಅಯೋಗ್ಯ ಸ್ಪಂದನಗಳು ತಯಾರಾಗಿ ವಾಸ್ತುವಿನಲ್ಲಿರುವ ಜನರಿಗೆ ತೊಂದರೆಯಾಗುತ್ತದೆ. ಇದಕ್ಕಾಗಿ ದೇವತೆಗಳ ನಾಮಪಟ್ಟಿಗಳನ್ನು ಕೋಣೆಯ ನಾಲ್ಕೂ ಬದಿಗಳ ಗೋಡೆಗಳ ಮೇಲೆ ಒಂದು ರೇಖೆಯಲ್ಲಿ (ನೆಲದಿಂದ ಸಮಾನಾಂತರವಾಗಿ) ಹಚ್ಚಬೇಕು. ಈ ನಾಮಪಟ್ಟಿಗಳಿಂದ ನೆಲಕ್ಕೆ ಸಮಾನಾಂತರ ಸೂಕ್ಷ್ಮ ಛಾವಣಿಯು ನಿರ್ಮಾಣವಾಗುತ್ತದೆ. ನಾಮಪಟ್ಟಿಗಳಿಂದ ಪ್ರಕ್ಷೇಪಿತವಾಗುವ ಚೈತನ್ಯ ಲಹರಿಗಳು ನೆಲಕ್ಕೆ ಸಮಾನಾಂತರವಾಗಿ ಮತ್ತು ಎದುರಿನ ದಿಕ್ಕಿನಲ್ಲಿ ಹೋಗುವುದರಿಂದ ಸೂಕ್ಷ್ಮಛಾವಣಿಯು ನಿರ್ಮಾಣವಾಗುತ್ತದೆ. ಇದರಿಂದಾಗಿ ವಾಸ್ತುವಿನಲ್ಲಿ ಒಳ್ಳೆಯ ಸ್ಪಂದನಗಳು ನಿರ್ಮಾಣವಾಗಿ ವಾಸ್ತುವಿನ ರಕ್ಷಣೆಯಾಗುತ್ತದೆ. (ಆಕೃತಿ ಕ್ರ. 1) ನಾಮಪಟ್ಟಿಗಳನ್ನು ಹಚ್ಚುವಾಗ ಎರಡು ನಾಮಪಟ್ಟಿಗಳ ನಡುವಿನ ಅಂತರವು 1 ಮೀಟರಿಗಿಂತ ಜಾಸ್ತಿ ಇರಬಾರದು.

ದಿಕ್ಕಿಗನುಸಾರ ಹಾಕುವ ನಾಮಪಟ್ಟಿಗಳು.

1. ಉತ್ತರ – ಶಿವ
2. ದಕ್ಷಿಣ – ದತ್ತ ಮತ್ತು ಗಣಪತಿ
3. ಪೂರ್ವ – ಶ್ರೀರಾಮ, ಶ್ರೀಕೃಷ್ಣ ಮತ್ತು ಮಾರುತಿ
4. ಪಶ್ಚಿಮ – ದೇವಿ (ಶ್ರೀ ದುರ್ಗಾದೇವಿ, ಅಂಬಾ ಇತ್ಯಾದಿ)

ಸನಾತನ ಸಂಸ್ಥೆಯು ನಿರ್ಮಿಸಿದ ದೇವತೆಗಳ ಸಾತ್ತ್ವಿಕ ನಾಮಪಟ್ಟಿಗಳು (ವಿವರಣೆ)

ಮನೆಯ ಗೋಡೆಗಳು ಉಪದಿಕ್ಕಿಗೆ ಇದ್ದರೆ ವಾಸ್ತುಛಾವಣಿಯನ್ನು ತಯಾರಿಸುವ ಪದ್ಧತಿ: ಮನೆಯ ಗೋಡೆಗಳು ಪೂರ್ವ, ಪಶ್ಚಿಮ ಮತ್ತು ಉತ್ತರ, ದಕ್ಷಿಣ ಈ ಮುಖ್ಯ ದಿಕ್ಕುಗಳಲ್ಲಿ ಸಮಾನಾಂತರವಾಗಿರದೇ ಆಗ್ನೇಯ, ನೈಋತ್ಯ ಮುಂತಾದ ಉಪದಿಕ್ಕುಗಳಲ್ಲಿ ಸಮಾನಾಂತರವಾಗಿದ್ದರೆ ಎರಡು ಗೋಡೆಗಳ ಮಧ್ಯಭಾಗದಲ್ಲಿ ದಾರವನ್ನು ಕಟ್ಟಿ ನಾಮಪಟ್ಟಿಗಳ ಮೂಲಕ ವಾಸ್ತುಛಾವಣಿಯನ್ನು ತಯಾರು ಮಾಡಬೇಕು. (ಆಕೃತಿ ಕ್ರ. 2)

(ಹೆಚ್ಚಿನ ಮಾಹಿತಿಗಾಗಿ ಸನಾತನ ಸಂಸ್ಥೆಯು ನಿರ್ಮಿಸಿದ ಪರಮೇಶ್ವರ, ಈಶ್ವರ, ಅವತಾರ ಮತ್ತು ದೇವರು ಈ ಗ್ರಂಥವನ್ನು ಓದಿರಿ.)

 

Leave a Comment